ಮಂಗಳವಾರ, ಫೆಬ್ರವರಿ 13, 2024

‘ನೆನೆವುದೆನ್ನ ಮನಂ ಕ್ಯಾತಸಂದ್ರಮಂʼ

 ‘ನೆನೆವುದೆನ್ನ ಮನಂ ಕ್ಯಾತಸಂದ್ರಮಂʼ

 


ಕನ್ನಡ ಕುಲಕೋಟಿಯ ಮೇಟಿ ಮಹಾಕವಿ ಪಂಪ ‘ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದರೆ ನನ್ನ ಹೃದಯ ಸದಾ ‘ನೆನೆವುದೆನ್ನ ಮನಂ ಕ್ಯಾತಸಂದ್ರಮಂ’ ಎಂದು ಮಿಡಿಯುತ್ತದೆ ಎಂದು ಆರಂಭಿಸುತ್ತಾ ವಿವಿಧ ಅಧ್ಯಾಯಗಳಲ್ಲಿ ತಮಗೆ ಜನನ, ಬಾಲ್ಯ, ಶಿಕ್ಷಣ, ಸಕಲ ಅಭ್ಯುದಯವಿತ್ತ ಊರನ್ನು ತಾವು ಕಂಡಂತೆ ಒಬ್ಬ ಪ್ರಜೆಯಾಗಿ, ಸಾಹಿತಿಯಾಗಿ, ಸಂಶೋಧಕನಾಗಿ ಡಾ|| ವಿದ್ಯಾವಾಚಸ್ಪತಿ ಕವಿತಾಕೃಷ್ಣರವರು ‘ನಮ್ಮೂರು ಕ್ಯಾತಸಂದ್ರ’ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಚಾರಿತ್ರಿಕವಾಗಿ, ಭೌಗೋಳಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ ತಮ್ಮ ಊರಿನ ಮಹತ್ವವನ್ನು ಪುಸ್ತಕ ರೂಪದಲ್ಲಿ ದಾಖಲಿಸಿ ಋಣ ತೀರಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಹಾಗೆ ನೋಡಿದರೆ ಯಾವ ಸಾಹಿತಿಯಾದರೂ ತನ್ನ ಊರನ್ನು ತನ್ನ ಸೃಜನಶೀಲ ಸೃಷ್ಠಿಯಲ್ಲಿ ನಿರೂಪಿಸಿರುತ್ತಾನೆ. ಆದರೆ, ಒಬ್ಬ ಸಂಶೋಧಕನಾಗಿ ವಸ್ತುನಿಷ್ಠವಾಗಿ ತನ್ನ ಊರನ್ನು ಅಕ್ಷರಗಳ ಮೂಲಕ ದಾಖಲಿಸುವುದು ನಿಜಕ್ಕೂ ಸಾಧನೆಯ ಕೆಲಸ. ಈ ಸಾಧನೆಗೆ ತಮ್ಮ ಇಳಿ ವಯಸ್ಸಿನಲ್ಲಿಯೂ ಯುವ ಸಂಶೋಧಕನಂತೆ ಕೆಲಸ ಮಾಡಿರುವ ವಿದ್ಯಾವಾಚಸ್ಪತಿಗಳ ಸಾಹಸವನ್ನು ಅಭಿನಂದಿಸಲೇಬೇಕು.

ತುಮಕೂರು ನಗರಕ್ಕೆ ಮೂಡಲ ಬಾಗಿಲಂತಿರುವ ಕೇತಸಮುದ್ರ ಕ್ಯಾತಸಂದ್ರ‍್ರ ಅಥವಾ ಕ್ಯಾತ್ಸಂದ್ರ ಆದ ಬಗೆಯನ್ನು ಚಾರಿತ್ರಿಕವಾಗಿ ಹಲವು ದಾಖಲೆಗಳ ಉಲ್ಲೇಖಗಳ ಮೂಲಕ ಪುಸ್ತಕದಲ್ಲಿ ದಾಖಲಿಸಲಾಗಿದೆ. ೧೮ನೇ ಶತಮಾನದ ಹೇರಂಬ ಎಂಬ ಕವಿಯು ಸಿದ್ಧಗಂಗಾ ಬೆಟ್ಟದಲ್ಲಿ ಗಂಗೋಧ್ಭವ ಆದ ಪ್ರಸಂಗವನ್ನು ವರ್ಣಿಸಿರುವ 

“ಚೆಲುವೆತ್ತ ಕೇತ್ಸಮುದ್ರದ ಗ್ರಾಮದೆಡೆಯೊಂದು

ಬೆಳೆದು ಕಲ್ಲರೆ ಬಂಡೆಯಿಹುದು

        ಆಗ ಕಲ್ಲುಬಂಡೆಗೀಶನು ನಡೆತರ

        ಲಾಗ ಶರಣರೆಲ್ಲ ನೋಡಿ”

ಸಾಲುಗಳಲ್ಲಿ ಕ್ಯಾತ್ಸಂದ್ರ ಅದೆಷ್ಟು ಚೆಲುವಾಗಿತ್ತು ಎಂಬುದನ್ನು ಸವಿಯಬಹುದು. ಹಲವು ಶಾಸನಗಳ, ವೀರಗಲ್ಲು-ಮಾಸ್ತಿಕಲ್ಲುಗಳ ಬೀಡಾಗಿರುವ ಕ್ಯಾತಸಂದ್ರ ಒಂದು ಐತಿಹಾಸಿಕ ಮಹತ್ವದ ಸ್ಥಳವೂ ಆಗಿದೆ. 

ಸರ್ವಜನಾಂಗದ ತೋಟವಾಗಿರುವ ಕ್ಯಾತಸಂದ್ರದ ಊರು-ಕೇರಿ ಹೆಂಗಳೆಯರನ್ನು ಒಳಗೊಂಡು ಎಲ್ಲರನ್ನೂ ತನ್ನತ್ತ ಸೆಳೆಯುತ್ತಿತ್ತು ಎಂದು ದಾಖಲಾಗಿರುವ ಸಂದರ್ಭದಲ್ಲಿ ಕ್ಯಾತಸಂದ್ರದ ಹುಡುಗರನ್ನು ಮದುವೆಯಾಗಲು ಸುತ್ತೇಳು ಊರುಗಳ ಹೆಣ್ಣುಮಕ್ಕಳು ಬಯಸುತ್ತಿದ್ದರು ಎಂಬುದಕ್ಕೆ ಪುರಾವೆಯೆಂಬಂತೆ ಜನಪದಗೀತೆಯೊಂದು ಸ್ವಾರಸ್ಯಕರವಾಗಿ ಓದುಗರ ಗಮನ ಸೆಳೆಯುತ್ತದೆ: 

“ಕೈದಾಳ ಆಕಡೇ ಮೈದಾಳ ಈಕಡೇ

ಮಧ್ಯದ ಊರೇ ಕ್ಯಾಚಂದ್ರ? ಕೊಟ್ಟೆನ್ನ

ಮದುವೆಯ ಮಾಡೇ ನನ್ನವ್ವ||”

ದೇಗುಲಗಳ ಊರಾಗಿರುವ ಕ್ಯಾತಸಂದ್ರದ ಪುರಾತನ ದೇವಾಲಯಗಳ ಜೊತೆಜೊತೆಗೆ ಆಧುನಿಕ ದೇವಾಲಯಗಳ ಮಹತ್ವ ಮತ್ತು ವಿಶೇಷವನ್ನು ಲೇಖಕರು ‘ದೇಗುಲಗಳ ಊರು’ ಅಧ್ಯಾಯದಲ್ಲಿ ವಿವರವಾಗಿ ನೀಡಿದ್ದಾರೆ. ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ ತಮ್ಮ ತಂದೆಯ ಪುಣ್ಯತಿಥಿಯಂದು ಬಂಧು-ಬಳಗದೊಂದಿಗೆ ಜೀಬಿ ಆಂಜನೇಯಸ್ವಾಮಿ ದೇವಾಲಯಕ್ಕೆ ತಲೆ ಬೋಳಿಸಿಕೊಂಡು ಬೆಳಗುವ ಹಿಟ್ಟಿನ ದೀಪ ಹಿಡಿದು ಬಂದ ಲೇಖಕರಿಗೆ ಆಗಿನ ಆರ್ಚಕರು ಇವರನ್ನು ದಕ್ಷಿಣಾಭಿಮುಖವಾಗಿ ನಿಲ್ಲಿಸಿ, ಬೆನ್ನಹಿಂದೆ ತಂದ ಎರಡೂ ಕೈಗಳಿಗೆ ಬೆಣ್ಣೆಸಹಿತ ಒಂದು ಪಾವಲಿ ನಾಣ್ಯವಿರಿಸಿ ಹೇಳಿಕೊಟ್ಟ, ‘ಓ ಆಂಜನೇಯಸ್ವಾಮಿ, ನನ್ನ ತಂದೆ ಅಗಲಿದ್ದಾರೆ. ಅವರಿಗೆ ಸ್ವರ್ಗ ಪದವಿ ನೀಡು. ನಾನು ಇಂದಿನಿಂದ ನನಗೆ ಕಲ್ಲಲ್ಲಿ ಎಸೆದವರಿಗೆ ಬೆಣ್ಣೆಯಿಂದ ಎಸೆಯುತ್ತೇನೆ’ ಎಂಬ ಪ್ರಮಾಣವಚನ ರೂಪದ ಮಾತುಗಳು ಆನಂತರ ಇವರ ಮೇಲೆ ಅದೆಷ್ಟು ಪ್ರಭಾವಬೀರಿದವು ಎಂಬುದು ಲೇಖಕರಲ್ಲಿ ಧನ್ಯತಾಭಾವ ಮೂಡಿಸಿದೆ. ಈ ಸಂದರ್ಭದಲ್ಲಿ ಒಂದು ಊರು ಮತ್ತು ಅದರ ಪ್ರಜೆಯ ನಡುವಿನ ಅವಿನಾಭಾವ ಸಂಬಂಧ ಬೆಳೆದ ಬಗೆಯನ್ನು ಗಮನಿಸುತ್ತಲೇ ಆ ಪ್ರಜೆಯ ಬೌದ್ಧಿಕ, ಸಾಮಾಜಿಕ ಬೆಳವಣಿಗೆಗೂ ಹೇಗೆ ಸಹಕಾರಿಯಾಗಬಲ್ಲದು ಎಂಬುದನ್ನು ನೋಡಬಹುದಾಗಿದೆ.

ಸ್ವಾತಂತ್ರ್ಯ ಹೋರಾಟಗಾರರ ತವನಿಧಿ ಮತ್ತು ನಮ್ಮೂರ ಸ್ವಾತಂತ್ರ್ಯ ಸೇನಾನಿಗಳು ಅಧ್ಯಾಯಗಳಲ್ಲಿ ಕ್ಯಾತಸಂದ್ರದ ಸ್ವಾತಂತ್ರ್ಯ ಹೋರಾಟಗಾರರ ಚಳವಳಿಗಳು ಮತ್ತು ಸಾಹಸಗಳು ದಾಖಲಾಗಿರುವುದರ ಜೊತೆಗೆ ಸಂಕ್ಷಿಪ್ತವಾಗಿ ಬಹುತೇಕ ಸೇನಾನಿಗಳ ಪರಿಚಯವನ್ನು ನೀಡಲಾಗಿದೆ. ಊರಿನ ಇತಿಹಾಸದಲ್ಲಿ ಸ್ಮರಣೀಯ ದಿನ ೧೯೩೪ನೇ ಇಸವಿ ಜನವರಿ ೪ರಂದು ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿ ಸ್ಥಳೀಯರ ಮೇಲೆ ಬೀರಿದ ಪ್ರಭಾವವೂ ಕೂಡ ದಾಖಲಾಗಿದೆ. ನಮ್ಮೂರ ಪ್ರಾತಃಸ್ಮರಣೀಯರು ಅಧ್ಯಾಯದಲ್ಲಿ ೬೦ ವರ್ಷಗಳ ಹಿಂದೆ ಪುಟ್ಟ ಊರಾಗಿದ್ದರೂ ಊರಮಂದಿಯೆಲ್ಲಾ ಅದೆಷ್ಟು ಮಾದರಿ ವ್ಯಕ್ತಿಗಳಾಗಿದ್ದರು ಎಂದು ನೆನೆಯುತ್ತಲೇ ೭೨ ವರ್ಷಗಳ ತಮ್ಮ ಸ್ಮೃತಿಪಟಲದಲ್ಲಿ ಅವರೆಲ್ಲಾ ಧ್ರುವನಕ್ಷತ್ರಗಳು ಎಂದಿದ್ದಾರೆ ವಿದ್ಯಾವಾಚಸ್ಪತಿಗಳು. ಗಂಡಸು-ಹೆಂಗಸೆನ್ನದೆ, ಮೇಲುಕೀಳೆನ್ನದೆ ಸಮಾಜದ ಎಲ್ಲ ಮಹನೀಯರನ್ನು ನೆನೆದಿದ್ದಾರೆ. ಸಿದ್ಧಗಂಗಾ ಮಠದ ಸಂಸ್ಕೃತ ಪಾಠಶಾಲೆಯ ನಿಮಿತ್ತ ಸಹಜವಾಗಿ ಕ್ಯಾತಸಂದ್ರವು ಪಂಡಿತಪುರಿಯೂ ಆಗಿದೆ. ಕಲೆಯ ತವರೂರಾದ ಕ್ಯಾತಸಂದ್ರದಲ್ಲಿ ಯಕ್ಷಗಾನ ಕಲೆ, ಪೌರಾಣಿಕ, ಐತಿಹಾಸಿಕ  ಹಾಗೂ ಸಾಮಾಜಿಕ ನಾಟಕಗಳು ವಿಜೃಂಭಿಸಿದ ಕಾಲಘಟ್ಟವನ್ನು ಸ್ವತಃ ನಾಟಕಕಾರರಾಗಿರುವ ಲೇಖಕರು ಕಲಾವಿದರ, ಹಾರ‍್ಮೋನಿಯಂ ಮೇಷ್ಟ್ರುಗಳ ಪರಿಚಯದ ಮೂಲಕ ನೀಡಿದ್ದಾರೆ. ಬೇಸಾಯ ಪ್ರಧಾನವಾದ ಊರಾದರೂ ತುಮಕೂರಿಗೆ ಬಹಳ ಹತ್ತಿರವಿದ್ದುದರಿಂದ ನಗರದ ನಾಗರೀಕತೆಯ ಪ್ರಭಾವದಿಂದ ಯುವಕರು ಕ್ರೀಡೆಗಳಲ್ಲಿ ಆಸಕ್ತಿ ಮೂಡಿ ಕ್ರೀಡಾಪಟುಗಳ ಆಡುಂಬೊಲವಾಗಿತ್ತು ಕ್ಯಾತಸಂದ್ರ, ಪುಟ್‌ಬಾಲ್ ಊರಿನ ಜನಪ್ರಿಯ ಆಟವಾಗಿತ್ತು ಮತ್ತು ವಿವಿಧ ಕ್ರೀಡೆಗಳ ಮುಖ್ಯ ಕ್ರೀಡಾಪಟುಗಳ ಪರಿಚಯವನ್ನು ಪ್ರತ್ಯೇಕ ಅಧ್ಯಾಯದಲ್ಲಿ ನೀಡಲಾಗಿದೆ. 

ಇವತ್ತಿಗೂ ಕ್ಯಾತಸಂದ್ರವೆಂದರೆ ಎಂಥಹವರಿಗೂ ಇಲ್ಲಿನ ಇಡ್ಲಿ ಹೋಟೆಲ್‌ಗಳು ಬಾಯಲ್ಲಿ ನೀರೂರಿಸುತ್ತವೆ. ನಮ್ಮೂರ ಹೋಟೆಲ್‌ಗಳು ಪುಟ್ಟ ಅಧ್ಯಾಯದಲ್ಲಿ ಹೋಟೆಲ್‌ಗಳ ಇತಿಹಾಸ ಮತ್ತು ವರ್ತಮಾನವನ್ನು ನೀಡಲಾಗಿದೆ. ಕ್ಯಾತ್ಸಂದ್ರದ ತಟ್ಟೆ ಇಡ್ಲಿ ಅದೆಷ್ಟು ಫೇಮಸ್ಸು ಅಂತ ಹೋಟೆಲ್‌ಗಳ ಬದಿಯಲ್ಲಿ ನಿಂತಿರುವ ವಾಹನಗಳನ್ನು ಲೆಕ್ಕ ಹಾಕಿಯೇ ಹೇಳಿಬಿಡಬಹುದು. ಊರ ಅಂಗಡಿ ಮುಂಗಟ್ಟುಗಳು ಅಧ್ಯಾಯದಲ್ಲಿ ಪ್ರಮುಖ ಉದ್ಯಮಗಳು ಮತ್ತು ಉದ್ಯಮಿಗಳ ಪರಿಚಯವಿದೆ. ಸಾಮಾನ್ಯವಾಗಿ ವಾರದ ಯಾವುದಾದರೊಂದು ದಿನ ಎಲ್ಲಾ ಊರುಗಳಲ್ಲಿ ಸಂತೆಯಾದರೆ ಕ್ಯಾತ್ಸಂದ್ರದಲ್ಲಿ ಮಂಗಳವಾರ ಸಂತೆ! ಅದು ಇವತ್ತಿಗೂ ನನಗೆ ಆಶ್ಚರ್ಯದ ಸಂಗತಿಯೇ ಆಗಿದೆ. ಅದಕ್ಕೆ ಪೂರಕವೆಂಬಂತೆ ಯಾವುದೇ ವಿಶೇಷವಿಲ್ಲದಿದ್ದರೂ ಹಳ್ಳಿಗರಿಗೆ ಅಂದು ಸಂತಸದ ದಿನವಾಗಿದೆ. ಜಟಕಾ ಬಂಡಿ – ಎತ್ತಿನ ಗಾಡಿಗಳ ವಿವರ ವರ್ಣನೆಗಳನ್ನು ಓದುತ್ತಿದ್ದರೆ ನಮಗೂ ಅವುಗಳಲ್ಲಿ ಓಡಾಡುವ ಮನಸ್ಸಾಗುತ್ತದೆ. ಊರಿಗೆ ಶತಮಾನದ ಹಿಂದೆಯೇ ರೈಲಿನ ಸಂಪರ್ಕಕ್ಕೆ ಬಂದಂತಹ ಇತಿಹಾಸವಿದೆ. ನಮ್ಮೂರ ಶಾಲೆಗಳು ಅಧ್ಯಾಯದಲ್ಲಿ ಶೈಕ್ಷಣಿಕವಾಗಿ ಊರನ್ನು ರೂಪಿಸಿದ ಶಾಲೆಗಳ, ಪಾಠದ ಮನೆಗಳ, ಶಿಕ್ಷಕರ ಪರಿಚಯವಿದೆ. ನಮ್ಮೂರ ಸಂಘ ಸಂಸ್ಥೆಗಳು ಅಧ್ಯಾಯದಲ್ಲಿ ಊರಿನ ಸಂಘ ಸಂಸ್ಥೆಗಳ, ಭಕ್ತಮಂಡಲಿಗಳ, ರೈತ ಸಮಿತಿಗಳ, ಸಹಕಾರ ಸಂಘಗಳ, ಇಂದಿರಾ ಮಹಿಳಾ ಸಮಾಜದ ಕೆಲಸಕಾರ್ಯಗಳನ್ನು ದಾಖಲಿಸಲಾಗಿದೆ. ಊರಿನ ರಾಜಕಾರಣಿಗಳ ದಾಖಲೆ ನೀಡುವ ನಮ್ಮೂರ ರಾಜಕಾರಣ ಅಧ್ಯಾಯವಿದೆ. ಊರಿನ ಗಣ್ಯರಾಗಿ ಸಮಾಜಸೇವೆಯಲ್ಲಿ ತೊಡಗಿದ ಧುರೀಣರ ಪರಿಚಯವಿದೆ. ಅಷ್ಟೇ ಅಲ್ಲದೆ ಊರಿನ ಪ್ರಮುಖ ವಿದ್ಯಾಸಂಸ್ಥೆಗಳ ಮಾಲೀಕರ, ಹೋಟೆಲ್ ಉದ್ಯಮಿಗಳ, ವೈದ್ಯರ, ಪತ್ರಿಕಾ ಪ್ರತಿನಿಧಿಗಳ, ಟೈಲರ್‌ಗಳ, ಕೇಬಲ್ ಆಪರೇಟರ್‌ಗಳ ಪರಿಚಯವಿದೆ. ಊರಿನ ಬಗ್ಗೆ ಅತೀವ ಆಸಕ್ತಿ ಹೊಂದಿರುವವರ ಜ್ಞಾನದಾಹ ತಣಿಸಲು ಪ್ರಥಮ ದಾಖಲೆ ಸಂಗತಿಗಳ ಪಟ್ಟಿಯಿದೆ. 

ಪುಸ್ತಕದ ಕಡೆಯ ಭಾಗದಲ್ಲಿ ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಚೊಚ್ಚಲ ಕೃತಿ ಬರೆದು ಸಾರಸ್ವತ ಲೋಕ ಪ್ರವೇಶಿಸಿ ಇಂದಿಗೂ ಲವಲವಿಕೆಯಿಂದ ಸಾಹಿತ್ಯದ ಮತ್ತು ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾ, ಹಿರಿಯರನ್ನು ಗೌರವಿಸುತ್ತಾ, ಕಿರಿಯರನ್ನು ಪ್ರೋತ್ಸಾಹಿಸುತ್ತಾ ತಮ್ಮ ಜೀವನವನ್ನು ಸಾಕಾರಗೊಳಿಸಿಕೊಂಡಿರುವ ಡಾ|| ವಿದ್ಯಾವಾಚಸ್ಪತಿ ಕವಿತಾಕೃಷ್ಣರವರ ಕಿರುಪರಿಚಯವಿದೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿಗೆ ಅನ್ವರ್ಥವಾಗುವಂತೆ ತಮ್ಮ ನೆಚ್ಚಿನ ಊರನ್ನು ಹಲವಾರು ದಾಖಲೆಗಳ ನೆರವಿನೊಂದಿಗೆ, ಚಿತ್ರಗಳ ಸಹಕಾರದೊಂದಿಗೆ ವಿದ್ಯಾವಾಚಸ್ಪತಿಗಳು ಅಕ್ಷರಗಳ ಮೂಲಕ ಸಂಕಲಿಸಿ ನಮ್ಮ ಕೈಗಿಟ್ಟಿದ್ದಾರೆ. ಆಸಕ್ತರು ತಮ್ಮ ಸಂಗ್ರಹದಲ್ಲಿ ಇಟ್ಟುಕೊಳ್ಳಬೇಕಾದ ಪುಸ್ತಕವಿದಾಗಿರುವುದರ ಜೊತೆಗೆ ಪ್ರತಿಯೊಬ್ಬ ಸಾಹಿತಿಯೂ ತನ್ನ ಏಳ್ಗೆಗೆ ಕಾರಣವಾದ ಊರನ್ನು ಹೇಗೆ ಅಕ್ಷರಗಳಲ್ಲಿ ಹಿಡಿದಿಟ್ಟು ಮುಂದಿನ ಪೀಳಿಗೆಗೆ ಅದನ್ನು ಉಡುಗೊರೆಯಾಗಿ ನೀಡಿ ಹುಟ್ಟಿದ ಊರಿನ ಋಣವನ್ನು ತೀರಿಸಬೇಕು ಎಂಬುದಕ್ಕೆ ಮಾದರಿಯೂ ಆಗಿದ್ದಾರೆ. 

ನಾಡುಕೊಂಡ ಶ್ರೇಷ್ಠ ಭಾಷಣಕಾರರಾಗಿರುವ ಡಾ|| ವಿದ್ಯಾವಾಚಸ್ಪತಿ ಕವಿತಾಕೃಷ್ಣರವರ ಭಾಷಣವನ್ನು ಕೇಳಿದವರು ಈ ಪುಸ್ತಕವನ್ನು ಓದಿದಾಗ ಅವರ ನಿರರ್ಗಳ ಭಾಷಣದಂತೆಯೇ ಈ ಪುಸ್ತಕವು ಓದಿಸಿಕೊಳ್ಳುವದರಲ್ಲಿ ಅಚ್ಚರಿಯಿಲ್ಲ. ಓದುಗ ಪುಸ್ತಕ ಓದಲು ಆರಂಭಿಸಿದ ಕೆಲವು ಕ್ಷಣಗಳಲ್ಲೇ ‘ನೆನೆವುದೆನ್ನ ಮನಂ ಕ್ಯಾತಸಂದ್ರಮಂ’ ಎಂಬ ಸಾಲಿನಲ್ಲಿ ‘ಕ್ಯಾತಸಂದ್ರಮಂ’ ಎಂಬ ಪದದ ಜಾಗದಲ್ಲಿ ತನ್ನ ಊರನ್ನು ಪ್ರತಿಷ್ಠಾಪಿಸಿಕೊಂಡರೆ ಸೋಜಿಗವೇನಿಲ್ಲ.

***


ಭಾನುವಾರ, ಫೆಬ್ರವರಿ 11, 2024

ಜೀವನಪ್ರೀತಿಯ “ಲೈಫ್‌ನಲ್ಲೊಂದು ಯೂ ಟರ್ನ್”

 


ಪ್ರತಿಲಿಪಿ ಮೂಲಕ ಬೆಳಕಿಗೆ ಬಂದ ಸಾಹಿತಿ ಮೇಘನಾ ಕಾನೇಟ್ಕರ್‌ ಅವರು “ಲೈಫ್‌ನಲ್ಲೊಂದು ಯೂ ಟರ್ನ್‌ – ದೇಶ ಕಾಲದ ಗಡಿ ಮೀರಿದ ಕತೆಗಳು” ಎಂಬ ಕಥಾಸಂಕಲನವನ್ನು ಹೊರತಂದಿದ್ದಾರೆ. ಅವರಿಗೆ ಅಭಿನಂದನೆಗಳು.

ಮೇಘನಾ ಅವರು ಈ ಸಂಕಲನದಲ್ಲಿ ಹದಿನೈದು ಕತೆಗಳನ್ನು ಓದುಗರಿಗೆ ನೀಡಿದ್ದು, ಈ ಸಂಕಲನವನ್ನು “ಕಳೆದುಕೊಂಡಿದ್ದ ನನ್ನನ್ನು ಕಂಡುಕೊಳ್ಳುವಂತೆ ಮಾಡಿದ ಆ ʼಅವನಿಗೆʼ” ಅರ್ಪಿಸಿದ್ದಾರೆ. ಸಂಕಲನಕ್ಕೆ ಮುನ್ನುಡಿಯಿಲ್ಲ, ಕತೆಗಾರ್ತಿಯೇ ತಮ್ಮ ಕತೆಗಳ ಬಗ್ಗೆ ತಮ್ಮ ಮಾತುಗಳಲ್ಲಿ ಹೇಳಿದ್ದಾರೆ. ಸಂಕಲನದ ಅಂತ್ಯದಲ್ಲಿ ಆಪ್ತರ ಅನಿಸಿಕೆಗಳಿವೆ. ಕಾದಂಬರಿಕಾರ ಮತ್ತು ಅಂಕಣಕಾರ ಸಂತೋಷಕುಮಾರ ಮೆಹೆಂದಳೆ ಅವರ ʼಸಂಕೀರ್ಣ ಭಾವ ಕಥನಕೋಶ…ʼ ಎಂಬ ಬೆನ್ನುಡಿಯಿದೆ.

ಸಂಕಲನದ ಶೀರ್ಷಿಕೆಯ ಕತೆ ʼಲೈಫ್‌ನಲ್ಲೊಂದು ಯೂ ಟರ್ನ್‌ʼ ಒಂದು ಜೀವನಪ್ರೀತಿಯ ಕತೆಯಾಗಿದ್ದು, ಈ ಭಾವದಲ್ಲೇ ಇನ್ನಿತರ ಕತೆಗಳನ್ನು ಓದಬಹುದಾಗಿದೆ. ಇದೊಂದು ಪುಟ್ಟ ಸರಳ ಕತೆಯಾಗಿದ್ದು ಈ ಕತೆಯ ನಾಯಕಿ ಸಿಂಚನಾ ಒಂಟಿ ಬದುಕನ್ನು ಕಟ್ಟಿಕೊಳ್ಳಲು ಪ್ರಯಾಣ ಆರಂಭಿಸಿ ಮಾರ್ಗಮಧ್ಯೆ ಸುಧನ್ವನ ಪರಿಚಯವಾಗಿ ಆಕೆಯ ಬದುಕಲ್ಲಿ ಸಿಗುವ ತಿರುವು ಈ ಕಥೆಯ ಜೀವಾಳ. ʼಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ…ʼ ಹಾಡನ್ನು ಈ ಕತೆಯಲ್ಲಿ ಬಳಸಿಕೊಳ್ಳುವುದರ ಜೊತೆಯೇ ಇತ್ತೀಚಿಗೆ ಟ್ರೆಂಡ್‌ ಆದ ʼಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲʼ ಹಾಡು ಕೂಡ ಉಲ್ಲೇಖಿಸಿ ಅಂತ್ಯದಲ್ಲಿ ʼನಿನ್ನ ಜೊತೆ ನನ್ನ ಕತೆ ಒಂದೊಂದು ಸಾಲು ಜೀವಿಸಿದೆ… ನನ್ನ ಜೊತೆ ನಿನ್ನ ಕತೆ ಬೇರೊಂದು ಲೋಕ ಸೃಷ್ಟಿಸಿದೆ…ʼ ಹಾಡನ್ನು ಕೂಡ ಸೇರಿಸಿದ್ದಾರೆ. ಈ ಮೂರು ಹಾಡುಗಳನ್ನು ಕತೆಯ ಓಘಕ್ಕೆ ತಕ್ಕಂತೆ ಬಳಸಿರುವುದು ಕತೆಗಾರ್ತಿಯ ಜಾಣ್ಮೆ. ಕತೆಯ ಅಂತ್ಯ ಜೀವನಪ್ರೀತಿಯ ಪ್ರತೀಕವಾಗಿದ್ದು, ಈ ನಿಟ್ಟಿನಲ್ಲಿಯೇ ಸಂಕಲನದ ಇತರೆ ಕತೆಗಳನ್ನು ಓದಬಹುದಾಗಿದೆ.

ಈ ಸಂಕಲನವನ್ನು ಹರಿವು ಬುಕ್ಸ್‌ ಪ್ರಕಟಿಸಿದ್ದು ಸಂಕಲನದ ಮೌಲ್ಯ ರೂ. 150/-

ಪ್ರತಿಗಳಿಗೆ:

lifenallondu-u-turn-stories-meghana-kanetkar-kannada-book 

ಶನಿವಾರ, ಫೆಬ್ರವರಿ 10, 2024

ಇದು ಸರಳ ಅಲ್ಲ ವಿರಳ ಸಿನಿಮಾ…

 



ಸಿಂಪಲ್ಲಾಗ್‌ ಒಂದು ಲವ್‌ ಸ್ಟೋರಿ ಖ್ಯಾತಿಯ ನಿರ್ದೇಶಕರಾದ ಸಿಂಪಲ್‌ ಸುನಿಯವರ ರಚನ ವಚನ ನಿರ್ದೇಶನದ “ಒಂದು ಸರಳ ಪ್ರೇಮಕಥೆ” ಒಂದು ಸಂಗೀತಮಯ ವಿರಳ ಸಿನಿಮಾ. ಮಳವಳ್ಳಿ ಪ್ರಸನ್ನ ಅವರ ಕತೆಗೆ ಸಿನಿಮಾ ಚಿತ್ರಕತೆಯ ಒಂದು ಪರಿಪೂರ್ಣ ಸ್ಪರ್ಶವನ್ನು ನೀಡಿ ನಿರ್ದೇಶಕರು ದೃಶ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಆರಂಭದಲ್ಲಿ ಅವರೇ ಹೇಳುವಂತೆ ಕ್ಲೈಮ್ಯಾಕ್ಸಿನ ನಂತರವೂ ಒಂದು ಕ್ಲೈಮ್ಯಾಕ್ಸ್‌ ಇದ್ದು ಅಂತಿಮ ದೃಶ್ಯದಲ್ಲಿ ನಾಯಕ ಅಳುವುದನ್ನು ನೋಡಿ ಪ್ರೇಕ್ಷಕ ಮಹಾಫ್ರಭು “ವಾಟ್‌ ಅ ಮೂವಿ” ಎಂದು ಉದ್ಗರಿಸುತ್ತಾನೆ. ಮೈಸೂರು ರಮೇಶ್ ಈ ಸಿನಿಮಾದ ನಿರ್ಮಾಪಕರು.

ಕನ್ನಡ ಸಿನಿಮಾಗಳಿಗೆ ಸ್ಟಾರ್‌ ಪಟ್ಟವನ್ನು ಕಳಚಿಟ್ಟು ಅಭಿನಯಿಸುವ ನಟರುಗಳು ಬೇಕಾಗಿದ್ದಾರೆ. ಈ ಜಾಗವನ್ನು ಸಮರ್ಥವಾಗಿ ತುಂಬಬಲ್ಲವರು ವಿನಯ್‌ ರಾಜ್‌ ಕುಮಾರ್.‌ ನಾಯಕನೇ ಸ್ವಗತದಲ್ಲಿ ತನ್ನ ಕತೆಯನ್ನು ಹೇಳುತ್ತಾ ಹೋಗುತ್ತಾನೆ. ಅವನಿಗೆ ಎರಡು ಕನಸಿದೆ. ಅವುಗಳು ನನಸಾಗುತ್ತವ ಎಂಬುದನ್ನು ತೆರೆಯ ಮೇಲೆ ನೋಡಬೇಕು. ಹಗಲುಗನಸಿನ ಹುಡುಗನಾಗಿ ಸಿನಿಮಾದುದ್ದಕ್ಕೂ ವಿನಯ್‌ ಅವರ ಮಾಗಿದ ಅಭಿನಯ ಗಮನ ಸೆಳೆಯುತ್ತದೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಇದೊಂದು ತ್ರಿಕೋನ ಪ್ರೇಮಕತೆಯಂತೆಯೂ ಭಾಸವಾಗುತ್ತದೆ. ನಾಯಕನ ಎದೆಯ ಭಾವನೆಗಳು ಯಾವ ನಾಯಕಿಯ ಧ್ವನಿಗೆ ಮಿಡಿಯುತ್ತವೆ ಎಂಬುದೇ ಈ ಸಿನಿಮಾ.

ಇತ್ತೀಚಿನ ದಿನಗಳಲ್ಲಿ ಒಂದು ಅಪರೂಪದ ಸಂಗೀತಮಯ ಚಿತ್ರವಾಗಿಯೂ “ಒಂದು ಸರಳ ಪ್ರೇಮಕತೆ” ನೋಡುಗರ ಮನಗೆಲ್ಲುತ್ತದೆ. ʼಮೂಕನಾಗಬೇಕುʼ ಎಂಬ ತತ್ವಪದವೊಂದು ಈ ಸಿನಿಮಾದುದ್ದಕ್ಕೂ ಇದ್ದು ಈ ಸಿನಿಮಾದ ನಿಜವಾದ ನಾಯಕ, ನಾಯಕಿ ಮತ್ತು ವಿಲನ್‌ ಆಗಿದೆ ಎಂದೇ ಹೇಳಬೇಕು. ಈ ತತ್ವಪದವೇ ಸಿನಿಮಾದ ಜೀವಾಳವೂ ಹೌದು. ಸುನಿ ಅವರ ದೃಶ್ಯಗಳಿಗೆ ವೀರ್‌ ಸಮರ್ಥ್‌ ಅವರ ಸಂಗೀತವೇ ಬೆನ್ನೆಲುಬು.

ನಾಯಕನಾಗಿರುವ ವಿನಯ್‌ ರಾಜ್‌ಕುಮಾರ್‌ ಅವರ ಜೊತೆ ನಾಯಕಿಯಾಗಿರುವ ಸ್ವಾತಿಷ್ಠ ಕೃಷ್ಣನ್‌ ಮತ್ತು ಹಿಂದಿಯ ರಾಧಾ ಕೃಷ್ಣ ಧಾರಾವಾಹಿಯ ರಾಧೆ ಖ್ಯಾತಿಯ ಮಲ್ಲಿಕಾ ಸಿಂಗ್‌ ಇದ್ದಾರೆ. ನಾಯಕನ ತಂದೆಯಾಗಿ ರಾಜೇಶ್‌ ಅವರು ಸೂಪರ್.‌ ಸಾಧು ಕೋಕಿಲ ಇಲ್ಲಿ ಮ್ಯೂಸಿಕ್‌ ಡೈರೆಕ್ಟರ್‌ ಆಗಿಯೇ ಅಭಿನಯಿಸಿದ್ದಾರೆ. ನಾಯಕನ ಅಜ್ಜಿಯ, ಸ್ನೇಹಿತರ ಪಾತ್ರಗಳೂ ಕಾಡುವಂತಿವೆ. ಹಿರಿಯ ನಟರಾದ ರಾಘವೇಂದ್ರ ರಾಜ್‌ಕುಮಾ‌ರ್‌ ಅವರು, ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿಯ ನಾಯಕಿ ಶ್ವೇತಾ ಶ್ರೀವಾಸ್ತವ್‌ ಅವರು, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಅವರ ಅತಿಥಿ ಪಾತ್ರಗಳಿವೆ. ಸಿನಿಮಾದ ಒನ್‌ ಲೈನ್‌ ಪಂಚ್‌ಗಳು ಅಲ್ಲಲ್ಲಿ ಕಿರುನಗೆ ಮೂಡಿಸುತ್ತವೆ. ಹಿನ್ನೆಲೆಯ ಹಾಡುಗಳು ಗುನುಗುವಂತಿವೆ. ಜಯಂತ್‌ ಕಾಯ್ಕಿಣಿ ಅವರ ಸಾಲುಗಳೂ ಕೂಡ ಚಿತ್ರದಲ್ಲಿವೆ.

ನೀವು ಸಿನಿಮಾವನ್ನು, ಸಿನಿಮಾದ ಸಂಗೀತವನ್ನು, ಸಿಂಪಲ್‌ ಸುನಿಯವರನ್ನು, ವಿನಯ್‌ ರಾಜ್‌ಕುಮಾರ್ ಅವರನ್ನು ಇಡಿಯಾಗಿ ಇಷ್ಟಪಡುವವರು ಆಗಿದ್ದರೆ ಸಿನಿಮಾ ನಿಮಗೆ ಖಂಡಿತ ಇಷ್ಟವಾಗುತ್ತದೆ…‌ ಹೋಗಿ ಬಂದು ನಿಮ್ಮ ಅಭಿಪ್ರಾಯ ಕಾಮೆಂಟಿಸಿ…

 

ಸೋಮವಾರ, ಜನವರಿ 22, 2024

ಜೈ ಶ್ರೀರಾಮ ಜೈ ಭಾರತ



ಇಂದು (ಜನವರಿ 22, 2024) ಭಾರತದ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ ದಿನ. ಅಂದುಕೊಂಡಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಬಾಲರಾಮನ ಪ್ರತಿಷ್ಠಾಪನೆಯ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಈ ಅಭೂತಪೂರ್ವ ಕ್ಷಣಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೇರವಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ.

ಇಂದು ಬೆಳಿಗ್ಗೆ ನನ್ನ ಜಂಗಮ ಸ್ನೇಹಿತರು ಒಂದು ಫೇಸ್‌ಬುಕ್‌ ಫೋಸ್ಟ್‌ ಹಾಕಿದ್ದರು. “”ನಮ್ಮ ತಲೆಮಾರಿಗೆ ರಾಮಮಂದಿರ ನಿರ್ಮಾಣ ಅಸಾಧ್ಯ ಎಂದು ಭಾವಿಸಿದ್ದಾಗ, ಅದನ್ನು ಸಾಧ್ಯವಾಗಿಸಿದ ಮಹಾನುಭಾವರಿಗೆ ದೇವರು, ಆರೋಗ್ಯ, ಆಯಸ್ಸು ಮತ್ತು ವಿಜಯವನ್ನು ನೀಡಲಿ ಎಂದು ಹಾರೈಸುತ್ತೇನೆ. "ಟೀಕೆಗಳು ಸಾಯುತ್ತವೆ, ಸಾಧನೆ ಉಳಿಯುತ್ತದೆ."” ಎಂದು. ಈ ಪೋಸ್ಟಿಗೆ ನನ್ನದೇ ಮೊದಲ ಲೈಕು. ಯಾಕೆಂದರೇ, ನಾನು ಕೂಡ ಹೀಗೇ ಭಾವಿಸಿದ್ದೆ. ನನ್ನ ಶಾಲಾ ದಿನಗಳಲ್ಲಿ ಶ್ರೀ ಅಡ್ವಾಣಿಯವರ ರಥಯಾತ್ರೆ ನಮ್ಮ ಮನೆಯ ಮುಂದೆಯೇ ಸಾಗಿದ್ದನ್ನು ಕಂಡವನು ನಾನು. ನಾವು ಬೆಳೆದರೂ ರಾಮಮಂದಿರ ಕನಸೇನೋ ಎಂಬಂತಾಗಿತ್ತು. ಆದರೆ, ಯಾವಾಗ 2019ರಲ್ಲಿ ನಮ್ಮ ದೇಶದ ಸುಪ್ರೀಂ ಕೋರ್ಟ್‌ ಈ ಜಾಗ ರಾಮ ಮಂದಿರಕ್ಕೆ ಸೇರಿದ್ದು ಎಂದು ತೀರ್ಪು ಕೊಟ್ಟಿತೋ ಅಂದು ನನಗೆ ಅಲ್ಲಿ ನಿಧಾನವಾಗಿಯಾದರೂ ಶ್ರೀರಾಮ ಮಂದಿರ ನಿರ್ಮಾಣವಾಗುವುದೆಂದು ಭರವಸೆಯಂತೂ ಮೂಡಿತ್ತು. ಆ ಪ್ರಕಾರವಾಗಿ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಬಾಲರಾಮನ ಪ್ರತಿಷ್ಠಾಪನೆಯ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾನು ಮನೆಯಲ್ಲಿ ಇಲ್ಲದಿದ್ದಾಗ ಮಂತ್ರಾಕ್ಷತೆ ನಮ್ಮ ಮನೆಯನ್ನು ಸೇರಿತ್ತು ನನ್ನ ಮಗಳು ದೇವರಮನೆಯಲ್ಲಿ ಇಟ್ಟಿದ್ದಳು. ಇದನ್ನು ಏನು ಮಾಡಬೇಕೆಂದು ತಿಳಿಸಿದ್ದರೂ ಕೂಡ ನಾನು ನಮ್ಮ ಮನೆಯಲ್ಲಿ ಬೆಳೆದ ಹುಡುಗನೊಬ್ಬನಿಗೆ ಮದುವೆಯಾಗಲಿ ಎಂದು ಪ್ರಯತ್ನ ಪಡುತ್ತಿರುವುದರಿಂದ ಅವನಿಗಾಗಿ ಎತ್ತಿಟ್ಟಿರುವ ಒಂದು ವಸ್ತುವಿನ ಜೊತೆ ಈ ಮಂತ್ರಾಕ್ಷತೆಯನ್ನು ಪೂಜೆ ಮಾಡಿ ಎತ್ತಿಡು ಎಂದು ನಮ್ಮ ಮನೆಯವರಿಗೆ ತಿಳಿಸಿದೆ. ಆಕೆ ಅದೇ ರೀತಿ ಮಾಡಿದಳು.

ಇನ್ನು ಇಂದು ಬೆಳಿಗ್ಗೆ ಬೇಗಬೇಗ ನನ್ನೆಲ್ಲಾ ಕೆಲಸಗಳನ್ನು ಮುಗಿಸಿ, ಸಿದ್ಧವಾಗಿ ಮಧ್ಯಾಹ್ನ ನಮ್ಮ ಊರಿನ ಸರ್ಕಲ್ಲಿನ ಬಳಿಯಿರುವ ಶ್ರೀ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿ ಕೈಮುಗಿದು ಅಲ್ಲಿ ನೀಡುತ್ತಿದ್ದ ಪ್ರಸಾದವನ್ನು ಊಟ ಮಾಡಿದೆ. ಅಲ್ಲಿ ಜಾತಿ ಮತ ಧರ್ಮದ ಭೇದವಿಲ್ಲದೆ ಜನ ಪ್ರಸಾದವನ್ನು ತೆಗೆದುಕೊಳ್ಳುತ್ತಿದ್ದರು. ಅಲ್ಲಿ ನನ್ನ ಮುಸ್ಲಿಂ ಸ್ನೇಹಿತರೊಬ್ಬರು ಬರುತ್ತಿರುವುದನ್ನು ಕಂಡು ಪ್ರಸಾದ ತೆಗೆದುಕೊಳ್ಳಿ ಎಂದೆ. ಅವರು ಅದಾಗಲೇ ತಮ್ಮ ಹುಡುಗನೊಬ್ಬ ಇವರಿಗೂ ಸೇರಿಸಿ ತೆಗೆದುಕೊಂಡು ಹೋಗುತ್ತಿರುವುದನ್ನು ತೋರಿಸಿ ಮುಗುಳ್ನಕ್ಕರು. ಅಲ್ಲಿದ್ದ ಕೆಲವು ಗೆಳೆಯರನ್ನು ಮಾತನಾಡಿಸಿ ಊಟ ಮಾಡಿ ಮುಗಿಸಿ, ಪ್ರಸಾದ ಬಡಿಸುತ್ತಿದ್ದವರಿಗೆ ಊಟ ಮಾಡಲು ಹೇಳಿ ಉಳಿದ ಪ್ರಸಾದವನ್ನು ಬಂದವರಿಗೆಲ್ಲಾ ನೀಡಿ ಕಾಲಿ ಮಾಡಿದೆ. ನನ್ನ ಬಾಲ್ಯದ ದಿನಗಳಲ್ಲಿ ಗುಬ್ಬಿಯಪ್ಪನ ದೇವಸ್ಥಾನದಲ್ಲಿ ಈ ಕೆಲಸ ಮಾಡುತ್ತಿದ್ದದ್ದು ನೆನಪಿಗೆ ಬಂದು ಸ್ವಲ್ಪ ಭಾವುಕನಾಗಿದ್ದಂತೂ ನಿಜ. ಜೊತೆಗೆ, ಇಲ್ಲಿ ಆಂಜನೇಯನ ಸನ್ನಿಧಾನದಲ್ಲಿ ಊಟ ಮಾಡುತ್ತಿದ್ದ ಎಲ್ಲಾ ಜನಗಳನ್ನು ನೋಡಿದಾಗ ನನಗನ್ನಿಸಿದ್ದು ಒಂದೇ ಸಂಗತಿ: “ಇದು ನನ್ನ ಭಾರತ.” ಈ ಆಂಜನೇಯ ದೇವಸ್ಥಾನದ ಮುಂದೆಯೇ ದಿನಾ ನಾನು ಓಡಾಡುತ್ತಿದ್ದರೂ ಒಳಗೆ ಹೋಗಿದ್ದು ಇದೇ ಮೊದಲು. ಆಂಜನೇಯನ ಪುಟ್ಟ ವಿಗ್ರಹವೊಂದು ಮಾತ್ರ ಅಲ್ಲಿದೆ. ಇಂದು ತಿಳಿದ ಹೊಸ ವಿಷಯವೇನೆಂದರೇ ಅಲ್ಲಿ ಇದೇ ಗಣರಾಜ್ಯೋತ್ಸವಕ್ಕೆ ಪಂಚಮುಖಿ ಆಂಜನೇಯ ದೇವಸ್ಥಾನದ ಶಂಕುಸ್ಥಾಪನೆಯಾಗಲಿದೆಯಂತೆ. ಶುಭವಾಗಲಿ.

ನಂತರ ಗೂಳೂರು ಗಣಪನಿಗೆ ನಮಿಸಿ ಬರೋಣವೆಂದು ಹೋದೆ. ಅಲ್ಲಿ ಶ್ರೀರಾಮನ ಹಳೆಯ ಫೋಟೊವೊಂದನ್ನು (ಈ ರೀತಿಯ ಫೋಟೋ ಕೋಟ್ಯಾನುಕೋಟಿ ಭಾರತೀಯರ ಮನೆಯಲ್ಲಿದೆ) ಇಟ್ಟು ಪೂಜೆ ಮಾಡಿದ್ದರು. ನನಗೆ ಅದೃಷ್ಟವೆಂಬಂತೆ ಅಲ್ಲೂ ಕೂಡ ಸ್ವಲ್ಪ ಪ್ರಸಾದ ಸಿಕ್ಕಿತು.

ನಂತರ ಮನೆಗೆ ಬಂದು ಇಷ್ಟೆಲ್ಲಾ ಬರೆದೆ. ಬರೆಯುವುಕ್ಕೆ ಇನ್ನೂ ಇದೆ. ಎಷ್ಟು ಬರೆದರೂ ಪ್ರಮುಖವಾಗಿ ಒಬ್ಬ ಭಾರತೀಯನಾಗಿ ನನಗೆ ಇವತ್ತು ಬಹಳ ಸಂತೋಷದ ದಿನ. ನಮ್ಮ ಮನೆಯ ದೇವರು ಶ್ರೀ ವೀರಭದ್ರಸ್ವಾಮಿ. ಮನದ ದೇವರು ಶ್ರೀ ಗೋಸಲ ಚೆನ್ನಬಸವೇಶ್ವರ ಸ್ವಾಮಿ (ಗುಬ್ಬಿಯಪ್ಪ). ಆದರೆ, ನಮ್ಮ ದೇಶದ ದೇವರು ಶ್ರೀರಾಮ. ಇದು ನನ್ನ ನಂಬಿಕೆ.

ಭಾರತೀಯರ ಶತಮಾನಗಳ ಕನಸೊಂದು ನನಸಾದ ಈ ಶುಭಸಂದರ್ಭಕ್ಕೆ ಸಾಕ್ಷಿಯಾದ ನಾವೇ ಧನ್ಯರು…

ಜೈ ಶ್ರೀರಾಮ, ಜೈ ಭಾರತ…

 

ಸೋಮವಾರ, ಜನವರಿ 15, 2024

ನಿಮ್ಮ ಮನೆಯಲ್ಲಿರಲಿ “ಅಯೋಧ್ಯ ಸಚಿತ್ರ ರಾಮಾಯಣ”



ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಟಾಟನೆ ಮತ್ತು “ರಾಮಲಲ್ಲಾ” ಅಥವಾ “ಬಾಲರಾಮ”ನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್‌ ಆಯೋಜಿಸಿರುವುದು ಸರಿಯಷ್ಟೆ. ಈ ಸಂದರ್ಭದಲ್ಲಿ ಬೆಂಗಳೂರಿನ ಅಯೋಧ್ಯ ಫೌಂಡೇಶನ್‌ ಒಂದು ಅಪರೂಪದ, ಶ್ರೀರಾಮನ ಭಕ್ತರಾದ ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ಇರಬೇಕಾದ ಪುಸ್ತಕವೊಂದನ್ನು ಪ್ರಕಟಿಸಿದೆ. ಅದು “ಅಯೋಧ್ಯ ಸಚಿತ್ರ ರಾಮಾಯಣ.” ಈ ಪುಸ್ತಕವು ಇತರೆ ಭಾಷೆಗಳೊಂದಿಗೆ ಕನ್ನಡದಲ್ಲೂ ಪ್ರಕಟವಾಗಿದೆ.

125 ವರ್ಣಚಿತ್ರಗಳೊಂದಿಗೆ ಮಹರ್ಷಿ ವಾಲ್ಮೀಕಿ ಮಹಾಕಾವ್ಯದ ಸಂಪೂರ್ಣ ಕಥಾನಕವುಳ್ಳ ಕಾಫಿ ಟೇಬಲ್‌ ಪುಸ್ತಕವಾಗಿ “ಅಯೋಧ್ಯ ಸಚಿತ್ರ ರಾಮಾಯಣ” ಪ್ರಕಟವಾಗಿದ್ದು, ಆಕರ್ಷಕ ಮುಖಪುಟ ಮತ್ತು ರೇಖಾಚಿತ್ರಗಳ ಸಹಿತ ಅತ್ಯುತ್ತಮ ವಿನ್ಯಾಸ ಮತ್ತು ಗುಣಮಟ್ಟದ ಮುದ್ರಣದಿಂದ ಕೂಡಿದೆ. ನೋಡಿದ ಕೂಡಲೇ ಈ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಅಯೋಧ್ಯ ಫೌಂಡೇಶನ್‌ ಪ್ರಕಟಿಸಿದೆ.


ಪ್ರಕಾಶಕರ ಮಾತಿನಲ್ಲಿ ತಿಳಿಸಿರುವಂತೆ ಈ ಪ್ರಕಟಣೆಯು ಮೂಲ ಆದಿಕವಿ ಶ್ರೀಮದ್ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣ ಮಹಾಕಾವ್ಯಕ್ಕೆ ನಿಷ್ಠವಾಗಿದ್ದು, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಬರಹಕ್ಕೆ ಖ್ಯಾತ ಕಲಾವಿದರಾದ ಶ್ರೀ ನೀರ್ನಳ್ಳಿ ಗಣಪತಿ ಹೆಗಡೆ ಅವರ ಚಿತ್ರಗಳಿವೆ. ಮೂಲ ರಾಮಾಯಣದ ಯಾವ ಮುಖ್ಯ ವಿವರಣೆಯನ್ನೂ ಕೈಬಿಡದೆ ಅತ್ಯಂತ ಸರಳ ಭಾಷೆಯಲ್ಲಿ, ಚಿತ್ರವತ್ತಾಗಿ ಕತೆಯನ್ನು ನಿರೂಪಿಸಿರುವುದು ಇಲ್ಲಿನ ವಿಶೇಷ. ಆಕರ್ಷಕ ವರ್ಣಚಿತ್ರಗಳು, ಕಾಫಿ ಟೇಬಲ್ ಪುಸ್ತಕದ ಗಾತ್ರ, ನಯವಾದ ಹಾಳೆಗಳು ಕೃತಿಯ ವಿಶೇಷ. ಮಕ್ಕಳಷ್ಟೇ ಅಲ್ಲ ಹಿರಿಯರಿಗೂ ಇಷ್ಟವಾಗುವ ಚಿತ್ರ-ವಿವರಣೆ-ಗುಣಮಟ್ಟದ ಪುಸ್ತಕ ಇದಾಗಿದ್ದು ರಾಮಾಯಣದ ಸಂಕ್ಷಿಪ್ತ ಸಾರ ಇಲ್ಲಿದೆ.

ಪ್ರತಿಯೊಂದು ಮನೆಯಲ್ಲೂ ಇರಲೇಬೇಕಾದ ಸಂಗ್ರಹಯೋಗ್ಯ ಸಾರ್ವಕಾಲಿಕ ರಾಮಾಯಣ ಗ್ರಂಥವಿದು

ಈ ಕೃತಿಯ ಮೌಲ್ಯ ರೂ. 499/- ಆಗಿದ್ದು, ಆಸಕ್ತರಿಗೆ… https://amzn.to/3vARSyq 

***

ಜನವರಿ 13ರಿಂದ 18ರವರೆಗೆ ನಡೆಯುತ್ತಿರುವ ಅಮೇಜಾನ್‌ ಇಂಡಿಯಾ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಲಿಂಕ್: https://amzn.to/4aTZI6u

ಗುರುವಾರ, ಜನವರಿ 11, 2024

ಬಾಯ್ಕಾಟ್ ಮಾಲ್ಡೀವ್ಸ್ ಹ್ಯಾಶ್ ಟ್ಯಾಗಿಗೆ ಬೆಚ್ಚಿಬಿದ್ದ ಮಾಲ್ಡೀವ್ಸ್

ಬಾಯ್ಕಾಟ್‌ ಮಾಲ್ಡೀವ್ಸ್‌ ಹ್ಯಾಶ್‌ ಟ್ಯಾಗಿಗೆ ಬೆಚ್ಚಿಬಿದ್ದ ಮಾಲ್ಡೀವ್ಸ್‌

 



ಸಾಮಾಜಿಕ ಜಾಲತಾಣಗಳು ಈಗ ಎಷ್ಟು ಪವರ್‌ ಫುಲ್‌ ಆಗಿವೆ ಮತ್ತು ಆಗುತ್ತಲಿವೆ ಎಂಬುದಕ್ಕೆ ಒಂದು ತಾಜಾ ಉದಾಹರಣೆ “ಬಾಯ್ಕಾಟ್‌ ಮಾಲ್ಡೀವ್ಸ್‌” ಎಂಬ ಹ್ಯಾಶ್‌ ಟ್ಯಾಗ್.‌ ಈ ಹ್ಯಾಶ್‌ ಟ್ಯಾಗ್‌ ಬಳಸಿದ ಸುದ್ದಿ, ವಿಡಿಯೋಗಳು ಎಕ್ಸ್‌, ಫೇಸ್ಬುಕ್‌, ಇನ್ಸ್ಟಾಗ್ರಾಂ, ಯೂಟ್ಯೂಬ್‌ ಇನ್ನು ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಪ್ರವಾಸೋದ್ಯಮವನ್ನೇ ದೇಶದ ಪ್ರಮುಖ ಆದಾಯವಾಗಿ ಅವಲಂಬಿಸಿರುವ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ ಅನ್ನು ತತ್ತರಗೊಳಿಸಿದೆ.

ಇದಕ್ಕೆಲ್ಲಾ ಕಾರಣ ಮಾಲ್ಡೀವ್ಸ್‌ನ ಮೂರು ಜನ ರಾಜಕಾರಣಿಗಳೇ ಆಗಿದ್ದು, ಈ ಸಚಿವರು, ಸಂಸದರನ್ನು ಅಲ್ಲಿನ ಸರ್ಕಾರ ತನ್ನ ಸಂಪುಟದಿಂದ ವಜಾಗೊಳಿಸಿದ್ದರೂ ಕೂಡ ತನ್ನ ದೇಶಕ್ಕೆ ಆಗಿರುವ ನಷ್ಟದಿಂದ ಸುಧಾರಿಸಿಕೊಳ್ಳಲು ಬಹಳ ಕಷ್ಟವಿದೆ.



ಅಷ್ಟಕ್ಕೂ ಆಗಿದಿಷ್ಟು: ಮೊನ್ನೆ ಅಂದರೆ ಜನವರಿ 7ರಂದು ನಮ್ಮ ಭಾರತ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಸಾಹಸಪ್ರಿಯರಿಗೆ ಇದು ಸೂಕ್ತ ಸ್ಥಳ ಎಂದು ಬರೆದುಕೊಂಡಿದ್ದರು. ಸ್ವತಃ ಪ್ರಧಾನಿಯೇ ಹೋಗಿ ಮೆಚ್ಚಿಕೊಂಡ ಮೇಲೆ ನಾವು ಕೂಡ ಹೋಗುತ್ತೇವೆ ಎಂದು ದೇಶದ ಪ್ರಜೆಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯ, ಯೋಜನೆಗಳನ್ನು ಹಂಚಿಕೊಳ್ಳತೊಡಗಿದರು. 



ಈ ಸುದ್ಧಿಯಿಂದ ಹೊಟ್ಟೆ ಹುರಿಸಿಕೊಂಡ ಮಾಲ್ಡೀವ್ಸ್‌ನ ಮೂವರು ರಾಜಕಾರಣಿಗಳು ಪ್ರತಿಕ್ರಿಯಿಸಿ ಮಾಲ್ಡೀವ್ಸ್‌ ಜೊತೆ ಭಾರತದ ಸ್ಪರ್ಧೆ ಭ್ರಮೆಯಷ್ಟೇ ಎಂಬರ್ಥದ ಪೋಸ್ಟ್‌ ಹಂಚಿಕೊಂಡರು. ನಮ್ಮ ದೇಶದ ಪ್ರವಾಸೋದ್ಯಮವನ್ನು ಅಣಕಿಸಿದರು ನೋಡಿ. ಸಂಕಷ್ಟ ಶುರುವಾಯಿತು. ಭಾರತ ದೇಶದ ಪ್ರಜೆಗಳು ಅಕ್ಷರಶಃ “ಬಾಯ್ಕಾಟ್‌ ಮಾಲ್ಡೀವ್ಸ್”‌ ಎಂಬ ಕ್ರಾಂತಿಯನ್ನೇ ಸೋಷಿಯಲ್‌ ಮೀಡಿಯಾದಲ್ಲಿ ಮಾಡಿಬಿಟ್ಟರು. ಇದರಿಂದ ಆಗುತ್ತಿರುವ ಡ್ಯಾಮೇಜ್‌ ಅರಿತ ಮಾಲ್ಡೀವ್ಸ್‌ ಸರ್ಕಾರ ಈ ಮೂವರನ್ನು ತನ್ನ ಸಂಪುಟದಿಂದ ಕೈಬಿಡುವಷ್ಟರಲ್ಲಿ ದೊಡ್ಡ ಡ್ಯಾಮೇಜೇ ಈ ಪುಟ್ಟ ರಾಷ್ಟ್ರಕ್ಕೆ ಆಗಿಹೋಗಿದೆ. ʼಮಾತು ಆಡಿದರೆ ಹೋಯ್ತು, ಮುತ್ತು ಹೊಡೆದರೆ ಹೋಯ್ತುʼ ಎಂಬ ಗಾದೆ ಮಾತು ನಿಜವಾಗಿಬಿಟ್ಟಿದೆ. ಸಾವಿರಾರು ಭಾರತೀಯರು ತಮ್ಮ ಹೋಟೆಲ್‌ ಬುಕ್ಕಿಂಗ್‌ ಕ್ಯಾನ್ಸಲ್‌ ಮಾಡಿದ್ದಾರೆ, ಹಲವಾರು ವಿಮಾನಗಳು ರದ್ದಾಗಿವೆ. ಕೋವಿಡ್‌ ನಂತರ ಅತಿ ಹೆಚ್ಚು ಭಾರತೀಯರ ಪ್ರೀತಿಗೆ ಪಾತ್ರವಾಗಿದ್ದ ಮಾಲ್ಡೀವ್ಸ್‌ನ ತಿಳಿನೀರ ಸಮುದ್ರ ತೀರಗಳು ಇನ್ನು ಭಾರತೀಯರನ್ನು ಮಿಸ್‌ ಮಾಡಿಕೊಳ್ಳಲಿವೆ. ಮತ್ತು ಲಕ್ಷದ್ವೀಪದ ಸಮುದ್ರ ತೀರಗಳಿಗೆ ಪ್ರವಾಸಿಗರು ಹೆಚ್ಚಲಿದ್ದಾರೆ. ಆದರೆ, ಅಲ್ಲಿನ್ನೂ ಮೂಲ ಸೌಕರ್ಯಗಳು ಅಭಿವೃದ್ಧಿಯಾಗಬೇಕಿದೆ.

ಆದರೆ, ಈ ಪ್ರಕರಣದಿಂದ ಸಾಮಾಜಿಕ ಜಾಲತಾಣಗಳ ಪವರ್‌ ಮತ್ತೊಮ್ಮೆ ಸಾಬೀತಾಗಿರುವುದಂತೂ ಸತ್ಯ.






ಬುಧವಾರ, ಜನವರಿ 3, 2024

“ಕಾಟೇರ” Review: ಕ್ಲಾಸ್‌ ಮಾಸ್‌ ಡಿ-ಬಾಸ್

 ಕಾಟೇರ” Review: ಕ್ಲಾಸ್‌ ಮಾಸ್‌ ಡಿ-ಬಾಸ್

ಪ್ರಿಯ ಸ್ನೇಹಿತರೇ, ನಮಸ್ಕಾರ.

ಹೊಸ ಕ್ಯಾಲೆಂಡರ್‌ ವರ್ಷದ ಶುಭಾಶಯಗಳು…

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ನಾಯಕನಟನಾಗಿ ಅಭಿನಯಿಸಿರುವ “ಕಾಟೇರ” ಸಿನಿಮಾವನ್ನು ಡಿಸೆಂಬರ್‌ 29ರಂದೇ ಅಂದರೆ ಬಿಡುಗಡೆಯಾದ ದಿನವೇ ನೋಡಲಾಗಲಿಲ್ಲ. ಕಾರಣ, ವಿಪರೀತ ರಶ್.‌ ಮಧ್ಯರಾತ್ರಿ ಒಂದು ಗಂಟೆಯಿಂದಲೇ  ಮಾರುತಿ ಥಿಯೇಟರಿನಲ್ಲಿ ಶೋ ಶುರುವಾಗಿತ್ತು. ನಂತರ, ಮೊದಲ ದಿನ ನಿರಂತರವಾಗಿ ಶೋಗಳು ನಡೆದವು. ಮಧ್ಯಾಹ್ನದಿಂದ ಪ್ರಶಾಂತ್‌ ಥಿಯೇಟರ್ನಲ್ಲಿಯೂ ಪ್ರದರ್ಶನ ಶುರುವಾಯಿತು. ಅಲ್ಲೂ ಕೂಡ ರಶ್.‌ ಎಸ್-ಮಾಲಿನ ಐನೋಕ್ಸ್‌ ಪಿವಿಆರ್‌ ಮಲ್ಟಿಪ್ಲೆಕ್ಸಿನಲ್ಲಿ ಸ್ವಲ್ಪ ತಡವಾಗಿ ಆನ್‌ ಲೈನ್‌ ಬುಕ್ಕಿಂಗ್‌ ಬಿಟ್ಟರು. ಸೋ ನಾನು ನೋಡುವಷ್ಟರಲ್ಲಿ ಬಹಳ ತಡವಾಯಿತು. ಅಷ್ಟರಲ್ಲಾಗಲೇ “ಕಾಟೇರ” ಸಿನಿಮಾ ಮೂರುದಿನಗಳ ಯಶಸ್ವಿ ಪ್ರದರ್ಶನ ಕಂಡು 2023ರ ಸೂಪರ್‌ ಹಿಟ್‌ ಸಿನಿಮಾವಾಗಿ 2024ರಲ್ಲಿ ತನ್ನ ಯಶಸ್ಸಿನ ಪ್ರದರ್ಶನವನ್ನು ಮುಂದುವರಿಸಿ ಆಗಿತ್ತು. ಮೂರು ದಿನಗಳಲ್ಲೇ 60ಕೋಟಿ ಕಲೆಕ್ಷನ್‌ ಮಾಡಿ ದಾಖಲೆ ಮಾಡಿತ್ತು.



ನಾನು ನೆನ್ನೆ (02/01/2024 ಸೋಮವಾರ) “ಕಾಟೇರ” ನೋಡಿದೆ. ಬೆಳಿಗ್ಗೆಯೇ ಅಷ್ಟೇನೂ ರಶ್‌ ಆಗುವುದಿಲ್ಲ ಎಂದುಕೊಂಡವನ ಊಹೆ ಸುಳ್ಳಾಗಿತ್ತು. ಆಗಲೂ ಪ್ರದರ್ಶನ ಹೌಸ್‌ ಫುಲ್‌ ಆಗಿತ್ತು. ಇನ್ನು ಸಿನಿಮಾ ಮೇಕಿಂಗ್‌ ಚೆನ್ನಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಕ್ಲಾಸ್‌ ಮತ್ತು ಮಾಸ್‌ ದರ್ಶನ ಈ ಸಿನಿಮಾದಲ್ಲಾಗಿದೆ. ಇಡೀ ಸಿನಿಮಾದಲ್ಲಿ ಎರಡು ಶೇಡ್‌ ಗಳಲ್ಲಿರುವ “ಕಾಟೇರ” ಪಾತ್ರವನ್ನು ಅವರು ಆವಾಹಿಸಿಕೊಂಡುಬಿಟ್ಟಿದ್ದಾರೆ. ಜಡೇಶ್‌ ಕುಮಾರ್‌ ಹಂಪಿ ಅವರ ಕತೆಯನ್ನು ಸಶಕ್ತವಾಗಿ ತರುಣ್‌ ಕಿಶೋರ್‌ ಸುಧೀರ್‌ ಅವರು ನಿರ್ದೇಶಿಸಿದ್ದಾರೆ.

ಜಾತಿಗಳ ನಡುವಿನ ತಾರತಮ್ಯವನ್ನು ಎತ್ತಿ ತೋರಿಸುತ್ತಲೇ, ದೇಶದಲ್ಲಿ ಜಾರಿಯಾದ ʼಉಳುವವನೇ ಭೂ ಒಡೆಯʼ ಎಂಬ ಕಾನೂನಿನ ಮಹತ್ವವನ್ನು ಸಿನಿಮಾದಲ್ಲಿ ತಿಳಿಸಲಾಗಿದೆ. ಈ ಕಾನೂನು ಜಾರಿಯಾದ ಕಾಲಘಟ್ಟದ ಸಂಘರ್ಷದ ಕತೆಯೇ “ಕಾಟೇರ”

ಸಿನಿಮಾದ ನಿರೂಪಣೆ ಬಹಳ ಸಂಯಮದಿಂದ ಕೂಡಿರುವುದು ಸಿನಿಮಾ ಸ್ವಲ್ಪ ದೀರ್ಘವಾಯಿತು ಅಂತ ಅನ್ನಿಸಿದರೂ ದರ್ಶನ್‌ ಅಭಿಮಾನಿಗಳಿಗೆ ಅದು ಬೋನಸ್‌ ಪಾಯಿಂಟ್!‌ ಸಂಗೀತ, ಸಿನಿಮಾಟೋಗ್ರಫಿ, ಸಾಹಿತ್ಯ ಸೇರಿದಂತೆ ಇಡೀ ತಂಡ ಅಚ್ಚುಕಟ್ಟಾಗಿ ಕೆಲಸ ಮಾಡಿದೆ. ಇನ್ನು ನಾಯಕಿ ಆರಾಧನ ಅವರದ್ದು ಹೊಸ ಪರಿಚಯ. ಬಹಳಷ್ಟು ಕಡೆ ಅವರದ್ದು ಮನೋಜ್ಞ ಅಭಿನಾಯ. ಇತರ ಪಾತ್ರಗಳಾದ ಕುಮಾರ್‌ ಗೋವಿಂದ್‌, ಶ್ರುತಿ, ಬಿರಾದಾರ್‌, ರೋಹಿತ್‌, ಅವಿನಾಶ್‌, ಜಗಪತಿ ಬಾಬು, ವಿನೋದ್‌ ಆಳ್ವ, ಅಚ್ಯುತ ಕುಮಾರ್‌, ಗೋಮಾರದಹಳ್ಳಿ ಮಂಜುನಾಥ್‌ ಶಿರಾ, ಸರ್ದಾರ್‌ ಸತ್ಯ ಅವರ ಅಭಿನಯ ಮತ್ತು ಫ್ಲೋರೆನಿಕ್ಸ್‌ ‌ಲೇಡಿ ಆಫೀಸರ್ (ನಟಿಯ ಹೆಸರು ಗೊತ್ತಿಲ್ಲ)  ಗಮನ ಸೆಳೆಯುತ್ತದೆ. ಪುಟ್ಟ ಪಾತ್ರವಾದರೂ ಹಿರಿಯ ನಟರುಗಳಾದ ಶ್ರೀನಿವಾಸ್‌ ಮೂರ್ತಿ ಮತ್ತು ದೊಡ್ಡಣ್ಣನವರ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.

“ಕಾಟೇರ” ಸಿನಿಮಾವನ್ನು ಇತ್ತೀಚಿಗೆ ಮೃತಪಟ್ಟ ದಸರಾ ಅಂಬಾರಿ ಖ್ಯಾತಿಯ ಆನೆ ಅರ್ಜುನನಿಗೆ ಅರ್ಪಿಸಿರುವುದು ದರ್ಶನ್‌ ಅವರ ಪ್ರಾಣಿಗಳೆಡಗಿನ ಪ್ರೀತಿಗೆ ಮತ್ತೊಂದು ನಿದರ್ಶನವಾಗಿದೆ. ಇಡೀ ಸಿನಿಮಾದಲ್ಲಿ ʼಹೊಲೆ ಮಾರಿʼ ಆಚರಣೆ ಒಂದು ರೂಪಕವಾಗಿ ಬಳಕೆಯಾಗಿದೆ. ʼಮಾತು ಬರದ ಚುಂಗನಿಗೆ ಹಿರಣ್ಯ ಕಶಿಪು ಪಾತ್ರವನ್ನು ನಾಟಕದಲ್ಲಿ ಅಭಿನಯಿಸುವಾಸೆ. ಆದರೆ, ಏನು ಮಾಡುವುದು ಅವನಿಗೆ ಮಾತೇ ಬರುವುದಿಲ್ಲ. ಅವನಿಗೆ ದನಿಯಾಗಿ ಅವನ ಆಸೆಯನ್ನು ನೆರವೇರಿಸುವ ಕಾಟೇರನ ಪಾತ್ರʼ ಇಲ್ಲಿ ಮತ್ತೊಂದು ರೂಪಕ. ಈ ರೂಪಕಗಳ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಒಂದು ಬ್ಲಾಕ್‌ ಬಸ್ಟರ್‌ ಸಿನಿಮಾವಾಗಿ “ಕಾಟೇರ” ಹೊರಹೊಮ್ಮಿದೆ. ಡಿ-ಬಾಸ್‌ ಅವರ ಇಮೇಜ್‌ ಮತ್ತಷ್ಟು ಹೆಚ್ಚಾಗಿದೆ.

ಧನ್ಯವಾದಗಳು…

ಪ್ರೀತಿಯಿಂದ,

- ಗುಬ್ಬಚ್ಚಿ ಸತೀಶ್.

“ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು…

  ಆತ್ಮೀಯ ಸ್ನೇಹಿತರೇ, “ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು… ನನ್ನ ಅನಿಸಿಕೆಯಯನ್ನು ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ವೀಕ್ಷಿಸಿ… ಧನ್ಯವಾದಗಳೊಂದಿಗೆ, ಗುಬ್ಬಚ್ಚಿ ...