ಭಾನುವಾರ, ಡಿಸೆಂಬರ್ 24, 2023

ʼಕಾಟೇರʼ ಸಿನಿಮಾದಲ್ಲಿ ತುಮಕೂರಿನ ಕವಿ, ರಂಗಕರ್ಮಿ, ಖ್ಯಾತ ಯೂಟ್ಯೂಬರ್…‌


 

ಚಾಲೆಂಜಿಂಗ್‌ ಸ್ಟಾರ್‌, ಡಿ-ಬಾಸ್‌ ದರ್ಶನ್‌ ಅವರು ನಾಯಕನಾಗಿ ಅಭಿನಯಿಸಿರುವ “ಕಾಟೇರ” ಸಿನಿಮಾ ಇದೇ ತಿಂಗಳ 29ರಂದು ಬಿಡುಗಡೆಯಾಗುತ್ತಿದೆ. ನಿರ್ದೇಶಕ ತರುಣ್‌ ಕಿಶೋರ್‌ ಸುಧೀರ್‌ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದಾರೆ. ನಾಯಕಿಯಾಗಿ ಕನ್ನಡ ಚಲನಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಮತ್ತು ಕೋಟಿ ನಿರ್ಮಾಪಕರೆಂದೇ ಖ್ಯಾತರಾಗಿದ್ದ ದಿವಂಗತ ರಾಮು ಅವರ ಮಗಳು ಆರಾಧನಾ ರಾಮ್‌ ಅಭಿನಯಿಸುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾವು ಹೌದು.

ದರ್ಶನ್‌ ಅವರ 56ನೇ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ, ಸುಧಾಕರ್‌ ಎಸ್.‌ ರಾಜ್‌ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಅವರ ಸಂಕಲನವಿದೆ. 70ರ ದಶಕದ ನೈಜ ಘಟನೆಯನ್ನಾಧಾರಿಸಿದ ರೈತರ ಚಿತ್ರವೆಂದು ಹೇಳಲಾಗುತ್ತಿರುವ “ಕಾಟೇರ”ದಲ್ಲಿ ತೆಲುಗಿನ ಖ್ಯಾತ ನಟರಾದ ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಗೆ ʼಶ್!‌ʼ ಖ್ಯಾತಿಯ ಕುಮಾರ್‌ ಗೋವಿಂದ್‌, ಅವಿನಾಶ್‌, ಶ್ರುತಿ, ಬಿರಾದಾರ್‌ ಇನ್ನು ಮುಂತಾದ ಘಟಾನುಘಟಿ ನಟನಟಿಯರು ಅಭಿನಯಿಸಿದ್ದಾರೆ.



ಇವರೆಲ್ಲರ ಜೊತೆಗೆ ತುಮಕೂರಿನ ಜಿಲ್ಲೆಯ ಸಿರಾ ತಾಲ್ಲೂಕಿನ ರಂಗನಟರಾದ ಗೋಮಾರದಹಳ್ಳಿ ಮಂಜುನಾಥ್‌ ಅವರು ನಟಿಸಿರುವುದು ಮಂಜುನಾಥ್‌ ಅವರ ಅಭಿಮಾನಿಗಳಿಗೆ ಖುಷಿಯನ್ನು ತಂದಿದೆ. ಗೋಮಾರದಹಳ್ಳಿ ಮಂಜುನಾಥ್‌ ಅವರು ಕನ್ನಡದ ಖ್ಯಾತ ಕತೆಗಾರರಾದ ಜ್ಞಾನಪೀಠ ಪುರಸ್ಕೃತ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ಕತೆಗಳನ್ನು ರಂಗಭೂಮಿಯಲ್ಲಿ ಏಕವ್ಯಕ್ತಿ ಪ್ರದರ್ಶನದ ಮೂಲಕ ಕೋಲನ್ನು ಕುಟ್ಟುತ್ತಾ ಪ್ರಸ್ತುತಪಡಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ! ಕವಿಯೂ ಆಗಿರುವ ಮಂಜುನಾಥ್‌ ಅವರ ಕವನಗಳು ಕನ್ನಡದ ಖ್ಯಾತ ಕವಿಗಳಾದ ಜಯಂತ ಕಾಯ್ಕಿಣಿ ಅವರ ಮುನ್ನುಡಿಯೊಂದಿಗೆ ಪ್ರಕಟವಾಗಲು ಕೂಡ ಹವಣಿಸುತ್ತಿವೆ. ಇವರ ಈ ಪ್ರತಿಭೆಗಳಿಗೆಲ್ಲಾ ಕಳಶವಿಟ್ಟಂತೆ ತಮ್ಮ ಕಂಚಿನ ಕಂಠದ ಮೂಲಕ ನಿರೂಪಿಸುವ  ಇವರ ಯೂಟ್ಯೂಬ್‌ ಚಾನೆಲ್‌ “ನೇಟಿವ್‌ ನೆಸ್ಟ್‌ (Native Nest)” ನೋಡುವುದೇ ಚೆಂದ.



ಇಷ್ಟೆಲ್ಲಾ ಪ್ರತಿಭೆಯ ಮಂಜುನಾಥ್‌ ಅವರು ಈ ಹಿಂದೆ ‌ಖ್ಯಾತ ನಟ ಶರಣ್‌ ಅವರ “ಗುರುಶಿಷ್ಯರು” ಸಿನಿಮಾದಲ್ಲಿ, ಮತ್ತು ಇನ್ನು ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರೀಗ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹೊಸ ಸಿನಿಮಾ “ಕಾಟೇರ” ದಲ್ಲಿ ಅಭಿನಯಿಸಿದ್ದು, ಈ ಚಿತ್ರವು ಡಿಸೆಂಬರ್‌ 29ಕ್ಕೆ ಅದ್ದೂರಿ ಬಿಡುಗಡೆಯಾಗುತ್ತಿದೆ. “ಕಾಟೇರ” ಸಿನಿಮಾವು ಯಶಸ್ವಿಯಾಗಲಿ, ಈ ಮೂಲಕ ಮಂಜುನಾಥ್‌ ಅವರಿಗೆ ಮತ್ತಷ್ಟು ಅವಕಾಶಗಳು ಸಿಗಲಿ ಎಂದು ಹಾರೈಸುತ್ತೇನೆ.

ಪ್ರೀತಿಯಿಂದ,

-        - ಗುಬ್ಬಚ್ಚಿ ಸತೀಶ್.

2 ಕಾಮೆಂಟ್‌ಗಳು:

ಹತ್ತು ಅತ್ಯುತ್ತಮ ಕವನ ಸಂಕಲನಗಳಿಗೆ ಸುವರ್ಣಾವಕಾಶ...

ಸುವರ್ಣ ಕರ್ನಾಟಕ ಕಾವ್ಯ ಪುರಸ್ಕಾರಕ್ಕಾಗಿ ಕವನ ಸಂಕಲನಗಳ ಅಹ್ವಾನ... ರಾಜ್ಯಮಟ್ಟದ ಸಾಹಿತ್ಯಾತ್ಮಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ  ಕರ್ನಾಟಕ ರಾಜ...