ಸೋಮವಾರ, ಅಕ್ಟೋಬರ್ 2, 2023

ನಿಮ್ಮ ಸಂಕಲ್ಪ ಸಿಂಹದಂತಿರಲಿ!

 ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ; ಆದರೆ ಆತನ

ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ

-    ಅಬ್ರಹಾಂ ಲಿಂಕನ್, ಅಮೇರಿಕಾದ ಅಧ್ಯಕ್ಷ

ಸ್ನೇಹಿತರೇ, ನಾವು ಜೀವನದಲ್ಲಿ ಏಕೆ ಸೋಲ್ತೀವಿ? ಈ ಪ್ರಶ್ನೆ ಬಹಳ ಮುಖ್ಯವಾದುದು. ನಾವು ನಮ್ಮ ಗುರಿಯನ್ನು ಹುಡುಕಿಕೊಂಡಿರ‍್ತೀವಿ. ಆದರೆ, ಆ ಗುರಿಯೆಡೆಗೆ ಸರಿಯಾದ ದಾರಿಯಲ್ಲಿ ನಿರಂತರವಾಗಿ ನಡೆಯಲ್ಲ. ಅದಕ್ಕಿಂತ ಮುಖ್ಯವಾಗಿ ನಮ್ಮ ಗುರಿಯೆಡೆಗಿನ ಪಯಣವನ್ನು ಆರಂಭಿಸುವುದೇ ಇಲ್ಲ. ಜೊತೆಗೆ ನಾವು ಏನಾಗಬೇಕೆಂದು ನಿರ್ಧಾರ ತಳೆದಿರುತ್ತೇವೋ ಆ ಕುರಿತು ಸಂಕಲ್ಪವೊಂದನ್ನು ಮಾಡಿಕೊಂಡಿರುವುದೇ ಇಲ್ಲ. ಇದೇ ಕಾರಣಕ್ಕೆ ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಾಹಂ ಲಿಂಕನ್ ಅವರ ಮಾತೊಂದನ್ನು ನಾನು ಮೇಲೆ ಉಲ್ಲೇಖಿಸಿರುವುದು.

ಹೌದು ಸ್ನೇಹಿತರೇ. ಜೀವನದಲ್ಲಿ ನಾವು ಏನಾಗಬೇಕೋ ಅದನ್ನು ಮೊದಲು ನಮ್ಮ ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿಕೊಳ್ಳಬೇಕು. ಸಂಕಲ್ಪ ಮಾಡಿಕೊಳ್ಳುವುದೆಂದರೆ, ದೃಢ ನಿಶ್ಚಯ ತಳೆಯುವುದು. ಯಾವುದಾದರೂ ಪೂಜೆಗೆ ಕೂಡುವ ಮೊದಲು ಅಥವಾ ದೇವರ ವ್ರತಗಳನ್ನು ಮಾಡುವ ಮೊದಲು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಿ ಎನ್ನುವ ರೂಢಿಯಿದೆ. ಮನುಷ್ಯನನ್ನು ಒಳಗೊಂಡಂತೆ ಎಲ್ಲಾ ಪ್ರಾಣಿ ಪಕ್ಷಿಗಳಲ್ಲಿ ಸಂಕಲ್ಪ ಮಾಡಿಕೊಳ್ಳುವ ಗುಣವಿರುತ್ತದೆ. ವಿಶೇಷವಾಗಿ ಕಾಡಿನ ರಾಜ ಅಥವಾ ಮೃಗರಾಜ ಸಿಂಹದ ಸಂಕಲ್ಪ ಶಕ್ತಿ ಅದ್ವಿತೀಯವಾದದ್ದು.


ನಮಗೆಲ್ಲಾ ಗೊತ್ತಿರುವ ಸಂಗತಿಯೆಂದರೆ, ಕಾಡಿನಲ್ಲಿ ವಾಸವಾಗಿರುವ ಪ್ರಾಣಿಗಳಲ್ಲಿ ಎಲ್ಲಕ್ಕಿಂತ ದೊಡ್ಡದಾದ ಪ್ರಾಣಿ ಆನೆ, ಎತ್ತರವಾದ ಪ್ರಾಣಿ ಜಿರಾಫೆ, ಬುದ್ಧಿವಂತ ಪ್ರಾಣಿ ನರಿ, ವೇಗವಾಗಿ ಓಡುವ ಶಕ್ತಿ ಇರುವ ಪ್ರಾಣಿ ಚಿರತೆ. ಹೀಗೆ ಒಂದೊಂದು ಪ್ರಾಣಿಯೂ ಒಂದೊಂದು ವಿಶೇಷವಾದ ಶಕ್ತಿಯನ್ನು ಪಡೆದಿವೆ. ಆದರೆ, ಈ ಯಾವ ಗುಣಗಳೂ ತನ್ನಲ್ಲಿಲ್ಲದ ಸಿಂಹ ಕಾಡಿನ ರಾಜ! ಏತಕ್ಕೆ ಎನ್ನುವ ಪ್ರಶ್ನೆಗೆ ಉತ್ತರ: ಸಿಂಹ ನಿರ್ಭಯಿ, ಧೈರ್ಯಶಾಲಿ. ಎಂಥಹ ಸವಾಲನ್ನು ಬೇಕಾದರೂ ಎದುರಿಸಬಲ್ಲ ಚಾಕಚಕ್ಯತೆ ಅದಕ್ಕಿದೆ. ಎಲ್ಲ ಅಡೆತಡೆಗಳನ್ನು ಮೀರಬಲ್ಲ ಚೈತನ್ಯವಿದೆ. ಅದರದ್ದು ಆತ್ಮವಿಶ್ವಾಸಭರಿತ ಧೀಮಂತ ನಡಿಗೆ, ಅದು ಯಾವುದಕ್ಕೂ ಎದೆಗುಂದುವುದಿಲ್ಲ, ಎಂದಿಗೂ ಹೆದರುವುದಿಲ್ಲ, ತನ್ನನ್ನು ಯಾರೂ ತಡೆಯಲಾರರೆಂಬ ವಿಶ್ವಾಸ ಅದಕ್ಕಿದೆ. ಎಂಥಹ ಗಂಡಾಂತರಗಳನ್ನು ಬೇಕಾದರೂ ಎದುರಿಸುವ ವಿಶ್ವಾಸ ಅದಕ್ಕಿದೆ. ಅದರ ಆಲೋಚನೆಯಲ್ಲಿ ಪ್ರತಿಯೊಂದು ಪ್ರಾಣಿಯೂ ಅದರ ಆಹಾರವೇ ಸರಿ. ಸಿಕ್ಕ ಪ್ರತಿ ಅವಕಾಶವನ್ನೂ ತಾನು ಪ್ರಯತ್ನಿಸಿ ನೋಡಲು ಯೋಗ್ಯವಾದದ್ದೆಂದು ಭಾವಿಸಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಈ ಎಲ್ಲಾ ಗುಣಗಳಿಂದ ಅದು ಮೃಗರಾಜ!

ಇಂಥಹ ಆಕರ್ಷಕ ಗುಣಗಳುಳ್ಳ ಸಿಂಹದಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ನೀವು ಎಲ್ಲರಿಗಿಂತ ಎತ್ತರವಾಗಿರಬೇಕಿಲ್ಲ, ಎಲ್ಲರಿಗಿಂತ ಹೆಚ್ಚು ಬುದ್ಧಿವಂತರಾಗಿರಬೇಕಿಲ್ಲ, ಹೆಚ್ಚು ಚಾಣಾಕ್ಷರಾಗಬೇಕಿಲ್ಲ, ಹೆಚ್ಚು ಮೇಧಾವಿಯೂ ಆಗಿರಬೇಕಿಲ್ಲ, ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಎಲ್ಲರೂ ನಿಮ್ಮನ್ನು ಒಪ್ಪಿಕೊಳ್ಳಬೇಕಿಲ್ಲ. ನಿಮಗೆ ಬೇಕಿರುವುದೆಲ್ಲವೂ ‘ಧೈರ್ಯ’, ‘ಎದೆಗಾರಿಗೆ’, ‘ಮತ್ತೆ ಮತ್ತೆ ಪ್ರಯತ್ನಿಸುವ ಛಲ’, ‘ಇದು ನನ್ನಿಂದ ಸಾಧ್ಯವೆಂಬ ಆತ್ಮವಿಶ್ವಾಸ’. ಈ ರೀತಿಯ ಸಿಂಹದ ಸಂಕಲ್ಪ ಶಕ್ತಿ ನಿಮ್ಮಲ್ಲಿ ಬಂದು ಅದು ದೃಢವಾದರೆ ನಿಮ್ಮನ್ನು ತಡೆಯುವವರು ಯಾರು?

ಒಂದೇ ಒಂದು ಕ್ಷಣದ ಸಂಕಲ್ಪ ನಿಮ್ಮ ಭವಿಷ್ಯವನ್ನೇ ಬದಲಿಸಬಲ್ಲದು. ನಾವು ಏನಾಗಬೇಕೆಂದುಕೊಂಡಿದ್ದೇವೋ ಅದನ್ನು ಸಂಕಲ್ಪ ಮಾಡಿಕೊಂಡು ಅದನ್ನೇ ಸಾಧಿಸುವ ನಿಟ್ಟಿನಲ್ಲಿ ಅಭ್ಯಾಸ ಮಾಡುತ್ತ ಹೋದಂತೆ ನಮ್ಮ ಸಂಕಲ್ಪ ಶಕ್ತಿಯೂ ಸದೃಢವಾಗಿ ನಮ್ಮ ಗೆಲುವಿನ ಹಾದಿಯು ಕೂಡ ಸುಲಭವಾಗಿಬಿಡುತ್ತದೆ. ಗೆಲುವಿಗಾಗಿ ಹಾತೊರೆಯುವವರು ದೃಢಸಂಕಲ್ಪ ತೆಗೆದುಕೊಂಡ ಕೂಡಲೇ ಸಮಯವನ್ನು ಮಹತ್ವಪೂರ್ಣವೆಂದು ಪರಿಗಣಿಸಿ ತಮ್ಮ ಕೆಲಸದಲ್ಲಿ ನಿರತರಾಗಬೇಕು. ಜಗತ್ತಿನಲ್ಲಿ ಎಲ್ಲರಿಗೂ ಇಪ್ಪತ್ತನಾಲ್ಕೇ ಗಂಟೆಗಳು. ಸಾಧಿಸದವರಿಗೂ ಮತ್ತು ಸಾಧಿಸಿದವರಿಗೂ… ಸಮಯದ ಸರಿಯಾದ ಸದುಪಯೋಗ ಪಡೆದುಕೊಂಡವರು ಮಾತ್ರ ಸಾಧಿಸಿಯೇ ವಿರಮಿಸುತ್ತಾರೆ ಎಂಬುದು ಜಗತ್ತಿನ ಸತ್ಯಗಳಲ್ಲೊಂದು. ಸಂಕಲ್ಪ ಗಟ್ಟಿಯಾದರೇ ಸಮಯ ತಂತಾನೇ ಒಲಿದಿರುತ್ತದೆ.


‘ಸಂಕಲ್ಪ’ದ ಅರ್ಥ ಏನು ಎಂಬುದನ್ನು ಸರಿಯಾಗಿ ಅರಿಯಲು ಓಶೋ ಅವರು ಹೇಳುವ ಈ ಕಥೆಯನ್ನು ಓದಬೇಕು: ಒಮ್ಮೆ ವ್ಯಕ್ತಿಯೋರ್ವ ಪರಮಾತ್ಮನನ್ನು ಹೊಂದುವ ಮಾರ್ಗ ಏನೆಂದು ಓರ್ವ ಫಕೀರನನ್ನು ಕೇಳಿದ. ಆತನ ಕಣ್ಣುಗಳಲ್ಲಿ ಇಣುಕಿದಾಗ, ಆತನಲ್ಲಿಯ ತೃಷೆ ಫಕೀರರಿಗೆ ಕಂಡಿತು. ಫಕೀರ ನದಿಸ್ನಾನಕ್ಕೆ ಹೋಗುತ್ತಿದ್ದರು. ಜೊತೆಗೆ ಬಂದಲ್ಲಿ, ಮಿಂದ ಬಳಿಕ ಪರಮಾತ್ಮನನ್ನು ಹೊಂದುವ ಮಾರ್ಗವನ್ನು ತೋರಿಸುವುದಾಗಿ ವಾಗ್ದಾನ ನೀಡಿದರು. ಅವರಿಬ್ಬರೂ ನದಿಯ ಬಳಿಗೆ ಬಂದರು. ಆ ವ್ಯಕ್ತಿ ನೀರಿನಲ್ಲಿ ಇಳಿದೊಡನೆ, ಫಕೀರ ಆತನ ತಲೆಯನ್ನು ಗಟ್ಟಿಯಾಗಿ ನೀರಿನಲ್ಲಿ ಅದುಮಿಟ್ಟುಕೊಂಡರು. ಆ ವ್ಯಕ್ತಿ ಫಕೀರರ ಹಿಡಿತದಿಂದ ಬಿಡಿಸಿಕೊಳ್ಳಲು ಹರಸಾಹಸಪಟ್ಟ. ಆತನ ಜೀವ ಅಪಾಯದಲ್ಲಿತ್ತು, ಆತ ಫಕೀರರ ತುಲನೆಯಲ್ಲಿ ನಿಶ್ಯಕ್ತನಾಗಿದ್ದರೂ ಸಹಿತ ಆತನ ಸುಪ್ತ ಶಕ್ತಿ ನಿಧಾನವಾಗಿ ಜಾಗೃತಗೊಂಡಿತು. ಸ್ವಲ್ಪ ಹೊತ್ತಿನಲ್ಲೇ ಫಕೀರರಿಗೆ ಆತನನ್ನು ಮುಳುಗಿಸಿಡುವುದು ಅಸಾಧ್ಯವಾಯಿತು. ಆ ವ್ಯಕ್ತಿ ತನ್ನೆಲ್ಲ ಶಕ್ತಿಯನ್ನು ಬಳಸಿ ನದಿಯಿಂದ ಹೊರಬರುವುದರಲ್ಲಿ ಸಫಲನಾದ. ಫಕೀರ ಜೋರಾಗಿ ನಗುತ್ತಿದ್ದುದನ್ನು ಕಂಡು ಆತ ಚಕಿತನಾದ. ಅವರ ವರ್ತನೆ ಆತನಿಗೆ ಅರ್ಥವಾಗಲಿಲ್ಲ. ಆತ ತುಸು ಶಾಂತನಾದ ಮೇಲೆ ಫಕೀರ ಕೇಳಿದರು. ‘ನೀರಿನಲ್ಲಿ ಮುಳುಗಿದ್ದಾಗ ನಿನ್ನ ಮನದಲ್ಲೇನು ಬಯಕೆಗಳಿದ್ದವು?’ ಆತನೆಂದ, ‘ಬಯಕೆಗಳು...! ಬಯಕೆಗಳು ಇರಲಿಲ್ಲ, ಒಂದೇ ಒಂದು ಬಯಕೆ ಮಾತ್ರ ಇತ್ತು – ಉಸಿರು ಒಳಕ್ಕೆಳೆದುಕೊಳ್ಳುವ ಬಯಕೆ.’ ಫಕೀರ ಹೇಳಿದರು, ‘ಪರಮಾತ್ಮನನ್ನು ಹೊಂದುವ ರಹಸ್ಯವೂ ಇದೇನೆ. ಈ ಸಂಕಲ್ಪ, ನಿನ್ನ ದೃಢಸಂಕಲ್ಪ ನಿನ್ನೆಲ್ಲ ಸುಪ್ತ ಶಕ್ತಿಗಳನ್ನು ಜಾಗೃತಗೊಳಿಸಿತು.’

ಈ ಕತೆಯಿಂದಲೇ ಸಂಕಲ್ಪದ ಪ್ರಾಮುಖ್ಯತೆಯನ್ನು ಅರಿತು ಇದೆಷ್ಟು ಅತ್ಯವಶ್ಯಕವೆಂದು ಮನಗಾಣಬಹುದಾಗಿದೆ. ಸಂಕಲ್ಪದ ಜೊತೆಗೆ ಸಾಧನೆ ನಿರಂತರವಾಗಿರಬೇಕು. ಆ ನಿರಂತರತೆ ಜಲಪಾತದಂತೆ ಸದಾ ಧುಮ್ಮಿಕ್ಕುತ್ತಿರಬೇಕು.

ಸ್ವಾಮಿ ವಿವೇಕಾನಂದರು ಅಮೇರಿಕಾಕ್ಕೆ ಹೋಗಿದ್ದಾಗ ಒಂದು ಸಂಜೆ ನದಿಯ ಮೇಲಿದ್ದ ಸೇತುವೆಯಲ್ಲಿದ್ದ ಹುಡುಗರು ನೀರಿನ ಮೇಲೆ ತೇಲುತ್ತಿದ್ದ ಶಂಖಗಳಿಗೆ ಪಿಸ್ತೂಲಿನಿಂದ ಶೂಟ್ ಮಾಡುತ್ತಿದ್ದನ್ನು ಗಮನಿಸಿದರು. ಆ ಶಂಖಗಳು ಮುಳುಗುತ್ತಾ ತೇಲುತ್ತಾ ಇದ್ದವು. ಈ ಹುಡುಗರಿಗೆ ಗುರಿಯಿಟ್ಟು ಒಂದು ಶಂಖಕ್ಕೂ ಹೊಡೆಯಲಾಗಲಿಲ್ಲ. ಸ್ವಾಮಿ ವಿವೇಕಾನಂದರು ಇವರನ್ನು ಗಮನಿಸುತ್ತಿದ್ದದ್ದನ್ನು ಅರಿತ ಹುಡುಗರು, “ನೀವು ನಮ್ಮನ್ನು ನೋಡುತ್ತಿದ್ದೀರಿ. ನೀವು ನಮಗಿಂತ ಚೆನ್ನಾಗಿ ಹೊಡೆಯಬಲ್ಲಿರಾ?” ಎಂದು ಕೇಳಿದರು. ನಗುತ್ತಾ ಸ್ವಾಮಿ ವಿವೇಕಾನಂದರು, “ನಾನು ಪ್ರಯತ್ನಿಸುತ್ತೇನೆ” ಎಂದು ಹೇಳಿ ಆ ಪಿಸ್ತೂಲನ್ನು ತೆಗೆದುಕೊಂಡರು. ಆ ಪಿಸ್ತೂಲಿನಿಂದ ಶಂಖಗಳಿಗೆ ಗುರಿಯಿಟ್ಟು ಒಂದೆರಡು ಕ್ಷಣಗಳ ಕಾಲ ತನ್ಮಯರಾಗಿ ನಿಂತರು. ನಂತರ ತಮ್ಮ ಪಿಸ್ತೂಲಿನಿಂದ ಗುಂಡನ್ನು ಹಾರಿಸಿದರು. ಸತತವಾಗಿ ಹನ್ನೆರೆಡು ಬಾರಿ ಒಂದೇ ಸಮನೆ ಅವರು ಹಾರಿಸಿದ ಗುಂಡುಗಳು ಶಂಖಗಳಿಗೆ ಬೀಳುವಂತೆ ಹೊಡೆದಿದ್ದರು. ಇದನ್ನು ನೋಡಿದ ಹುಡುಗರು ಆಶ್ಚರ್ಯಚಕಿತರಾದರು. ಒಬ್ಬ ಮನುಷ್ಯ ಈ ರೀತಿ ಗುರಿಯಿಟ್ಟು ಹೊಡೆಯಬಹುದೆಂದು ಆ ಹುಡುಗರು ಕನಸಿನಲ್ಲಿಯೂ ಎಣಿಸಿರಲಿಲ್ಲ. ತುಸು ಯೋಚಿಸಿ “ಸ್ವಾಮಿ, ಈ ರೀತಿ ಗುರಿಯಿಡುವುದಕ್ಕೆ ನಿಮಗೆ ಹೇಗೆ ಸಾಧ್ಯವಾಯಿತು?” ಎಂದು ವಿನಮ್ರರಾಗಿ ಕೇಳಿದರು. ಸ್ವಾಮಿ ವಿವೇಕಾನಂದರು ಅವರೆಡೆಗೆ ಮುಗುಳ್ನಕ್ಕು, “ನೀವು ಏನನ್ನೇ ಮಾಡುತ್ತಿರಿ, ಅದರಲ್ಲೇ ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ನೀವು ಪಿಸ್ತೂಲಿನಿಂದ ಗುರಿಯಿಡುವ ಆಟವಾಡುತ್ತಿದ್ದರೆ, ಗುರಿಯೆಡೆಗೆ ನಿಮ್ಮ ಪೂರ್ತಿ ಗಮನವಿರಬೇಕು. ನೀವು ಏನನ್ನಾದರು ಕಲಿಯುತ್ತಿದ್ದರೆ, ಆ ಕಲಿಯುವಿಕೆಯೆಡೆಗೆ ನಿಮ್ಮ ಮನಸ್ಸಿರಬೇಕು. ನಿಮ್ಮ ಏಕಾಗ್ರತೆ ಆ ಮಟ್ಟದಲ್ಲಿದ್ದಾಗ ಮಾತ್ರ ನೀವು ಏನನ್ನಾದರೂ ಗೆಲ್ಲಬಲ್ಲಿರಿ. ನಮ್ಮ ಭಾರತದೇಶದಲ್ಲಿ ನಾವು ಮಕ್ಕಳಿಗೆ ಇದನ್ನು ಹೇಳಿಕೊಡುತ್ತೇವೆ” ಎಂದು ಹೇಳಿದರು. ಇದನ್ನೇ ದೃಢಸಂಕಲ್ಪ ಅನ್ನುತ್ತಾರೆ ಅಲ್ಲವೇ?

ನಾನು ನಿಮಗೆ ಇಲ್ಲಿ ಒಂದು ನನ್ನ ಅನುಭವದ ಉದಾಹರಣೆಯೊಂದನ್ನು ಕೊಡಲು ಇಚ್ಚಿಸುತ್ತೇನೆ. ನನ್ನ ಗೆಳೆಯರೊಬ್ಬರು ಅವರ ನೆಂಟರ ಮನೆಯ ಗೃಹಪ್ರವೇಶಕ್ಕೆ ಒಮ್ಮೆ ಹೋಗಿದ್ದರಂತೆ. ಮನೆಯನ್ನೆಲ್ಲಾ ನೋಡಿ, ಊಟ ಮಾಡಿ ಅಲ್ಲೆಲ್ಲಾ ಹುಡುಕಿದರೂ ಪಿ.ಯು.ಸಿ. ಓದುತ್ತಿದ್ದ ನೆಂಟರ ಮಗಳು ಕಾಣಲೇ ಇಲ್ಲವಂತೆ! ನೆಂಟರನ್ನು ವಿಚಾರಿಸಿದಾಗ ಅವಳು ಹತ್ತಿರದ ತೋಟದಮನೆಯಲ್ಲಿ ಇರುವಳೆಂದು ಹೇಳಿದರಂತೆ. ಸರಿ, ಇವರು ಅಲ್ಲಿ ಹೋಗಿ ನೋಡಿದ್ದಾರೆ. ಆಕೆ ಅಲ್ಲಿ ತನ್ನ ಪಾಡಿಗೆ ತಾನು ಓದುತ್ತಾ ಕುಳಿತ್ತಿದ್ದಳಂತೆ! ಏನಶ್ಚಾರ್ಯ!? ಏನಮ್ಮ, ನಿನ್ನ ತಂದೆ ತಾಯಿ ಕಟ್ಟಿರುವ ಮನೆಯ ಗೃಹಪ್ರವೇಶದಲ್ಲಿ ಖುಷಿಯಿಂದ ಓಡಾಡುವುದನ್ನು ಬಿಟ್ಟು ಇಲ್ಲಿ ಓದುತ್ತಾ ಕುಳಿತ್ತಿದ್ದೀಯಾ ಎಂದು ಕೇಳಿದರಂತೆ. ಅದಕ್ಕೆ ಆಕೆ, ಅಣ್ಣಾ, ಈ ಮನೆ ನನ್ನ ಅಪ್ಪ ಅಮ್ಮ ಕಟ್ಟಿರುವುದು. ಅವರು ಸಂಭ್ರಮಿಸಲಿ. ನಾನು ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಿ ಮನೆ ಕಟ್ಟುತ್ತೇನೆ. ಆಗ ಎಲ್ಲರನ್ನೂ ಕರೆದು ಸಂಭ್ರಮಿಸುತ್ತೇನೆ ಎಂದು ಹೇಳಿದಳಂತೆ. ಅಪ್ಪ ಅಮ್ಮ ಕಟ್ಟಿರುವ ಮನೆಯ ಗೃಹಪ್ರವೇಶದ ಸಂಭ್ರಮವಿದ್ದರೂ ತನ್ನ ಓದಿನಲ್ಲಿ ಏಕಾಗ್ರತೆಯಿಂದ ತೊಡಗಿಕೊಂಡ ಆಕೆಯನ್ನು ನಾವು ಮೆಚ್ಚಲೇಬೇಕಲ್ಲವೇ? ಅವಳ ಸಂಕಲ್ಪ ಎಂತಹದಿತ್ತು ನೋಡಿ. ಆಕೆ ಇವತ್ತು ಪ್ರತಿಷ್ಟಿತ ಐಬಿಎಂ ಉದ್ಯೋಗಿ. ಲಕ್ಷಾಂತರ ಸಂಬಳ ಪಡೆಯುತ್ತಾಳೆ. ಬೆಂಗಳೂರಿನಲ್ಲಿ ಸ್ವಂತ ಅಪಾರ್ಟ್ಮೆಂಟ್ ಹೊಂದಿದ್ದಾಳೆ. ಮತ್ತು ಇಂದು ಗಂಡ ಮಗುವಿನೊಂದಿಗೆ ಸುಖಸಂಸಾರ ಆಕೆಯದು.

ನೀವು ಏನನ್ನೇ ಮಾಡುತ್ತಿರಿ, ಆ ಕೆಲಸದಲ್ಲಿ ಯಶಸ್ವಿಯಾಗಲು ಏಕಾಗ್ರತೆ ಕೂಡ ತುಂಬಾ ಮುಖ್ಯ. ಏಕಾಗ್ರತೆ ಇಲ್ಲದೆ ನೀವು ನಿಮ್ಮ ಕೆಲಸವನ್ನು ಸಂಪೂರ್ಣವಾಗಿ ಮುಗಿಸಲಾರಿರಿ. ಮನುಷ್ಯನ ಮನಸ್ಸು ಏನೇ ಮಾಡಿದರೂ ಒಂದು ಕೆಲಸದಲ್ಲಿ ಶೇ 10ರಷ್ಟು ಮಾತ್ರ ತೊಡಗಿಕೊಳ್ಳಬಲ್ಲದಂತೆ. ಉಳಿದ ಶೇ 90ರಷ್ಟು ಮನಸ್ಸು ಎಲ್ಲೆಲ್ಲೋ ಹರಿದಾಡಿ ಹೋಗುತ್ತದಂತೆ. ಅಂತಹ ಶೇ 10ರಷ್ಟು ಮನಸ್ಸನ್ನು ಏಕಾಗ್ರತೆಗೊಳಿಸಿ ಕೆಲಸ ಮಾಡಿ ಅದೆಷ್ಟೋ ಸಾಧನೆಗಳು ಆಗಿರುವಾಗ, ಇನ್ನೂ ಹೆಚ್ಚು ಶೇಕಡಾ ಮನಸ್ಸನ್ನು ಏಕಾಗ್ರತೆಯಿಂದ ಒಂದೇ ಕಡೆ ಇಟ್ಟು ಕೆಲಸ ಮಾಡಿದರೆ ಎಂಥಹ ಅದ್ಭುತವನ್ನಾದರೂ ಸಾಧಿಸಿ ಬಿಡಬಹುದು. ಸೂರ‍್ಯನ ಚೆದುರಿದ ಕಿರಣಗಳನ್ನು ಭೂತಗನ್ನಡಿಯ ಮೂಲಕ ಒಂದೇ ಕಡೆ ಕೇಂದ್ರಿಕರಿಸಿದರೆ ಅದು ಏನನ್ನಾದರು ಸುಡುವ ಬೆಂಕಿಯೇ ಆಗಿಬಿಡುತ್ತದೆ. ಅದೇ ರೀತಿ ನಮ್ಮ ಮನಸ್ಸನ್ನು ಒಂದೇ ಕಡೆ ಕೇಂದ್ರಿಕರಿಸಿ ದೊರೆಯುವ ಏಕಾಗ್ರತೆಯಿಂದ ನಾವು ಏನಾನ್ನಾದರೂ ಸಾಧಿಸಿ ಬಿಡಬಹುದು. ನಮ್ಮ ಗುರಿಯನ್ನು ಬೇಗ ಮುಟ್ಟಬಹುದು. ಈ ರೀತಿಯ ಏಕಾಗ್ರತೆ ನಿಮ್ಮದಾಗಬೇಕಾದರೆ ನಿಮ್ಮ ಸಂಕಲ್ಪ ಗಟ್ಟಿಯಾಗಿರಬೇಕು, ದೃಢವಾಗಿರಬೇಕು. ಅದು ಸಿಂಹದ ಸಂಕಲ್ಪದಂತಿರಬೇಕು.

ನೋಡಿ, ಈ ʼಸಂಕಲ್ಪʼ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಹೃದಯ ಮತ್ತು ಮನಸ್ಸಿನಿಂದ ರೂಪುಗೊಂಡ ಉದ್ದೇಶ ಎಂದು. ನಿಮ್ಮ ಉದ್ದೇಶ ಅಥವಾ ಗುರಿ ಏನೇ ಆಗಿರಲಿ ಅದು ನಿಮ್ಮ ಹೃದಯ ಮತ್ತು ಮನಸ್ಸಿನಿಂದ ರೂಪುಗೊಂಡಿದ್ದರೆ ನಿಮ್ಮನ್ನು ಯಾರೂ ಕೂಡ ಸೋಲಿಸಲು ಸಾಧ್ಯವಿಲ್ಲ. ಸದಾಕಾಲ ಗೆಲುವೇ ನಿಮ್ಮ ಜೀವನವಾಗಲಿದೆ. ಈಗಲೇ ಸಂಕಲ್ಪ ಮಾಡಿಕೊಳ್ಳಿ. ಶುಭವಾಗಲಿ.

 ಪ್ರೀತಿಯಿಂದ, ‌

- ಗುಬ್ಬಚ್ಚಿ ಸತೀಶ್

***

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ದುಡ್ಡು ಬಿತ್ತಿ, ದುಡ್ಡು ಬೆಳೆಯಬಹುದೇ…!?

ಕನ್ನಡದಲ್ಲಿ ಪ್ರಕಟವಾಗಿ ಅತ್ಯಂತ ಹೆಚ್ಚು ಮಾರಾಟವಾದ “ಮನಿ ಸೀಕ್ರೆಟ್ಸ್‌ ಹಾಗೂ ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್”‌ (ಅಮೇಜಾನಿನಲ್ಲಿ ಕೊಳ್ಳಲು ಲಿಂಕ್:‌ https://amzn....