ಶುಕ್ರವಾರ, ಏಪ್ರಿಲ್ 26, 2024

ಇದು ಅಪ್ಪಟ ಕನ್ನಡದ "ಪಂಚತಂತ್ರ"



'ಪಂಚತಂತ್ರʼ ಅಂದರೆ ನಮ್ಮ ನೆನಪಿಗೆ ಬರುವುದು ಬಾಲ್ಯ ಕಾಲದಲ್ಲಿ ಓದಿದ್ದ ಅಥವಾ ಕೇಳಿದ್ದ ಯಾವುದೋ ಒಂದು ಅಥವಾ ಹಲವು ಕತೆಗಳು. ಎಷ್ಟೊಂದು ಖುಷಿ ಮತ್ತು ಜ್ಞಾನವನ್ನೂ ಈ ಕತೆಗಳು ನೀಡಿದ್ದವಲ್ಲ ಎಂಬ ಭಾವನೆಯೂ ಬಂದು ಹೋಗುತ್ತದೆ. ಈ ಕತೆಗಳನ್ನು ಬರೆದವರು ವಿಷ್ಣುಶರ್ಮ ಎಂಬ ಪಂಡಿತರು ಎಂಬುದು ಕೂಡ ನೆನಪಿಗೆ ಬರುತ್ತದೆ. ಇವು ಸಂಸ್ಕೃತದ ಕತೆಗಳು ಎಂಬುದು ಕೂಡ ಮನಸ್ಸಿನ ಮೂಲೆಯಲ್ಲಿ ಮೂಡಿ ಮರೆಯಾಗುತ್ತದೆ. ಆದರೆ, ಇವೆಲ್ಲಾ ಯಾರೋ ಓದಿ, ಕೇಳಿ ಸರಳೀಕರಿಸಿ ನಮಗೆ ನೀಡಿದ್ದ ಕತೆಗಳು ಎಂದು ಗೊತ್ತಿರಲಿಲ್ಲ. ಯಾಕೆಂದರೆ, ಪಂಡಿತ ವಿಷ್ಣುಶರ್ಮ ವಿರಚಿತ “ಪಂಚತಂತ್ರ” ಮೂಲ ಸಂಸ್ಕೃತದಿಂದ ಕನ್ನಡಕ್ಕೆ ಸಂಪೂರ್ಣವಾಗಿ ಅನುವಾದಗೊಂಡಿದೆಯೋ ಇಲ್ಲವೋ ಎಂಬ ವಿಷಯವನ್ನು ನಾವೇನು ತಿಳಿದುಕೊಳ್ಳಲು ಹೋಗಿರಲಿಲ್ಲ. ಕತೆ ಓದಿ ಅಥವಾ ಕೇಳಿ ಖುಷಿಪಟ್ಟು ಸುಮ್ಮನಾಗಿದ್ವಿ ಅಷ್ಟೆ.

ಆದರೆ, ಈಗ ಈ ಮೂಲ ಸಂಸ್ಕೃತದ ಪಂಡಿತ ವಿಷ್ಣುಶರ್ಮ ವಿರಚಿತ ಪಂಚತಂತ್ರದ ಕತೆಗಳನ್ನು ಸಂಪೂರ್ಣವಾಗಿ ಕನ್ನಡಕ್ಕೆ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್‌ ಭರತ ಬಿ ರಾವ್‌ ಅವರು ಅನುವಾದಿಸಿ ಕನ್ನಡಿಗರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಶ್ಲಾಘನೀಯ ಕೆಲಸವಾಗಿದೆ. ಇದಕ್ಕೆ ಮೊದಲು ನಾವೆಲ್ಲರೂ ಭರತ ಬಿ ರಾವ್‌ ಅವರನ್ನು ಅಭಿನಂದಿಸಿ ಧನ್ಯವಾದಗಳನ್ನು ತಿಳಿಸಬೇಕಿದೆ. 2018ರಲ್ಲಿ ಮೊದಲ ಮುದ್ರಣವನ್ನು ಕಂಡ ಈ ಪುಸ್ತಕವು ಇದೀಗ 3ನೇಯ ಆವೃತ್ತಿಯನ್ನು ಕಂಡಿದೆ.



ʼಪಂಚತಂತ್ರವು ಸಾವಿರಾರು ವರ್ಷಗಳ ಹಳೆಯ ರಚನೆಯಾದರೂ, ನಮ್ಮ ಈಗಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿ ನಿಲ್ಲಬಲ್ಲ ಕೃತಿ. ಸಮಾಜವು ಯಾವಾಗಲೂ ಧರ್ಮದ ಆದರ್ಶದಂತೆ ನಡೆಯುವುದಿಲ್ಲವೆಂಬ ವಾಸ್ತವಿಕತೆಯ ಅರಿವಿದ್ದಾಗ, ಧರ್ಮದ ದಾರಿಯಲ್ಲಿ ನಡೆಯಲು ಏನೇನು ತಂತ್ರವನ್ನು ಮಾಡಬೇಕೋ ಅವೆಲ್ಲವನ್ನೂ ಸಮಯ ಸಂದರ್ಭಕ್ಕನುಗುಣವಾಗಿ ಬಳಸಲು ಸಿದ್ಧವಿರಬೇಕೆಂಬದು ಪಂಚತಂತ್ರದಿಂದ ಕಲಿಯಬಹುದಾದ ಮುಖ್ಯವಾದ ಪಾಠ. ರಾಜಧರ್ಮ, ಮೈತ್ರಿಧರ್ಮ, ಶತ್ರುನಿಗ್ರಹ, ಸೇವಾವೃತ್ತಿ, ಬುದ್ಧಿಯ ಬಳಕೆ, ಮೂರ್ಖರೊಂದಿಗಿನ ವ್ಯವಹಾರ, ಸ್ವಾರ್ಥ ಸಾಧನೆ, ತಂತ್ರಗಳ ಬಳಕೆ ಮುಂತಾದ ಹಲವು ವಿಚಾರಗಳನ್ನು ಕುತೂಹಲಕಾರಿಯಾದ ಕಥೆಗಳ ಮೂಲಕ ವಿವರಿಸುವ ಪಂಚತಂತ್ರದ ನಿಜವಾದ ಪ್ರಯೋಜನವನ್ನು ಪಡೆಯಲು ಸರಳೀಕರಿಸಿದ ಮಕ್ಕಳ ಪುಸ್ತಕಗಳಿಗೆ ಮೊರೆಹೋಗದೆ, ಮೂಲವನ್ನು ಓದುವುದು ಅವಶ್ಯಕ. ಮೂಲ ಪಂಚತಂತ್ರವನ್ನು ಕನ್ನಡ ಓದುಗರಿಗೆ ಪರಿಚಯಿಸುವ ಪ್ರಯತ್ನವಿದುʼ ಎಂದು ಬೆನ್ನುಡಿಯಲ್ಲಿ ಈ ಪುಸ್ತಕದ ಬಗ್ಗೆ ಹೇಳಲಾಗಿದೆ.

ಅಮರಶಕ್ತಿಯೆಂಬ ರಾಜ ತನ್ನ ಮೂವರು ಮೂರ್ಖ ಮಕ್ಕಳನ್ನು ಹೇಗೆ ವಿದ್ಯಾವಂತರನ್ನಾಗಿ ಮಾಡುವುದೆಂದು ಮಂತ್ರಿಗಳೊಡನೆ ಸಮಾಲೋಚಿಸಿ ಹಲವು ಶಾಸ್ತ್ರಗಳನ್ನು ಸಾಂಪ್ರದಾಯಿಕವಾಗಿ ಕಲಿಯಲು ಹತ್ತಾರು ವರ್ಷಗಳೇ ಬೇಕಿರುವಾಗ, ಶೀಘ್ರವಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಕಲಶಾಸ್ತ್ರಕೋವಿದನಾದ 80 ವರ್ಷದ ವಿಷ್ಣುಶರ್ಮನೆಂಬ ಬ್ರಾಹ್ಮಣನಲ್ಲಿ ಬಿಡಬೇಕೆಂದು ನಿರ್ಧಾರವಾಗಿ, ವಿಷ್ಣುಶರ್ಮರು ಶಾಸ್ತ್ರಗಳಲ್ಲಿ ಸತ್ವವಿಲ್ಲದ್ದನ್ನು ಬಿಟ್ಟು ಸಾರವನ್ನು ಮಾತ್ರ ಪಂಚತಂತ್ರದ ಕತೆಗಳ ಮೂಲಕ ಭೋಧಿಸಿ ಯಶಸ್ವಿಯಾಗುತ್ತಾರೆ.

ʼಮಿತ್ರಭೇದ, ಮಿತ್ರಸಂಪ್ರಾಪ್ತಿ, ಕಾಕೋಲೂಕೀಯ, ಲಬ್ಧಪ್ರಣಾಶ ಮತ್ತು ಅಪರೀಕ್ಷಿತಕಾರಕ ಎಂಬ 5 ತಂತ್ರಗಳ 5 ಸೂತ್ರ ಕಥೆಗಳು ಹಾಗೂ ಅವುಗಳಲ್ಲಿ ಬರುವ 70 ಉಪಕಥೆಗಳನ್ನುʼ ಈ ಸಂಕಲನ ಒಳಗೊಂಡಿದ್ದು ಬಾಲಕರಿಗಾಗಿಯೇ ಈ ಕೃತಿ ರಚಿಸಲ್ಪಟ್ಟಿದ್ದರೂ ಸಂಪೂರ್ಣ ಅಧ್ಯಯನದಿಂದ ಹಲವಾರು ವಿಷಯಗಳನ್ನು ಗ್ರಹಿಸಿ ನಾವು ಕೂಡ ನಮ್ಮ ಬೌದ್ಧಿಕ ಮಟ್ಟವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಬಹುಮುಖ್ಯವಾಗಿ ಮಕ್ಕಳಿಗೆ ಪ್ರೀತಿಯಿಂದ ಉಡುಗೊರೆಯಾಗಿ ನೀಡಬಹುದಾಗಿದೆ.

ಭರತ ಬಿ ರಾವ್‌ ಅವರೇ ಈ ಪುಸ್ತಕವನ್ನು ಪ್ರಕಟಿಸಿದ್ದು ರೂ. 350/- ರ ಮೌಲ್ಯದ ಈ ಕೃತಿಯು ಆಸಕ್ತರಿಗೆ ಅಮೇಜಾನಿನಲ್ಲಿ ಲಭ್ಯವಿದೆ… https://amzn.to/3w6pOnl

 


ಭಾನುವಾರ, ಏಪ್ರಿಲ್ 14, 2024

ಇದು ಭಾರತದ “ಅಮೃತ ಕಾಲ”ವೇ!?

 ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ.

ʼಭಾರತ ಬದಲಾಗಿದೆ! ಯಾರದ್ದೋ ಇಶಾರೆಯ ಮೇಲೆ ಹೆಜ್ಜೆಯಿಡುವ ದೇಶವಾಗಿ ಉಳಿದಿಲ್ಲ. ಭಾರತ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಗಳೆರಡನ್ನೂ ಮಾಡಿಕೊಂಡು ವೈಶ್ಚಿಕ ಮಟ್ಟದಲ್ಲಿ ಪ್ರತಿ ಹಂತದಲ್ಲೂ ಛಾಪು ಮೂಡಿಸುತ್ತಿರುವ ಸುವರ್ಣಯುಗವಿದುʼ ಎನ್ನುವ ರಾಹುಲ್‌ ಅವರು ಭಾರತ ಪ್ರಗತಿಯೆಡೆಗೆ ಸಾಗುತ್ತಿರುವ ಚೈತ್ರಯಾತ್ರೆಯ ಅಕ್ಷರ ರೂಪವೇ ಈ “ಅಮೃತ ಕಾಲ” ಎಂದಿದ್ದಾರೆ.



ರಾಹುಲ್‌ ಅವರು ಈ ಪುಸ್ತಕವನ್ನು ಅಮೃತ ಗುಟುಕುಗಳು ಎಂಬ  ಪರಿವಿಡಿಯಲ್ಲಿ ʼವಿಕಾಸʼ, ʼವನವಾಸಿʼ, ʼವಿಶ್ವಗುರುʼ, ʼವಿಶ್ವಾಸʼ, ʼವಿರೋಧʼ ಮತ್ತು ʼವೈರಾಣುʼ ಎಂಬ ಆರು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಒಟ್ಟು 21 ಅಧ್ಯಾಯಗಳ ಈ ಪುಸ್ತಕದಲ್ಲಿ ರಾಹುಲ್‌ ಅವರ ಅಕ್ಷರಗಳು ಶ್ರೀ ನರೇಂದ್ರ ಮೋದಿಯವರು ಭಾರತದ ಪ್ರಧಾನ ಮಂತ್ರಿಗಳಾದ ನಂತರ ಆದ ಹತ್ತು ವರುಷಗಳ ಬೆಳವಣಿಗೆಗಳನ್ನು ದಾಖಲಿಸಿವೆ.

ಉದಾಹರಣೆಗೆ ʼನೂರ ಏಳರ ತಾಕತ್ತು ಈ ಮೊದಲೂ ಇತ್ತು; ಆದರೆ…ʼ ಎಂಬ ಅಧ್ಯಾಯದಲ್ಲಿ ಅಂಕಿಅಂಶಗಳ ಸಮೇತ ರಾಹುಲ್‌ ಅವರು ನಮ್ಮ ದೇಶದಲ್ಲಾದ ಕ್ರೀಡಾ ಜಗತ್ತಿನ ಬೆಳವಣಿಗೆಗಳನ್ನು ದಾಖಲಿಸಿರುವುದು ಇವರ ಶ್ರಮಕ್ಕೆ ಕನ್ನಡಿಯಂತಿದೆ. ಪ್ರತಿಯೊಂದು ಅಧ್ಯಾಯವೂ ಹೀಗೆ ವಸ್ತುನಿಷ್ಠವಾಗಿದೆ. ಪೂರಕ ಅಂಕಿ-ಅಂಶಗಳ ಜೊತೆಗೆ ಅಲ್ಲಲ್ಲಿ ಪೂರಕ ಚಿತ್ರಗಳನ್ನೂ ನೀಡಲಾಗಿದೆ. ಈ ಎಲ್ಲಾ ಅಂಶಗಳನ್ನು ದಾಖಲಿಸುವಲ್ಲಿ ರಾಹುಲ್‌ ಅವರಿಗಿರುವ ಶ್ರದ್ಧೆ ಪ್ರಶಂಸಾರ್ಹ. ಪುಸ್ತಕದ ಅಂತ್ಯದಲ್ಲಿ ಗ್ರಂಥಋಣವೂ ಇದೆ.



ಪ್ರವಾಸೋದ್ಯಮ, ಕಾಶ್ಮೀರ, ಭದ್ರತೆ, ವೈರಾಣು ಹೀಗೆ 21 ಪ್ರಮುಖ ಬೆಳವಣಿಗೆಗಳ ಮೇಲೆ ಈ ಪುಸ್ತಕ ರಾಹುಲ್‌ ಅವರ ಶೈಲಿಯಲ್ಲಿ ನಿರೂಪಿತವಾಗಿದೆ. ನೀವು ಓದುವಲ್ಲದೆ, ನಿಮ್ಮ ಮಕ್ಕಳಿಗೂ ಈ ಪುಸ್ತಕ ಓದಿಸಿ ಎನ್ನುತ್ತಾರೆ ರಾಹುಲ್.‌ ಪುಸ್ತಕವನ್ನು ಓದುತ್ತಾ ಮೋದಿ ಅವರ ಅಭಿಮಾನಿಗಳು ಅಹುದುಅಹುದು ಎಂದರೆ ವಿರೋಧಿಗಳು ಹೀಗೂ ಉಂಟೆ ಎನ್ನಬಹುದು.

ಚಕ್ರವರ್ತಿ ಸೂಲಿಬೆಲೆಯವರಿಗೆ ರಾಹುಲ್‌ ಅವರು ಈ ಪುಸ್ತಕವನ್ನು ಅರ್ಪಿಸಿದ್ದು, ತಮ್ಮ ಜಯಲಕ್ಷ್ಮೀ ಪ್ರಕಾಶನದ ಮೂಲಕ ಪ್ರಕಟಿಸಿದಾರೆ. ಈ ಪುಸ್ತಕದ ಮೌಲ್ಯ ರೂ. 180/- ಆಗಿದ್ದು ಪ್ರತಿಗಳಿಗೆ ರಾಹುಲ್‌ ಅವರ ವಾಟ್ಸಪ್‌ 9108594204 ಅಥವಾ ಗುಬ್ಬಚ್ಚಿ ಪುಸ್ತಕದ ವಾಟ್ಸಪ್‌ 9986692342 ಸಂಪರ್ಕಿಸಬಹುದು.

 




ಶುಕ್ರವಾರ, ಮಾರ್ಚ್ 29, 2024

ಹೇಗಿದೆ “ಯುವ?” ಸಖತ್‌ “ಪವರ್‌”ಪುಲ್‌ ಶಿವ!


ಪ್ರಿಯ ಸ್ನೇಹಿತರೇ,

ಬೆಳಿಗ್ಗೆ ಐದಕ್ಕೇ ಅಲಾರಂ ಇಟ್ಟುಕೊಂಡು, ನೆನ್ನೆಯೇ ಇಂದಿನ ಬೆಳಗಿನ 9.30ರ ಶೋಗೆ ಬುಕ್‌ ಮಾಡಿದ್ದ “ಯುವ” ಸಿನಿಮಾಗೆ ಹೋಗಿ ಬಂದೆ. ತುಮಕೂರಿನ ಐನೋಕ್ಸ್‌ನಲ್ಲಿಸಿನಿಮಾ ನೋಡುವುದೇ ಒಂದು ಹಬ್ಬ!

ಯುವ ರಾಜ್‌ಕುಮಾರ್‌ ಅವರ ಮೊದಲ ಚಿತ್ರ “ಯುವ” ಇಂದು ಬಿಡುಗಡೆಯಾಗಿದ್ದು, ಯಾರಾದರೂ ನನ್ನನ್ನು ಹೇಗಿದೆ “ಯುವ?” ಎಂದು ಕೇಳಿದರೆ, ನಾನು ಒಂದೇ ಸಾಲಿನಲ್ಲಿ ಸಖತ್‌ “ಪವರ್”‌ವುಲ್‌ ಶಿವ! ಎಂದು ಹೇಳಲು ಇಚ್ಛಿಸುತ್ತೇನೆ.

ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ “ಯುವ” ಚಿತ್ರದ ಮೊದಲಾರ್ಧದಲ್ಲಿ ಯುವ ರಾಜ್‌ಕುಮಾರ್‌ ಅವರನ್ನು ಕಾಲೇಜಿನ ಆಂಗ್ರಿ ಯಂಗ್‌ ಮ್ಯಾನ್‌ ಆಗಿ ಪರಿಚಯಿಸಿ ಕನ್ನಡ ಚಲನಚಿತ್ರರಂಗಕ್ಕೆ ಮತ್ತೊಬ್ಬ ಸ್ಟಾರ್‌ ನಟನನ್ನು ನೀಡಿದ್ದಾರೆ. ಚಿತ್ರದ ವಿರಾಮದ ನಂತರ ಬರುವ ಕುಟುಂಬದ ಜವಾಬ್ದಾರಿಯ “ಯುವ”ನ ಮೂಲಕ ನಮ್ಮ ಚಲನಚಿತ್ರರಂಗಕ್ಕೆ ಮತ್ತೊಬ್ಬ ಸೂಪರ್‌ ಸ್ಟಾರ್‌ ನಟ ಸಿಕ್ಕಂತಾಗಿದೆ. ತಮ್ಮ ಎಂದಿನ ಶೈಲಿಯಲ್ಲಿಯೇ ನಿರ್ದೇಶಕರು ʼಯುವʼ ಸಿನಿಮಾ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್‌ನ ಅದ್ಧೂರಿ ನಿರ್ಮಾಣವಿದೆ.



ನಟನೆ, ಡ್ಯಾನ್ಸ್‌ ಮತ್ತು ಆಕ್ಷನ್‌ಗಳಲ್ಲಿ ಮಿಂಚುವ ಯುವ ರಾಜ್‌ಕುಮಾರ್‌ ನೋಡುಗನ ಮನಗೆಲ್ಲುತ್ತಾರೆ. ದೊಡ್ಡಪ್ಪ ಮತ್ತು ಚಿಕ್ಕಪ್ಪನಷ್ಟು ಡ್ಯಾನ್ಸ್‌ ಇನ್ನೂ ಮಾಡಿಲ್ಲವಾದರೂ, ಇರುವ ಒಂದೇ ಡ್ಯಾನ್ಸ್‌ನಲ್ಲಿ ಭರವಸೆ ಮೂಡಿಸುತ್ತಾರೆ. ಆಕ್ಷನ್‌ ದೃಶ್ಯಗಳಲ್ಲಿ ಚಿಕ್ಕಪ್ಪನ ʼಪವರ್‌ʼ, ದೊಡ್ಡಪ್ಪನ ʼಖದರ್‌ʼ ಇದೆ. ನಟನೆಯಲ್ಲೂ ಕೂಡ ಗಮನ ಸೆಳೆಯುವ ಯುವ ರಾಜ್‌ಕುಮಾರ್‌ ಈಗಾಗಲೇ ತಮಗೆ ನೀಡಲಾಗಿರುವ ಜೂನಿಯರ್‌ ʼಪವರ್‌ ಸ್ಟಾರ್‌ʼ ಬಿರುದನ್ನು ಉಳಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ನಾಯಕಿಯಾಗಿ ಸಪ್ತಮಿ ಗೌಡ, ತಂದೆಯಾಗಿ ಅಚ್ಯುತ ಕುಮಾರ್‌, ತಾಯಿಯಾಗಿ ಸುಧಾರಾಣಿ, ಟ್ರೈನರ್‌ ಆಗಿ ಕಿಶೋರ್‌, ಪ್ರಿನ್ಸಿಪಾಲ್‌ ಆಗಿ ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇನ್ನು ಮುಂತಾದ ಪಾತ್ರಗಳ ಅತ್ಯುತ್ತಮ ಕಲಾವಿದರ ತಂಡವೇ ಇಲ್ಲಿರುವುದು ಚಿತ್ರದ ಪ್ಲಸ್‌ ಪಾಯಿಂಟ್.‌ ಪ್ರಿನ್ಸಿಪಾಲ್‌ ಪಾತ್ರವಂತೂ ಕಣ್ಣಿಗೆ ಹಬ್ಬ!

ಕಾಲೇಜಿನ ಜೀವನದ ಜೊತೆಯೇ, ಕಾಲೇಜಿನ ನಂತರದ ಜೀವನದ ಕತೆಯನ್ನು ನಿರ್ದೇಶಕರು ಚಿತ್ರದಲ್ಲಿ ಹೇಳಿದ್ದು ಪುಡ್‌ ಡೆಲಿವರಿ ಹುಡುಗ-ಹುಡುಗಿಯರ ಬದುಕಿನ ಚಿತ್ರಣವನ್ನು ಕೂಡ ನೀಡಿದ್ದಾರೆ. ಬಸವಣ್ಣನವರ ʼಕಳಬೇಡ ಕೊಲಬೇಡʼ ವಚನ ಚಿತ್ರದಲ್ಲಿ ಇದ್ದು ಈ ಚಿತ್ರದ ಆಶಯವನ್ನೇ ಬಿಂಬಿಸಿದಂತಿದೆ. ಸೋತವನು ಸಾಯಬಾರದು, ಗೆಲುವಿನ ದಿನಕ್ಕೆ ಹಂಬಲಿಸಬೇಕು ಎನ್ನುವ ಒಂದು ಮೆಸೇಜನ್ನು ಕೂಡ ನಿರ್ದೇಶಕರು ನೀಡಿದ್ದಾರೆ.

ಅಜನೀಶ್‌ ಲೋಕನಾಥ್‌ ಅವರ ಸಂಗೀತದ ಜೊತೆಗೆ ಇತರ ತಂತ್ರಜ್ಞರ ಕೆಲಸಗಳು ಅಚ್ಚುಕಟ್ಟಾಗಿವೆ. ಇಡೀ ಚಿತ್ರವನ್ನು ಡಾ. ರಾಜ್‌ ಮತ್ತು ಅಪ್ಪು ಅವರ ತಂದೆ ಮಗನ ಸಂಬಂಧಕ್ಕೆ ಅರ್ಪಿಸಲಾಗಿದೆ.



ಮುಂದಿನ ದಿನಗಳಲ್ಲಿ ʼಯುವ ರಾಜ್‌ಕುಮಾರ್‌ʼ ಅವರ ನಟನೆಯಲ್ಲಿ ಮತ್ತಷ್ಟು ಪವರ್‌ಪುಲ್‌ ಸಿನಿಮಾಗಳು ಬರಲಿ ಮತ್ತು ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ತಮಗೆ ತಾವೇ ಹಾಕಿಕೊಂಡಿರುವ ಇತಿ-ಮಿತಿಗಳ ಹೊರಗೆ ಬಂದು ಮತ್ತಷ್ಟು ಸಿನಿಮಾಗಳನ್ನು ನೀಡಲಿ ಎಂದು ಆಶಿಸುತ್ತೇನೆ.

ಪ್ರೀತಿಯಿಂದ,

-        ಗುಬ್ಬಚ್ಚಿ ಸತೀಶ್.

ಇದು ಅಪ್ಪಟ ಕನ್ನಡದ "ಪಂಚತಂತ್ರ"

'ಪಂಚತಂತ್ರʼ ಅಂದರೆ ನಮ್ಮ ನೆನಪಿಗೆ ಬರುವುದು ಬಾಲ್ಯ ಕಾಲದಲ್ಲಿ ಓದಿದ್ದ ಅಥವಾ ಕೇಳಿದ್ದ ಯಾವುದೋ ಒಂದು ಅಥವಾ ಹಲವು ಕತೆಗಳು. ಎಷ್ಟೊಂದು ಖುಷಿ ಮತ್ತು ಜ್ಞಾನವನ್ನೂ ಈ ...