ಶನಿವಾರ, ಆಗಸ್ಟ್ 26, 2023

ಕೆದಂಬಾಡಿ ಜತ್ತಪ್ಪರೈ ಅವರ “ಬೇಟೆಗಾರನ ಹುಲಿಹೆಜ್ಜೆ” ಬಂದಿದೆ…


ಬೇಟೆಯನ್ನೇ ಮುಖ್ಯ ವಸ್ತುವನ್ನಾಗಿಸಿಕೊಂಡು ಕನ್ನಡದಲ್ಲಿ ಬರೆದವರಲ್ಲಿ ಕೆದಂಬಾಡಿ ಜತ್ತಪ್ಪರೈ ಪ್ರಮುಖರು. ಇಂಗ್ಲೀಷಿನಲ್ಲಿ ಬರೆದ ಕೆನೆತ್‌ ಆಂಡಸರ್ನ್‌ ಬ್ರಿಟೀಷ್‌ ಅಧಿಕಾರಿ. ಕುವೆಂಪು, ತೇಜಸ್ವಿಯವರೂ ಬರೆದಿದ್ದಾರೆ. ತಮ್ಮ ಕೃತಿಗಳಲ್ಲಿ ಕುವೆಂಪು ಕಾಡನ್ನು ಸೊಗಸಾಗಿ ತಂದಿದ್ದಾರೆ. ಇಂತಹ ಮೇರುಸಾಹಿತಿಯಿಂದಲೇ ಮೆಚ್ಚುಗೆಗೆ ಪಾತ್ರವಾದವರು ʼಕೆದಂಬಾಡಿ ಜತ್ತಪ್ಪ ರೈ!”

ಬೇಟೆಯನ್ನೇ ಪ್ರಧಾನ ವಸ್ತುವನ್ನಾಗಿಸಿಕೊಂಡು ಅನುಭವವೇ ನಿರೂಪಣೆಯಾಗಿ ಕೆದಂಬಾಡಿಯವರ “ಬೇಟೆಯ ನೆನಪುಗಳು” 1978ರಲ್ಲಿ ಪ್ರಕಟವಾಯಿತು. ಕಾಲದ ದೃಷ್ಟಿಯಿಂದ ಬಹಳ ಅಪರೂಪವಾದ ಈ ಕಥಾನಕ ಓದುಗರ ಮೆಚ್ಚುಗೆಗೆ ಪಾತ್ರವಾಯಿತು. ಓದುಗರ ಈ ಮೆಚ್ಚುಗೆಗೆ ಬಹುಮಾನವಾಗಿ ಕೆದಂಬಾಡಿಯವರು “ಈಡೊಂದು ಹುಲಿಯೆರಡು”, “ಬೇಟೆಯ ಉರುಳು”, “ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ” ಎಂಬ ಕೃತಿಗಳನ್ನು ನೀಡಿದರು.

ಹುಲಿ ಮತ್ತು ಬೇಟೆಗಾರನ ಮುಖಾಮುಖಿಯ ಮಹಾಮೌನವನ್ನು, ಕಾಡಿನ ನಿಗೂಢತೆಯನ್ನು ಅಕ್ಷರಗಳಲ್ಲಿ ಸೆರೆಹಿಡಿದ ಬೇಟೆಗಾರ ಜತ್ತಪ್ಪ ರೈ ಅವರು ತಮ್ಮ ಮೃಗಯಾನುಭವವನ್ನು ಕಟ್ಟಿಕೊಟ್ಟದ್ದು ಮುಂದೆ ಗುಂಡಿಕ್ಕಲಾರೆ ಎಂದು ಪ್ರಮಾಣ ಮಾಡಿದ ಮೇಲೆ. ಆಗ ಅವರಿಗೆ ಅರವತ್ತು ವಯಸ್ಸು ದಾಟಿತ್ತು. ಮೃಗಯಾ ಸಾಹಿತ್ಯವನ್ನು ಬರೆಯಲು ರೈ ಅವರಿಗೆ ಮೊದಲು ಪ್ರೇರೆಪಿಸಿದವರು ಜಾನಪದ ವಿದ್ಯಾಂಸರಾದ ಪ್ರೊ. ಅಮೃತ ಸೋಮೇಶ್ವರರು. ಈ ಮೂಲಕ “ಬೇಟೆಯ ನೆನಪುಗಳು” ಮೊದಲು ಪ್ರಕಟಗೊಂಡು, ತದನಂತರ ಉಳಿದ ಕೃತಿಗಳು ಪ್ರಕಟವಾದವು. 11/02/1916ರಲ್ಲಿ ಪುತ್ತೂರಿನ ಕೆದಂಬಾಡಿಯಲ್ಲಿ ಜನಿಸಿದ್ದ ಜತ್ತಪ್ಪ ರೈ ಅವರು 20/06/2003ರಲ್ಲಿ ತೀರಿಕೊಂಡರು. ರೈ ಅವರು ಇನ್ನಿಲ್ಲವಾದ ದಶಕ ಕಳೆದ ಮೇಲೆ ಅವರ ಮಗ ಡಾ. ಕೆದಂಬಾಡಿ ತಿಮ್ಮಪ್ಪ ರೈ ಅವರ ಮೂಲಕ ಸಾಹಿತಿ-ಪತ್ರಕರ್ತ-ಉಪನ್ಯಾಸಕರೂ ಆದ ನರೇಂರ್ದ ರೈ ದೇರ್ಲ ಅವರು, ಜತ್ತಪ್ಪ ರೈ ಅವರ ಕೆಲವು ಬಿಡಿಬಿಡಿ ಲೇಖನಗಳನ್ನು ಸಂಗ್ರಹಿಸಿ ಓದಿಕೊಂಡು ಹಲವಾರು ಕಾರಣಗಳಿಗೆ ಮೆಚ್ಚಿಕೊಂಡು “ಬೇಟೆಗಾರನ ಹುಲಿಹೆಜ್ಜೆ” ಎಂದು ಸಂಕಲಿಸಿ ಪ್ರಕಟಿಸಿದರು. ಈ ಮೂಲಕ ಈ ಸಂಕಲನದ ಸಂಪಾದಕರೇ ಆದ ನರೇಂದ್ರ ರೈ ದೇರ್ಲ ಅವರೇ ಹೇಳುವಂತೆ ʼಮನುಷ್ಯ ಜೀವನದಲ್ಲಿ ದಾರುಣವೂ ಅಸಹನೀಯವೂ ಆದ ಸನ್ನಿವೇಶಗಳು ಉದ್ಭವಿಸಿದಾಗ, ಅವುಗಳಿಗೆ ಸ್ವಲ್ಪವೂ ಲಕ್ಷ್ಯಕೊಡದೆ ಪ್ರಕೃತಿ ತನ್ನ ಪಾಡಿಗೆ ತಾನು ಸಹಜ ಕರ್ತವ್ಯದಲ್ಲಿ ತೊಡಗಿಸುತ್ತದೆ ಎಂಬುದಕ್ಕೆ ಇಲ್ಲಿಯ ಬರಹಗಳೇ ಸಾಕ್ಷಿʼ ಎಂಬ ಮಾತುಗಳು ಈ ಸಂಕಲನದ ಪ್ರಬಂಧಗಳಿಗೆ ಸೂಕ್ತವಾಗಿವೆ. 2014ರಲ್ಲಿ ಮೊದಲ ಮುದ್ರಣ ಕಂಡ ಈ ಸಂಕಲನ ಇದೀಗ ಅಂದರೆ 2023ರಲ್ಲಿ ಮರುಮುದ್ರಣ ಕಂಡಿದೆ.

ಈ ಸಂಕಲನದಲ್ಲಿ ಶ್ರೀ ಅಮೃತ ಸೋಮೇಶ್ವರ ಅವರ ʼಕೆದಂಬಾಡಿ ಜತ್ತಪ್ಪ ರೈ ನೆನಪುಗಳುʼ ಲೇಖನ ಕೆದಂಬಾಡಿಯವರ ಅನನ್ಯ ವ್ಯಕ್ತಿತ್ವವನ್ನು, ಅವರ ಕನ್ನಡ ಮತ್ತು ತುಳು ಸಾಹಿತ್ಯದ ಸಾಧನೆಯನ್ನು ಆಪ್ತವಾಗಿ ಓದುಗರಿಗೆ ಕಟ್ಟಿಕೊಟ್ಟಿದೆ.

ಈ ಸಂಕಲನದಲ್ಲಿ ʼಬೈಪಡಿತ್ತಾಯರ ಪ್ರಾಣಿದಯೆʼ, ʼದೃಷ್ಟಿಯ ಹೊಡೆತ ನಾಲಿಗೆಯ ಕಡಿತʼ, ʼಅಜಿಲ ಬಂಟನೊಂದಿಗೆ ಚಿಪ್ಪು ಹಂದಿ ಮತ್ತು ಪುನುಗು ಬೆಕ್ಕು ಶಿಕಾರಿʼ, ʼಅಜ್ಜಯ್ಯನ ರೈಲು ಪ್ರಯಾಣʼ, ʼಗಡಾಯಿಕಲ್ಲು-ಜಮಲಾಬಾದು ಆವ್ಸೇ-ಜಾವ್ಸೇʼ, ʼಯಕ್ಷಗಾನ ದಿಗ್ಗಜ ಕವಿಭೂಷಣ ಕೆ.ಪಿ. ವೆಂಕಪ್ಪ ಶೆಟ್ಟಿʼ, ʼಕಡವೆಯ ರೂಪದಲ್ಲಿ ಕಾಡಿತ್ತು ಮೃತ್ಯುʼ, ʼಸತ್ತವನು ಎದ್ದು ಬಂದಾಗʼ, ʼದ್ರೌಪದಿಯ ಮಾನಭಂಗ: ಆಚಾರ್ಯರು ತೆಪ್ಪಗಿದ್ದುದೇಕೆ?ʼ, ʼಕಂಬಳಿಯ ಗಂಟೆಂದು ಬಗೆದದು ಕರಡಿಯಪ್ಪುಗೆʼ, ʼತುಂಬಿ ಮನೆಯ ಗೌಡರು ಮತ್ತು ನನ್ನಮ್ಮʼ, ʼಅಪ್ಪನ ಪಟ್ಟೆಶಾಲು ಮತ್ತು ಮಗನ ಹೊಸ ಮೆಟ್ಟುʼ, ʼಮನಸೂರೆಗೊಂಡ ʼಸೂರೆʼʼ ಎಂಬ ಹದಿಮೂರು ಪ್ರಬಂಧಗಳಿದ್ದು ಓದುಗರನ್ನು ಮೂಕವಿಸ್ಮಿತರನ್ನಾಗಿಸುವ ಗುಣಗಳು ಇಲ್ಲಿವೆ. ʼಅಜ್ಜಯ್ಯನ ರೈಲು ಪ್ರಯಾಣʼ ಪ್ರಬಂಧವನ್ನು ಓದಿದವರು ಕುವೆಂಪುರವರ ಅಜ್ಜಯ್ಯನ ಅಭ್ಯಂಜನʼವನ್ನು ಖಂಡಿತ ನೆನಯುತ್ತಾರೆ. ಹೊಸ ಲೋಕವೊಂದನ್ನು ಕಾಣಿಸಿದ ಜತ್ತಪ್ಪ ರೈ ಅವರಿಗೆ ಓದುಗ ಶರಣು ಶರಣು ಎನ್ನದಿರಲಾರ.

ಬೆನ್ನುಡಿಯಲ್ಲಿ ಸಾಹಿತಿ-ಪತ್ರಕರ್ತ ಜೋಗಿಯವರು “ಬೇಟೆ ಸಾಹಿತ್ಯ ಎಂದಾಕ್ಷಣ ನೆನಪಾಗುವುದು ಕೆದಂಬಾಡಿ ಜತ್ತಪ್ಪ ರೈ. … ಇವತ್ತಿಗೂ ಅವರ ʼಬೇಟೆಯ ನೆನಪುಗಳುʼ ಪುಸ್ತಕವನ್ನು ಕೈಲಿ ಹಿಡಿದುಕೊಂಡು ಕುಳಿತರೆ ಮನಸ್ಸು ಕಾಡಿಗೆ ನೆಗೆಯುತ್ತದೆ… ಅಲ್ಲೊಂದು ಹುಲಿ ಎದುರಾಗುತ್ತದೆ. ಅದನ್ನು ತನ್ಮಯರಾಗಿ ನೋಡುತ್ತಾ ಕುಳಿತು ಬೇಟೆಯಾಡುವುದನ್ನು ನಾವು ಮರೆಯುತ್ತೇವೆ. ಆದರೆ ಕೆದಂಬಾಡಿ ಮರೆಯುವುದಿಲ್ಲ. ಈ ʼಹುಲಿ ಹೆಜ್ಜೆʼಯಲ್ಲಿ ಹುಲಿಯಿಲ್ಲ. ಆದರೆ ಅದೇ ಬೇಟೆಗಾರ ಇದ್ದಾನೆ” ಎಂದಿದ್ದಾರೆ.

ಕಲಾವಿದ ಮೋನಪ್ಪ ಅವರ ಆಕರ್ಷಕ ಮುಖಪುಟ ಮತ್ತು ರೇಖಾಚಿತ್ರಗಳೊಡನೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ಇದರ ಮೌಲ್ಯ ರೂ. 220/- ಆಗಿರುತ್ತದೆ.

“ಬೇಟೆಗಾರನ ಹುಲಿಹೆಜ್ಜೆ” ಪುಸ್ತಕ ಕೊಳ್ಳಲು ಈ ಲಿಂಕ್ ಕ್ಲಿಕ್‌ ಮಾಡಿ. ‌

ಕೆದಂಬಾಡಿ ಜತ್ತಪ್ಪ ರೈ ಅವರ ಪುಸ್ತಕಗಳನ್ನು ಕೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ

                                            -        ಧನ್ಯವಾದಗಳು, ಪ್ರೀತಿಯಿಂದ – ಗುಬ್ಬಚ್ಚಿ ಸತೀಶ್.‌

(ವಿಶೇಷ ಸೂಚನೆ: ಈ ಲೇಖನವನ್ನು ನನ್ನ ಲಿಖಿತ ಅನುಮತಿಯಿಲ್ಲದೆ ಯಾವುದೇ ರೀತಿಯ ಮುದ್ರಣ-ಡಿಜಿಟಲ್‌-ದೃಶ್ಯ ಮಾಧ್ಯಮಗಳು ಬಳಸುವಂತಿಲ್ಲ)

ಶುಕ್ರವಾರ, ಆಗಸ್ಟ್ 25, 2023

ʼಟೋಬಿʼ ನೋಡುದ್ರ?

ಸ್ನೇಹಿತರೇ,

ನಮಸ್ಕಾರ. ಇವತ್ತು ವರಮಹಾಲಕ್ಷ್ಮೀ ಹಬ್ಬ. ಕೆಲವರು ಇನ್ನೂ ಇದು ಮುಂಚೆ ವರಮಹಾಲಕ್ಷ್ಮೀ ವ್ರತ ಅಂತ ಇತ್ತು, ಅದ್ಯಾವಾಗ ಹಬ್ಬ ಆಯ್ತು ಅಂತ ಯೋಚಿಸುತ್ತಿರುವಾಗಲೇ ಬಹುತೇಕರು ಸಂಭ್ರಮದಿಂದ ಹಬ್ಬ ಮಾಡಿ, ಊಟ ಮಾಡಿದರು. ಸಂತೋಷ. ಎಲ್ಲರಿಗೂ ಹಬ್ಬದ ಶುಭಾಶಯಗಳು. ಇದು ಶ್ರಾವಣದ ಮೊದಲ ಹಬ್ಬ.

ಇವತ್ತು ನನ್ನ ಪ್ಲಾನ್‌ ಆದಷ್ಟು ಬೇಗ ಹಬ್ಬ ಮುಗಿಸಿ ʼಟೋಬಿʼ ಸಿನಿಮಾಗೆ ಹೋಗಬೇಕು ಅಂತ ಅಂದುಕೊಂಡಿದ್ದೆ. ಆದರೆ, ಆಗಲಿಲ್ಲ. ಮಧ್ಯಾಹ್ನ ಸ್ನೇಹಿತರ ಮನೆಗೆ ಊಟಕ್ಕೆ ಆತ್ಮೀಯ ಆಹ್ವಾನವಿತ್ತು. ಆದಕಾರಣದಿಂದ ಅವರ ಮನೆಗೆ ಹೋದೆವು. ಹೋಗ್ತಾ ದಾರಿಯಲ್ಲಿ India Sweet Houseಗೆ ಹೋಗಿ, (ಹೌದು, ತುಮಕೂರಿನಲ್ಲಿ ಈಗ ಇವರ ಬ್ರಾಂಚಿದೆ. ಎಸ್‌ಐಟಿ ಹತ್ತಿರ) ನಮ್ಮಿಷ್ಟದ ಸಿಹಿತಿಂಡಿಯನ್ನು ತಿಂದು ಆತ್ಮೀಯರ ಮನೆಗೂ ಒಂದು ಕಾಲು ಕೆಜಿ (ಅಲ್ಲಿ ಕಾಲು ಕೆಜಿಗೆ ಬೇರೆಕಡೆ ಕೆಜಿ ಸಿಗುವಷ್ಟು ದುಡ್ಡು ಹಾಕಿರ್ತಾರೆ. ಬಟ್‌ ಕ್ವಾಲಿಟಿ ಸಖತ್‌ ಇರುತ್ತೆ) ಕೊಂಡೋಯ್ದೆವು. ಅವರ ಮನೆಯಲ್ಲಿ ಕಷ್ಟ-ಸುಖ ಮಾತಾಡಿ ಸಂಜೆ ಮನೆ ಕಡೆ ಹೊರಟೆವು. ಅಷ್ಟರಲ್ಲಾಗಲೇ ನಮ್ಮ ಸ್ನೇಹಿತರು (ಇವರನ್ನು ನಾನು ಜಂಗಮ ಅಂತ ಹೃದಯದಿಂದ ಕರೆಯುತ್ತೇನೆ. ಇವರಿಗೆ ಈ ವಿಷಯ ಗೊತ್ತಿಲ್ಲ. ಮುಂದೊಂದು ದಿನ ʼಕಾಫಿ ವಿಥ್‌ ಜಂಗಮʼ ಅಂತ ಪುಸ್ತಕ ಬರೆಯುವವನಿದ್ದೇನೆ) ಕರೆಮಾಡಿದ್ರು. ಅವರಿಗೆ ಸಾಧ್ಯವಾದರೆ ಸಂಜೆ ಕಾಫಿಗೆ ಸಿಗುವೆ ಅಂತ ಹೇಳಿದ್ದೆ. ಮತ್ತೊಂದು ಆತ್ಮೀಯರ ಕರೆಗೂ ಓಗೊಟ್ಟು ಅಲ್ಲಿಗೂ ಹೋಗುವ ಪ್ಲಾನ್‌ ಇದ್ದರೂ ಕಡೆ ಗಳಿಗೆಯಲ್ಲಿ ನನ್ನ ಶ್ರೀಮತಿ ಮತ್ತು ಮಗಳು ಮನೆಗೆ ಹೋಗುತ್ತೇವೆಂದರು.

ಸೋ, ನಾನು ಅವರನ್ನು ಮನೆಗೆ ಕಳುಹಿಸಿ ʼಜಂಗಮʼರನ್ನು ಮೀಟ್‌ ಮಾಡಲು ಹೋದೆ. ಅವರು ಬರುವ ಸಮಯಕ್ಕೆ ಮತ್ತೊಬ್ಬ ಪರಿಚಿತರು ನಮ್ಮ ರೆಗ್ಯುಲರ್‌ ಕಾಫಿ ಶಾಪ್‌ ಬಳಿ ಸಿಕ್ಕರು. ಉಭಯಕುಶಲೋಪರಿ ಮಾತನಾಡುತ್ತ ಅವರು ತಿಂಗಳಿಗೆ ಒಂದೂವರೆ ಲಕ್ಷ ಬಾಡಿಗೆ ಬರುವ ಪ್ಲಾನೋಂದನ್ನು ಹೇಳಿಕೊಂಡದ್ದು ಕೇಳಿ ನನಗೆ ಶಾಕ್‌ ಆಯಿತು. ಅದಿರಲಿ ಅವರು ಶ್ರೀಮಂತರು. ಅವರ ಯೋಜನೆಗಳು ಕೂಡ ಶ್ರೀಮಂತವಾಗಿರುತ್ತವೆ! ಸ್ವಲ್ಪ ಹೊತ್ತಿನ ನಂತರ ʼಜಂಗಮʼರು ಬಂದರು. ಆ ಸಂದರ್ಭದಲ್ಲಿ ಅಲ್ಲಿನ ರಸ್ತೆಯ ಬದಿಯೊಂದರಲ್ಲಿ ಪಂಚೆ ಮತ್ತು ಟವೆಲ್‌ಗಳನ್ನು ಹಾಕಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಕ್ಷಣಾರ್ಧದಲ್ಲಿ ಭರ್ಜರಿ ವ್ಯಾಪಾರವಾಯ್ತು. ಕಾರಣ, ಕಡಿಮೆ ಬೆಲೆ! ತದನಂತರ ಕಾಫಿ ಕುಡಿದು ಸ್ವಲ್ಪ ಹೊತ್ತು ಮಾತನಾಡಲು ʼಜಂಗಮʼರ ಆಫೀಸಿಗೆ ಹೋದೆವು. ಕಾಫಿ ಬೇಡ ಅಂದಿದ್ದ ಶ್ರೀಮಂತ ಗೆಳೆಯರು ಅವರ ದಾರಿ ಅದಾಗಲೇ ಹಿಡಿದಾಗಿತ್ತು.

ʼಜಂಗಮʼರ ಆಫೀಸಿನಲ್ಲಿ ಕುಳಿತು ನಮ್ಮ ಪ್ರಚಲಿತ ವಿದ್ಯಮಾನಗಳ ಚರ್ಚೆ ಶುರುವಾಯ್ತು. ʼಟೋಬಿʼ ಸಿನಿಮಾ ವಿಷಯವೂ ಬಂತು. ಇತ್ತೀಚಿಗೆ ಮೊದಲನೇ ದಿನವೇ ಸಿನಿಮಾ ನೋಡಿ ನನ್ನ ಯೂಟ್ಯೂಬ್‌ ಚಾನೆಲ್‌ Movie Matters Kannadaದಲ್ಲಿ ವಿಮರ್ಶೆ ಬರೆಯುವುದನ್ನು ಕಡಿಮೆ ಮಾಡಿಕೊಂಡಿದ್ದೇನೆ. ಇದೇ ಕಾರಣದಿಂದ ಸಿನಿಮಾಗೇ ಹೋಗಲೇಬೇಕೆಂಬ ತುಡಿತ ಈಗ ಮೊದಲಿನಷ್ಟಿಲ್ಲ. ಜೊತೆಗೆ ಇಲ್ಲಿ Inoxನಲ್ಲಿ ಸಿನಿಮಾ ನೋಡಿದ್ರೆ ಈಗ ಮಜಾ. ಬೇರೆ ಏಕಪರದೆಯ ಚಿತ್ರಮಂದಿರಗಳಲ್ಲಿ ಭಯಂಕರ ಎಂಬುವುಷ್ಟು ಬೇಜಾರಾಗಿದೆ. ಬಟ್‌ inox ದೂರ ಮತ್ತು ದುಬಾರಿ! ಸೋ, ಅಲ್ಲೇ ಕುಳಿತು ಬೇರೆ ಚರ್ಚೆಗಳು ಆದವು. ಚಂದ್ರಯಾನ, ಪ್ರಜ್ಞಾನಂದ, ರಾಜಕೀಯ, ಪ್ರಮುಖವಾಗಿ ಕನ್ನಡ ಸಿನಿಮಾಗಳು, ಇತ್ಯಾದಿ, ಇತ್ಯಾದಿ. ಈ ನಡುವೆ ಅಪರೂಪಕ್ಕೆ ಆತ್ಮೀಯ ಗೆಳೆಯರೊಬ್ಬರು ಫೋನ್‌ ಮಾಡಿದ್ರು. ಅವರ ಬಳಿಯೂ ಮಾತನಾಡಿ, ಮನೆಗೆ ಬಂದು, ಸೋಷಿಯಲ್‌ ಮೀಡಿಯಾದಲ್ಲಿ ʼಟೋಬಿʼ ವಿಮರ್ಶೆಗಳನ್ನು ಗಮನಿಸಿದ್ರೆ ಸಿನಿಮಾಗೆ ಹೋಗದಿದ್ದದ್ದೆ ಒಳ್ಳೆಯದಾಯ್ತು ಅಂತ ಅನ್ನಿಸಿತು.

ನಾನು ಇತ್ತೀಚಿಗೆ, ಅದೂ ಬಿಡುಗಡೆಯಾದ ಹತ್ತು ದಿನದ ನಂತರ ನೋಡಿದ ಸಿನಿಮಾ ʼಜೈಲರ್‌ʼ. ಅದೂ ಕನ್ನಡದಲ್ಲಿ. ಈ ಸಿನಿಮಾ ಕುರಿತು ಬಿಡುವಾದಾಗ ಬರೆಯುವೆ.

ಮತ್ತೊಮ್ಮೆ, ನಿಮ್ಮೆಲ್ಲಾ ಕೋರಿಕೆಗಳಿಗೆ ವರಮಹಾಲಕ್ಷ್ಮೀ ಸ್ಪಂದಿಸಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸುತ್ತಾ… ಶುಭರಾತ್ರಿ…

ಗುರುವಾರ, ಆಗಸ್ಟ್ 24, 2023

ಯಶಸ್ವಿ ಚಂದ್ರಯಾನ 3ರ ಹತ್ತು ಪ್ರಮುಖ ಪ್ರಯೋಜನಗಳು… 10 Major Benefits of Successful Chandrayana 3

ಸ್ನೇಹಿತರೇ,

ನಮ್ಮ ಭಾರತ ದೇಶದ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿದೆ. ಆಗಸ್ಟ್‌ 23ರ ಬುಧವಾರ ಸಂಜೆ 6.04ಕ್ಕೆ ಸರಿಯಾಗಿ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ವಿಕ್ರಮ್‌ ಲ್ಯಾಂಡರ್‌ ಒಳಗಿರುವ ರೋವರ್‌ ಪ್ರಗ್ಯಾನ್‌ ಹೊರಬಂದು ತನ್ನ ಕೆಲಸಗಳನ್ನು ಮಾಡಲಿದೆ. ಇದರಿಂದ ನಮ್ಮ ಭಾರತ ದೇಶಕ್ಕೆ ಲಭಿಸುವ ಹತ್ತು ಪ್ರಮುಖ ಲಾಭಗಳು ಅಥವಾ ಪ್ರಯೋಜನಗಳು ಏನು ಅಂತ ನೋಡೋಣ ಬನ್ನಿ… ಅದಕ್ಕೂ ಮುನ್ನ ದೇಶದ ಹೆಮ್ಮೆಯ ಇಸ್ರೋಗೆ, ವಿಜ್ಞಾನಿಗಳಿಗೆ ಮತ್ತು ನಾಗರೀಕರಿಗೆ ಅಭಿನಂದನೆಗಳನ್ನು ತಿಳಿಸೋಣ…

1.     ಅಮೇರಿಕಾ, ರಷ್ಯಾ, ಚೀನಾ ನಂತರ ಚಂದ್ರನಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶವಾಗಿ ಭಾರತ ಇದೀಗ ಹೊರಹೊಮ್ಮಿದೆ. ಈ ಕ್ಲಬ್‌ ಸೇರುವ ಮೂಲಕ ಜಗತ್ತಿಗೆ ತನ್ನ ಬಾಹ್ಯಾಕಾಶ ಶಕ್ತಿಯನ್ನು ಸಾಬೀತುಪಡಿಸಿದಂತಾಗಿದೆ. ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇದೊಂದು ಮೈಲುಗಲ್ಲಾಗಿದೆ.

2.    ಈ ಮೂಲಕ ದೇಶದ ಘನತೆ ಮತ್ತು ಆರ್ಥಿಕತೆ ಹೆಚ್ಚಾಗಲಿದೆ. ಮತ್ತೊಮ್ಮೆ ನಾವು ಭಾರತೀಯರು ನಮ್ಮ ದೇಶ ಭಾರತ ಅಂತ ಹೆಮ್ಮೆಯಿಂದ ಹೇಳಬಹುದಾಗಿದೆ. ಜೊತೆಗೆ ಭಾರತ ವಿಶ್ವದಲ್ಲಿ ತನ್ನ ಆರ್ಥಿಕತೆಯನ್ನು ವಿಸ್ತರಿಸಿಕೊಳ್ಳಲು ಅವಕಾಶವಾದಂತಾಗಿದೆ.

3.     ಬಹುಮುಖ್ಯವಾಗಿ ನಮ್ಮ ದೇಶ ಮೂನ್‌ ಎಕಾನಮಿ ಪ್ರವೇಶಿಸಿದಂತಾಗಿದೆ. ಮೂನ್‌ ಎಕಾನಮಿ ಎಂದರೆ ಚಂದ್ರನ ಆರ್ಥಿಕತೆ. ಚಂದ್ರನಲ್ಲೀಗ ನಾವೀರುವುದರಿಂದ ಅಲ್ಲಿನ ಮಾಹಿತಿಯನ್ನು ವಿದೇಶಗಳೊಂದಿಗೆ ಹಂಚಿಕೊಳ್ಳುವ ಮೂಲಕ ಕೋಟ್ಯಾಂತರ ರೂಗಳ ಹೊಸ ವಹಿವಾಟು ಶುರುವಾಗಲಿದೆ. ಚಂದ್ರನಲ್ಲಿ ಇಳಿಯಲಾಗದ ದೇಶಗಳು ಈ ವಿಷಯದಲ್ಲಿ ನಮ್ಮೊಂದಿಗೆ ವ್ಯವಹಾರ-ವಹಿವಾಟುಗಳಲ್ಲಿ ಕೈಜೋಡಿಸಲಿವೆ. ಬಹುಮುಖ್ಯವಾಗಿ ಚಂದ್ರನ ಮಾಹಿತಿಗೆ ಸಂಪರ್ಕಿಸಲಿವೆ. ಈ ಮೂಲಕ ಉದ್ಯಮವನ್ನು ನಮ್ಮೊಂದಿಗೆ ನಡೆಸಲಿವೆ. ಹೊಸ ರೀತಿಯ ತಂತ್ರಜ್ಞಾನದ ವ್ಯವಹಾರಗಳಿಗೂ ಇದು ನಾಂದಿಯಾಗಲಿದೆ. ಸ್ಟಾರ್ಟ್‌ಅಪ್‌, ಪ್ರವಾಸ, ಮನರಂಜನೆ ಕ್ಷೇತ್ರಗಳ ವ್ಯಾಪ್ತಿ ವಿಸ್ತಾರವಾಗಲಿದೆ.

4.     ಈ ಗೆಲುವಿನಿಂದ ದೇಶದ ಅಭಿವೃದ್ಧಿಗೆ ಮತ್ತು ಪ್ರಗತಿಗೆ ಖಾಸಗಿ ಸಂಸ್ಥೆಗಳು ಮತ್ತಷ್ಟು ಬೆಳವಣಿಗೆಗೆ ಅನುಕೂಲವಾಗುವಂತೆ ತಮ್ಮ ಕೈಜೋಡಿಸಲಿವೆ. ಹೂಡಿಕೆದಾರರ ಮನಸ್ಸನ್ನು ದೇಶದ ಬಾಹ್ಯಾಕಾಶ ಕ್ಷೇತ್ರ ಆಕರ್ಷಿಸಿದಂತಾಗಿದೆ. ಇದು ದೇಶದ ತಂತ್ರಜ್ಞಾನದ ಮತ್ತು ಆರ್ಥಿಕತೆಯ ಬೆಳವಣಿಗೆಗೆ ಅನುಕೂಲವಾಗಲಿದೆ.

5.     ದೇಶದ ಬಾಹ್ಯಾಕಾಶ ತಂತ್ರಜ್ಞಾನದಿಂದ ನಮಗೊದಗಬಹುದಾದ ಅಪಾಯಗಳ ಮುನ್ಸೂಚನೆ ಸಿಗಲಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ  ಬಾಹ್ಯಾಕಾಶದ ಹೊಸ ಪರಿಶೋಧನೆಗಳಿಗೆ ಅವಕಾಶ ಲಭ್ಯವಾಗಲಿದೆ.

6.     ಚಂದ್ರನ ಅಧ್ಯಯನದಿಂದ ಚಂದ್ರನ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಲಿದ್ದು, ಇತರ ಗ್ರಹಗಳ ಮತ್ತು ಬಾಹ್ಯಾಕಾಶದ ಅಧ್ಯಯನಕ್ಕೆ ನೆರವಾಗಲಿದೆ.

7. ಚಂದ್ರಯಾನ 2ರ ಸೋಲಿನಿಂದ ಕಲಿತ ಪಾಠಗಳು ಚಂದ್ರಯಾನ 3ರ ಯಶಸ್ಸಿಗೆ ಕಾರಣವಾಗಿದ್ದು, ಸೋತವರು ಛಲದಿಂದ ಮತ್ತೆ ಪ್ರಯತ್ನಿಸಿದರೆ ಖಂಡಿತ ಗೆಲ್ಲಬಹುದು ಎಂಬ ಹೊಸ ಪಾಠವೊಂದು ನಮಗೆ, ಜಗತ್ತಿಗೆ  ದೊರೆತಿದೆ. 

8. ಸೋಲಿನಿಂದ ಕುಂದದೆ ಗೆದ್ದ ಇಸ್ರೋ ವಿಜ್ಞಾನಿಗಳ ನಡೆ, ನಾಯಕತ್ವ ಈಗ ದೇಶಕ್ಕಷ್ಟೇ ಮಾದರಿಯಲ್ಲ, ವಿಶ್ವಕ್ಕೂ ಹೊಸ ಹುಮ್ಮಸ್ಸನ್ನು ನೀಡಿದೆ.

9. ಈ ಗೆಲುವು ಗುರಿಯಷ್ಟೇ ಮುಖ್ಯವಲ್ಲ, ದಾರಿಯೂ ಕೂಡ ಅಂತ ಮತ್ತೊಮ್ಮೆ ಸಾಬೀತುಪಡಿಸಿದೆ. ಗೆಲುವಿನ ದಾರಿಯಲ್ಲಿ ಎಷ್ಟೇ ಅಡೆತಡೆಗಳಾದರೂ ಗಮ್ಯ ಬದಲಾಗಬಾರದು. ಆಗ ಗುರಿ ಮುಟ್ಟೇ ಮುಟ್ಟುತ್ತೇವೆ ಎಂಬುದನ್ನು ಎತ್ತಿ ಹಿಡಿದಿದೆ. 

10. ಇದು ದೇಶದ ವರ್ತಮಾನದ ಗೆಲುವಷ್ಟೇ ಆಗಿ ಉಳಿಯದೆ, ಭವಿಷ್ಯದ ಹೊಸ ದಾರಿಗೆ, ಹೊಸ ಗೆಲುವಿಗೆ, ಚೈತನ್ಯ ತುಂಬಿದಂತಾಗಿದೆ. ಈ ಚೈತನ್ಯ ಭವಿಷ್ಯ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಇವಿಷ್ಟು ನನಗೆ ಸಿಕ್ಕ ಚಂದ್ರಯಾನ 3ರ ಯಶಸ್ಸಿನ ಪ್ರಯೋಜನಗಳು.  ಹುಡುಕಿದರೆ ಇನ್ನೂ ಹಲವು ಪ್ರಯೋಜನಗಳು ಸಿಗಬಹುದು. ನನಗೆ ಸಿಕ್ಕಷ್ಟನ್ನು ನಾನು ನಿಮಗೆ ತಿಳಿಸಿದ್ದೇನೆ. ನಿಮಗೆ ಗೊತ್ತಿರುವವನ್ನು ಕಾಮೆಂಟ್‌ ಮಾಡಿ ತಿಳಿಸಿ, ನಾನು ತಿಳಿದುಕೊಳ್ಳುತ್ತೇನೆ.

ನಮ್ಮ ದೇಶ, ನಮ್ಮ ಹೆಮ್ಮೆ… ಧನ್ಯವಾದಗಳು…


ಮಂಗಳವಾರ, ಆಗಸ್ಟ್ 22, 2023

ಕನ್ನಡಕ್ಕೆ ಬಂದ “ಜಂಗಲ್ ಬುಕ್”

 ಸ್ನೇಹಿತರೇ,

ಆಂಗ್ಲ ಸಾಹಿತಿ ಜೋಸೆಫ್‌ ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ಜಗತ್ಪ್ರಸಿದ್ದ “ಜಂಗಲ್‌ ಬುಕ್”‌ ಯಾರಿಗೆ ಗೊತ್ತಿಲ್ಲ? ಜಂಗಲ್‌ ಬುಕ್‌ ಎಂದರೆ ಮೊಗ್ಲಿ, ಶೇರ್‌ ಖಾನ್‌, ಭಗೀರ, ಭಾಲೂ ಇನ್ನು ಮುಂತಾದ ಪಾತ್ರಗಳು ನಮ್ಮ ಕಣ್ಮುಂದೆ ಸುಳಿದಾಡುತ್ತವೆ. ಕಾಡು ಕಣ್ಕಟ್ಟುತ್ತದೆ. ಭಾರತದಲ್ಲಿಯೇ 1865 ಡಿಸೆಂಬರ್‌ 30ರಂದು ಮುಂಬೈನಲ್ಲಿ ಜನಿಸಿದ ಕಿಪ್ಲಿಂಗ್‌ ತನ್ನ ಬಾಲ್ಯವನ್ನು ಕಳೆದದ್ದು ಇಲ್ಲಿಯೇ. ತನ್ನ ಆರನೇ ವರ್ಷದಲ್ಲಿ ವಿದ್ಯಾಭ್ಯಾಸಕ್ಕೆಂದು ಇಂಗ್ಲೇಂಡಿಗೆ ತೆರಳಿದ ಕಿಪ್ಲಿಂಗ್‌ ಹತ್ತು ವರುಷಗಳ ನಂತರ ಭಾರತಕ್ಕೆ ಹಿಂದಿರುಗಿದರು. ಕವಿ, ಕತೆಗಾರ, ಪತ್ರಕರ್ತ ಮತ್ತು ಕಾದಂಬರಿಕಾರರಾಗಿದ್ದ ಕಿಪ್ಲಿಂಗ್‌ ಆ ಕಾಲಘಟ್ಟದ ಜನಪ್ರಿಯ ಸಾಹಿತಿ. 1907ರಲ್ಲಿ ತಮ್ಮ ನಲವತ್ತೊಂದನೇಯ ವಯಸ್ಸಿನಲ್ಲಿಯೇ ಸಾಹಿತ್ಯಕ್ಕಾಗಿ ನೊಬೆಲ್‌ ಬಹುಮಾನವನ್ನು ಪಡೆದವರು. ಇವರ ʼಜಂಗಲ್‌ ಬುಕ್‌ʼ ಒಂದು ಪ್ರಸಿದ್ಧ ಕಥಾಸಂಕಲನ. ಈಗಾಗಲೇ ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದೆ. ಇದೀಗ ಕನ್ನಡಕ್ಕೂ ಬಂದಿದೆ.  



ಮೂಲ ಇಂಗ್ಲೀಷ್‌ ಭಾಷೆಯ ʼಜಂಗಲ್‌ ಬುಕ್‌ʼ ಕತೆಗಳು ಹುಟ್ಟಿದ್ದು ಅಮೇರಿಕಾದಲ್ಲಿ. ತಮ್ಮ ಪುಟ್ಟ ಮಗಳು ಜೋಸೆಫೀನ್‌ಗಳಿಗಾಗಿ ಈ ಕತೆಗಳನ್ನು ಕಿಪ್ಲಿಂಗ್ ಬರೆದರು ಎಂಬ ಹೇಳಿಕೆಯಿದೆ. ಆದರೆ, ದುರದೃಷ್ಟವಶಾತ್‌ ಜೋಸೆಫೀನ್‌ ನ್ಯೂಮೋನಿಯಾದಿಂದ ತನ್ನ ಆರನೇ ವಯಸ್ಸಿನಲ್ಲಿಯೇ ತೀರಿಕೊಳ್ಳುತ್ತಾಳೆ. ಕಿಪ್ಲಿಂಗ್‌ ತನ್ನ ಭಾರತದ ಕಾಡು-ಮೇಡುಗಳ ಸುತ್ತಾಟ, ಆಫ್ರಿಕಾ, ಜಪಾನ್‌, ಅಮೇರಿಕಾಗಳ ಪರ್ಯಟನೆಯ ಅನುಭವ ಮತ್ತು ಅಪಾರ ಓದಿನ ಅನುಭವಗಳಿಂದಲೇ ಈ ಕೃತಿಯನ್ನು ರಚಿಸಿದ್ದಾರೆ. ಪ್ರಾಣಿಗಳ ಪ್ರಪಂಚದ ಈ ಕೃತಿಯನ್ನು ಬರೆಯಲು ನಮ್ಮ ʼಪಂಚತಂತ್ರದ ಕತೆಗಳುʼ, ʼಜಾತಕ ಕತೆಗಳುʼ ಪ್ರೇರಣೆಯಾಗಿರುವುದನ್ನು ಅಲ್ಲಗೆಳೆಯಲಾಗದು. ಈ ಸಂಕಲನದ ಪಾತ್ರಗಳ ಹೆಸರುಗಳು ಕೂಡ ಭಾರತದವೇ ಆಗಿವೆ. ಕತೆ ನಡೆಯುವ ಪ್ರದೇಶಗಳಾದ ಸಿಯೋನಿ ಪರ್ವತಗಳು ಮಧ್ಯಪ್ರದೇಶದ ಕಾಡುಗಳಾದರೆ, ಮೋಗ್ಲಿಯನ್ನು ಹೊತ್ತೊಯ್ಯುವ ಮಂಗಗಳ ಕೋಲ್ಡ್‌ ಲೈರ್ಸ್‌ ಈಗಿನ ಚಿತ್ತೋರ್‌ಗಡ್‌, ಭಗೀರ ತಪ್ಪಿಸಿಕೊಂಡು ಬಂದಿದ್ದ ಓಡಾಯ್‌ ಫೋರ್‌ ರಾಜಸ್ಥಾನದ ಉದಯ್‌ಪುರ್‌ ಎಂದು ಗುರುತಿಸಲಾಗಿದೆ. ಜೊತೆಗೆ ರಷ್ಯಾದ ದ್ವೀಪಗಳ ಚಿತ್ರಣವೂ ಇದೆ. ಕಿಪ್ಲಿಂಗ್‌ ಅವರ ಈ ಕೃತಿಗೆ ಸ್ನೇಹಿತ ಸ್ಕೌಟ್‌ ಚಳುವಳಿಯ ಸ್ಥಾಪಕರಾದ ರಾಬರ್ಟ್‌ ಬಾಡೆನ್‌ ಪೋವೆಲ್‌ ಅವರ ಸ್ಕೌಟಿನ ನಿಯಮಗಳೂ ಕೂಡ ಪ್ರೇರಣೆಯಂತೆ. ಈ ನಿಯಮಗಳೇ ಇಲ್ಲಿ ಕಾಡಿನ-ನಾಡಿನ ನಿಯಮಗಳಾಗಿವೆ ಎಂದು ಕೂಡ ಹೇಳಲಾಗಿದೆ. ಬಹುಮುಖ್ಯವಾಗಿ 1872ರಲ್ಲಿ ಉತ್ತರಪ್ರದೇಶದ ಕಾಡಿನಲ್ಲಿ ತೋಳಗಳೊಂದಿಗೆ ಕಾಣಿಸಿಕೊಂಡ ʼದಿನಾ ಸಾನಿಚರ್‌ʼ ಅಥವಾ ʼಭಾರತೀಯ ತೋಳಗಳ ಪೋರʼ ಎಂದೇ ಪ್ರಸಿದ್ಧನಾದ ಹುಡುಗನೇ ʼಜಂಗಲ್‌ ಬುಕ್‌ʼ ಕತೆಗಳನ್ನು ಬರೆಯಲು ಪ್ರೇರಣೆಯೆಂದು ಸ್ವತಃ ಕಿಪ್ಲಿಂಗ್‌ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಕತೆಗಳಲ್ಲಿ ಪ್ರಾಣಿಗಳ ಮೂಲಕ ಡಾರ್ವಿನ್ನನ ʼಬದುಕುಳಿಯುವ ಸಂಘರ್ಷʼವನ್ನು ಕೂಡ ಕಿಪ್ಲಿಂಗ್‌ ಹೇಳಿರುವುದು ಈ ಸಂಕಲನದ ಹೆಗ್ಗಳಿಕೆ.



ಇದುವರೆವಿಗೂ ಇಂಗ್ಲೀಷ್‌ ಅಕ್ಷರಗಳಲ್ಲಿ, ಅನಿಮೇಟೆಡ್‌ ಚಿತ್ರಗಳಲ್ಲಿ, ಸಿನಿಮಾಗಳಲ್ಲಿ, 3-ಡಿ ಸಿನಿಮಾಗಳಲ್ಲಿ ಲಭ್ಯವಿದ್ದ ಈ ಹೆಸರಾಂತ ಕತೆಗಳು ಈಗ ಕನ್ನಡದಲ್ಲಿಯೂ ಲಭ್ಯವಿದ್ದು, ಕನ್ನಡದ ಓದುಗರು ʼಜಂಗಲ್‌ ಬುಕ್‌ʼ ಕತೆಗಳಲ್ಲಿ ಕಳೆದುಹೋಗಬಹುದಾಗಿದೆ. ʼಜಂಗಲ್‌ ಬುಕ್‌ʼ ಎಂದೇ ಕನ್ನಡಕ್ಕೆ ಅನುವಾದಗೊಂಡಿರುವ ಈ ಸಂಕಲನದ ಅನುವಾದಕಿ ಶ್ರೀಮತಿ ಆಶಾ ಜಿ. ಅವರು ಸಶಕ್ತವಾಗಿ ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ʼನಾಡೋಜ ಡಾ| ಚಂದ್ರಶೇಖರ ಕಂಬಾರ ಪ್ರತಿಷ್ಠಾನʼದ ಪ್ರಧಾನ ಕಾರ್ಯದರ್ಶಿಗಳಾದ ಸಾಹಿತಿ ಶ್ರೀ ಹೊ.ನ. ನೀಲಕಂಠೇಗೌಡ ಅವರ ಬೆನ್ನುಡಿ ಈ ಪುಸ್ತಕಕ್ಕಿದೆ. ವಂಶಿ ಪಬ್ಲಿಕೇಷನ್ಸ್‌ ಈ ಕೃತಿಯನ್ನು ಪ್ರಕಟಿಸಿದ್ದು, ಕಲಾವಿದ ಸಂತೋಷ್‌ ಸಸಿಹಿತ್ಲು ಅವರ ಮುಖಪುಟ ಮತ್ತು ರೇಖಾಚಿತ್ರಗಳಿವೆ. ಮಾನವ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಪ್ರತಿನಿಧಿಸುವ ಈ ಪುಸ್ತಕದ ಮೌಲ್ಯ ರೂ. 225/- ಆಗಿರುತ್ತದೆ.

-        ಧನ್ಯವಾದಗಳು…

ಕನ್ನಡ “ಜಂಗಲ್‌ ಬುಕ್”‌ ಕೊಳ್ಳಲು ಅಮೇಜಾನ್‌ ಲಿಂಕ್:


ಸೋಮವಾರ, ಮಾರ್ಚ್ 28, 2022

ಮತ್ತೆ ಹುಟ್ಟಿ ಬಂದರು... ಡಾ. ಪುನೀತ್ ರಾಜ್ ಕುಮಾರ್...



ನಿರೀಕ್ಷೆಯಂತೆ ಪುನೀತ್‌ ರಾಜ್‌ ಕುಮಾರ್‌ ಅವರು ಹೀರೋ ಆಗಿ ನಟಿಸಿರುವ ಕೊನೆಯ ಚಿತ್ರ “ಜೇಮ್ಸ್”‌ ಮಾರ್ಚ್‌ 17ರಂದೇ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.

ಚಿತ್ರ ನೋಡಿ ಅಭಿಮಾನಿಗಳು ಅಪ್ಪುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ನೀವಿನ್ನೂ ಇರಬೇಕಿತ್ತು ಅಂತ ಕಣ್ಣುಗಳನ್ನು ಒದ್ದೆ ಮಾಡಿಕೊಳ್ಳುತ್ತಿದ್ದಾರೆ.

“ಜೇಮ್ಸ್‌” ಚಿತ್ರ ನೋಡುವಷ್ಟು ಕಾಲ ಪುನೀತ್‌ ರಾಜ್‌ ಕುಮಾರ್‌ ಮತ್ತೆ ಹುಟ್ಟಿ ಬಂದಿದ್ದಾರೆ ಎಂಬ ಭಾವ ತೀವ್ರವಾಗಿ ಕಾಡುತ್ತದೆ. ಅಪ್ಪು ನೀವಿನ್ನೂ ಇರಬೇಕಿತ್ತು ಎಂಬ ಹಾರೈಕೆ ಮನದಲ್ಲಿ ಮೂಡುತ್ತದೆ. ಜೊತೆಯಿರದ ಜೀವ ಎಂದೆಂದಿಗೂ ಜೀವಂತ ಎನ್ನುವ ಯೋಗರಾಜ ಭಟ್ಟರ ಮಾತುಗಳು ಸತ್ಯವಾಗಿವೆ.

ಡಾ. ರಾಜ್‌ಕುಮಾರ್‌ ಅವರ ಬಾಂಡ್‌ ಸಿನಿಮಾಗಳಂತೆಯೇ ಈ ಸಿನಿಮಾ ಕೂಡ ನೋಡುಗರನ್ನು ಸೆಳೆಯುತ್ತಿದೆ. ಪುನೀತ್‌ ಅವರ ಅಬ್ಬರದ ರೌದ್ರ ನಟನೆಗೆ ಡಾ. ಶಿವರಾಜ್‌ಕುಮಾರ್‌ ಅವರ ಧ್ವನಿ ಬೊಬ್ಬಿರಿಯುತ್ತದೆ. ಕಿಶೋರ್ ಪತ್ತಿಕೊಂಡ ಅವರ ನಿರ್ಮಾಣ, ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರ ಬಹಳ ಅದ್ದೂರಿಯಾಗಿ ಮೂಡಿದೆ. ಶಿವಣ್ಣ ಮತ್ತು ರಾಘವೇಂದ್ರ ರಾಜ್‍ಕುಮಾರ್ ಕೂಡಾ ಈ ಚಿತ್ರದಲ್ಲಿ ನಟಿಸಿರೋದು ಹೈಲೈಟ್.

ನೀವಿನ್ನೂ ಈ ಸಿನಿಮಾ ನೋಡಿಲ್ಲವಾದರೆ, ಈ ಕೂಡಲೇ ನೋಡಿ…

***

ತುಮಕೂರಿನ INOX ನಲ್ಲಿ "ಜೇಮ್ಸ್"‌ ನೋಡಿ ಈ ವಿಡಿಯೋ ಮಾಡಿದ್ದೇನೆ… ಮತ್ತೆ ಹುಟ್ಟಿ ಬಂದರು... ಡಾ. ಪುನೀತ್ ರಾಜ್ ಕುಮಾರ್...

https://youtu.be/2FI04vVJ1Dg

ಬುಧವಾರ, ಮಾರ್ಚ್ 16, 2022

ಅಪ್ಪು ಈಗ ಡಾ. ಅಪ್ಪು ಡಾ. ಪುನೀತ್ ರಾಜ್ ಕುಮಾರ್

ಸ್ನೇಹಿತರೇ, ನಮ್ಮೆಲ್ಲರ ಪ್ರೀತಿಯ ನಟ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದೆ. ಪುನೀತ್‌ ಅವರ ಸಾಮಾಜಿಕ ಸೇವಾ ಕಾರ್ಯ ಹಾಗೂ ಚಿತ್ರರಂಗದಲ್ಲಿನ ಸಾಧನೆ ಪರಿಗಣಿಸಿ ಮೈಸೂರು ವಿಶ್ವವಿದ್ಯಾಲಯ ಮರಣೋತ್ತರವಾಗಿ ಗೌರವ ಡಾಕ್ಟರ್‌ ಪ್ರದಾನ ಮಾಡಲಿದೆ ಎಂದು ಕುಲಪತಿಗಳಾದ ಪ್ರೊ. ಬಿ. ಹೇಮಂತ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದು ಪುನೀತ್‌ ಅವರ ಜನ್ಮದಿನಕ್ಕೆ ವಿವಿ ನೀಡುತ್ತಿರುವ ಪುಟ್ಟ ಉಡುಗೊರೆ ಎಂದಿದ್ದಾರೆ. ಪುನೀತ್‌ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಘಟಿಕೋತ್ಸವಕ್ಕೆ ಬರಲು ಒಪ್ಪಿದ್ದಾರೆ ಎಂದು ಕೂಡ ತಿಳಿಸಿದ್ದಾರೆ. ಡಾ. ರಾಜ್‌ಕುಮಾರ್‌ ಅವರಿಗೆ 1976ರಲ್ಲಿ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗಿತ್ತು.


ಈ ಗೌರವದಿಂದ ಎಲ್ಲರ ಪ್ರೀತಿಯ ಅಪ್ಪು, ಡಾ. ಅಪ್ಪು... ಡಾ. ಪುನೀತ್‌ ರಾಜ್‌ ಕುಮಾರ್‌ ಆಗಲಿದ್ದಾರೆ...
***
ಈ ಮಾಹಿತಿಯ ನನ್ನ ಯೂಟ್ಯೂಬ್‌ ಲಿಂಕ್‌ :
ಅಪ್ಪು ಈಗ ಡಾ. ಅಪ್ಪು ಡಾ|| ಪುನೀತ್ ರಾಜ್‌ಕುಮಾರ್
https://youtu.be/1etPM3c3ftA


ಭಾನುವಾರ, ಮಾರ್ಚ್ 13, 2022

ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ

 ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ

ವಿಜಯನಗರ ಸಾಮ್ರಾಜ್ಯದ ಹಿರಿಮೆ ಗರಿಮೆಗಳನ್ನು ಕಣ್ಣು ಕಂಡರಿಯದು, ಕಿವಿ ಕೇಳರಿಯದು ಎಂದು ಬೇರೆ ಬೇರೆ ದೇಶಗಳಿಗೆ ಸೇರಿದ ವಿದೇಶಿ ಪ್ರವಾಸಿಗಳು ಬೆರಗುಗೊಂಡು ತಮಗಾದ ಬೆರಗನ್ನು ವರದಿ ಮಾಡಿದರೆ, ಬ್ರಿಟಿಷ್‌ ಆಡಳಿತದಲ್ಲಿ ಬಳ್ಳಾರಿಯ ಜಿಲ್ಲಾಧಿಕಾರಿಯಾಗಿದ್ದ ರಾಬರ್ಟ್‌ ಸೆವೆಲ್‌ ತನ್ನ ಮೇಲಧಿಕಾರಿಗಳಿಗೆ ವಿಜಯನಗರ ಸಾಮ್ರಾಜ್ಯ ಕುರಿತು ತಿಳಿಸಲು “A Forgotten Empire” ಕೃತಿಯನ್ನು ರಚಿಸಿದರು. ಈ ಕೃತಿಯೇ ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ... 1900 ರಲ್ಲಿ ಈ ಕೃತಿ ಮೊದಲಿಗೆ ಪ್ರಕಟಗೊಂಡಿತು. ಈ ಕೃತಿ ವಿಜಯನಗರ ಸಾಮ್ರಾಜ್ಯ ಕುರಿತ ಅಮೂಲ್ಯ ಆಖರಗ್ರಂಥವೂ ಹೌದು. ಇದು ವಿಜಯನಗರದ ಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳ ಬಗೆಗೆ ಜಗತ್ತಿನ ಗಮನ ಸೆಳೆದ ಪ್ರಥಮಗ್ರಂಥ!

ಸ್ವತಃ ಸಾಹಿತಿಯಲ್ಲದ್ದಿದ್ದರೂ ರಾಬರ್ಟ್‌ ಸೆವೆಲ್‌ ಇತಿಹಾಸವನ್ನು ದಾಖಲಿಸಲು “A Forgotten Empire” ಕೃತಿಯನ್ನು ರಚಿಸಿದರೆ, ಇದನ್ನು ಕನ್ನಡಕ್ಕೆ ಸದಾನಂದ ಕನವಳ್ಳಿ ಅವರು ಯಥಾವತ್ತಾಗಿ “ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ” ಎಂದು ಅನುವಾದಿಸಿದ್ದಾರೆ. ಈ ಕೃತಿಯ ಮೌಲಿಕತೆಯನ್ನು ಮನಗಂಡು ಹಂಪಿಯ ಕನ್ನಡ ವಿಶ್ವವಿದ್ಯಾಲಯ ತನ್ನ ಪ್ರಥಮ ನುಡಿಹಬ್ಬದಂದು ಈ ಕೃತಿಯನ್ನು 1992ರಲ್ಲಿ ಪ್ರಕಟಿಸಿದ್ದರೆ, ಆನಂತರ ಇದೊಂದು ಅಧಿಕೃತ, ಬೇಡಿಕೆಯುಳ್ಳ ಕೃತಿಯೆಂದು ಮನಗಂಡ ʼಅಂಕಿತ ಪುಸ್ತಕʼ ಮರುಮುದ್ರಿಸಿದೆ.



ಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ವರ್ಣಿಸುತ್ತದೆ. ಈ ಸಾಮ್ರಾಜ್ಯದ ಆರಂಭ – ವೈಭವ ಕುರಿತಂತೇ ಅನೇಕ ದಂತ ಕತೆಗಳಿವೆ. ಕೃಷ್ಣದೇವರಾಯನ ಕಾಲಕ್ಕೆ ಉತ್ತುಂಗಕ್ಕೇರಿದ್ದ ವಿಜಯನಗರ ಸಾಮ್ರಾಜ್ಯ ವೈಭವದ ನಂತರ ಅವನತಿಯ ಹಾದಿ ಹಿಡಿಯಿತು. ವೈಭವದಲ್ಲಿರುವಾಗಲೇ ಒಳಜಗಳ – ಆಂತರಿಕ ಕಿತ್ತಾಟ ಮತ್ತು ತಾಳೀಕೋಟೆಯ ಯುದ್ಧ ವಿಜಯನಗರವನ್ನು ಅಧಃಪಾತಾಳಕ್ಕಿಳಿಸಿತು. ನಂತರ ನಡೆದ ರಾಜ್ಯದ ಲೂಟಿ ಎಲ್ಲ ವೈಭವವನ್ನೂ ನೆಲಸಮಗೊಳಿಸಿತು. ಈ ಕೃತಿ ವಿಜಯನಗರದ ಏಳು- ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಠ ಅಧ್ಯಯನಕ್ಕೆ ಮಾದರಿಯಾಗಿ ಕೂಡ ನಿಲ್ಲುತ್ತದೆ.

ಈ ಕೃತಿಯಲ್ಲಿ ಪೀಠಿಕೆಯನ್ನೊಳಗೊಂಡು ಹದಿನೇಳು ಅಧ್ಯಾಯಗಳಿವೆ. ಪುಸ್ತಕದ ಕೊನೆಯಲ್ಲಿ ಅನುಬಂಧಗಳನ್ನು ನೀಡಲಾಗಿದೆ. ವಿಜಯನಗರ ಸಾಮ್ರಾಜ್ಯದ ಮೂಲ, ಸಾಮ್ರಾಜ್ಯದ ಪ್ರಥಮ ರಾಜರು, ಸಾಮ್ರಾಜ್ಯದ ಬೆಳವಣಿಗೆ, ಒಂದನೇಯ ದೇವರಾಯ, ಎರಡನೆಯ ದೇವರಾಯ, ಎರಡನೆಯ ದೇವರಾಯನ ಆಳ್ವಿಕೆಯಲ್ಲಿ ವಿಜಯನಗರ ನಗರ, ಪ್ರಥಮ ರಾಜವಂಶದ ಮುಕ್ತಾಯ, ಎರಡನೆಯ ರಾಜವಂಶದ ಪ್ರಥಮ ರಾಜರು, ಕೃಷ್ಣದೇವರಾಯನ ಆಳ್ವಿಕೆ, ರಾಯಚೂರ ದಾಳಿ ಮತ್ತು ಯುದ್ಧ ಮತ್ತು ಕೃಷ್ಣನ ಆಳ್ವಿಕೆಯ ಕೊನೆ, ಕೃಷ್ಣದೇವರಾಯನ ಕಟ್ಟಡಗಳು, ನಿರ್ಮಾಣಗಳು ಮತ್ತು ಶಾಸನಗಳು, ಅಚ್ಯುತರಾಯನ ಆಳ್ವಿಕೆ, ಅಂತ್ಯದ ಆದಿ, ವಿಜಯನಗರದ ವಿನಾಶ, ಮೂರನೆಯ ರಾಜವಂಶ, ಬ್ಯಾರಡಸ್‌ನ ಕಥಾನಕ, ಪ್ಯಾಸ್‌ ಮತ್ತು ನೂನೀಜ್‌ರ ದಿನಚರಿಗಳು, ಡೊಮಿಂಗೊಸ್‌ ಪ್ಯಾಸ್‌ ನ ಕಥನ, ಫರ್ನಾಒ ನೂನಿಜ್‌ ನ ದಿನಚರಿ ಯ ಬಗ್ಗೆ ನಾವು ತಿಳಿದುಕೊಳ್ಳಬಹುದಾಗಿದೆ.

ಒಟ್ಟು 448 ಪುಟಗಳ ಈ ಅಮೂಲ್ಯ ಪುಸ್ತಕದ ಮೌಲ್ಯ ರೂ. 450/- 

ಈ ಪುಸ್ತಕವನ್ನು ಗೋಮಿನಿ ಪ್ರಕಾಶನದ ಆನ್‌ ಲೈನ್‌ ಬುಕ್‌ ಶಾಪ್‌ ನ ಲಿಂಕಿನ ಮೂಲಕ ಕೊಳ್ಳಬಹುದಾಗಿದೆ... 

https://www.gominiprakashana.com/product/3169543/-10-off/

ಈ ಪುಸ್ತಕ ಕುರಿತು ನಾನು ಮಾಡಿರುವ ವಿಡಿಯೋವನ್ನು  ಯೂಟ್ಯೂಬಿನಲ್ಲಿ ವೀಕ್ಷಿಸಲು ಕೆಳಗಿನ ಲಿಂಕ್‌ ಉಪಯೋಗಿಸಿ,,,

https://www.youtube.com/watch?v=ASF4SD50QQQ

ಈ ಪೋಸ್ಟ್‌ ಕುರಿತು ತಪ್ಪದೇ ಕಾಮೆಂಟ್‌ ಮಾಡಿ, ಧನ್ಯವಾದಗಳು.

***

ನಿಮ್ಮ ಗುರಿ ಏನು?

ಸ್ನೇಹಿತರೇ, ಜೀವನದಲ್ಲಿ ಒಂದು ಗುರಿ ಇರಬೇಕಾಗುತ್ತದೆ. ನೀವು ಇರುವುದರಲ್ಲೇ ಸಂತುಷ್ಟರಾಗಿ ಇರುತ್ತೇನೆ ಎಂದರೆ ನಿಮಗೆ ಯಾವುದೇ ಗುರಿಯ ಅವಶ್ಯಕತೆ ಇರುವುದಿಲ್ಲ. ಆದರೆ, ಏನನ...