ಭಾನುವಾರ, ಜುಲೈ 7, 2024

ಚಡಪಡಿಸುವುದನ್ನು ಮೊದಲು ಬಿಟ್ಟುಬಿಡಿ

ಚಡಪಡಿಸುವುದನ್ನು ಮೊದಲು ಬಿಟ್ಟುಬಿಡಿ


“ಸುಮ್ಮನೆ ಹಾಗೇ ಗಮನಿಸುತ್ತಿರಿ. ಒಂದಷ್ಟು ಪಾತ್ರಗಳು ನಿಮಗೆ ಸಿಗುತ್ತವೆ”

                                        - ಯೋಗರಾಜ್ ಭಟ್, ಖ್ಯಾತ ಸಿನಿಮಾ ನಿರ್ದೇಶಕ.


2008ರಲ್ಲಿ ಖ್ಯಾತ ಸಾಹಿತಿ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರರವರ ಚಿತ್ರಕಥಾ ಶಿಬಿರದಲ್ಲಿ ಭಾಗವಹಿಸಿದ್ದೆ. ಆಗ ಅಲ್ಲಿಗೆ ‘ಮುಂಗಾರು ಮಳೆ’ಯ ಸಿನಿಮಾ ನಿರ್ದೇಶಕರಾದ ಯೋಗರಾಜ ಭಟ್ಟರ ಆಗಮನವಾದಾಗ ನಮ್ಮಲ್ಲೆಲ್ಲಾ ಏನೋ ಒಂಥಾರ ಸಂಚಲನ. ಅವರು ಬಂದವರೇ ನಮಗೊಂದು ಕ್ಲಾಸ್ ತೆಗೆದುಕೊಂಡರು. ಪ್ರಶ್ನೋತ್ತರದ ಮೂಲಕವೇ ಅವರು ಆರಂಭಿಸಿದರು. ಹೆಚ್ಚು ಮಾತನಾಡದೆ, ಸಂಕ್ಷಿಪ್ತವಾಗಿ, ಸೂಕ್ಷ್ಮವಾಗಿ ನಮ್ಮ ಪ್ರಶ್ನೆಗಳಿಗೆ ಭಟ್ಟರು ಉತ್ತರಿಸುತ್ತಿದ್ದರು. ‘ನಿಮ್ಮ ಪಾತ್ರಗಳ ಸೃಷ್ಠಿ ತುಂಬಾ ಹೊಸತನದಿಂದ ಕೂಡಿರುತ್ತದೆ?’ ಎಂಬ ಶಿಬಿರಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಭಟ್ಟರು ಹೇಳಿದಿಷ್ಟು: ‘ನೀವು ಸುಮ್ಮನೆ ಬಸ್ಟಾಂಡಿನಲ್ಲಿ ನಿಂತಿರಿ. ಅಲ್ಲಿಗೆ ಬರುವವರನ್ನು ಸುಮ್ಮನೆ ಹಾಗೇ ಗಮನಿಸುತ್ತೀರಿ. ಒಂದಷ್ಟು ಪಾತ್ರಗಳು ನಿಮಗೆ ಸಿಗುತ್ತವೆ. ಯಾಕೆಂದರೆ, ಮನುಷ್ಯ ಸದಾ ಚಡಪಡಿಸುತ್ತಿರುತ್ತಾನೆ’. 

ಒಮ್ಮೆ ಚಿಂತಿಸಿ ನೋಡಿ. ಹೌದಲ್ಲವ? ಬಂದ ಬಸ್ಸಿಗೆ ಹೋಗುವುದೋ? ಇಲ್ಲಾ ಇನ್ನೊಂದು ಬಸ್ ಬರುವವರೆಗೂ ಕಾಯುವುದೋ? ಒಬ್ಬನ ಚಡಪಡಿಕೆಯಾದರೆ, ಮತ್ತಿನ್ನೇನೋ ಇನ್ನೊಬ್ಬನ ಚಡಪಡಿಕೆ. ಮತ್ತೊಬ್ಬ ಇನ್ನೊಂದು ರೀತಿಯಲ್ಲಿ ಚಡಪಡಿಸುತ್ತಿರುತ್ತಾನೆ. ಮಾಡುವುದೇನು, ನಿಮ್ಮ ಗುರಿಯೇನು ಎಂದು ನಿರ್ಧರಿಸಿಕೊಳ್ಳದೆ ಬರೀ ಚಡಪಡಿಸುತ್ತಿದ್ದರೆ, ನೀವು ಯೋಗರಾಜ ಭಟ್ಟರು ಹೇಳಿದಂತೆ ಸಿನಿಮಾವೊಂದರ ಪಾತ್ರವಾಗಿಬಿಡುತ್ತೀರಿ ಅಷ್ಟೆ. ಅದಕ್ಕೆ ಹೇಳಿದ್ದು ಚಡಪಡಿಸುವುದನ್ನು ಮೊದಲು ಬಿಟ್ಟುಬಿಡಿ. ಚಡಪಡಿಸುವುದನ್ನು ಬಿಟ್ಟು ನಿಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಿ.

ಒಂದು ಕತೆಯಿದೆ. ಒಬ್ಬ ವ್ಯಾಪಾರಿಯ ಬಳಿ ಒಂದಿನ್ನೂರು ಒಂಟೆಗಳು, ಒಂದು ನೂರು ಸೇವಕರಿದ್ದರು. ಆತ ಯಾವಾಗಲು ಯಾವುದಾದರೂ ಕೆಲಸ ಮಾಡುವುದರಲ್ಲಿಯೇ ಬ್ಯುಸಿ. ಒಂದು ಸಂಜೆ ತನ್ನ ಕೆಲಸಗಳ ಬಗ್ಗೆ ಹೇಳಲು ತನ್ನ ಬುದ್ಧಿವಂತ ಗೆಳೆಯನನ್ನು ಬರಮಾಡಿಕೊಂಡ. ಊಟವಾದ ನಂತರ ರಾತ್ರಿಯೆಲ್ಲಾ ತನ್ನ ಗೆಳೆಯನಿಗೆ ತನ್ನ ಕೆಲಸಗಳ ಬಗ್ಗೆ, ಇರುವ ಆಸ್ತಿಯ ಬಗ್ಗೆ ಹೇಳಿದ. ಮುಂದುವರಿಯುತ್ತಾ, ಮುಂದೆ ಇನ್ನೂ ಮಾಡಬೇಕಾಗಿರುವ ಕೆಲಸಗಳ ಬಗ್ಗೆ, ಸಂಪಾದಿಸಬೇಕಾಗಿರುವ ಆಸ್ತಿಯ ಬಗ್ಗೆ ವಿವರಿಸುತ್ತಲೇ ಇದ್ದ. ಒಂದು ಕ್ಷಣವೂ ಆತನಿಗೆ ಸುಮ್ಮನೆ ಕೂಡಲು ಆಗಲೇ ಇಲ್ಲ. ಆತನ ಮಾತನ್ನು ಮಧ್ಯದಲ್ಲಿಯೇ ತಡೆದ ಬುದ್ಧಿವಂತ ಗೆಳೆಯ, “ಅದೆಲ್ಲಾ ಸರಿ. ಆದರೆ, ನಿನ್ನ ಜೀವನದ ಮುಖ್ಯ ಗುರಿ ಯಾವುದು?” ಎಂದು ಕೇಳಿದ. ಅದಕ್ಕೆ ವ್ಯಾಪಾರಿ, “ಇಷ್ಟೆಲ್ಲಾ ಮಾಡಿದ ಮೇಲೆ, ಹೆಚ್ಚು ಆಸ್ತಿಯನ್ನು ಗಳಿಸಿದ ಮೇಲೆ ನಾನು ನನ್ನ ಜೀವನವನ್ನು ಶಾಂತಿಯಿಂದ ಕಳೆಯಬೇಕಿರುವೆ” ಎಂದು. ಅದಕ್ಕೆ ಪ್ರತಿಕ್ರಿಯಿಸುತ್ತಾ ನಗುತ್ತಾ ಬುದ್ಧಿವಂತ ಗೆಳೆಯ ಹೇಳಿದ, “ನೀನು ಸದಾ ಒಂದಿಲ್ಲೊಂದು ಕೆಲಸ, ಆಸ್ತಿ ಗಳಿಸಿರುವುದರಲ್ಲಿಯೇ ಚಡಪಡಿಸುತ್ತಿದ್ದರೆ ನಿನಗೆ ಶಾಂತಿಯಿಂದ ಇರುವುದಕ್ಕಾದರೂ ಸಾಧ್ಯವೆಲ್ಲಿದೆ? ಒಂದು ಕ್ಷಣವೂ ಸುಮ್ಮನೆ ಕೂಡಲಾರೆಯಾದರೆ ನಿನಗೆ ಶಾಂತಿ ಎಲ್ಲಿಂದ ಲಭಿಸುತ್ತದೆ?” ಎಂದು ಹೇಳಿ ಹೊರಟುಹೋದ. ನಿಮ್ಮ ಗುರಿ ಜೀವನದಲ್ಲಿ ಶಾಂತಿ ಗಳಿಸುವುದಾಗಿದ್ದರೆ, ಮೊದಲು ನೀವು ಒಂದು ಕ್ಷಣ ಸುಮ್ಮನೆ ಕುಳಿತುಕೊಳ್ಳುವುದನ್ನು, ಧ್ಯಾನ ಮಾಡುವುದನ್ನು ಕಲಿಯಬೇಕಿರುತ್ತದೆ ಅಲ್ಲವೆ?

ಚಡಪಡಿಸುವುದನ್ನು ಹತ್ತಿಕ್ಕಿ ತಮ್ಮ ಗುರಿಯನ್ನು ನಿರ್ಧಾರವನ್ನು ಚಿಕ್ಕವಯಸ್ಸಿನಲ್ಲಿಯೇ ಮನಗಂಡು ಗೆದ್ದವರು ಬಹಳಷ್ಟು ಮಂದಿ ಇದ್ದಾರೆ ಈ ಪ್ರಪಂಚದೊಳಗೆ. ಅದರಲ್ಲಿ ದಂತಕತೆಯಾಗಿರುವ ನಮ್ಮ ಸಮಕಾಲೀನನಾಗಿರುವ ಸಚಿನ್ ತೆಂಡೂಲ್ಕರ್ ಒಂದು ಅದ್ಭುತ ಉದಾಹರಣೆ. ಚಿಕ್ಕ ವಯಸ್ಸಿನಲ್ಲಿಯೇ ಸಚಿನ್ ಬ್ಯಾಟ್ ಹಿಡಿದಿದ್ದ ಮತ್ತು ನಾವೂ ಹಿಡಿದಿದ್ದೆವು. ಸಚಿನ್ ಸ’ಚಿನ್ನʼನಾದ! ಆದರೆ ನಾವು? ನಾವು ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಲೇ, ಗೋಲಿ ಆಡಿದೆವು, ಲಗೋರಿ ಆಡಿದೆವು, ಕಣ್ಣಾಮುಚ್ಚಾಲೆ ಆಟ ಆಡಿದೆವು. ಎಲ್ಲದಕ್ಕಿಂತ ಮುಖ್ಯವಾಗಿ ಚೆನ್ನಾಗಿ ಓದಬೇಕೆಂದು ಕೂಡ ನಿರ್ಧರಿಸಿದ್ದೆವು. ಆಮೇಲಾಮೇಲೆ ಖೋಖೋ, ಕಬ್ಬಡಿ, ವಾಲಿಬಲ್, ಒಂದಷ್ಟು ಓದು, ಓಡಾಟ, ನಾಟಕ, ಸಿನಿಮಾ ಮತ್ತು ಇನ್ನೇನೋ ಎಂದೆಲ್ಲಾ ಮಾಡಿದೆವು. ಎಲ್ಲವೂ ಅಬ್ಬಾಬ್ಬ ಎಂದರೆ ತಾಲ್ಲೂಕು ಮಟ್ಟದಲ್ಲಿ, ಇಲ್ಲಾ ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡಿದೆವು. ಅದರಲ್ಲೊಂದು ಇದರಲ್ಲೊಂದು ಸಣ್ಣ ಪುಟ್ಟ ಪ್ರಶಸ್ತಿ ಗೆದ್ದು ಬೀಗಿದೆವು. ಅಷ್ಟೆ. ಆದರೆ, ಸಚಿನ್? ಆತ ಬ್ಯಾಟನ್ನು ಬಿಟ್ಟು ಬೇರೆ ಏನನ್ನೂ ಹಿಡಿಯಲಿಲ್ಲ. ಕ್ರಿಕೆಟ್ ಅದರಲ್ಲೂ ಬ್ಯಾಟಿಂಗೇ ತನ್ನ ಜೀವನವೆಂದು ಚಿಕ್ಕವಯಸ್ಸಿನಲ್ಲಿಯೇ ಮನಗಂಡ ಮತ್ತು ನಿರ್ಧರಿಸಿಕೊಂಡ. ಬೆಳಿಗ್ಗೆ ಎದ್ದಾಗಿನಿಂದಲೂ, ರಾತ್ರಿ ಮಲಗುವ ತನಕವೂ, ಕನಸಿನಲ್ಲಿಯೂ ಬ್ಯಾಂಟಿಂಗೇ ಆತನ ಜೀವನವಾಗಿತ್ತು, ಉಸಿರಾಗಿತ್ತು. ಕ್ರಿಕೇಟನ್ನೇ ಚಿಂತಿಸಿದ, ಯೋಚಿಸಿದ. ಅದರ ಫಲವೇ ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿ ಕೋಟ್ಯಂತರ ಹಣ ಗಳಿಸಿರುವುದರ ಜೊತೆಗೆ ಕ್ರಿಕೆಟ್‌ನ ದೈವವಾದ. ನೋಡನೋಡುತ್ತಲೇ ದಂತಕತೆಯಾದ. ಆತ ಅದನ್ನೂ ಮಾಡುತ್ತೇನೆ, ಇದನ್ನೂ ಮಾಡುತ್ತೇನೆ ಎಂದು ಚಡಪಡಿಸುತ್ತಾ ಇದ್ದಿದ್ದರೆ ಬಹುಷಃ ಇಂದು ಆತನ ಹೆಸರು ನಮಗೆ ಗೊತ್ತೇ ಆಗುತ್ತಿರಲಿಲ್ಲ. ‘ಮಾಸ್ಟರ್ ಆಫ್ ಆಲ್ ಇಸ್ ಮಾಸ್ಟರ್ ಆಫ್ ನನ್’ ಎಂದು ಇಂಗ್ಲೀಷಿನಲ್ಲಿ ಒಂದು ಮಾತಿದೆ. ನಾವು ಎಲ್ಲದರಲ್ಲೂ ಮಾಸ್ಟರ್ ಆಗುತ್ತೇವೆಂದು ಹೋಗಿ ಯಾವುದರಲ್ಲೂ ಕನಿಷ್ಟ ಹೆಸರನ್ನೂ ಮಾಡಲಿಲ್ಲ. ಆದರೆ, ಸಚಿನ್ ಕ್ರಿಕೆಟ್ ಒಂದರಲ್ಲಿಯೇ ಮಾಸ್ಟರ್ ಆಗುತ್ತೇನೆಂದು ನಿರ್ಧರಿಸಿ ಮಾಸ್ಟರ್ ಬ್ಲಾಸ್ಟರ್ ಆದ. 

ಒಂದು ಕ್ಷಣ ಫೇಸ್‌ಬುಕ್ ಇಲ್ಲದ ನಿಮ್ಮ ಜೀವನವನ್ನು ಕಲ್ಪಿಸಿಕೊಳ್ಳಿ! ಆಗಲ್ಲ ಅಲ್ವ? ಬಹಳ ಕಷ್ಟ ಇದೆ. ಅಂತಹ ಫೇಸ್‌ಬುಕ್ ನಿರ್ಮಾತೃ ಮಾರ್ಕ್ ಜುಕರ್‌ಬರ್ಗ್ ಕೂಡ ಒಮ್ಮೆ ಚಡಪಡಿಸಬಹುದಾಗಿದ್ದ ಸಂದರ್ಭ ಬಂದಿತ್ತು. ಅಂದು ಅವನು ದಿಟ್ಟ ನಿರ್ಧಾರವನ್ನು ತಳೆಯದಿದ್ದರೆ ಇಂದು ಬಹುಶಃ ಫೇಸ್‌ಬುಕ್ ಇರುತ್ತಿರಲಿಲ್ಲ. ಇದ್ದರೂ ಅವನದಾಗಿರುತ್ತಿರಲಿಲ್ಲವೇನೋ!? ಜಗತ್ತಿನ ಶ್ರೀಮಂತರಲ್ಲಿ ಅವನ ಹೆಸರೂ ಇಂದು ಇರುತ್ತಿರಲಿಲ್ಲವೇನೋ!?

1984ರ ಮೇ ತಿಂಗಳ ಹದಿನಾಲ್ಕನೇ ತಾರೀಖಿನಂದು ಜನಿಸಿದ ಜುಕರ್‌ಬರ್ಗ್ ಚಿಕ್ಕಂದಿನಿಂದಲೇ ಕಂಪ್ಯೂಟರ್ ಜೊತೆ ಒಡನಾಡುತ್ತಲೇ ಹಲವು ಪ್ರಯೋಗಗಳನ್ನು ಮಾಡುತ್ತಾ ಪ್ರೋಗ್ರಾಂ ಬರೆಯುತ್ತಿದ್ದ. ತನ್ನ ಹನ್ನೆರಡನೆಯ ವಯಸ್ಸಿನಲ್ಲಿಯೇ ಮೆಸೇಂಜರ್ ಒಂದನ್ನು ತಯಾರಿಸಿದ್ದ. 2002ರಲ್ಲಿ ಹಾರ್ವಡ್ ವಿವಿಯಲ್ಲಿ ಓದಲು ಸೇರುವ ಈತ ಫೇಸ್‌ಮ್ಯಾಶ್ ಎಂಬ ಆಪನ್ನು ಅಭಿವೃದ್ಧಿಪಡಿಸುತ್ತಾನೆ. ಕಾಲೇಜಿನ ಗೆಳೆಯರನ್ನು ಒಂದುಕಡೆ ಸೇರಿಸಲು ಸಿದ್ಧವಾದ ಇದನ್ನು ತದನಂತರ 2004ರಲ್ಲಿ ಫೇಸ್‌ಬುಕ್ ಎಂಬ ವೆಬ್‌ಪೇಜನ್ನಾಗಿಸಿ ಜಗತ್ತಿನ ಜನರೆಲ್ಲಾ ಇಲ್ಲಿ ಸೇರುತ್ತಾರೆ ಎಂಬ ಕನಸು ಕಂಡಿದ್ದ. ಮನುಷ್ಯನ ಸಾಮಾಜಿಕ ಒಡನಾಟದ ನಾಡಿ ಈತನಿಗೆ ಚೆನ್ನಾಗಿ ಅರ್ಥವಾಗಿತ್ತೆಂದೆನಿಸುತ್ತದೆ. ಆದರೆ, ಅವನ ಕನಸನ್ನು ನನಸಾಗಿಸಲು ಅವನೊಬ್ಬನಿಗೇ ಸಾಧ್ಯವಿರಲಿಲ್ಲ. ಮುಂದೊಂದು ದಿನ ಯಾರದರೂ ಈ ಕನಸು ಕಂಡು ನನಸಾಗಿಸಿಕೊಳ್ಳುತ್ತಾರೆ ಎಂದೇ ಭಾವಿಸಿದ್ದ. ಮುಂದೊಂದು ದಿನ ತಾನೇ ಒಂದು ಕಂಪನಿ ಕಟ್ಟಿ, ಹಲವು ಜನರನ್ನು ಮ್ಯಾನೇಜ್‌ಮೆಂಟಿಗೆ ಸೇರಿಸಿಕೊಂಡು ದಿನಕ್ರಮೇಣ ವೇಬ್‌ಪೇಜ್ ಫೇಸ್‌ಬುಕ್ ಎಂದೇ ಜನರನ್ನು ಸೂಜಿಗಲ್ಲಿನಂತೆ ಸೆಳೆದು 2007ನೇ ಇಸವಿಯಲ್ಲಿಯೇ ಈತ ಶತಕೋಟ್ಯಾಧಿಪತಿಯಾದ. ಆಗ ಫೇಸ್‌ಬುಕ್ಕನ್ನು ಇನ್ನೂ ಉತ್ತಮ ಬೆಲೆಗೆ ಕೊಳ್ಳಲು ಆಗ ದೈತ್ಯ ಕಂಪನಿಯಾಗಿದ್ದ ಯಾಹೂ ಮುಂದೆ ಬಂದರೂ ಈತ ಮಾರುವ ಮನಸ್ಸು ಮಾಡಲಿಲ್ಲ. ಈತನ ಗೆಳೆಯರು ಮಾರುವಂತೆ ಸಲಹೆ ನೀಡಿ, ಈತನ ಮೇಲೆ ಮುನಿಸಿಕೊಂಡಾಗಲೂ ಈತ ಏನು ಮಾಡುವುದೆಂದು ಚಡಪಡಿಸುವ ಗೋಜಿಗೆ ಹೋಗಲಿಲ್ಲ. ತಾನು ಕಂಡ ಕನಸಿನ ಆರಂಭವಷ್ಟೇ ಈಗಿನ್ನೂ ಆಗಿದೆ ಎಂದು ತನ್ನ ಕಂಪನಿಯನ್ನು ತನ್ನಲೇ ಉಳಿಸಿಕೊಂಡ. ತದನಂತರ ನಡೆದದ್ದೇಲ್ಲಾ ಅವನು ಅಂದುಕೊಂಡಂತೆಯೇ ಆಗಿದೆ. ಅವನ ಫೇಸ್‌ಬುಕ್ಕೇ ಈಗ ಜಗತ್ತಿನ ದೈತ್ಯ ಕಂಪನಿ. ಜೊತೆಗೆ ಫೇಸ್‌ಬುಕ್ ನಂತರ ಜನಪ್ರಿಯವಾದ ಇನ್ಸ್ಟಗ್ರಾಂ, ವಾಟ್ಸಪ್ ಕೂಡ ಈತನ ತೆಕ್ಕೆಯಲ್ಲಿವೆ. 

ನಿಮ್ಮ ಜೀವನವೇ ಒಂದು ಟಿವಿ ಎಂದುಕೊಳ್ಳಿ. ನಿಮ್ಮ ಮನಸ್ಸು ಅದರ ರಿಮೋಟ್. ಟಿವಿ ಛಾಲು ಆಗಿದೆ. ನೀವು ಏನಾಗಬೇಕೆಂದಿದ್ದಿರೋ ಆ ಛಾನೆಲ್ ತಿರುಗಿಸಿಕೊಂಡು ಬಿಡಿ. ಯಾವುದೇ ಕಾರಣಕ್ಕೂ ಛಾನೆಲ್ ಬದಲಾಗಬಾರದು. ಕೈಯಲ್ಲಿ ರಿಮೋಟ್ ಇದೆ ಎಂದು ಚಡಪಡಿಸಿದಿರೋ ಅಲ್ಲಿಗೆ ಮುಗಿಯಿತು. ನೀವು ಫಿನಿಶ್! ಚಡಪಡಿಸದೆ ನಿಮ್ಮ ಜೀವನದ ಗುರಿಯನ್ನು ನಿರ್ಧರಿಸಿಕೊಂಡು ನೀವು ಏನಾಗಬೇಕೆಂದು ಮುನ್ನೆಡೆಯಲು ನಿಮ್ಮ ಮನಸ್ಸನ್ನು ಗಟ್ಟಿ ಮಾಡಿಕೊಂಡಿರೋ ಅಲ್ಲಿಗೆ ನೀವು ಅರ್ಧ ಗೆದ್ದಂತೆಯೇ ಸರಿ. ನೀವು ಗೆಲ್ಲಬಲ್ಲಿರಿ. 

ಇತ್ತೀಚಿಗೆ ಸಚಿನ್ ಒಂದು ಮಾತು ಹೇಳಿದ. “ಕ್ರಿಕೆಟ್ ಹೊರತಾಗಿ ನನ್ನ ಆದ್ಯತೆಗಳು ಎಂದೂ ಬದಲಾಗಲಿಲ್ಲ. ಅದೇ ನನ್ನ ಬದುಕಿನ ಕೇಂದ್ರಬಿಂದುವಾಗಿತ್ತು”. ಆಲ್ಬರ್ಟ್ ಐನ್‌ಸ್ಟೀನ್ ರವರು ಒಂದು ಮಾತನ್ನು ಹೇಳಿದ್ದಾರೆೆ: “ಸಾಧನಗಳು ಪರಿಪೂರ್ಣವಾಗಿದ್ದು, ನಮ್ಮ ಗುರಿಯೇ ಗೊಂದಲದಲ್ಲಿ ಇರುವುದು ನಮ್ಮ ಮುಖ್ಯ ಸಮಸ್ಯೆಯಾಗಿದೆ.” ಆದಕಾರಣ, ನಿಮ್ಮೆಲ್ಲಾ ಗೊಂದಲಗಳನ್ನು ನಿವಾರಿಸಿಕೊಂಡು ನಿಮ್ಮ ಜೀವನದ ಆದ್ಯತೆ ಯಾವುದೆಂದು ನಿರ್ಧರಿಸಿಕೊಳ್ಳಿ. ಯೂ ಕೆನ್ ವಿನ್! ಯಾಕೆಂದರೆ ಕಾಲ ಇನ್ನೂ ಮಿಂಚಿಲ್ಲ.

“ಒಂದೇ ಗುರಿಯನ್ನು ಇಟ್ಟುಕೊಳ್ಳಿ. ಅದನ್ನೇ ಆಲೋಚಿಸಿ, ಅದರ ಬಗ್ಗೆಯೇ ಕನಸು ಕಾಣಿರಿ, ಅದನ್ನೇ ಬದುಕಿರಿ. ಯಶಸ್ಸು ಖಂಡಿತಾ ನಿಮ್ಮದಾಗುತ್ತದೆ” ಸ್ವಾಮಿ ವಿವೇಕಾನಂದರ ಈ ಮಾತುಗಳು ಅದೆಷ್ಟು ಅರ್ಥಪೂರ್ಣವಾಗಿವೆ ಅಲ್ಲವೇ?

- ಗುಬ್ಬಚ್ಚಿ ಸತೀಶ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗೋಮಿನಿ ಪ್ರಕಾಶನದಲ್ಲಿ ಪುಸ್ತಕ ಪ್ರಕಟವಾಗಲು ಪ್ರಮುಖ ನಿಬಂಧನೆಗಳು

ಗೋಮಿನಿ ಪ್ರಕಾಶನದಲ್ಲಿ ಪುಸ್ತಕ ಪ್ರಕಟವಾಗಲು ಪ್ರಮುಖ ನಿಬಂಧನೆಗಳು 1. ಪ್ರಕಾಶನವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಮೊದಲಿಗೆ ನೂರು ಪ್ರತಿಗಳನ್ನು...