ಶುಕ್ರವಾರ, ನವೆಂಬರ್ 2, 2012

“ಬಾಲ್ ಪೆನ್” ಸಿನಿಮಾದ ಗುಂಗಿನಲ್ಲಿ ಗುಬ್ಬಚ್ಚಿ ಕನ್ನಡಿಗ


ಶನಿವಾರವೇ ಗೆಳೆಯ ವಿಶುವಿನ ಮದುವೆಗೆ ಹೋಗಲಾಗುತ್ತಿಲ್ಲವಲ್ಲ ಎಂದು ಮನಸು ಬೇಸರದಿಂದ ಕೂಡಿತ್ತು. ಮದುವೆ ಎಂಬುದು ಬಹುತೇಕ ಜನರ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಘಟನೆ. ಎರಡು ಹೃದಯಗಳು ಕಾಯಾ ವಾಚಾ ಮನಸ ಹಿರಿಯರ, ಗೆಳೆಯರ ಸಮ್ಮುಖದಲ್ಲಿ ಸೇರುವ ಅಮೂಲ್ಯ ಕ್ಷಣ. ಅದರಲ್ಲೂ ಬಾಲ್ಯದ ಜೀವದ ಗೆಳೆಯರು ಸೇರಿದರೆಂದರೆ ಆ ಮದುವೆಯ ಖದರ್ರೇ ಬೇರೆ. ಅದೊಂದು ಮರೆಯಲಾರದ “ಆಟೋಗ್ರಾಫ್” ಆಗಿಬಿಡುತ್ತದೆ. ಇಷ್ಟೆಲ್ಲಾ ಕಾರಣಗಳಿದ್ದರೂ ಮದುವೆ ಉಡುಪಿಯಲ್ಲಿ ಎಂಬ ಒಂದೇ ಕಾರಣ ನಾನು ಮದುವೆಗೆ ಹೋಗಲಾಗುವುದಿಲ್ಲ ಎಂದು ಕಡೇ ಘಳಿಗೆಯಲ್ಲಿ ನಿರ್ಧಾರ ತಳೆಯಲು ಸಾಕಿತ್ತು. ಅಲ್ಲಿಗೆ ಮನಸ್ಸು ಮುದುಡಿತ್ತು ಮತ್ತು ಭಾನುವಾರವೆಲ್ಲಾ ಮದುವೆಯ ಗುಂಗಿನಲ್ಲೇ ಬೇಸರದಿಂದ ಕಳೆಯುವುದೆಂದು ಮನಸ್ಸು ತೆಪ್ಪಗಿತ್ತು.

ಯಾರಾದರೂ ಗೆಳೆಯರ ಫೋನ್ ಬಂದರೆ ಮನಸ್ಸಿಗೆ ಸ್ವಲ್ಪ ಹಿತವಾಗಬಹುದೆಂದು ಅಂದುಕೊಳ್ಳುತ್ತಿದ್ದ ಸಮಯಕ್ಕೆ ಸರಿಯಾಗಿ ಆತ್ಮೀಯರಾದ ಶಿವು ಕೆ. “ವೆಂಡರ್ ಕಣ್ಣು” ಅವರ ಫೋನ್ ಬಂತು. ಹಾಯ್ ಸರ್, ಹಲೋ ಸರ್ ಮುಗಿದ ಮೇಲೆ, ನೀವು ನಾಳೆ ಬೆಂಗಳೂರಿಗೆ ಬಂದರೆ ಒಂದು ಒಳ್ಳೆಯ ಸಿನಿಮಾ ನೋಡಬಹುದು ನೋಡಿ. ಸ್ವಲ್ಪ ಟೈಮ್ ಮಾಡಿಕೊಳ್ಳಿ. ನೀವು ಬಂದರೆ ಇಲ್ಲಿ ಹಲವರಿಗೆ ಸರ್‌ಪ್ರೈಸ್ ಕೊಡೋಣ ಎಂದು ಹೇಳಿದರು. ನನಗೆ ಇಲ್ಲವೆನ್ನಲಾಗಲಿಲ್ಲ. ಆಗಲೇ ಅವರು ಹೇಳಿದ್ದು ಕನ್ನಡದಲ್ಲಿ ಅಪರೂಪವೆನ್ನಿಸಬಹುದಾದ ಒಂದು ಸಿನಿಮಾ ಮಾಡಿದ್ದಾರೆ “ಬಾಲ್ ಪೆನ್” ಅಂತಾ. ಸಿನಿಮಾದಲ್ಲಿ ಆಸಕ್ತಿಯಿರುವವರು ಖಂಡಿತಾ ನೋಡಲೇ ಬೇಕಾದ ಸಿನಿಮಾ ಎಂದು ಹೇಳಿದರು. ನಾನು ಅವರ ಬಳಿ ಮಾತನಾಡುತ್ತಲೇ ಒಂದಷ್ಟು ತಿಂಗಳುಗಳ ಕಾಲ ಹಿಂದಕ್ಕೆ ಜಾರಿದ್ದೆ.

ತುಮಕೂರಿನಲ್ಲಿ ನನ್ನ ಮಾರ್ಗದರ್ಶಿಗಳಲ್ಲೊಬ್ಬರಾದ ಪ್ರಕಾಶ್ ಸರ್ (ಸಿದ್ಧಾರ್ಥ ಮೀಡಿಯಾ ಕಾಲೇಜಿನಲ್ಲಿ ಪ್ರೊಫೆಸರ್) ಹಿಂದೊಮ್ಮೆ “ಬಾಲ್ ಪೆನ್” ಎಂಬ ಮಕ್ಕಳ ಸಿನಿಮಾ ಬರುತ್ತಿದ್ದು, ಸಿನಿಮಾದ ಬಗ್ಗೆ ಕುತೂಹಲವಿದೆ ಎಂದಿದ್ದರು. ಆ ಸಿನಿಮಾ ಮೊನ್ನೆ ತೆರೆಕಂಡಾಗ ಎಂದಿನಂತೆ ನ್ಯೂಸ್ ಪೇಪರಿನ ಜಾಹೀರಾತಿನಲ್ಲಿ ಈ ಸಿನಿಮಾ ತುಮಕೂರಿನಲ್ಲಿ ಇಲ್ಲವಲ್ಲ ಎಂದು ನೊಂದು ಕೊಂಡಿದ್ದೆ. ನನ್ನದೊಂದು ಅಭ್ಯಾಸವಿದೆ. ಯಾರಾದರೂ ಸಿನಿಮಾದ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯ ಹೇಳಿದರೆಂದರೆ ಮುಗಿಯಿತು. ಏನಾದರು ಮಾಡಿ ಆ ಸಿನಿಮಾ ನೋಡಿಬಿಡಬೇಕು. ಒಂದಷ್ಟು ಪ್ರೇರಣೆ ಪಡೆದು ಬಿಡಬೇಕು.

ಅಲ್ಲಿಗೆ ಭಾನುವಾರ ಮಾರ್ನಿಂಗ್ ಷೋ “ಬಾಲ್ ಪೆನ್” ಗೆ ಹೋಗುವುದೆಂದು ತೀರ್ಮಾನವಾಯಿತು. ಸ್ವಲ್ಪ ಹೊತ್ತಿನ ನಂತರ ಮತ್ತೆ ಬಂದ ಶಿವುರವರ ಫೋನ್ ನನ್ನ ಬರುವಿಕೆಯನ್ನು ಖಚಿತಪಡಿಸಿಕೊಂಡಿತು.

ರಜಾದಿನಗಳಲ್ಲಿ ಓದುವುದೊಂದನ್ನು ಬಿಟ್ಟು, ಉಳಿದಕ್ಕೆಲ್ಲಾ ಸೋಂಬೇರಿಯಾಗುವ ನಾನು ೪ ಘಂಟೆಗೆ ಅಲಾರಂ ಹೊಡೆದರೂ, ಅದನ್ನು ಆಫ್ ಮಾಡಿ ೬ಕ್ಕೆ ಗಡಿಬಿಡಿಯಲ್ಲೇ ಎದ್ದೆ. ೭.೨೦ಕ್ಕೆ ರೈಲು. ಒಂದೇ ಉಸಿರಿಗೆ ಸ್ನಾನ ಮುಗಿಸಿ ಸ್ಟೇಷನ್ನಿಗೆ ದೌಡಾಯಿಸಿದೆ. ಸರಿಯಾದ ಸಮಯಕ್ಕೆ ರೈಲು ಬಂತು. ಹತ್ತಿ ಕೂತವನು ಉದಯವಾಣಿಯ “ಸಾಪ್ತಾಹಿಕ ಸಂಪದ” ದಲ್ಲಿ ಮೊದಲಿಗೆ ಪುರುಷೋತ್ತಮ ಬಿಳಿಮಲೆಯವರ “ಹಲವು ಮಹಾಭಾರತಗಳ ಕತೆ” ಲೇಖನವನ್ನು ಓದಿದೆ. (ಪ್ರತಿಯೊಬ್ಬರು ಓದಲೇಬೇಕಾದ ಲೇಖನವಿದು. ಅದಕ್ಕೆ ಇಲ್ಲಿ ಪ್ರಸ್ತಾಪಿಸಿದ್ದೇನೆ) ನಂತರ, ನೆಚ್ಚಿನ “ಬದುಕ ಬದಲಿಸಬಹುದು”, ವಾರದ ಕಥೆ, ಜೋಗಿಯವರ ಮಾಯಾಕನ್ನಡಿ ಓದುವ ಹೊತ್ತಿಗೆ ಯಶವಂತಪುರ ಬಂದಿತ್ತು. ನಂತರ ಶಿವುರವರು ಹೇಳಿದಂತೆ ಮಲ್ಲೇಶ್ವರಂನಲ್ಲಿ ಇಳಿದು ಅವರನ್ನು ಭೇಟಿ ಮಾಡಿ, ಇಬ್ಬರು ಒಟ್ಟಿಗೆ ತಿಂಡಿ ಮುಗಿಸಿ ಕೈಲಾಷ್ ಚಿತ್ರಮಂದಿರದ ಬಳಿಗೆ ಅವರ ಸ್ಕೂಟಿಯಲ್ಲಿ ಹೊರಟೆವು.

ಅದಾಗಲೇ ನಮ್ಮ ಪ್ರಕಾಶನದ ಪುಸ್ತಕಗಳ ಬಿಡುಗಡೆಯ ಸಮಯದಲ್ಲಿ ಪರಿಚಯವಾಗಿದ್ದ ಶ್ರೀಮತಿ ಜ್ಯೋತಿ ಬಸುರವರು ಮತ್ತವರ ಗುಂಪು ನಮ್ಮ ಆಗಮನವನ್ನು ನಿರೀಕ್ಷಿಸಿತ್ತು. ನಮಗಾಗಿ ಟಿಕೇಟನ್ನೂ ಕಾದಿರಿಸಲಾಗಿತ್ತು. ನಾನು ತುಮಕೂರಿನಿಂದ ಹೋದದ್ದು ಶಿವುರವರು ಹೇಳಿದಂತೆ ಅವರನ್ನು ಆಶ್ಚರ್ಯವಚಕಿತರನ್ನಾಗಿಸಿತ್ತು. ಎಲ್ಲಾ ಗೆಳೆಯರನ್ನೂ ಮಾತನಾಡಿಸುವ ಸಮಯಕ್ಕೆ ಸಿನಿಮಾದ ಸಮಯವೂ ಆಯಿತು.

***

ತದೇಕಚಿತ್ತದಿಂದ ಸಿನಿಮಾ ನೋಡಿದೆ. “ಬಾಲ್ ಪೆನ್” ಸಿನಮಾದಲ್ಲಿ ಮೊದಲು ಮನಸೆಳೆದದ್ದು ಬಾಲಕರ ಮುಗ್ಧ ಅಭಿನಯ. ಕೇಶವ, ಕೆಂಪ, ಬಾಲ... ರೀಟಾ, ಕಡೆಗೆ ಶಿವಯ್ಯ.

“ಬಾಲ್ ಪೆನ್” ಸಿನಿಮಾದ ಕಥೆಯನ್ನು ನಟ ಶ್ರೀನಗರಕಿಟ್ಟಿಯವರ ಗೆಳೆಯರಾದ ಮಂಜುನಾಥರವರು ಬರೆದಿರುತ್ತಾರೆ. ಕಥೆಯಾಗಿಯೂ ಇದೊಂದು ಉತ್ತಮ ಕಥೆಯಾಗಿದೆ. ಹೇಳಬೇಕೆಂದರೆ ಈ ಸಿನಿಮಾದ ನಿಜವಾದ ಹೀರೊ ಕಥೆಯೇ! ಕಥೆಗೆ ತಕ್ಕಂತೆ ಚಿತ್ರಕಥೆ, ಸಂಭಾಷಣೆ ಬರೆದು ಶಶಿಕಾಂತ್ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿರುತ್ತಾರೆ. ಪ್ರತಿಯೊಂದು ದೃಶ್ಯದಲ್ಲೂ ನಿರ್ದೇಶಕರ ಜಾಣ್ಮೆ ಎದ್ದು ತೋರುತ್ತದೆ. ಇದಕ್ಕೆ ಪೂರಕವಾಗಿ ರಾಜ್‌ಕುಮಾರ್‌ರವರ ಛಾಯಾಗ್ರಹಣ. ಇವರೆಲ್ಲರ ಕೆಲಸ ನಮ್ಮ ಕಣ್ಮುಂದೆ ಮೂಡುತ್ತಿದ್ದರೆ ಅದಕ್ಕೆ ಸರಿಸಾಟಿಯಾಗಿ ನಮ್ಮ ಕಿವಿಗಳಿಗೆ ಮಣಿಕಾಂತ್ ಕದ್ರಿಯವರ ಇಂಪಾದ ಸಂಗೀತವಿದೆ. ನಾನಂತೂ ಈ ಹಿನ್ನೆಲೆ ಸಂಗೀತವನ್ನು ಒಂದು ಉತ್ತಮ ಸಂಗೀತ ಕಛೇರಿಯೆಂದೇ ಕರೆಯಲು ಇಚ್ಚಿಸುತ್ತೇನೆ. ಆಗಾಗ ಸಿನಿಮಾಗೆ ಹೊಂದಿಕೊಂಡಂತೆ ಒಳ್ಳೆಯ ಸಾಹಿತ್ಯವಿರುವ ಹಾಡುಗಳಿವೆ. ಸರಳವಾಗಿ, ಸುಂದರವಾಗಿ ಒಂದು ಸಿನಿಮಾಗೆ ಉತ್ತಮ ಉದಾಹರಣೆ “ಬಾಲ್ ಪೆನ್”. ಒಟ್ಟಿನಲ್ಲಿ ಸಿನಿಮಾದ ಟೀಂ ವರ್ಕ್ ಗೆದ್ದಿದೆ.

ಸಿನಿಮಾದ ಕಥೆ ಹೇಳುವ ಉದ್ದೇಶ ನನಗಿಲ್ಲ. ಸಿನಿಮಾ ಅನಾಥ ಆಶ್ರಮದಲ್ಲಿ ಶುರುವಾಗಿ ಹಲವು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಕ್ತಾಯವಾಗುತ್ತದೆ. ಬಹುಮುಖ್ಯವಾಗಿ ಸಮಾಜದ ಕೆಲವು ಮೌಢ್ಯಗಳ ಮೇಲೂ ಬೆಳಕು ಚೆಲ್ಲಿದೆ. ಇದೆಲ್ಲಾ ಮಕ್ಕಳ ಮೂಲಕ ಹೇಳಲ್ಪಟ್ಟರೂ ಇದು ಸಂಪೂರ್ಣ ಮಕ್ಕಳ ಸಿನಿಮಾವಲ್ಲ. ಸಿನಿಮಾದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುವ ಹಿರಿಯರೂ ಇದ್ದಾರೆ. ಮತ್ತು ಇದೂ ಹಿರಿಯರೂ ತಪ್ಪದೆ ನೋಡಲೇ ಬೇಕಾದ ಸಿನಿಮಾ. ಇಲ್ಲಿ “ಬಾಲ್ ಪೆನ್” ಒಂದು ರೂಪಕವಾಗಿ “pen is mightier than sword” ಎಂಬುದನ್ನು ನಿರೂಪಿಸಿದೆ.

ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಸಿನಿಮಾ ಕುರಿತು ನನ್ನ ಗಮನ ಸೆಳೆಯುವುದಕ್ಕೆ ಮೊದಲ ಕಾರಣ ಆಧುನಿಕತೆಗೆ ತಕ್ಕಂತೆ ಸಿನಿಮಾಗೆ “ಬಾಲ್ ಪೆನ್” ಎಂದು ಹೆಸರಿಟ್ಟಿರುವುದು. ನನ್ನ ಕುತೂಹಲವನ್ನು ಸಿನಿಮಾ ಎಳ್ಳಷ್ಟೂ ಹುಸಿಯಾಗಿಸಿಲ್ಲ. ಸಿನಿಮಾ ಕುರಿತು ಆಸಕ್ತಿ (ಸಿನಿಮಾ ವಿದ್ಯಾರ್ಥಿಗಳು) ಇರುವವರೆಲ್ಲ ಮರೆಯದೆ ಈ ಸಿನಿಮಾ ನೋಡಿ. ನಿಮಗೆ ಕಲಿಯುವುದಕ್ಕೆ ಹಲವು ಸಾಧ್ಯತೆಗಳಿವೆ. ಮರೆಯಬೇಡಿ, ಮರೆತು ನಿರಾಶರಾಗದಿರಿ.

***

ಇದೇನಿದು ಇಷ್ಟೇನಾ ಎಂದು ರಾಗ ಎಳೆಯಬೇಡಿ. “ಬಾಲ್ ಪೆನ್” ಸಿನಿಮಾ ಕುರಿತು ಬರೆಯುವುದಕ್ಕಿಂತ ಸಿನಿಮಾ ನೋಡಿದ ಸಾಧ್ಯೆತೆಯ ಬಗ್ಗೆಯೇ ಹೆಚ್ಚು ಬರೆಯಲು ಕಾರಣಗಳಿವೆ. ಮೊದಲನೇ ಕಾರಣವೆಂದರೆ, ಕಥೆಯನ್ನು ನಾನೇ ಹೇಳಿಬಿಟ್ಟರೆ, ನೀವು ಇನ್ನೇನು ಸಿನಿಮಾ ನೋಡೋದು ಬಿಡು ಎಂಬ ಭಾವನೆ ತಾಳದಿರಲೆಂದು. ಜೊತೆಗೆ ಸಿನಿಮಾದ ಬಗ್ಗೆ ನಿಮ್ಮ ಕುತೂಹಲವಿರಲಿ ಎಂದು. ಮತ್ತೊಂದು ಕಾರಣ, ಒಂದು ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಅದನ್ನು ತಮ್ಮ ಗೆಳೆಯರಿಗೂ ತೋರಿಸಿ ಒಂದು ಕನ್ನಡ ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಯತ್ನಿಸಿದ ಗೆಳೆಯರ ಕುರಿತು ಹೇಳಲೆಂದು. ಈ ಸಿನಿಮಾ ಬಿಡುಗಡೆಯಾದ ದಿನ (ನನಗೆ ದೊರೆತ ಮಾಹಿತಿಯಂತೆ ಎಲ್ಲಾ ಉತ್ತಮ ಸಿನಿಮಾಗಳಂತೆ ಈ ಸಿನಿಮಾವೂ ಬೆಂಗಳೂರಿನಲ್ಲಿ ಬಿಡುಗಡೆಯಾಗಲು ಬಹಳ ಕಷ್ಟಪಟ್ಟಿದೆ) ನನ್ನ ಸ್ನೇಹಿತರಾದ ಶ್ರೀಮತಿ ಜ್ಯೋತಿ ಬಸು, ಸತೀಶ್ ಕನ್ನಡಿಗ, ಶಿವು ಕೆ. ಇವರನ್ನೊಳಗೊಂಡ ಸುಮಾರು ೬೦ ಜನರ ತಂಡವೊಂದು ಒಟ್ಟಾಗಿ ಸಿನಿಮಾ ನೋಡಿದೆ. ನಂತರ ಭಾನುವಾರ ಮತ್ತೊಮ್ಮೆ ನನ್ನನ್ನೂ ಒಳಗೊಡಂತೆ ಹಲವು ಗೆಳೆಯರಿಗೆ ಸಿನಿಮಾ ಕುರಿತು ಮಾಹಿತಿಯನ್ನು ನೀಡಿ, ಸಿನಿಮಾವನ್ನು ನೋಡಲು ಸಹಕರಿಸಿದೆ. ಇದೊಂತರ, ನಮ್ಮ ಹುಟ್ಟಿದ ಹಬ್ಬವನ್ನು ನಮ್ಮ ಗೆಳೆಯರೊಂದಿಗೆ ಸಿಹಿಹಂಚಿ ಸಂಭ್ರಮಿಸುವುದೇ ಆಗಿದೆ. ನಾನಿಲ್ಲಿ ಹುಟ್ಟುಹಬ್ಬವನ್ನು ಏತಕ್ಕೆ ಉದಾಹರಣೆಯಾಗಿ ಕೊಟ್ಟೆನೆಂದರೆ, ಸಿನಿಮಾದಲ್ಲಿ ‘ತಿಂಡಿಪೋತ’ ಬಾಲ, ತನ್ನ ಗೆಳೆಯ ‘ಮಾಹಿತಿ ಕಣಜ’ ಕೇಶವನಿಗೆ, ‘ನಿನಗೆ ಎಲ್ಲರ ಜನ್ಮದಿನ ಗೊತ್ತು, ಅನಾಥರ ಹುಟ್ಟುಹಬ್ಬ ಯಾವತ್ತು ಅಂಥಾ ಗೊತ್ತೆನೋ” ಎಂಬರ್ಥದ ಮಾತುಗಳನ್ನಾಡುತ್ತಾನೆ. ಅದಕ್ಕೆ ಕೇಶವ, ‘ಅದು ಆಗಸ್ಟ್ ೨೬. ನಮ್ಮಮ್ಮ ಮದರ್ ಥೆರೆಸಾ ಜನ್ಮದಿನ’ ಎಂದೇಳುತ್ತಾ ಸಮಾಧಾನ ಮಾಡುತ್ತಾನೆ. ಅಲ್ಲಿಗೆ ನೀವೂ ನಿಮ್ಮ ಗೆಳೆಯರೊಂದಿಗೆ ಸಿನಿಮಾವನ್ನು ನೋಡುತ್ತೀರಾ ಎಂದಾಯಿತು. ಸಿಹಿಯನ್ನು ಗೆಳೆಯರೊಂದಿಗೆ ಹಂಚಿ ತಿಂದರೆ ಆ ಮಜಾನೆ ಬೇರೆ. ಅಲ್ಲವೇ?

***

ಸಿನಿಮಾ ಮುಗಿಯುವ ಹೊತ್ತಿಗೆ ಸರಿಯಾಗಿ ನಿರ್ದೇಶಕರಾದ ಶಶಿಕಾಂತ್ ಬಂದಿದ್ದರು. ಅವರ ಜೊತೆ ನಮ್ಮೆಲ್ಲರ ಫೋಟೋಶೂಟ್ ನಡೆಯಿತು. ಒಂದಷ್ಟು ಮಾತು, ಜೊತೆಗೆ ನಿರ್ದೇಶಕರೇ ಪ್ರೀತಿಯಿಂದ ಕುಡಿಸಿದ ಕಾಫೀ (ಉಳಿದವರೆಲ್ಲ ಜ್ಯೂಸ್) ಮತ್ತು ಒಂದಷ್ಟು ಸಿನಿಮಾ ನಿರ್ಮಾಣದ ಬಗ್ಗೆ ಮಾಹಿತಿ. ನನ್ನ “ಮುಗುಳ್ನಗೆ” ಪುಸ್ತಕವನ್ನು ಪ್ರೀತಿಯಿಂದ ನಿರ್ದೇಶಕರಿಗೆ ಕೊಟ್ಟು ನನ್ನ ಆಸಕ್ತಿಯನ್ನು ಅವರಿಗೆ ಹೇಳಿದೆ. ನಂತರ ಎಲ್ಲಾ ಗೆಳೆಯರಿಗೆ ಪ್ರೀತಿಯ ವಿದಾಯ.

ಸಿನಿಮಾ ನೋಡುವ ನೆಪದಲ್ಲಿ ನನ್ನ ಇನ್ನೊಂದು ಬಹುಕಾಲದ ಬಯಕೆ ನೆರವೇರಿತು. (ನೀವು ಬಸುರಿಯ ಬಯಕೆಯೇ ಎಂದು ಕೇಳಿದರೂ ತಪ್ಪಿಲ್ಲ. ನನ್ನ ಹೊಟ್ಟೆಯೂ ತುಂಬಾ ತುಂಬಾ ದಪ್ಪವಾಗಿದೆ) ಅದು ಬೆಂಗಳೂರಿನ “ಮಾದಪ್ಪನ ಮೆಸ್” ಮುದ್ದೆ ಊಟ. ಶಿವು ಸರ್ ನನ್ನ ಬಹುಕಾಲದ ಬಯಕೆ ಈಡೇರಲು ಕಾರಣವಾದರು. ಊಟವಾದ ನಂತರ ನಾವಿಬ್ಬರು ಪರಸ್ಪರ ವಿದಾಯ ಹೇಳಿದೆವು. ಗೆಳೆಯರೆಲ್ಲರ ಪ್ರೀತಿಯನ್ನು ಕೃತಜ್ಞತೆಯಿಂದ ನೆನೆಯುತ್ತಾ ನಾನು ಸಂಜೆಗೆ ತುಮಕೂರಿಗೆ ವಾಪಸ್ಸಾದರೂ, ನನ್ನ ಮನಸ್ಸು “ಬಾಲ್ ಪೆನ್” ಗುಂಗಿನಲ್ಲಿಯೇ ಇದೆ.

ಅಂದ ಹಾಗೆ, ದಿನಾ ದಿನಾ ಆಚರಿಸಬೇಕಾದ ಕನ್ನಡಮ್ಮನ ಹಬ್ಬವನ್ನು ನವೆಂಬರ್ ತಿಂಗಳು ಪೂರ್ತಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ನೀವು ಒಂದರ್ಧ ದಿನ “ಬಾಲ್ ಪೆನ್” ಸಿನಿಮಾ ನೋಡುವುದರ ಮೂಲಕ ಅರ್ಥಪೂರ್ಣಗಾಗಿ ಆಚರಿಸಿಬಿಡಿ.

ಪ್ರೀತಿಯಿಂದ,
ಗುಬ್ಬಚ್ಚಿ ಕನ್ನಡಿಗ.





3 ಕಾಮೆಂಟ್‌ಗಳು:

  1. ಈಂತಹ ಸಿನಿಮಾಗಳು ಮಾತ್ರ ನಾಲ್ಕು ಕಾಲ ನಿಲ್ಲ ಬಲ್ಲವು. ನಿರ್ದೇಶಕರ ನೈಪುಣ್ಯತೆ ನನಗೆ ಇಷ್ಟವಾಯಿತು. ಅಂತೆಯೇ ಛಾಯಾಗ್ರಾಹಣವೂ ಸಹ.

    ಬಾಲ್ ಮೆನ್ ಚಿತ್ರವು ಅತ್ಯ್ತ್ತಮ ಮಕ್ಕಳ ಚಿತ್ರವೆಂದು ರಾಜ್ಯ - ರಾಷ್ಟ್ರ ಪ್ರಶಸ್ತಿಗಳನ್ನು ಗೆಲ್ಲಲಿ.

    ಉತ್ತಮ ಚಿತ್ರವನ್ನು ಬರಹವಾಗಿಸಿದೆ ನೀವೇ ಮಾನ್ಯರು.

    ಪ್ರತ್ಯುತ್ತರಅಳಿಸಿ
  2. ಗುಬ್ಬಚ್ಚಿ ಸತೀಶ್ ಸರ್,
    ಅವತ್ತು ಅರ್ಧ ದಿನ ಕಳೆದಿದ್ದೇ ಗೊತ್ತಾಗಲಿಲ್ಲ. ಅದೊಂಥರ ಅದ್ಬುತವಾದ ಪಿಕ್‍ನಿಕ್ ಅನುಭವದ ರೀತಿ. ಮೈ ಮನಸ್ಸಿ ಉಲ್ಲಾಸ ಉಂಟಾಗಿತ್ತು.
    ನೀವು ನಮ್ಮ ಜೊತೆಯಲ್ಲಿದ್ದುದ್ದು ಕೂಡ ನಮಗೆ ತುಂಬಾ ಸಂತೋಷವಾಗಿತ್ತು.

    ಪ್ರತ್ಯುತ್ತರಅಳಿಸಿ
  3. ಜ್ಯೋತಿ ಬಸು ಅವರು ಕರೆದಾಗ ಹೋಗಬಾರದಿತ್ತೇ ಅನ್ನಿಸುತ್ತಿದೆ... ಎಲ್ಲರೂ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ಕೊಡುತ್ತಿದ್ದಾರೆ...ಖಂಡಿತ ವೀಕ್ಷಿಸುತ್ತೇನೆ.

    ಪ್ರತ್ಯುತ್ತರಅಳಿಸಿ

ಅಮೇಜಾನ್‌ "ಗ್ರೇಟ್‌ ಸಮ್ಮರ್‌ ಸೇಲ್"‌

ಸ್ನೇಹಿತರೇ, ಇಂದಿನಿಂದ ಅಮೇಜಾನ್‌ "ಗ್ರೇಟ್‌ ಸಮ್ಮರ್‌ ಸೇಲ್"‌ ಶುರುವಾಗಿದ್ದು, ನಿಮಗೆ ಅಗತ್ಯವಿರುವ ವಸ್ತುಗಳನ್ನು ಹೆಚ್ಚಿನ ರಿಯಾಯಿತಿಯಲ್ಲಿ ಕೊಳ್ಳಲು ಸದಾವ...