ಗುರುವಾರ, ಸೆಪ್ಟೆಂಬರ್ 19, 2024

ಡಾ|| ರಾಜಕುಮಾರ್‌ರವರ ವೃತ್ತಿಪರತೆ

 ಡಾ|| ರಾಜಕುಮಾರ್‌ರವರ ವೃತ್ತಿಪರತೆ


“ಡಾ|| ರಾಜಕುಮಾರ್‌ರವರನ್ನು ನಾನು ‘ಬಂಗಾರದ ಮನುಷ್ಯ’

      ಎನ್ನುವ ಬದಲು ‘ಬೆವರಿನ ಮನುಷ್ಯ’ ಎನ್ನುತ್ತೇನೆ” 

– ಡಾ|| ಬರಗೂರು ರಾಮಚಂದ್ರಪ್ಪ.

ನಾವು ಯಾವುದೇ ಕೆಲಸ ಮಾಡಿದರೂ, ಅದು ಹೊಟ್ಟೆಪಾಡಿಗಿರಲಿ ಅಥವಾ ಹವ್ಯಾಸವಾಗಿರಲಿ ಆ ಕೆಲಸದಲ್ಲಿ ತಲ್ಲೀನರಾಗಬೇಕು. ತಲ್ಲೀನತೆಯೆಂದರೆ ನಮ್ಮ ತನು ಮತ್ತು ಮನವನ್ನು ನಾವು ಮಾಡುವ ಕೆಲಸದಲ್ಲೇ ತೊಡಗಿಸಿಕೊಳ್ಳುವುದು. ಅಂದರೆ, ನಾವು ಮಾಡುವ ಕೆಲಸದಲ್ಲಿ ವೃತ್ತಿಪರರಾಗಿರುವುದು. ನೀವು ಕೆಲಸವೆನ್ನಿರಿ, ವೃತ್ತಿಯೆನ್ನಿರಿ ಅಥವಾ ಕಸುಬು ಎನ್ನಿರಿ ಅದರಲ್ಲಿ ಪ್ರೊಫೆಷನಲ್ ಆಗುವುದು. ಜೊತೆಗೆ ನಮ್ಮ ಕಸುಬುದಾರಿಕೆಯನ್ನು ತೋರಿಸುವುದು ತುಂಬಾ ಮುಖ್ಯ. ನೀವು ಕೇಳಿರಬಹುದು, “ಏ... ಅವನು ತುಂಬಾ ಪ್ರೊಫೆಷನಲ್” ಎಂದು ಮಾತನಾಡುವುದನ್ನು. ಆ ಪ್ರೊಫೆಷನಲ್ಲಿಸಂ ಕುರಿತೇ ನಾನಿಲ್ಲಿ ಹೇಳ ಹೊರಟಿರುವುದು.‌


ನೀವು ನಿಮ್ಮ ಪುಸ್ತಕವನ್ನು ಪ್ರೊಫೆಷನಲ್‌ ಆಗಿ ಪ್ರಕಟಿಸಬೇಕೆ?


ನನಗೆ ಪ್ರೊಫೆಷನಲಿಸಂ ಅಥವಾ ವೃತ್ತಿಪರತೆಯೆಂದರೆ ಯಾವಾಗಲು ನೆನಪಿಗೆ ಬರುವುದು ಡಾ|| ರಾಜಕುಮಾರ್! ಹೌದು, ಕನ್ನಡ ಚಿತ್ರರಂಗದ ನಟಸಾರ್ವಭೌಮ ರಾಜಣ್ಣ. ಮೂರನೇ ತರಗತಿಯನ್ನೂ ಮುಗಿಸದ ಬಾಲಕನೊಬ್ಬ ತನ್ನ ಕಲೆಯಿಂದಲೇ ದಂತಕತೆಯಾಗುವಷ್ಟು ಬೆಳೆದು ಬಿಡುತ್ತಾನೆಂದರೆ ಅದು ಒಂದು ಆಶ್ಚರ್ಯದ ಸಂಗತಿಯೇ ಸರಿ. ಇದಕ್ಕೆ ಕಾರಣ ಆ ಬಾಲಕ ತನ್ನ ಕಲೆಯನ್ನು, ಪ್ರತಿಭೆಯನ್ನು ತನ್ನ ವೃತ್ತಿ, ತನ್ನ ಹೊಟ್ಟೆಪಾಡು ಎಂದು ಭಾವಿಸಿ ಆ ಕೆಲಸದಲ್ಲೇ ತನ್ನ ಜೀವಮಾನವನ್ನೇ ತೊಡಗಿಸಿಕೊಂಡದ್ದರ ಫಲ. ಮೊದಲಿಗೆ ರಂಗಭೂಮಿ, ನಂತರ ಚಲನಚಿತ್ರ, ಆ ನಂತರ ಗಾಯಕನಾಗಿ, ಡಾ|| ರಾಜಕುಮಾರ್ ಅನಭಿಷಕ್ತ ದೊರೆಯಾದರೆೆಂದರೆ ಅದಕ್ಕೆ ಕಾರಣ ಅವರು ತಮ್ಮ ಕೆಲಸದಲ್ಲಿ ತೋರಿದ ವೃತ್ತಿಪರತೆ. 


ಅದು ‘ಮಂತ್ರಾಲಯ ಮಹಾತ್ಮೆ’ ಚಿತ್ರಕ್ಕೆ ಡಾ|| ರಾಜಕುಮಾರ್‌ರವರನ್ನು ರಾಘವೇಂದ್ರ ಸ್ವಾಮಿಯ ಪಾತ್ರ ಮಾಡಲು ಆಯ್ಕೆ ಮಾಡಿದ ಸಂದರ್ಭ. ಕೆಲವರು ಇವರನ್ನು ರಾಘವೇಂದ್ರ ಸ್ವಾಮಿಯ ಪಾತ್ರ ಮಾಡಲು ಆಯ್ಕೆಮಾಡಿದಕ್ಕೆ ಬೇಸರಗೊಂಡು ಇವರ ಅರ್ಹತೆಯನ್ನು ಪ್ರಶ್ನಿಸಿ ಟೀಕಿಸುತ್ತಾರೆ. ಆಗ ರಾಜಕುಮಾರ್ ತಮ್ಮ ಪ್ರತಿಭೆಯಿಂದಲೇ ಅವರಿಗೆಲ್ಲಾ ಉತ್ತರ ಕೊಡುತ್ತಾರೆ. ಚಿತ್ರದ ಆರಂಭ ಕಾಲದಿಂದಲೂ ಮುಗಿಯುವವರೆಗೂ ತಮ್ಮ ಇಷ್ಟದ ಮಾಂಸಾಹಾರವನ್ನು ತ್ಯಜಿಸುತ್ತಾರೆ. ಕಾಲಿಗೆ ಚಪ್ಪಲಿ ಹಾಕುವುದನ್ನು ಬಿಡುತ್ತಾರೆ. ಆಗಾಗ ಉಪವಾಸಗಳನ್ನೂ ಕೈಗೊಳ್ಳುತ್ತಾರೆ. ತಾವು ರಾಘವೇಂದ್ರ ಸ್ವಾಮಿಯಾಗಿ ಅಭಿನಯಿಸುವಾಗಲೂ ರಾಘವೇಂದ್ರ ಸ್ವಾಮಿಯವರಂತೆಯೇ ಜೀವನಶೈಲಿಯನ್ನು ಮೈಗೂಡಿಸಿಕೊಂಡು ತಮ್ಮ ವೃತ್ತಿಪರತೆಯನ್ನು ಮೆರೆಯುತ್ತಾರೆ. ಚಲನಚಿತ್ರ ಮುಗಿದು ಬಿಡುಗಡೆಯಾಗಿ ಭಕ್ತರು ರಾಘವೇಂದ್ರಸ್ವಾಮಿಗಳನ್ನು ಡಾ|| ರಾಜಕುಮಾರ್‌ರವರಲ್ಲೇ ಕಂಡುಕೊಳ್ಳುವಷ್ಟು ದಂತಕತೆಯಾಗಿಬಿಡುತ್ತಾರೆ.


ಮತ್ತೊಂದು ಉದಾಹರಣೆ ನೀಡಬಹುದಾದರೆ, ಅದು ಎಚ್ಚೆಮ್ಮ ನಾಯಕ ನಾಟಕದಲ್ಲಿ ಡಾ|| ರಾಜಕುಮಾರ್ ಎಚ್ಚೆಮ್ಮ ನಾಯಕನಾಗಿ ಅಭಿನಯಿಸುವ ಸಂದರ್ಭ. ರೌದ್ರರಸ ಮುಖ್ಯವಾಗಿದ್ದ ಆ ಪಾತ್ರ ರಂಗವನ್ನು ಪ್ರವೇಶಿಸುವುದು ಮಧ್ಯರಾತ್ರಿಯ ಹೊತ್ತಿಗೆ. ಆಗ ಡಾ|| ರಾಜ್‌ರವರಿಗೆ ಮೇಕಪ್ ಮ್ಯಾನ್ ಆಗಿದ್ದವರು ಸುಬ್ಬಣ್ಣ ಎನ್ನುವರು. ಅಂದು ಸುಬ್ಬಣ್ಣನವರ ಮಗ ಕೇಶವ ಎನ್ನುವವರು ಮೇಕಪ್ ಮಾಡಲು ಹೋಗಿರುತ್ತಾರೆ. ಎಲ್ಲರೂ ಮೇಕಪ್ ಮುಗಿಸಿಕೊಂಡು ತಮ್ಮ ಸರದಿಗೆ ಕಾಯುವಂತೆ ರಾಜಣ್ಣನವರೂ ಸಜ್ಜಾಗಿ ಕುಳಿತ್ತಿದ್ದರು. ಫೈನಲ್ ಟಚ್ ಅಂದರೆ ಕಡೆಯ ಕ್ಷಣದಲ್ಲಿ ಮೀಸೆ ಅಂಟಿಸಿಕೊಂಡು ರಂಗ ಪ್ರವೇಶ ಮಾಡುವುದು ಮಾತ್ರ ಬಾಕಿ ಉಳಿದಿತ್ತು. ಸಾಮಾನ್ಯವಾಗಿ ಮೀಸೆಗೆ ಗೋಂದು ಅಂಟಿಸಿ ಅವರ ಕೈಗೆ ಕೊಟ್ಟು ಕನ್ನಡಿ ಹಿಡಿದರೆ ಅದನ್ನು ಸರಿಯಾಗಿ ಅಂಟಿಸಿಕೊಂಡು ಕನ್ನಡಿಯಲ್ಲಿ ನೋಡಿ ಡಾ|| ರಾಜ್ ರಂಗಪ್ರವೇಶ ಮಾಡುತ್ತಿದ್ದರು. ಆ ಕೆಲಸವನ್ನು ಯಾವಾಗಲು ಪಾರ್ವತಮ್ಮನವರು ಮಾಡುತ್ತಿದ್ದರಂತೆ. ಅಂದು ಕೇಶವರು ತಾವೇ ಆ ಕೆಲಸವನ್ನು ಮಾಡುವುದಾಗಿ ಹೇಳಿ, ಪಾರ್ವತಮ್ಮನವರು ಬೇಡವೆಂದರೂ ಹೋದರಂತೆ. ಸರಿ, ರಾಜಣ್ಣನವರಿಗೆ ಮೀಸೆ ಕೊಟ್ಟು ಕನ್ನಡಿ ಹಿಡಿದರು. ಸರಿಯಾಗಿ ಮೀಸೆ ಅಂಟಿಸಿಕೊಂಡ ರಾಜಣ್ಣ ಅತ್ತ ರಂಗಪ್ರವೇಶ ಮಾಡಿದರೆ, ಇತ್ತ ಕನ್ನಡಿ ಹಿಡಿದ ಕೇಶವರು ಡಾ|| ರಾಜ್‌ರವರ ಮುಖದಲ್ಲಿದ್ದ ರೌದ್ರರಸವನ್ನು ನೋಡಿ ಹೆದರಿಕೊಂಡು ಕೈಯಲ್ಲಿದ್ದ ಕನ್ನಡಿ ಕೆಳಗೆ ಬೀಳಿಸಿದರಂತೆ. ಗ್ರೀನ್ ರೂಂನಲ್ಲಿದ್ದವರು ಓಡಿಬಂದು ನೋಡಿದರೆ ಕೇಶವರು ನಡುಗುತ್ತಾ ನಿಂತಿದ್ದರಂತೆ! ಸಮಾಧಾನ ಮಾಡಿ ಕಾರಣ ಕೇಳಿದರೆ, ಇನ್ನೆಂದೂ ತಾನು ಅಣ್ಣಾವ್ರಿಗೆ ಮೀಸೆ ಕೊಡುವುದಿಲ್ಲವೆಂದು ತೊದಲಿದರಂತೆ. ಇದು ಡಾ|| ರಾಜ್‌ರ ತಲ್ಲೀನತೆ. ರಂಗಪ್ರವೇಶಕ್ಕೂ ಮುನ್ನ ತಾನು ಅಭಿನಯಿಸುತ್ತಿರುವ ಪಾತ್ರವನ್ನು ಆವಾಹಿಸಿಕೊಂಡು ತಾನೇ ಪಾತ್ರವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಜನಮಾನಸದಲ್ಲಿ ಚಿರಂಜೀವಿಯಾದ ಡಾ|| ರಾಜಕುಮಾರ್‌ರ ವೃತ್ತಿಪರತೆ.

ಅಮೇಜಾನ್‌ ಶಾಪಿಂಗ್‌ ಮಾಡಲು...

ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ಬೇಡರಕಣ್ಣಪ್ಪನಿಂದ ಹಿಡಿದು ಕೊನೆಯ ಚಿತ್ರ ಶಬ್ದವೇಧಿಯವರೆಗೆ ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮ ವೃತ್ತಿಪರತೆಯಿಂದ ಮೇರುನಟರಾದ ಡಾ|| ರಾಜಕುಮಾರ್‌ರವರ ವೃತ್ತಿಪರತೆಯನ್ನು ನಾವೂ ಮೈಗೂಡಿಸಿಕೊಂಡರೆ ನಮ್ಮ ವೃತ್ತಿಯಲ್ಲೂ ಸಾಧನೆ ಮಾಡಬಹುದಾಗಿದೆ. 


ನಮ್ಮ ದೇಶದ ವ್ಯೋಮ ವಿಜ್ಞಾನದ ಪಿತಾಮಹ ವಿಕ್ರಂ ಸಾರಾಭಾಯಿ ಹೇಳಿದ, ‘ಗದ್ದಲದ ನಡುವೆಯೂ ಸಂಗೀತವನ್ನು ಆಲಿಸುವಾತ ಮಹತ್ವವಾದದ್ದನ್ನು ಸಾಧಿಸಬಲ್ಲ’ ಎಂಬ ಮಾತುಗಳಂತೆ ನಮ್ಮ ಸುತ್ತ ಯಾವುದೇ ಗದ್ದಲವಿರಲಿ ಅಥವಾ ಆಕರ್ಷಣೆಯಿರಲಿ ನಾವು ನಮ್ಮ ಕೆಲಸದತ್ತ ಮಾತ್ರ ಗಮನ ಕೊಟ್ಟರೆ ಯಶಸ್ಸು ನಮ್ಮದಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ಗುಬ್ಬಚ್ಚಿ ಸತೀಶ್


***


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಡಾ|| ರಾಜಕುಮಾರ್‌ರವರ ವೃತ್ತಿಪರತೆ

 ಡಾ|| ರಾಜಕುಮಾರ್‌ರವರ ವೃತ್ತಿಪರತೆ “ಡಾ|| ರಾಜಕುಮಾರ್‌ರವರನ್ನು ನಾನು ‘ಬಂಗಾರದ ಮನುಷ್ಯ’       ಎನ್ನುವ ಬದಲು ‘ಬೆವರಿನ ಮನುಷ್ಯ’ ಎನ್ನುತ್ತೇನೆ”  – ಡಾ...