ಶುಕ್ರವಾರ, ಆಗಸ್ಟ್ 16, 2024

ಆತ್ಮವಿಶ್ವಾಸವೆಂಬ ಗಣಿಯ ಧಣಿಗಳಾಗಿರಿ

 ಆತ್ಮವಿಶ್ವಾಸವೆಂಬ ಗಣಿಯ ಧಣಿಗಳಾಗಿರಿ


“ಯಶಸ್ಸಿಗೆ ಮುಖ್ಯ ಕೀಲಿಕೈ ಆತ್ಮವಿಶ್ವಾಸ,

ಆತ್ಮವಿಶ್ವಾಸಕ್ಕೆ ಮುಖ್ಯ ಕೀಲಿಕೈ ಪೂರ್ವಸಿದ್ಧತೆ”

- ಆರ್ಥರ್ ಹ್ಯಾಷ್, ಖ್ಯಾತ ಟೆನಿಸ್ ಆಟಗಾರ


ಸರ್, ನನಗೆ ಎಲ್ಲಾ ಇದೆ. ಆದರೆ, ಈ ಕೆಲಸದಲ್ಲಿ ಸಫಲನಾಗುತ್ತೇನೋ ಇಲ್ಲವೋ ಎಂಬ ಆತಂಕ. ವಿಶ್ವಾಸವೆ ಇಲ್ಲವಾಗಿದೆ ಸರ್ ಎಂಬುವ ಅನೇಕರನ್ನು ನಾನು ನೋಡಿದ್ದೇನೆ. ಅವರಿಗೆ ನಾನು ಹೇಳುವುದು ಒಂದೇ ಮಾತು: “ನಿಮ್ಮ ಮೇಲೆ ನೀವು ವಿಶ್ವಾಸ ಇಡದೆ, ಮತ್ತಿನ್ಯಾರು ಇಡಬೇಕು?” ಎಂದು. ನಿಮ್ಮ ಮೇಲೆ ನೀವು ವಿಶ್ವಾಸ ಇಟ್ಟು, ಸಂಪೂರ್ಣವಾಗಿ ನಿಮ್ಮ ಮನಸ್ಸನ್ನು ನಿಮ್ಮ ಗುರಿಯೆಡೆಗೆ ನೆಟ್ಟು ಕೆಲಸ ಮಾಡಿದರೆ, ನೀವು ಗೆದ್ದೇ ಗೆಲ್ಲುತ್ತೀರಿ. ನಿಮ್ಮ ಆತ್ಮವಿಶ್ವಾಸ ನಿಮ್ಮ ಕೈಯಲ್ಲೇ, ನಿಮ್ಮ ಮನಸಲ್ಲೇ ಇದೆ. ಅದನ್ನು ಎಂದಿಗೂ ಮರೆಯದಿರಿ.

ತನ್ನ ಒಂದೇ ಕಾಲಿನಲ್ಲಿ ಎವರೆಸ್ಟ್ ಏರಿದ ಅರುಣಿಮಾ ಸಿನ್ಹ ಬಗ್ಗೆ ನಿಮಗೆ ಗೊತ್ತಿಲ್ಲದಿರಬಹುದು. ಆಕೆ ಅದೆಷ್ಟು ಆತ್ಮವಿಶ್ವಾಸಿಯೆಂದರೆ, ತನ್ನ ಒಂದು ಕಾಲು ಸಂಪೂರ್ಣವಾಗಿ ಇಲ್ಲದಿದ್ದರೂ ಎವರೆಸ್ಟ್ ಏರಿ, ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.


ನಮ್ಮ ದೇಶದ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯಾಗಿದ್ದ ಅರುಣಿಮಾ ಸಿನ್ಹ ೨೦೧೧ನೇ ಇಸವಿಯ ಏಪ್ರಿಲ್ ಹನ್ನೊಂದರ ಮಧ್ಯರಾತ್ರಿ ಲಕ್ನೋ-ದೆಹಲಿ ನಡುವೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಈಕೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಆಕೆ ಇವರನ್ನು ತಡೆಯಲು ಪ್ರಯತ್ನ ಪಟ್ಟಿದ್ದಾಳೆ. ಆಗ ವಿಫಲರಾದ ಕಳ್ಳರು ಆಕೆಯನ್ನು ರೈಲಿನಿಂದಲೇ ಹೊರ ನೂಕಿದ್ದಾರೆ. ಆಗ ಆಕೆ ಎರಡು ರೈಲ್ವೇ ಹಳಿಗಳ ನಡುವೆ ಬಿದ್ದಿದ್ದಾಳೆ. ಆಕೆಯ ಎರಡೂ ಕೈಗಳೂ ಗಾಯಗೊಂಡರೆ, ಬಲಗಾಲಿನ ಮೂಳೆಗಳೆಲ್ಲಾ ಪುಡಿಪುಡಿಯಾಗಿವೆ. ಬೆನ್ನೆಲುಬಿಗೆ ಪೆಟ್ಟಾಗಿದೆ. ಎಡಗಾಲಿನ ಮೇಲೆ ರೈಲೊಂದು ಹರಿದು ಹೋಗಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದರೂ ಆಕೆ ಬೆಳಿಗ್ಗೆ ಆಗುವವರಿಗೂ ಸುಮಾರು ಏಳು ಗಂಟೆಗಳ ಕಾಲ ಎರಡೂ ಹಳಿಗಳ ಮೇಲೆ ಆಗಾಗ ಬರುತ್ತಲೇ ಇದ್ದ ರೈಲುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೆಣಗಿದ್ದಾಳೆ. ಬೆಳಿಗ್ಗೆ ಹಳ್ಳಿಯವನ್ನೊಬ್ಬ ಈಕೆಯನ್ನು ನೋಡಿ ಆಸ್ಪತ್ರ‍್ರೆಗೆ ಸೇರಿಸುವ ಕೆಲಸ ಮಾಡಿದ್ದಾನೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಆಕೆಯನ್ನು ಸಾಗಿಸಲಾಗಿದೆ. ಆಸ್ಪತ್ರೆಯೊಂದರಲ್ಲಿ ಆಕೆಗೆ ಜ್ಞಾನ ಚೆನ್ನಾಗಿ ಇರುವಾಗಲೇ ಅರೆವಳಿಕೆ ಔಷಧಿಯನ್ನು ನೀಡದೆ ಎಡಗಾಲನ್ನು ಕತ್ತರಿಸಿದ್ದಾರೆ. ಆ ನೋವನ್ನು ಆಕೆ ತಡೆದುಕೊಂಡಿದ್ದಾಳೆ. ಕಡೆಗೆ ದೆಹಲಿಯ ಆಲ್ ಇಂಡಿಯಾ ಇನ್ಸಿಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಈಕೆಗೆ ಸೂಕ್ತ ಚಿಕಿತ್ಸೆ ದೊರೆತಿದೆ. ಅಲ್ಲಿ ಆಕೆಯ ಗಾಯಗಳೆಲ್ಲಾ ವಾಸಿಯಾದ ಮೇಲೆ ಕೃತಕ ಕಾಲನ್ನು ಅಳವಡಿಸಿದ್ದಾರೆ. ಅಲ್ಲಿಗೆ ಆಕೆಯ ಕ್ರೀಡಾ ಜೀವನ ಮುಗಿಯಿತು ಎಂದು ಸಮಾಜ ಅಂದುಕೊಳ್ಳುವಷ್ಟರಲ್ಲಿ ಆಕೆ ೨೦೧೩ರ ಮೇ ೨೧ರಂದು ಎವರೆಸ್ಟ್ ಶಿಖರವನ್ನು ಏರಿ ಅಚ್ಚರಿ ಮೂಡಿಸಿದ್ದಾಳೆ. ಎವರೆಸ್ಟ್ ಏರಿದ ಮೊದಲ ವಿಶೇಷ ಚೇತನ ಮಹಿಳೆ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾಳೆ. ತನ್ನ ಮನೋಬಲದಿಂದ ಇತಿಹಾಸವನ್ನು ಬರೆದಿದ್ದಾಳೆ.

ಇಷ್ಟೆಲ್ಲ ಹೇಗೆ ಸಾಧ್ಯವಾಯಿತು ಎಂದುಕೊಂಡರೆ, ಆತ್ಮವಿಶ್ವಾಸ! ಹೌದು, ಆಕೆಯ ಅಪರಿಮಿತ ಆತ್ಮವಿಶ್ವಾಸ. “ನಾನು ನನ್ನ ನೋವನ್ನು ಅವಕಾಶವನ್ನಾಗಿಸಿದೆ. ನಾನು ನನ್ನ ಮನಸ್ಸನ್ನು ಬದಲಿಸದೇ ಇದ್ದಲ್ಲಿ, ಮನೆಯ ಕೋಣೆಯಿಂದ ಹೊರಗಡೆಯೂ ಬರಲಾಗುತ್ತಿರಲಿಲ್ಲ” ಎನ್ನುವ ಆಕೆಯ ಆತ್ಮವಿಶ್ವಾಸದ ಮಾತುಗಳೇ ಆಕೆ ತನ್ನ ಮೇಲೆ ತಾನು ಇಟ್ಟುಕೊಂಡಿರುವ ವಿಶ್ವಾಸದ ಪ್ರಮಾಣವನ್ನು ತಿಳಿಸುತ್ತದೆ. ಎಲ್ಲ ಸರಿಯಿದ್ದವರೇ ಸಾಧಿಸಲಾಗದ್ದನ್ನು ಆಕೆ ಸಾಧಿಸಿದ್ದಾಳೆ. ತಾನೆಂದೂ ಕನಿಕರವನ್ನು ಬಯಸುತ್ತಾ ಬದುಕಬಾರದೆಂದು ಆಕೆ ದೃಢನಿಶ್ಚಯ ತಳೆದಿದ್ದಾಳೆ. ಕಾಲಿನ ಜೊತೆ ತನ್ನೆಲ್ಲಾ ಸರ್ಟಿಫಿಕೇಟ್‌ಗಳನ್ನು ಕಳೆದುಕೊಂಡಿದ್ದ ಆಕೆಗೆ ತಾನೊಬ್ಬಳು ದೇಶವನ್ನು ಪ್ರತಿನಿಧಿಸಿದ ಕ್ರೀಡಾಪಟು ಎಂಬುದನ್ನು ಸಾಬೀತು ಪಡಿಸಲು ಕಷ್ಟವಾಗಿದೆ. ಆಗೆಲ್ಲಾ ಸಾಕಷ್ಟು ಅವಮಾನಗಳಾಗಿವೆ. ಆದರೂ ಆಕೆ ತನ್ನ ಕೃತಕ ಕಾಲಿನ ಸಹಾಯದಿಂದಲೇ ಸುಮಾರು ಎರಡು ವರ್ಷಗಳ ಕಾಲ ನಡೆದಾಡುವುದನ್ನು ಅಭ್ಯಾಸ ಮಾಡಿದ್ದಾಳೆ. ಆ ನಂತರ ಉತ್ತರಕಾಂಡದಲ್ಲಿ ಸಣ್ಣಪುಟ್ಟ ಬೆಟ್ಟಗುಡ್ಡಗಳನ್ನು ಎವರೆಸ್ಟ್ ಏರಿದ ಭಾರತದ ಮೊದಲ ಮಹಿಳೆ ಬಚೇಂದ್ರಿ ಪಾಲ್‌ರವರ ಮಾರ್ಗದರ್ಶನದಲ್ಲಿ ಹತ್ತಿಳಿದಿದ್ದಾಳೆ. ಆ ನಂತರ ಏವರೆಸ್ಟ್ ಏರಿ ಅಪ್ರತಿಮವಾದುದನ್ನು ಸಾಧಿಸಿದ್ದಾಳೆ. ತನ್ನ ಕಷ್ಟದ ದಿನಗಳಲ್ಲಿಯೇ ಅಪ್ರತಿಮವಾದ ಏನನ್ನಾದರೂ ಸಾಧಿಸಿಬೇಕೆಂದು ಕನಸು ಕಂಡಿದ್ದ ಆಕೆಗೆ ಮೊದಲೆಲ್ಲಾ ಇದೆಲ್ಲಾ ಒಂದು ಹುಚ್ಚು ಎನಿಸಿದ್ದಿದೆ. ಆದರೂ ಛಲಬಿಡದೆ ಪ್ರತಿಯೊಂದು ಹೆಜ್ಜೆ ಇಡುವಾಗಲು ತನ್ನ ಭವ್ಯ ಕನಸನ್ನು ಕಣ್ಮುಂದೆ ಕಲ್ಪಿಸಿಕೊಂಡೇ ಹೆಜ್ಜೆ ಇಟ್ಟಿದ್ದಾಳೆ. ಪೂರ್ವಸಿದ್ಧತೆಯ ಪ್ರತಿ ವಿಶ್ವಾಸದ ಹೆಜ್ಜೆಯೂ ಆಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇಂದು ಆಕೆಯ ಧೃಡ ಆತ್ಮವಿಶ್ವಾಸ ವಿಶ್ವಕ್ಕೇ ಮಾದರಿಯಾಗಿದೆ.

ಆಕೆಯ ಆ ಅಪರಿಮಿತ, ಅಗಣಿತ, ಅಪ್ರತಿಮ ಆತ್ಮವಿಶ್ವಾಸವನ್ನು ನಿಮ್ಮದಾಗಿಸಿಕೊಳ್ಳಿ. ಆ ಮೂಲಕ ಆತ್ಮವಿಶ್ವಾಸವೆಂಬ ಗಣಿಯ ಧಣಿಗಳಾಗಿರಿ. 




ಆತ್ಮವಿಶ್ವಾಸದಿಂದ ಜಯಿಸೋದು ಹೇಗೆ ಎಂಬುದಕ್ಕೆ ಉತ್ತಮ ಉದಾಹರಣೆ ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್! ಹೌದು. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ತಮ್ಮ ಬದುಕಿನಲ್ಲಿ ಎದುರಿಸಿದ ಸೋಲುಗಳು ಅಪಾರ! ಇಪ್ಪತ್ತೇಳನೆಯ ವಯಸ್ಸಿನಲ್ಲಿ ಅವರ ದೇಹದ ನರಮಂಡಲವೇ ತೊಂದರೆಗೊಳಗಾಯಿತು. ನಲವತ್ತಾರನೆಯ ವಯಸ್ಸಿನಲ್ಲಿ ಸೆನೆಟರ್ ಚುನಾವಣೆಯಲ್ಲಿ  ಸೋಲುಂಡರು.  ನಲವತ್ತೇಳನೆಯ ವಯಸ್ಸಿನಲ್ಲಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅವರಿಗೆ ಸೋಲಾಯಿತು.  ಹೀಗೆಲ್ಲ ಸೋಲುಗಳು ದಿಕ್ಕೆಡಿಸಿದರೂ ಅವರ ಆತ್ಮವಿಶ್ವಾಸಕ್ಕೆ ಸ್ವಲ್ಪವೂ ಧಕ್ಕೆ ಬರಲಿಲ್ಲ. ಐವತ್ತೆರಡನೆಯ ವಯಸ್ಸಿನಲ್ಲಿ ಅವರು ಅಮೆರಿಕದ ಅಧ್ಯಕ್ಷರಾದರು. 

ಈ ನಿಟ್ಟಿನಲ್ಲಿ ಸ್ಕಾಟ್ಲೆಂಡ್ ದೊರೆ ರಾಬರ್ಟ್ ಬ್ರೂಸ್ ಮತ್ತು ಜೇಡದ ಕಥೆ ಬಹಳ ಮುಖ್ಯವಾದದ್ದು. ರಾಬರ್ಟ್ ಬ್ರೂಸ್ ಸ್ಕಾಟ್ಲೆಂಡ್ ಅನ್ನು ೧೩೦೬ ರಿಂದ ೧೩೨೯ ರವರೆಗೆ ಆಳಿದರು. ಅವರು ಶ್ರೇಷ್ಠ ದೊರೆಗಳಲ್ಲಿ ಒಬ್ಬರಾಗಿದ್ದರು, ಇಂಗ್ಲೇಂಡ್ ವಿರುದ್ಧದ ಸ್ವಾತಂತ್ರ‍್ಯದ ಯುದ್ಧದಲ್ಲಿ ಸೋಲಿನ ನಂತರ ಒಂದು ಗುಹೆಯನ್ನು ಸೇರಿಕೊಂಡರಂತೆ. ಅಲ್ಲಿ ಚಿಂತಿತರಾಗಿರುವಾಗ ಜೇಡವೊಂದು ತನ್ನ ಬಲೆಯನ್ನು ನೇಯ್ಗೆ ಮಾಡಲು ಪ್ರಯತ್ನಿಸುತ್ತಿರುವುದನ್ನು ಬಹಳ ಸಮಯದಿಂದ ನೋಡುತ್ತಿದ್ದರಂತೆ. ಆರು ಬಾರಿ ಜೇಡದ ಪ್ರಯತ್ನಗಳು ವಿಫಲವಾದರೂ ಕೂಡ ಅಂತಿಮವಾಗಿ ಜೇಡ ತನ್ನ ಛಲಬಿಡದೆ ಆತ್ಮವಿಶ್ವಾಸದಿಂದ ತನ್ನ ಕೆಸಲದಲ್ಲಿ ಜಯ ಸಾಧಿಸಿತಂತೆ. ಇದರಿಂದ ಪ್ರೇರಿತರಾದ ಇವರು ಮುಂದೆ ಇಂಗ್ಲಿಷರೊಂದಿಗೆ ಯುದ್ಧವನ್ನು ಗೆದ್ದರು ಎಂಬುದು ಕೂಡ ಒಂದು ದಂತಕತೆಯೇ ಆಗಿದೆ.‌

ಅಪರಿಮಿತ ಆತ್ಮವಿಶ್ವಾಸ ನಿಮ್ಮದಾಗಲಿ...

- ಗುಬ್ಬಚ್ಚಿ ಸತೀಶ್.

3 ಕಾಮೆಂಟ್‌ಗಳು:

  1. ಆತ್ಮವಿಶ್ವಾಸ ಒಂದಿದ್ದರೆ ಏನನ್ನಾದರೂ ಸಾದಿಸಬಹುದು, ಓದುಗರಿಗೆ ಈ ರೀತಿಯ ಬರವಣಿಗೆ ಬಹಳ ಅವಶ್ಯವಿದೆ, ನಿಮ್ಮ ಬರವಣಿಗೆಗೆ ಮನಃಪೂರ್ವಕ ಅಭಿನಂದನೆಗಳು ಸರ್, ಈ ಕೆಲಸ ದೊಡ್ಡ ಮಟ್ಟಿಗೆ ಬೆಳೆಯಲಿ
    ಇಂತಿ ನಿಮ್ಮ ಓದುಗ 🙏🏻

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ

ಗೋಮಿನಿ ಪ್ರಕಾಶನದಲ್ಲಿ ಪುಸ್ತಕ ಪ್ರಕಟವಾಗಲು ಪ್ರಮುಖ ನಿಬಂಧನೆಗಳು

ಗೋಮಿನಿ ಪ್ರಕಾಶನದಲ್ಲಿ ಪುಸ್ತಕ ಪ್ರಕಟವಾಗಲು ಪ್ರಮುಖ ನಿಬಂಧನೆಗಳು 1. ಪ್ರಕಾಶನವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಮೊದಲಿಗೆ ನೂರು ಪ್ರತಿಗಳನ್ನು...