ಶುಕ್ರವಾರ, ನವೆಂಬರ್ 15, 2019

ಕನ್ನಡದ ಮೇಲಿನ ಅನನ್ಯ ಪ್ರೀತಿಯ ಜೊತೆಗೆ


(ವಿಶೇಷ ಸೂಚನೆ: ಈ ಪೋಸ್ಟನ್ನು ಪೂರ್ತಿ ಓದಿ, ನಿಮ್ಮ ಅನಿಸಿಕೆ ಕಾಮೆಂಟಿಸಿ. ಇದು ನಿಮಗೆ ಪಾಠವಾದರೂ ಆಗಬಹುದು! ಯಾರಿಗೊತ್ತು?)

ಕನ್ನಡದ ಮೇಲಿನ ಅನನ್ಯ ಪ್ರೀತಿಯ ಜೊತೆಗೆ ನಾನು ಓದಿದ್ದು ಸಂಸ್ಕೃತ ಸಾಹಿತ್ಯ ಮತ್ತು ಇಂಗ್ಲೀಷ್ ಸಾಹಿತ್ಯ. ಪದವಿಯವರೆಗೆ ಸಂಸ್ಕೃತವನ್ನು ಮೊದಲ ಭಾಷೆಯಾಗಿ ಕಲಿತವನಿಗೆ ಅದರ ಸಾಹಿತ್ಯ ಇವತ್ತಿಗೂ ಕಾಡುತ್ತಿದೆ. ಆ ನಂತರ ಸಾಹಿತ್ಯದ ಮೇಲಿನ ಪ್ರೀತಿಯಿಂದ ಕನ್ನಡ ಸಾಹಿತ್ಯವನ್ನು ಹಾಗೇ ಓದಿಕೊಳ್ಳಬಹುದು ಎಂದು ಭಾವಿಸಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಇದರಿಂದ ಕೆಲಸವೂ ಸಿಗಬಹುದು ಎಂಬ ಪುಟ್ಟ ಆಸೆಯೂ ಇತ್ತು. ಆದರೆ, ಆಗಾಗ ಕನ್ನಡ ಸಾಹಿತ್ಯವನ್ನು ಓದುವುದನ್ನು ಬಿಡಲಿಲ್ಲ. ಬರೆಯಲು ಶುರುಮಾಡಿದ ಮೇಲೆ ಕತೆಗಳನ್ನು ಅರಿಯಲು ಬಹಳಷ್ಟು ಕತೆಗಳನ್ನು ಓದಿದೆ. ಆದರೂ ಬರೆಯಲು ಸಾಕಷ್ಟು ಕಷ್ಟವಾಗುತ್ತಿತ್ತು. ಆಗ ನಾನು ಕಂಡುಕೊಂಡ ಉಪಾಯವೇನೆಂದರೆ ಇಂಗ್ಲೀಷ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸುವುದು. ಇದುವರೆವಿಗೂ ಕೆಲವು ಕತೆಗಳನ್ನು ಅನುವಾದಿಸಿ ಅವು ಪ್ರಕಟಗೊಂಡಿವೆ. ಮೊತ್ತ ಮೊದಲ ಅನುವಾದದ ಕತೆ ಪ್ರಕಟವಾದದ್ದು ಉದಯವಾಣಿಯಲ್ಲಿ. ಈ ವಿಷಯ ನನಗೆ ಮೊದಲು ಗೊತ್ತಾದ್ದದ್ದು ಮೂರು ತಿಂಗಳ ನಂತರ! ಅದನ್ನು ಮೊದಲು ನನಗೆ ತಿಳಿಸಿದ್ದು ಉದಯ್ ಇಟಗಿ ಸರ್. ಅವರು ಅಂದು ಮಧ್ಯರಾತ್ರಿ (ಆಗ ಫೇಸ್ ಬುಕ್ ಹೊಸದು) ಫೇಸ್ ಬುಕ್ ನೋಡುತ್ತಿದ್ದಾಗ ಚಾಟ್ ನಲ್ಲಿ ವಿಷಯ ತಿಳಿಸಿದರು. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ.
ಆನಂತರ ನಾನೇ ಒಂದಷ್ಟು ಸ್ವಂತ ಕತೆಗಳನ್ನು ಬರೆದೆ, 'ಉಘೇ ಉಘೇ' ಸಂಕಲನವನ್ನೂ ಪ್ರಕಟಿಸಿದೆ. ಕೆಲವರ ಪ್ರೋತ್ಸಾಹವೂ ಸಿಕ್ಕಿತು. ಈ ಕುರಿತು ತದನಂತರ ಬರೆಯುವೆ. ಆನಂತರ ಅದಾಗಲೇ ಆತ್ಮೀಯರಾಗಿದ್ದ ಶಿವು ಕೆ. ಅವರ 'ವೆಂಡರ್ ಕಣ್ಣು' ಪ್ರಬಂಧಗಳನ್ನು ಇಂಗ್ಲೀಷಿಗೆ ಅನುವಾದಿಸಿ ಅದನ್ನು 'Boys Of The Dawn' ಎಂದು ಸಂಕಲಿಸಿ ಪ್ರಕಟಿಸಿದೆ. ಈ ಪುಸ್ತಕವು ನಮ್ಮ ವಲಯದಲ್ಲಿ ಹಲವರ ಮೆಚ್ಚುಗೆಗೆ ಪ್ರಾಪ್ತವಾಯಿತು.
ಆದರೆ, ಇರಲಿ ನಿಮ್ಮಲ್ಲಿ ಹೇಳಿಯೇ ಬಿಡುವೆ: ಈ 'ಸಾಹಿತ್ಯ-ಪ್ರಶಸ್ತಿ-ರಾಜಕಾರಣ' ನನ್ನಲ್ಲಿದ್ದ ಹುಮ್ಮಸ್ಸನ್ನು ನುಂಗಿ ನೀರು ಕುಡಿದು ಬಿಟ್ಟಿತು. ಅದ್ಯಾಕೋ ಗೊತ್ತಿಲ್ಲ ಈ ಎರಡೂ ಪುಸ್ತಕಗಳಿಗೆ ಬರಬೇಕಿದ್ದ ಪ್ರಶಸ್ತಿ ಇನ್ನೇನು ಬಂತು ಅನ್ನುವಾಗಲೇ ಬರಲಿಲ್ಲ. ಆನಂತರ ದಿನೇ ದಿನೇ ನನ್ನ ಆಸಕ್ತಿ (ಯಾಕೆಂದರೆ ಪ್ರಶಸ್ತಿ, ಬಹುಮಾನಗಳನ್ನು ನಾನು ಕೆಟಲಿಸ್ಟ್ ಅನ್ನುತ್ತೇನೆ) ಸಹಜವಾಗಿ ಕುಗ್ಗಿತು. ಇತ್ತೀಚೆಗೆ ಕಾರಣಗಳೂ ತಿಳಿದವು. ಹೋಗಲಿಬಿಡಿ ಎನ್ನಲು ಕನ್ನಡದಲ್ಲೇನು ಸಾವಿರಾರು ಪ್ರತಿಗಳು ಪುಸ್ತಕಗಳು ಮಾರಾಟವಾಗುವುದಿಲ್ಲ. ಪ್ರಶಸ್ತಿ, ಪುರಸ್ಕಾರಗಳು ದೊರೆತರೆ ಒಂದೈದು ಪ್ರತಿಗಳು ಹೆಚ್ಚು ಹೋಗಬಹುದು ಅಷ್ಟೆ. ಆದರೆ, ನಗದು ಬಹುಮಾನ ದೊರೆತರೆ ಆ ಹಣದಿಂದ ಮತ್ತೊಂದು ಪುಸ್ತಕವನ್ನು ಪ್ರಕಟಿಸಬಹುದು ಎಂಬುದು ನನ್ನ ಜಿಜ್ಞಾಸೆಯಷ್ಟೆ.
ಒಟ್ಟಿನಲ್ಲಿ ಖುಷಿಗಾಗಿ ಬರವಣಿಗೆ ಆರಂಭಿಸಿದವನು ಒಬ್ಬ ಸಾಹಿತಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಯ ಬಗ್ಗೆಯೂ ಬಹಳ ಬೇಗ ಅರಿತಿದ್ದೇನೆ. ಆ ನಿಟ್ಟಿನಲ್ಲಿ ನಾನೇನೇ ಬರೆದರು 'ಸ್ನೇಹ-ಪ್ರೀತಿ-ಜೀವನ' ವಸ್ತು ಬಹಳವಾಗಿ ಇರುತ್ತದೆ. ನನ್ನ ಪುಸ್ತಕಗಳಲ್ಲಿ ನನ್ನ ಬಯೋಡೇಟಾ ಪುಟದಲ್ಲಿ 'ವೀರಶೈವ ಬ್ಯಾಂಕ್ ಉದ್ಯೋಗಿ' ಎಂಬುದೇ ನನ್ನ ಪುಸ್ತಕಗಳಿಗೆ ಪ್ರಶಸ್ತಿ ಬಾರದಿರಲು ಕಾರಣವೆಂದು ತಿಳಿದಾಗ ಮಾತ್ರ ನಗಬೇಕೋ, ಅಳಬೇಕೋ ಎಂದು ಬಹಳ ನೊಂದಿದ್ದೇನೆ. ನನಗೆ ಬುದ್ಧಿ ಬಂತು ಎಂದ ಕ್ಷಣದಿಂದ ನಾನು 'ವಿಶ್ವ ಮಾನವ!'. ಇವತ್ತಿಗೂ ಹಾಗೇ ಬದುಕುತ್ತಿದ್ದೇನೆ. ಮುಂದೆಯೂ... ಇಷ್ಟು ವರ್ಷಗಳಲ್ಲಿ ಜಗತ್ತು ಬಹಳ ಅರ್ಥವಾಗಿಬಿಟ್ಟಿದೆ. ಒಂದಾನೊಂದು ಕಾಲದಲ್ಲಿ ಬಹಳ ಗಂಭೀರವಾಗಿರಬೇಕೆಂದುಕೊಂಡವನು ಅದರಲ್ಲಿ ಅರ್ಥವೂ ಇಲ್ಲ, ಜೀವನದ ಸಾರವೂ ಇಲ್ಲ ಎಂದು ನಾನು ನಾನಾಗೇ ಇದ್ದುಬಿಟ್ಟಿದ್ದೇನೆ. ಇಷ್ಟೆಲ್ಲಾ ಹೇಳಲು ಮೂಲ ಕಾರಣ ಮನಸ್ಸಿನ ಮೂಲೆಯಲ್ಲಿರುವ ಯಾವುದೋ ನೋವಿರಬಹುದು. ಅದು ಗೊತ್ತಿಲ್ಲ. ಫೇಸ್ ಬುಕ್ಕಿನಲ್ಲಿ ಇಷ್ಟೆಲ್ಲಾ ಇದೇ ಮೊದಲ ಬಾರಿಗೆ ನಾನು ಬರೆಯುತ್ತಿರುವುದು. ಮೂಲತಃ ಬ್ಲಾಗರ್ ಆಗಿದ್ದ ನನಗೆ ಇಷ್ಟು ಬರೆಯಲು ಕಷ್ಟವೇನು ಇರದು. ಇನ್ಮುಂದೆ ಬರೆಯಲೇ ಬೇಕಿದೆ...

ನಾನು ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಮೊದಲ ಪುಸ್ತಕ ಕೊಂಡು ಓದಲು...
https://imojo.in/2mm893c

ಭಾನುವಾರ, ಡಿಸೆಂಬರ್ 20, 2015

ನವೀನ್ ಮಧುಗಿರಿಯವರ ‘ನವಿಗವನ’ : ಆಯುವ ಕವಿ ನವೀನ್.


ರಸ್ತೆ ಬದಿಯಲ್ಲಿ ಹಾಡಿ
ಅನ್ನ ಉಣ್ಣುವ
ಟೋನಿ
ಪ್ರತೀದಿನ ತನ್ನ ಕರುಳು
ಹಿಂಡುವಷ್ಟು ಬಾರಿ
ಗಿಟಾರಿನ
ತಂತಿ ಮೀಟುವನು
        *
ರಸ್ತೆ ಬದಿಯಲ್ಲಿ
ತರಕಾರಿ ಮಾರಲು
ಬಂದವನು
ತನ್ನಸಿವ
ತಕ್ಕಡಿಯಲ್ಲಿ ತೂಗಿದ
        *
ತುಂಬಾ ಹೊತ್ತಿದ್ದರೆ
ವಾಸನೆ ಬರುವುದೆಂದು
ಅತ್ತರನ್ನ ಬಳಿದರು
ಬದುಕಿಡೀ
ಮೋರಿ ಬಳಿದೆ ಬದುಕಿದವನು
ಶವವಾಗಿ ಮಲಗಿದ್ದ
        *
ಬಣ್ಣ ಮಾಸಿದ
ಗೋಡೆಯ ತುಂಬಾ
ಬಡತನದ ಚಿತ್ರ
        *
ಅಕ್ಷರದಿಂದ ದೇಶವನ್ನು
ಬದಲಿಸಬಹುದು!
ನಿಜಾ,
ಆದರೆ ಹಸಿವಿಗೆ
ಅನ್ನವೇ ಬೇಕು.
        *
ರೈತ
ದೇಶದ ಬೆನ್ನೆಲುಬು
ಬಡತನ
ರೈತನ ನೆರಳು
        *
ನಮ್ಮ ಮನೆಗೆ
ಬಾಗಿಲಿಡುತ್ತೇವೆ
ಹಕ್ಕಿಗಳ ಮನೆ ಕಿತ್ತು
        *
ಊರ ತುಂಬಾ
ಬೆದೆಗೆ ಬಂದ ನಾಯಿಗಳೆ,
ಉಚ್ಚೋ... ಎಂದೋಡಿಸಲು
ಎಳೆಯ ಹೆಣ್ಣು ಕೂಸಿನ್ನು
ಮಾತು ಕಲಿತಿಲ್ಲ
        *
ಬಳೆಗಳ ಸದಿಲ್ಲದೇ
ಇಲ್ಲಿ
ಏನೂ ಆಗುವುದಿಲ್ಲ
ಎರಡು ರೀತಿಯ ಹಸಿವಿನಲ್ಲೂ,
ಅವುಗಳ ಮಹತ್ವ ದೊಡ್ಡದು.
        *
        ಈ ಮೇಲಿನ ಹನಿಗವಿತೆಗಳನ್ನು ಹತ್ತನೇ ತರಗತಿಗೆ ವಿದ್ಯಾಭ್ಯಾಸವನ್ನು ಬಿಟ್ಟ ಯುವಕನೊಬ್ಬ ಬರೆದಿದ್ದಾನೆಂದರೆ ನಂಬಲೇಬೇಕು. ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ವೀರಾಪುರ ಗ್ರಾಮದ ರಘುನಂದನ್ ವಿ.ಆರ್. ಎಂಬ ಯುವಕ ನವೀನ್ ಮಧುಗಿರಿ ಎಂಬ ಕಾವ್ಯನಾಮದಲ್ಲಿ ತಮ್ಮ ಮೊದಲ ಕೃತಿ ನವಿಗವನ ಎಂಬ ಹನಿ - ಹನಿಗವನಸಂಕಲನದಲ್ಲಿ ಈ ಮೇಲಿನ ಹನಿಗವಿತೆಗಳ ಜೊತೆಗೆ ಮತ್ತಷ್ಟು ಪ್ರಬುದ್ಧ ಹನಿಗವಿತೆಗಳನ್ನು ಪ್ರಕಟಿಸಿರುವುದನ್ನು ಓದಿದರೆ ಈ ಯುವ ಕವಿಯ ಬಗ್ಗೆ ಅತೀವ ಹೆಮ್ಮೆಯಾಗುತ್ತದೆ. ಈಗಾಗಲೇ ತಮ್ಮ ಕಥೆ, ಕವಿತೆ, ಕಿರುಕಥೆ (ನ್ಯಾನೋ ಕಥೆ), ಶಿಶುಗೀತೆ ಮತ್ತು ಹಲವು ಲೇಖನಗಳನ್ನು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಿಸುವುದರ ಮೂಲಕ ಭರವಸೆ ಮೂಡಿಸಿದ್ದಾರೆ ಯುವ ಸಾಹಿತಿ ನವೀನ್ ಮಧುಗಿರಿ. ಇವರ ಈ ಮೊದಲ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದ ೨೦೧೩ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಣೆಯ ಪ್ರೋತ್ಸಾಹಧನದಿಂದ ಪ್ರಕಟನೆಗೊಂಡಿದೆ. ಈ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನದಿಂದ ಪ್ರಕಟಿಸಲು ತಮ್ಮದೇ ನವಿ ಪುಸ್ತಕ ಎಂಬ ಪ್ರಕಾಶನವನ್ನೂ ನವೀನ್ ಆರಂಭಿಸಿದ್ದರೆ. ಈ ಸಂಕಲನಕ್ಕೆ ಕವಿಯೂ, ಚಿತ್ರಸಾಹಿತಿಯೂ ಆಗಿರುವ ಗುರುನಾಥ್ ಬೋರಗಿಯವರ ಸುಂದರ ಮುಖಪುಟವೂ ಇದ್ದು, ಜೊತೆಗೆ ಅಲ್ಲಲ್ಲಿ ಕವಿತೆಗಳಿಗೆ ಪೂರಕವಾಗಿರುವ ರೇಖಾಚಿತ್ರಗಳಿವೆ. ಮಧುಗಿರಿ ತಾಲ್ಲೂಕಿನವರೇ ಆದ ಹಿರಿಯ ಸಾಹಿತಿ ಮ.ಲ.ನ. ಮೂರ್ತಿಯವರ ಮುನ್ನುಡಿ ಈ ಸಂಕಲನಕ್ಕಿದೆ. ಸಗಣಿ, ಗಂಜಳ, ಗೊಬ್ಬರದ ನಡುವೆ ಬದುಕನ್ನು ಕಟ್ಟಿಕೊಳ್ಳುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆಯಾದ ಯುವ ಕವಿಯ ಸಂವೇದನೆ, ಕಾವ್ಯದ ತುಣುಕುಗಳಲ್ಲಿ ವ್ಯಕ್ತವಾಗಿದೆ ಎಂದು ಮ.ಲ.ನ. ಮೂರ್ತಿಯವರು ಗುರುತಿಸಿದ್ದಾರೆ. ತಮ್ಮನಿಗೇ ಪ್ರೀತಿಯಿಂದ ಸಂಕಲನದ ಅರ್ಪಣೆಯಾಗಿದೆ.

        ನೀವು ಹನಿಗವನವೆನ್ನಿ, ಹನಿಗವಿತೆಯನ್ನಿ, ಕಿರುಗವಿತೆಯನ್ನಿ, ಚುಟುಕವೆನ್ನಿ ಅಥವಾ ಮತ್ತಿನೇನೋ ಅನ್ನಿ ಅದನ್ನು ಕೆಲವರು ಪ್ರಾಸಕ್ಕಷ್ಟೇ ಬರೆದರೆ, ಕೆಲವರು ಗಂಭೀರವಾಗಿ ಸಾಮಾಜಿಕ ಕಳಕಳಿಯಿಂದ ಬರೆಯುತ್ತಾರೆ. ಪ್ರಾಸಕ್ಕಾಗಿ ಬರೆದದ್ದೂ ಆ ಕ್ಷಣಕ್ಕಷ್ಟೇ ಖುಷಿ ನೀಡಿದರೆ, ಗಂಭೀರವಾಗಿ ಬರೆದದ್ದು ಓದುಗನನ್ನು ಕಾಡುವ ಗುಣ ಹೊಂದಿರುತ್ತದೆ. ಸಾಮಾಜಿಕ ಕಳಕಳಿಯಿಂದ ಬರೆಯುವಲ್ಲಿ ನನಗೆ ದಿನಕರ ದೇಸಾಯಿ, ಜರಗನಹಳ್ಳಿ ಶಿವಶಂಕರ್, ವೈ‌ಎನ್ಕೆ, ಸಿ.ಪಿ.ಕೆ, ಡುಂಡಿರಾಜ್, ಡಾ|| ಕೆ.ಬಿ.ರಂಗಸ್ವಾಮಿ, ಇನ್ನೂ ಮುಂತಾದವರೂ ಬಹಳ ಪ್ರಮುಖವಾಗಿ ಕಾಣುತ್ತಾರೆ. ಇವರ ಸಾಲಿಗೆ ನವೀನ್ ಮಧುಗಿರಿಯೂ ಸೇರಬಲ್ಲರು ಎಂಬ ಭರವಸೆ ಮೂಡಿಸುವ ಅನೇಕ ಹನಿಗವಿತೆಗಳು ಸಂಕಲನದಲ್ಲಿವೆ. ಈತ ತನ್ನ ಮೊದಲ ಸಂಕಲನದಲ್ಲಿಯೇ ಪ್ರೌಢಿಮೆ ಮೆರೆದಿದ್ದಾನೆ. ಈ ಕಾರಣಕ್ಕಾಗಿಯೇ ಇತ್ತೀಚಿಗೆ ಪ್ರಕಟವಾಗಿರುವ ಹಲವು ಹನಿಗವಿತೆ ಸಂಕಲನಗಳಲ್ಲಿ ಈ ಕೃತಿ ಬಹಳ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

        ವಯೋಸಹಜ ಪ್ರೀತಿ, ಪ್ರೇಮ, ಕಾಮ ವಸ್ತುಗಳಾಗಿರುವ ಹನಿಗವಿತೆಗಳೂ ಇಲ್ಲಿವೆ. ಆದರೆ, ಅವು ಬೆರಳೆಣಿಕೆಯಷ್ಟೇ ಎನ್ನಬಹುದು. ಉದಾಹರಣೆಗೆ :

ಹುಡುಗಿಯರು ಒಮ್ಮೆ
ಹೆಜ್ಜೆಯಿರಿಸಿದರೆ
ಜನುಮ ಪೂರ್ತಿ ಅಳಿಸುವುದಿಲ್ಲ!
ಅದರಲ್ಲೂ,
ಹೃದಯದ ಮೇಲೆ!
        *
ಬೇಲಿಯಿರದ
ಬದುಕ ಬಯಸಿ
ಹೊರಟವನನ್ನು
ಪ್ರೇಯಸಿಯ ಬಾಹುಗಳು
ಬಂಧಿಸಿದವು!
        *
ಎಲ್ಲಕ್ಕಿಂತಲೂ
ಮೊದಲು
ಹುಟ್ಟಿದ್ದು ಕಾಮ
ಆನಂತರ ನಾವೆಲ್ಲರೂ
ಹುಟ್ಟಿದ್ದು
        *
ಇಬ್ಬರೂ ಕೂಡಿದಾಗ
ಕಳೆದದ್ದು
ದೇಹದ ಹಸಿವು
        *

        ಸಂಕಲನದ ಅಲ್ಲಲ್ಲಿ ಕರುಳ ಸಂಬಂಧಗಳನ್ನು ನೆನೆಯುವ ಹನಿಗವತೆಗಳಿವೆ.

ಅಪ್ಪನ ಕೈಗಳನ್ನೇ
ಗಮನಿಸಿದ ನಮಗೆ
ಅವನ
ಹಗುರಾದ ಜೇಬು
ಅರ್ಥವಾಗಲಿಲ್ಲ
        *
ಅವ್ವ
ತನ್ನ ಕಷ್ಟ, ಕಣ್ಣೀರುಗಳನ್ನೆಲ್ಲ
ಬಚ್ಚಿಟ್ಟು
ಬರಿ ನಗುವನ್ನಷ್ಟೇ
ನಮಗೆ ಉಣ ಬಡಿಸಿದಳು
        *
ಅಟ್ಟ ಸೇರಿದ
ಒನಕೆಯ ಮೇಲೆ
ಮಾಸದ
ಅಜ್ಜಿಯ ಕೈಬೆರಳ
ಗುರುತು
        *      

        ಸಂಕಲನದ ಕೆಲವು ಹನಿಗವಿತೆಗಳು ಇತಿಹಾಸ, ಬ್ರೇಕಿಂಗ್ ನ್ಯೂಸ್‌ಗಳ ಮೇಲೂ ಬೆಳಕು ಚೆಲ್ಲಿವೆ:

ಇತಿಹಾಸದ ತುಂಬಾ
ಸಾವಿನ ಶವಗಳ
ವಾಸನೆ
        *
ಚುಟುಕು ಸುದ್ದಿ
ಆಕ್ರಮಿಸಿದೇ
ಎಷ್ಟೊಂದು ಕಿವಿ!?
        *

        ನವೀನ್ ತಮ್ಮ ಸಂಕಲನವನ್ನು ಸ್ನೇಹ ಹಾಗೂ ಗೌರವದೊಂದಿಗೆ ನನಗೆ ಕಳುಹಿಸಿದ ಸಮಯದಲ್ಲಿಯೇ ಒಂದು ಶನಿವಾರದ ಸಂಜೆ ಓದಿದಾಗಲೇ, ಈ ಸಂಕಲನವನ್ನು ಸಹೃದಯ ಓದುಗರಿಗೆ ಪರಿಚಯಿಸಬೇಕೆಂದು ಮನದಲ್ಲಿ ಆಸೆ ಮೂಡಿತಾದರೂ ಕಾಲ ಕೂಡಿಬಂದಿರಲಿಲ್ಲ. ಕಾಲ ಕೂಡಿ ಬರುವ ಸಮಯಕ್ಕೆ ನವೀನ್ ಅದಾಗಲೇ ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಅವರದೇ ಒಂದು ಹನಿಗವನದ ಆಶಯದಂತೆ ಅವರೂ ಮತ್ತೆ ಅಪ್ಪನಾಗಿ ಜನಿಸಿದ್ದಾರೆ.

ಪುಟ್ಟ ಮಗುವಿನ
ಮೊದಲ ಅಳುವಿನ
ಜೊತೆಗೆ
ಕಾರಿಡಾರಿನಲ್ಲೊಬ್ಬ
ಅಪ್ಪನ ಜನನ

        ಈ ಸಂದರ್ಭದಲ್ಲಿ ನವೀನ್‌ರವರಿಗೆ ಶುಭಕೋರುತ್ತಾ, ಖ್ಯಾತ ಹನಿಗವಿ, ಹನಿಗವಿತೆಗಳ ಖಜಾನೆಯ ಒಡೆಯ ಡುಂಡಿರಾಜ್ ರೇ ಹಿಂದಿನ ಮತ್ತು ಇಂದಿನ ಕವಿಗಳನ್ನು ಕುರಿತು ಬರೆದಿರುವ

ಅವರು ಆಯುವ ಕವಿ
ಇವರು ಈಯುವ ಕವಿ

ಎಂಬ ಹನಿಗವಿತೆಯನ್ನು ನೆನೆಯುತ್ತಾ, ನವೀನ್ ಮಧುಗಿರಿ ಆಯುವ ಕವಿ ಎಂದು ಶ್ಲಾಘಿಸಬಹುದಾಗಿದೆ.

                                                                           -       ಗುಬ್ಬಚ್ಚಿ ಸತೀಶ್.








ಬುಧವಾರ, ಜುಲೈ 22, 2015

’ಮುಗುಳ್ನಗೆ’ ಯ ಎರಡನೇ ಮುದ್ರಣ

ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು 
ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... 
ಅಂದು ನನ್ನ ಕಾದಂಬರಿ ’ಮುಗುಳ್ನಗೆ’ ಯ ಎರಡನೇ ಮುದ್ರಣ ಕೂಡ ಬಿಡುಗಡೆಯಾಗುತ್ತಿದೆ... 
ನಿಮಗಿದೋ ಪ್ರೀತಿಯ ಆಹ್ವಾನ...

ತಪ್ಪದೆ ಬನ್ನಿ...
ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.

ಸೋಮವಾರ, ಜೂನ್ 22, 2015

ಪುಸ್ತಕ ಪ್ರಾಧಿಕಾರದಲ್ಲಿ ಪಾರದರ್ಶಕತೆಯಿಲ್ಲ

        ಕನ್ನಡ ಪುಸ್ತಕ ಪ್ರಾಧಿಕಾರವು ಇತ್ತೀಚೆಗೆ ತಾನೇ ೨೦೧೦ರ ಸಗಟು ಖರೀದಿ ಪ್ರಕ್ರಿಯೆಯನ್ನು ಮುಗಿಸಿದೆ. ಆದರೆ, ಆಯ್ಕೆಯಾದ ಮತ್ತು ತಿರಸ್ಕೃತಗೊಂಡ ಪುಸ್ತಕಗಳ ಪಟ್ಟಿಯನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿಲ್ಲ. ಬಹುತೇಕ ಎಲ್ಲಾ ವಿಷಯಗಳನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವ ಪ್ರಾಧಿಕಾರವು ಈ ವಿಷಯದಲ್ಲಿ ಮೌನವಾಗಿರುವುದು ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ೨೦೧೦ರಲ್ಲಿ ಮೊದಲ ಮುದ್ರಣವಾಗಿ ನನ್ನ ಮಳೆಯಾಗು ನೀ... ಎಂಬ ಕವನವನ್ನು ಪ್ರಕಟಿಸುವುದರ ಮೂಲಕ ನಮ್ಮ ಗೋಮಿನಿ ಪ್ರಕಾಶನವನ್ನು ಪ್ರಾರಂಭಿಸಿ ಇದುವರೆವಿಗೂ ಹನ್ನೆರಡು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. 

ನಮ್ಮ ಪ್ರಕಾಶನದ ಮೊದಲ ಪುಸ್ತಕವು ತಿರಸ್ಕೃತಗೊಂಡಿದೆ ಎಂಬ ವಿಚಾರ ಪ್ರಾಧಿಕಾರವನ್ನು ಸಂಪರ್ಕಿಸಿದಾಗ ತಿಳಿದುಬಂತು. ಆದರೆ, ಪುಸ್ತಕ ತಿರಸ್ಕೃತಗೊಂಡದಕ್ಕೆ ಸೂಕ್ತ ಕಾರಣ ಅಧ್ಯಕ್ಷರಾದ ಡಾ|| ಬಂಜಗೆರೆ ಜಯಪ್ರಕಾಶ್‌ರವರನ್ನು ಮತ್ತು ಕಛೇರಿಯನ್ನು ಫೋನಿನ ಮೂಲಕ ಸಂಪರ್ಕಿಸಿ ಎರಡು ವಾರಗಳ ಮೇಲಾದರೂ ತಿಳಿದು ಬರುತ್ತಿಲ್ಲ. ಪ್ರಾಧಿಕಾರದ ಈ ಹಿಂದಿನ ಬೆಂಗಳೂರಿನ ಪುಸ್ತಕ ಮೇಳದ ಮಳಿಗೆಯ ವಿಚಾರದಲ್ಲೂ ಈಗಾಗಲೇ ನಮ್ಮ ಪ್ರಕಾಶನಕ್ಕೆ ಅನ್ಯಾಯವಾಗಿದ್ದು ಪುಸ್ತಕ ಪ್ರಕಾಶನ ಕುರಿತು ಜಿಗುಪ್ಸೆ ತಳೆಯುವಂತಾಗಿದೆ.

                                                        -       ಗುಬ್ಬಚ್ಚಿ ಸತೀಶ್,

                                                                ಗೋಮಿನಿ ಪ್ರಕಾಶನ, ತುಮಕೂರು.

ಭಾನುವಾರ, ಮೇ 10, 2015

ರಜನಿ ನರಹಳ್ಳಿಯವರ ‘ಆತ್ಮವೃತ್ತಾಂತ’ : ಆತ್ಮಸಂಗಾತಿಗೆ ಅಕ್ಷರಗಳ ಶ್ರದ್ಧಾಂಜಲಿ

       

        ನಾನು ಮತ್ತು ನನ್ನ ಶ್ರೀಮತಿ ತುಮಕೂರಿನ ಶ್ರೀಮತಿ ಎಂ.ಸಿ. ಲಲಿತಾರವರ ಮನೆಗೆ ನನ್ನ ನಾಲ್ಕನೇ ಪುಸ್ತಕ, ಮೊದಲ ಕಥಾಸಂಕಲನ  ಉಘೇ ಉಘೇ ಪುಸ್ತಕ ಬಿಡುಗಡೆ ಕಾಯಕ್ರಮಕ್ಕೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಬೇಕೆಂದು ಕೋರಲು ಹೋಗಿದ್ದೆವು. ಅವರು ಅದಾಗಲೇ ನನ್ನ ಮುಗುಳ್ನಗೆ ಕಾದಂಬರಿ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂದು ನನಗೆ ಶುಭ ಹಾರೈಸಿದ್ದರು. ಆದರೂ, ಮತ್ತೆ ಅವರನ್ನೇ ಕರೆಯಲು ಬಲವಾದ ಒಂದು ಕಾರಣವಿತ್ತು. ಅದೇನೆಂದರೆ, ಅವರು ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗ ಏರ್ಪಡಿಸಿದ್ದ ಕಥಾಸ್ಪರ್ಧೆಯಲ್ಲಿ ನನ್ನ ಟ್ಯೂಷನ್ ಫೀಸು ಕಥೆಗೆ ಎರಡನೇ ಬಹುಮಾನ ಬಂದಿತ್ತು. ಮತ್ತು ಆ ನಂತರವೂ ಅವರ ಅನನ್ಯ ಸಾಂಸ್ಕೃತಿಕ ವೇದಿಕೆಯ ಕಥಾಸ್ಪರ್ಧೆಯಲ್ಲಿ ಅಂಕುರ ಕಥೆಗೆ ಸಮಾಧಾನಕರ ಬಹುಮಾನವೂ ಬಂದಿತ್ತು. ಅವರು ನನ್ನೊಳಗಿದ್ದ ಕಥೆಗಾರನಿಗೆ ವೇದಿಕೆ ಕಲ್ಪಿಸಿಕೊಟ್ಟರೆಂಬ ಅಭಿಮಾನದ ಮೇರೆಗೆ ಅವರೇ ಮುಖ್ಯ ಅತಿಥಿಗಳಾಗಿ ಬರಲಿ ಎಂದು ಆಶಿಸಿದ್ದೆ. ಸಾಮಾನ್ಯವಾಗಿ ನಮ್ಮ ಗೋಮಿನಿ ಪ್ರಕಾಶನದ ಯಾವುದೇ ಕಾರ್ಯಕ್ರಮಕ್ಕೂ ಒಮ್ಮೆ ಅತಿಥಿಗಳಾಗಿ ಬಂದವರನ್ನು ಅತಿಥಿಗಳಾಗೇ ಮತ್ತೆ ಕರೆಯಬಾರದೆಂಬ ಅಲಿಖಿತ ನಿಯಮವಿದ್ದರೂ ಅವರ ಮೇಲಿನ ಅಭಿಮಾನದಿಂದ ನಾವು ಅಂದು ಅವರ ಮನೆಯಲ್ಲಿದ್ದವು.

        ಅಂದು ಅವರ ಮನೆಯಲ್ಲಿ ನನ್ನ ಶ್ರೀಮತಿಯ ಕಣ್ಣಿಗೆ ರಜನಿ ನರಹಳ್ಳಿಯವರ ಆತ್ಮವೃತ್ತಾಂತ (ಕಾದಂಬರಿ) ಪುಸ್ತಕವು ಕಂಡಿತು. ಅವಳು ಆ ಪುಸ್ತಕವನ್ನು ಕೈಗೆತ್ತಿಕೊಂಡು ಮುಖಪುಟದ ಮೇಲೊಮ್ಮೆ ಅತೀವ ಕಕ್ಕುಲತೆಯಿಂದ ಕಣ್ಣಾಡಿಸಿ, ಮೇಡಮ್, ಈ ಪುಸ್ತಕವನ್ನು ಓದಿ ಕೊಡುತ್ತೇನೆ ಎಂದು ತೆಗೆದುಕೊಂಡಳು. ಮೇಡಮ್ ಮನೆಯಲ್ಲಿ ಹಲವು ಪುಸ್ತಕಗಳಿದ್ದರೂ, ನನ್ನ ಬಳಿಯಿದ್ದ ಹಲವು ಪುಸ್ತಕಗಳನ್ನು ಮೊದಲು ಓದೋಣವೆಂದು ನಾನೆಂದೂ ಅವರನ್ನು ಪುಸ್ತಕ ಕೇಳಿರಲಿಲ್ಲ. ಮೇಡಮ್ಮು ಸಹ ಆ ಪುಸ್ತಕವನ್ನು ಹೊಗಳಿ ಒಂದೆರೆಡು ನಿಮಿಷ ಮಾತನಾಡಿ, ಮನೆಯಲ್ಲಿ ಸಾಕಿದ ನಾಯಿಯ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ,  ಓದಿ ಎಂದರು.

        ನಮ್ಮ ಮನೆಗೆ ಸಾಮಾನ್ಯವಾಗಿ ಯಾವುದೇ ಪುಸ್ತಕ ಬಂದರೂ ಮೊದಲು ಓದುವುದು ನಾನೇ ಆದ್ದರಿಂದ ರಘು ಅಪಾರರವರ ಮುಖಪುಟವೇ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಮಾಡಿಬಿಟ್ಟಿತು. ಧಾರವಾಡದ ಮನೋಹರ ಗ್ರಂಥಮಾಲೆಯ ಪ್ರಕಟಣೆಯೆಂದರೆ (ಶ್ರೀಮತಿ ಎಂ.ಸಿ. ಲಲಿತಾರವರು ಮನೋಹರ ಗ್ರಂಥಮಾಲೆಯ ಚಂದಾದಾರರು. ಆ ಕಾರಣ ಈ ಪುಸ್ತಕ ಅವರ ಮನೆಯಲ್ಲಿತ್ತು) ಪುಸ್ತಕದ ಅಚ್ಚುಕಟ್ಟುತನ ಪುಟಪುಟದಲ್ಲೂ ಅಚ್ಚಾಗಿರುತ್ತದೆ. ಮತ್ತು ಪುಸ್ತಕದ ಬಗ್ಗೆ ಮೊದಲೇ ನನಗೆ ಗೊತ್ತಿದ್ದರಿಂದ ಓದಲು ಶುರು ಮಾಡಿದೆ.

        ಪುಸ್ತಕದ ಪ್ರಕಾಶಕರೇ ಇದು ವಿನೂತನ ಪ್ರಯೋಗ, ಲೇಖಕರು ಪರಕಾಯ ಪ್ರವೇಶ ಮಾಡಿ ಅತ್ಯಂತ ನಿಕಟ ಆತ್ಮಸಂಗಾತಿ (ನಾಯಿ) ಯ ಮೂಲಕ ಕತೆ ಹೇಳಲು ತೊಡಗುತ್ತಾರೆ ಎಂದು ಹೇಳುತ್ತಾ ಪುಸ್ತಕದ ವಿವಿಧ ಮಜಲುಗಳ ಬಗ್ಗೆ ಸಂಕ್ಷಿಪ್ತವಾಗಿ ಬರೆದಿದ್ದಾರೆ. ಇನ್ನು ಲೇಖಕಿ ರಜನಿ ನರಹಳ್ಳಿಯವರು (ಕನ್ನಡದ ಖ್ಯಾತ ವಿಮರ್ಶಕರಲ್ಲೊಬ್ಬರಾದ ಡಾ|| ನರಹಳ್ಳಿ ಬಾಲಸುಬ್ರಮಣ್ಯರ ಶ್ರೀಮತಿ) ಆತ್ಮವೃತ್ತಾಂತ ದ ವೃತ್ತಾಂತವೆಂದು ತಮ್ಮ ಅನಿಸಿಕೆಯನ್ನು ತಾಜ್ ಮಹಲ್ ಆಥವಾ ಸಮಾಧಿ ಕಟ್ಟದೆ, ಬಿಳಿಯ ಕಾಗದದ ಮೇಲೆ ಕಪ್ಪು ಅಕ್ಷರಗಳ ಮೂಲಕ ಶ್ರದ್ಧಾಂಜಲಿ ಯಾಗಿ ತಮ್ಮ ಮತ್ತು ಕುಟಂಬದ ಪ್ರೀತಿ ಪಾತ್ರವಾಗಿ ಎರಡು ತಿಂಗಳ ಮರಿಯಿಂದ ಹದಿನಾಲ್ಕುವರೆ ವರ್ಷದ ವೃದ್ಧಾಪ್ಯದವರೆಗೂ ಬದುಕಿ ಬಾಳಿದ ಮುದ್ದು ಲಿಯೋ ಸವಿನೆನಪನ್ನು ದಾಖಲಿಸಿದ್ದೇನೆ ಎಂದಿದ್ದಾರೆ.

        ಈ ಕಾದಂಬರಿಯ ವಸ್ತು ನಾಯಿ ಮತ್ತದರ ಬಾಳು. ಜೊತೆಗೆ ಅದರ ಹಿಂದಿನ ತಲೆಮಾರಿನ ನಾಯಿಗಳ ಆತ್ಮಕತೆಗಳು ಸೇರಿಕೊಂಡಿವೆ. ಇದೆಲ್ಲವನ್ನು ನಾಯಿಯನ್ನು ಸಾಕಿ ಸಲಹುವ ಅಮ್ಮ (ಲೇಖಕಿ) ನಾಯಿಯ ಪರಕಾಯ ಪ್ರವೇಶ ಮಾಡಿ ನಿರೂಪಿಸುತ್ತಾ ಹೋಗುತ್ತಾರೆ. ಅದಮ್ಯ ಜೀವನ ಪ್ರೀತಿಯಿಂದ, ಅತೀವ ಸೂಕ್ಷ್ಮ ಸಂಗತಿಗಳಿಂದ, ವೈಚಾರಿಕತೆಯ ದೃಷ್ಟಿಕೋನದಿಂದ ಈ ಪುಸ್ತಕ ಸುಲಭವಾಗಿ ಓದಿಸಿಕೊಳ್ಳುತ್ತದೆ. ಬರೀ ಓದುವ ಹವ್ಯಾಸವುಳ್ಳವರಿಗೆ ಈ ಪುಸ್ತಕ ರಸದೌತಣ ಬಡಿಸಿದರೆ, ಬರೆಯುವವರಿಗೆ ಬರವಣಿಗೆಯ ಶ್ರದ್ದೆಯ ಪ್ರತೀಕದಂತೆ ತೋರಲೂಬಹುದು. ಇನ್ನೂ ಪ್ರಾಣಿಪ್ರಿಯರಿಗೆ (ಅದರಲ್ಲೂ ನಾಯಿ ಸಾಕಿದ್ದವರಿಗೆ, ಸಾಕುತ್ತಿರುವವರಿಗೆ) ಕಣ್ಣಂಚಿನಲ್ಲಿ ನೀರು ತರಬಹುದು. ಓದಿದ ಮೇಲು ಕಾಡುವ ಹಲವು ಪುಸ್ತಕಗಳಲ್ಲಿ ಈ ಪುಸ್ತಕವು ನಿಮ್ಮ ಮನಸ್ಸಿನಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ.

        ಇನ್ನು ಮುನ್ನುಡಿ ಬರೆದಿರುವ ಖ್ಯಾತ ವಿಮರ್ಶಕರಾದ ರಹಮತ್ ತರೀಕೆರೆಯವರ ಮಾತುಗಳು ತುಂಬಾ ಮೌಲಿಕವಾಗಿವೆ. ಬೆನ್ನುಡಿ ಬರೆದಿರುವ ಖ್ಯಾತ ಲೇಖಕಿ ವೈದೇಹಿಯವರೂ ಕೂಡ ಯಾರೂ ಮುಖ್ಯರಲ್ಲ, ಯಃಕಶ್ಚಿತ್ ಹುಳುವೂ ಅಮುಖ್ಯವಲ್ಲ ಎಂಬ ಮಾತುಗಳನ್ನು ಎತ್ತಿ ಹಿಡಿದು ಇದೊಂದು ಕನ್ನಡ ಕಂಡ ಅಪರೂಪದ ಕೃತಿಯೇ ಸರಿ ಎಂದಿದ್ದಾರೆ. ಇಲ್ಲಿ ಯಾರ ಮಾತಲ್ಲೂ ಅತಿಶಯೋಕ್ತಿಯಿಲ್ಲ ಎಂಬುದನ್ನು ಗಮನಿಸಬೇಕಿದೆ. ಯಾಕೆಂದರೆ ಪುಸ್ತಕ ಅಷ್ಟು ಚೆನ್ನಾಗಿದೆ.

        ಈ ಪುಸ್ತಕವನ್ನು ಒಂದೇ ಉಸಿರಿಗೆ ಅರ್ಧಭಾಗ ಓದಿದೆನಾದರೂ, ಉಳಿದ ಭಾಗವನ್ನು ಬೇಗ ಓದಿ ಮುಗಿಸಲಾಗಲಿಲ್ಲ. ಒಂದು ಬೆಳಿಗ್ಗೆ ಹಾಲು ತರಲು ಹೋದಾಗ ಸಿಕ್ಕಿದ ಶ್ರೀಮತಿ ಎಂ.ಸಿ.ಲಲಿತಾರವರು ಪುಸ್ತಕವನ್ನು ಅವರ ಸ್ನೇಹಿತೆಯೊರಬ್ಬರು ಓದುಲು ಕೇಳುತ್ತಿದ್ದಾರೆಂದು ಹೇಳಿದಾಗ, ಎಚ್ಚೆತ್ತಕೊಂಡ ನಾನು ಮತ್ತೆ ಮೂರು ದಿನದ ಅವಧಿ ಕೇಳಿ ಅಷ್ಟರಲ್ಲಿ ಓದಿ ಮುಗಿಸಿದೆ. ಇಷ್ಟು ದಿನ ಒಂದು ಒಳ್ಳೆಯ ಪುಸ್ತಕವನ್ನು ಓದದೇ ಇದ್ದದ್ದಕೆ ಪಶ್ಚತ್ತಾಪವನ್ನೂ ಪಟ್ಟೆ. ಇನ್ನೂ ಓದುತ್ತೇನೆ ಎಂದು ಪುಸ್ತಕ ಕೇಳಿ ತಂದಿದ್ದ ನನ್ನ ಶ್ರೀಮತಿ ಪುಸ್ತಕದ ಆದಿ-ಅಂತ್ಯವನ್ನು ಯಾವಗಲೋ ಓದಿದ್ದರಿಂದ ಆಗಾಗ ನಮ್ಮ ಮನೆಯಲ್ಲಿ-ಮನಸ್ಸಲ್ಲಿ ಈ ಪುಸ್ತಕದ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ.

        ಮುನ್ನುಡಿಯಲ್ಲಿ ರಹಮತ್ ತರೀಕೆರೆ ಸರ್,  ನಾನು ನಾಯಿಯನ್ನು ಭೈರವನ ವಾಹನವೆಂದು ಆರಾಧಿಸುವ ನಾಥಪಂಥದ ಅಧ್ಯಯನ ಮಾಡಿದವನು. ಸ್ವತಃ ನಾಯಿ ಸಾಕಿ ಅದರ ಪಾಡನ್ನು ಪಟ್ಟವನು ಮತ್ತು ಅದರ ಬಗ್ಗೆ ಬರೆದವನು. ಸ್ವಾರಸ್ಯಕರವಾದ ಈ ಕಾದಂಬರಿ ಓದು ನನಗೆ ಖುಶಿ ಕೊಟ್ಟಿದೆ. ಈ ಖುಶಿಯು ಎಲ್ಲ ಓದುಗರಿಗೂ ಸಿಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ನನಗೂ ಅಷ್ಟೇ. ನಾಯಿ ಸಾಕಿದ ಅನುಭವವಿದೆ. ನಾಯಿಯನ್ನೇ ಕೇಂದ್ರವಾಗಿರಿಸಿಕೊಂಡು ಬರೆದ ದೋಬಿಘಾಟಿನ ಗೆಳೆಯರು ಎಂಬ ಲಲಿತ ಪ್ರಬಂಧಕ್ಕೆ ಸುಧಾ ಯುಗಾದಿ ವಿಶೇಷಾಂಕ -೨೦೧೫ ರ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಬಂದಿದೆ. ನಾನೂ ಹೇಳುತ್ತಿದ್ದೇನೆ ಈ ಪುಸ್ತಕವನ್ನು ನೀವೂ ಓದಿ, ನಿಮ್ಮ ಓದಿನ ಖುಶಿಯನ್ನು ಹೆಚ್ಚಿಸಿಕೊಳ್ಳಿ, ಮತ್ತಷ್ಟು ವಿಸ್ತರಿಸಿಕೊಳ್ಳಿ.

        ಅಂದಹಾಗೆ, ಈ ಪುಸ್ತಕಕ್ಕೆ ೨೦೧೩ನೇ ಸಾಲಿನ ತುಮಕೂರಿನ ವೀಚಿ ಸಾಹಿತ್ಯ ಪ್ರಶಸ್ತಿ ದೊರೆತಿದೆ.  ಧಾರವಾಡ ಶ್ರೀಮತಿ ರತ್ನಮ ಹೆಗ್ಗಡೆ ಪ್ರಶಸ್ತಿಗೆ ಆಯ್ಕೆಯಾದ ಮೂರು ಪುಸ್ತಕಗಳಲ್ಲಿ ಇದೂ ಒಂದು. ಮತ್ತೊಂದು ಪುಸ್ತಕ ನಮ್ಮ ಗೋಮಿನಿ ಪ್ರಕಾಶನದಿಂದ ಪ್ರಕಟವಾದ ಶ್ರುತಿ ಬಿ.ಎಸ್.ರವರ ಬದುಕ ದಿಕ್ಕು ಬದಲಿಸಿದ ಆಸ್ಟೀಯೋ ಸರ್ಕೋಮ ಎಂಬುದು ನಮ್ಮ ಬೋನಸ್ ಖುಶಿ.

        ಲೇಖಕಿ ಶ್ರೀಮತಿ ರಜನಿ ನರಹಳ್ಳಿಯವರಿಗೆ ಈ ಮೂಲಕ ಅಭಿನಂದನೆಗಳು. ಪುಸ್ತಕ ಕೊಟ್ಟ ಶ್ರೀಮತಿ ಎಂ.ಸಿ. ಲಲಿತಾರವರಿಗೆ ನಮ್ಮ ಧನ್ಯವಾದಗಳು. ಪುಸ್ತಕ ಹಿಂದಿರುಗಿಸಲು ಹೋದಾಗ ಅವರು ಸಾಕಿದ್ದ ನಾಯಿಯ ನೆನೆದು ಅವರ ಕಣ್ಣುಗಳು ಒದ್ದೆ ಒದ್ದೆ.

                                                        -       ಪ್ರೀತಿಯಿಂದ,
                                                               ಗುಬ್ಬಚ್ಚಿ ಸತೀಶ್.







ಶನಿವಾರ, ನವೆಂಬರ್ 22, 2014

ಹೈಕುಗಳು ಮತ್ತು ಮನೋಜ


        ನನಗೆ ಮೊದಲಿಗೆ ಹೈಕುಗಳು ಪರಿಚಯವಾಗಿದ್ದು ತುಮಕೂರಿನ ಗ್ರಂಥಾಲಯದಲ್ಲಿ ದೊರೆತ ಅಂಕುರ್ ಬೆಟಗೆರಿಯವರ ಹಳದಿ ಪುಸ್ತಕ ದ ಮೂಲಕ. ಆ ಪುಸ್ತಕದ ಮೂಲಕ ನನಗೆ ಹೈಕುಗಳ ಪ್ರಾಥಮಿಕ ಮಾಹಿತಿ ದೊರೆಯಿತಾದರೂ ನನಗೆ ಹೈಕುಗಳನ್ನು ಬರೆಯಬೇಕು ಎಂದೆನಿಸಲಿಲ್ಲ. ಆದರೆ, ಸುಮಾರು ಅದೇ ಸಮಯದಲ್ಲಿ ಒಂದು ದಿನ ನಾನು ವೃತ್ತಿಯಲ್ಲಿ ವೈದ್ಯರಾದ ನನ್ನ ಹಿರಿಯ ಮಿತ್ರರಾದ ಡಾ|| ಕೆ.ಬಿ. ರಂಗಸ್ವಾಮಿಯವರ ಕ್ಲಿನಿಕ್ಕಿಗೆ ಹೋಗಿದ್ದೆ. ಅವರ ಗರಿಕೆ ಪುಸ್ತಕದ ಹನಿಗವಿತೆಗಳನ್ನು ಬಹಳವಾಗಿ ಮೆಚ್ಚಿದ್ದ ನಾನು ಅವರ ಪುಸ್ತಕವೊಂದನ್ನು ಪ್ರಕಟಿಸುವ ಆಸೆ ವ್ಯಕ್ತಪಡಸಿದೆ. ಆಗ ಅವರು ಬೆಳದಿಂಗಳ ಹೈಕುಗಳನ್ನು ಕುರಿತು ಹೇಳಿದರು. ಅಲ್ಲಿಯೇ ಕೆಲವನ್ನು ಓದಿದ ನಾನು ಮತ್ತು ನನ್ನ ಶ್ರೀಮತಿ ಆಶ್ಚರ್ಯಚಕಿತರಾದೆವು. ನಾನು ಅದೇ ಪುಸ್ತಕವನ್ನು ಪ್ರಕಟಿಸುವುದಾಗಿ ಅವರಿಂದ ಅನುಮತಿ ಪಡೆದೆ. ಅವರು ಅದರ ಜೊತೆಜೊತೆಯೇ ಅವರದೇ ಸಮೃದ್ಧ ಪ್ರಕಾಶನದ ಮೂಲಕ ಗರಿಕೆಯ ಮುಂದುವರೆದ ಭಾಗದಂತಿರುವ ಕವಿತೆಗಷ್ಟೇ ಸಾಧ್ಯ ಪುಸ್ತಕವನ್ನು ಪ್ರಕಟಿಸುವುದಾಗಿ ಹೇಳಿದರು. ಈ ಬೆಳದಿಂಗಳ ಹೈಕುಗಳನ್ನು ನಾನು ನನ್ನ ಸಹೋದ್ಯೋಗಿ ಕವಿಮಿತ್ರ ಮನೋಜನಲ್ಲಿ ಹಂಚಿಕೊಂಡಾಗ ಅಂದೇ ಅವನ ಕಣ್ಣುಗಳಲ್ಲಿ ಕುತೂಹಲಭರಿತ ಮಿಂಚೊಂದು ಹರಿದಿತ್ತು.

        ಅಂದಿನಿಂದ ಆತ ನಮ್ಮ ಗೋಮಿನಿ ಪ್ರಕಾಶನದಲ್ಲಿ ಬೆಳದಿಂಗಳ ಹೈಕುಗಳು ಪುಸ್ತಕ ಪ್ರಕಟವಾಗಿ ಬಿಡುಗಡೆಯಾಗುವ ಕ್ಷಣವನ್ನು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾದಿರಬಹುದು ಎಂದರೆ ತಪ್ಪಾಗಲಾರದೇನೋ!? ಯಾಕೆಂದರೆ ಈತ ಆಗಾಗ ಪುಸ್ತಕ ಬಿಡುಗಡೆ ಯಾವಾಗ? ಯಾವಾಗ? ಎಂದು ಕೇಳುತ್ತಲೇ ಇದ್ದ. ಆ ಪುಸ್ತಕ ಬಿಡುಗಡೆಯ ದಿನ ಇವನು ಪುಸ್ತಕ ಬಿಡುಗಡೆಯಾದ ಕ್ಷಣವೇ ಬೆಳದಿಂಗಳು ಹೈಕುಗಳು ಪುಸ್ತಕವನ್ನು ಕೊಂಡುಕೊಂಡು ಅಲ್ಲಿಯೇ ಸ್ವಲ್ಪ ಹೊತ್ತು ಓದಿ ಹೈಕುಗಳನ್ನು ರಚಿಸಿದ ಎಂಬ ಮಾಹಿತಿ ನನಗಿದೆ. (ಗಮನಿಸಿ : ಆತ ಅಂದು ಬಿಡುಗಡೆಯಾದ ಐದು ಪುಸ್ತಕಗಳ ಪೈಕಿ ಕೊಂಡದ್ದು ಇದೊಂದೇ ಪುಸ್ತಕ ಮತ್ತು ಕಾರ್ಯಕ್ರಮ ನಡೆಯುವ ಜಾಗದಲ್ಲಿ ಒಳಗಡೆ ಬಂದು ಕುಳಿತಿರಲೇ ಇಲ್ಲ)

        ಅಂದಿನಿಂದ ಶುರುವಾದ ಈತನ ಹೈಕು ಪ್ರೀತಿ ಇದೀಗ ಆತನ ಮನೋಜ್ಞ ಹೈಕುಗಳು ಪುಸ್ತಕ ಬಿಡುಗಡೆಯ ಈ ಕ್ಷಣದವರಿಗೂ ಬಂದು ಮುಂದುವರಿಯುತ್ತಿದೆ. ಈತನ ಮೂಲ ಹೆಸರು ಮನೋಜ್ ಎಂ. ಎಂದಾದರೂ ಕಾವ್ಯನಾಮವಾಗಿ ಹೆಸರಿಗೆ ಮೊದಲು ಮಕರಂದ ಎಂದು ಸೇರಿಸಿಕೊಂಡಿದ್ದಾನೆ. ಮಕರಂದವೆಂದರೆ ಹೂವಿನ ರಸ, ಮನೋಜನೆಂದರೆ ನಿಮಗೆ ಗೊತ್ತೇ? ಗೊತ್ತಿಲ್ಲವಾದರೆ ತಿಳಿದುಕೊಳ್ಳಿ ಮನೋಜನೆಂದರೆ ಮನ್ಮಥ! ಇನ್ನೂ ಈತನ ಈ ಸಂಕಲನದ ಹೆಸರಿನಲ್ಲಿ ಮನೋಜ್ಞ ಇದೆ. ಮನೋಜ್ಞ ಎಂದರೆ, ಸುಂದರವಾದ ಹೃದಯಂಗಮವಾದ ಎಂಬ ಅರ್ಥವಿದೆ. ನಾನಿಲ್ಲಿ ಇದನ್ನೇಲ್ಲಾ ಏಕೆ ಪ್ರಸ್ತಾಪಿಸುತ್ತಿದ್ದೇನೆಂದರೆ, ಈತನ ಹೆಸರಿನಲ್ಲೂ, ಪುಸ್ತಕದ ಹೆಸರಿನಲ್ಲೂ ಸೌಂದರ‍್ಯವಿದೆ!

        ಜೀವನದಲ್ಲಿ ಏನನ್ನಾದರೂ ಮಾಡಬೇಕೆಂದರೆ ಒಂದು ಯೋಗ್ಯತೆ ಇರಬೇಕು, ಇಲ್ಲಾಂದ್ರೆ  ಯೋಗ ಇರಬೇಕಂತೆ. ಯೋಗ್ಯತೆ ನನಗೆ ಇಲ್ಲಾ ಎಂದರೆ, ನನ್ನ ಪ್ರೀತಿಯ ಎಂ.ಎಚ್.ಎನ್ ಸರ್ ಇದೆ ಎಂದದ್ದರಿಂದ ಮತ್ತು ಇದೊಂದು ಒಳ್ಳೆ ಯೋಗವೆಂದೇ ನಾನು ಭಾವಿಸುತ್ತಾ ಈ ಪುಸ್ತಕವನ್ನು ನಿಮಗೆ ಪರಿಚಯಿಸುವ ಒಂದು ಗುಬ್ಬಿ ಪ್ರಯತ್ನವನ್ನು ಮಾಡುತ್ತಿದ್ದೇನೆ.

        ಮೊದಲಿಗೆ, ಹೈಕುಗಳ ಬಗ್ಗೆ ಸಂಕ್ಷೀಪ್ತವಾಗಿ ಹೇಳಿಬಿಡುತ್ತೇನೆ. ಹೈಕುಗಳ ಮೂಲ ಜಪಾನ್. ಹೈಕುಗಳ ರಚನಾ ವಿನ್ಯಾಸವೇನೆಂದರೆ ೫-೭-೫ ಸಿಲೆಬಲ್‌ಗಳಲ್ಲಿ ಪದಗಳಿರಬೇಕು. ಪ್ರಕೃತಿ ಅಥವಾ ಕಾಲವನ್ನು ಪ್ರತಿನಿಧಿಸಬೇಕು ಎಂದಿದೆ. ಮತ್ತು ಎರಡು ವಿರುದ್ಧ ಆಲೋಚನೆಗಳನ್ನು ಹೊಂದಿರಬೇಕು. ಮತ್ತು ಬರೆಯಲು ಸಾಮರ್ಥ್ಯ ಹಾಗೂ ನೈಪುಣ್ಯತೆ ಇರಬೇಕು. ಇದೆಲ್ಲಾ ಮಾಹಿತಿ ನನಗೆ ದೊರೆತದ್ದು ಅಂಕುರ್ ಬೆಟಗೇರಿಯವರ ಹಳದಿ ಪುಸ್ತಕ ದಿಂದ, ಡಾ|| ಕೆ.ಬಿ.ರಂಗಸ್ವಾಮಿಯವರ ಒಡನಾಟದಿಂದ, ಡಾ|| ರಘುರಾಂ ಸರ್‌ರವರು ಬೆಳದಿಂಗಳ ಹೈಕುಗಳು ಪುಸ್ತಕಕ್ಕೆ ಬರೆದ ಸವಿಸ್ತಾರವಾದ ಮುನ್ನುಡಿಯಿಂದ ಮತ್ತು ಡಾ|| ನವೀನ್ ಹಳೇಮನೆಯವರಿಂದ. ಈ ಹೈಕುಗಳ ಬಗ್ಗೆ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆಂದರೆ ಬಿಡುವಾದ ಸಮಯದಲ್ಲಿ ಇವರನ್ನು ಭೇಟಿ ಮಾಡಿಯೋ ಇಲ್ಲಾ ಇವರ ಪುಸ್ತಕಗಳನ್ನು ಓದಿಯೋ ತಿಳಿಯಬಹುದು. ಈ ನಿಟ್ಟಿನಲ್ಲಿ ಮತ್ತೊಂದು ಮುಖ್ಯ ಪುಸ್ತಕವೆಂದರೆ ಡಾ|| ಕೆ.ಬಿ. ಬ್ಯಾಳಿಯವರು ಬರೆದಿರುವುದು.

        ಮನೋಜನ ಬಹುತೇಕ ಹೈಕುಗಳು ಈ ನಿಯಮಗಳನ್ನು ಪಾಲಿಸಿವೆ. ಮತ್ತು ಉಪಗ್ರಹವನ್ನು ಒಳಗೊಂಡೊಂತೆ ಸೂರ‍್ಯನ ಕಿರಣ ತಾಕುವ ಎಲ್ಲ ಜೀವಿಗಳ, ವಸ್ತುಗಳ ಮೇಲೂ ಮತ್ತು ಅದರಾಚೆಗೂ ವಿಸ್ತರಿಸಿವೆ. ಅವುಗಳಲ್ಲಿ ನನ್ನನ್ನು ಸೆಳೆದ ಕೆಲವು ಹೈಕುಗಳು ಹೀಗಿವೆ:

ಪಟ್ಟಂತ ಹಾರಿ
ಹೋಗುವ ಪ್ರಾಣಪಕ್ಷಿ
ಬಾಳು ಕ್ಷಣಿಕ

ಹಸಿದ ಹೊಟ್ಟೆ
ಪೂಜಾರಿ ಕೈಯಲ್ಲಿದೆ
ನೈವೇದ್ಯ ತಟ್ಟೆ

ಸ್ವಾರ್ಥದ ಹಗೆ
ಸಕಲವೂ ನಿರ್ನಾಮ
ಯುದ್ಧವೇ ಹಾಗೆ

ಮನದ ಶಾಂತಿ
ಟಿ ವಿ. ಸ್ವಾಮೀಜಿಗಳ
ಭವಿಷ್ಯದಲ್ಲಿ

ಜನ ಸಾಗರ
ಸಾಹಿತ್ಯ ಸಮ್ಮೇಳನ
ಊಟಕ್ಕಾಗಿ ಕ್ಯೂ

ವಿಜ್ಞಾನ ಖಡ್ಗ
ಝಳಪಿಸೆ; ತತ್ತರ
ಮೂಢನಂಬಿಕೆ

ಅನ್ನ ಹಸಿವ
ನೀಗಿಸಿತೇ ಹೊರೆತು
ಪ್ರತಿಷ್ಠೆಯಲ್ಲ

ಮುಂಜಾನೆ ಸೂರ್ಯ
ಆಕಾಶ ಹಣೆಗಿಟ್ಟ
ತುಂಬು ಕುಂಕುಮ

ಜೀವ ತೆಗೆವ
ರೇಷ್ಮೆಗೂಡ ಗೋಡೆಗೂ
ಚಿನ್ನ ಲೇಪನ

ಒಗೆದ ಕಲ್ಲು
ಅಲೆಯ ಮೂಡಿಸಿಯೂ
ಕೊಳ ನಿಶ್ಯಬ್ಧ (ಪ್ರೇರಣೆ: ಜಪಾನಿ ಬಾಶೋನ ದಿ ಪಾಂಡ್)

ಮಾರ್ಜಾಲ ಮೀಸೆ
ಬಿಸಿಹಾಲನ್ನು ಮುಕ್ಕಿ
ಕರಕಲಾಯ್ತು

೩*೬ ಜಾಗ
ಕೊನೆಗೂ ಉಳಿಯೋದು
ಚಿರ ನಿದ್ರೆಗೆ

ಈ ಹೈಕುಗಳು ನನ್ನನ್ನು ಏಕೆ ಸೆಳೆದವೆಂದರೆ ಅವುಗಳಲ್ಲಿನ ಸಮಾಜಮುಖಿ ಧೋರಣೆ, ವರ್ತಮಾನಕ್ಕೆ ಸ್ಪಂದನೆ, ವೈಚಾರಿಕತೆ, ಆಧ್ಯಾತ್ಮ, ಮತ್ತು ನಾನು ಒಂದು ಉತ್ತಮ ಕೃತಿಯೆಂದರೆ ಇರಲೇ ಬೇಕೆಂದುಕೊಂಡಿರುವ ಯೂನಿವರ್ಸಲ್ ಅಪ್ರೋಚ್ ಅಂದರೆ ತನ್ನ ವಿಶ್ವಾತ್ಮಕ ಅನುಸಂಧಾನದ ಗುಣಗಳಿಂದಾಗಿ. ಇನ್ನೂ ಕೆಲವು ಹೈಕುಗಳನ್ನು ನೀವು ಈ ನಿಟ್ಟಿನಲ್ಲಿ ಓದಿಕೊಳ್ಳಬಹುದು.

ಇದೇ ಮನೋಜ್

ಆಕಾಶ ಭೂಮಿ
ಶುಭವಿವಾಹ; ಮಳೆ
ಮಂಗಳವಾದ್ಯ

ಗೆಜ್ಜೆಯ ಕಟ್ಟಿ
ಮಳೆ ಕುಣಿದ ವೇಗ
ಭೂಮಿ ತತ್ತರ
ಎಂದು ಮಳೆಯ ಸೊಬಗು ಮತ್ತದರ ರುದ್ರನರ್ತನವನ್ನು ತನ್ನ ಹೈಕುಗಳಲ್ಲಿ ಹಿಡಿದಿದ್ದಾನೆ.

ಈತ ತನ್ನ ಗುರುವೆಂದೇ ಭಾವಸಿರುವ ಕೃಷ್ಣನಿಗೇ ಮೀಸಲಾದ ಹೈಕುಗಳಿವೆ

ಕೊಳಲ ನಾದ
ಗುರುವಿನ ಸೂಚನೆ
ಕಾವ್ಯ ಅರ್ಚನೆ

ತಾನೂ ಯುವಕನಾಗಿ ಯುವಕರಿಗೆ ಬುದ್ದಿ ಮಾತು ಹೇಳಿದ್ದಾನೆ.

ಹದಿಹರೆಯ
ಚಟಗಳ ಒಡೆಯ
ಹುಷಾರಾಗಿರು

ಯುವಜನತೆ
ದೇಶದ ನಿಜಶಕ್ತಿ
ಅರಿವಿದ್ದರೆ

ನಾಲ್ಕು ಗೋಡೆಯ
ಬಿಟ್ಟು ಬನ್ನಿ, ದಕ್ಕಿತೂ
ನಿಜ ಶಿಕ್ಷಣ

ಆದರೆ,

ಪುಸ್ತಕ ಸ್ನೇಹ
ಹಚ್ಚಿಕೊಂಡೆ ಈಗಿಲ್ಲ
ಅನಾಥಪ್ರಜ್ಞೆ

ಹೆಜ್ಜೆ ಹೆಜ್ಜೆಗೂ
ವ್ಯಾಮೋಹ ಕಲ್ಲುಗಳು
ಎಡವಿ ಬಿದ್ದೆ

ಎಂಬ ಹೈಕುಗಳನ್ನು ಗಮನಿಸಿದಾಗ ಈತ ನನಗೆ ಗೊತ್ತಿರುವ ಹಾಗೆ ಓದುವುದು, ಅಂದರೇ ಬೇರೆ ಪುಸ್ತಕಗಳನ್ನು ಓದುವುದು ಬಲು ಅಪರೂಪ ಅಥವಾ ಇಲ್ಲವೆಂದೇ ಹೇಳಬಹುದು. ಈ ಸಂಕಲನದಲ್ಲಿ ಆತ ಹೈಕು ಎಂಬ ವ್ಯಾಮೋಹಕ್ಕೂ ಒಳಗಾಗಿ ಅಲ್ಲಲ್ಲಿ ಬಿದ್ದಿಯೂ ಇದ್ದಾನೆ ಮತ್ತೆ ತಡವರಿಸಿಕೊಂಡು ಎದ್ದೂ ಇದ್ದಾನೆ.

ಈತನ ಒಂದು ಹೈಕು ನನಗೆ ಬಹಳ ಮೆಚ್ಚುಗೆಯಾಯಿತು.

ಹರಿವ ನದಿ
ಹಂಚಿದ ಜ್ಞಾನ; ಸದಾ
ಪವಿತ್ರಮಯ

ಆದರೆ ಈ ಹೈಕು ಬರೆದ ಮನೋಜ ಈ ಸಂಕಲನವನ್ನು ಕ್ರೂಢೀಕರಿಸುವಾಗ ತಾನು ಬರೆದಂತೆ ನಡೆಯದೆ ಎಚ್ಚರತಪ್ಪಿ ಸಂಕಲನದ ಒಟ್ಟು ಅಂದವನ್ನು ಹಾಳುಗೆಡವಿದ್ದಾನೆ. ಈ ಸಂಕಲನಕ್ಕೆ ನನಗೆ ಗೊತ್ತಿರುವಂತೆ ಈತ ಯಾರಿಗೂ ಮುನ್ನುಡಿ, ಬೆನ್ನುಡಿ ಬರೆದುಕೊಡಿ ಎಂದು ಕೇಳಿಲ್ಲ. ನಿಮ್ಮ ಅನಿಸಿಕೆ ಬರೆದು ಕೊಡಿ ಎಂದಷ್ಟೇ ಕೇಳಿದ್ದಾನೆ. ಅವರೂ ಬರೆದು ಕೊಟ್ಟಿದ್ದಾರೆ. ಅವರೆಲ್ಲಾ ಯಾರಂತಿರೀ? ನಮ್ಮ ನಾಡಿನ ಹೆಮ್ಮೆಯ ಕವಿ ವಿಮರ್ಶಕರಾದ ಕೆ.ಪಿ.ನಟರಾಜ್ ಸರ್, ಗೆಳೆಯರಾದ ಡಾ|| ನವೀನ್ ಹಳೇಮನೆ ಸರ್, ಹಿರಿಯರಾದ ಎನ್. ನಾಗಪ್ಪ ಸರ್, ರವೀಂದ್ರನಾಥ ಠಾಗೂರ್ ಸರ್, ಕವಯತ್ರಿ ಸುಶೀಲಾ ಸದಾಶಿವಯ್ಯ ಮೇಡಂ, ಉಗಮ ಶ್ರೀನಿವಾಸ್ ಸರ್, ಆತ್ಮೀಯ ಗೆಳೆಯರಾದ ಡಾ|| ರವಿಕುಮಾರ್ ನೀಹ, ಮತ್ತೊಬ್ಬ ಹಿರಿಯರಾದ ಪ್ರೊ.ಕೆ.ಚಂದ್ರಣ್ಣನವರು, ಮತ್ತು ಕವಯತ್ರಿ ಬಿ.ಸಿ. ಶೈಲಾನಾಗರಾಜ್. ಬರೋಬ್ಬರಿ ಒಂಭತ್ತು ಮಂದಿ. ಅವರ ಅನಿಸಿಕೆಗಳನ್ನೆಲ್ಲಾ ಪ್ರಕಟಿಸಿರುವ ಮನೋಜ್ ತನ್ನ ಎರೆಡೆ ಎರೆಡು ಮಾತುಗಳಲ್ಲಿ ಪ್ರತ್ಯಕ್ಷವಾಗಿ ಎಂತಲೂ ಮತ್ತು ಯಾವ ಮುಲಾಜಿಲ್ಲದೆ ಹೇಳಬೇಕೆಂದರೆ ಆತನಿಗೆ ಹೈಕುಗಳನ್ನು ಪರಿಚಯಿಸಿದ ನನಗಾಗಲಿ, ನನ್ನ ಹೆಸರು ಪರವಾಗಿಲ್ಲವೆಂದರೆ, ಡಾ|| ಕೆ.ಬಿ.ರಂಗಸ್ವಾಮಿಯವರನ್ನಾಗಲಿ ಅಥವಾ ಪುಸ್ತಕ ಮುದ್ರಣಕ್ಕೆ ಮಾಹಿತಿ ನೀಡಿದ ಎಂ.ಎಚ್.ಎನ್.ಸರ್ ರವರನ್ನಾಗಲಿ ನೆನೆಯದೆ ಪರೋಕ್ಷವಾಗಿ ನೆರವಾಗಿದ್ದಾರೆ ಎಂದಷ್ಟೇ ಸರಕಾರಿ ಕಡತದ ಷರಾ ಬರೆದುಬಿಟ್ಟಿದ್ದಾನೆ. ಈತನ ಬರೆಯುವಾಗಿನ, ಪ್ರಕಟವಾಗಿಸುವಿನ ಧಾವಂತ ಇಲ್ಲಿ ಎದ್ದು ಕಾಣುತ್ತದೆ.

ಹರಿವ ನದಿ
ಹಂಚಿದ ಜ್ಞಾನ; ಸದಾ
ಪವಿತ್ರಮಯ

ಮರೆಯಬಾರದು ಮನೋಜ್...

        ಕೆ.ಪಿ.ನಟರಾಜ್ ಸರ್ ರವರು ತಮ್ಮ ಅನಿಸಿಕೆಯಲ್ಲಿ ಕವಿ ಮನೋಜನನ್ನು ಆತನ ಮುಗ್ಧ, ಆಲೋಚನಶೀಲಾ ಜಗತ್ತಿನಿಂದ ನೇರವಾಗಿ ತುಮಕೂರಿನ ಕಾವ್ಯ ಸಂವೇದನೆಯ ನಿಡುಗಾಲದ ಚರಿತ್ರೆಯ ಸಂಪುಟದ ಹೊಸಪುಟಗಳಲ್ಲಿ ಸೇರಿಸುವುದರ ಮೂಲಕ ಆತನ ದೈವಿಕ ಚೈತನ್ಯಕ್ಕೆ ಮಾರುಹೋಗಿದ್ದಾರೆ. ಈ ನಿಟ್ಟಿನಲ್ಲಿ ಮನೋಜನ ಮೇಲೆ ಹೆಮ್ಮೆ ಮೂಡುತ್ತದೆ. ಇವರು ಮುನ್ನುಡಿಯೆಂದು ಭಾವಿಸಿಕೊಂಡು ಬರೆದಿರುವುದರಿಂದ ವಿವರವಾಗಿಯೇ ಪ್ರಸ್ತಾಪಗಳಿವೆ. ಚಂದ್ರ, ಸೂರ‍್ಯ, ಭೂಮಿಧ್ಯಾನ, ಮತ್ತು ಆಲೋಚನಾ ಬಿಂದುಗಳು ಎಂದು ವಿಭಾಗಗಳನ್ನಾಗಿ ಇಲ್ಲಿನ ಹೈಕುಗಳನ್ನು ವಿಂಗಡಿಸಿಕೊಂಡು ತಮ್ಮ ವಿಶಿಷ್ಟ ಶೈಲಿಯಲ್ಲಿ ವಿಮರ್ಶಿಸಿದ್ದಾರೆ. ಜೊತೆಗೆ ಮನೋಜನಿಗೆ ಓದುವಂತೆ ತಾಕೀತು ಮಾಡಿದ್ದಾರೆ.

ರಾತ್ರಿಯ ಮಳೆ
ಗೊಂದಲದ ಪಯಣ-
ಓ ಹೈಕು ಮಿಂಚು!
        ಎಂದು ತಮ್ಮದೇ ಹೈಕೊಂದನ್ನು ಉದ್ಗರಿಸಿರುವ ನವೀನ್ ಸರ್ ಹೈಕುಗಳ ಕಟ್ಟುಪಾಡುಗಳನ್ನು ವಿವರಿಸುತ್ತಾ ಓದುಗನನ್ನೂ ಹೈಕು ಕಟ್ಟೆಂದು ಆಮಂತ್ರಿಸಿರುತ್ತಾರೆ. ಅವರ ಮಾತುಗಳಲ್ಲಿ ಮನೋಜನ ಇತಿಮಿತಿಗಳೂ ವ್ಯಕ್ತವಾಗಿವೆ. ಈ ದೃಷ್ಟಿಯಿಂದ ಈ ಪುಸ್ತಕವೂ ಹೈಕು ಅಭ್ಯಾಸ ಮಾಡುವವರಿಗೆ ಒಂದು ಪಠ್ಯವಾಗಬಲ್ಲದು.
        ಮನೋಜ್ಞ ಹೈಕುಗಳಿಗೆ ಮಮತೆಯ ಮುನ್ನುಡಿಯೆಂದೇ ನಾಗಪ್ಪ ಸರ್ ಸವಿಸ್ತಾರವಾಗಿ ಬರೆಯುತ್ತಾ ಮೊದಲ ಕವನಸಂಕಲನ ದರ್ಪಣ ಸುಂದರಿ ಯಲ್ಲಿ ಪ್ರೀತಿ-ಪ್ರೇಮ ಎನ್ನುತ್ತಿದ್ದ ಕವಿ ಇಲ್ಲಿ ಅಗಾಧವಾದ ಅನುಭವದ ಮಾತುಗಳನ್ನಾಡಿರುವುದನ್ನು ಅಚ್ಚರಿಯಿಂದ ನೋಡಿದ್ದಾರೆ. ಈತನ ಪ್ರಗತಿಪರ ನಿಲುವನ್ನು, ಬುದ್ಧನ ಸೂಕ್ಷ್ಮತೆಯನ್ನು ಹೈಕುಗಳಾಗಿಸಿರುವುದಕ್ಕೆ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ.
        ಹಾರೈಸಿರುವ ರವೀಂದ್ರನಾಥ ಠಾಗೂರ್ ರವರು “Unless I develop self-respect, I will remain under someone else’s foot”  ಎಂದ ದಾರ್ಶನಿಕನ ಹೆಸರನ್ನು ಉಲ್ಲೇಖಿಸದೆ ಮನೋಜನನ್ನು ದಾರ್ಶನಿಕರ ಸಾಲಿಗೆ ಪ್ರೀತಿಯಿಂದ ನಿಲ್ಲಿಸಿಬಿಟ್ಟಿದ್ದಾರೆ.
        ಹೈಕುಗಳ ಮನೋಜ್ಞ ಎಂದು ಶುಭಹಾರೈಸಿರುವ ಕವಯತ್ರಿ ಸುಶೀಲಾ ಸದಾಶಿವಯ್ಯ ಈತನ ಪ್ರತಿಭೆ, ಇನ್ವಾಲ್ವ್‌ಮೆಂಟ್ ಗಳನ್ನು ಮೆಚ್ಚಿ ಮುಂದೆ ಸಂಕಲನ ಸಾಹಿತ್ಯ ಸಿದ್ಧಿಯ ಮೆಟ್ಟಿಲುಗಳನ್ನೇರಲಿ ಎಂದಿದ್ದಾರೆ.

        ಆಶ್ಚರ್ಯದ ಸಂಗತಿಯೆಂದರೆ, ತಮ್ಮ ಪತ್ರಕರ್ತನ ಕೆಲಸದಲ್ಲಿ ಸದಾ ಬ್ಯುಸಿಯಾಗಿರುವ, ಝೆನ್ ಗುರುವಿನಂತೆ ಆಗಾಗ ಭಾಸವಾಗುವ, ಹೆಮ್ಮೆಯ ಹಿರಿಯ ಕವಿಮಿತ್ರರಾದ ಉಗಮ ಶ್ರೀನಿವಾಸ್ ರವರು ಒಂದು ಪುಟ್ಟ ಆಶಯದ ಪ್ಯಾರಾವನ್ನು ಈತನಿಗೆ ಬರೆದುಕೊಟ್ಟಿರುವುದು. ನೋಡಿ ಬರೆಯುವುದು ಕಲೆಯಲ್ಲ ಎಂದು ಆಗಾಗ ನಮ್ಮೆಲ್ಲರಿಗೂ ಕಿವಿಮಾತು ಮತ್ತು ಕವನವಾಗಿಸುವ ಒಳಗುಟ್ಟನ್ನು ಹೇಳುವ ಇವರು ಈತನ ನೋಡಿದ್ದನ್ನೇ ಕಲಾತ್ಮಕವಾಗಿ ಕಟ್ಟಿಕೊಡುವ ಕಲೆಯನ್ನು ಮೆಚ್ಚಿ ಶುಭಹಾರೈಸಿದ್ದಾರೆ.
        ಮನೋಜನ ಹಾಯಿಕುಗಳ ಹಾಯಿ ದೋಣಿಯೊಳಗೆ ನಮ್ಮನ್ನು ಒಂದು ಸುತ್ತು ಹಾಕಿಸುವ ಆತ್ಮೀಯ ಮಿತ್ರರಾದ ರವಿ ಸರ್ ತಾವು ಕವಿಗೋಷ್ಠಿಯೊಂದರಲ್ಲಿ ಈತನ ಹೈಕುಗಳನ್ನು ಮೆಚ್ಚಿದ್ದು, ಆತ ಕಡಿಮೆ ಅವಧಿಯಲ್ಲಿ ನೂರಾರೂ ಹೈಕುಗಳನ್ನು ಬರೆದು ಅಭಿಪ್ರಾಯ ಬರೆದು ಕೊಡಿ ಎಂದು ಕೇಳಿದ್ದನ್ನು ಆಶ್ಚರ್ಯವ್ಯಕ್ತಪಡಿಸುತ್ತಲೇ ಆತನ ಸರಳತೆಯನ್ನು ಎತ್ತಿ ಹಿಡಿದಿದ್ದಾರೆ. ಬದುಕಿನ ಅನಂತತೆ ಮನೋಜನ ಹೈಕುಗಳ ವಸ್ತುವಾಗಿರುವುದನ್ನು ಶ್ಲಾಘಿಸಿದ್ದಾರೆ. ಬದುಕನ್ನು ತುಂತುಂಬಿ ಕುಡಿಯಬೇಕು ಎಂಬ ಬೇಂದ್ರೆಯವರ ಸಾಲೊಂದನ್ನು ಉಲ್ಲೇಖಿಸುತ್ತಾ

ಪ್ರೀತಿ ಅರಸಿ
ಊರೆಲ್ಲಾ ತಿರುಗಿದೆ
ಬಾಳ ಮೂಸದೆ

ಎಂಬ ಹೈಕಿನ ಅದ್ಭುತ ಜೀವನ ದರ್ಶನವನ್ನು ಮೆಚ್ಚುತ್ತಾರೆ. ಇವರು ಮೆಚ್ಚಿರುವ ಕೆಲವು ಹೈಕುಗಳನ್ನು ಓದಿದಾದ ನನಗೆ ಪ್ರಾಮಾಣಿಕವಾಗಿ ಅರಿವಿಗೆ ಬಂದದ್ದು ಇವರ ಅಭಿಪ್ರಾಯವೂ ಒಂದು ಉತ್ತಮ ವಿಮರ್ಶೆಯಾಗಿದೆ.

        ಪ್ರೊ.ಕೆ. ಚಂದ್ರಣ್ಣನವರು ಹೈಕುಗಳಿಗೆ ಮುನ್ನುಡಿಯೆಂದೇ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಮನೋಜನನ್ನು ಹತ್ತಿರದಿಂದ ಬಲ್ಲ ಇವರು ಈತನ ಹೈಕುಗಳು ಏರೋಪ್ಲೇನುಗಳು ಎಂದಿದ್ದಾರೆ. ಅದರಲ್ಲಿ ಅತಿಶಯೋಕ್ತಿಯೇನಿಲ್ಲ. ಮನೋಜನ ಹೈಕುಗಳು ಏರೋಪ್ಲೇನುಗಳೇ ಸರಿ. ಆದರೆ, ಬರೆಯುವಾಗ ಆತ ಆಗಾಗ ಲ್ಯಾಂಡ್ ಆಗುವುದನ್ನು ಕಲಿಯಬೇಕು.

        ಇನ್ನು ಹಿರಿಯ ಕವಯತ್ರಿ ಶೈಲಾ ನಾಗರಾಜ ರವರ ಅಭಿಪ್ರಾಯವನ್ನು ಈತ ಬೆನ್ನುಡಿಯಂತೆ ಮುದ್ರಿಸಿದ್ದು ಅವರು ಈತನ ಜನಮುಖಿ ಸತ್ವವನ್ನು ಹಿಡಿದಿಟ್ಟಿದ್ದಾರೆ. ಬ್ಯಾಂಕಿನ ಕೆಲಸದ ನಡುವೆಯೂ ಹೊಸದೊಂದಕ್ಕೆ ತುಡಿಯುವ ಮನೋಜನ ಹೈಕುಗಳಲ್ಲಿರುವ ಬೆಳಕಿಗೆ ಕನ್ನಡಿ ಹಿಡಿದು ಆ ಬೆಳಕು ಮತ್ತಷ್ಟು ಪ್ರತಿಫಲಿಸುವಂತೆ ಮಾಡಿದ್ದಾರೆ. ಆ ಬೆಳಕಲ್ಲಿ ಮನೋಜ್ ತನ್ನನ್ನು ತಾನು ಮುಂದಿನ ದಿನಗಳಲ್ಲಿಯೂ ಕಾಣಿಸಿಕೊಳ್ಳಬೇಕಿದೆ.

ಇನ್ನು ತನ್ನ ಹೈಕುಗಳ ಅಂತ್ಯಕ್ಕೆ ಮನೋಜ್

ಇದು ಆರಂಭ
ಮುಗಿಯದ ಶೋಧನೆ
ಮುಂದುವರಿಕೆ

ಎಂಬ ಹೈಕನ್ನು ಬರೆಯುತ್ತಾ ಆಶ್ಚರ್ಯ ಮೂಡಿಸುತ್ತಾನೆ. ಜೊತೆಜೊತೆಗೆಯೇ ಕುತೂಹಲ ಮತ್ತು ಗಾಬರಿಯನ್ನು ಹುಟ್ಟುಹಾಕಿದ್ದಾನೆ. ಈತ ಇನ್ನೂ ಯಾವ್ಯಾವ ಹೈಕುಗಳನ್ನು ಬರೆಯಬಹುದೆಂಬ ಕುತೂಹಲ ಒಂದು ಕಡೆಯಾದರೇ, ಬರೆದು ಏನು ಮಾಡುತ್ತಾನೋ ಎಂಬ ಗಾಬರಿ. ಗಾಬರಿ ಯಾಕೆಂದರೆ ಈ ಪುಸ್ತಕದಲ್ಲಿ ಸರಿಪಡಿಸಿಕೊಳ್ಳಬಹುದಾಗಿದ್ದ ಹಲವು ದೋಷಗಳಿವೆ. ಅದು ಪುಸ್ತಕದ ವಿನ್ಯಾಸವಿರಬಹುದು, ಮುಖಪುಟವಿರಬಹುದು, ಇಂಪ್ರೀಂಟ್ ಇರಬಹುದು, ಕಾಗುಣಿತ ದೋಷಗಳಿರಬಹುದು, ನಾನು ಆಗಲೇ ಹೇಳಿದಂತೆ ಪುಸ್ತಕದ ಒಟ್ಟು ಕ್ರೂಢೀಕರಣ. ಅಷ್ಟಕ್ಕೂ ಇಂದಿಂನ ಸಂಭ್ರಮ ಮುಗಿದ ಮೇಲೆ ನಾಳೆಯಿಂದ ಪುಸ್ತಕಗಳನ್ನು ಏನು ಮಾಡಬಹುದು ಎಂದು. ಇದಕ್ಕೆಲ್ಲಾ ಮುಂದಿನ ಪುಸ್ತಕ ಪ್ರಕಟಿಸುವ ಹೊತ್ತಿಗೆ ಯಾವ ವಿಷಯದ ಮೇಲೆ, ಯಾವ ಸಮಯದಲ್ಲಾದರೂ ಹೈಕು ಬರೆಯುವ ಪ್ರತಿಭೆಯಿರುವ ಮನೋಜ್ ಯೋಚಿಸಿ ತನ್ನ ಧಾವಂತದ ಓಟಕ್ಕೆ ಒಂದು ಬಿಗ್ ಬ್ರೇಕ ಹಾಕಲಿ ಎಂದು ಹಾರೈಸುತ್ತಾ, ತನ್ನ ಹವ್ಯಾಸಿ ಪ್ರಕಾಶನ ಉತ್ಸಾಹಿ ಬರಹಗಾರರ ವೇದಿಕೆ ಎಂದಿರುವಾಗ ಈತನದ್ದೇ ಪುಸ್ತಕಗಳನ್ನು ಪ್ರಕಟಿಸುವ ಜೊತಗೆ ಇನ್ನೊಬ್ಬ ಉತ್ಸಾಹಿಗಳ ಪುಸ್ತಕ ಪ್ರಕಟಿಸಿ ತನ್ನ ಪ್ರಕಾಶನವನ್ನು ವಿಸ್ತರಿಸುವಂತೆ ಕಿವಿಮಾತು ಹೇಳುತ್ತೇನೆ.

ಕೊನೆಗೆ, ನನ್ನ ಮೆಚ್ಚಿನ ಡಾ|| ಕೆ.ಬಿ.ರಂಗಸ್ವಾಮಿಯವರ ಹನಿಗವಿತೆ

ಮಿತಿ :
ಕ್ಷಿತಿಜಕ್ಕೆ
ತಾನೇ ಒಡೆಯನೆಂದು
ಭ್ರಮಿಸಿದ
ಗಾಳಿಪಟ
ಸೂತ್ರ ಹರಿದೊಡನೆ
ಮೆಲ್ಲಗೆ
ಇಳಿಯಿತು
ಭುವಿಗೆ!

ವಾಚಿಸುತ್ತಾ ಆನೆ ನಡೆದದ್ದೇ ದಾರಿ ಎಂಬ ಮಾತು ನಿಜ. ಆದರೆ ಅದು ಆನೆಗೆ ಮಾತ್ರ ಅನ್ವಯವಾಗುವ ಮಾತು, ಮನುಷ್ಯರಿಗಲ್ಲ ಎಂದು ಹೇಳುತ್ತಾ, ಒಂದು ಪುಸ್ತಕವನ್ನು ಕುರಿತು ಮಾತನಾಡಲು ನಾನು ತುಮಕೂರಿನಲ್ಲಿ ಕಲಿತದ್ದು ಬಾ.ಹ. ರಮಾಕುಮಾರಿ ಮೇಡಂ, ರವಿ ಸರ್, ಕೆ.ಪಿ.ಎನ್. ಸರ್ ಮತ್ತು ಫೋನಿನಲ್ಲಿ ಧೈರ್ಯ ತುಂಬಿದ ಎಂ.ಎಚ್.ಎನ್. ಸರ್ ರವರಿಂದ. ಅವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಹತ್ತಿರದಿಂದ ನನ್ನನ್ನು ಬಲ್ಲವರು ಖಂಡಿತವಾದಿ ಲೋಕವಿರೋಧಿ ಎನ್ನುತ್ತಾರೆ. ಮನೋಜ್ ಅವಕಾಶಕೊಟ್ಟದ್ದಕ್ಕೆ ಮನೋಜ್ ನನ್ನನ್ನು ಹೀಗೆ ಅರ್ಥೈಸಿಕೊಂಡರೂ ಪರವಾಗಿಲ್ಲ, ನಮ್ಮ ಒಳಗಣ್ಣು ತೆರೆಯದೆ, ನಮ್ಮ ಸುತ್ತಾ ಎಷ್ಟೇ ಬೆಳಕಿದ್ದರೂ ಕತ್ತಲೆಯೇ ಆವರಿಸುತ್ತದೆ ಎಂಬ ನನ್ನದೇ ಮಾತುಗಳು ನಿನಗೂ ಅನ್ವಯವಾಗುತ್ತವೆ ಎಂದು ಹೇಳಿ ವಿರಮಿಸುತ್ತೇನೆ.


ಧನ್ಯವಾದಗಳು.

ಮಂಗಳವಾರ, ನವೆಂಬರ್ 4, 2014

“ಬೆಳದಿಂಗಳು ಮತ್ತು ಮಳೆ” ಮತ್ತು ಒಂದು ಕಿವಿಮಾತು

ಪ್ರೀತಿಯ ಗೆಳೆಯರೇ,
         ಇಂದು ಸಂಜೆ ಪ್ರೀತಿಯ ಗೆಳೆಯರೊಬ್ಬರು, ಸರ್ ನೀವು ಬನ್ನಿ ನಮ್ಮ ಅತಿ ಸಣ್ಣಕತೆಗಳ ಫೇಸ್ ಬುಕ್ ಗುಂಪಿಗೆ ಎಂದು ಆಹ್ವಾನಿಸಿದರು. ಪರಸ್ಪರ ಅಭಿಪ್ರಾಯಗಳನ್ನು ಗೇಮ್ ಮಾಡುವ ಆಲೋಚನೆ ಅವರಿಗಿತ್ತು. ನಾನು ಬೆಳದಿಂಗಳು ಮತ್ತು ಮಳೆ ಪುಸ್ತಕವನ್ನು ಓದಿರುವಿರಾ ಎಂದು ಕೇಳಿ, ಆ ಪುಸ್ತಕ ಕುರಿತು ಹೇಳಿದೆ. ಅವರು ಇಲ್ಲವೆಂದರು. ಆಗಿದ್ದರೆ ಮೊದಲು ಆ ಪುಸ್ತಕವನ್ನು ಓದಿ, ಆ ರೀತಿಯಾಗಿ ನಿಮ್ಮದೇ ಒಂದಷ್ಟು ಕತೆಗಳನ್ನು ಬರೆದುಕೊಡಿ ನಾನೇ ಪ್ರಕಟಿಸುತ್ತೇನೆ ಎಂದೆ. ಅವರು ಸದ್ಯಕ್ಕೆ ಆಯ್ತು ಎಂದರು. ಅವರ ಆಹ್ವಾನವನ್ನು ನಾನು ತಿರಸ್ಕರಿಸುವುದಕ್ಕೆ ನನ್ನ ಮೇಲೆ ಸಿಟ್ಟು ಅಥವಾ ಬೇಜಾರು ಮಾಡಿಕೊಂಡಿರಬಹುದು. ನಾನು ಓದುವುದು ಮತ್ತು ಬರೆಯುವದನ್ನು ಬಿಟ್ಟು ಉಳಿದಿದ್ದೇಲ್ಲಾ ಟೈಮ್ ವೇಸ್ಟ್ ಎಂದು ಭಾವಿಸಿರುವವನು. ಅವರ ಒಳ್ಳೆಯದಕ್ಕೇ ಹೇಳಿದ್ದೇನೆ ಎಂದೂ ಹೇಳಿದ್ದೇನೆ. ಮಿಕ್ಕಿದ್ದು ಅವರಿಗೆ ಬಿಟ್ಟದ್ದು.

         ನಿಮಗೆ ನಮ್ಮ ಪ್ರಕಾಶನದಿಂದ ಪ್ರಕಟಗೊಂಡಿರುವ ವಿ.ಗೋಪಕುಮಾರ್ ರವರ ಬೆಳದಿಂಗಳು ಮತ್ತು ಮಳೆ ನ್ಯಾನೋಕತೆಗಳ ಸಂಕಲನ ಗೊತ್ತಿರಬಹುದು. ಈ ಪುಸ್ತಕವನ್ನು ಓದಿ, ತಮ್ಮ ಅನಿಸಿಕೆಯನ್ನು ಕನ್ನಡ ಸಿನಿಮಾರಂಗದಲ್ಲಿ ಸಹ ನಿರ್ದೇಶಕನಾಗಿರುವ ಪ್ರವೀಣ್ ಕುಮಾರ್ ಜಿ. ಯವರು ಪ್ರೀತಿಯಿಂದ ಹಂಚಿಕೊಂಡಿದ್ದಾರೆ. 
         ನೀವು ಈ ಪುಸ್ತಕವನ್ನು ಇನ್ನೂ ಓದಿಲ್ಲವಾದರೆ ಮರೆಯದೆ ಓದಿ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಮರೆಯದೆ ಪುಸ್ತಕದ ಬಗ್ಗೆ ಬರೆಯಿರಿ...
ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.



ಈ ಪ್ರತಿಷ್ಠಿತ ಕಥಾ ಮತ್ತು ಕಾದಂಬರಿ ಸ್ಪರ್ಧೆಗೆ ಇನ್ನೇರಡೇ ದಿನ ಬಾಕಿ…

  ಈ ಪ್ರತಿಷ್ಠಿತ ಕಥಾ ಮತ್ತು ಕಾದಂಬರಿ ಸ್ಪರ್ಧೆಗೆ ಇನ್ನೇರಡೇ ದಿನ ಬಾಕಿ… ನಾಡಿನ ಪ್ರತಿಷ್ಠಿತ ʻ ಬುಕ್ ‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು...