ಮಂಗಳವಾರ, ಸೆಪ್ಟೆಂಬರ್ 3, 2024

ಗೋಮಿನಿ ಪ್ರಕಾಶನದಲ್ಲಿ ಪುಸ್ತಕ ಪ್ರಕಟವಾಗಲು ಪ್ರಮುಖ ನಿಬಂಧನೆಗಳು

ಗೋಮಿನಿ ಪ್ರಕಾಶನದಲ್ಲಿ ಪುಸ್ತಕ ಪ್ರಕಟವಾಗಲು ಪ್ರಮುಖ ನಿಬಂಧನೆಗಳು



1. ಪ್ರಕಾಶನವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಮೊದಲಿಗೆ ನೂರು ಪ್ರತಿಗಳನ್ನು ಮಾತ್ರ ಮುದ್ರಿಸಲಾಗುತ್ತದೆ. ಸಾಹಿತಿಗಳಿಗೆ 25 ಗೌರವಪ್ರತಿಗಳನ್ನು ನೀಡಲಾಗುತ್ತದೆ. ಯಾವುದೇ ರೀತಿಯ ಗೌರವಸಂಭಾವನೆ ಇರುವುದಿಲ್ಲ.

2. ನೂರಕ್ಕೂ ಹೆಚ್ಚು ಪ್ರತಿಗಳನ್ನು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಮುದ್ರಿಸಲಾಗುತ್ತದೆ. ಪುಸ್ತಕಗಳನ್ನು ಪ್ರಮುಖವಾಗಿ ಪ್ರಕಾಶನದ ನೆಟ್ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ.

3. ಪುಸ್ತಕದ ಬೌದ್ಧಿಕ ಹಕ್ಕು ಸಾಹಿತಿಗಳದ್ದಾಗಿದ್ದು, ಪುಸ್ತಕದ ಭೌತಿಕ ಹಕ್ಕು ಪ್ರಕಾಶಕರದ್ದಾಗಿರುತ್ತದೆ. ಸರ್ಕಾರಿ ಮತ್ತು ಖಾಸಗಿ ಮಾರಾಟವನ್ನು ಪ್ರಕಾಶಕರು ಮಾತ್ರ ಮಾರಾಟಮಾಡಲು ಅರ್ಹರಾಗಿರುತ್ತಾರೆ. ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಈ ಸಾಹಿತಿಯ ಈ ಪುಸ್ತಕದ ಮಾರಾಟದ ಹಕ್ಕು ತಮ್ಮದೇ ಎಂದು ನೋಂದಾಯಿಸಲು ಅರ್ಹರಾಗಿರುತ್ತಾರೆ. ಕೃತಿಯು ಕೃತಿಚೌರ್ಯವೆಂಬುದು ತಿಳಿದುಬಂದರೆ ಅದಕ್ಕೆ ಸಂಪೂರ್ಣ ಜವಾಬ್ದಾರಿ ಸಾಹಿತಿಗಳದ್ದೇ ಆಗಿರುತ್ತದೆ.

4. ಪ್ರಕಾಶನದ ತಂಡವೇ ಪುಸ್ತಕದ ಮುಖಪುಟ ಮತ್ತು ಒಳಪುಟಗಳ ವಿನ್ಯಾಸವನ್ನು ಮಾಡುತ್ತದೆ. ಬೇರೆ ಕಲಾವಿದರು ಈ ಕೆಲಸ ನಿರ್ವಹಿಸಲಿ ಎಂದು ಸಾಹಿತಿಗಳು ಕೋರಿಕೆ ಸಲ್ಲಿಸಿದರೆ ಆಯಾ ಕಲಾವಿದರ ಸಂಭಾವನೆಯನ್ನು ಪ್ರಕಾಶಕರು ಭರಿಸುವುದಿಲ್ಲ. ಮತ್ತು ಆ ಕಲಾವಿದರು ಪ್ರಕಾಶನದ ಬ್ರಾಂಡಿಗೆ ಅನುಗುಣವಾಗಿ ವಿನ್ಯಾಸವನ್ನು ಅಂತಿಮ ಮಾಡಲು ಸಿದ್ಧರಿರಬೇಕು. 



5. ಪ್ರಕಾಶನವು ಯಾವುದೇ ಪತ್ರಿಕೆಗಳಿಗೆ, ವ್ಯಕ್ತಿಗಳಿಗೆ, ನಿಯತಕಾಲಿಕೆಗಳಿಗೆ ವಿಮರ್ಶೆಗೆ ಎಂದು ಪ್ರತಿಗಳನ್ನು ಕಳುಹಿಸುವುದಿಲ್ಲ. ಜೊತೆಗೆ, ಯಾವುದೇ ಪ್ರಶಸ್ತಿಗಳಿಗೆ ಪ್ರತಿಗಳನ್ನು ಸಲ್ಲಿಸುವುದಿಲ್ಲ. ಮತ್ತು ಪುಸ್ತಕ ಬಿಡುಗಡೆ ಅಥವಾ ಲೋಕಾರ್ಪಣೆ ಸಮಾರಂಭ ಏರ್ಪಡಿಸುವುದಿಲ್ಲ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಆರ್ಥಿಕ ಮತ್ತು ಇನ್ನಿತರ ಸಹಾಯವನ್ನು ಮಾಡುವುದಿಲ್ಲ.

6. ಸಾಹಿತಿಗಳು ತಮಗೆ ಅಗತ್ಯವಿದ್ದರೆ ಪುಸ್ತಕದ ಎಷ್ಟು ಪ್ರತಿಗಳನ್ನು ಬೇಕಾದರೂ ಕೊಳ್ಳಬಹುದು. ಈ ರೀತಿ ಖರೀದಿಸುವ ಪುಸ್ತಕಗಳಿಗೆ ಶೇ. 33ರಷ್ಟು ರಿಯಾಯಿತಿಯನ್ನು ಪ್ರಕಾಶನ ನೀಡುತ್ತದೆ. ಈ ಪ್ರತಿಗಳ ಸಾಗಾಣಿಕೆ ವೆಚ್ಚ ಸಾಹಿತಿಗಳದೇ ಆಗಿರುತ್ತದೆ. ಎಷ್ಟು ಪ್ರತಿಗಳು ಬೇಕು ಎಂಬುದನ್ನು ಪ್ರಕಟಣೆಯ ಸಂದರ್ಭದಲ್ಲಿಯೇ ತಿಳಿಸಬೇಕು.

7. ಪುಸ್ತಕವನ್ನು ಅಂತಿಮವಾಗಿ ಸಲ್ಲಿಸುವಾಗ ಎಂಎಸ್‍ವರ್ಡಿನ ಒಂದೇ ಫೈಲಿನಲ್ಲಿ ನುಡಿ ಫಾಂಟಿನಲ್ಲಿ ಯಾವುದೇ ತಪ್ಪುಗಳಿಲ್ಲದೆ ಟೈಪಿಸಿ ಕಳಿಸಬೇಕು. ತಪ್ಪುಗಳಿರುವ ಫೈಲನ್ನು,  ಯೂನಿಕೋಡ್ ಬಳಸಿರುವ ಫೈಲನ್ನು ಪರಿಗಣಿಸಲಾಗುವುದಿಲ್ಲ. ಅಂತಿಮ ಪ್ರೂಫ್‍ರೀಡ್ ಸಾಹಿತಿಗಳದ್ದೇ ಆಗಿರುತ್ತದೆ. ಪುಸ್ತಕಗಳಿಗೆ ಅಗತ್ಯವಿರುವ ಮುನ್ನುಡಿ-ಬೆನ್ನುಡಿಯನ್ನು ಸಾಹಿತಿಗಳೇ ಬರೆಸಿಕೊಡಬೇಕು. ಇಬ್ಬರಿಗಿಂತ ಹೆಚ್ಚು ಜನ ಪುಸ್ತಕ ಕುರಿತು ಬರೆಯಲು ಅವಕಾಶವಿರುವುದಿಲ್ಲ. ಮತ್ತು ಪುಸ್ತಕದ ಪೇಪರ್‍ಬ್ಯಾಕ್ ಆವೃತ್ತಿ ಮಾತ್ರ ಹೊರತರಲಾಗುತ್ತದೆ.



8. ಯಾವುದೇ ರೀತಿಯ ಮನಸ್ತಾಪಗಳಿಗೆ ಪ್ರಕಾಶನ ಹೊಣೆಯಲ್ಲ. ಈ ಸಂಬಂಧ ಯಾವುದೇ ತಂಟೆ-ತಕರಾರುಗಳು ಎದ್ದರೆ ತುಮಕೂರು ಜಿಲ್ಲೆಯ ನ್ಯಾಯಾಲಯ ವ್ಯಾಪ್ತಿಗೆ ಪ್ರಕಾಶನ ಬರುತ್ತದೆ. 

9. ಸಾಹಿತಿಗಳು ಪ್ರಕಾಶನದ ಜೊತೆ ತಮ್ಮ ಪುಸ್ತಕಗಳನ್ನು ಪ್ರಕಟಿಸಲು ಅಂತಿಮವಾಗಿ ತೀರ್ಮಾನಿಸಿದ ನಂತರ ಪ್ರಕಾಶನದ ಕರಾರಿಗೆ ಸಹಿ ಮಾಡಬೇಕಿರುತ್ತದೆ. ಮತ್ತು ಪ್ರಕಾಶನದ ಜೊತೆ ನಂಬಿಕೆಯಿಂದ, ವಿಶ್ವಾಸದಿಂದ ವ್ಯವಹರಿಸುವ ಮೂಲಕ ತಮ್ಮ ಬೆಳವಣಿಗೆಯ ಜೊತೆ ಪ್ರಕಾಶನದ ಬೆಳವಣಿಗೆಗೂ ಸಹಕರಿಸಬೇಕು. ಪ್ರಕಾಶನದ ಘನತೆ ಮತ್ತು ಗೌಪ್ಯತೆಯನ್ನು ಕಾಪಾಡಲು ಬದ್ಧರಾಗಿರಬೇಕು. ಸಾಹಿತಿಗಳು ಒಪ್ಪಿ ಅಂತಿಮ ಫೈಲ್ ನೀಡಿದ ಮೂರು ತಿಂಗಳ ಒಳಗೆ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.

10. ಕನ್ನಡ ಸಾಹಿತ್ಯ ಮತ್ತು ಪುಸ್ತಕ ಪ್ರಕಾಶನದ ಬೆಳವಣಿಗೆಗೆ ಪ್ರಕಾಶನ ಬದ್ಧವಾಗಿರುತ್ತದೆ.

- ಗುಬ್ಬಚ್ಚಿ ಸತೀಶ್‌, ಸಂಪಾದಕರು, 
ಗೋಮಿನಿ ಪ್ರಕಾಶನ, ತುಮಕೂರು. 
(ವಾಟ್ಸಪ್‌ ಮಾತ್ರ @ 9986692342)

ಶುಕ್ರವಾರ, ಆಗಸ್ಟ್ 16, 2024

ಆತ್ಮವಿಶ್ವಾಸವೆಂಬ ಗಣಿಯ ಧಣಿಗಳಾಗಿರಿ

 ಆತ್ಮವಿಶ್ವಾಸವೆಂಬ ಗಣಿಯ ಧಣಿಗಳಾಗಿರಿ


“ಯಶಸ್ಸಿಗೆ ಮುಖ್ಯ ಕೀಲಿಕೈ ಆತ್ಮವಿಶ್ವಾಸ,

ಆತ್ಮವಿಶ್ವಾಸಕ್ಕೆ ಮುಖ್ಯ ಕೀಲಿಕೈ ಪೂರ್ವಸಿದ್ಧತೆ”

- ಆರ್ಥರ್ ಹ್ಯಾಷ್, ಖ್ಯಾತ ಟೆನಿಸ್ ಆಟಗಾರ


ಸರ್, ನನಗೆ ಎಲ್ಲಾ ಇದೆ. ಆದರೆ, ಈ ಕೆಲಸದಲ್ಲಿ ಸಫಲನಾಗುತ್ತೇನೋ ಇಲ್ಲವೋ ಎಂಬ ಆತಂಕ. ವಿಶ್ವಾಸವೆ ಇಲ್ಲವಾಗಿದೆ ಸರ್ ಎಂಬುವ ಅನೇಕರನ್ನು ನಾನು ನೋಡಿದ್ದೇನೆ. ಅವರಿಗೆ ನಾನು ಹೇಳುವುದು ಒಂದೇ ಮಾತು: “ನಿಮ್ಮ ಮೇಲೆ ನೀವು ವಿಶ್ವಾಸ ಇಡದೆ, ಮತ್ತಿನ್ಯಾರು ಇಡಬೇಕು?” ಎಂದು. ನಿಮ್ಮ ಮೇಲೆ ನೀವು ವಿಶ್ವಾಸ ಇಟ್ಟು, ಸಂಪೂರ್ಣವಾಗಿ ನಿಮ್ಮ ಮನಸ್ಸನ್ನು ನಿಮ್ಮ ಗುರಿಯೆಡೆಗೆ ನೆಟ್ಟು ಕೆಲಸ ಮಾಡಿದರೆ, ನೀವು ಗೆದ್ದೇ ಗೆಲ್ಲುತ್ತೀರಿ. ನಿಮ್ಮ ಆತ್ಮವಿಶ್ವಾಸ ನಿಮ್ಮ ಕೈಯಲ್ಲೇ, ನಿಮ್ಮ ಮನಸಲ್ಲೇ ಇದೆ. ಅದನ್ನು ಎಂದಿಗೂ ಮರೆಯದಿರಿ.

ತನ್ನ ಒಂದೇ ಕಾಲಿನಲ್ಲಿ ಎವರೆಸ್ಟ್ ಏರಿದ ಅರುಣಿಮಾ ಸಿನ್ಹ ಬಗ್ಗೆ ನಿಮಗೆ ಗೊತ್ತಿಲ್ಲದಿರಬಹುದು. ಆಕೆ ಅದೆಷ್ಟು ಆತ್ಮವಿಶ್ವಾಸಿಯೆಂದರೆ, ತನ್ನ ಒಂದು ಕಾಲು ಸಂಪೂರ್ಣವಾಗಿ ಇಲ್ಲದಿದ್ದರೂ ಎವರೆಸ್ಟ್ ಏರಿ, ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.


ನಮ್ಮ ದೇಶದ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯಾಗಿದ್ದ ಅರುಣಿಮಾ ಸಿನ್ಹ ೨೦೧೧ನೇ ಇಸವಿಯ ಏಪ್ರಿಲ್ ಹನ್ನೊಂದರ ಮಧ್ಯರಾತ್ರಿ ಲಕ್ನೋ-ದೆಹಲಿ ನಡುವೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಈಕೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಆಕೆ ಇವರನ್ನು ತಡೆಯಲು ಪ್ರಯತ್ನ ಪಟ್ಟಿದ್ದಾಳೆ. ಆಗ ವಿಫಲರಾದ ಕಳ್ಳರು ಆಕೆಯನ್ನು ರೈಲಿನಿಂದಲೇ ಹೊರ ನೂಕಿದ್ದಾರೆ. ಆಗ ಆಕೆ ಎರಡು ರೈಲ್ವೇ ಹಳಿಗಳ ನಡುವೆ ಬಿದ್ದಿದ್ದಾಳೆ. ಆಕೆಯ ಎರಡೂ ಕೈಗಳೂ ಗಾಯಗೊಂಡರೆ, ಬಲಗಾಲಿನ ಮೂಳೆಗಳೆಲ್ಲಾ ಪುಡಿಪುಡಿಯಾಗಿವೆ. ಬೆನ್ನೆಲುಬಿಗೆ ಪೆಟ್ಟಾಗಿದೆ. ಎಡಗಾಲಿನ ಮೇಲೆ ರೈಲೊಂದು ಹರಿದು ಹೋಗಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದರೂ ಆಕೆ ಬೆಳಿಗ್ಗೆ ಆಗುವವರಿಗೂ ಸುಮಾರು ಏಳು ಗಂಟೆಗಳ ಕಾಲ ಎರಡೂ ಹಳಿಗಳ ಮೇಲೆ ಆಗಾಗ ಬರುತ್ತಲೇ ಇದ್ದ ರೈಲುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೆಣಗಿದ್ದಾಳೆ. ಬೆಳಿಗ್ಗೆ ಹಳ್ಳಿಯವನ್ನೊಬ್ಬ ಈಕೆಯನ್ನು ನೋಡಿ ಆಸ್ಪತ್ರ‍್ರೆಗೆ ಸೇರಿಸುವ ಕೆಲಸ ಮಾಡಿದ್ದಾನೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಆಕೆಯನ್ನು ಸಾಗಿಸಲಾಗಿದೆ. ಆಸ್ಪತ್ರೆಯೊಂದರಲ್ಲಿ ಆಕೆಗೆ ಜ್ಞಾನ ಚೆನ್ನಾಗಿ ಇರುವಾಗಲೇ ಅರೆವಳಿಕೆ ಔಷಧಿಯನ್ನು ನೀಡದೆ ಎಡಗಾಲನ್ನು ಕತ್ತರಿಸಿದ್ದಾರೆ. ಆ ನೋವನ್ನು ಆಕೆ ತಡೆದುಕೊಂಡಿದ್ದಾಳೆ. ಕಡೆಗೆ ದೆಹಲಿಯ ಆಲ್ ಇಂಡಿಯಾ ಇನ್ಸಿಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಈಕೆಗೆ ಸೂಕ್ತ ಚಿಕಿತ್ಸೆ ದೊರೆತಿದೆ. ಅಲ್ಲಿ ಆಕೆಯ ಗಾಯಗಳೆಲ್ಲಾ ವಾಸಿಯಾದ ಮೇಲೆ ಕೃತಕ ಕಾಲನ್ನು ಅಳವಡಿಸಿದ್ದಾರೆ. ಅಲ್ಲಿಗೆ ಆಕೆಯ ಕ್ರೀಡಾ ಜೀವನ ಮುಗಿಯಿತು ಎಂದು ಸಮಾಜ ಅಂದುಕೊಳ್ಳುವಷ್ಟರಲ್ಲಿ ಆಕೆ ೨೦೧೩ರ ಮೇ ೨೧ರಂದು ಎವರೆಸ್ಟ್ ಶಿಖರವನ್ನು ಏರಿ ಅಚ್ಚರಿ ಮೂಡಿಸಿದ್ದಾಳೆ. ಎವರೆಸ್ಟ್ ಏರಿದ ಮೊದಲ ವಿಶೇಷ ಚೇತನ ಮಹಿಳೆ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದಾಳೆ. ತನ್ನ ಮನೋಬಲದಿಂದ ಇತಿಹಾಸವನ್ನು ಬರೆದಿದ್ದಾಳೆ.

ಇಷ್ಟೆಲ್ಲ ಹೇಗೆ ಸಾಧ್ಯವಾಯಿತು ಎಂದುಕೊಂಡರೆ, ಆತ್ಮವಿಶ್ವಾಸ! ಹೌದು, ಆಕೆಯ ಅಪರಿಮಿತ ಆತ್ಮವಿಶ್ವಾಸ. “ನಾನು ನನ್ನ ನೋವನ್ನು ಅವಕಾಶವನ್ನಾಗಿಸಿದೆ. ನಾನು ನನ್ನ ಮನಸ್ಸನ್ನು ಬದಲಿಸದೇ ಇದ್ದಲ್ಲಿ, ಮನೆಯ ಕೋಣೆಯಿಂದ ಹೊರಗಡೆಯೂ ಬರಲಾಗುತ್ತಿರಲಿಲ್ಲ” ಎನ್ನುವ ಆಕೆಯ ಆತ್ಮವಿಶ್ವಾಸದ ಮಾತುಗಳೇ ಆಕೆ ತನ್ನ ಮೇಲೆ ತಾನು ಇಟ್ಟುಕೊಂಡಿರುವ ವಿಶ್ವಾಸದ ಪ್ರಮಾಣವನ್ನು ತಿಳಿಸುತ್ತದೆ. ಎಲ್ಲ ಸರಿಯಿದ್ದವರೇ ಸಾಧಿಸಲಾಗದ್ದನ್ನು ಆಕೆ ಸಾಧಿಸಿದ್ದಾಳೆ. ತಾನೆಂದೂ ಕನಿಕರವನ್ನು ಬಯಸುತ್ತಾ ಬದುಕಬಾರದೆಂದು ಆಕೆ ದೃಢನಿಶ್ಚಯ ತಳೆದಿದ್ದಾಳೆ. ಕಾಲಿನ ಜೊತೆ ತನ್ನೆಲ್ಲಾ ಸರ್ಟಿಫಿಕೇಟ್‌ಗಳನ್ನು ಕಳೆದುಕೊಂಡಿದ್ದ ಆಕೆಗೆ ತಾನೊಬ್ಬಳು ದೇಶವನ್ನು ಪ್ರತಿನಿಧಿಸಿದ ಕ್ರೀಡಾಪಟು ಎಂಬುದನ್ನು ಸಾಬೀತು ಪಡಿಸಲು ಕಷ್ಟವಾಗಿದೆ. ಆಗೆಲ್ಲಾ ಸಾಕಷ್ಟು ಅವಮಾನಗಳಾಗಿವೆ. ಆದರೂ ಆಕೆ ತನ್ನ ಕೃತಕ ಕಾಲಿನ ಸಹಾಯದಿಂದಲೇ ಸುಮಾರು ಎರಡು ವರ್ಷಗಳ ಕಾಲ ನಡೆದಾಡುವುದನ್ನು ಅಭ್ಯಾಸ ಮಾಡಿದ್ದಾಳೆ. ಆ ನಂತರ ಉತ್ತರಕಾಂಡದಲ್ಲಿ ಸಣ್ಣಪುಟ್ಟ ಬೆಟ್ಟಗುಡ್ಡಗಳನ್ನು ಎವರೆಸ್ಟ್ ಏರಿದ ಭಾರತದ ಮೊದಲ ಮಹಿಳೆ ಬಚೇಂದ್ರಿ ಪಾಲ್‌ರವರ ಮಾರ್ಗದರ್ಶನದಲ್ಲಿ ಹತ್ತಿಳಿದಿದ್ದಾಳೆ. ಆ ನಂತರ ಏವರೆಸ್ಟ್ ಏರಿ ಅಪ್ರತಿಮವಾದುದನ್ನು ಸಾಧಿಸಿದ್ದಾಳೆ. ತನ್ನ ಕಷ್ಟದ ದಿನಗಳಲ್ಲಿಯೇ ಅಪ್ರತಿಮವಾದ ಏನನ್ನಾದರೂ ಸಾಧಿಸಿಬೇಕೆಂದು ಕನಸು ಕಂಡಿದ್ದ ಆಕೆಗೆ ಮೊದಲೆಲ್ಲಾ ಇದೆಲ್ಲಾ ಒಂದು ಹುಚ್ಚು ಎನಿಸಿದ್ದಿದೆ. ಆದರೂ ಛಲಬಿಡದೆ ಪ್ರತಿಯೊಂದು ಹೆಜ್ಜೆ ಇಡುವಾಗಲು ತನ್ನ ಭವ್ಯ ಕನಸನ್ನು ಕಣ್ಮುಂದೆ ಕಲ್ಪಿಸಿಕೊಂಡೇ ಹೆಜ್ಜೆ ಇಟ್ಟಿದ್ದಾಳೆ. ಪೂರ್ವಸಿದ್ಧತೆಯ ಪ್ರತಿ ವಿಶ್ವಾಸದ ಹೆಜ್ಜೆಯೂ ಆಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇಂದು ಆಕೆಯ ಧೃಡ ಆತ್ಮವಿಶ್ವಾಸ ವಿಶ್ವಕ್ಕೇ ಮಾದರಿಯಾಗಿದೆ.

ಆಕೆಯ ಆ ಅಪರಿಮಿತ, ಅಗಣಿತ, ಅಪ್ರತಿಮ ಆತ್ಮವಿಶ್ವಾಸವನ್ನು ನಿಮ್ಮದಾಗಿಸಿಕೊಳ್ಳಿ. ಆ ಮೂಲಕ ಆತ್ಮವಿಶ್ವಾಸವೆಂಬ ಗಣಿಯ ಧಣಿಗಳಾಗಿರಿ. 




ಆತ್ಮವಿಶ್ವಾಸದಿಂದ ಜಯಿಸೋದು ಹೇಗೆ ಎಂಬುದಕ್ಕೆ ಉತ್ತಮ ಉದಾಹರಣೆ ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್! ಹೌದು. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ತಮ್ಮ ಬದುಕಿನಲ್ಲಿ ಎದುರಿಸಿದ ಸೋಲುಗಳು ಅಪಾರ! ಇಪ್ಪತ್ತೇಳನೆಯ ವಯಸ್ಸಿನಲ್ಲಿ ಅವರ ದೇಹದ ನರಮಂಡಲವೇ ತೊಂದರೆಗೊಳಗಾಯಿತು. ನಲವತ್ತಾರನೆಯ ವಯಸ್ಸಿನಲ್ಲಿ ಸೆನೆಟರ್ ಚುನಾವಣೆಯಲ್ಲಿ  ಸೋಲುಂಡರು.  ನಲವತ್ತೇಳನೆಯ ವಯಸ್ಸಿನಲ್ಲಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅವರಿಗೆ ಸೋಲಾಯಿತು.  ಹೀಗೆಲ್ಲ ಸೋಲುಗಳು ದಿಕ್ಕೆಡಿಸಿದರೂ ಅವರ ಆತ್ಮವಿಶ್ವಾಸಕ್ಕೆ ಸ್ವಲ್ಪವೂ ಧಕ್ಕೆ ಬರಲಿಲ್ಲ. ಐವತ್ತೆರಡನೆಯ ವಯಸ್ಸಿನಲ್ಲಿ ಅವರು ಅಮೆರಿಕದ ಅಧ್ಯಕ್ಷರಾದರು. 

ಈ ನಿಟ್ಟಿನಲ್ಲಿ ಸ್ಕಾಟ್ಲೆಂಡ್ ದೊರೆ ರಾಬರ್ಟ್ ಬ್ರೂಸ್ ಮತ್ತು ಜೇಡದ ಕಥೆ ಬಹಳ ಮುಖ್ಯವಾದದ್ದು. ರಾಬರ್ಟ್ ಬ್ರೂಸ್ ಸ್ಕಾಟ್ಲೆಂಡ್ ಅನ್ನು ೧೩೦೬ ರಿಂದ ೧೩೨೯ ರವರೆಗೆ ಆಳಿದರು. ಅವರು ಶ್ರೇಷ್ಠ ದೊರೆಗಳಲ್ಲಿ ಒಬ್ಬರಾಗಿದ್ದರು, ಇಂಗ್ಲೇಂಡ್ ವಿರುದ್ಧದ ಸ್ವಾತಂತ್ರ‍್ಯದ ಯುದ್ಧದಲ್ಲಿ ಸೋಲಿನ ನಂತರ ಒಂದು ಗುಹೆಯನ್ನು ಸೇರಿಕೊಂಡರಂತೆ. ಅಲ್ಲಿ ಚಿಂತಿತರಾಗಿರುವಾಗ ಜೇಡವೊಂದು ತನ್ನ ಬಲೆಯನ್ನು ನೇಯ್ಗೆ ಮಾಡಲು ಪ್ರಯತ್ನಿಸುತ್ತಿರುವುದನ್ನು ಬಹಳ ಸಮಯದಿಂದ ನೋಡುತ್ತಿದ್ದರಂತೆ. ಆರು ಬಾರಿ ಜೇಡದ ಪ್ರಯತ್ನಗಳು ವಿಫಲವಾದರೂ ಕೂಡ ಅಂತಿಮವಾಗಿ ಜೇಡ ತನ್ನ ಛಲಬಿಡದೆ ಆತ್ಮವಿಶ್ವಾಸದಿಂದ ತನ್ನ ಕೆಸಲದಲ್ಲಿ ಜಯ ಸಾಧಿಸಿತಂತೆ. ಇದರಿಂದ ಪ್ರೇರಿತರಾದ ಇವರು ಮುಂದೆ ಇಂಗ್ಲಿಷರೊಂದಿಗೆ ಯುದ್ಧವನ್ನು ಗೆದ್ದರು ಎಂಬುದು ಕೂಡ ಒಂದು ದಂತಕತೆಯೇ ಆಗಿದೆ.‌

ಅಪರಿಮಿತ ಆತ್ಮವಿಶ್ವಾಸ ನಿಮ್ಮದಾಗಲಿ...

- ಗುಬ್ಬಚ್ಚಿ ಸತೀಶ್.

ಸೋಮವಾರ, ಜುಲೈ 15, 2024

ವಿವೇಕಾನಂದರ ಏಕಾಗ್ರತೆ ನಿಮ್ಮದಾಗಲಿ

ವಿವೇಕಾನಂದರ ಏಕಾಗ್ರತೆ ನಿಮ್ಮದಾಗಲಿ


“ನಮ್ಮ ಯೋಜನೆ ಫಲಪ್ರದವಾಗಬೇಕಿದ್ದರೆ 

ಬಲು ಏಕಾಗ್ರತೆಯಿಂದ ನಿರಂತರವಾಗಿ ಗಮನವಿರಿಸಿ, 

ಸದಾ ಎಚ್ಚರದಿಂದ ಕೆಲಸ ಮಾಡಬೇಕು”

                - ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ, ನಮ್ಮ ಮೆಚ್ಚಿನ ರಾಷ್ಟ್ರಪತಿಗಳು.



ಸ್ವಾಮಿ ವಿವೇಕಾನಂದರು ಅಮೇರಿಕಾಕ್ಕೆ ಹೋಗಿದ್ದಾಗ ಒಂದು ಸಂಜೆ ನದಿಯ ಮೇಲಿದ್ದ ಸೇತುವೆಯಲ್ಲಿದ್ದ ಹುಡುಗರು ನೀರಿನ ಮೇಲೆ ತೇಲುತ್ತಿದ್ದ ಶಂಖಗಳಿಗೆ ಪಿಸ್ತೂಲಿನಿಂದ ಶೂಟ್ ಮಾಡುತ್ತಿದ್ದನ್ನು ಗಮನಿಸಿದರು. ಆ ಶಂಖಗಳು ಮುಳುಗುತ್ತಾ ತೇಲುತ್ತಾ ಇದ್ದವು. ಈ ಹುಡುಗರಿಗೆ ಗುರಿಯಿಟ್ಟು ಒಂದು ಶಂಖಕ್ಕೂ ಹೊಡೆಯಲಾಗಲಿಲ್ಲ. 

ಸ್ವಾಮಿ ವಿವೇಕಾನಂದರು ಇವರನ್ನು ಗಮನಿಸುತ್ತಿದ್ದದ್ದನ್ನು ಅರಿತ ಹುಡುಗರು, “ನೀವು ನಮ್ಮನ್ನು ನೋಡುತ್ತಿದ್ದೀರಿ. ನೀವು ನಮಗಿಂತ ಚೆನ್ನಾಗಿ ಹೊಡೆೆಯಬಲ್ಲಿರಾ?” ಎಂದು ಕೇಳಿದರು.

ನಗುತ್ತಾ ಸ್ವಾಮಿ ವಿವೇಕಾನಂದರು, “ನಾನು ಪ್ರಯತ್ನಿಸುತ್ತೇನೆ” ಎಂದು ಹೇಳಿ ಆ ಪಿಸ್ತೂಲನ್ನು ತೆಗೆದುಕೊಂಡರು. ಆ ಪಿಸ್ತೂಲಿನಿಂದ ಶಂಖಗಳಿಗೆ ಗುರಿಯಿಟ್ಟು ಒಂದೆರಡು ಕ್ಷ್ಷಣಗಳ ಕಾಲ ತನ್ಮಯರಾಗಿ ನಿಂತರು. ನಂತರ ತಮ್ಮ ಪಿಸ್ತೂಲಿನಿಂದ ಗುಂಡನ್ನು ಹಾರಿಸಿದರು. ಸತತವಾಗಿ ಹನ್ನೆರೆಡು ಬಾರಿ ಒಂದೇ ಸಮನೆ ಅವರು ಹಾರಿಸಿದ ಗುಂಡುಗಳು ಶಂಖಗಳಿಗೆ ಬೀಳುವಂತೆ ಹೊಡೆದಿದ್ದರು. ಇದನ್ನು ನೋಡಿದ ಹುಡುಗರು ಆಶ್ಚರ್ಯಚಕಿತರಾದರು.

ಒಬ್ಬ ಮನುಷ್ಯ ಈ ರೀತಿ ಗುರಿಯಿಟ್ಟು ಹೊಡೆಯಬಹುದೆಂದು ಆ ಹುಡುಗರು ಕನಸಿನಲ್ಲಿಯೂ ಎಣಿಸಿರಲಿಲ್ಲ. ತುಸು ಯೋಚಿಸಿ “ಸ್ವಾಮಿ, ಈ ರೀತಿ ಗುರಿಯಿಡುವುದಕ್ಕೆ ನಿಮಗೆ ಹೇಗೆ ಸಾಧ್ಯವಾಯಿತು?” ಎಂದು ವಿನಮ್ರರಾಗಿ ಕೇಳಿದರು. 

ಸ್ವಾಮಿ ವಿವೇಕಾನಂದರು ಅವರೆಡೆಗೆ ಮುಗುಳ್ನಕ್ಕು, “ನೀವು ಏನನ್ನೇ ಮಾಡುತ್ತಿರಿ, ಅದರಲ್ಲೇ ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ನೀವು ಪಿಸ್ತೂಲಿನಿಂದ ಗುರಿಯಿಡುವ ಆಟವಾಡುತ್ತಿದ್ದರೆ, ಗುರಿಯೆಡೆಗೆ ನಿಮ್ಮ ಪೂರ್ತಿ ಗಮನವಿರಬೇಕು. ನೀವು ಏನನ್ನಾದರು ಕಲಿಯುತ್ತಿದ್ದರೆ, ಆ ಕಲಿಯುವಿಕೆಯೆಡೆಗೆ ನಿಮ್ಮ ಮನಸ್ಸಿರಬೇಕು. ನಿಮ್ಮ ಏಕಾಗ್ರತೆ ಆ ಮಟ್ಟದಲ್ಲಿದ್ದಾಗ ಮಾತ್ರ ನೀವು ಏನನ್ನಾದರೂ ಗೆಲ್ಲಬಲ್ಲಿರಿ. ನಮ್ಮ ಭಾರತ ದೇಶದಲ್ಲಿ ನಾವು ಮಕ್ಕಳಿಗೆ ಇದನ್ನು ಹೇಳಿಕೊಡುತ್ತೇವೆ” ಎಂದು ಹೇಳಿದರು.

ನಾನು ನಿಮಗೆ ಇಲ್ಲಿ ಒಂದು ನೈಜ ಉದಾಹರಣೆಯನ್ನು ಕೊಡಲು ಇಚ್ಚಿಸುತ್ತೇನೆ. ನನ್ನ ಗೆಳೆಯರೊಬ್ಬರು ಅವರ ನೆಂಟರ ಮನೆಯ ಗೃಹಪ್ರವೇಶಕ್ಕೆ ಒಮ್ಮೆ ಹೋಗಿದ್ದರಂತೆ. ಮನೆಯನ್ನೆಲ್ಲಾ ನೋಡಿ, ಊಟ ಮಾಡಿ ಅಲ್ಲೆಲ್ಲಾ ಹುಡುಕಿದರೂ ಪಿ.ಯು.ಸಿ. ಓದುತ್ತಿದ್ದ ನೆಂಟರ ಮಗಳು ಕಾಣಲೇ ಇಲ್ಲವಂತೆ! ನೆಂಟರನ್ನು ವಿಚಾರಿಸಿದಾಗ ಅವಳು ಹತ್ತಿರದ ತೋಟದಮನೆಯಲ್ಲಿ ಇರುವಳೆಂದು ಹೇಳಿದರಂತೆ. ಸರಿ, ಇವರು ಅಲ್ಲಿ ಹೋಗಿ ನೋಡಿದ್ದಾರೆ. ಆಕೆ ಅಲ್ಲಿ ತನ್ನ ಪಾಡಿಗೆ ತಾನು ಓದುತ್ತಾ ಕುಳಿತ್ತಿದ್ದಳಂತೆ! ಏನಶ್ಚಾರ್ಯ!? ಏನಮ್ಮ, ನಿನ್ನ ತಂದೆ ತಾಯಿ ಕಟ್ಟಿರುವ ಮನೆಯ ಗೃಹಪ್ರವೇಶದಲ್ಲಿ ಖುಷಿಯಿಂದ ಓಡಾಡುವುದನ್ನು ಬಿಟ್ಟು ಇಲ್ಲಿ ಓದುತ್ತಾ ಕುಳಿತ್ತಿದ್ದೀಯಾ ಎಂದು ಕೇಳಿದರಂತೆ. ಅದಕ್ಕೆ ಆಕೆ, ಅಣ್ಣಾ, ಈ ಮನೆ ನನ್ನ ಅಪ್ಪ ಅಮ್ಮ ಕಟ್ಟಿರುವುದು. ಅವರು ಸಂಭ್ರಮಿಸಲಿ. ನಾನು ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಿ ಮನೆ ಕಟ್ಟುತ್ತೇನೆ. ಆಗ ಎಲ್ಲರನ್ನೂ ಕರೆದು ಸಂಭ್ರಮಿಸುತ್ತೇನೆ ಎಂದು ಹೇಳಿದಳಂತೆ. ಅಪ್ಪ ಅಮ್ಮ ಕಟ್ಟಿರುವ ಮನೆಯ ಗೃಹಪ್ರವೇಶದ ಸಂಭ್ರಮವಿದ್ದರೂ ತನ್ನ ಓದಿನಲ್ಲಿ ಏಕಾಗ್ರತೆಯಿಂದ ತೊಡಗಿಕೊಂಡ ಆಕೆಯನ್ನು ನಾವು ಮೆಚ್ಚಲೇಬೇಕಲ್ಲವೇ? ಅಂದಹಾಗೆ ಆಕೆ ಇವತ್ತು ಪ್ರತಿಷ್ಟಿತ ಐಬಿಎಂ ಉದ್ಯೋಗಿ. ಲಕ್ಷಾಂತರ ಸಂಬಳ ಪಡೆಯುತ್ತಾಳೆ. ಬೆಂಗಳೂರಿನಲ್ಲಿ ಸ್ವಂತ ಅಪಾರ್ಟ್ಮೆಂಟ್ ಹೊಂದಿದ್ದಾಳೆ. ಮತ್ತು ಇಂದು ಗಂಡ ಮಗುವಿನೊಂದಿಗೆ ಸುಖಸಂಸಾರ ಆಕೆಯದು. ಎಂತಹ ಏಕಾಗ್ರತೆ ಆಕೆಯದಲ್ಲವೇ?




ನೀವು ಏನನ್ನೇ ಮಾಡುತ್ತಿರಿ, ಆ ಕೆಲಸದಲ್ಲಿ ಯಶಸ್ವಿಯಾಗಲು ಏಕಾಗ್ರತೆ ತುಂಬಾ ಮುಖ್ಯ. ಏಕಾಗ್ರತೆ ಇಲ್ಲದೆ ನೀವು ನಿಮ್ಮ ಕೆಲಸವನ್ನು ಸಂಪೂರ್ಣವಾಗಿ ಮುಗಿಸಲಾರಿರಿ. ಮನುಷ್ಯನ ಮನಸ್ಸು ಏನೇ ಮಾಡಿದರೂ ಒಂದು ಕೆಲಸದಲ್ಲಿ ಶೇ. ೧೦ರಷ್ಟು ಮಾತ್ರ ತೊಡಗಿಕೊಳ್ಳಬಲ್ಲದಂತೆ. ಉಳಿದ ಶೇ. ೯೦ರಷ್ಟು ಮನಸ್ಸು ಎಲ್ಲೆಲ್ಲೋ ಹರಿದಾಡಿ ಹೋಗುತ್ತದಂತೆ. ಅಂತಹ ಶೇ. ೧೦ರಷ್ಟು ಮನಸ್ಸನ್ನು ಏಕಾಗ್ರತೆಗೊಳಿಸಿ ಕೆಲಸ ಮಾಡಿ ಅದೆಷ್ಟೋ ಸಾಧನೆಗಳು ಆಗಿರುವಾಗ, ಇನ್ನೂ ಹೆಚ್ಚು ಶೇಕಡಾ ಮನಸ್ಸನ್ನು ಏಕಾಗ್ರತೆಯಿಂದ ಒಂದೇ ಕಡೆ ಇಟ್ಟು ಕೆಲಸ ಮಾಡಿದರೆ ಎಂಥಹ ಅದ್ಭುತವನ್ನಾದರೂ ಸಾಧಿಸಿ ಬಿಡಬಹುದು. 

ಸೂರ‍್ಯನ ಚೆದುರಿದ ಕಿರಣಗಳನ್ನು ಭೂತಗನ್ನಡಿಯ ಮೂಲಕ ಒಂದೇ ಕಡೆ ಕೇಂದ್ರಿಕರಿಸಿದರೆ ಅದು ಏನನ್ನಾದರು ಸುಡುವ ಬೆಂಕಿಯೇ ಆಗಿಬಿಡುತ್ತದೆ. ಅದೇ ರೀತಿ ನಮ್ಮ ಮನಸ್ಸನ್ನು ಒಂದೇ ಕಡೆ ಕೇಂದ್ರಿಕರಿಸಿ ದೊರೆಯುವ ಏಕಾಗ್ರತೆಯಿಂದ ನಾವು ಏನಾನ್ನಾದರೂ ಸಾಧಿಸಿ ಬಿಡಬಹುದು. ನಮ್ಮ ಗುರಿಯನ್ನು ಬೇಗ ಮುಟ್ಟಬಹುದು.  



ಅದಕ್ಕೇ ಹೇಳಿದ್ದು ವಿವೇಕಾನಂದರ ಏಕಾಗ್ರತೆ ನಿಮ್ಮದಾಗಲಿ ಎಂದು.

- ಗುಬ್ಬಚ್ಚಿ ಸತೀಶ್.

***


ನಿಮ್ಮ ಕವಿತೆಗೆ ʼಬಹುಮಾನʼ ಗೆಲ್ಲುವ ಅವಕಾಶ...

ನಿಮ್ಮ ಕವಿತೆಗೆ ʼಬಹುಮಾನʼ ಗೆಲ್ಲುವ ಅವಕಾಶ... ಸ್ನೇಹಿತರೇ, ಅಂತರ್ಜಾಲ ಪತ್ರಿಕೆ "ಪಂಜು" ಕವಿತೆ ಸ್ಪರ್ಧೆಯನ್ನು ಆಯೋಜಿಸಿದ್ದು, ನಿಮ್ಮ ಕವಿತೆ ರೂ. 3000/- ...