ಗುರುವಾರ, ಡಿಸೆಂಬರ್ 21, 2023

ಬೆಂಗಳೂರಿನಲ್ಲಿಯೇ ಬದುಕಿ-ಬಾಳಿದ “ಕೊನೆಯ ಬಿಳಿ ಬೇಟೆಗಾರ”

 



ಖ್ಯಾತ ಬ್ರಿಟಿಷ್‌ ಬೇಟೆಗಾರ-ಬರಹಗಾರ ಕೆನೆತ್‌ ಆಂಡರ್ಸನ್‌ ಅವರ ಮಗ ಡೊನಾಲ್ಡ್‌ ಆಂಡರ್ಸನ್‌ (1934-2014) ಅವರ ಜೀವನಗಾಥೆ “ಕೊನೆಯ ಬಿಳಿ ಬೇಟೆಗಾರ – ವಸಾಹತು ಶಿಕಾರಿಯೊಬ್ಬನ ನೆನಪುಗಳು” ಕನ್ನಡಕ್ಕೆ ಬಂದಿರುವುದು ಸಂತಸದ ಸಂಗತಿ. ಮೂಲ ಇಂಗ್ಲೀಷಿನಲ್ಲಿ ಜೋಷುವಾ ಮ್ಯಾಥ್ಯೂ ಅವರ ನಿರೂಪಣೆಯಲ್ಲಿರುವ “ದ ಲಾಸ್ಟ್‌ ವೈಟ್‌ ಹಂಟರ್” ಕೃತಿಯನ್ನು ಕನ್ನಡಕ್ಕೆ ಡಾ. ಎಲ್‌.ಜಿ. ಮೀರಾ ಅವರು ಅನುವಾದಿಸಿದ್ದಾರೆ. ಕಾಲೇಜಿನ ದಿನಗಳಿಂದಲೂ ತೇಜಸ್ವಿಯವರ ಓದುಗರು-ಅಭಿಮಾನಿಯೂ ಆಗಿರುವ ಮೀರಾ ಅವರು ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕಿ. ಈ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ತಂದಿರುವುದಕ್ಕೆ ಅವರಿಗೆ ಅಭಿನಂದನೆಗಳು ಸಲ್ಲಲೇಬೇಕು. ತೇಜಸ್ವಿಯವರ ನೆನಪಿಗೆ ಈ ಕೃತಿ ಅರ್ಪಣೆಯಾಗಿರುವುದೂ ಕೂಡ ಮೀರಾ ಅವರ ತೇಜಸ್ವಿ ಅಭಿಮಾನಕ್ಕೆ ಸಾಕ್ಷಿಯಾಗಿದೆ.




ಈ ಕೃತಿಗೆ ಡೊನಾಲ್ಡ್‌ ಅವರಿಗಿಂತ ಕೊಂಚ ಹಿರಿಯರಿದ್ದ, ಆದರೆ  ಡೊನಾಳ್ಡ್‌ ಅವರನ್ನು ಹತ್ತಿರದಿಂದ ಕಂಡಿದ್ದ ಭಾರತದ ಅಗ್ರಗಣ್ಯ ವನ್ಯಜೀವಿ ಛಾಯಾಗ್ರಾಹಕರಾದ ಟಿ.ಎನ್.ಎ ಪೆರುಮಾಳ್‌ ಅವರ ಆಪ್ತ ಮುನ್ನುಡಿಯಿದೆ. ʼಲೋಕದಲ್ಲಿ ಎಲ್ಲ ಬಗೆಯ ಜನರಿದ್ದಾರೆ ಮತ್ತು ಡೊನಾಲ್ಡ್‌ ಆಂಡರ್ಸನ್‌ ಒಬ್ಬ ಅನನ್ಯ ವ್ಯಕ್ತಿ ಮತ್ತು ಚರಿತ್ರೆಯಲ್ಲಿ ಅವರಿಗೆ ತಮ್ಮದೇ ಆದ ನ್ಯಾಯಬದ್ಧ ಸ್ಥಾನವಿದೆʼ ಎಂದಿರುವುದು ಈ ಕೃತಿಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ. ಶಿಕಾರಿ ಮತ್ತು ಛಾಯಾಗ್ರಹಣಕ್ಕೆ ಅಂತಹ ವ್ಯತ್ಯಾಸವೇನಿಲ್ಲ, ಡೊನಾಲ್ಡ್‌ ತನ್ನ ತಂದೆಯಂದೆ ಬಂದೂಕು ಆರಿಸಿಕೊಂಡರೆ, ತಮ್ಮ ಶಿಕ್ಷಕ ಓ.ಸಿ.ಎಡ್‌ವಾರ್ಡ್ಸ್‌ ಅವರ ಪ್ರಭಾವದಿಂದ ಕ್ಯಾಮೆರಾ ಆರಿಸಿಕೊಂಡೆ ಎಂದಿದ್ದಾರೆ ಪೆರುಮಾಳ್.‌ ಡೊನಾಲ್ಡ್‌ ಅವರಿಗೆ ಶಿಕಾರಿಯಲ್ಲಿದ್ದ ಪರಿಣತಿಯನ್ನು ತಾವು ಕಂಡಂತೆ ದಾಖಲಿಸಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಕೆ. ಉಲ್ಲಾಸ ಕಾರಂತ ಅವರು ತಂದೆಯನ್ನು ಮೀರಿಸಿದ ಮಗ ಡೊನಾಲ್ಡ್‌ ಅನುಭವಗಳು ಕನ್ನಡದ ಓದುಗರಿಗೆ ಒಂದು ರೋಚಕ ಹೊಸ ಪ್ರಪಂಚವನ್ನು ತೆರೆದಿಟ್ಟಿವೆ ಎಂದಿದ್ದಾರೆ.



ಇಂಗ್ಲೀಷ್‌ ವಾರಪತ್ರಿಕೆಯಲ್ಲಿ ಮ್ಯಾಥ್ಯೂ ಜೋಷುವಾ ಅವರ “ದ ಲಾಸ್ಟ್‌ ವೈಟ್‌ ಹಂಟರ್”‌ ಪುಸ್ತಕದ ಬಗ್ಗೆ ಪರಿಚಯ ಲೇಖನ ಓದಿದ ಡಾ. ಎಲ್.ಜಿ. ಮೀರಾ ಅವರು ತಾವು ತೇಜಸ್ವಿಯವರ ಅನುವಾದದಲ್ಲಿ ಓದಿದ್ದ ಕೆನೆತ್‌ ಆಂಡರ್ಸನ್‌ ಅವರ ಮಗ ಡೊನಾಲ್ಡ್‌ ಆಂಡರ್ಸನ್‌ ಬೆಂಗಳೂರಿನಲ್ಲಿಯೇ ಅದೂ ಕಬ್ಬನ್‌ ಪಾರ್ಕ್‌ ಪಕ್ಕದಲ್ಲಿಯೇ ಎಂಬತ್ತು ವರ್ಷ ಬದುಕಿ ಬಾಳಿದ್ದರು ಎಂಬ ವಿವರಗಳನ್ನು ಓದಿ ಆಶ್ಚರ್ಯಚಕಿತರಾಗಿ ಈ ಕೃತಿ ಕನ್ನಡದ ಓದುಗರಿಗೆ ಲಭಿಸಬೇಕು ಎಂದು ನಿರ್ಧರಿಸಿದ ಕಾರಣ ಈ ಕೃತಿಯೀಗ “ಕೊನೆಯ ಬಿಳಿ ಬೇಟೆಗಾರ” ಎಂದು ಕನ್ನಡದ ಓದುಗರಿಗೆ ಲಭ್ಯವಿದೆ.



ʼಇದು ಸಂದುಹೋದ ಕಾಲದ ಜನಗಳ ಮತ್ತು ಸ್ಥಳಗಳ ಕಥೆʼ ಎಂದು ಪೀಠಿಕೆಯ ಮೊದಲ ಸಾಲಿನಲ್ಲಿಯೇ ಡೊನಾಲ್ಡ್‌ ಮಾಲ್ಕಮ್‌ ಸ್ಟುವಾರ್ಟ್‌ ಆಂಡರ್ಸನ್‌ ಹೇಳಿರುವುದು ಈ ಕೃತಿಯ ಆಶಯವನ್ನು ವ್ಯಕ್ತಪಡಿಸಿದೆ. ಡೊನಾಲ್ಡ್‌ ಅವರು ಬೆಂಗಳೂರಿನಲ್ಲಿ ಬೆಳೆದದ್ದು, ಅವರ ಕುಟುಂಬ, ಸ್ನೇಹಿತರು, ಶಿಕಾರಿ ದಿನಗಳು, ಕಳೆದ ವರ್ಷಗಳು, ತಿರುಗಾಟಗಳು, ತನ್ನ ತಂದೆ ಕೆನೆತ್‌ ನೆನಪು ಮತ್ತು ಡೊನಾಲ್ಡ್‌ ಅವರ ಕೊನೆಯ ದಿನಗಳು ಇಲ್ಲಿ ಅಪರೂಪದ ಚಿತ್ರಗಳೊಂದಿಗೆ ದಾಖಲಾಗಿವೆ. ದೇಶದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರ ದಿನಗಳ ಒಂದು ಅಪೂರ್ವ ದಾಖಲೆ ಬ್ರಿಟಿಷ್‌ ಭಾರತದ ಕೊನೆಯ ಸ್ಕಾಟ್‌ ವ್ಯಕ್ತಿ ಕಂಡಂತೆ ನಿರೂಪಿತವಾಗಿದೆ.  ಡೊನಾಲ್ಡ್‌ ಅವರ ರೋಚಕ ಕಥೆಯಷ್ಟೇ ಅಲ್ಲ ಕೊನೆಗಾಲದಲ್ಲಿ ಒಬ್ಬಂಟಿಯಾಗಿ ಇಲ್ಲುಳಿದ ವ್ಯಥೆಯ ಪರಿಚಯವೂ ಇಲ್ಲಿದೆ.

ಬೆಂಗಳೂರಿನ ಆಕೃತಿ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದ್ದು, ಇದರ ಮೌಲ್ಯ ರೂ. 395/- ಆಗಿರುತ್ತದೆ.

ಈ ಕೃತಿಯನ್ನು ಅಮೇಜಾನಿನಲ್ಲಿ ಕೊಳ್ಳಲು: https://amzn.to/3RzI0fC



ಬುಧವಾರ, ಡಿಸೆಂಬರ್ 20, 2023

ರಹಮತ್‌ ಅವರ ʼದೀಪʼದಂತಹ ಆತ್ಮಕಥೆ "ಕುಲುಮೆ"

 


ರಹಮತ್‌ ತರೀಕೆರೆ ಎಂದರೆ ಕೆಲವರಿಗೆ ಮೇಷ್ಟ್ರು, ಹಲವರಿಗೆ ವಿಮರ್ಶಕ, ಒಂದಷ್ಟು ಮಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶಾಂತರ ಸುತ್ತುವ ಅಲೆಮಾರಿ,  ಲೇಖಕ, ಸೃಜನಶೀಲ ಸಾಹಿತ್ಯ ಪ್ರಿಯ ಓದುಗರಿಗೆ ನೆಚ್ಚಿನ ಲಲಿತ ಪ್ರಬಂಧಕಾರ, ಇತ್ಯಾದಿ… ಇತ್ಯಾದಿ… ಇವೆಲ್ಲವೂ ಅಥವಾ ಮೇಲಿನ ಯಾವುದೇ ಒಂದು ವಿಶೇಷಣ ಗೊತ್ತಿಲ್ಲದವರಿಗೆ ʼಬುದ್ಧಿ ಜೀವಿ” ಮಾತ್ರ! ಇಂತಹ ವಿಶೇಷತೆಗಳ ವ್ಯಕ್ತಿಯೊಬ್ಬರ ಆತ್ಮಕಥೆ ಪ್ರಕಟವಾಗುತ್ತದೆ ಎಂದು ತಿಳಿದಾಗ ಖುಷಿಯಿಂದ ಓದಬೇಕೆಂದುಕೊಂಡವರಲ್ಲಿ ನಾನೂ ಒಬ್ಬ.

ರಹಮತ್‌ ತರೀಕೆರೆ ಅವರ ಆತ್ಮಕಥನ “ಕುಲುಮೆ – ಬಾಳ ಚಿತ್ರಗಳು” ಶ್ರೀಮತಿ ಬಾನು ಅವರ ಮುಖಪುಟ ಚಿತ್ರದೊಂದಿಗೆ ಪ್ರಕಟವಾಗಿದ್ದು, ಮುಖಪುಟವೇ ರಹಮತ್‌ ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದೆ. ನಾನು ಮೇಲೆ ಹೇಳಿದ ಎಲ್ಲಾ ವಿಶೇಷಣಗಳು ಇದೊಂದು ಚಿತ್ರದಲ್ಲಿಯೇ ಮೈದೆಳೆದಿವೆ ಎಂದರೂ ಸರಿ.



ರಹಮತ್‌ ಅವರೇ ತಮ್ಮ ಬಾಳಕಥನವನ್ನು “ಕುಲುಮೆ” ಎಂದು ಕರೆದಿರುವ ಕಾರಣವನ್ನು ತಿಳಿಸಿದ್ದಾರೆ: ʼನಮ್ಮ ಕುಟುಂಬದ ಕಸುಬು ಕಮ್ಮಾರಿಕೆ. ಬೆಂಕಿ ಹೊಗೆ ಹೊಡೆತ ಕಡಿತಗಳ ಈ ಕಸುಬು, ಹೆತ್ತಬ್ಬೆಯಂತೆ ಎದೆಹಾಲು ಕುಡಿಸಿ ನಮ್ಮನ್ನು ಪೊರೆಯಿತು; ಆತ್ಮಸಂಗಾತಿಯಂತೆ ವಿವಿಧ ಜಾತಿ ವೃತ್ತಿ ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತುʼ ಎಂದು. ಆದಕಾರಣದಿಂದ ʼಒಬ್ಬ ವ್ಯಕ್ತಿ ಕಬ್ಬಿಣದಂತೆ ಕುಲುಮೆಯಲ್ಲಿ ಬೆಂದು, ಬಡಿಸಿಕೊಂಡು ಒಂದು ರೂಪ ತಳೆಯಬೇಕು. ಈ ಶೀರ್ಷಿಕೆ ಸೂಕ್ತವಾಗಿದೆʼ  ಎಂದೆಲ್ಲಾ ನಾನು ಹೇಳಲು ಹೋಗುವುದಿಲ್ಲ. ಆದರೆ “ಕುಲುಮೆ” ರಹಮತ್‌ ತರೀಕೆರೆ ಅವರ ಕುಲಕಸುಬಿನ ಹೊರತಾಗಿಯೂ ಒಂದು ಆತ್ಮಕಥನಕ್ಕೆ ಬಹಳ ಸೂಕ್ತವಾದ ಹೆಸರಾಗಿದೆ ಎಂದು ಹೇಳಲು ಇಚ್ಛಿಸುತ್ತೇನೆ.

ತಮ್ಮ ಮಾತುಗಳಲ್ಲಿ ಈ ಆತ್ಮಕಥೆಯನ್ನು ಬಾಳ ಚಿತ್ರಗಳಂತೆಯೇ ಓದಿಕೊಳ್ಳಬಹುದು ಎಂದಿರುವುದು ಸೂಕ್ತವಾಗಿದೆ. ಬಹಳ ಅರ್ಥಪೂರ್ಣವಾಗಿ, ಮನಸ್ಸಿಗೆ ಆಪ್ತವೆನಿಸುವ ಲಲಿತ ಪ್ರಬಂಧಗಳನ್ನು ಬರೆಯುವ ರಹಮತ್‌ ಅವರ ಇಲ್ಲಿನ ಬರವಣಿಗೆಯೂ ಲಲಿತ ಪ್ರಬಂಧಗಳಂತೆಯೇ ಓದಿಸಿಕೊಳ್ಳುತ್ತವೆ. ಅವರೇ ಹೇಳಿರುವಂತೆ ಸ್ವಾರಸ್ಯಕರ ವ್ಯಕ್ತಿಚಿತ್ರಗಳೂ ಕೂಡ ಓದುಗನಿಗೆ ಸಿಗುತ್ತವೆ. ಆತ್ಮಕಥನದ ಹೆಸರಿನ ಸೊಗಸಿನ ಜೊತೆಗೆ ಇಲ್ಲಿನ ಪರಿವಿಡಿಯೂ ಗಮನಸೆಳೆಯುತ್ತದೆ. ಮೊದಲನೇ ಅಧ್ಯಾಯ ಗರಿಕೆಬಳ್ಳಿ. ಅದರಲ್ಲಿ ಒಂದಷ್ಟು ಉಪ-ಅಧ್ಯಾಯಗಳ ಹೆಸರನ್ನು ಓದಿದರೆ ಎಷ್ಟು ಶ್ರದ್ಧೆಯಿಂದ ತಮ್ಮ ಬಾಳಕಥನವನ್ನು ರಹಮತ್‌ ಓದುಗರಿಗೆ ನೀಡಿದ್ದಾರೆ ಎಂಬುದೇ ಒಂದು ಸೋಜಿಗದಂತಿದೆ. ಇಂತಹ ಒಟ್ಟು ಹನ್ನೆರೆಡು ಅಧ್ಯಾಯಗಳ ಆತ್ಮಕಥೆಯ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಅಭಿಮಾನಿಗಳಿಗೆ  ತಮ್ಮ ಜೀವನವನ್ನು ಕಟ್ಟಿಕೊಟ್ಟಿದ್ದಾರೆ ರಹಮತ್‌ ತರೀಕೆರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಕೃತಿಯೊಂದು "ದೀಪ"ದಂತಹ ಜೀವನಾನುಭವ ಕಥನ. 

ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ಪ್ರಕಾಶನದ ಅಕ್ಷತಾ ಅವರು ಹೇಳಿರುವಂತೆ ರಹಮತ್‌ ಅವರ ಬಾಲ್ಯದ ಅನಾರೋಗ್ಯದ ದುರಂತ, ಕನ್ನಡ ಲೋಕಕ್ಕೆ ಲಾಭಕರವಾಗಿದ್ದಂತೂ ಸತ್ಯ.

ರೂ. 330/-ರ ಮೌಲ್ಯದ ರಹಮತ್‌ ತರೀಕೆರೆ ಅವರ “ಕುಲುಮೆ”ಯನ್ನು ನೀವು ರಿಯಾಯಿತಿ ದರದಲ್ಲಿ ಅಮೇಜಾನಿನಲ್ಲಿ ಕೊಂಡು ಓದಬಹುದು.. ‌

ಲಿಂಕ್… https://amzn.to/3NBvFq3

ಭಾನುವಾರ, ಡಿಸೆಂಬರ್ 3, 2023

ವಕೀಲರ ದಿನದಂದು ಸಿ.ಎಚ್.‌ ಹನುಮಂತರಾಯ ಅವರ “ವಕೀಲರೊಬ್ಬರ ವಗೈರೆಗಳು” ಪುಸ್ತಕ ನೆನೆಯುತ್ತಾ…

ಪ್ರತಿವರ್ಷ ಡಿಸೆಂಬರ 3ರಂದು “ವಕೀಲರ ದಿನ”ವನ್ನಾಗಿ ಆಚರಿಸುತ್ತಾರೆ. ನಮ್ಮ ಭಾರತ ದೇಶದ ಖ್ಯಾತ ವಕೀಲರು ಮತ್ತು ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ (3 ಡಿಸೆಂಬರ್ 1884 - 28 ಫೆಬ್ರವರಿ 1963) ಅವರ ಜನ್ಮದಿನದ ಸವಿನೆನಪಿಗಾಗಿ ಈ ದಿನವನ್ನು “ರಾಷ್ಟ್ರೀಯ ವಕೀಲರ ದಿನ”ವನ್ನಾಗಿ ಆಚರಿಸಲಾಗುತ್ತದೆ. ಡಾ. ರಾಜೇಂದ್ರ ಪ್ರಸಾದ್‌ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಪ್ರಭಾವಿ ವಕೀಲರೂ ಆಗಿದ್ದವರು.

ಈ ದಿನದಂದು ಎಲ್ಲಾ ವಕೀಲರಿಗೂ ಶುಭಾಶಯಗಳು. ಈ ನೆಪದಲ್ಲಿ ಇಂದು ನನ್ನ ನೆನಪಿಗೆ ಬಂದ ಪುಸ್ತಕ ನ್ಯಾಯವಾದಿಗಳಾದ ಸಿ.ಎಚ್.‌ ಹನುಮಂತರಾಯ ಅವರ "ವಕೀಲರೊಬ್ಬರ ವಗೈರೆಗಳು.” ಈ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರವು 2007ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದೆ. 2008ರಲ್ಲಿ ಈ ಪುಸ್ತಕಕ್ಕೆ ಸಂಕೀರ್ಣ ವಿಭಾಗದಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ನೀಡಲಾಗಿದೆ. ಅಲ್ಲಿಗಾಗಲೇ ಮೂರು ಮುದ್ರಣಗಳನ್ನು ಕಂಡಿದ್ದ ಈ ಪುಸ್ತಕವನ್ನು 2010ರಲ್ಲಿ ಬೆಂಗಳೂರಿನ ಸಪ್ನ ಪ್ರಕಟಿಸಿದ್ದು, ಇದುವರೆವಿಗೂ ನಾಲ್ಕು ಮರುಮುದ್ರಣಗಳನ್ನು ಕಂಡಿದೆ. ವೃತ್ತಿ ಬಾಂಧವರಿಗೆ ಈ ಪುಸ್ತಕವನ್ನು ಲೇಖಕರು ಅರ್ಪಿಸಿದ್ದಾರೆ.



ಹಳ್ಳಿಯಿಂದ ನಗರಕ್ಕೆ ಬಂದು ಯಶಸ್ವಿಯಾದ ಖ್ಯಾತ ನ್ಯಾಯವಾದಿಗಳಾದ ಸಿ.ಎಚ್.‌ ಹನುಮಂತರಾಯ ಅವರ ನೂರು ಅನುಭವಜನ್ಯ ಲೇಖನಗಳು ಈ ಪುಸ್ತಕದಲ್ಲಿವೆ. ಹಳ್ಳಿಯಲ್ಲಿ ಚೆನ್ನಾಗಿ ಮಾತನಾಡುವ ಹುಡುಗನೊಬ್ಬ ವಕೀಲನಾಗಿ ಯಶಸ್ವಿಯಾಗಿ, ಸಾಹಿತ್ಯದೆಡೆಗೂ ಅಪರಿಮಿತವಾದ ಪ್ರೀತಿಯನ್ನು ಇರಿಸಿಕೊಂಡು ಈ ಲೇಖನಗಳಲ್ಲಿ ತಮ್ಮ ಅನುಭವವಗಳನ್ನು ದಾಖಲಿಸಿ ಓದುಗನನ್ನು ವಕೀಲರ ಲೋಕಕ್ಕೆ ಕರೆದೊಯ್ಯುತ್ತಾನೆ. ಮೊದಲಿಗೆ ಲಂಕೇಶರು ಲೇಖಕರ ಶಕ್ತಿಯನ್ನು ಗುರುತಿಸಿದರೂ ಬರೆಸುವಲ್ಲಿ ಅಷ್ಟೇನು ಯಶಸ್ವಿಯಾಗಿರುವುದಿಲ್ಲ. ತದನಂದರ ಇಂದ್ರಜಿತ್‌ ಲಂಕೇಶ್‌ ಹಠಬಿಡದೆ “ಲಂಕೇಶ್‌ ಪತ್ರಿಕೆ"ಗೆ “ವಗೈರೆಗಳು” ಅಂಕಣ ಬರೆಸಿದ ಪರಿಣಾಮವೇ ಈ ಪುಸ್ತಕ. ಪತ್ರಕರ್ತ ಗಂಗಾಧರ ಕುಷ್ಟಗಿ ಈ ಲೇಖನಗಳನ್ನು ನಿರೂಪಿಸಿದ್ದಾರೆ.

ಈ ಪುಸ್ತಕದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕವಿ ಡಾ. ಸಿದ್ಧಲಿಂಗಯ್ಯ ಅವರ ಮೊದಲ ಮಾತುಗಳಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಯು. ಆರ್.‌ ಅನಂತಮೂರ್ತಿಯವರ ಮುನ್ನುಡಿಯಿದೆ. ಜೊತೆಗೆ ಕವಿ ಕಿ.ರಂ. ನಾಗರಾಜ ಅವರ ಅನಿಸಿಕೆಯೂ ಇದೆ. ವಕೀಲರ ಲೋಕಕ್ಕೆ ನಿಮಗೊಂದು ಅಧಿಕೃತ ಪ್ರವೇಶ ಬೇಕಿದ್ದರೆ ಈ ಪುಸ್ತಕವನ್ನು ಓದಬಹುದಾಗಿದೆ.

ಪುಸ್ತಕದ ಸಂಕ್ಷಿಪ್ತ ಪರಿಚಯ ಮಾಡುವ ಉದ್ದೇಶವಷ್ಟೇ ನನ್ನದು.

ಈ ಪುಸ್ತಕವನ್ನು ಅಮೇಜಾನಿನಲ್ಲಿ ಕೊಳ್ಳಲು… https://amzn.to/414Bemu


 

 


 

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...