ಭಾನುವಾರ, ಡಿಸೆಂಬರ್ 3, 2023

ವಕೀಲರ ದಿನದಂದು ಸಿ.ಎಚ್.‌ ಹನುಮಂತರಾಯ ಅವರ “ವಕೀಲರೊಬ್ಬರ ವಗೈರೆಗಳು” ಪುಸ್ತಕ ನೆನೆಯುತ್ತಾ…

ಪ್ರತಿವರ್ಷ ಡಿಸೆಂಬರ 3ರಂದು “ವಕೀಲರ ದಿನ”ವನ್ನಾಗಿ ಆಚರಿಸುತ್ತಾರೆ. ನಮ್ಮ ಭಾರತ ದೇಶದ ಖ್ಯಾತ ವಕೀಲರು ಮತ್ತು ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ (3 ಡಿಸೆಂಬರ್ 1884 - 28 ಫೆಬ್ರವರಿ 1963) ಅವರ ಜನ್ಮದಿನದ ಸವಿನೆನಪಿಗಾಗಿ ಈ ದಿನವನ್ನು “ರಾಷ್ಟ್ರೀಯ ವಕೀಲರ ದಿನ”ವನ್ನಾಗಿ ಆಚರಿಸಲಾಗುತ್ತದೆ. ಡಾ. ರಾಜೇಂದ್ರ ಪ್ರಸಾದ್‌ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಪ್ರಭಾವಿ ವಕೀಲರೂ ಆಗಿದ್ದವರು.

ಈ ದಿನದಂದು ಎಲ್ಲಾ ವಕೀಲರಿಗೂ ಶುಭಾಶಯಗಳು. ಈ ನೆಪದಲ್ಲಿ ಇಂದು ನನ್ನ ನೆನಪಿಗೆ ಬಂದ ಪುಸ್ತಕ ನ್ಯಾಯವಾದಿಗಳಾದ ಸಿ.ಎಚ್.‌ ಹನುಮಂತರಾಯ ಅವರ "ವಕೀಲರೊಬ್ಬರ ವಗೈರೆಗಳು.” ಈ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರವು 2007ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದೆ. 2008ರಲ್ಲಿ ಈ ಪುಸ್ತಕಕ್ಕೆ ಸಂಕೀರ್ಣ ವಿಭಾಗದಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ನೀಡಲಾಗಿದೆ. ಅಲ್ಲಿಗಾಗಲೇ ಮೂರು ಮುದ್ರಣಗಳನ್ನು ಕಂಡಿದ್ದ ಈ ಪುಸ್ತಕವನ್ನು 2010ರಲ್ಲಿ ಬೆಂಗಳೂರಿನ ಸಪ್ನ ಪ್ರಕಟಿಸಿದ್ದು, ಇದುವರೆವಿಗೂ ನಾಲ್ಕು ಮರುಮುದ್ರಣಗಳನ್ನು ಕಂಡಿದೆ. ವೃತ್ತಿ ಬಾಂಧವರಿಗೆ ಈ ಪುಸ್ತಕವನ್ನು ಲೇಖಕರು ಅರ್ಪಿಸಿದ್ದಾರೆ.



ಹಳ್ಳಿಯಿಂದ ನಗರಕ್ಕೆ ಬಂದು ಯಶಸ್ವಿಯಾದ ಖ್ಯಾತ ನ್ಯಾಯವಾದಿಗಳಾದ ಸಿ.ಎಚ್.‌ ಹನುಮಂತರಾಯ ಅವರ ನೂರು ಅನುಭವಜನ್ಯ ಲೇಖನಗಳು ಈ ಪುಸ್ತಕದಲ್ಲಿವೆ. ಹಳ್ಳಿಯಲ್ಲಿ ಚೆನ್ನಾಗಿ ಮಾತನಾಡುವ ಹುಡುಗನೊಬ್ಬ ವಕೀಲನಾಗಿ ಯಶಸ್ವಿಯಾಗಿ, ಸಾಹಿತ್ಯದೆಡೆಗೂ ಅಪರಿಮಿತವಾದ ಪ್ರೀತಿಯನ್ನು ಇರಿಸಿಕೊಂಡು ಈ ಲೇಖನಗಳಲ್ಲಿ ತಮ್ಮ ಅನುಭವವಗಳನ್ನು ದಾಖಲಿಸಿ ಓದುಗನನ್ನು ವಕೀಲರ ಲೋಕಕ್ಕೆ ಕರೆದೊಯ್ಯುತ್ತಾನೆ. ಮೊದಲಿಗೆ ಲಂಕೇಶರು ಲೇಖಕರ ಶಕ್ತಿಯನ್ನು ಗುರುತಿಸಿದರೂ ಬರೆಸುವಲ್ಲಿ ಅಷ್ಟೇನು ಯಶಸ್ವಿಯಾಗಿರುವುದಿಲ್ಲ. ತದನಂದರ ಇಂದ್ರಜಿತ್‌ ಲಂಕೇಶ್‌ ಹಠಬಿಡದೆ “ಲಂಕೇಶ್‌ ಪತ್ರಿಕೆ"ಗೆ “ವಗೈರೆಗಳು” ಅಂಕಣ ಬರೆಸಿದ ಪರಿಣಾಮವೇ ಈ ಪುಸ್ತಕ. ಪತ್ರಕರ್ತ ಗಂಗಾಧರ ಕುಷ್ಟಗಿ ಈ ಲೇಖನಗಳನ್ನು ನಿರೂಪಿಸಿದ್ದಾರೆ.

ಈ ಪುಸ್ತಕದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕವಿ ಡಾ. ಸಿದ್ಧಲಿಂಗಯ್ಯ ಅವರ ಮೊದಲ ಮಾತುಗಳಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಯು. ಆರ್.‌ ಅನಂತಮೂರ್ತಿಯವರ ಮುನ್ನುಡಿಯಿದೆ. ಜೊತೆಗೆ ಕವಿ ಕಿ.ರಂ. ನಾಗರಾಜ ಅವರ ಅನಿಸಿಕೆಯೂ ಇದೆ. ವಕೀಲರ ಲೋಕಕ್ಕೆ ನಿಮಗೊಂದು ಅಧಿಕೃತ ಪ್ರವೇಶ ಬೇಕಿದ್ದರೆ ಈ ಪುಸ್ತಕವನ್ನು ಓದಬಹುದಾಗಿದೆ.

ಪುಸ್ತಕದ ಸಂಕ್ಷಿಪ್ತ ಪರಿಚಯ ಮಾಡುವ ಉದ್ದೇಶವಷ್ಟೇ ನನ್ನದು.

ಈ ಪುಸ್ತಕವನ್ನು ಅಮೇಜಾನಿನಲ್ಲಿ ಕೊಳ್ಳಲು… https://amzn.to/414Bemu


 

 


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹತ್ತು ಅತ್ಯುತ್ತಮ ಕವನ ಸಂಕಲನಗಳಿಗೆ ಸುವರ್ಣಾವಕಾಶ...

ಸುವರ್ಣ ಕರ್ನಾಟಕ ಕಾವ್ಯ ಪುರಸ್ಕಾರಕ್ಕಾಗಿ ಕವನ ಸಂಕಲನಗಳ ಅಹ್ವಾನ... ರಾಜ್ಯಮಟ್ಟದ ಸಾಹಿತ್ಯಾತ್ಮಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ  ಕರ್ನಾಟಕ ರಾಜ...