ಮಂಗಳವಾರ, ನವೆಂಬರ್ 14, 2023

ಜೀವದ ಗೆಳತಿಯರು (ಮಕ್ಕಳ ಕತೆ)

    ಗುಬ್ಬಿ ಎಂಬ ಪುಟ್ಟ ಹಳ್ಳಿಯಲ್ಲಿ ನಾಲ್ವರು ಗೆಳತಿಯರಿದ್ದರು. ಅವರ ಹೆಸರು ಲೇಖನ, ಶಾರದೆ, ಚಿತ್ರ ಮತ್ತು ವೈಷ್ಣವಿ. ಅವರೆಲ್ಲಾ ಊರಿನ ಅಮರ್ ಪಬ್ಲಿಕ್ ಸ್ಕೂಲಿನಲ್ಲಿ ಏಳನೇ ತರಗತಿ ಓದುತ್ತಿದ್ದರುಅವರೆಲ್ಲಾ ಜೀವದ ಗೆಳತಿಯರಾಗಿದ್ದರು. ಒಂದೇ ಊರಿನವರಾದ್ದರಿಂದ ಅವರು ಶಿಶುವಿಹಾರದಿಂದಲೂ ಒಂದೇ ಶಾಲೆ, ಒಂದೇ ಬೆಂಚು! ನಾಲ್ವರೂ ಒಟ್ಟಿಗೆ ಶಾಲೆಗೆ ಸರಿಯಾದ ಸಮಯಕ್ಕೆ ಬರುತ್ತಿದ್ದುದರಿಂದ ಹಿಡಿದು ಸಂಜೆ ಮನೆಗೆ ಹೋಗುವುವರೆಗೂ ಜೊತೆಜೊತೆಯಾಗಿಯೇ ಇರುತ್ತಿದ್ದರು. ಒಟ್ಟಾಗಿಯೇ ಓದುವುದು, ಆಡುವುದು, ಊಟ ಮಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಅವರು ಅದೆಷ್ಟು ಜೀವದ ಗೆಳತಿಯರಾಗಿದ್ದರೆಂದರೆ, ಯಾರಾದರೂ ಒಬ್ಬರಿಗೆ ಅನಾರೋಗ್ಯವಾದರೆ ಉಳಿದವರೆಲ್ಲಾ ಚಡಪಡಿಸುತ್ತಿದ್ದರು. ಅವರೂ ಒಟ್ಟಿಗೆ ಶಾಲೆಗೆ ರಜೆ ಹಾಕಿ, ಆರೋಗ್ಯ ಕೆಟ್ಟ ಗೆಳತಿಯ ಮನೆಗೆ ಹೋಗಿ ಅವಳ ಉಪಚಾರ ಮಾಡುತ್ತಿದ್ದರು. ಒಮ್ಮೊಮ್ಮೆ ವೈದ್ಯರ ಬಳಿಯೂ ಒಟ್ಟಿಗೆ ಹೋದದ್ದೂ ಇದೆ. ಪುಣ್ಯಕ್ಕೆ ವೈದ್ಯರು ಕೊಟ್ಟ ಔಷಧಿಗಳನ್ನು ಮಾತ್ರ ಒಟ್ಟಿಗೆ ತೆಗೆದುಕೊಳ್ಳುತ್ತಿರಲಿಲ್ಲ! ಅದರಿಂದ ಉಂಟಾಗಬಹುದಾದ ದುಷ್ಪರಿಣಾಮದ ಸಾಮಾನ್ಯ ತಿಳಿವಳಿಕೆ ಅವರಿಗಿತ್ತು. ನಾಲ್ವರು ಜೀವದ ಗೆಳತಿಯರನ್ನು ಕಂಡು ಹೊಟ್ಟೆ ಉರಿದುಕೊಳ್ಳುವವರು ತಣ್ಣೀರು ಕುಡಿದಷ್ಟೇ ತಮ್ಮ ಉರಿಯನ್ನು ಕಮ್ಮಿ ಮಾಡಿಕೊಳ್ಳಬೇಕಿತ್ತು. ಇವರ ನಡುವೆ ಜಗಳ ತಂದಿಡಲು ಪ್ರಯತ್ನ ಪಡುವವರು ಇವರ ಒಗ್ಗಟ್ಟನ್ನು ಮುರಿಯಲು ಸಾಧ್ಯವಾಗದೆ ಇಂಗು ತಿಂದ ಮಂಗನAತಾಗಿಬಿಡುತ್ತಿದ್ದರು

    ಹೀಗೆ ಜೀವದ ಗೆಳತಿಯರಾಗಿದ್ದ ಇವರ ಹವ್ಯಾಸಗಳು ಮಾತ್ರ ಬೇರೆಬೇರೆಯಾಗಿದ್ದವು. ಲೇಖನಳಿಗೆ ಚೆನ್ನಾಗಿ ಓದಿ ಪತ್ರಕರ್ತೆಯಾಗುವುದರ ಜೊತೆಗೆ ಸಾಹಿತಿಯೂ ಆಗಿ ಹೆಸರು ಮಾಡಬೇಕೆಂಬ ಆಸೆಯಿತ್ತು. ಪಠ್ಯೇತರ ಪುಸ್ತಕಗಳನ್ನು ಓದುವುದರ ಜೊತೆಗೆ ಕವನ, ಕತೆಗಳನ್ನು ಬರೆಯುತ್ತಿದ್ದಳು. ಶಾಲೆಯ ಗೋಡೆ ಪತ್ರಿಕೆಗೆ ಆಣಿ ಮುತ್ತುಗಳು ಮತ್ತು ಶಾಲೆಯ ಕಾರ್ಯಕ್ರಮಗಳ ವರದಿಯನ್ನು ಬರೆಯುತ್ತಿದ್ದಳು. ಶಾರದೆಗೆ ಚೆನ್ನಾಗಿ ಓದಿ ಶಿಕ್ಷಕಿಯಾಗಬೇಕೆಂಬ ಬಯಕೆಯಿತ್ತು. ಬಿಡುವಿನ ವೇಳೆಯಲ್ಲಿ ತನಗಿಂತ ಚಿಕ್ಕಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದಳು. ಅವಳ ಬರವಣಿಗೆ ಅಚ್ಚಾದ ಅಕ್ಷರಗಳಂತಿರುತ್ತಿದ್ದವು. ಇನ್ನು ಚಿತ್ರಳಿಗೆ ಹೆಸರಾಂತ ನಟಿಯಾಗಬೇಕೆಂಬ ಕನಸಿತ್ತು. ಅವಳ ಕನಸನ್ನು ನನಸಾಗಿಸಲು ಶಾಲೆಯ ನಾಟಕಗಳಲ್ಲಿ ಅಭಿನಯಿಸುವುದು, ಏಕಪಾತ್ರಭಿನಯದಲ್ಲಿ ಶಭಾಷ್ ಎನ್ನಿಸಿಕೊಳ್ಳುವುದು ಮತ್ತು ಶಾಲೆಯ ವಾರ್ಷಿಕೋತ್ಸವದಂದು ಚೆನ್ನಾಗಿ ನೃತ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸುವುದು ಸಾಮಾನ್ಯವಾಗಿತ್ತು. ಮೂವರದ್ದು ಒಂದೊAದು ದಾರಿಯಾದರೆ, ವೈಷ್ಣವಿಯದ್ದು ಮಾತ್ರ ಹೆಸರಾಂತ ವ್ಯಾಪಾರಿಯಾಗಬೇಕೆಂಬ ಹೆಬ್ಬಯಕೆ. ಆಕೆ ಚಿಕ್ಕಂದಿನಿAದಲೂ ಹಣ ಉಳಿಸುವುದರಲ್ಲಿ ಎತ್ತಿದ ಕೈ! ಉಳಿಸಿದ ಹಣದಲ್ಲಿ ಒಮ್ಮೆ ಒಂದು ಪುಟಾಣಿ ಚಿನ್ನದುಂಗರವನ್ನು ಖರೀದಿಸಿ, ಅದನ್ನು ಚಿನ್ನದ ಬೆಲೆ ಜಾಸ್ತಿಯಾದಾಗ ಮಾರಿ ಲಾಭ ಮಾಡಿಕೊಂಡದ್ದನ್ನು ಹೆಮ್ಮೆಯಿಂದ ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದಳು. ಹವಾಸ್ಯಗಳು ಬೇರೆಬೇರೆಯಾದರೂ ಇವರೆಲ್ಲಾ ಪರಸ್ಪರ ಒಬ್ಬರನ್ನೊಬ್ಬರ ಅಭಿರುಚಿಯನ್ನು ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು.

    ಆದರೆ, ಒಂದು ದಿನ ಇವರ ಜೇನುಗೂಡಿನಂತ ಸ್ನೇಹಕ್ಕೆ ಕಲ್ಲು ಬಿದ್ದೇ ಬಿಟ್ಟಿತ್ತು. ದಿನ ಅವರ ಜೀವನದ ಅತ್ಯಂತ ಒಳ್ಳೆಯ ಮತ್ತು ಅತಿ ಕೆಟ್ಟ ದಿನವೂ ಆಗಿತ್ತು. ದಿನ ಇವರ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಂದಿತ್ತು. ಇವರೆಲ್ಲರೂ ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಮೊದಲಿಗರಾಗಿ ಪಾಸಾಗಿದ್ದರು. ಖುಷಿ ದಿನವನ್ನು ಒಳ್ಳೆಯ ದಿನವನ್ನಾಗಿಸಿದ್ದರೆ, ಮುಂದೆ ಏನು ಎಂಬ ಪ್ರಶ್ನೆ ದಿನವನ್ನು ಅವರ ಜೀವನದ ಅತ್ಯಂತ ಕೆಟ್ಟ ದಿನವೆಂದು ಸಾಬೀತುಮಾಡಿತ್ತು. ಯಾಕೆಂದರೆ, ಪುಟ್ಟ ಊರಿನ ಶಾಲೆಯಲ್ಲಿ ಎಂಟನೇ ತರಗತಿಯೇ ಇರಲಿಲ್ಲ! ಕಾರಣ ಮುಂದಿನ ವಿದ್ಯಾಭ್ಯಾಸಕ್ಕೆ ಅವರೆಲ್ಲಾ ತುಮಕೂರು ನಗರಕ್ಕೇ ಹೋಗಬೇಕಿತ್ತು.

 ನಾಲ್ವರೂ ಒಲ್ಲದ ಮನಸ್ಸಿನಿಂದಲೇ ಒಂದು ತೀರ್ಮಾನಕ್ಕೆ ಬಂದಿದ್ದರು. ಮೊದಲು ತಮ್ಮ ತಮ್ಮ ಮನೆಗಳಿಗೆ ಹೋಗಿ ತಂದೆ-ತಾಯಿಗಳಿಗೆ ತಮ್ಮ ಫಲಿತಾಂಶವನ್ನು ತಿಳಿಸಿ, ಮುಂದಿನ ವಿದ್ಯಾಭ್ಯಾಸಕ್ಕೆ ತುಮಕೂರಿನ ಯಾವುದಾದರೂ ಒಂದೇ ಶಾಲೆಗೆ ಸೇರಿಸಿ ಎಂದು ಕೇಳಿಕೊಳ್ಳುವುದೆಂದು. ಅವರವರ ಮನೆಗಳಿಗೆ ಹೋದಾಗ ವಿಧಿ ಅಲ್ಲಿ ಬೇರೆಯದೆ ಆಟವಾಡಿತ್ತು. ಚಿಕ್ಕಂದಿನಿA ಕೈಬಿಡದ ಅದೃಷ್ಟ ಇವರ ಕೈಗಳನ್ನು ಒಮ್ಮೆಗೇ ಕೊಡವಿಕೊಂಡುಬಿಟ್ಟಿತ್ತು. ಎಲ್ಲರ ಮನೆಯಲ್ಲೂ ಮಕ್ಕಳು ಪ್ರಥಮ ದರ್ಜೆಯಲ್ಲಿ ಪಾಸಾದ ವಿಷಯ ಸಂತಸ ತುಂಬಿದ್ದರೆ, ಒಬ್ಬಬ್ಬರ ಮನೆಯಲ್ಲೂ ನಡೆದ ಮಾತುಕತೆಗಳು ಇವರನ್ನು ನಡುಗಿಸಿ ದುಃಖದ ಮಡುವಿನಲ್ಲಿ ತೋಯಿಸಿದ್ದವು. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಲೇಖನಳ ತಂದೆಗೆ ಮೈಸೂರಿಗೆ ವರ್ಗವಾಗಿದ್ದರೆ, ಶಿಕ್ಷಕರಾಗಿದ್ದ ಶಾರದೆಯ ತಂದೆ ಪ್ರಮೋಷನ್ ಮೇಲೆ ತುಮಕೂರಿಗೆ ಹೊರಟ್ಟಿದ್ದರು. ಹಳ್ಳಿಯವರಿಗೆ ನಾಟಕ ಹೇಳಿಕೊಡುತ್ತಿದ್ದ ಚಿತ್ರಳ ತಂದೆಗೆ ಬೆಂಗಳೂರಿನಲ್ಲಿ ಟಿವಿ ಛಾನೆಲ್ಲೊಂದಕ್ಕೆ ಧಾರಾವಾಹಿ ನಿರ್ದೇಶಿಸುವ ಅಮೂಲ್ಯ ಅವಕಾಶ ಸಿಕ್ಕಿಬಿಟ್ಟಿತ್ತು! ಇನ್ನು ವೈಷ್ಣವಿಯ ತಂದೆ ತಮ್ಮ ಜವಳಿ ಉದ್ಯಮವನ್ನು ಮತ್ತಷ್ಟು ಬೆಳೆಸಲು ದಾವಣಗೆರೆಗೆ ಗಂಟು ಮೂಟೆ ಕಟ್ಟಲು ನಿರ್ಧರಿಸಿದ್ದರು. ನಮ್ಮ ಮನೆಯಲ್ಲಿ ಮಾತ್ರ ಹೀಗಾಗಿದೆ, ಇದನ್ನು ಗೆಳತಿಯರಿಗೆ ಹೇಗೆ ಹೇಳುವುದು ಎಂದು ನಾಲ್ವರೂ ಒಂಟಿಯಾಗಿಯೇ ರಾತ್ರಿಯೆಲ್ಲಾ ದುಃಖಿಸುತ್ತಲೇ ಕಳೆದಿದ್ದರು.

 ಮರುದಿನ, ಶಾಲೆಯ ಹೂದೋಟದಲ್ಲಿ ನಾಲ್ವರೂ ಒಟ್ಟಿಗೆ ಕಳೆಗುಂದಿದ ಹೂಗುಚ್ಛದಂತೆ ಕಾಣುತ್ತಿದ್ದರು. ತಮ್ಮ ತಮ್ಮ ಮನೆಗಳಲ್ಲಿ ನಡೆದ ವಿಷಯಗಳನ್ನು ಹಂಚಿಕೊAಡಾಗ, ಎಲ್ಲರಿಗೂ ಒಮ್ಮೆಗೆ ಆಶ್ಚರ್ಯವಾಗಿ ನಗುವುದೋ, ಅಳುವುದೋ ತಿಳಿಯದಾಯಿತು. ನಮ್ಮ ಕೈಲೇನಿದೆ, ಬಂದದ್ದನೆಲ್ಲಾ ಎದುರಿಸಿಯೇ ಬಿಡೋಣವೆಂದು ನಿರ್ಧರಿಸಿದರು. ದೈಹಿಕವಾಗಿ ದೂರದಲ್ಲಿದ್ದರೂ ಮಾನಸಿಕವಾಗಿ ಹತ್ತಿರವಾಗೇ ಇರುವುದು ಹೇಗೆ ಎಂದು ಚಿಂತಿಸತೊಡಗಿದರು. ಅವರಿಗೆ ಏನೂ ತೋಚದೆ ಶಿಕ್ಷಕರನ್ನು ಕೇಳುವುದೆಂದು ಮೊದಲು ಕನ್ನಡದ ಶಿಕ್ಷಕಿಯ ಬಳಿಗೆ ಹೋದರು. ಅವರು ಪರಸ್ಪರ ಪತ್ರಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಿ ಎಂದು ಸಲಹೆಯಿತ್ತರು. ನಂತರ ವಿಜ್ಞಾನದ ಶಿಕ್ಷಕರು ಎಲ್ಲರೂ ಒಂದೊAದು ಮೊಬೈಲ್ ಕೊಂಡುಕೊಳ್ಳಿ ಎಂದರೆ, ಇಂಗ್ಲೀಷ್ ಶಿಕ್ಷಕರು ಎಲ್ಲರೂ ವರ್ಷಕ್ಕೊಮ್ಮೆ ಗೆಟ್ ಟು ಗೆದರ್ ಪಾರ್ಟಿ ಮಾಡಿಬಿಡಿ ಎಂದರು. ಯಾರ ಸಲಹೆಯೂ ಜೀವದ ಗೆಳತಿಯರಿಗೆ ಸಮಂಜಸವೆನಿಸಲಿಲ್ಲ. ಕಡೆಗೆ ಇವರೆಲ್ಲಾ ಕಂಪ್ಯೂಟರ್ ಶಿಕ್ಷಕರ ಬಳಿ ಹೋದರು. ಅವರು ಒಂದು ಕ್ಷಣ ಯೋಚಿಸಿ ನೀವೆಲ್ಲಾ ಫೇಸ್ಬುಕ್ಕಿನಲ್ಲಿ ಒಂದಾಗಿ ಬಿಡಿ. ಅಲ್ಲಿ ನಿಮ್ಮ ಎಲ್ಲಾ ಚಟುವಟಿಕೆಗಳನ್ನು ದಾಖಲಿಸಿ. ನಿಮ್ಮ ನಾಲ್ಕೇ ಜನರ ಒಂದು ಗುಂಪನ್ನು ಮಾಡಿಕೊಂಡು ನಿಮ್ಮ ಜೇನುಗೂಡನ್ನು ಮತ್ತೆ ಕಟ್ಟಿಕೊಳ್ಳಿ ಎಂದರು. ಸಲಹೆಯು ಎಲ್ಲಾ ಗೆಳತಿಯರಿಗೂ ಹಿಡಿಸಿತು. ಕಂಪ್ಯೂಟರ್ ಶಿಕ್ಷಕರು ಇವರಿಗೆ ಫೇಸ್ಬುಕ್ಕಿನ ಉಪಯೋಗ ಮತ್ತು ದುರುಪಯೋಗ ಎಲ್ಲವನ್ನೂ ಮನದಟ್ಟಾಗುವಂತೆ ತಿಳಿಸಿ ಬೀಳ್ಕೊಟ್ಟರು. ಶಿಕ್ಷಕರ ಉಪಯುಕ್ತ ಸಲಹೆ ಮತ್ತು ಮಾಹಿತಿಗೆ ಧನ್ಯವಾದ ಹೇಳಿ ಎಲ್ಲಾ ಗೆಳತಿಯರು ತಮ್ಮ ಮನೆಗಳ ದಾರಿ ಹಿಡಿದರು.

 ಇದೀಗ ಪ್ರತಿದಿನ ಒಂದೇ ಸಮಯದಲ್ಲಿ ಜೀವದ ಗೆಳತಿಯರು ತಮ್ಮ ಫೇಸ್ಬುಕ್ ಖಾತೆಗಳನ್ನು ತೆರೆದುಕೊಂಡು ಕೂಡುತ್ತಾರೆ. ಅರಮನೆÀ ನಗರಿ ಮೈಸೂರಿನಿಂದ ಲೇಖನ, ವಿದ್ಯಾನಗರಿ ತುಮಕೂರಿನಿಂದ ಶಾರದೆ, ಕನಸಿನ ನಗರಿ ಬೆಂಗಳೂರಿನಿA ಚಿತ್ರ ಮತ್ತು ವಾಣಿಜ್ಯ ನಗರಿ ದಾವಣಗೆರೆಯಿಂದ ವೈಷ್ಣವಿ ತಮ್ಮ ಸ್ಟೇಟಸ್ ಅಪ್ಡೇಟ್ ಮಾಡುತ್ತಲೋ, ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡುವುದರಲ್ಲಿಯೋ, ಚಾಟ್ ಮಾಡುತ್ತಲೋ, ಲೈಕಿಸುವುದರಲ್ಲಿಯೋ, ಕಾಮೆಂಟಿಸುವುದರಲ್ಲಿಯೋ ತೊಡಗಿದರೆಂದರೆ ಫೇಸ್ಬುಕ್ಕಿಗೂ ಹೊಟ್ಟೆ ಉರಿಯತೊಡಗುತ್ತದೆ! 

                                         -    ಗುಬ್ಬಚ್ಚಿ ಸತೀಶ್

@@@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹತ್ತು ಅತ್ಯುತ್ತಮ ಕವನ ಸಂಕಲನಗಳಿಗೆ ಸುವರ್ಣಾವಕಾಶ...

ಸುವರ್ಣ ಕರ್ನಾಟಕ ಕಾವ್ಯ ಪುರಸ್ಕಾರಕ್ಕಾಗಿ ಕವನ ಸಂಕಲನಗಳ ಅಹ್ವಾನ... ರಾಜ್ಯಮಟ್ಟದ ಸಾಹಿತ್ಯಾತ್ಮಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ  ಕರ್ನಾಟಕ ರಾಜ...