ಮಂಗಳವಾರ, ಸೆಪ್ಟೆಂಬರ್ 12, 2023

ಕಥೆ ಚಿತ್ರಕಥೆ ಸಂಭಾಷಣೆ ಜೋಗಿ

‘ಬರೀ ದೃಶ್ಯಗಳಿಗೆ ಅಲಂಕಾರ ಮಾಡಿ ಪ್ರೇಕ್ಷಕನನ್ನ ತೃಪ್ತಿಗೊಳಿಸೋದು ಕಷ್ಟದ ಕೆಲಸ. ಅದೇ ಒಂದೊಳ್ಳೆಯ ಕತೆಗೆ ಅವನು ಸುಲಭವಾಗಿ ಮನ ಸೋಲುತ್ತಾನೆ’

-        ಸ್ಟೀವನ್ ಸ್ಟಿಲ್‌ಬರ್ಗ್

ತಮ್ಮ ಹನಿಗವನಗಳಿಂದ ಗಮನ ಸೆಳೆಯುತ್ತಿರುವ ನವೀನ್ ಮಧುಗಿರಿ ಫೋನ್ ಮಾಡಿ ‘ಸರ್, ಪುಸ್ತಕಗಳನ್ನೇನೊ ಪ್ರಕಟಿಸಿದೆ, ಅವುಗಳ ಮಾರಾಟ ಮಾಡುವುದು ಹೇಗೆ?’ ಎಂದು ಕೇಳಿದರು. ನಾನು ನಕ್ಕು ಪುಸ್ತಕಗಳನ್ನು ಮಾರಾಟ ಹೇಗೆ ಮಾಡುವುದು ಎಂದರೆ... ಅದು ನಮಗೂ ಇವರೆಗೆ ಗೊತ್ತಾಗಿಲ್ಲ. ಅದರಲ್ಲೂ ಕವನ ಸಂಕಲನದ ಒಂದು ಪ್ರತಿಯನ್ನೂ ಮಾರಲಿಕ್ಕಾಗುವುದಿಲ್ಲ. ಯಾಕೆಂದರೆ, ಈ ಕಾಲಘಟ್ಟದಲ್ಲಿ ನೋಡುಗರಿದ್ದಾರೆ, ಓದುಗರಿಲ್ಲ. ನೀವು ಇದುವರೆಗೂ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದೀರಾ ಅಲ್ಲವೇ? ಅಲ್ಲಿಗೆ ಸಾಕು. ಇನ್ನು ಮುಂದೆ ಒಂದು ಕಿರುಚಿತ್ರ ಮಾಡಿ ಎಂದು ಉಚಿತ ಸಲಹೆ ಕೊಟ್ಟೆ. ಅವರು ನಕ್ಕು ಸುಮ್ಮನಾದರು.

ಹೌದು. ಇದು ಈ ಕಾಲಘಟ್ಟದ ಸತ್ಯ. ಇದು ನೋಡುಗರ ಕಾಲವೇ ಹೊರತು, ಓದುಗರ ಕಾಲವಲ್ಲ. ನೋಡುವುದು ಎಂದರೆ ಕಿರುಚಿತ್ರಗಳನ್ನು, ಸಿನಿಮಾಗಳನ್ನು ನೋಡುವುದು. ಹಲವು ಪುಸ್ತಕಗಳನ್ನು ಬರೆದವರಿಗಿಂತ ಒಂದು ಕಿರುಚಿತ್ರ ಮಾಡಿದವರು ಹೆಚ್ಚು ಮಾನ್ಯರಾಗುತ್ತಿರುವ ಕಾಲ. ಸ್ಮಾರ್ಟ್ಫೋನುಗಳ ಈ ಕಾಲದಲ್ಲಿ ನೋಡುವುದು ಕೂಡ ಬಹಳ ಸುಲಭವೇ ಆಗಿಬಿಟ್ಟಿದೆ.

ಈ ಕಿರುಚಿತ್ರ ಅಥವಾ ಸಿನಿಮಾ ಮಾಡಲ್ಲಿಕ್ಕಾದರೂ ಒಂದೊಳ್ಳೆ ಕಥೆ ಬೇಕು. ಆ ಕಥೆಯನ್ನು ಚಿತ್ರಕಥೆಯ ರೂಪದಲ್ಲಿ ಬರೆದಿರಬೇಕು. ಅದಕ್ಕೆ ಪೂರಕವಾದ ಸಂಭಾಷಣೆಯೂ ರಚಿತವಾಗಿರಬೇಕು. ಇದನ್ನು ನಿರ್ದೇಶಕ ಮತ್ತು ಇತರ ತಾಂತ್ರ‍್ರಿಕವರ್ಗದವರು ಸೇರಿ ನೋಡಲು ಯೋಗ್ಯವಾದ ಚಿತ್ರವನ್ನು ರೂಪಿಸಬೇಕು. ಚಿತ್ರ ಪರದೆಯ ಮೇಲೆ ನೋಡುಗರನ್ನು ಸೆಳೆಯಬೇಕೆಂದರೆ ಮೊದಲಿಗೆ ಅದು ಒಂದೊಳ್ಳೆ ಚಿತ್ರಕಥೆಯಾಗಿ ಬಿಳಿಹಾಳೆಯ ಮೇಲೆ ಮೂಡಿರಬೇಕು. ಆಗಷ್ಟೇ ಒಂದೊಳ್ಳೆ ಚಿತ್ರ ಸಿದ್ಧವಾಗುತ್ತದೆ.

ಈ ಚಿತ್ರಕಥೆಯನ್ನು ಬರೆಯಲು ಕಲಿಯಲಿಕ್ಕೆಂದೇ ಹಲವಾರು ಪುಸ್ತಕಗಳಿವೆ. ಆದರೆ ಅವೆಲ್ಲವೂ ಇಂಗ್ಲೀಷಿನಲ್ಲಿವೆ. ಕನ್ನಡದಲ್ಲಿ ಈ ರೀತಿಯ ಪುಸ್ತಕಗಳು ವಿರಳಾತಿ ವಿರಳ ಎನ್ನುವ ಹೊತ್ತಿನಲ್ಲಿ ನಮ್ಮೆಲ್ಲರ ನೆಚ್ಚಿನ ಲೇಖಕ ಜೋಗಿಯವರು ಬಹಳ ಶ್ರಮವಹಿಸಿ ಒಂದು ಪುಸ್ತಕವನ್ನು ಕನ್ನಡಿಗರಿಗೆ ನೀಡಿದ್ದಾರೆ. ಆ ಪುಸ್ತಕದ ಹೆಸರೇ ‘ಕಥೆ ಚಿತ್ರಕಥೆ ಸಂಭಾಷಣೆ ಜೋಗಿ’ ಎಂದು. ಬೆಂಗಳೂರಿನ ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.



ಫೇಸ್‌ಬುಕ್ಕಿನ ಮೂಲಕವೇ ಈ ಪುಸ್ತಕ ಪ್ರಕಟವಾಗುತ್ತಿರುವ ಸುದ್ಧಿ ನನಗೆ ತಿಳಿದರೂ ಇದಾಗಲೇ ಅಲ್ಪಸ್ವಲ್ಪ ಚಿತ್ರಕತೆ ಬರೆಯುವುದನ್ನು ಕಲಿತ ನಾನು ಮೊದಲಿಗೆ ಈ ಪುಸ್ತಕವನ್ನು ನಿರ್ಲಕ್ಷಿಸಿದ್ದೆ. ವಾಟ್ಸಾಪ್ಪಿನಲ್ಲಿ ನ್ಯಾನೋ ಕತೆಗಾರ ವಿ. ಗೋಪಕುಮಾರ್ ಈ ಪುಸ್ತಕವನ್ನು ತರಿಸಿಕೊಂಡು ಅದರ ಚಿತ್ರವನ್ನು ಹಾಕಿದಾಗ ಅವರಿಗೆ ಈ ಪುಸ್ತಕದ ಅವಶ್ಯಕತೆಯೇ ಇಲ್ಲ ಎಂದು ಹೇಳುತ್ತಾ ಆಗಲೇ ತಮ್ಮ ಕಿರುಚಿತ್ರಗಳಿಂದ ಗಮನ ಸೆಳೆದಿರುವ ಅವರಿಗೆ ನಿಮಗಾಗಲೇ ಚೆನ್ನಾಗಿ ಚಿತ್ರಕಥೆ ಬರೆಯಲು ಬರುತ್ತದೆ ಎಂದು ವಾದಿಸಿದ್ದೆ. ಅದಕ್ಕವರು ನಾನಿನ್ನು ಕಲಿಯುವುದು ಬಹಳಷ್ಟಿದೆ ಎಂದು ಹೇಳಿ ಸುಮ್ಮನಾಗಿದ್ದರು.

ಆದರೆ, ಒಂದು ಯಾವುದೋ ಒಳ್ಳೆಯ ಪುಸ್ತಕ ತನ್ನ ಓದುಗನನ್ನು ತಾನೇ ಹುಡುಕಿಕೊಳ್ಳುತ್ತದೆ ಎಂದು ನಾನು ನಂಬಿರುವುದಕ್ಕೆ ಪೂರಕವೆಂಬಂತೆ ಈ ಪುಸ್ತಕ ನಮ್ಮ ಮನೆ ಸೇರಿಬಿಟ್ಟಿತು. ಕುತೂಹಲಕ್ಕೆಂದು ಕೈಗೆತ್ತಿಕೊಂಡವನು ಒಂದು ವಾರ ಕಾಲ ನನಗೆ ಸಿಗುವ ಅಲ್ಪಸ್ವಲ್ಪ ಸಮಯದಲ್ಲೇ ಓದಿ ಮುಗಿಸಿದೆ. ಸಿನಿಮಾಗಳಿಗೆ ಚಿತ್ರಕಥೆ ಏಕೆ ಬಹುಮುಖ್ಯವಾಗುತ್ತದೆ ಎಂಬುದು ನನಗೆ ಮತ್ತೊಮ್ಮೆ ಮನದಟ್ಟಾಗಿ ಹಲವಾರು ಹೊಸ ವಿಷಯಗಳನ್ನು ತಿಳಿದುಕೊಂಡಂತಾಯಿತು.

‘ಕಥೆ ಚಿತ್ರಕಥೆ ಸಂಭಾಷಣೆ ಜೋಗಿ’ ಪುಸ್ತಕವು My Experiments with Cinema ಎನ್ನುವ ಉಪಶೀರ್ಷಿಕೆಯೊಂದಿಗೆ ಮಹಾತ್ಮ ಗಾಂಧೀಜಿಯವರ ‘ನನ್ನ ಆತ್ಮಕಥೆ’ ‘An Autobiography’ or ‘The Story Of My Experiments With Truth’ ಪುಸ್ತಕವನ್ನು ನೆನಪಿಗೆ ತರುತ್ತದೆ. ಆದರೆ ಇದು ಆತ್ಮಕತೆಯಲ್ಲ, ಚಿತ್ರಕಥೆಯ ಮಹತ್ವವನ್ನು ಒತ್ತಿ ಹೇಳುವ ಪುಸ್ತಕ. ಹಳೆಯ ಕಪ್ಪುಬಿಳುಪಿನ ಸಿನಿಮಾದಲ್ಲಿ ಹೆಸರು ತೋರಿಸುವಂತೆ ಆಕರ್ಷಕ ಮುಖಪುಟದೊಂದಿಗೆ (ವಿನ್ಯಾಸ: ಪ್ರದೀಪ್ ಬತ್ತೇರಿ) 352 ಪುಟಗಳ ಈ ಬೃಹತ್ ಪುಸ್ತಕವು ಗಮನ ಸೆಳೆಯುತ್ತದೆ. 18 ನಿರ್ದೇಶಕರ ಚಿಂತನೆಯ ಸಾರವಾದ ಈ ಪುಸ್ತಕವನ್ನು ಖ್ಯಾತ ನಟ ಪ್ರಕಾಶ್ ರೈ ‘ಸಿನಿಮಾ ಮಾಡುವವರ ಪಾಲಿಗೆ ಬಹುಮುಖ್ಯ ಕೈಪಿಡಿ” ಎನ್ನುತ್ತಾರೆ.

‘ನನ್ನ ಪೆನ್ನು ಕೋವಿಯಿಂದ ಮೊದಲ ಸಲ ‘ಶಿಕಾರಿ’ ಮಾಡಿಸಿದ ಮಿತ್ರ ಬಿ.ಎಸ್. ಲಿಂಗದೇವರು ಅಖಂಡ ಗೆಳೆತನಕ್ಕೆ’ ಎಂದು ‘ನಾನು ಅವನಲ್ಲ, ಅವಳು’ ಸಿನಿಮಾ ಖ್ಯಾತಿಯ ನಿರ್ದೇಶಕ ಬಿ.ಎಸ್. ಲಿಂಗದೇವರುರವರಿಗೆ ಅರ್ಪಿತವಾಗಿರುವ ಈ ಪುಸ್ತಕ ಎರಡು ಭಾಗಗಳಲ್ಲಿದೆ. ‘ಟೈಟಲ್ ಕಾರ್ಡ್’ ಎಂಬ ಮೊದಲ ಭಾಗದಲ್ಲಿ ಜೋಗಿಯವರು ಧಾರಾವಾಹಿಗಳಿಗೆ, ಸಿನಿಮಾಗಳಿಗೆ ಬರೆದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಎರಡನೆಯ ಭಾಗ ‘ಸೆಂಕೆಡ್ ಹಾಫ್’ ನಲ್ಲಿ ಕನ್ನಡದ ಹಿರಿಯ ಕಿರಿಯರೆನ್ನದೆ ಒಟ್ಟು 18 ನಿರ್ದೇಶಕರು, ಲೇಖಕರು ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ.

ಮೊದಲ ಭಾಗದ ‘ತಬ್ಬಲಿಯು ನೀನಾದೆ ಮಗನೇ...’ ಲೇಖನದಲ್ಲಿ ಜೋಗಿಯವರು ‘ಚಿತ್ರಕತೆ ಎಂದರೆ ಏನು, ಅದರಲ್ಲಿ ಏನೇನಿರಬೇಕು, ಒಂದು ಕತೆಯನ್ನು ಚಿತ್ರಕತೆಯಾಗಿ ಹೇಳುವುದು ಹೇಗೆ ಎಂಬ ಪ್ರಶ್ನೆಗೆ ನಾವು ಪಾಶ್ಚಾತ್ಯ ವಿದ್ವಾಂಸರಿಂದಲೇ ಉತ್ತರ ಪಡೆಯಬೇಕು ಅಂತೇನಿಲ್ಲ. ಕನ್ನಡದ ಅನೇಕ ಕಥನ ಕವನಗಳಲ್ಲಿ, ಕಾವ್ಯದಲ್ಲಿ, ಪುರಾಣದ ಕಾದಂಬರಿಗಳಲ್ಲಿ ಚಿತ್ರಕತೆಯ ತಂತ್ರವನ್ನು ತೆರೆದು ತೋರುವಂಥ ಉದಾಹರಣೆಗಳು ಸಿಗುತ್ತವೆ’ ಎಂದು ಹೇಳುತ್ತಾ ಈ ನಿಟ್ಟಿನಲ್ಲಿ ಕನ್ನಡದ ಪ್ರಸಿದ್ಧ ಪದ್ಯ ಗೋವಿನ ಹಾಡನ್ನು ಉದಾಹರಿಸುತ್ತಾ ಸವಿವರವಾಗಿ ಈ ಪದ್ಯ ಒಂದು ಅತ್ಯುತ್ತಮ ಚಿತ್ರಕತೆಯಂತೆಯೇ ಇರುವುದನ್ನು ವಿವರಿಸುತ್ತಾರೆ. ಈ ಭಾಗದಲ್ಲಿ ನನ್ನ ಗಮನ ಸೆಳೆದ ಮತ್ತೊಂದು ಲೇಖನ ‘ನಾನೂ ನಿರ್ದೇಶಕನಾದೆ’. ಡಾ|| ರಾಜ್‌ಕುಮಾರ್ ಬಾಂಡ್ ಆಗಿ ನಟಿಸಿದ ‘ಆಪರೇಷನ್ ಡೈಮಂಡ್ ರಾಕೆಟ್’ ಸಿನಿಮಾದ ಕೊನೆಯಲ್ಲಿ ಮುಂದಿನ ಅಸೈನ್‌ಮೆಂಟ್ ‘ಆಪರೇಷನ್ ಗೋಲ್ಡನ್ ಗ್ಯಾಂಗ್’ ಎಂದು ಘೋಷಿಸುವುದನ್ನು ನೆನಪಿಟ್ಟುಕೊಂಡ ನಿರ್ಮಾಪಕರೊಬ್ಬರು ಬಾಂಡ್ ಸಿನಿಮಾಕ್ಕೆ ಕತೆ ಬರೆಯಿರಿ ಎಂದು ಲೇಖಕರಿಗೆ ಸೂಚಿಸಿ, ಅವರು ಒಂದು ಅದ್ಭುತ ಕತೆಯನ್ನು ಹೆಣೆದಿದ್ದಾರೆ. ಆದರೆ, ಬಜೆಟ್ ಕಾರಣದಿಂದ ಸಿನಿಮಾ ಸೆಟ್ಟೇರದೆ ನಿಂತುಹೋಯಿತು. ತಾವು ಪತ್ರಕರ್ತನ ಕೆಲಸಕ್ಕೆ ಇನ್ನೂ ರಾಜೀನಾಮೆ ಕೊಡದೆ ಇದ್ದುದರಿಂದ ಬಚಾವಾದೆ ಎನ್ನುತ್ತಾ ಈ ಅನುಭವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ ಲೇಖಕರು. ‘ಬೆಸ್ಟ್ ವೇ ಅಂದರೆ ಹೆಮಿಂಗ್ – ವೇ’ ಲೇಖನವು ಚಿತ್ರಕಥೆ ಬರೆಯುವವರಿಗಷ್ಟೇ ಅಲ್ಲದೆ ಲೇಖಕರು ಹೇಳುವಂತೆ ಬರೆಯಲು ಹೊರಡುವ ಪ್ರತಿಯೊಬ್ಬರೂ ಕಲಿಯಬೇಕಾದ ಮೂಲಭೂತ ಪಾಠ ಏನು ಅನ್ನುವುದನ್ನು ಹೇಳುತ್ತದೆ. ಆದಿಯಿಂದ ಅಂತ್ಯದವರೆಗೂ ಈ ಭಾಗ ಸಿನಿಮಾ ರೂಪುಗೊಳ್ಳುವ ಪ್ರಕ್ರಿಯೆಗಳ ಸ್ಥೂಲ ಪರಿಚಯವನ್ನು ಮಾಡಿಕೊಡುತ್ತದೆ.

ಇನ್ನು ಎರಡನೇ ಭಾಗ ‘ಸೆಕೆಂಡ್ ಹಾಫ್’ನಲ್ಲಿ ಗಿರೀಶ್ ಕಾಸರವಳ್ಳಿಯಂಥ ಹೆಸರಾಂತ ನಿರ್ದೇಶಕರಿಂದ ಹಿಡಿದು ಇತ್ತೀಚಿನ ‘ರಾಮಾ ರಾಮಾ ರೇ...’ ಸಿನಿಮಾ ನಿರ್ದೇಶಕ ಡಿ. ಸತ್ಯಪ್ರಕಾಶ್ ರವರನ್ನು ಒಳಗೊಂಡಂತೆ 18 ಪ್ರತಿಭಾನ್ವಿತರ ಅನಿಸಿಕೆ ಅಭಿಪ್ರಾಯ ಮಾರ್ಗದರ್ಶನಗಳಿವೆ. ಗಿರೀಶ್ ಕಾಸರವಳ್ಳಿಯವರ ‘ಚಿತ್ರಕಥೆ: ವಸ್ತು ಮತ್ತು ವಿನ್ಯಾಸ’ ಹಾಗೂ ಬಿ. ಸುರೇಶರವರ ‘ಸಿನಿಮಾದ ಸಂಕೇತ ಭಾಷೆ - ಸಿಮಿಯಾಟಿಕ್ಸ್’ ಲೇಖನಗಳು ಸುದೀರ್ಘವಾಗಿ ಚರ್ಚೆಗೆ ಒಳಪಟ್ಟಿವೆ. ಇನ್ನುಳಿದ ಇತರ ಲೇಖನಗಳು ಕೂಡ ಸಿನಿಮಾ ಚಿತ್ರಕಥೆಗೆ ಪೂರಕವಾದ ಹಲವಾರು ಸೂತ್ರಗಳನ್ನು ನೀಡುವಲ್ಲಿ ಸಫಲವಾಗಿವೆ. ಸಹಜವೆಂಬಂತೆ ಯೋಗರಾಜ್ ಭಟ್ ಮತ್ತು ರಕ್ಷಿತ್ ಶೆಟ್ಟಿಯವರ ಲೇಖನಗಳು ಯುವ ಮನಸ್ಸುಗಳನ್ನು ಆಕರ್ಷಿಸುತ್ತವೆ. ಬಿ.ಎಸ್. ಲಿಂಗದೇವರು, ಬಿ.ಎಂ. ಗಿರಿರಾಜ್, ಪವನ್ ಕುಮಾರ್, ಕೆ.ಎಂ. ಚೈತನ್ಯ ಇನ್ನು ಮುಂತಾದವರ ಲವಲವಿಕೆಯ ಮಾತುಗಳು ಕೂಡ ಚಿತ್ರಕಥೆ ಬರೆಯುವವರಿಗೆ ಪಾಠಗಳಂತಿವೆ. ಸಿನಿಮಾವಲ್ಲದೆ ಧಾರಾವಾಹಿಗಳಿಗೂ ವರ್ಷಾನುಗಟ್ಟಲೆಯಿಂದ ಬರೆಯುತ್ತಿರುವ ಹಲವರ ಅಭಿಫ್ರಾಯಗಳು ಪುಸ್ತಕಕ್ಕೆ ಒಂದು ಪರಿಪೂರ್ಣತೆಯ ಚೌಕಟ್ಟನ್ನು ನೀಡಿವೆ.

ಮುನ್ನುಡಿಯಲ್ಲಿ ದುನಿಯಾ ಸೂರಿಯವರು ಚಿತ್ರಕಥೆಯ ಅಭ್ಯಾಸ ನೇರವಾಗಿ ಪ್ರಾಕ್ಟಿಕಲ್ ಆಗಿರುತ್ತದೆ. ಥಿಯರಿಗಳು ಕೆಲಸಕ್ಕೆ ಬರುವುದಿಲ್ಲ ಎನ್ನುವುದು ಸರಿಯೇ ಆದರೂ ಈ ಪುಸ್ತಕವು ಚಿತ್ರಕಥೆಯ ಅಕ್ಷರಗಳನ್ನು ಮತ್ತು ಕಾಗುಣಿತವನ್ನು ಕಲಿಸುವುದಂತೂ ನಿಜ. ಸೂರಿಯವರೇ ‘ಸೆಂಕೆಂಡ್ ಹಾಫ್’ನ ತಮ್ಮ ಲೇಖನದಲ್ಲಿ ಹೇಳಿರುವಂತೆ ಸಿನಿಮಾ ಅಂದರೆ ಚಂಚಲತೆ ಅಲ್ಲ, ಗಾಢವಾದ ಧ್ಯಾನ. ಇಡೀ ಸಿನಿಮಾವನ್ನು ಕಣ್ಮುಂದೆ ತಂದು ನಿಲ್ಲಿಸುವ ಚಿತ್ರಕತೆ ಒಂದು ಧ್ಯಾನದ ಸ್ಥಿತಿಯಲ್ಲಿ ಮಾತ್ರ ಹುಟ್ಟುತ್ತದೆ. ಈ ಪರಿಯ ಧ್ಯಾನವನ್ನು ಒಲಿಸಿಕೊಳ್ಳಲು ಈ ಪುಸ್ತಕದ ಅವಶ್ಯಕತೆಯಂತೂ ಖಂಡಿತ ಇದೆ.

ಇವೆಲ್ಲಾ ಕಾರಣಗಳಿಗೆ ಚಿತ್ರಕಥೆ ಬರೆಯಲು ತೊಡಗುವವರಿಗೆ ಸ್ಫೂರ್ತಿ ನೀಡುವ, ದಾರಿ ತೋರುವ ಈ ಪುಸ್ತಕವನ್ನು ಶಿಫಾರಸ್ಸು ಮಾಡುತ್ತ ನನ್ನ ಆತ್ಮೀಯ ಸಿನಿಪ್ರೇಮಿ ಗೆಳೆಯರಿಗೆ ಉಡುಗೊರೆಯಾಗಿಯೂ ನೀಡುತ್ತಿದ್ದೇನೆ.

 

ಈ ಪುಸ್ತಕವನ್ನು ಅಮೇಜಾನಿನಲ್ಲಿ ಕೊಳ್ಳಲು: https://amzn.to/3ExRYs3

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಜುನ V/s ಏಕಲವ್ಯ

ಅರ್ಜುನ V/s ಏಕಲವ್ಯ ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗ...