ಶುಕ್ರವಾರ, ಅಕ್ಟೋಬರ್ 7, 2011

ಕಳ್ಳನ ಮೆಟ್ಟು

ಕಳ್ಳನ ಮೆಟ್ಟು


ಅದೊಂದು ಮೋಡ ಮುಸುಕಿದ ಮುಂಜಾವು. ಪೂರ್ವದತ್ತ ಬೀಸುತ್ತಿದ್ದ ತಂಗಾಳಿ ತುಸು ಜೋರಾಗಿಯೇ ಇತ್ತು. ಎಂತಹವರನ್ನು ಬೇಕಾದರೂ ಹೆದರಿಸುತ್ತೇನೆ ಎಂದು ಕೊರೆಯುತ್ತಿತ್ತು. ಸುಮಾರು ಒಂದು ಕ್ವಿಂಟಾಲಿಗಿಂತ ಸ್ವಲ್ಪ ಕಡಿಮೆಯಿದ್ದ ನನ್ನ ಧಡೂತಿ ದೇಹವು ನಾನು ಏನನ್ನೂ ಲೆಕ್ಕಿಸುವುದಿಲ್ಲ ಎಂದು ಯೋಗ ಮಂದಿರದತ್ತ ಬಿರುಸಾಗಿಯೇ ಹೆಜ್ಜೆ ಹಾಕಿತು. ಸಮಯ ಅದಾಗಲೇ ಆರಾದರೂ ಅರೆಬರೆ ಎದ್ದಿದ ಅಮರಗೊಂಡದ ಬೀದಿಗಳಲ್ಲಿ ಚಳಿಗೆ ಕಾಪಿಯನ್ನೋ, ಟೀಯನ್ನೋ ಕುಡಿಯುವ ಮನಸ್ಸುಳವರು ನಿದ್ದೆ ಬಿಟ್ಟ ಕಣ್ಣುಗಳನ್ನು ಅಗಲಿಸಿಕೊಂಡು ಹಾಲಿನ ಪ್ಯಾಕೆಟ್ಟನ್ನೋ, ಪಾತ್ರೆಯನ್ನೋ ಹಿಡಿದು ಮನೆಗಳತ್ತ ತೆರಳುತ್ತಿದ್ದರು. ಇನ್ನೂ ಹಾಲನ್ನು ತರಬೇಕಿದ್ದವರು ಕಣ್ಣುಜ್ಜುತ್ತಾ ಲಗುಬಗೆಯಲ್ಲಿ ಅಂಗಡಿಗಳೆಡೆಗೆ ಧಾವಿಸುತ್ತಿದ್ದರು. ಹಾಲನ್ನು ಮನೆಮನೆಗೆ ಹಾಕುವವರು ಎಲ್ಲರಿಗಿಂತ ತುರ್ತಾಗಿ ಸಂಚರಿಸುತ್ತಿದ್ದರು. ಪತ್ರಿಕೆ ಹಂಚುವ ಹುಡುಗರಂತೂ ತುರಾತುರಿಯಲ್ಲಿ ಪತ್ರಿಕೆಗಳನ್ನು ತರಿಸುವವರ ಮನೆಗಳೆಡೆಗೆ ಎಸೆದು, ಎದ್ದೆವೋ ಬಿದ್ದೆವೋ ಅಂತಲೂ ನೋಡದೆ ಸೈಕಲ್ ಹತ್ತಿ ಯಾವುದೋ ತಿರುವಿನಲ್ಲಿ ಮರೆಯಾಗುತ್ತಿದ್ದರು. ಅರೆಕ್ಷಣದಲ್ಲಿ ಮತ್ತೊಂದು ತಿರುವಿನಲ್ಲಿ ಪ್ರತ್ಯಕ್ಷರಾಗಿರುತ್ತಿದ್ದರು. ರಾತ್ರಿಯೆಲ್ಲಾ ನಿದ್ದೆ ಮಾಡದವರೆಂತೆ ಕಾಣುತ್ತಿದ್ದ ಭಿಕ್ಷುಕರು ತಾವು ನಿಂತ ಮನೆಗಳೆದೆರು ಮನೆಯವರು ಎದ್ದಿರುವರೋ ಇಲ್ಲವೋ ಎಂಬ ಭಾವದಲ್ಲಿ, ಇನ್ನೆಲ್ಲಿ ಮುಂದೆ ಹೋಗು ಅನ್ನುತ್ತಾರೋ ಎನ್ನುವ ಆತಂಕದಲ್ಲಿ “ಅಮ್ಮಾ...ತಾಯಿ...ಏನಾದರು ಭಿಕ್ಷೆ ಹಾಕ್ರಮ್ಮ” ಎಂದು ಕೇಳುತ್ತಿದ್ದರು. ತರಕಾರಿ, ಹಣ್ಣು, ಹೂ ಮಾರುವವರು ತುಸು ಸಂಭ್ರಮದಲ್ಲೇ ವ್ಯಾಪಾರಕ್ಕೆ ಇಳಿದಿದ್ದರು. ತನಗಿಂತ ಮುಂಚೆಯೇ ಎಚ್ಚರವಾದ ಈ ಜಗತ್ತಿನ ಬಗ್ಗೆ ಸೂರ್ಯನಿಗೆ ನಾಚಿಕೆಯಾಗಿ ತನ್ನನ್ನೇ ನೆಚ್ಚಿರುವ ಜಗತ್ತಿಗೆ ಮತ್ತಷ್ಟು ಲವಲವಿಕೆ ತುಂಬುವ ಸಲುವಾಗಿ ನಿಧಾನವಾಗಿ ಬಾನಂಚಿನಲ್ಲಿ ತನ್ನ ಕಣ್ಣುಗಳನ್ನು ಮೋಡಗಳ ಮರೆಯಲ್ಲೇ ತೆರೆಯಲಾರಂಭಿಸಿದನು. ಎಲ್ಲವನ್ನೂ ಗಮನಿಸುತ್ತ, ಕಣ್ತುಂಬಿಕೊಳ್ಳುತ್ತಾ ಸುಮಾರು ಅರ್ಧ ಮೈಲಿಯಷ್ಟಿದ್ದ ಯೋಗ ಮಂದಿರವನ್ನು ನಾನು ತಲುಪವಷ್ಟರಾಗಲೇ ಅದು ಕೂಡ ಲವಲವಿಕೆಯಿಂದ ತುಂಬಿತ್ತು.

ನಾನು ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ ನಮ್ಮ ಶಾಲೆಗೆ ಹೊಂದಿಕೊಂಡಿದ್ದ ಈ ಯೋಗಮಂದಿರ ವಾಚನಾಲಯವಾಗಿತ್ತು. ಅದಕ್ಕೂ ಮುಂಚೆ ಶಾಲೆಗೇ ಸೇರಿದ್ದ ಆ ಕೊಠಡಿಯಲ್ಲಿ ತರಗತಿಗಳು ನಡೆಯುತ್ತಿದ್ದವಂತೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಸಂಸ್ಕೃತಿ ನಶಿಸುವ ಕಾಲ ಉದಯವಾಗುತ್ತಿದ್ದ ಆ ಸಮಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿ ಎರೆಡೆರಡು ಸೆಕ್ಷನ್ ಗಳು ಒಂದಾಗಿ ಅನಾಥವಾದ ಹಲವು ಕೊಠಡಿಗಳಲ್ಲಿ ಆ ಕೊಠಡಿಯೇ ಮೊದಲಾಯಿತು. ಹಾಳಾಗುವ ಮೊದಲೇ ಹಲವಾರು ವರ್ಷಗಳ ಕಾಲ ನಮ್ಮೂರಿನ ಕೆಲ ಯುವಕರು ಸ್ವಯಂ ಸೇವಕರಾಗಿ ಆ ಕೊಠಡಿಯಲ್ಲಿ ಉತ್ಸಾಹದಿಂದಲೇ ವಾಚನಲಯವನ್ನು ನಡೆಸಿದಾದರೂ, ಕಾಲ ಕಳೆದಂತೆ ತಮ್ಮ ಜೀವನದ ನಿರ್ವಹಣೆಗಾಗಿ ಹಲವು ಕಡೆ ಹರಿದು ಹೋದುದರಿಂದ, ಹೊಸಬರಾರು ಅದರ ಮೇಲ್ವಿಚಾರಣೆಗಾಗಿ ಬರದೆ ಹೋದುದರಿಂದ ವಾಚನಲಾಯಕ್ಕೆ ಬೀಗ ಬಿತ್ತು. ಸಮಯ ಕಳೆದಂತೆ ಮತ್ತಷ್ಟು ಶಿಥಿಲಾವಸ್ಥೆ ತಲುಪುವ ಮೊದಲೇ ಎಲ್ಲಿಂದಲ್ಲೋ ಬಂದ ನಮ್ಮ ಯೋಗ ಗುರುಗಳ ಕಣ್ಣಿಗೆ ಬಿದ್ದು, ಯೋಗಾಭ್ಯಾಸಕ್ಕೆ ಸರಿಯಾದ ಜಾಗವೆಂದು ಊರಿನ ಮುಖಂಡರ ಮತ್ತು ಮುಖ್ಯ ಶಿಕ್ಷಕರ ಸಹಕಾರದಿಂದ ಅಲ್ಲಿ ಮಾರುತಿ ಯೋಗಮಂದಿರವೆಂಬ ಹೆಸರಿನಲ್ಲಿ ಯೋಗಮಂದಿರವೊಂದು ತಲೆಯೆತ್ತಿತು.

ವಿದ್ಯಾರ್ಥಿಯಾಗಿ ಆ ಕೊಠಡಿಯಲ್ಲಿ ಕಲಿಯದಿದ್ದರೂ, ಅಲ್ಲಿ ಮೊದಲಿದ್ದ ವಾಚನಾಲಯ ಎಷ್ಟೋಬಾರಿ ನನ್ನ ಓದಿನ ಹಸಿವನ್ನು ತೀರಿಸುವುದರ ಮೂಲಕ ನನ್ನ ತಿಳುವಳಿಕೆಯನ್ನು ಹೆಚ್ಚಿಸಿತ್ತು. ಇದೀಗ ದಿನಾ ದಿನ ನನಗರಿವಿಲ್ಲದಯೇ ದೊಡ್ಡದಾದ ಹೊಟ್ಟೆಯನ್ನು ಸಣ್ಣದಾಗಿಸಲು ಯೋಗ ಮಾಡಲು ತೊಡಗಿಸಿಕೊಂಡಾಗ ಆ ಕೊಠಡಿಯೇ ನನ್ನ ದೇಹವನ್ನು ದಂಡಿಸುವ ಸ್ಥಳವಾದುದು ನನಗೆ ಬಹಳ ಪ್ರಿಯವಾಗಿತ್ತು.

ಸುತ್ತಲು ತಂತಿಬೇಲಿಯನ್ನು ಹೊಂದಿದ್ದ ಯೋಗ ಮಂದಿರದ ಒಳ ಹೋಗಬೇಕೆಂದರೆ ಚಪ್ಪಲಿಗಳನ್ನು ಹೊರಗೆ ಬಿಟ್ಟು ಮೂರು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು. ಒಳಗೆ ಹೋದವನೇ ಅದಾಗಲೇ ತುಂಬಿದ್ದ ಅಲ್ಲಿ, ನಗುತ್ತಾ ಸ್ವಲ್ಪ ಜಾಗ ಬಿಟ್ಟ ಶಾಂತಪ್ಪ ಮಾಸ್ತರರ ಪಕ್ಕದಲ್ಲೇ ಯೋಗಾಭ್ಯಾಸವನ್ನು ಶುರುಮಾಡಿದೆ. ಬರಬೇಕಾದವರೆಲ್ಲ ಬಂದಾಗಿತ್ತು. ಶಾಂತಪ್ಪ ಮಾಸ್ತರರು ನನಗೇನೂ ಗುರುಗಳಾಗಿರದಿದ್ದರೂ, ವೃತ್ತಿಯಲ್ಲಿ ಅಧ್ಯಾಪಕರಾಗಿದುದರಿಂದ ನಾವೆಲ್ಲರೂ “ಸರ್” ಎಂದೇ ಸಂಬೋಧಿಸುತ್ತಿದ್ದೆವು. “ಸ್ವಲ್ಪ ನಿಧಾನವಾಗಿ...ಇನ್ನೂ ಸ್ವಲ್ಪ ಬೆಂಡ್ ಮಾಡಿ... ಜೋರಾಗಿ ಉಸಿರು ತೆಗೆದುಕೊಳ್ಳಿ... ಈಗ ನಿಧಾನವಾಗಿ ಉಸಿರು ಬಿಡಿ...” ಎಂಬಂತಹ ಅತ್ತಿಂದಿತ್ತ ಓಡಾಡುತ್ತಿದ್ದ ಯೋಗ ಗುರುಗಳ ಮಾತುಗಳು ಮಂತ್ರದಂತೆ ಕೇಳಿಸುತ್ತಿತ್ತು. ನನಗೆ ಬಾಗಿಲ ಬಳಿಯೇ ಜಾಗ ಸಿಕ್ಕಿದುದರಿಂದ ಯೋಗ ಮಂದಿರದ ಮುಂದೆಯಿದ್ದ ರಸ್ತೆಯ ಕಡೆ ಆಗಾಗ ನೋಟ ಹರಿಸುವಂತೆ, ಅಲ್ಲಿನ ಚಟುವಟಿಕೆಗಳು ಪ್ರೇರೆಪಿಸುತ್ತಿದ್ದವು. ಈ ಸಮಯದಲ್ಲಿ ಯೋಗಮಂದಿರದ ಮೆಟ್ಟಿಲ ಬಳಿ ಒಬ್ಬ ಹುಡುಗ ಬಂದು ಮೊದಲನೇ ಮೆಟ್ಟಿಲಿನ ಮೇಲೆ ಕೂಳಿತುಕೊಂಡು ಒಳಗೆ ಇಣುಕತೊಡಗಿದ. ಆ ಹುಡುಗನನ್ನು ಹಿಂದೊಮ್ಮೆ ಅಲ್ಲಿಯೇ ನೋಡಿದ ನೆನಪಿದ್ದರೂ ಅವನ್ಯಾರೆಂದು ನನಗೆ ಗೊತ್ತಿರಲಿಲ್ಲ. ಬಹುಷಃ ಅವನಿಗೆ ಯೋಗದಲ್ಲಿ ಆಸಕ್ತಿಯಿತ್ತೆಂದು ಕಾಣುತ್ತದೆ, ಕತ್ತೆತ್ತಿ ಕತ್ತೆತ್ತಿ ಒಳಗೇ ಇಣುಕತೊಡಗಿದ. ಒಳಗೆ ಬರುವ ಧೈರ್ಯ ಮಾತ್ರ ಮಾಡಲಿಲ್ಲ.

“ಸಾರ್, ಗಮನವಿಟ್ಟು ಅಭ್ಯಾಸ ಮಾಡಿ” ಎಂಬ ಯೋಗ ಗುರುಗಳ ಮಾತು ನನಗೇ ಎಂದರಿತ ನಾನು ನನ್ನ ಗಮನವನ್ನು ಯೋಗದೆಡೆಗೆ ಹರಿಸಿದೆ. ಹೀಗೆಯೇ ಸ್ವಲ್ಪ ಹೊತ್ತು ಕಳೆದ ಮೇಲೆ, ಬಾಗಿಲ ಬಳಿ ಏನೋ ಚಲಿಸಿದಂತಾಗಿ ನನ್ನ ನೋಟ ಆ ಕಡೆ ಹರಿಯುವ ಸಮಯಕ್ಕೆ ಅಲ್ಲಿ ಅಷ್ಟೊತ್ತು ಕುಳಿತ್ತಿದ್ದ ಆ ಹುಡುಗ ಸರ್ರನ್ನೆ ಎದ್ದು ರಸ್ತೆಯ ಕಡೆ ಓಡಲು ಶುರುಮಾಡಿದ್ದ. ಇದ್ದೆಲ್ಲವನ್ನು ನನಗೆ ಪರಿವೆ ಇಲ್ಲದಂತೆ ಗಮನಿಸುತ್ತಿದ್ದ ಶಾಂತಪ್ಪ ಸರ್ ಭರ್ರನೆ ಎದ್ದು “ರೀ ಅವನು ಚಪ್ಪಲಿ ಹಾಕ್ಕೊಂಡು ಹೋಗ್ತಾ ಇದ್ದಾನೆ ಕಣ್ರೀ” ಅಂದವರೇ, ಯಾರ ಉತ್ತರಕ್ಕೂ ಕಾಯದೇ ನನ್ನ ಮೇಲಿಂದ ಹಾರಿ ಆ ಹುಡುಗನ ಹಿಂದೆ ಓಡ ತೊಡಗಿದರು. ಇವರ ಮಾತನ್ನು ಕೇಳಿದ ನಾವೆಲ್ಲಾ ಯೋಗಭ್ಯಾಸ ಬಿಟ್ಟು ಆಚೆ ಬರುವಷ್ಟರಲ್ಲಿ, ಶಾಂತಪ್ಪ ಸರ್ ಹಿಂದೆಯೇ ಮತ್ತಿಬ್ಬರು ಅಭ್ಯಾಸ ಮಾಡುತ್ತಿದ್ದ ಹುಡುಗರು ಓಡಲು ಶುರುಮಾಡಿದರು. ಹಿಂದೆ ಯಾರೋ ಮೂರು ಜನ ಓಡಿ ಬರುತ್ತಿದ್ದಾರೆ ಎಂದೋ ಅಥವಾ ಸಹಜ ವೇಗದಲ್ಲಿಯೋ ಆ ಹುಡುಗ ಮಿಂಚಿನಂತೆ ರಸ್ತೆಯ ತಿರುವಿನಲ್ಲಿ ಮರೆಯಾದ. ಅವನನ್ನು ಹಿಮ್ಮೆಟ್ಟಿದ್ದ ಮೂವರೂ ಆ ತಿರುವಿನಲ್ಲಿ ಮರೆಯಾದರು.

ಆಚೆ ಬಂದ ನಾವೆಲ್ಲರೂ ನಮ್ಮ ನಮ್ಮ ಚಪ್ಪಲಿಗಳನ್ನು ನೋಡಿಕೊಂಡು ಸಮಾಧಾನ ಪಟ್ಟುಕೊಂಡೆವು. ನಮ್ಮವೆಲ್ಲ ಮಿಕ್ಕಿ ಮತ್ತೂ ಮೂರು ಜತೆ ಚಪ್ಪಲಿ ಅಲ್ಲಿ ಉಳಿದವು. ಅದಾಗ ನಮ್ಮ ಯೋಗ ಗುರುಗಳು “ಇನ್ನೂ ಮೂರು ಜತೆ ಇವರದೇ ಇರಬೇಕು. ಹಿಂದೆ ಮುಂದೆ ನೋಡದೆ, ಇವರ್ಯಾಕೆ ಓಡಿದರೋ...!?” ಎಂದು ಹೇಳುತ್ತಾ “ಬನ್ನಿ ಬನ್ನಿ ನಾವೆಲ್ಲಾ ಅಭ್ಯಾಸ ಮುಂದುವರೆಸೋಣ” ಎಂದು ನಮ್ಮನ್ನೆಲ್ಲಾ ಒಳಗೆ ಕರೆದುಕೊಂಡು ಹೋದರು.

“ಎಲ್ಲರ ಚಪ್ಪಲಿಗಳು ಇಲ್ಲೇ ಇರುವಾಗ ಆ ಹುಡುಗನು ಹಾಕಿಕೊಂಡು ಹೋದ ಚಪ್ಪಲಿಗಳು ಯಾರವು?” ಎಂದು ನಮ್ಮನಮ್ಮಲೇ ಮಾತಾಡಿಕೊಳ್ಳುತ್ತಾ ಯೋಗಾಭ್ಯಾಸ ಮುಂದುವರೆಸಿದವು. ಸುಮಾರು ಅರ್ಧಗಂಟೆ ಕಳೆದಿರಬೇಕು, ನಾವೆಲ್ಲಾ ಶವಾಸನ ಹಾಕುವ ಹೊತ್ತಿಗೆ ಪೆಚ್ಚುಮೋರೆಯಿಂದ ಶಾಂತಪ್ಪ ಮಾಸ್ತರರು, ಅವರ ಜೊತೆ ಓಡಿ ಬಂದಿದ್ದ ಹುಡುಗರ ಜೊತೆ ಹಿಂತಿರುಗಿದರು. ಬಂದವರೇ ಬಾಗಿಲ ಬಳಿ ಇದ್ದ ಚಪ್ಪಲಿಗಳಲ್ಲಿ ಅವರದೂ ಇರುವುದನ್ನು ಖಾತ್ರಿಪಡಿಸಿಕೊಂಡು ಒಳಗೆ ಬಂದರು. ಅವರಲ್ಲಿ ಒಬ್ಬ ಹುಡುಗ ಮುಸುಮುಸು ನಗುತ್ತಿದ್ದ.

ನಾವೆಲ್ಲ ಕೇಳುವ ಮೊದಲೇ ನಿಟ್ಟುಸಿರು ಬಿಡುತ್ತಾ “ಆ ಹುಡುಗನ್ನ ಅವರ ಮನೆಯತ್ತಿರ ಹೋಗಿ ಹಿಡುದ್ವು. “ಅವನನ್ನು ಹಿಡಿದು ಯಾಕೋ ಓಡಿಬಂದೆ? ಯಾರ ಚಪ್ಪಲಿ ಕದ್ದುಕೊಂಡು ಬಂದೆ?” ಎಂದು ದಬಾಯಿಸಿದೆವು. ಅದಕ್ಕವನು, “ಸರ್, ನನ್ನ ಚಪ್ಪಲಿ ಹಾಕ್ಕೊಂಡು ನಾ ಬಂದೆ ಅಷ್ಟೆ. ಹಾಲಾಕಕೆ ಟೈಮಾಯ್ತು, ನಮ್ಮಮ್ಮ ಬೈಯ್ತಾಳೆ ಅಂತ ಓಡಿ ಬಂದೆ. ಬಿಡಿ ಸರ್” ಎಂದು ಜೋರು ಮಾಡಿದ. ಅಷ್ಟರಲ್ಲಿ ತಗಳಪ್ಪಾ ಮನೆಯೊಳಗಿದ್ದ ಅವರಮ್ಮ ಹೊರಗೆ ಬಂದು ಸ್ವಲ್ಪ ದೂರದಲ್ಲಿದ್ದ ನಮ್ಮನ್ನೆಲ್ಲಾ ನೋಡಿ “ಯಾರೋ ಇವರೆಲ್ಲಾ?” ಎಂದು ಆ ಹುಡುಗನೆಡೆಗೆ ಅರಚುತ್ತಾ ಬರತೊಡಗಿದಳು. ಆಕೆ ನಮ್ಮೆಡೆಗೆ ಬರುತ್ತಿದ್ದ ವೇಗವನ್ನು ನೋಡಿಯೇ ನಾವೆಲ್ಲ ಆ ಹುಡುಗನನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತೆವು. ಸದ್ಯ! ಆಯಮ್ಮ ನಮ್ಮನ್ನು ಅಟ್ಟಿಸಿಕೊಂಡು ಬಂದು ಏನನ್ನೂ ಕೇಳಲಿಲ್ಲ.” ಎಂದು ಒಂದೇ ಸಮನೆ ಹೇಳುತ್ತಲೇ ಕುಳಿತರು. ಮುಂದುವರೆಯುತ್ತಾ “ಅಷ್ಟಕ್ಕೂ ಅವನು ಅವನ ಚಪ್ಪಲಿಯನ್ನ ಮೆಟ್ಟಿಕೊಂಡು ಹೋದದ್ದಕ್ಕೆ ನಾವೆಲ್ಲಾ ಯಾಕೆ ದೆವ್ವ ಮೆಟ್ಟಿದಂಗೆ ಅವನ ಹಿಂದೆ ಓಡಿದೆವು?” ಎಂದು ಪರಿತಪಿಸತೊಡಗಿದರು.

“ಹೋಗ್ಲಿ ಬಿಡಿ ಸರ್, ಅದು ಅವನ ಚಪ್ಪಲಿ ಅಂತ ಮುಂಚೆಯೇ ನಿಮಗೇನು ಗೊತ್ತಿತ್ತೇ? ಸಮಾಧಾನ ಮಾಡ್ಕೋಳಿ” ಎಂದು ಯೋಗಗುರುಗಳು ಹೇಳಿದರೂ ಶಾಂತಪ್ಪ ಮಾಸ್ತರರಿಗೆ ಸಮಾಧಾನವಾದಂತೆ ಕಾಣಲಿಲ್ಲ. ಅಲ್ಲಿದ್ದವರೆಲ್ಲಾ ತಲೆಗೊಂದೊಂದು ಮಾತನ್ನು ಆಡುತ್ತಾ, ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಶಾಂತಪ್ಪ ಮಾಸ್ತರರು ಅದ್ಯಾಕೋ ಗರಬಡಿದವರಂತೆ ಕೂತುಬಿಟ್ಟರು. ಪಾಪ ಅವರಿಗೆ ಈ ಘಟನೆಯಿಂದ ಅದೆಷ್ಟು ಬೇಜಾರಾಗಿತ್ತೋ? ಅವರನ್ನು ಅವರ ಪಾಡಿಗೆ ಬಿಟ್ಟು ನಾನು ಶವಾಸನ ಹಾಕಿದೆ. ನನ್ನ ಮನದಲ್ಲಿ “ಈ ಜಗತ್ತಿನಲ್ಲಿ ನಮ್ಮ ಚಪ್ಪಲಿಗಳನ್ನು ನಾವು ಹಾಕಿಕೊಳ್ಳುವುದೂ ಕೂಡಾ ಎಷ್ಟು ಕಷ್ಟ” ಎಂಬ ಮಾತು ಅದೇಕೋ ನನ್ನ ಉಸಿರಿನೊಂದಿಗೆ ಪಯಣಿಸತೊಡಗಿತು.

                                                                                                 - ಗುಬ್ಬಚ್ಚಿ ಸತೀಶ್.

10 ಕಾಮೆಂಟ್‌ಗಳು:

  1. ನಕ್ಕು ನಕ್ಕು ಹೊಟ್ಟೆ ಹುಣಾಯ್ತು ಗುರುಗಳೇ.... ಮಸ್ತಾಗಿದೆ... ಕಥೆ...

    ಹಿಂದೂ ಮುಂದು ನೋಡದೆ ನಮ್ಮದಲ್ಲದ ವಸ್ತುವುಗೆ ನಾವು ಪರದಾಡುತ್ತೇವೆ...!

    ಪ್ರತ್ಯುತ್ತರಅಳಿಸಿ
  2. ಸೊಗಸಾಗಿದೆ. ಕಳ್ಳನ ಮೆಟ್ಟು ಎನ್ನುವ ತಲೆಬರಹವೇ ಓಡುವವರೆಲ್ಲಾ ಕಳ್ಳರೇ ಇರಬೇಕೆಂಬ ನಮ್ಮೆಲ್ಲರಲ್ಲೂ ಮನೆಮಾಡಿದ ಪೋಲೀಸ್ ಬುದ್ಧಿಗೆ ಕನ್ನಡಿ ಹಿಡಿದಂತಿದೆ. ಮನರಂಜಿಸಿತು.

    ಪ್ರತ್ಯುತ್ತರಅಳಿಸಿ
  3. “ಈ ಜಗತ್ತಿನಲ್ಲಿ ನಮ್ಮ ಚಪ್ಪಲಿಗಳನ್ನು ನಾವು ಹಾಕಿಕೊಳ್ಳುವುದೂ ಕೂಡಾ ಎಷ್ಟು ಕಷ್ಟ” ಎಂಥಾ ಅರ್ಥಪೂರ್ಣ ಮಾತು. ಉತ್ತಮ ನಿರೂಪಣೆ ಸತೀಶ್ ಸರ್, ನಗು ತರಿಸುವುದರ ಜೊತೆಗೆ ಚಿ೦ತನೆಗೂ ಪ್ರೆರೇಪಿಸುವ೦ತಿದೆ, ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ನೀರು (ಪುಟ್ಟ ಕತೆ)

  ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹ...