ಬುಧವಾರ, ಮಾರ್ಚ್ 16, 2022

ಅಪ್ಪು ಈಗ ಡಾ. ಅಪ್ಪು ಡಾ. ಪುನೀತ್ ರಾಜ್ ಕುಮಾರ್

ಸ್ನೇಹಿತರೇ, ನಮ್ಮೆಲ್ಲರ ಪ್ರೀತಿಯ ನಟ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದೆ. ಪುನೀತ್‌ ಅವರ ಸಾಮಾಜಿಕ ಸೇವಾ ಕಾರ್ಯ ಹಾಗೂ ಚಿತ್ರರಂಗದಲ್ಲಿನ ಸಾಧನೆ ಪರಿಗಣಿಸಿ ಮೈಸೂರು ವಿಶ್ವವಿದ್ಯಾಲಯ ಮರಣೋತ್ತರವಾಗಿ ಗೌರವ ಡಾಕ್ಟರ್‌ ಪ್ರದಾನ ಮಾಡಲಿದೆ ಎಂದು ಕುಲಪತಿಗಳಾದ ಪ್ರೊ. ಬಿ. ಹೇಮಂತ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದು ಪುನೀತ್‌ ಅವರ ಜನ್ಮದಿನಕ್ಕೆ ವಿವಿ ನೀಡುತ್ತಿರುವ ಪುಟ್ಟ ಉಡುಗೊರೆ ಎಂದಿದ್ದಾರೆ. ಪುನೀತ್‌ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಘಟಿಕೋತ್ಸವಕ್ಕೆ ಬರಲು ಒಪ್ಪಿದ್ದಾರೆ ಎಂದು ಕೂಡ ತಿಳಿಸಿದ್ದಾರೆ. ಡಾ. ರಾಜ್‌ಕುಮಾರ್‌ ಅವರಿಗೆ 1976ರಲ್ಲಿ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗಿತ್ತು.


ಈ ಗೌರವದಿಂದ ಎಲ್ಲರ ಪ್ರೀತಿಯ ಅಪ್ಪು, ಡಾ. ಅಪ್ಪು... ಡಾ. ಪುನೀತ್‌ ರಾಜ್‌ ಕುಮಾರ್‌ ಆಗಲಿದ್ದಾರೆ...
***
ಈ ಮಾಹಿತಿಯ ನನ್ನ ಯೂಟ್ಯೂಬ್‌ ಲಿಂಕ್‌ :
ಅಪ್ಪು ಈಗ ಡಾ. ಅಪ್ಪು ಡಾ|| ಪುನೀತ್ ರಾಜ್‌ಕುಮಾರ್
https://youtu.be/1etPM3c3ftA


ಭಾನುವಾರ, ಮಾರ್ಚ್ 13, 2022

ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ

 ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ

ವಿಜಯನಗರ ಸಾಮ್ರಾಜ್ಯದ ಹಿರಿಮೆ ಗರಿಮೆಗಳನ್ನು ಕಣ್ಣು ಕಂಡರಿಯದು, ಕಿವಿ ಕೇಳರಿಯದು ಎಂದು ಬೇರೆ ಬೇರೆ ದೇಶಗಳಿಗೆ ಸೇರಿದ ವಿದೇಶಿ ಪ್ರವಾಸಿಗಳು ಬೆರಗುಗೊಂಡು ತಮಗಾದ ಬೆರಗನ್ನು ವರದಿ ಮಾಡಿದರೆ, ಬ್ರಿಟಿಷ್‌ ಆಡಳಿತದಲ್ಲಿ ಬಳ್ಳಾರಿಯ ಜಿಲ್ಲಾಧಿಕಾರಿಯಾಗಿದ್ದ ರಾಬರ್ಟ್‌ ಸೆವೆಲ್‌ ತನ್ನ ಮೇಲಧಿಕಾರಿಗಳಿಗೆ ವಿಜಯನಗರ ಸಾಮ್ರಾಜ್ಯ ಕುರಿತು ತಿಳಿಸಲು “A Forgotten Empire” ಕೃತಿಯನ್ನು ರಚಿಸಿದರು. ಈ ಕೃತಿಯೇ ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ... 1900 ರಲ್ಲಿ ಈ ಕೃತಿ ಮೊದಲಿಗೆ ಪ್ರಕಟಗೊಂಡಿತು. ಈ ಕೃತಿ ವಿಜಯನಗರ ಸಾಮ್ರಾಜ್ಯ ಕುರಿತ ಅಮೂಲ್ಯ ಆಖರಗ್ರಂಥವೂ ಹೌದು. ಇದು ವಿಜಯನಗರದ ಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳ ಬಗೆಗೆ ಜಗತ್ತಿನ ಗಮನ ಸೆಳೆದ ಪ್ರಥಮಗ್ರಂಥ!

ಸ್ವತಃ ಸಾಹಿತಿಯಲ್ಲದ್ದಿದ್ದರೂ ರಾಬರ್ಟ್‌ ಸೆವೆಲ್‌ ಇತಿಹಾಸವನ್ನು ದಾಖಲಿಸಲು “A Forgotten Empire” ಕೃತಿಯನ್ನು ರಚಿಸಿದರೆ, ಇದನ್ನು ಕನ್ನಡಕ್ಕೆ ಸದಾನಂದ ಕನವಳ್ಳಿ ಅವರು ಯಥಾವತ್ತಾಗಿ “ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ” ಎಂದು ಅನುವಾದಿಸಿದ್ದಾರೆ. ಈ ಕೃತಿಯ ಮೌಲಿಕತೆಯನ್ನು ಮನಗಂಡು ಹಂಪಿಯ ಕನ್ನಡ ವಿಶ್ವವಿದ್ಯಾಲಯ ತನ್ನ ಪ್ರಥಮ ನುಡಿಹಬ್ಬದಂದು ಈ ಕೃತಿಯನ್ನು 1992ರಲ್ಲಿ ಪ್ರಕಟಿಸಿದ್ದರೆ, ಆನಂತರ ಇದೊಂದು ಅಧಿಕೃತ, ಬೇಡಿಕೆಯುಳ್ಳ ಕೃತಿಯೆಂದು ಮನಗಂಡ ʼಅಂಕಿತ ಪುಸ್ತಕʼ ಮರುಮುದ್ರಿಸಿದೆ.



ಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ವರ್ಣಿಸುತ್ತದೆ. ಈ ಸಾಮ್ರಾಜ್ಯದ ಆರಂಭ – ವೈಭವ ಕುರಿತಂತೇ ಅನೇಕ ದಂತ ಕತೆಗಳಿವೆ. ಕೃಷ್ಣದೇವರಾಯನ ಕಾಲಕ್ಕೆ ಉತ್ತುಂಗಕ್ಕೇರಿದ್ದ ವಿಜಯನಗರ ಸಾಮ್ರಾಜ್ಯ ವೈಭವದ ನಂತರ ಅವನತಿಯ ಹಾದಿ ಹಿಡಿಯಿತು. ವೈಭವದಲ್ಲಿರುವಾಗಲೇ ಒಳಜಗಳ – ಆಂತರಿಕ ಕಿತ್ತಾಟ ಮತ್ತು ತಾಳೀಕೋಟೆಯ ಯುದ್ಧ ವಿಜಯನಗರವನ್ನು ಅಧಃಪಾತಾಳಕ್ಕಿಳಿಸಿತು. ನಂತರ ನಡೆದ ರಾಜ್ಯದ ಲೂಟಿ ಎಲ್ಲ ವೈಭವವನ್ನೂ ನೆಲಸಮಗೊಳಿಸಿತು. ಈ ಕೃತಿ ವಿಜಯನಗರದ ಏಳು- ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಠ ಅಧ್ಯಯನಕ್ಕೆ ಮಾದರಿಯಾಗಿ ಕೂಡ ನಿಲ್ಲುತ್ತದೆ.

ಈ ಕೃತಿಯಲ್ಲಿ ಪೀಠಿಕೆಯನ್ನೊಳಗೊಂಡು ಹದಿನೇಳು ಅಧ್ಯಾಯಗಳಿವೆ. ಪುಸ್ತಕದ ಕೊನೆಯಲ್ಲಿ ಅನುಬಂಧಗಳನ್ನು ನೀಡಲಾಗಿದೆ. ವಿಜಯನಗರ ಸಾಮ್ರಾಜ್ಯದ ಮೂಲ, ಸಾಮ್ರಾಜ್ಯದ ಪ್ರಥಮ ರಾಜರು, ಸಾಮ್ರಾಜ್ಯದ ಬೆಳವಣಿಗೆ, ಒಂದನೇಯ ದೇವರಾಯ, ಎರಡನೆಯ ದೇವರಾಯ, ಎರಡನೆಯ ದೇವರಾಯನ ಆಳ್ವಿಕೆಯಲ್ಲಿ ವಿಜಯನಗರ ನಗರ, ಪ್ರಥಮ ರಾಜವಂಶದ ಮುಕ್ತಾಯ, ಎರಡನೆಯ ರಾಜವಂಶದ ಪ್ರಥಮ ರಾಜರು, ಕೃಷ್ಣದೇವರಾಯನ ಆಳ್ವಿಕೆ, ರಾಯಚೂರ ದಾಳಿ ಮತ್ತು ಯುದ್ಧ ಮತ್ತು ಕೃಷ್ಣನ ಆಳ್ವಿಕೆಯ ಕೊನೆ, ಕೃಷ್ಣದೇವರಾಯನ ಕಟ್ಟಡಗಳು, ನಿರ್ಮಾಣಗಳು ಮತ್ತು ಶಾಸನಗಳು, ಅಚ್ಯುತರಾಯನ ಆಳ್ವಿಕೆ, ಅಂತ್ಯದ ಆದಿ, ವಿಜಯನಗರದ ವಿನಾಶ, ಮೂರನೆಯ ರಾಜವಂಶ, ಬ್ಯಾರಡಸ್‌ನ ಕಥಾನಕ, ಪ್ಯಾಸ್‌ ಮತ್ತು ನೂನೀಜ್‌ರ ದಿನಚರಿಗಳು, ಡೊಮಿಂಗೊಸ್‌ ಪ್ಯಾಸ್‌ ನ ಕಥನ, ಫರ್ನಾಒ ನೂನಿಜ್‌ ನ ದಿನಚರಿ ಯ ಬಗ್ಗೆ ನಾವು ತಿಳಿದುಕೊಳ್ಳಬಹುದಾಗಿದೆ.

ಒಟ್ಟು 448 ಪುಟಗಳ ಈ ಅಮೂಲ್ಯ ಪುಸ್ತಕದ ಮೌಲ್ಯ ರೂ. 450/- 

ಈ ಪುಸ್ತಕವನ್ನು ಗೋಮಿನಿ ಪ್ರಕಾಶನದ ಆನ್‌ ಲೈನ್‌ ಬುಕ್‌ ಶಾಪ್‌ ನ ಲಿಂಕಿನ ಮೂಲಕ ಕೊಳ್ಳಬಹುದಾಗಿದೆ... 

https://www.gominiprakashana.com/product/3169543/-10-off/

ಈ ಪುಸ್ತಕ ಕುರಿತು ನಾನು ಮಾಡಿರುವ ವಿಡಿಯೋವನ್ನು  ಯೂಟ್ಯೂಬಿನಲ್ಲಿ ವೀಕ್ಷಿಸಲು ಕೆಳಗಿನ ಲಿಂಕ್‌ ಉಪಯೋಗಿಸಿ,,,

https://www.youtube.com/watch?v=ASF4SD50QQQ

ಈ ಪೋಸ್ಟ್‌ ಕುರಿತು ತಪ್ಪದೇ ಕಾಮೆಂಟ್‌ ಮಾಡಿ, ಧನ್ಯವಾದಗಳು.

***

ಶುಕ್ರವಾರ, ನವೆಂಬರ್ 15, 2019

ಕನ್ನಡದ ಮೇಲಿನ ಅನನ್ಯ ಪ್ರೀತಿಯ ಜೊತೆಗೆ


(ವಿಶೇಷ ಸೂಚನೆ: ಈ ಪೋಸ್ಟನ್ನು ಪೂರ್ತಿ ಓದಿ, ನಿಮ್ಮ ಅನಿಸಿಕೆ ಕಾಮೆಂಟಿಸಿ. ಇದು ನಿಮಗೆ ಪಾಠವಾದರೂ ಆಗಬಹುದು! ಯಾರಿಗೊತ್ತು?)

ಕನ್ನಡದ ಮೇಲಿನ ಅನನ್ಯ ಪ್ರೀತಿಯ ಜೊತೆಗೆ ನಾನು ಓದಿದ್ದು ಸಂಸ್ಕೃತ ಸಾಹಿತ್ಯ ಮತ್ತು ಇಂಗ್ಲೀಷ್ ಸಾಹಿತ್ಯ. ಪದವಿಯವರೆಗೆ ಸಂಸ್ಕೃತವನ್ನು ಮೊದಲ ಭಾಷೆಯಾಗಿ ಕಲಿತವನಿಗೆ ಅದರ ಸಾಹಿತ್ಯ ಇವತ್ತಿಗೂ ಕಾಡುತ್ತಿದೆ. ಆ ನಂತರ ಸಾಹಿತ್ಯದ ಮೇಲಿನ ಪ್ರೀತಿಯಿಂದ ಕನ್ನಡ ಸಾಹಿತ್ಯವನ್ನು ಹಾಗೇ ಓದಿಕೊಳ್ಳಬಹುದು ಎಂದು ಭಾವಿಸಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಇದರಿಂದ ಕೆಲಸವೂ ಸಿಗಬಹುದು ಎಂಬ ಪುಟ್ಟ ಆಸೆಯೂ ಇತ್ತು. ಆದರೆ, ಆಗಾಗ ಕನ್ನಡ ಸಾಹಿತ್ಯವನ್ನು ಓದುವುದನ್ನು ಬಿಡಲಿಲ್ಲ. ಬರೆಯಲು ಶುರುಮಾಡಿದ ಮೇಲೆ ಕತೆಗಳನ್ನು ಅರಿಯಲು ಬಹಳಷ್ಟು ಕತೆಗಳನ್ನು ಓದಿದೆ. ಆದರೂ ಬರೆಯಲು ಸಾಕಷ್ಟು ಕಷ್ಟವಾಗುತ್ತಿತ್ತು. ಆಗ ನಾನು ಕಂಡುಕೊಂಡ ಉಪಾಯವೇನೆಂದರೆ ಇಂಗ್ಲೀಷ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸುವುದು. ಇದುವರೆವಿಗೂ ಕೆಲವು ಕತೆಗಳನ್ನು ಅನುವಾದಿಸಿ ಅವು ಪ್ರಕಟಗೊಂಡಿವೆ. ಮೊತ್ತ ಮೊದಲ ಅನುವಾದದ ಕತೆ ಪ್ರಕಟವಾದದ್ದು ಉದಯವಾಣಿಯಲ್ಲಿ. ಈ ವಿಷಯ ನನಗೆ ಮೊದಲು ಗೊತ್ತಾದ್ದದ್ದು ಮೂರು ತಿಂಗಳ ನಂತರ! ಅದನ್ನು ಮೊದಲು ನನಗೆ ತಿಳಿಸಿದ್ದು ಉದಯ್ ಇಟಗಿ ಸರ್. ಅವರು ಅಂದು ಮಧ್ಯರಾತ್ರಿ (ಆಗ ಫೇಸ್ ಬುಕ್ ಹೊಸದು) ಫೇಸ್ ಬುಕ್ ನೋಡುತ್ತಿದ್ದಾಗ ಚಾಟ್ ನಲ್ಲಿ ವಿಷಯ ತಿಳಿಸಿದರು. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ.
ಆನಂತರ ನಾನೇ ಒಂದಷ್ಟು ಸ್ವಂತ ಕತೆಗಳನ್ನು ಬರೆದೆ, 'ಉಘೇ ಉಘೇ' ಸಂಕಲನವನ್ನೂ ಪ್ರಕಟಿಸಿದೆ. ಕೆಲವರ ಪ್ರೋತ್ಸಾಹವೂ ಸಿಕ್ಕಿತು. ಈ ಕುರಿತು ತದನಂತರ ಬರೆಯುವೆ. ಆನಂತರ ಅದಾಗಲೇ ಆತ್ಮೀಯರಾಗಿದ್ದ ಶಿವು ಕೆ. ಅವರ 'ವೆಂಡರ್ ಕಣ್ಣು' ಪ್ರಬಂಧಗಳನ್ನು ಇಂಗ್ಲೀಷಿಗೆ ಅನುವಾದಿಸಿ ಅದನ್ನು 'Boys Of The Dawn' ಎಂದು ಸಂಕಲಿಸಿ ಪ್ರಕಟಿಸಿದೆ. ಈ ಪುಸ್ತಕವು ನಮ್ಮ ವಲಯದಲ್ಲಿ ಹಲವರ ಮೆಚ್ಚುಗೆಗೆ ಪ್ರಾಪ್ತವಾಯಿತು.
ಆದರೆ, ಇರಲಿ ನಿಮ್ಮಲ್ಲಿ ಹೇಳಿಯೇ ಬಿಡುವೆ: ಈ 'ಸಾಹಿತ್ಯ-ಪ್ರಶಸ್ತಿ-ರಾಜಕಾರಣ' ನನ್ನಲ್ಲಿದ್ದ ಹುಮ್ಮಸ್ಸನ್ನು ನುಂಗಿ ನೀರು ಕುಡಿದು ಬಿಟ್ಟಿತು. ಅದ್ಯಾಕೋ ಗೊತ್ತಿಲ್ಲ ಈ ಎರಡೂ ಪುಸ್ತಕಗಳಿಗೆ ಬರಬೇಕಿದ್ದ ಪ್ರಶಸ್ತಿ ಇನ್ನೇನು ಬಂತು ಅನ್ನುವಾಗಲೇ ಬರಲಿಲ್ಲ. ಆನಂತರ ದಿನೇ ದಿನೇ ನನ್ನ ಆಸಕ್ತಿ (ಯಾಕೆಂದರೆ ಪ್ರಶಸ್ತಿ, ಬಹುಮಾನಗಳನ್ನು ನಾನು ಕೆಟಲಿಸ್ಟ್ ಅನ್ನುತ್ತೇನೆ) ಸಹಜವಾಗಿ ಕುಗ್ಗಿತು. ಇತ್ತೀಚೆಗೆ ಕಾರಣಗಳೂ ತಿಳಿದವು. ಹೋಗಲಿಬಿಡಿ ಎನ್ನಲು ಕನ್ನಡದಲ್ಲೇನು ಸಾವಿರಾರು ಪ್ರತಿಗಳು ಪುಸ್ತಕಗಳು ಮಾರಾಟವಾಗುವುದಿಲ್ಲ. ಪ್ರಶಸ್ತಿ, ಪುರಸ್ಕಾರಗಳು ದೊರೆತರೆ ಒಂದೈದು ಪ್ರತಿಗಳು ಹೆಚ್ಚು ಹೋಗಬಹುದು ಅಷ್ಟೆ. ಆದರೆ, ನಗದು ಬಹುಮಾನ ದೊರೆತರೆ ಆ ಹಣದಿಂದ ಮತ್ತೊಂದು ಪುಸ್ತಕವನ್ನು ಪ್ರಕಟಿಸಬಹುದು ಎಂಬುದು ನನ್ನ ಜಿಜ್ಞಾಸೆಯಷ್ಟೆ.
ಒಟ್ಟಿನಲ್ಲಿ ಖುಷಿಗಾಗಿ ಬರವಣಿಗೆ ಆರಂಭಿಸಿದವನು ಒಬ್ಬ ಸಾಹಿತಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಯ ಬಗ್ಗೆಯೂ ಬಹಳ ಬೇಗ ಅರಿತಿದ್ದೇನೆ. ಆ ನಿಟ್ಟಿನಲ್ಲಿ ನಾನೇನೇ ಬರೆದರು 'ಸ್ನೇಹ-ಪ್ರೀತಿ-ಜೀವನ' ವಸ್ತು ಬಹಳವಾಗಿ ಇರುತ್ತದೆ. ನನ್ನ ಪುಸ್ತಕಗಳಲ್ಲಿ ನನ್ನ ಬಯೋಡೇಟಾ ಪುಟದಲ್ಲಿ 'ವೀರಶೈವ ಬ್ಯಾಂಕ್ ಉದ್ಯೋಗಿ' ಎಂಬುದೇ ನನ್ನ ಪುಸ್ತಕಗಳಿಗೆ ಪ್ರಶಸ್ತಿ ಬಾರದಿರಲು ಕಾರಣವೆಂದು ತಿಳಿದಾಗ ಮಾತ್ರ ನಗಬೇಕೋ, ಅಳಬೇಕೋ ಎಂದು ಬಹಳ ನೊಂದಿದ್ದೇನೆ. ನನಗೆ ಬುದ್ಧಿ ಬಂತು ಎಂದ ಕ್ಷಣದಿಂದ ನಾನು 'ವಿಶ್ವ ಮಾನವ!'. ಇವತ್ತಿಗೂ ಹಾಗೇ ಬದುಕುತ್ತಿದ್ದೇನೆ. ಮುಂದೆಯೂ... ಇಷ್ಟು ವರ್ಷಗಳಲ್ಲಿ ಜಗತ್ತು ಬಹಳ ಅರ್ಥವಾಗಿಬಿಟ್ಟಿದೆ. ಒಂದಾನೊಂದು ಕಾಲದಲ್ಲಿ ಬಹಳ ಗಂಭೀರವಾಗಿರಬೇಕೆಂದುಕೊಂಡವನು ಅದರಲ್ಲಿ ಅರ್ಥವೂ ಇಲ್ಲ, ಜೀವನದ ಸಾರವೂ ಇಲ್ಲ ಎಂದು ನಾನು ನಾನಾಗೇ ಇದ್ದುಬಿಟ್ಟಿದ್ದೇನೆ. ಇಷ್ಟೆಲ್ಲಾ ಹೇಳಲು ಮೂಲ ಕಾರಣ ಮನಸ್ಸಿನ ಮೂಲೆಯಲ್ಲಿರುವ ಯಾವುದೋ ನೋವಿರಬಹುದು. ಅದು ಗೊತ್ತಿಲ್ಲ. ಫೇಸ್ ಬುಕ್ಕಿನಲ್ಲಿ ಇಷ್ಟೆಲ್ಲಾ ಇದೇ ಮೊದಲ ಬಾರಿಗೆ ನಾನು ಬರೆಯುತ್ತಿರುವುದು. ಮೂಲತಃ ಬ್ಲಾಗರ್ ಆಗಿದ್ದ ನನಗೆ ಇಷ್ಟು ಬರೆಯಲು ಕಷ್ಟವೇನು ಇರದು. ಇನ್ಮುಂದೆ ಬರೆಯಲೇ ಬೇಕಿದೆ...

ನಾನು ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಮೊದಲ ಪುಸ್ತಕ ಕೊಂಡು ಓದಲು...
https://imojo.in/2mm893c

ಭಾನುವಾರ, ಡಿಸೆಂಬರ್ 20, 2015

ನವೀನ್ ಮಧುಗಿರಿಯವರ ‘ನವಿಗವನ’ : ಆಯುವ ಕವಿ ನವೀನ್.


ರಸ್ತೆ ಬದಿಯಲ್ಲಿ ಹಾಡಿ
ಅನ್ನ ಉಣ್ಣುವ
ಟೋನಿ
ಪ್ರತೀದಿನ ತನ್ನ ಕರುಳು
ಹಿಂಡುವಷ್ಟು ಬಾರಿ
ಗಿಟಾರಿನ
ತಂತಿ ಮೀಟುವನು
        *
ರಸ್ತೆ ಬದಿಯಲ್ಲಿ
ತರಕಾರಿ ಮಾರಲು
ಬಂದವನು
ತನ್ನಸಿವ
ತಕ್ಕಡಿಯಲ್ಲಿ ತೂಗಿದ
        *
ತುಂಬಾ ಹೊತ್ತಿದ್ದರೆ
ವಾಸನೆ ಬರುವುದೆಂದು
ಅತ್ತರನ್ನ ಬಳಿದರು
ಬದುಕಿಡೀ
ಮೋರಿ ಬಳಿದೆ ಬದುಕಿದವನು
ಶವವಾಗಿ ಮಲಗಿದ್ದ
        *
ಬಣ್ಣ ಮಾಸಿದ
ಗೋಡೆಯ ತುಂಬಾ
ಬಡತನದ ಚಿತ್ರ
        *
ಅಕ್ಷರದಿಂದ ದೇಶವನ್ನು
ಬದಲಿಸಬಹುದು!
ನಿಜಾ,
ಆದರೆ ಹಸಿವಿಗೆ
ಅನ್ನವೇ ಬೇಕು.
        *
ರೈತ
ದೇಶದ ಬೆನ್ನೆಲುಬು
ಬಡತನ
ರೈತನ ನೆರಳು
        *
ನಮ್ಮ ಮನೆಗೆ
ಬಾಗಿಲಿಡುತ್ತೇವೆ
ಹಕ್ಕಿಗಳ ಮನೆ ಕಿತ್ತು
        *
ಊರ ತುಂಬಾ
ಬೆದೆಗೆ ಬಂದ ನಾಯಿಗಳೆ,
ಉಚ್ಚೋ... ಎಂದೋಡಿಸಲು
ಎಳೆಯ ಹೆಣ್ಣು ಕೂಸಿನ್ನು
ಮಾತು ಕಲಿತಿಲ್ಲ
        *
ಬಳೆಗಳ ಸದಿಲ್ಲದೇ
ಇಲ್ಲಿ
ಏನೂ ಆಗುವುದಿಲ್ಲ
ಎರಡು ರೀತಿಯ ಹಸಿವಿನಲ್ಲೂ,
ಅವುಗಳ ಮಹತ್ವ ದೊಡ್ಡದು.
        *
        ಈ ಮೇಲಿನ ಹನಿಗವಿತೆಗಳನ್ನು ಹತ್ತನೇ ತರಗತಿಗೆ ವಿದ್ಯಾಭ್ಯಾಸವನ್ನು ಬಿಟ್ಟ ಯುವಕನೊಬ್ಬ ಬರೆದಿದ್ದಾನೆಂದರೆ ನಂಬಲೇಬೇಕು. ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ವೀರಾಪುರ ಗ್ರಾಮದ ರಘುನಂದನ್ ವಿ.ಆರ್. ಎಂಬ ಯುವಕ ನವೀನ್ ಮಧುಗಿರಿ ಎಂಬ ಕಾವ್ಯನಾಮದಲ್ಲಿ ತಮ್ಮ ಮೊದಲ ಕೃತಿ ನವಿಗವನ ಎಂಬ ಹನಿ - ಹನಿಗವನಸಂಕಲನದಲ್ಲಿ ಈ ಮೇಲಿನ ಹನಿಗವಿತೆಗಳ ಜೊತೆಗೆ ಮತ್ತಷ್ಟು ಪ್ರಬುದ್ಧ ಹನಿಗವಿತೆಗಳನ್ನು ಪ್ರಕಟಿಸಿರುವುದನ್ನು ಓದಿದರೆ ಈ ಯುವ ಕವಿಯ ಬಗ್ಗೆ ಅತೀವ ಹೆಮ್ಮೆಯಾಗುತ್ತದೆ. ಈಗಾಗಲೇ ತಮ್ಮ ಕಥೆ, ಕವಿತೆ, ಕಿರುಕಥೆ (ನ್ಯಾನೋ ಕಥೆ), ಶಿಶುಗೀತೆ ಮತ್ತು ಹಲವು ಲೇಖನಗಳನ್ನು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಿಸುವುದರ ಮೂಲಕ ಭರವಸೆ ಮೂಡಿಸಿದ್ದಾರೆ ಯುವ ಸಾಹಿತಿ ನವೀನ್ ಮಧುಗಿರಿ. ಇವರ ಈ ಮೊದಲ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದ ೨೦೧೩ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಣೆಯ ಪ್ರೋತ್ಸಾಹಧನದಿಂದ ಪ್ರಕಟನೆಗೊಂಡಿದೆ. ಈ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನದಿಂದ ಪ್ರಕಟಿಸಲು ತಮ್ಮದೇ ನವಿ ಪುಸ್ತಕ ಎಂಬ ಪ್ರಕಾಶನವನ್ನೂ ನವೀನ್ ಆರಂಭಿಸಿದ್ದರೆ. ಈ ಸಂಕಲನಕ್ಕೆ ಕವಿಯೂ, ಚಿತ್ರಸಾಹಿತಿಯೂ ಆಗಿರುವ ಗುರುನಾಥ್ ಬೋರಗಿಯವರ ಸುಂದರ ಮುಖಪುಟವೂ ಇದ್ದು, ಜೊತೆಗೆ ಅಲ್ಲಲ್ಲಿ ಕವಿತೆಗಳಿಗೆ ಪೂರಕವಾಗಿರುವ ರೇಖಾಚಿತ್ರಗಳಿವೆ. ಮಧುಗಿರಿ ತಾಲ್ಲೂಕಿನವರೇ ಆದ ಹಿರಿಯ ಸಾಹಿತಿ ಮ.ಲ.ನ. ಮೂರ್ತಿಯವರ ಮುನ್ನುಡಿ ಈ ಸಂಕಲನಕ್ಕಿದೆ. ಸಗಣಿ, ಗಂಜಳ, ಗೊಬ್ಬರದ ನಡುವೆ ಬದುಕನ್ನು ಕಟ್ಟಿಕೊಳ್ಳುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆಯಾದ ಯುವ ಕವಿಯ ಸಂವೇದನೆ, ಕಾವ್ಯದ ತುಣುಕುಗಳಲ್ಲಿ ವ್ಯಕ್ತವಾಗಿದೆ ಎಂದು ಮ.ಲ.ನ. ಮೂರ್ತಿಯವರು ಗುರುತಿಸಿದ್ದಾರೆ. ತಮ್ಮನಿಗೇ ಪ್ರೀತಿಯಿಂದ ಸಂಕಲನದ ಅರ್ಪಣೆಯಾಗಿದೆ.

        ನೀವು ಹನಿಗವನವೆನ್ನಿ, ಹನಿಗವಿತೆಯನ್ನಿ, ಕಿರುಗವಿತೆಯನ್ನಿ, ಚುಟುಕವೆನ್ನಿ ಅಥವಾ ಮತ್ತಿನೇನೋ ಅನ್ನಿ ಅದನ್ನು ಕೆಲವರು ಪ್ರಾಸಕ್ಕಷ್ಟೇ ಬರೆದರೆ, ಕೆಲವರು ಗಂಭೀರವಾಗಿ ಸಾಮಾಜಿಕ ಕಳಕಳಿಯಿಂದ ಬರೆಯುತ್ತಾರೆ. ಪ್ರಾಸಕ್ಕಾಗಿ ಬರೆದದ್ದೂ ಆ ಕ್ಷಣಕ್ಕಷ್ಟೇ ಖುಷಿ ನೀಡಿದರೆ, ಗಂಭೀರವಾಗಿ ಬರೆದದ್ದು ಓದುಗನನ್ನು ಕಾಡುವ ಗುಣ ಹೊಂದಿರುತ್ತದೆ. ಸಾಮಾಜಿಕ ಕಳಕಳಿಯಿಂದ ಬರೆಯುವಲ್ಲಿ ನನಗೆ ದಿನಕರ ದೇಸಾಯಿ, ಜರಗನಹಳ್ಳಿ ಶಿವಶಂಕರ್, ವೈ‌ಎನ್ಕೆ, ಸಿ.ಪಿ.ಕೆ, ಡುಂಡಿರಾಜ್, ಡಾ|| ಕೆ.ಬಿ.ರಂಗಸ್ವಾಮಿ, ಇನ್ನೂ ಮುಂತಾದವರೂ ಬಹಳ ಪ್ರಮುಖವಾಗಿ ಕಾಣುತ್ತಾರೆ. ಇವರ ಸಾಲಿಗೆ ನವೀನ್ ಮಧುಗಿರಿಯೂ ಸೇರಬಲ್ಲರು ಎಂಬ ಭರವಸೆ ಮೂಡಿಸುವ ಅನೇಕ ಹನಿಗವಿತೆಗಳು ಸಂಕಲನದಲ್ಲಿವೆ. ಈತ ತನ್ನ ಮೊದಲ ಸಂಕಲನದಲ್ಲಿಯೇ ಪ್ರೌಢಿಮೆ ಮೆರೆದಿದ್ದಾನೆ. ಈ ಕಾರಣಕ್ಕಾಗಿಯೇ ಇತ್ತೀಚಿಗೆ ಪ್ರಕಟವಾಗಿರುವ ಹಲವು ಹನಿಗವಿತೆ ಸಂಕಲನಗಳಲ್ಲಿ ಈ ಕೃತಿ ಬಹಳ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

        ವಯೋಸಹಜ ಪ್ರೀತಿ, ಪ್ರೇಮ, ಕಾಮ ವಸ್ತುಗಳಾಗಿರುವ ಹನಿಗವಿತೆಗಳೂ ಇಲ್ಲಿವೆ. ಆದರೆ, ಅವು ಬೆರಳೆಣಿಕೆಯಷ್ಟೇ ಎನ್ನಬಹುದು. ಉದಾಹರಣೆಗೆ :

ಹುಡುಗಿಯರು ಒಮ್ಮೆ
ಹೆಜ್ಜೆಯಿರಿಸಿದರೆ
ಜನುಮ ಪೂರ್ತಿ ಅಳಿಸುವುದಿಲ್ಲ!
ಅದರಲ್ಲೂ,
ಹೃದಯದ ಮೇಲೆ!
        *
ಬೇಲಿಯಿರದ
ಬದುಕ ಬಯಸಿ
ಹೊರಟವನನ್ನು
ಪ್ರೇಯಸಿಯ ಬಾಹುಗಳು
ಬಂಧಿಸಿದವು!
        *
ಎಲ್ಲಕ್ಕಿಂತಲೂ
ಮೊದಲು
ಹುಟ್ಟಿದ್ದು ಕಾಮ
ಆನಂತರ ನಾವೆಲ್ಲರೂ
ಹುಟ್ಟಿದ್ದು
        *
ಇಬ್ಬರೂ ಕೂಡಿದಾಗ
ಕಳೆದದ್ದು
ದೇಹದ ಹಸಿವು
        *

        ಸಂಕಲನದ ಅಲ್ಲಲ್ಲಿ ಕರುಳ ಸಂಬಂಧಗಳನ್ನು ನೆನೆಯುವ ಹನಿಗವತೆಗಳಿವೆ.

ಅಪ್ಪನ ಕೈಗಳನ್ನೇ
ಗಮನಿಸಿದ ನಮಗೆ
ಅವನ
ಹಗುರಾದ ಜೇಬು
ಅರ್ಥವಾಗಲಿಲ್ಲ
        *
ಅವ್ವ
ತನ್ನ ಕಷ್ಟ, ಕಣ್ಣೀರುಗಳನ್ನೆಲ್ಲ
ಬಚ್ಚಿಟ್ಟು
ಬರಿ ನಗುವನ್ನಷ್ಟೇ
ನಮಗೆ ಉಣ ಬಡಿಸಿದಳು
        *
ಅಟ್ಟ ಸೇರಿದ
ಒನಕೆಯ ಮೇಲೆ
ಮಾಸದ
ಅಜ್ಜಿಯ ಕೈಬೆರಳ
ಗುರುತು
        *      

        ಸಂಕಲನದ ಕೆಲವು ಹನಿಗವಿತೆಗಳು ಇತಿಹಾಸ, ಬ್ರೇಕಿಂಗ್ ನ್ಯೂಸ್‌ಗಳ ಮೇಲೂ ಬೆಳಕು ಚೆಲ್ಲಿವೆ:

ಇತಿಹಾಸದ ತುಂಬಾ
ಸಾವಿನ ಶವಗಳ
ವಾಸನೆ
        *
ಚುಟುಕು ಸುದ್ದಿ
ಆಕ್ರಮಿಸಿದೇ
ಎಷ್ಟೊಂದು ಕಿವಿ!?
        *

        ನವೀನ್ ತಮ್ಮ ಸಂಕಲನವನ್ನು ಸ್ನೇಹ ಹಾಗೂ ಗೌರವದೊಂದಿಗೆ ನನಗೆ ಕಳುಹಿಸಿದ ಸಮಯದಲ್ಲಿಯೇ ಒಂದು ಶನಿವಾರದ ಸಂಜೆ ಓದಿದಾಗಲೇ, ಈ ಸಂಕಲನವನ್ನು ಸಹೃದಯ ಓದುಗರಿಗೆ ಪರಿಚಯಿಸಬೇಕೆಂದು ಮನದಲ್ಲಿ ಆಸೆ ಮೂಡಿತಾದರೂ ಕಾಲ ಕೂಡಿಬಂದಿರಲಿಲ್ಲ. ಕಾಲ ಕೂಡಿ ಬರುವ ಸಮಯಕ್ಕೆ ನವೀನ್ ಅದಾಗಲೇ ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಅವರದೇ ಒಂದು ಹನಿಗವನದ ಆಶಯದಂತೆ ಅವರೂ ಮತ್ತೆ ಅಪ್ಪನಾಗಿ ಜನಿಸಿದ್ದಾರೆ.

ಪುಟ್ಟ ಮಗುವಿನ
ಮೊದಲ ಅಳುವಿನ
ಜೊತೆಗೆ
ಕಾರಿಡಾರಿನಲ್ಲೊಬ್ಬ
ಅಪ್ಪನ ಜನನ

        ಈ ಸಂದರ್ಭದಲ್ಲಿ ನವೀನ್‌ರವರಿಗೆ ಶುಭಕೋರುತ್ತಾ, ಖ್ಯಾತ ಹನಿಗವಿ, ಹನಿಗವಿತೆಗಳ ಖಜಾನೆಯ ಒಡೆಯ ಡುಂಡಿರಾಜ್ ರೇ ಹಿಂದಿನ ಮತ್ತು ಇಂದಿನ ಕವಿಗಳನ್ನು ಕುರಿತು ಬರೆದಿರುವ

ಅವರು ಆಯುವ ಕವಿ
ಇವರು ಈಯುವ ಕವಿ

ಎಂಬ ಹನಿಗವಿತೆಯನ್ನು ನೆನೆಯುತ್ತಾ, ನವೀನ್ ಮಧುಗಿರಿ ಆಯುವ ಕವಿ ಎಂದು ಶ್ಲಾಘಿಸಬಹುದಾಗಿದೆ.

                                                                           -       ಗುಬ್ಬಚ್ಚಿ ಸತೀಶ್.








ಬುಧವಾರ, ಜುಲೈ 22, 2015

’ಮುಗುಳ್ನಗೆ’ ಯ ಎರಡನೇ ಮುದ್ರಣ

ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು 
ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... 
ಅಂದು ನನ್ನ ಕಾದಂಬರಿ ’ಮುಗುಳ್ನಗೆ’ ಯ ಎರಡನೇ ಮುದ್ರಣ ಕೂಡ ಬಿಡುಗಡೆಯಾಗುತ್ತಿದೆ... 
ನಿಮಗಿದೋ ಪ್ರೀತಿಯ ಆಹ್ವಾನ...

ತಪ್ಪದೆ ಬನ್ನಿ...
ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.

ಸೋಮವಾರ, ಜೂನ್ 22, 2015

ಪುಸ್ತಕ ಪ್ರಾಧಿಕಾರದಲ್ಲಿ ಪಾರದರ್ಶಕತೆಯಿಲ್ಲ

        ಕನ್ನಡ ಪುಸ್ತಕ ಪ್ರಾಧಿಕಾರವು ಇತ್ತೀಚೆಗೆ ತಾನೇ ೨೦೧೦ರ ಸಗಟು ಖರೀದಿ ಪ್ರಕ್ರಿಯೆಯನ್ನು ಮುಗಿಸಿದೆ. ಆದರೆ, ಆಯ್ಕೆಯಾದ ಮತ್ತು ತಿರಸ್ಕೃತಗೊಂಡ ಪುಸ್ತಕಗಳ ಪಟ್ಟಿಯನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿಲ್ಲ. ಬಹುತೇಕ ಎಲ್ಲಾ ವಿಷಯಗಳನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವ ಪ್ರಾಧಿಕಾರವು ಈ ವಿಷಯದಲ್ಲಿ ಮೌನವಾಗಿರುವುದು ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ೨೦೧೦ರಲ್ಲಿ ಮೊದಲ ಮುದ್ರಣವಾಗಿ ನನ್ನ ಮಳೆಯಾಗು ನೀ... ಎಂಬ ಕವನವನ್ನು ಪ್ರಕಟಿಸುವುದರ ಮೂಲಕ ನಮ್ಮ ಗೋಮಿನಿ ಪ್ರಕಾಶನವನ್ನು ಪ್ರಾರಂಭಿಸಿ ಇದುವರೆವಿಗೂ ಹನ್ನೆರಡು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. 

ನಮ್ಮ ಪ್ರಕಾಶನದ ಮೊದಲ ಪುಸ್ತಕವು ತಿರಸ್ಕೃತಗೊಂಡಿದೆ ಎಂಬ ವಿಚಾರ ಪ್ರಾಧಿಕಾರವನ್ನು ಸಂಪರ್ಕಿಸಿದಾಗ ತಿಳಿದುಬಂತು. ಆದರೆ, ಪುಸ್ತಕ ತಿರಸ್ಕೃತಗೊಂಡದಕ್ಕೆ ಸೂಕ್ತ ಕಾರಣ ಅಧ್ಯಕ್ಷರಾದ ಡಾ|| ಬಂಜಗೆರೆ ಜಯಪ್ರಕಾಶ್‌ರವರನ್ನು ಮತ್ತು ಕಛೇರಿಯನ್ನು ಫೋನಿನ ಮೂಲಕ ಸಂಪರ್ಕಿಸಿ ಎರಡು ವಾರಗಳ ಮೇಲಾದರೂ ತಿಳಿದು ಬರುತ್ತಿಲ್ಲ. ಪ್ರಾಧಿಕಾರದ ಈ ಹಿಂದಿನ ಬೆಂಗಳೂರಿನ ಪುಸ್ತಕ ಮೇಳದ ಮಳಿಗೆಯ ವಿಚಾರದಲ್ಲೂ ಈಗಾಗಲೇ ನಮ್ಮ ಪ್ರಕಾಶನಕ್ಕೆ ಅನ್ಯಾಯವಾಗಿದ್ದು ಪುಸ್ತಕ ಪ್ರಕಾಶನ ಕುರಿತು ಜಿಗುಪ್ಸೆ ತಳೆಯುವಂತಾಗಿದೆ.

                                                        -       ಗುಬ್ಬಚ್ಚಿ ಸತೀಶ್,

                                                                ಗೋಮಿನಿ ಪ್ರಕಾಶನ, ತುಮಕೂರು.

ಭಾನುವಾರ, ಮೇ 10, 2015

ರಜನಿ ನರಹಳ್ಳಿಯವರ ‘ಆತ್ಮವೃತ್ತಾಂತ’ : ಆತ್ಮಸಂಗಾತಿಗೆ ಅಕ್ಷರಗಳ ಶ್ರದ್ಧಾಂಜಲಿ

       

        ನಾನು ಮತ್ತು ನನ್ನ ಶ್ರೀಮತಿ ತುಮಕೂರಿನ ಶ್ರೀಮತಿ ಎಂ.ಸಿ. ಲಲಿತಾರವರ ಮನೆಗೆ ನನ್ನ ನಾಲ್ಕನೇ ಪುಸ್ತಕ, ಮೊದಲ ಕಥಾಸಂಕಲನ  ಉಘೇ ಉಘೇ ಪುಸ್ತಕ ಬಿಡುಗಡೆ ಕಾಯಕ್ರಮಕ್ಕೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಬೇಕೆಂದು ಕೋರಲು ಹೋಗಿದ್ದೆವು. ಅವರು ಅದಾಗಲೇ ನನ್ನ ಮುಗುಳ್ನಗೆ ಕಾದಂಬರಿ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂದು ನನಗೆ ಶುಭ ಹಾರೈಸಿದ್ದರು. ಆದರೂ, ಮತ್ತೆ ಅವರನ್ನೇ ಕರೆಯಲು ಬಲವಾದ ಒಂದು ಕಾರಣವಿತ್ತು. ಅದೇನೆಂದರೆ, ಅವರು ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗ ಏರ್ಪಡಿಸಿದ್ದ ಕಥಾಸ್ಪರ್ಧೆಯಲ್ಲಿ ನನ್ನ ಟ್ಯೂಷನ್ ಫೀಸು ಕಥೆಗೆ ಎರಡನೇ ಬಹುಮಾನ ಬಂದಿತ್ತು. ಮತ್ತು ಆ ನಂತರವೂ ಅವರ ಅನನ್ಯ ಸಾಂಸ್ಕೃತಿಕ ವೇದಿಕೆಯ ಕಥಾಸ್ಪರ್ಧೆಯಲ್ಲಿ ಅಂಕುರ ಕಥೆಗೆ ಸಮಾಧಾನಕರ ಬಹುಮಾನವೂ ಬಂದಿತ್ತು. ಅವರು ನನ್ನೊಳಗಿದ್ದ ಕಥೆಗಾರನಿಗೆ ವೇದಿಕೆ ಕಲ್ಪಿಸಿಕೊಟ್ಟರೆಂಬ ಅಭಿಮಾನದ ಮೇರೆಗೆ ಅವರೇ ಮುಖ್ಯ ಅತಿಥಿಗಳಾಗಿ ಬರಲಿ ಎಂದು ಆಶಿಸಿದ್ದೆ. ಸಾಮಾನ್ಯವಾಗಿ ನಮ್ಮ ಗೋಮಿನಿ ಪ್ರಕಾಶನದ ಯಾವುದೇ ಕಾರ್ಯಕ್ರಮಕ್ಕೂ ಒಮ್ಮೆ ಅತಿಥಿಗಳಾಗಿ ಬಂದವರನ್ನು ಅತಿಥಿಗಳಾಗೇ ಮತ್ತೆ ಕರೆಯಬಾರದೆಂಬ ಅಲಿಖಿತ ನಿಯಮವಿದ್ದರೂ ಅವರ ಮೇಲಿನ ಅಭಿಮಾನದಿಂದ ನಾವು ಅಂದು ಅವರ ಮನೆಯಲ್ಲಿದ್ದವು.

        ಅಂದು ಅವರ ಮನೆಯಲ್ಲಿ ನನ್ನ ಶ್ರೀಮತಿಯ ಕಣ್ಣಿಗೆ ರಜನಿ ನರಹಳ್ಳಿಯವರ ಆತ್ಮವೃತ್ತಾಂತ (ಕಾದಂಬರಿ) ಪುಸ್ತಕವು ಕಂಡಿತು. ಅವಳು ಆ ಪುಸ್ತಕವನ್ನು ಕೈಗೆತ್ತಿಕೊಂಡು ಮುಖಪುಟದ ಮೇಲೊಮ್ಮೆ ಅತೀವ ಕಕ್ಕುಲತೆಯಿಂದ ಕಣ್ಣಾಡಿಸಿ, ಮೇಡಮ್, ಈ ಪುಸ್ತಕವನ್ನು ಓದಿ ಕೊಡುತ್ತೇನೆ ಎಂದು ತೆಗೆದುಕೊಂಡಳು. ಮೇಡಮ್ ಮನೆಯಲ್ಲಿ ಹಲವು ಪುಸ್ತಕಗಳಿದ್ದರೂ, ನನ್ನ ಬಳಿಯಿದ್ದ ಹಲವು ಪುಸ್ತಕಗಳನ್ನು ಮೊದಲು ಓದೋಣವೆಂದು ನಾನೆಂದೂ ಅವರನ್ನು ಪುಸ್ತಕ ಕೇಳಿರಲಿಲ್ಲ. ಮೇಡಮ್ಮು ಸಹ ಆ ಪುಸ್ತಕವನ್ನು ಹೊಗಳಿ ಒಂದೆರೆಡು ನಿಮಿಷ ಮಾತನಾಡಿ, ಮನೆಯಲ್ಲಿ ಸಾಕಿದ ನಾಯಿಯ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ,  ಓದಿ ಎಂದರು.

        ನಮ್ಮ ಮನೆಗೆ ಸಾಮಾನ್ಯವಾಗಿ ಯಾವುದೇ ಪುಸ್ತಕ ಬಂದರೂ ಮೊದಲು ಓದುವುದು ನಾನೇ ಆದ್ದರಿಂದ ರಘು ಅಪಾರರವರ ಮುಖಪುಟವೇ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಮಾಡಿಬಿಟ್ಟಿತು. ಧಾರವಾಡದ ಮನೋಹರ ಗ್ರಂಥಮಾಲೆಯ ಪ್ರಕಟಣೆಯೆಂದರೆ (ಶ್ರೀಮತಿ ಎಂ.ಸಿ. ಲಲಿತಾರವರು ಮನೋಹರ ಗ್ರಂಥಮಾಲೆಯ ಚಂದಾದಾರರು. ಆ ಕಾರಣ ಈ ಪುಸ್ತಕ ಅವರ ಮನೆಯಲ್ಲಿತ್ತು) ಪುಸ್ತಕದ ಅಚ್ಚುಕಟ್ಟುತನ ಪುಟಪುಟದಲ್ಲೂ ಅಚ್ಚಾಗಿರುತ್ತದೆ. ಮತ್ತು ಪುಸ್ತಕದ ಬಗ್ಗೆ ಮೊದಲೇ ನನಗೆ ಗೊತ್ತಿದ್ದರಿಂದ ಓದಲು ಶುರು ಮಾಡಿದೆ.

        ಪುಸ್ತಕದ ಪ್ರಕಾಶಕರೇ ಇದು ವಿನೂತನ ಪ್ರಯೋಗ, ಲೇಖಕರು ಪರಕಾಯ ಪ್ರವೇಶ ಮಾಡಿ ಅತ್ಯಂತ ನಿಕಟ ಆತ್ಮಸಂಗಾತಿ (ನಾಯಿ) ಯ ಮೂಲಕ ಕತೆ ಹೇಳಲು ತೊಡಗುತ್ತಾರೆ ಎಂದು ಹೇಳುತ್ತಾ ಪುಸ್ತಕದ ವಿವಿಧ ಮಜಲುಗಳ ಬಗ್ಗೆ ಸಂಕ್ಷಿಪ್ತವಾಗಿ ಬರೆದಿದ್ದಾರೆ. ಇನ್ನು ಲೇಖಕಿ ರಜನಿ ನರಹಳ್ಳಿಯವರು (ಕನ್ನಡದ ಖ್ಯಾತ ವಿಮರ್ಶಕರಲ್ಲೊಬ್ಬರಾದ ಡಾ|| ನರಹಳ್ಳಿ ಬಾಲಸುಬ್ರಮಣ್ಯರ ಶ್ರೀಮತಿ) ಆತ್ಮವೃತ್ತಾಂತ ದ ವೃತ್ತಾಂತವೆಂದು ತಮ್ಮ ಅನಿಸಿಕೆಯನ್ನು ತಾಜ್ ಮಹಲ್ ಆಥವಾ ಸಮಾಧಿ ಕಟ್ಟದೆ, ಬಿಳಿಯ ಕಾಗದದ ಮೇಲೆ ಕಪ್ಪು ಅಕ್ಷರಗಳ ಮೂಲಕ ಶ್ರದ್ಧಾಂಜಲಿ ಯಾಗಿ ತಮ್ಮ ಮತ್ತು ಕುಟಂಬದ ಪ್ರೀತಿ ಪಾತ್ರವಾಗಿ ಎರಡು ತಿಂಗಳ ಮರಿಯಿಂದ ಹದಿನಾಲ್ಕುವರೆ ವರ್ಷದ ವೃದ್ಧಾಪ್ಯದವರೆಗೂ ಬದುಕಿ ಬಾಳಿದ ಮುದ್ದು ಲಿಯೋ ಸವಿನೆನಪನ್ನು ದಾಖಲಿಸಿದ್ದೇನೆ ಎಂದಿದ್ದಾರೆ.

        ಈ ಕಾದಂಬರಿಯ ವಸ್ತು ನಾಯಿ ಮತ್ತದರ ಬಾಳು. ಜೊತೆಗೆ ಅದರ ಹಿಂದಿನ ತಲೆಮಾರಿನ ನಾಯಿಗಳ ಆತ್ಮಕತೆಗಳು ಸೇರಿಕೊಂಡಿವೆ. ಇದೆಲ್ಲವನ್ನು ನಾಯಿಯನ್ನು ಸಾಕಿ ಸಲಹುವ ಅಮ್ಮ (ಲೇಖಕಿ) ನಾಯಿಯ ಪರಕಾಯ ಪ್ರವೇಶ ಮಾಡಿ ನಿರೂಪಿಸುತ್ತಾ ಹೋಗುತ್ತಾರೆ. ಅದಮ್ಯ ಜೀವನ ಪ್ರೀತಿಯಿಂದ, ಅತೀವ ಸೂಕ್ಷ್ಮ ಸಂಗತಿಗಳಿಂದ, ವೈಚಾರಿಕತೆಯ ದೃಷ್ಟಿಕೋನದಿಂದ ಈ ಪುಸ್ತಕ ಸುಲಭವಾಗಿ ಓದಿಸಿಕೊಳ್ಳುತ್ತದೆ. ಬರೀ ಓದುವ ಹವ್ಯಾಸವುಳ್ಳವರಿಗೆ ಈ ಪುಸ್ತಕ ರಸದೌತಣ ಬಡಿಸಿದರೆ, ಬರೆಯುವವರಿಗೆ ಬರವಣಿಗೆಯ ಶ್ರದ್ದೆಯ ಪ್ರತೀಕದಂತೆ ತೋರಲೂಬಹುದು. ಇನ್ನೂ ಪ್ರಾಣಿಪ್ರಿಯರಿಗೆ (ಅದರಲ್ಲೂ ನಾಯಿ ಸಾಕಿದ್ದವರಿಗೆ, ಸಾಕುತ್ತಿರುವವರಿಗೆ) ಕಣ್ಣಂಚಿನಲ್ಲಿ ನೀರು ತರಬಹುದು. ಓದಿದ ಮೇಲು ಕಾಡುವ ಹಲವು ಪುಸ್ತಕಗಳಲ್ಲಿ ಈ ಪುಸ್ತಕವು ನಿಮ್ಮ ಮನಸ್ಸಿನಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ.

        ಇನ್ನು ಮುನ್ನುಡಿ ಬರೆದಿರುವ ಖ್ಯಾತ ವಿಮರ್ಶಕರಾದ ರಹಮತ್ ತರೀಕೆರೆಯವರ ಮಾತುಗಳು ತುಂಬಾ ಮೌಲಿಕವಾಗಿವೆ. ಬೆನ್ನುಡಿ ಬರೆದಿರುವ ಖ್ಯಾತ ಲೇಖಕಿ ವೈದೇಹಿಯವರೂ ಕೂಡ ಯಾರೂ ಮುಖ್ಯರಲ್ಲ, ಯಃಕಶ್ಚಿತ್ ಹುಳುವೂ ಅಮುಖ್ಯವಲ್ಲ ಎಂಬ ಮಾತುಗಳನ್ನು ಎತ್ತಿ ಹಿಡಿದು ಇದೊಂದು ಕನ್ನಡ ಕಂಡ ಅಪರೂಪದ ಕೃತಿಯೇ ಸರಿ ಎಂದಿದ್ದಾರೆ. ಇಲ್ಲಿ ಯಾರ ಮಾತಲ್ಲೂ ಅತಿಶಯೋಕ್ತಿಯಿಲ್ಲ ಎಂಬುದನ್ನು ಗಮನಿಸಬೇಕಿದೆ. ಯಾಕೆಂದರೆ ಪುಸ್ತಕ ಅಷ್ಟು ಚೆನ್ನಾಗಿದೆ.

        ಈ ಪುಸ್ತಕವನ್ನು ಒಂದೇ ಉಸಿರಿಗೆ ಅರ್ಧಭಾಗ ಓದಿದೆನಾದರೂ, ಉಳಿದ ಭಾಗವನ್ನು ಬೇಗ ಓದಿ ಮುಗಿಸಲಾಗಲಿಲ್ಲ. ಒಂದು ಬೆಳಿಗ್ಗೆ ಹಾಲು ತರಲು ಹೋದಾಗ ಸಿಕ್ಕಿದ ಶ್ರೀಮತಿ ಎಂ.ಸಿ.ಲಲಿತಾರವರು ಪುಸ್ತಕವನ್ನು ಅವರ ಸ್ನೇಹಿತೆಯೊರಬ್ಬರು ಓದುಲು ಕೇಳುತ್ತಿದ್ದಾರೆಂದು ಹೇಳಿದಾಗ, ಎಚ್ಚೆತ್ತಕೊಂಡ ನಾನು ಮತ್ತೆ ಮೂರು ದಿನದ ಅವಧಿ ಕೇಳಿ ಅಷ್ಟರಲ್ಲಿ ಓದಿ ಮುಗಿಸಿದೆ. ಇಷ್ಟು ದಿನ ಒಂದು ಒಳ್ಳೆಯ ಪುಸ್ತಕವನ್ನು ಓದದೇ ಇದ್ದದ್ದಕೆ ಪಶ್ಚತ್ತಾಪವನ್ನೂ ಪಟ್ಟೆ. ಇನ್ನೂ ಓದುತ್ತೇನೆ ಎಂದು ಪುಸ್ತಕ ಕೇಳಿ ತಂದಿದ್ದ ನನ್ನ ಶ್ರೀಮತಿ ಪುಸ್ತಕದ ಆದಿ-ಅಂತ್ಯವನ್ನು ಯಾವಗಲೋ ಓದಿದ್ದರಿಂದ ಆಗಾಗ ನಮ್ಮ ಮನೆಯಲ್ಲಿ-ಮನಸ್ಸಲ್ಲಿ ಈ ಪುಸ್ತಕದ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ.

        ಮುನ್ನುಡಿಯಲ್ಲಿ ರಹಮತ್ ತರೀಕೆರೆ ಸರ್,  ನಾನು ನಾಯಿಯನ್ನು ಭೈರವನ ವಾಹನವೆಂದು ಆರಾಧಿಸುವ ನಾಥಪಂಥದ ಅಧ್ಯಯನ ಮಾಡಿದವನು. ಸ್ವತಃ ನಾಯಿ ಸಾಕಿ ಅದರ ಪಾಡನ್ನು ಪಟ್ಟವನು ಮತ್ತು ಅದರ ಬಗ್ಗೆ ಬರೆದವನು. ಸ್ವಾರಸ್ಯಕರವಾದ ಈ ಕಾದಂಬರಿ ಓದು ನನಗೆ ಖುಶಿ ಕೊಟ್ಟಿದೆ. ಈ ಖುಶಿಯು ಎಲ್ಲ ಓದುಗರಿಗೂ ಸಿಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ನನಗೂ ಅಷ್ಟೇ. ನಾಯಿ ಸಾಕಿದ ಅನುಭವವಿದೆ. ನಾಯಿಯನ್ನೇ ಕೇಂದ್ರವಾಗಿರಿಸಿಕೊಂಡು ಬರೆದ ದೋಬಿಘಾಟಿನ ಗೆಳೆಯರು ಎಂಬ ಲಲಿತ ಪ್ರಬಂಧಕ್ಕೆ ಸುಧಾ ಯುಗಾದಿ ವಿಶೇಷಾಂಕ -೨೦೧೫ ರ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಬಂದಿದೆ. ನಾನೂ ಹೇಳುತ್ತಿದ್ದೇನೆ ಈ ಪುಸ್ತಕವನ್ನು ನೀವೂ ಓದಿ, ನಿಮ್ಮ ಓದಿನ ಖುಶಿಯನ್ನು ಹೆಚ್ಚಿಸಿಕೊಳ್ಳಿ, ಮತ್ತಷ್ಟು ವಿಸ್ತರಿಸಿಕೊಳ್ಳಿ.

        ಅಂದಹಾಗೆ, ಈ ಪುಸ್ತಕಕ್ಕೆ ೨೦೧೩ನೇ ಸಾಲಿನ ತುಮಕೂರಿನ ವೀಚಿ ಸಾಹಿತ್ಯ ಪ್ರಶಸ್ತಿ ದೊರೆತಿದೆ.  ಧಾರವಾಡ ಶ್ರೀಮತಿ ರತ್ನಮ ಹೆಗ್ಗಡೆ ಪ್ರಶಸ್ತಿಗೆ ಆಯ್ಕೆಯಾದ ಮೂರು ಪುಸ್ತಕಗಳಲ್ಲಿ ಇದೂ ಒಂದು. ಮತ್ತೊಂದು ಪುಸ್ತಕ ನಮ್ಮ ಗೋಮಿನಿ ಪ್ರಕಾಶನದಿಂದ ಪ್ರಕಟವಾದ ಶ್ರುತಿ ಬಿ.ಎಸ್.ರವರ ಬದುಕ ದಿಕ್ಕು ಬದಲಿಸಿದ ಆಸ್ಟೀಯೋ ಸರ್ಕೋಮ ಎಂಬುದು ನಮ್ಮ ಬೋನಸ್ ಖುಶಿ.

        ಲೇಖಕಿ ಶ್ರೀಮತಿ ರಜನಿ ನರಹಳ್ಳಿಯವರಿಗೆ ಈ ಮೂಲಕ ಅಭಿನಂದನೆಗಳು. ಪುಸ್ತಕ ಕೊಟ್ಟ ಶ್ರೀಮತಿ ಎಂ.ಸಿ. ಲಲಿತಾರವರಿಗೆ ನಮ್ಮ ಧನ್ಯವಾದಗಳು. ಪುಸ್ತಕ ಹಿಂದಿರುಗಿಸಲು ಹೋದಾಗ ಅವರು ಸಾಕಿದ್ದ ನಾಯಿಯ ನೆನೆದು ಅವರ ಕಣ್ಣುಗಳು ಒದ್ದೆ ಒದ್ದೆ.

                                                        -       ಪ್ರೀತಿಯಿಂದ,
                                                               ಗುಬ್ಬಚ್ಚಿ ಸತೀಶ್.







ಈ ಕಥಾಸ್ಪರ್ಧೆ ವಿದ್ಯಾರ್ಥಿಗಳಿಗೆ ಮಾತ್ರ

ಸ್ನೇಹಿತರೇ, ಈ ಕಥಾಸ್ಪರ್ಧೆ ವಿದ್ಯಾರ್ಥಿಗಳಿಗೆ ಮಾತ್ರ.  ವಿವರಗಳಿಗೆ: ಶುಭವಾಗಲಿ.