ಬುಧವಾರ, ಏಪ್ರಿಲ್ 11, 2012

ಬರ್ಮಾದ ಬುದ್ಧ


ಈಕೆಯನ್ನು ನೋಡಿದಾಗಲೆಲ್ಲಾ
ನೆನಪಾಗುವುದು ನನಗೆ, ಬಹುಷಃ ನಿಮಗೂ
ನಮ್ಮ ಮಹಾತ್ಮ ಗಾಂಧಿ, ಇಲ್ಲವೇ ನೆಲ್ಸನ್ ಮಂಡೇಲಾ
ಆಕೆಯೇ ನೊಬೆಲ್ ಶಾಂತಿ ಪುರಸ್ಕೃತೆ
“ಬರ್ಮಾದ ಬೆಳಕು”
ಆಂಗ್ ಸಾನ್ ಸೂಕಿ

ವಿರೋಧಿಗಳ ಸಂಚಿಗೆ ಬಲಿಯಾದ
ರಾಷ್ಟ್ರನಾಯಕನ ಮಗಳೀಕೆ
ತಂದೆಯ ಪಡಿಯಚ್ಚು
ಅಪ್ಪನ ದೇಶಪ್ರೇಮದ ಜೊತೆಜೊತೆಗೆ
ಸ್ವಸಾಮರ್ಥ್ಯದ ಬುದ್ಧಿವಂತೆ
ಗೆಳೆಯರ, ಹಿತೈಷಿಗಳ ಅಕ್ಕರೆಯ “ಸೂ”

ಗೃಹವಿದ್ದರೂ ಬಂಧನ
ಅಮ್ಮ, ಗಂಡ, ಮಕ್ಕಳ ಅಗಲಿಕೆಗೆ,
ತನ್ನ ಹತ್ಯೆಯ ಪ್ರಯತ್ನಗಳಿಗೆ
ಧೃತಿಗೆಡದ ಕೃಶಾಂಗಿ
“ದೇಶ ನನಗಲ್ಲ, ನಾನು ದೇಶಕ್ಕಾಗಿ”
ಎಂದ ಸ್ವಾತಂತ್ರ್ಯದ ಸಂಕೇತ ಈ ದೇಶಭಕ್ತೆ

ಆ ಬುದ್ಧ, ಅದ್ಯಾವ ಘಳಿಗೆಯಲ್ಲಿ
ಇವಳ ಕಿವಿಯಲ್ಲಿ ಉಸಿರಿದನೋ
“ನೀನು ನಿನ್ನ ದೀಪವಾಗು” ಎಂದು
ಇವಳು ತಾನೇ ಉರಿದು
ಎಂದೆಂದಿಗೂ ಆರದ ದೀಪವಾದಳು
ಬರ್ಮಾದ ಬುದ್ಧನಾದಳು.

(ಆಂಗ್ ಸಾನ್ ಸೂಕಿಯವರ ನ್ಯಾಷನಲ್ ಲೀಗ್ ಫಾರ್ ಡೆಮಕ್ರಸಿ (ಎನ್ ಎಲ್ ಡಿ) ಪಕ್ಷ
ಬರ್ಮಾದ ಸಂಸತ್ತಿನಲ್ಲಿ ದಿಗ್ವಿಜಯ ಸಾಧಿಸಿದ ನೆನಪಿನಲ್ಲಿ ಸೂಕಿಯವರಿಗೆ ಅರ್ಪಣೆ)

                                                   - ಗುಬ್ಬಚ್ಚಿ ಸತೀಶ್.

ಶುಕ್ರವಾರ, ಮಾರ್ಚ್ 23, 2012

ನಂದನ ಯುಗಾದಿ

ಬಂದಿದೆ ಯುಗಾದಿ
ನಂದದ ಯುಗಾದಿ
ಚಂದನ ಯುಗಾದಿ
ಸಂಭ್ರಮದ ಈ ನಂದನ ಯುಗಾದಿ

ಶತಮಾನಗಳ ಯುಗಾದಿ
ದಶಕದ ಪ್ರೀತಿಯ ಯುಗಾದಿ
ಕಳೆದೈದು ವಸಂತಗಳ ಯುಗಾದಿ
ನಲ್ಲನಲ್ಲೆಯರ ಬಂಧನದ ಯುಗಾದಿ

ಸರಸ-ವಿರಸದ ಯುಗಾದಿ
ಬೇವು-ಬೆಲ್ಲದ ಯುಗಾದಿ
ಹಾವು-ಏಣಿಯಾಟದ ಯುಗಾದಿ
ಗುಬ್ಬಚ್ಚಿಗಳ ಗೂಡಿನಲ್ಲೊಂದು ಚಿಲಿಪಿಲಿ ಯುಗಾದಿ

ಬಂದಿದೆ ಯುಗಾದಿ
ನಂದದ ಯುಗಾದಿ
ಚಂದನ ಯುಗಾದಿ
ಸಂಭ್ರಮದ ಈ ನಂದನ ಯುಗಾದಿ

                        - ಗುಬ್ಬಚ್ಚಿ ಸತೀಶ್.

“ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು…

  ಆತ್ಮೀಯ ಸ್ನೇಹಿತರೇ, “ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು… ನನ್ನ ಅನಿಸಿಕೆಯಯನ್ನು ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ವೀಕ್ಷಿಸಿ… ಧನ್ಯವಾದಗಳೊಂದಿಗೆ, ಗುಬ್ಬಚ್ಚಿ ...