ಮಂಗಳವಾರ, ಸೆಪ್ಟೆಂಬರ್ 26, 2023

ವಯಸ್ಸು ನಲವತ್ತೇಳು… ಮನಸ್ಸು ಇಪ್ಪತ್ತನಾಲ್ಕು…

ವಯಸ್ಸು ನಲವತ್ತೇಳು… ಮನಸ್ಸು ಇಪ್ಪತ್ತನಾಲ್ಕು…

ಆತ್ಮೀಯ ಸ್ನೇಹಿತರೇ, ನಮಸ್ಕಾರ…

ಮೊದಲಿಗೆ, ನನ್ನ ಹುಟ್ಟುಹಬ್ಬಕ್ಕೆ ಹಾರೈಸುವುದರ ಮೂಲಕ ನನಗೆ ಮತ್ತಷ್ಟು ಚೈತನ್ಯ ನೀಡಿದ್ದೀರಿ. ತುಂಬು ಹೃದಯದ ಧನ್ಯವಾದಗಳು…



ನಾನು ಹುಟ್ಟಿದ್ದು 1977ನೇ ಇಸವಿಯ ಸೆಪ್ಟೆಂಬರ್‌ 25ರ ಭಾನುವಾರದ ಸಂಜೆ ಎಂಬುದು ನನಗೆ ಗೊತ್ತುಗುವಷ್ಟರಲ್ಲಿ ನನಗೆ ಸುಮಾರು ಇಪ್ಪತ್ತಮೂರು ವರುಷ ವಯಸ್ಸು ಆಗಿತ್ತು. ಅಲ್ಲಿಯವರೆಗೂ ನನ್ನ ಶಾಲಾ ದಾಖಲಾತಿಯ 22/07/1977 ನನ್ನ ಹುಟ್ಟಿದ ದಿನವಾಗಿತ್ತು. ಗಣಪತಿಯ ಹಬ್ಬದ ನಂತರ ಜನಿಸಿದೆ ಅಂತ ತಾತಾ ಹೇಳುತ್ತಿದ್ದುದ್ದು ನೆನಪಿತ್ತು. ಯಾವುದೋ ಒಂದು ದಿನ ಮನೆಯ ಹಳೆಯ ಪತ್ರಗಳನ್ನು ನೋಡುತ್ತಿದ್ದಾಗ ನನಗೆ ನಿಜಾಂಶ ತಿಳಿದಿತ್ತು. ಅಷ್ಟರಲ್ಲಾಗಲೇ ತಾತ ತೀರಿಕೊಂಡು ಬಹಳ ವರ್ಷಗಳೇ ಆಗಿದ್ದವು. ಅಲ್ಲಿಯವರೆಗೂ ಈ ಬಗ್ಗೆ ಯಾರೂ ಏಕೆ ತಲೆಕೆಡಿಸಿಕೊಳ್ಳಲಿಲ್ಲ ಎಂಬ ಸಂದೇಹಕ್ಕೆ ಸುಲಭವಾದ ಮತ್ತು ಸಹಜವಾದ ಉತ್ತರ, ಹುಟ್ಟು ಎಂಬುದು ನಮಗೆ ಹಬ್ಬವೇ ಆಗಿರಲಿಲ್ಲ. ನಮ್ಮ ಮನೆಯಲ್ಲಿ ಇದ್ದದ್ದೇ ಹಾಗೆ. ಆ ಕಾಲದಲ್ಲಿ ಬೇರೆಯವರ ಮನೆಯಲ್ಲಿ ಹುಟ್ಟು ಹಬ್ಬದ ಸಂಭ್ರಮಗಳು ಇದ್ದಿರಬಹುದು… ಆದರೆ, ನನ್ನ ನೈಜ ಹುಟ್ಟುಹಬ್ಬ ತಿಳಿದ ನಂತರ ಸ್ನೇಹಿತರು-ಆತ್ಮೀಯರು ವಿಶ್‌ ಮಾಡುತ್ತಿದ್ದರು. ಅಷ್ಟರಲ್ಲಾಗಲೇ ನನಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಆಸೆ ಅಂತ ಏನು ಇರಲಿಲ್ಲ. ಮನೆಯಲ್ಲಿ ಕೂಡ ನಾನು ಹೇಳದ ಹೊರತು ಯಾರಿಗೂ ಈ ವಿಷಯ ಅರಿವಾಗುತ್ತಲೇ ಇರಲಿಲ್ಲ. ಇವತ್ತಿಗೂ ನಮ್ಮ ತಂದೆ-ತಾಯಿಗೆ ನಾನು ಹೇಳಿದರಷ್ಟೇ ಗೊತ್ತಾಗುವುದು.

ಆದರೆ, ನನ್ನ ಶ್ರೀಮತಿ ಮತ್ತು ಮಗಳು ಈ ದಿನ ಬಹಳ ಸಂಭ್ರಮದಲ್ಲಿರುತ್ತಾರೆ. ನನ್ನ ಮಗನಂತೆಯೇ ಇರುವ ಹರೀಶನಿಗೆ ಕೂಡ ಈ ದಿನ ಸಂಭ್ರಮವೇ. ಪ್ರತಿವರ್ಷ ನಮ್ಮ ನಾಲ್ಕೂ ಜನರ ಹುಟ್ಟುಹಬ್ಬ ಒಂದು ಒಳ್ಳೆಯ ಹೋಟೆಲ್ಲಿನಲ್ಲಿ ಊಟ ಮಾಡುವ ಮೂಲಕ ಆಚರಿಸಲ್ಪಡುತ್ತದೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಆಗುವುದಿಲ್ಲ. ನೆನ್ನೆ ಮಳೆಯ ಕಾರಣದಿಂದ ಹೊರಗೆ ಹೋಗಲು ಆಗಲೇ ಇಲ್ಲ. ಮಧ್ಯಾಹ್ನದಿಂದಲೇ ಮೋಡ ಕವಿದ ಮಳೆ ಮಗಳಿಗೆ ಬಹಳ ನೋವುಂಟು ಮಾಡಿತ್ತು ಎಂಬುದಂತೂ ಸತ್ಯ. ಈ ನೆಪದಲ್ಲಿ ಮತ್ತೊಂದು ದಿನ ಹೊರಗೆ ಹೋಗುವುದೆಂಬ ತೀರ್ಮಾನವಾಯ್ತು.

ಈಗ ವಿಷಯಕ್ಕೆ ಬರುತ್ತೇನೆ. ಪ್ರತಿ ಹುಟ್ಟುಹಬ್ಬದ ಹಿಂದಿನ ದಿನವೇ ನಾನು ಆತ್ಮವಲೋಕನ ಮಾಡಿಕೊಳ್ಳಲು ತೊಡಗುತ್ತೇನೆ. ವಿದ್ಯಾರ್ಥಿಯಾಗಿದ್ದಾಗ ವಿಜ್ಞಾನಿಯಾಗಬೇಕು ಎಂದು ಹಂಬಲಿಸುತ್ತಿದ್ದವನು ಆದದ್ದಾದರೂ ಏನು ಅಂತೆಲ್ಲಾ. ಸಾಧಿಸಿದಾದ್ದರೂ ಏನು ಅಂತಹ ಯೋಚನೆಯೂ ಬರುತ್ತದೆ. ನಾನು ನಡೆದ ದಾರಿ ಸರಿ ಅಂತ ಅನ್ನಿಸಿದ್ದರಿಂದಲೇ ಹೆಜ್ಜೆ ಇಟ್ಟಿದ್ದು ಅಂತ ನೆನಪಾಗುತ್ತದೆ. ಆದರೆ, ನಾನು ಗೆದ್ದೇನೋ, ಸೋತೆನೋ ನನಗೆ ಅರ್ಥವಾಗುವುದಿಲ್ಲ. ನನ್ನ ಜೀವನ ಒಂದು ಹಂತಕ್ಕೆ ಬಂತು ಅನ್ನುವಾಗಲೆಲ್ಲಾ ವಿಧಿಯ ಕೈವಾಡ ಮೇಲುಗೈ ಸಾಧಿಸಿದೆ. ಆಗೆಲ್ಲಾ ಬಿದ್ದ ಹೊಡೆತಗಳಿದಂಲೇ ಚೇತರಿಸಿಕೊಂಡು ಮುನ್ನುಗುವ ಮನೋಭಾವ ಬೆಳೆಸಿಕೊಂಡಿದ್ದೇನೆ. ನನಗೆ ಒಂದಷ್ಟು ಉತ್ತಮ ಹವ್ಯಾಸಗಳಿರುವುದರಿಂದ ತುಸು ಸೊಂಬೇಂರಿಯಾದರೂ ಆದಷ್ಟು ಲವಲವಿಕೆಯಿಂದ ಇರುತ್ತೇನೆ. ಜೀವನವೇ ಒಂದು ಪ್ರಯೋಗಶಾಲೆ ಅಂತ ಅಂದುಕೊಂಡೇ ನನ್ನ ಮೇಲೆಯೇ ಸಾಕಷ್ಟು ಪ್ರಯೋಗಗಳನ್ನು ಮಾಡಿಕೊಂಡು ಗೆದ್ದಿದ್ದೇನೆ, ಆಗಾಗ ಸೋತದ್ದು ಕೂಡ ಇದೆ. ಆದರೆ, ಯಾವ ಸೋಲು ಕೂಡ ನನ್ನನ್ನು ಧೃತಿಗೆಡಿಸಿಲ್ಲ. ಯಾಕೆಂದರೆ, ಅದು ಅನುಭವವಾಗಿ ನನಗೊಂದು ಪಾಠ ಕಲಿಸಿರುತ್ತದೆ. ವಿಜ್ಞಾನಿಯಾಗದಿದ್ದರೂ ವಿಜ್ಞಾನಿಯ ಮನಸ್ಥಿತಿ ಕೊಂಚ ಇದೆ. ಇವತ್ತಿಗೂ ನನಗೆ ಕಲಿಯುವುದೆಂದರೇ ಬಹಳ ಇಷ್ಟ. ಪ್ರಮುಖವಾಗಿ ಸದಾಕಾಲ ಸಾಹಿತ್ಯ ಮತ್ತು ಸಿನಿಮಾದ ವಿದ್ಯಾರ್ಥಿಯಾಗಿಯೇ ಇರುತ್ತೇನೆ. ಇದೇಕಾರಣದಿಂದ ನನಗೀಗ ವಯಸ್ಸು ನಲವತ್ತೇಳಾದರೂ ಮನಸ್ಸು ಇಪ್ಪತ್ತನಾಲ್ಕು… ಮತ್ತೊಮ್ಮೆ ನಿಮಗೆಲ್ಲಾ ಧನ್ಯವಾದಗಳೊಂದಿಗೆ…

-        ನಿಮ್ಮ ಪ್ರೀತಿಯ, ಗುಬ್ಬಚ್ಚಿ ಸತೀಶ್.

3 ಕಾಮೆಂಟ್‌ಗಳು:

ನಿಮ್ಮ ಗುರಿ ಏನು?

ಸ್ನೇಹಿತರೇ, ಜೀವನದಲ್ಲಿ ಒಂದು ಗುರಿ ಇರಬೇಕಾಗುತ್ತದೆ. ನೀವು ಇರುವುದರಲ್ಲೇ ಸಂತುಷ್ಟರಾಗಿ ಇರುತ್ತೇನೆ ಎಂದರೆ ನಿಮಗೆ ಯಾವುದೇ ಗುರಿಯ ಅವಶ್ಯಕತೆ ಇರುವುದಿಲ್ಲ. ಆದರೆ, ಏನನ...