ಬುಧವಾರ, ಮೇ 1, 2013

ನಲ್ಲನಲ್ಲೆಯರ ಮೊದಲ ಅಕ್ಷರ ಜಾತ್ರೆ


        ಮೊದಲಿಗೆ ನಾನು ಹತ್ತಿರದಿಂದ ನೋಡಿದ ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ತುಮಕೂರಿನಲ್ಲಿ ಜರುಗಿದ್ದು. ಆಗ ನಾನು ಗೆಳೆಯ ವಿಶುವಿನ ಜೊತೆ ತುಮಕೂರಿಗೆ ಬಂದಿದ್ದೆ. ಅಂದು ಚುಟುಕು ಕವಿಗೋಷ್ಠಿಯಿತ್ತು. ನಾವು ಬರುವ ಹೊತ್ತಿಗೆ ಸರಿಯಾಗಿ ಡುಂಢಿರಾಜರು ರಾವಣನ ಹೆಂಡತಿ ಮಂಡೋದರಿ, ಕನ್ನಡ ಪುಸ್ತಕಗಳನ್ನು ಕೊಂಡೋದಿರಿ ಎಂದು ತಮ್ಮ ಚುಟುಕವನ್ನು ವಾಚಿಸಿದ ಕೂಡಲೇ ಕಿವಿಗಡಚಿಕ್ಕುವಂತೆ ಚಪ್ಪಾಳೆಯ ಸುರಿಮಳೆಯಾಯಿತು. ನಂತರ ಬಹಳ ಜನವಿದ್ದುದರಿಂದಲೋ ಏನೋ ನಮಗಲ್ಲಿ ಬಹಳ ಹೊತ್ತು ನಿಲ್ಲಲಾಗದೆ ನಾವು ಬೇಗ ಹೊರಬಂದೆವು ಎಂಬುದು ನೆನಪು. ಊಟಕ್ಕೆ ತುಂಬಾ ಗಜಿಬಿಜಿಯಿತ್ತು ಮತ್ತು ಪುಸ್ತಕ ಮಾರಾಟ ಮಳಿಗೆಗಳ ಬಳಿ ಬಹಳ ಧೂಳಿತ್ತು ಎಂಬ ಅಸ್ಪಷ್ಟ ನೆನಪು. ಆ ಸಮಯದಲ್ಲಿ ಗುಬ್ಬಿಯ ನಮ್ಮ ರಾಮನ್ ಇನ್‌ಫೋಟೆಕ್ ಕಂಪ್ಯೂಟರ್ ತರಬೇತಿ ಸಂಸ್ಥೆಯಿಂದ ಜ್ಞಾನಪೀಠ ಪ್ರಶಸ್ತಿ ವೀಜೆತ ಕನ್ನಡ ಸಾಹಿತಿಗಳ ಬದುಕು ಬರಹದ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಏರ್ಪಡಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಶೋ ನೀಡಿದ್ದೆವು. ಅದೆಲ್ಲವನ್ನು ವಿದ್ಯಾರ್ಥಿಯಾಗಿದ್ದ ಕೇಶವಮೂರ್ತಿ ಎಂಬುವವರು   ಅಚ್ಚುಕಟ್ಟಾಗಿ ನಿಭಾಯಿಸಿದ್ದರು.   ಅವರೀಗ ಶಿಕ್ಷಕರಾಗಿದ್ದಾರೆ.
          ಸುಮಾರು ದಶಕದ ನಂತರ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಮಯಕ್ಕೆ ನನ್ನ ಮೊದಲ ಪುಸ್ತಕ ಮಳೆಯಾಗು ನೀ... ಪ್ರಕಟವಾಗಿತ್ತು. ಒಂದೇ ಪುಸ್ತಕ ವಿದ್ದದರಿಂದ ಪುಸ್ತಕ ಮಾರಾಟ ಮಳಿಗೆ ಹಾಕುವ ಗೋಜಿಗೆ ಹೋಗಿರಲಿಲ್ಲ. ಮೊದಲ ದಿನವೇ ನಾನು ಬೆಂಗಳೂರಿಗೆ ತೆರಳಿ ನನ್ನ ಕೆಲವು ಕೆಲಸಗಳನ್ನು ಮುಗಿಸಿಕೊಂಡು ಮಧ್ಯಾಹ್ನದ ಸಮಯಕ್ಕೆ ಸಮ್ಮೇಳನದ ಜಾಗಕ್ಕೆ ಭೇಟಿನೀಡಿದ್ದೆ. ಅಲ್ಲೆಲ್ಲಾ ಕೆಲಹೊತ್ತು ಸುತ್ತಾಡಿ ಹುಬ್ಬಳ್ಳಿಯ ಗೆಳೆಯ ರಾಜುಗಡ್ಡಿಯ ಪುಸ್ತಕ ಮಳಿಗೆಗೆ ಬಂದೆ. ಅಲ್ಲಿ ನನ್ನ ಕೆಲವು ಮಳೆಯಾಗು ನೀ... ಕವನ ಸಂಕಲವನ್ನು ಮಾರಾಟಕ್ಕೆ ಇಟ್ಟೆ. ರಾಜುಗಡ್ಡಿಯ ಜೊತೆ ಉಭಯಕುಶಲೋಪರಿ ನಡೆಯಿತು. ಪುಸ್ತಕ ಮಳಿಗೆಗಳ ಬಳಿ ಜನ ಚೆನ್ನಾಗಿಯೇ ಸುಳಿದಾಡುತ್ತಿದ್ದರು.  ರಾಜುಗಡ್ಡಿಯ ಮಳಿಗೆಗೂ ಬಹಳ ಜನ ಬಂದು ಪುಸ್ತಕಗಳನ್ನು ಪ್ರೀತಿಯಿಂದ ಮುಟ್ಟಿ, ಬೆಲೆ ವಿಚಾರಿಸಿ ಸಾಧ್ಯವಿದ್ದರೆ ಕೊಳ್ಳುತ್ತಿದ್ದರು. ರಾಜುವಂತೂ ಆತನ ಪುಸ್ತಕಗಳನ್ನು ಅರ್ಧಬೆಲೆಗೇ ಮಾರುತ್ತಿದ್ದ. ಅಷ್ಟರಲ್ಲಿ ನನ್ನ ಪುಸ್ತಕದ ಮೊದಲ ಪ್ರತಿ ಮಾರಾಟವಾಯಿತು. ಅದನ್ನು ಕೊಂಡವರು ಒಬ್ಬರು ಮಹಿಳೆ. ನಾವೂ ಕವನ ಬರಿತೀವ್ರಿ ಎಂದು ಹೇಳಿ ನನ್ನ ಕವನ ಸಂಕಲನವನ್ನು ಕೊಂಡುಕೊಂಡರು. ಆ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಆ ನಂತರ ಗೆಳೆಯ ಅಜಿತ್ ಕೌಂಡಿನ್ಯ ನಮ್ಮನ್ನು ಸೇರಿಕೊಂಡರು. ಬಹಳ ದಿನಗಳ ನಂತರ ಭೇಟಿಯಾಗಿದ್ದ ರಾಜು ಮತ್ತು ಅಜಿತ್ ಸ್ವಲ್ಪ ಮಾತಾಡಿಕೊಂಡ ನಂತರ ನಾನು ಮತ್ತು ಅಜಿತ್ ಪ್ರಕಾಶ್ ಹೆಗಡೆಯವರನ್ನು ಹುಡುಕುತ್ತಾ ಹೊರಟೆವು. ಅವರು ಎ.ಆರ್. ಮಣಿಕಾಂತ್ ರವರ ನೀಲಿಮಾ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ತಮ್ಮ ಹೆಸರೇ ಬೇಡ ಪುಸ್ತಕ ಮಾರಾಟ ಮಾಡುವುದರಲ್ಲಿ ಬ್ಯುಸಿಯಿದ್ದರು. ನಮ್ಮನ್ನು ಕಂಡವರೇ ಮಳಿಗೆಯ ಒಳಗೆ ಬರಮಾಡಿಕೊಂಡು ಮಣಿಕಾಂತ್ ಸರ್ ರವರನ್ನು ನನಗೆ ಪರಿಚಯಿಸಿದರು. ರೀ... ಗುಬ್ಬಚ್ಚಿ ಸತೀಶ್. ನಿಮ್ಮನ್ನು ಹುಡುಕಿಕೊಂಡು ಯಾರೋ ಹುಡುಗಿಯೊಬ್ಬರು ಬಂದಿದ್ದರು. ಅವರು ನಿಮ್ಮ ಫ್ಯಾನ್ ಅಂತೆ. ನಾನವರಿಗೆ ಇನ್ನೇನು ಅವರು ಬರಬಹುದು ಇರಿ ಎಂದೆ. ಅವರು ಇಲ್ಲಾ ಸರ್, ಹೋಗ್ಬೇಕು. ನಾ ಕೇಳಿದೆ ಎಂದು ಹೇಳಿ ಹೊರಟು ಹೋದರು ಎಂದು ಹೇಳಿದರು. ನಾ ಯಾವ ಹುಡುಗಿ? ಎಂದು ಯೋಚಿಸುತ್ತಲೇ ಅವರಿಗೆ ವಿದಾಯ ಹೇಳಿದೆ. ನಾವು ಅವರ ಮಳಿಗೆಯಿಂದ ಹೊರಬಂದರೂ ಆ ಹುಡುಗಿ ಯಾರಿರಬಹುದೆಂದು ಚಿಂತಿಸುತ್ತಲೇ ನಾನು ಇರುವುದನ್ನು ಕಂಡ ಅಜಿತ್ ಸರ್, ತಲೆಕೆಡಿಸ್ಕೊಬೇಡಿ, ಸುಮ್ನಿರಿ. ಪ್ರಕಾಶ್ ಹೆಗಡೆಯವರು ಎಲ್ಲೋ ಕಾಗೆ ಹಾರಿಸಿದ್ದಾರೆ. ಅವರು ಕಾಗೆ ಹಾರಿಸೋದ್ರಲ್ಲಿ ಎಕ್ಸ್ಪರ್ಟ್ ಎಂದು ನಗುತ್ತಾ ಹೇಳಿ, ನನ್ನ ಚಿಂತೆಯನ್ನು ದೂರಮಾಡಿದರು. ನಂತರ ನಾವಿಬ್ಬರೂ ಸಮ್ಮೇಳನದ ಜಾಗದಿಂದ ಹೊರಬಂದು ಒಟ್ಟಿಗೆ ಊಟ ಮಾಡಿ ನಮ್ಮ ನಮ್ಮ ದಾರಿ ಹಿಡಿದೆವು. ಬಹಳ ಕಾಲದ ನಂತರವಷ್ಟೇ ಅಂದು ಪ್ರಕಾಶ್ ಹೆಗಡೆಯವರು ಹೇಳಿದ್ದು ನಿಜ, ನನ್ನನ್ನು ಹುಡುಕಿ ಬಂದ ಹುಡುಗಿ ಮಂಗಳೂರು ಮೂಲದ, ಕುಣಿಗಲ್ ನಿವಾಸಿ ಶುಭರೇಖಾ ಎಂದು ತಿಳಿಯಿತು.
          ಆ ದಿನ ಬೆಂಗಳೂರಿನಲ್ಲೆ ಉಳಿದುಕೊಂಡ ನಾನು ಮರುದಿನ ನನ್ನ ಶ್ರೀಮತಿಯನ್ನು  ಕರೆದುಕೊಂಡು ಸಮ್ಮೇಳನಕ್ಕೆ ಹೋದೆ. ಅಲ್ಲಿ ರಾಜುವಿನ ಮಳಿಗೆಯಲ್ಲಿ ನಾವಿಬ್ಬರು ಸ್ವಲ್ಪ ಹೊತ್ತು ಪುಸ್ತಕಗಳ ಮಾರಾಟವನ್ನು ಗಮನಿಸುತ್ತಾ ರಾಜುವಿನೊಡನೆ   ಹರಟಿ ಹಿಂದಿರುಗಿದೆವು. ಅದು ನಮ್ಮಿಬ್ಬರ ಮೊದಲ ಸಾಹಿತ್ಯ ಸಮ್ಮೇಳನವಾದರೂ ನಾವೇನೂ   ಸಕ್ರಿಯವಾಗಿ ಭಾಗಿಯಾಗಿರಲಿಲ್ಲ.
          ೭೯ನೇ ಅಖಿಲ ಭಾರತ ಕನ್ನಡ ಸಮ್ಮೇಳನ ವಿಜಾಪುರದಲ್ಲಿ ಫೆಬ್ರವರಿ ೮, ೯ ಮತ್ತು ೧೦ ಎಂದು ಪತ್ರಿಕೆಗಳಲ್ಲಿ ಪ್ರಕಟವಾದದ್ದೇ ತಡ, ನಮ್ಮ ಪ್ರಕಾಶನದಿಂದ ಪುಸ್ತಕ ಮಳಿಗೆ ಅರ್ಜಿ ಹಾಕಿದೆವು. ಹುಬ್ಬಳಿಯ ಗೆಳೆಯ ರಾಜುವಿಗೂ ಒಂದು ಮಳಿಗೆ ಎಂದು ಒಟ್ಟಿಗೆ ಎರಡು ಮಳಿಗೆಗೆ ಡಿ.ಡಿ. ಕಳುಹಿಸಿದೆವು. ನಂತರ ಸಮ್ಮೇಳನ ಒಂದು ದಿನ ಮುಂದಕ್ಕೆ ಹೋಯಿತು. ಅಂದರೆ, ೯, ೧೦ ಮತ್ತು ೧೧ ರಂದು ಎಂದು ಪ್ರಕಟವಾಯಿತು. ಸರಿ, ನಮ್ಮ ಪ್ರಕಾಶನದ ಮೊದಲ ಸಮ್ಮೇಳನಕ್ಕೆ ತಯಾರಿ ನಡೆಸಿದೆವು. ಮೊದಲಿಗೆ ನಾನು ಒಬ್ಬ ಹುಡುಗನನ್ನು ಕರೆದುಕೊಂಡು ಹೋಗುವುದೆಂದು ತೀಮಾರ್ನಿಸಿ ಬಸ್ಸೇ ಸರಿ ಎಂದು ಫೆಬ್ರವರಿ ರಾತ್ರಿ ೮.೩೦ಕ್ಕೆ ಹೊರಡುವ ವಿ.ಆರ್.ಎಲ್ ಬಸ್ಸಿಗೆ ಎರಡು ಟಿಕೆಟ್ ಬುಕ್ ಆಯಿತು. ನಂತರ ನನ್ನೊಬ್ಬನನ್ನೇ ಕಳುಹಿಸಲು ಇಚ್ಚಿಸದ ನನ್ನ ಮಡದಿ ಮತ್ತೊಂದು ಟಿಕೆಟ್ ಬುಕ್ ಮಾಡಿದಳು. ನಮ್ಮೊಡನೆ ಬರಲು ಒಪ್ಪಿದ ಹುಡುಗ ಗೆಳೆಯ ಚಿದು (ಸಹೋದ್ಯೋಗಿ ಗೆಳೆಯ ಮತ್ತು ನಮ್ಮ ಮಾಸಪತ್ರಿಕೆಯ ಉಪಸಂಪಾದಕರಾದ ಟಿ.ಜೆ.ಚಿದಾನಂದಮೂರ್ತಿ)ವಿನ ಅಣ್ಣನ ಮಗ ದರ್ಶನ್.
          ನಮ್ಮ ಪ್ರಕಾಶನದ ಏಳು ಪುಸ್ತಕಗಳ ಜೊತೆ, ನಮ್ಮ ಕಾಲೇಜ್ ಡೈರಿ ಮಾಸಪತ್ರಿಕೆ ಮತ್ತು ತುಮಕೂರಿನ ಕೆಲವು ಸಾಹಿತಿಗಳ ಪುಸ್ತಕಗಳನ್ನು ತೆಗೆದುಕೊಂಡು ೮ರ ರಾತ್ರಿ ೮ಕ್ಕೆ ಮನೆಯಿಂದ ಹೊರಟೆವು. ನಮಗೆ ಮನೆಯಿಂದ ಆಟೋ ಸಿಗುವುದು ತುಸು ಗಡಿಬಿಡಿಯಾಯಿತು. ಜೊತೆಗೆ ಸಮಯಕ್ಕೆ ಸರಿಯಾಗಿ ಬಸ್ಸು ಬರಲಿಲ್ಲ. ೯.೩೦ರ ಸುಮಾರಿಗೆ ಬಂದ ಬಸ್ ಅರ್ಧಗಂಟೆ ಪ್ರಯಾಣ ಬೆಳೆಸಿ ಊಟಕ್ಕೆ ತುಮಕೂರಿನ ಹೊರವಲಯದಲ್ಲಿ ನಿಂತಿತು. ಅಲ್ಲಿ ಊಟ ಮಾಡಿ ಬರುವಷ್ಟರಲ್ಲಿ ಬೆಂಗಳೂರಿನಿಂದ ಬಂದಿದ್ದ ಸಹಪ್ರಯಾಣಿಕರೊಬ್ಬರ ಬ್ಯಾಗ್ ಸಮೇತ ಲ್ಯಾಪ್‌ಟಾಪ್ ಕಳೆದುಹೋಗಿತ್ತು. ಪೋಲಿಸರು ಬಂದು ಕೇಸ್ ತೆಗೆದುಕೊಳ್ಳುವವರೆಗೂ ಆ ಪ್ರಕರಣ ಮುಗಿಯಲಿಲ್ಲ. ಸುಮಾರು ಒಂದುವರೆ ಘಂಟೆಯ ನಂತರ ಹೋಟೆಲ್ ಬಿಟ್ಟು ಬಸ್ ಹೊರಟಿತು. ಮಧ್ಯ ಒಂದೆರಡು ಸ್ಟಾಪ್ ಬಿಟ್ಟರೆ ಎಲ್ಲೂ ನಿಲ್ಲದ ಬಸ್ ೯ರ ಬೆಳಿಗ್ಗೆ ಸುಮಾರು ೭.೩೦ಕ್ಕೆ ವಿಜಾಪುರ ತಲುಪಿತು. ನಾನು ರಾತ್ರಿಯೆಲ್ಲಾ ಎಚ್ಚರದಿಂದಲೇ ಇದ್ದೆ. ಕಾರಣ!? ಹೀಗಾಗಬಹುದು ಎಂದು ನನ್ನ ಸಹೋದ್ಯೋಗಿ ಗೆಳೆಯರೊಬ್ಬರು ಮೊದಲೇ ಹೇಳಿದ್ದರು : ವಿ.ಆರ್.ಎಲ್. ಬಸ್ ಚೆನ್ನಾಗಿಯೇ ಇರುತ್ತೆ. ಆದರೆ, ಯಾರಾದರೂ ಕಿಟಕಿ ತೆಗೆದುಕೊಂಡು ಕುಳಿತರೆ ಅದರಲ್ಲೂ ಮಹಿಳೆಯರಾದರೆ ಕಿಟಕಿಯಿಂದ ಒಳನುಗ್ಗುವ ಗಾಳಿಗೆ ಮಲಗಿದ ಹಾಗೆಯೇ ಎಂದು. ಅದು ನಿಜವಾಯಿತು. ನನ್ನ ದುರಾದೃಷ್ಟಕ್ಕೆ ಮುಂದೆ ಕುಳಿತಿದ್ದ ಮಹಾತಾಯಿಯೊಬ್ಬಳು ರಾತ್ರಿಯೆಲ್ಲಾ ಮತ್ತು ಮುಂಜಾವಿನಲ್ಲೂ ತನ್ನ ಕೂದಲುಗಳನ್ನು ಕೆದರಿಕೊಂಡು ಕಿಟಕಿಗೆ ತಲೆ ಇಟ್ಟೇ ಕೂತಿದ್ದಳು. ಎರಡು ಬಾರಿ ನಾನೇ ಎದ್ದು ಹೋಗಿ ಕಿಟಕಿ ಮುಚ್ಚಿ ಮಲಗಲು ಯತ್ನಿಸಿದರೂ ಆ ಮಹಾತಾಯಿ ಅದ್ಯಾವ ಮಾಯದಲ್ಲೋ ಕಿಟಕಿ ತೆರೆದು ಬಿಡುತ್ತಿದ್ದಳು. ಇದ್ದುದರಲ್ಲಿ ನನ್ನ ಶ್ರೀಮತಿ ಮತ್ತು ದರ್ಶನ್ ಚೆನ್ನಾಗಿಯೇ ನಿದ್ರಿಸಿದ್ದರು.
          ಸರಿಯಾದ ಸಮಯಕ್ಕೆ ನಾವು ವಿಜಾಪುರ ತಲುಪಿದ್ದೆವು. ರಾಜು ಹೇಳಿಟ್ಟಿದ್ದ ಲಾಡ್ಜ್ ಬಳಿಗೆ ಹೋದೆವು. ಅಲ್ಲಿ ರಾಜು ಬರುವವರೆಗೂ ಲಾಡ್ಜ್ ನವರು ಕಿರಿಕಿರಿ ಮಾಡಿದರು. ಎಲ್ಲವನ್ನೂ ನಿಭಾಯಿಸಿ ನಾವು ಸಮ್ಮೇಳನ ನಡೆಯುತ್ತಿದ್ದ ಸೈನಿಕ್ ಸ್ಕೂಲ್ ಬಳಿ ತೆರಳಿದೆವು. ಅಲ್ಲಿ ಅಂದುಕೊಂಡಂತೆ ಪುಸ್ತಕದ ಬ್ಯಾಗ್‌ಗಳನ್ನು ಮತ್ತು ಬಂಡಲ್‌ಗಳನ್ನು ತಲೆ ಮೇಲೆ ಹೊತ್ತು ಹೋಗಬೇಕಾಯಿತು. ಹೀರೋ ದರ್ಶನನಂತ ದರ್ಶನ್ ನಮ್ಮ ಜೊತೆ ಇದ್ದುದರಿಂದ ಈ ಕೆಲಸ ಸಲೀಸಾಯಿತು. ನಮಗೆ ಕಾದಿರಿಸಿದ್ದ ಮಳಿಗೆ (ನಂ.೮೪) ಯ ಬಳಿ ಹೋದರೆ ಅಲ್ಲಿ ಕೆಲವು ಚೇರ್‌ಗಳನ್ನು ಮತ್ತು ಟೇಬಲ್‌ಗಳನ್ನು ಯಾರೋ ಅದಾಗಲೇ ಅಪಹರಿಸಿಯಾಗಿತ್ತು. ಇದು ಎಲ್ಲಾ ಕಡೆ ಮಾಮೂಲು ಎಂಬ ವಿಷಯ ನಮಗಾಗಲೇ ತಿಳಿದಿತ್ತು. ಮತ್ತೆ ನಾವು ಒಂದಷ್ಟು ಟೇಬಲ್ ಮತ್ತು ಚೇರ್‌ಗಳನ್ನ ಹೊಂಚಿಕೊಂಡು ಬಂದು ನಮ್ಮ ಮಳಿಗೆಯನ್ನು ವ್ಯಾಪಾರಕ್ಕೆ ಸಜ್ಜು ಗೊಳಿಸಿದೆವು. ಅಷ್ಟರಲ್ಲಿ ಮೊದಲೇ ಹೇಳಿ ತರಿಸಿದ್ದ ಗೆಳೆಯರಾದ ಕೆ. ಗಣೇಶ್ ಕೋಡೊರ್‌ರವರ ಬೆನಕ ಬುಕ್ಸ್ ಬ್ಯಾಂಕಿನ ಕೆಲವು ಪುಸ್ತಕಗಳು ನಮ್ಮ ಕೆಲವೇ ಕೆಲವು ಪುಸ್ತಕಗಳನ್ನು ಸೇರಿಕೊಂಡವು. ನಮ್ಮ ಪ್ರಕಾಶನದ ಮೊಟ್ಟ ಮೊದಲ ಕನ್ನಡ ಸಮ್ಮೇಳನದ ಪುಸ್ತಕ ವ್ಯಾಪಾರ ಶುರುವಾಯಿತು. ಆ ಸಮಯಕ್ಕೆ ಸರಿಯಾಗಿ ರಾಜು ಗಡ್ಡಿ ಬಂದು ಅವರಿಗೆ ನಿಗದಿಯಾಗಿದ್ದ ನಮ್ಮ ಪಕ್ಕದ ಮಳಿಗೆಯನ್ನು ವ್ಯಾಪಾರಕ್ಕೆ ಸಜ್ಜುಗೊಳಿಸಿಕೊಂಡರು. ನಮ್ಮ ಅಕ್ಕಪಕ್ಕದ ಮಳಿಗೆಗಳಲ್ಲಿ ಗದಗದ ಕಡೆಯ ಕೆಲವು ಮಳಿಗೆಗಳಿದ್ದವು. ಕೊಂಚ ದೂರದಲ್ಲೇ ವಸುಧೇಂದ್ರ್ರರ ಛಂದ ಪುಸ್ತಕದ ಮಳಿಗೆಯಿತ್ತು. ಮತ್ತೂ ಸ್ವಲ್ಪ ದೂರಕ್ಕೆ ಲಡಾಯಿ ಪ್ರಕಾಶನದ ಮಳಿಗೆಯಿತ್ತು. ಇನ್ನೂ ಜನರು ಅಷ್ಟಿರಲಿಲ್ಲವಾದ್ದರಿಂದ ನಾನು ವಸುಧೇಂದ್ರರ ಬಳಿ ಹೋಗಿ ಮಾತನಾಡಿಕೊಂಡು ಬಂದೆ.
          

       ರಾಜು ಮೊದಲೇ ಹೇಳಿದಂತೆ ಮೊದಲ ದಿನ ಜನ ಬಂದು ಪುಸ್ತಕ ನೋಡಿಕೊಂಡು ಹೋಗುತ್ತಾರೆ ಎಂಬ ಮಾತು ನಿಜವಾಯಿತು. ಜನ ಬಂದು ಬಂದು ಪುಸ್ತಕಗಳನ್ನು ನೋಡಿ, ಮುಟ್ಟಿ, ಬೆಲೆ ಕೇಳಿ ಹೋಗಿದ್ದೆ ಹೆಚ್ಚಾಯಿತು. ವ್ಯಾಪಾರ ಅಷ್ಟಕಷ್ಟೆ ಎಂಬಂತಾಯಿತು. ಊಟದ ವೇಳೆಗೆ ನಾನು ಅಲ್ಲಿ ಊಟ ನೀಡುವ ಜಾಗಕ್ಕೇ ಹೋಗಿ ಸಾಹಸ ಮಾಡಿ ಊಟ ಮಾಡಿ ಬಂದೆ. ಆದರೆ, ಇವರಿಬ್ಬರೂ ಆ ಜನಸಂದಣಿಯಲ್ಲಿ ಊಟಕ್ಕೆ ಹೋಗಲಾಗಲಿಲ್ಲ. ಅವರಿಬ್ಬರಿಗೂ ಬಾಳೆಹಣ್ಣು, ಜ್ಯೂಸ್ ಅಷ್ಟೇ ಸಿಕ್ಕಿದ್ದು. ಅದು ಕಷ್ಟಬಿದ್ದು ಹೊರಗಡೆ ಬಂದು ಕೊಂಡುಕೊಂಡದ್ದು. ರಾತ್ರಿ ನಿದ್ದೆಯಿಲ್ಲದ ಕಾರಣ, ಜೊತೆಗೆ ಬಿಸಿಲು ಮತ್ತು ಧೂಳಿನ ಮಹಿಮೆಗೆ ನಿದ್ರೆ ವತ್ತರಿಸಿ ಬರುತ್ತಿತ್ತು. ಮಳಿಗೆಯ ಒಳಗೆ ಸ್ವಲ್ಪ ಜಾಗ ಮಾಡಿಕೊಂಡು ನಾನು ಮಲಗಿದೆ. ನಿದ್ದೆಯೋ ನಿದ್ದೆ. ಆ ನಂತರ ಸರದಿಯ ಮೇಲೆ ಇವರಿಬ್ಬರೂ ಮಲಗಿದರು. ಅಷ್ಟರಲ್ಲಿ ನನ್ನನ್ನು ಹುಡುಕಿಕೊಂಡು ಹಲವರು ಬಂದು, ಮಲಗಲಿ ಬಿಡಿ ನಂತರ ಬರುತ್ತೇವೆ ಎಂದು ಹೋರಟು ಹೋಗಿದ್ದರು. ಅದರಲ್ಲಿ ಬಹುಮುಖ್ಯವಾದವರು ನಾರಾಯಣ ಬಾಬಾನಗರ. ನಾನೂ ಅವರನ್ನು ಭೇಟಿಯಾಗಲು ಕಾತರಿಸುತ್ತಿದ್ದೆ. ಸಂಜೆಯ ಹೊತ್ತಿಗೆ ವ್ಯಾಪಾರ ಸ್ವಲ್ಪ ಕುದುರಿತ್ತು. ಹಾಗೂ ಹೀಗೂ ರಾತ್ರಿಯಾಯಿತು. ವ್ಯಾಪಾರ ಅಷ್ಟಕಷ್ಟೆ ಇದ್ದುದರಿಂದ ನಾನು ದರ್ಶನ್ ಹೋಗಿ ಅಲ್ಲೇ ಊಟ ಮಾಡಿ ಬಂದೆವು. ನನ್ನ ಶ್ರೀಮತಿಗೂ ಅಲ್ಲಿಂದಲೇ ಊಟ ತಂದೆವು. ಸುಮಾರು ೧೦ ಗಂಟೆಯವರೆಗೂ ಮಳಿಗೆಯಲ್ಲೇ ಇದ್ದು ದರ್ಶನನನ್ನು ರಾಜುವಿನ ಜೊತೆ ಮಳಿಗೆಯಲ್ಲೇ ಮಲಗಲು ಬಿಟ್ಟು ನಾವು ಲಾಡ್ಜಿನ ಹಾದಿ ಹಿಡಿದೆವು.
          ಪುಸ್ತಕ ಮಳಿಗೆಗಳಿಂದ ಮುಖ್ಯರಸ್ತೆಗೆ ಬರುವ ದಾರಿಯಲ್ಲೇ  ರಾತ್ರಿ ಹತ್ತಾದರೂ ಜನ ಕಿಕ್ಕಿರಿದು ತುಂಬಿದ್ದರು. ಕಾರಣ ಬೀದಿ ಬದಿಯ ವ್ಯಾಪರಿಗಳ ಭರಾಟೆ. ಅಲ್ಲಿ ಅಕ್ಷರಶಃ ಜಾತ್ರೆ ನೆರೆದಿತ್ತು. ನಾವು ಜಾಗ ಮಾಡಿಕೊಂಡು ಮುಖ್ಯ ರಸ್ತೆಯ ಬಳಿ ನಡೆಯುತ್ತಿದ್ದಾಗ ಒಂದು ಸೋಜಿಗ ನಡೆಯಿತು. ಅಲ್ಲಿ ತುಂಬಾ ಕತ್ತಲಿತ್ತು. ಆ ಜಾಗದಲ್ಲಿ ಎರಡು ಸೀಮೆ‌ಎಣ್ಣೆ ಬುಟ್ಟಿಗಳನ್ನು ತನ್ನೆರಡು ಬದಿಗಳಲ್ಲಿ ಇರಿಸಿಕೊಂಡು ಒಬ್ಬ ವ್ಯಕ್ತಿ ಕುಳಿತ್ತಿದ್ದ. ಆ ಎರಡು ಬದಿಗೆ ಅತ್ತಿಂದತ್ತ್ತ ಹುಳವೊಂದು ಸರಸರನೆ ಓಡಾಡುತ್ತಿತ್ತು. ಮೊದಲಿಗೆ ನಾವದನ್ನು ಸರಿಯಾಗಿ ಗಮನಿಸಲಿಲ್ಲ. ಯಾವುದೋ ಹುಳವಿರಬೇಕೆಂದು ನಮ್ಮ ನಮ್ಮಲ್ಲಿಯೇ ಅದರ ಬಗ್ಗೆ ಮಾತಾಡಿಕೊಂಡು ಮುಂದೆ ಮುಂದೆ ಹೋಗಿಬಿಟ್ಟೆವು. ನಮಗೆ ಕುತೂಹಲ ಇಮ್ಮಡಿಯಾಯಿತು. ತಡೆಯಲಾಗಲಿಲ್ಲ. ಮತ್ತೆ ಹಿಂದಿರುಗಿ ಬಂದು ಸ್ವಲ್ಪ ಗಮನಿಸಿ ನೋಡಿದೆವು. ಆತ ತನ್ನೆರಡು ಕೈಗಳನ್ನು ಮೇಲೆ ಎತ್ತಿಡಿದಿದ್ದನ್ನು ಗಮನಿಸಿದಾಗ ಗೊತ್ತಾಯಿತು ಆತನ ಕೈ ಬೆರಳುಗಳು ಆ ಹುಳವನ್ನು ನಿಯಂತ್ರಿಸುತ್ತಿವೆ. ಮತ್ತೂ ಗಮನಿಸಿದಾಗ ತಿಳಿಯಿತು ಆ ಹುಳು ಪ್ಲಾಸ್ಟಿಕ್ಕಿನದು. ಆತನ ಬಳಿ ಇನ್ನೂ ಆ ರೀತಿಯ ಹಲವು ಹುಳುಗಳಿವೆ ಎಂದು. ಆತ ಜನರಿಗೆ ತನ್ನ ಕಣ್ಕಟ್ಟೋ ಆಟದಿಂದ ಮರಳು ಮಾಡುತ್ತಿದ್ದಾನೆ. ಅಯ್ಯೋ ಇಷ್ಟೇ ಎಂದು ನಾವು ಅಲ್ಲಿಂದ ತೆರಳಿದೆವು. ಜನಮರುಳೋ ಜಾತ್ರೆ ಮರುಳೋ ಅನ್ನುವ ಮಾತು ಅಲ್ಲಿ ಸಾಬೀತಾಗಿತ್ತು.
          ಬೆಳಿಗ್ಗೆಯಿಂದ ಕಾಫಿ ಕುಡಿಯದೇ ಇದ್ದ ನಾನು ಸುಮಾರು ೧೦.೩೦ರ ಸುಮಾರಿಗೆ ಅಲ್ಲೊಂದು ಹೋಟೆಲ್ಲಿಗೆ ಹೋಗಿ ಕಾಫಿ ಸಿಗುವುದನ್ನು ಖಚಿತಪಡಿಸಿಕೊಂಡು ಆರ್ಡರ್ ನೀಡಿದೆ. ವಿಜಾಪುರದಲ್ಲಿ ಜಾಸ್ತಿ ಟೀ ಮಾರುತ್ತಾರೆ. ಬಹಳ ಹೊತ್ತಿನ ನಂತರ ಹೋಟೋಲ್ ಮಾಲೀಕನೇ ಕಾಫಿ ತಗೆದು ಕೊಂಡು ಬಂದರು. ನೋಡಿದರೆ ಬಿಳಿ ಬಿಳಿ ಕಾಫೀ. ನಗುತ್ತಾ ಅದನ್ನೇ ಕುಡಿದೆವು. ನಂತರ ಲಾಡ್ಜಿಗೆ ಮರಳಿ ದಿಂಬಿಗೆ ತಲೆಕೊಟ್ಟರೆ ಆ ಕಣ್ಕಟ್ಟ ಹುಳು ಕಣ್ಣ ಮುಂದೆ ಸುಳಿಯುತ್ತಿತ್ತು. ನಿದ್ದೆ ಹತ್ತುತ್ತಿಲ್ಲ. ಕಾರಣ ಸೊಳ್ಳೆ ಮತ್ತು ಅವುಗಳಿಗಿಂತ ನಮ್ಮನ್ನು ತಮ್ಮ ಸೈನ್ಯದ ಸಮೇತ ಮುತ್ತಿಕ್ಕುತ್ತಿದ್ದ ರಕ್ತಬಿಜಾಸುರ ತಿಗಣೆಗಳ ಸೈನ್ಯ!
 (Continues...)


ಶುಕ್ರವಾರ, ಮಾರ್ಚ್ 15, 2013

ಕಲರ್‌ಫುಲ್ “ಮೈನಾ”


   
       ಉಸೇನ್ ಬೋಲ್ಟ್ ನಂತೆ ನಾಯಕ ಓಡುತ್ತಾನೆ. ಇವನ ಓಟ ಓಲಂಪಿಕ್ಸ್ ನಲ್ಲಿ ಗೆಲ್ಲಲ್ಲಿಕ್ಕೆ ಅಲ್ಲ. ಅವನ ಪ್ರೇಯಸಿಯನ್ನು ಸೇರಲಿಕ್ಕೆ. ಆದರೂ ಅವನನ್ನು ಹಿಡಿಯಲು ಸಾಧ್ಯವೇ ಇಲ್ಲದಂತೆ ಓಡುವ ಪೋಲೀಸ್ ಇನ್ಸ್‍ಪೆಕ್ಟರ್ ಅವನನ್ನು ಬೆಂಬಿಡದೆ ಹಿಂಬಾಲಿಸುತ್ತಾನೆ. ಸಮುದ್ರದ ದಂಡೆಯಲ್ಲಿನ ಚೇಸಿಂಗ್ ಸಮುದ್ರದೊಳಕ್ಕೆ ಶಿಫ್ಟ್ ಆಗುತ್ತದೆ. ನಾಯಕ ಬೋಟ್‌ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾಗಿ ಸಮುದ್ರದೊಳಕ್ಕೆ ಬೀಳುತ್ತಾನೆ. ಅವನ ಹಿಂದೆಯೇ ಬೋಟ್‌ನಿಂದ ಸಮುದ್ರಕ್ಕೆ ಚಿಮ್ಮುವ ಇನ್ಸ್‍ಪೆಕ್ಟರ್ ನ ಪ್ರಯತ್ನ ಗ್ಯಾರಂಟಿ ವಿಫಲವಾಗುತ್ತದೆ ಎನ್ನುವಷ್ಟರಲ್ಲಿ ಒಬ್ಬನೇ ಎದ್ದ ಇನ್ಸ್‍ಪೆಕ್ಟರ್ ಕೈಯಲ್ಲಿ ಬೇಡಿಯಿಂದ ಬಂಧಿತನಾದ ಸೋತ ನಾಯಕನಿರುತ್ತಾನೆ. ಕಾಣದ ಕಡಲಿಗೆ... ಹಂಬಲಿಸಿದೇ ಮನ... ಕಾಣದ ಕಡಲಿಗೆ... ಹಂಬಲಿಸಿದೇ ಮನ... ಮನ... ಕಾಣಬಲ್ಲನೇ ಒಂದು ದಿನ, ಕಡಲನ್ನು ಕೂಡಬಲ್ಲನೇ ಒಂದು ದಿನ, ಕಾಣಬಲ್ಲನೇ ಒಂದು ದಿನ, ಕಡಲನ್ನು ಕೂಡಬಲ್ಲನೇ ಒಂದು ದಿನ ರಾಷ್ರಕವಿ ಜಿ.ಎಸ್. ಶಿವರುದ್ರಪ್ಪನವರ ಗೀತೆಯ ಮೊದಲ ಸಾಲುಗಳು ಸಿರಿಕಂಠದ ಸಿ.ಅಶ್ವಥ್ ಧ್ವನಿಯಲ್ಲಿ ನಿಮ್ಮ ಮನೆಯಲ್ಲಿಯೇ ಮೊಳಗಿದಂತೆ ಮೊಳಗತೊಡಗುತ್ತವೆ. ಪ್ರೇಕ್ಷಕರೆಲ್ಲಾ beginning ಚೆನ್ನಾಗಿದೆ ಎಂದು ಚಿತ್ರದಲ್ಲಿ ತನ್ಮಯರಾಗುತ್ತಾರೆ.
...
          ನಾಯಕಿ ಕಲರ್‌ಫುಲ್... ಎಂದು ಕೂಗುತ್ತಾಳೆ. ಲವ್ ಯು... ಎನ್ನುತ್ತಾಳೆ. ಅವಳು ಈ ಮಾತನ್ನು ಹೇಳುವುದು ಅವಳಷ್ಟೇ ಸುಂದರವಾದ ದೂದ್‌ಸಾಗರ್ ಜಲಪಾತಕ್ಕೆ. ನಾಯಕ ಬೆರಗಿನಿಂದ ಅವಳನ್ನೇ ನೋಡಿದಾಗ ಕಲರ್ ಫುಲ್ ಮತ್ತು ಲವ್ ಯು ಎರಡಕ್ಕೂ ಒಂದೇ ಉಚ್ಚಾರ ಎನ್ನುತ್ತಾಳೆ. ಅವಳ ತುಟಿಗಳನ್ನು ಚಲಿಸಿ ತೋರಿಸುತ್ತಾಳೆ. ನಾಯಕನೂ ಅವಳಂತೆಯೇ ಕಲರ್ ಫುಲ್, ಲವ್ ಯು ಎಂದು ರೋಮಾಂಚನಗೊಳ್ಳುತ್ತಾನೆ. ರೈಲಿನ ದಿನನಿತ್ಯದ ಪ್ರಯಾಣದಲ್ಲಿ ಹೀಗೆ ಸಾಗುವ ಅವರ ಮಾತುಕತೆ ಮುಂದುವರೆದು ನಾಯಕಿ ಅವನನ್ನು ಪ್ರೀತಿಸಲು ತೊಡಗುತ್ತಾಳೆ. ಒಮ್ಮೆ ಅವಳ ಬ್ಯಾಗನ್ನು ಕಳ್ಳನೊಬ್ಬ ಅಪಹರಿಸಿದಾಗ ಅಲ್ಲಿಯವೆರಗೂ ಕಾಲಿಲ್ಲದ ಭಿಕ್ಷುಕನಂತೆ ನಟಿಸುವ ನಾಯಕ ಚಂಗನೆ ರೈಲಿನಿಂದ ಜಿಗಿದು ಓಡಿ ಕಳ್ಳನಿಗೆ ಡಿಶುಂ ಡಿಶುಂ ಮಾಡಿ ಅವಳ ಬ್ಯಾಗನ್ನು ಮರಳಿ ತರುತ್ತಾನೆ. ಅವನು ರೈಲಿನಿಂದ ಚಂಗನೆ ಜಿಗಿಯುವವರೆಗೂ ಅವನಿಗೆ ನಿಜವಾಗಲೂ ಕಾಲಿಲ್ಲ ಎಂದು ನಂಬಿದ್ದ ನಾಯಕಿಗೆ ಬರಸಿಡಿಲು ಎರಗಿದಂತಾಗುತ್ತದೆ. ...   ಏಕೆಂದರೆ ಅವಳಿಗೂ ಕಾಲಿರುವುದಿಲ್ಲ! ತೆವಳಿಕೊಂಡೆ ರೈಲಿನಿಂದ ಇಳಿಯುವ ಆಕೆ ಫ್ಲಾಟ್‌ಫಾರ್ಮಿನ ಮೇಲೆ ಕುಸಿದು ಕೂಡುತ್ತಾಳೆ. ... ನೀನು ಸುಳ್ಳುಗಾರ ಅನ್ನುತ್ತಾಳೆ ಅವಳು. ಅವನು ಮೌನದಿಂದ ಅವಳನ್ನೇ ನೋಡುತ್ತಾನೆ. II Hate Youe U ಅನ್ನುತ್ತಾಳೆ. ನೀನು ಈಗಲೂ ನನ್ನನ್ನು ಪ್ರೀತಿಸುತ್ತೀಯಾ? ಎನ್ನುತ್ತಾಳೆ. ಅವನು ಮೌನ ಮುರಿದು, ನಾನು ನಿನ್ನ ಬಗ್ಗೆ ಎಲ್ಲಾ ತಿಳಿದೇ ನಿನ್ನನ್ನು ಪ್ರೀತಿಸುತ್ತೇನೆ ಎನ್ನುತ್ತಾನೆ ಅವನು. ... ಅವರಿಬ್ಬರೂ ಮಂಡಿಯೂರಿಯೇ ಆಲಂಗಿಸುತ್ತಾರೆ. ಅವಳನ್ನು ಅವನು ಅನಾಮತ್ತು ಎತ್ತಿಕೊಂಡು ತಿರುಗಿಸುತ್ತಾನೆ. ಅವರ ಆನಂದಕ್ಕೆ, ಪ್ರೀತಿಯ ಪರಮೋತ್ಕರ್ಷಕ್ಕೆ ಸಾಟಿಯೇ ಇಲ್ಲ. ಇವರ ಆನಂದಕ್ಕೆ ಬಾನು ಭೂಮಿ ಒಂದಾದಂತೆ ನೋಡುಗರ ಎದೆಯಲ್ಲಿ ಮಿಂಚಿನ ಸಂಚಾರವಾಗುತ್ತದೆ. ಮೈಮರೆತ ಮನಸ್ಸುಗಳು ವಾವ್!, ಪ್ರೀತಿ ಎಂದರೆ ಹೀಗಿರಬೇಕು ಎಂದು ಮನದಲ್ಲಿ ಅಂದುಕೊಂಡು ಆನಂದದಲ್ಲಿ ಮುಳುಗುತ್ತಾರೆ. ಕಡೆಗೂ ಒಂದು ಉತ್ತಮ ಕಥೆಯುಳ್ಳ ಕನ್ನಡ ಸಿನಿಮಾಗೆ ಬಂದೆವು ಅಂದುಕೊಳ್ಳತೊಡಗುತ್ತೇವೆ. ಅದು ಸಿನಿಮಾದ Middle. I mean Interval.
...
          ನಾಯಕನು ನಿರಪರಾಧಿ ಎಂಬುದು ಇನ್ಸ್‍ಪೆಕ್ಟರ್ ಗೆ ಗೊತ್ತಾಗಿದೆ. ಅವನು ಮಾಡಿರುವ ಅಪರಾಧವೂ ಪೂರ್ವ ನಿರ್ಧರಿತವಲ್ಲ ಎಂದು ಅರಿವಾಗಿದೆ. ಆದ್ದರಿಂದ ಬೇರೆಯಾದ ನಾಯಕ ನಾಯಕಿಯನ್ನು ಏನಾದರೂ ಮಾಡಿ ಸೇರಿಸಬೇಕೆಂಬ ಹಠ. ಆದರೆ ಅವನು ಅಸಹಾಯಕ. ಅಷ್ಟರಲ್ಲಿ ನಾಯಕಿಯನ್ನು  ಅನಾಥಶ್ರಮಕ್ಕೆ ಸೇರಿಸುವ ವಿಚಾರ ನಾಯಕನಿಗೆ ತಿಳಿಯುತ್ತದೆ. ಅವನು ತಪ್ಪಿಸಿಕೊಂಡು ಬಿಡುತ್ತಾನೆ. ಮತ್ತು ಇನ್ಸ್‍ಪೆಕ್ಟರ್ ಗೆ ಇದು ತಲೆನೋವಾಗುತ್ತದೆ. ನಾನು ಏನಾದರೂ ಮಾಡುತ್ತಿದ್ದೆ, ಇವನು ಯಡವಟ್ಟು ಮಾಡಿಕೊಂಡ ಎಂದು ಪರಿತಪ್ಪಿಸುತ್ತಾನೆ. ಅದು Climax.

           ನಾಯಕ ತನ್ನ ಗೆಳೆಯನ ಸಹಾಯದಿಂದ ನಾಯಕಿಯನ್ನು ತನ್ನ ಊರಿಗೆ ಕರೆದುಕೊಂಡು ಹೋಗುವ ಹುನ್ನಾರದಲ್ಲಿದ್ದಾಗ ರೈಲ್ವೇಸ್ಟೇಷನ್‌ನಲ್ಲಿ ಬಿಗಿ ಫೊಲೀಸ್ ಕಾವಲಿನಲ್ಲಿ ನಾಯಕನ ಬರುವಿಕೆಗೆ ನಾಯಕಿ ಚಡಪಡಿಸುತ್ತಿರುತ್ತಾಳೆ. ಜೊತೆಗೆ ಫೋಲಿಸರ ಕಣ್ತಪ್ಪಿಸಿ ನಾಯಕನನ್ನು ಕೊಲ್ಲುವ ಸಂಚಿನ ಹೋಮ್ ಮಿನಿಸ್ಟರ್ ಕಡೆಯ ವಿಲನ್‌ಗಳು. ಈ ವಿಲನ್‌ಗಳನ್ನು ಹಿಂಬಾಲಿಸುವ ಮತ್ತಷ್ಟು ಫೋಲಿಸರು. ಇವರೆಲ್ಲರ  ನಡುವೆ ನಾಯಕಿ ಹುಲಿಯನ್ನು ಸೆರೆಯಿಡಿಯಲು ಬೇಟೆಗಾರರು ಕಟ್ಟಿ ಹಾಕಿದ ಕುರಿಯಂತೆ ತೋರುತ್ತಾಳೆ. ಆಗ ಮತ್ತೊಮ್ಮೆ ಕಾಣದ ಕಡಲಿಗೆ.. ಹಂಬಲಿಸಿದೇ ಮನ.. ಗೀತೆ ಮುಂದುವರೆಯುತ್ತದೆ ... ಜಟಿಲ ಕಾನನದ ಕುಟಿಲ ಪಥಗಳಲ್ಲಿ ಹರಿವ ತೊರೆಯು ನಾನು, ಎಂದಿಗಾದರೂ ಎಂದಿಗಾದರೂ ಎಂದಿಗಾದರೂ ಕಾಣದ ಕಡಲನ್ನು ಸೇರಬಲ್ಲೆಯೇನು? ಸೇರಬಹುದೆ ನಾನು? ಕಡಲ ನೀಲಿಯೊಳು ಕರಗಬಹುದೇ ನಾನು?
ಅಯ್ಯೋ! ಒಂದೊಳ್ಳೆ ಹಾಡು ಮುಗಿಯಿತು ಅನ್ನವಷ್ಟರಲ್ಲಿ ಸಿನಿಮಾವು ಮುಗಿಯುವ ಹಂತಕ್ಕೆ ಬಂದಿರುತ್ತದೆ. ನಾಯಕ ಬರುತ್ತಾನೆ. ನಾಯಕಿಯ ಖುಷಿಗೆ ಎಲ್ಲೆಯಿಲ್ಲ. ನಾಯಕನದು ಸಂತೃಪ್ತಿಯ ಭಾವ. ಅವಳನ್ನು ತನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುವ ನಾಯಕನ ಎದೆಯ ಕಡೆ ಗುರಿಯಾಗಿಸಿದ್ದ ವಿಲನ್‌ನ ಬಂದೂಕನ್ನು ಫೋಲಿಸರು ಚಾಕಚಕ್ಯೆತೆಯಿಂದ ಮೊದಲೇ ಕಸಿದುಕೊಳ್ಳುತ್ತಾರೆ. ಸದ್ಯ ಸುಖಾಂತ್ಯವಾಯಿತಲ್ಲ ಎಂದು ಅರೆಂಜ್ ಮ್ಯಾರೇಜ್ ಆಗಿದ್ದವರು ಅಂದುಕೊಂಡು, ಲವ್ ಮ್ಯಾರೇಜ್ ಆಗಬೇಕೆಂದು ಕೊಂಡವರು ನಿಜವಾದ ಪ್ರೀತಿಗೆ ಎಂದೆಂದಿಗೂ ಜಯ ಕಟ್ಟಿಟ್ಟ ಟಿಫಿನ್ ಬಾಕ್ಸ್ ಎಂದು ಕೊಳ್ಳುವಷ್ಟರಲ್ಲಿ ಇನ್ಸ್‍ಪೆಕ್ಟರ್ ತನ್ನ ಫೋಲಿಸ್ ಸಿಬ್ಬಂದಿ ನಾಯಕನ ಎದೆಗೆ ಬಂದೂಕನ್ನು ಗುರಿಯಾಗಿಸಿರುವುದನ್ನು ನೋಡಿ, ಡೊಂಟ್ ಫೈರ್... ಎಂದು ಅರಚಿದರೂ, ಫೋಲಿಸರ ಬಂದೂಕುಗಳಿಗೆ ಡೊಂಟ್ ಕೇಳಿಸುವುದಿಲ್ಲ. ಫೈರ್ ಆಗಿಯೇ ಬಿಡುತ್ತದೆ. ಅಶ್ವತ್ಥಾಮೋ ಹತಾ ಗತಃ ಎಂಬ ಮಹಾಭಾರತದ ಸಾಲು ನಿಮ್ಮ ಕಿವಿಯಲ್ಲಿ ರಿಂಗಣಿಸುತ್ತದೆ. ಅಲ್ಲಿಗೆ ಸಿನಿಮಾ The End.
          ...
          ಕನ್ನಡದ ಸಹೃದಯ ಪ್ರೇಕ್ಷಕರಿಗೆ ಅಂತ್ಯದಲ್ಲಿ ಫೈರ್ ಆಗುವ ಮುನ್ನವೇ ಸಿನಿಮಾ ಮುಗಿದಿರುತ್ತದೆ. ಫೈರ್ ಆದ ನಂತರ ಅಲ್ಲಿಯವರೆಗೂ ನಿಜವಾದ ನಾಯಕನಾಗಿದ್ದ ನಿರ್ದೇಶಕ ಒಂದೇ ಒಂದು ಕ್ಷಣದಲ್ಲಿ ವಿಲನ್ ಆಗಿ ಗೋಚರಿಸತೊಡಗುತ್ತಾನೆ. ಇಬ್ಬರನ್ನು ಕಡೆಗೆ ಅನವಶ್ಯಕವಾಗಿ ಸಾಯಿಸಬಾರದಿತ್ತು ಎಂದು ಗೊಣಗುತ್ತಾ ಪ್ರೇಕ್ಷಕ ಮಹಾಪ್ರಭು ನಿರ್ದೇಶಕನಿಗೆ ತಲೆಕೆಟ್ಟಿದೆ ಎಂದುಕೊಳ್ಳುತ್ತಾ ಥಿಯೇಟರ್‌ನಿಂದ ಹೊರಬೀಳುತ್ತಾನೆ. ಮನೆಗೆ ಬಂದು ಟಿವಿಯಲ್ಲಿ ನಿರ್ದೇಶಕ ಅದೇಕೆ ಹೀಗೆ ಮಾಡಿದ ಎಂದು ಹುಡುಕುತ್ತಾನೆ. ಯಾವುದೋ ಒಂದು ಛಾನೆಲ್ಲಿನಲ್ಲಿ ನಿರ್ದೇಶಕರು ನಗುತ್ತಾ ಮೈನಾ ಸೆಂಕೆಂಡ್ ಪಾರ್ಟ್ ಮಾಡ್ತೀವಿ ಎಂದು ಹಲ್ಲುಕಿರಿಯುತ್ತಾರೆ.

          ಇದು ಇತ್ತೀಚೆಗೆ ಬಿಡುಗಡೆಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮೈನಾ ಚಿತ್ರ ಕುರಿತು ನನ್ನ ಅನಿಸಿಕೆ. ಚಿತ್ರಕ್ಕೆ ಕರ್ನಾಟಕ ಫೋಲಿಸ್‌ನಲ್ಲಿ ಟೈಗರ್ ಎಂದೇ ಖ್ಯಾತರಾದ ಎಸಿಪಿ ಅಶೋಕ್ ಕುಮಾರ್‌ರವರು ನಿರ್ದೇಶಕ ನಾಗಶೇಖರ್‌ರವರಲ್ಲಿ ಹಂಚಿಕೊಂಡ ನೈಜ ಕಥೆಯ ಬೆಂಬಲವಿದೆ. ಅದನ್ನು ಸಿನಿಮಾಕ್ಕೆ ಅಳವಡಿಸುವಲ್ಲಿ ನಿರ್ದೇಶಕರು ೯೯% ರಷ್ಟು ಯಶಸ್ವಿಯಾಗಿದ್ದಾರೆ (ಅನಗತ್ಯವಾಗಿ ದುರಂತ ಅಂತ್ಯ ಮಾಡಿ ಫುಲ್ ಮಾರ್ಕ್ಸ್ ಕಳೆದುಕೊಂಡಿದ್ದಾರೆ). ಚಿತ್ರಕಥೆ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಲು ಸಫಲವಾಗಿದೆ. ರೋಮ್ಯಾಂಟಿಕ್ ಚಿತ್ರಕ್ಕೆ ಸಸ್ಪೆನ್ಸ್ ಥ್ರಿಲರ್‌ನ ಟಚ್ಚಿದೆ. ಅತಿಯೆನಿಸದ ಸಂಭಾಷಣೆಯಿದೆ. ಆ ದಿನಗಳು ನಂತರ ಚೇತನ್ ಮತ್ತೊಮ್ಮೆ ತಮ್ಮ ಪ್ರತಿಭೆ tOತೋರಿದ್ದಾರೆ. ಯುವ ಮನಸ್ಸುಗಳಿಗೆ ಕಚಗುಳಿಯಿಡುವ ಧೂದ್ ಸಾಗರ್ ಜಲಪಾತಕ್ಕೆ ಸರಿಸಮನಾದ ನಾಯಕಿ ನಿತ್ಯಾ ಮೆನನ್ ಇದ್ದಾಳೆ. ಹಸಿರು ಬಿಳುಪಿನ ಹಿನ್ನೆಲೆಯಲ್ಲಿ ಚಿತ್ರವನ್ನು ಸೆರೆಹಿಡಿದು ನಿಮ್ಮ ಮನ-ಮನೆಯ ಚಿತ್ರಪಟಗಳನ್ನಾಗಿಸುವ ಸತ್ಯಹೆಗಡೆ ಕ್ಯಾಮೆರವಿದೆ. ಹಿತವಾದ ಸಾಧುಕೋಕಿಲರವರ ಹಿನ್ನಲೆ ಸಂಗೀತವಿದೆ. ಜೆಸ್ಸಿಗಿಫ್ಟ್ ಸಂಗೀತದಲ್ಲಿ ಗುನುಗುವ ಹಾಡುಗಳಿವೆ. ತಮ್ಮ ನಿಲುವಲ್ಲೇ ನಗಿಸುವ ಸಾಧುಕೋಕಿಲ, ತಬಲಾ ನಾಣಿ, ಬುಲೆಟ್ ಪ್ರಕಾಶ್ ಇದ್ದಾರೆ. ಎಸಿಪಿಯಾಗಿ ತಮಿಳಿನ ಶರತ್ ಕುಮಾರ್ ಗಮನ ಸೆಳೆದರೆ, ವಿಲನ್‌ಗಳು ಚಿತ್ರಕ್ಕೆ ಅಗತ್ಯವಿದ್ದ ಕಡೆ ಮಾತ್ರ ಬಂದು ಹೋಗುವುದು ಸಹ್ಯವಾಗಿದೆ. ಪೋಷಕ ಪಾತ್ರವರ್ಗದಲ್ಲಿ ಬಂದುಹೋಗುವ ಹೆಸರಾಂತರ ಪಡೆಯೇ ಇದೆ. ಇವೆಲ್ಲದರ ಜೊತೆಗೆ ಕಡೆಗೆ ಅನಗತ್ಯವಾದರೂ ಸುಮನ್ ರಂಗನಾಥಳ ಬಳುಕುವ ಸೊಂಟವಿದೆ. ಆ ಐಟಂ ಹಾಡಿನವರೆಗೂ ಫೋಲಿಸ್ ಅಧಿಕಾರಿಯಾಗಿ ಗಮನ ಸೆಳೆಯುವ ಸುಮನ್ ಈ ಹಾಡಿನಲ್ಲಿ ತಮ್ಮ ಸೊಂಟ ಬಳುಕಿಸುತ್ತಾರೆ. ಪ್ರೇಮದ ಪೂಜಾರಿ ಎನ್ನುವ ರಿಮಿಕ್ಸ್ ಹಾಡಿಗೆ ಆನಂದಿಸುವ ಅನೇಕ ಹಿರಿಯ ನಟರ ಪಡೆಯಿದೆ.

          ಅರಮನೆ, ಸಂಜು ವೆಡ್ಸ್ ಗೀತಾ ಎಂಬ ದುರಂತ ಅಂತ್ಯವಾಗುವ ಸಿನಿಮಾಗಳ ಗುಂಗಿನಿಂದ ಇನ್ನೂ ಹೊರಬಂದಿರದಂತೆ ಕಾಣುವ ನಿರ್ದೇಶಕರು ಈ ಸಿನಿಮಾದಲ್ಲೂ ಅನಗತ್ಯವಾಗಿ ನಾಯಕ ನಾಯಕಿಯರಿಗೆ ಶೂಟ್ ಮಾಡಿಸುವುದರ ಮೂಲಕ ತಮ್ಮ ದುರಂತ ಸರಣಿಯನ್ನು ಮುಂದುವರೆಸಿದ್ದಾರೆ. ಆ ಶೂಟ್ ಔಟಿನ ಕಡೆಯ ಸೀನಿಗೂ ಮುಂಚೆ ನೀವು ಸಿನಿಮಾ ಮಂದಿರದಿಂದ ಹೊರಬಿದ್ದರೆ ನಿಮ್ಮ ಮನದಲ್ಲಿ ಈ ವರ್ಷದ ಒಂದು ಉತ್ತಮ ಚಿತ್ರ ದಾಖಲಾಗುತ್ತದೆ. ಕನ್ನಡ ಚಿತ್ರಪ್ರೇಮಿಗಳೇ, ಒಂದು ಅಪರೂಪದ ಪ್ರೀತಿಯ ನೈಜಕಥೆ ಸಿನಿಮಾವಾಗಿ ಮೂಡಿದೆ. ಮರೆಯದಿರಿ, ಮರೆತು ನಿರಾಶರಾಗದಿರಿ.

***





ಗುರುವಾರ, ಫೆಬ್ರವರಿ 14, 2013

ಅರೆಂಜ್ಡ್ ಲವ್

ಅರೆಂಜ್ಡ್ ಲವ್


ಪ್ರೀತಿಯೆಂಬ ಎರಡಕ್ಷರದಲ್ಲಿ.......

- ಚಂಪರಾಣಿ ಜಿ.ಸಿ



ಪ್ರೀತಿ ಎಂದಾಕ್ಷಣ ಎಲ್ಲರೂ ಯೋಚಿಸುವುದು ಹೆಣ್ಣು ಮತ್ತು ಗಂಡಿನ ನಡುವೆ ಹದಿ ಹರಯದಲ್ಲಿ ಉಂಟಾಗುವ ಪ್ರೀತಿಯನ್ನೇ. ಆದರೆ ಅದರಾಚೆಗೂ ಪ್ರೀತಿ ಎಲ್ಲೆಲ್ಲೂ ಇರುತ್ತದೆ. ನನ್ನ ಮಗಳು ತನ್ನ ಪುಟ್ಟ ಕೈಗಳಿಂದ ನನ್ನ ಕೆನ್ನೆ ಸವರಿ, ‘ನನ್ನ ಪ್ರೀತಿ ಅಮ್ಮ’ ಅಂದಾಗ, ಒಬ್ಬ ತಂದೆ ‘ನನ್ನ ಪ್ರೀತಿ ಪಾಪು’ ಎಂದಾಗ, ಒಬ್ಬ ಗೆಳತಿ ತನ್ನ ಆತ್ಮೀಯ ಗೆಳತಿಗೆ ‘ಪ್ರೀತಿಯ ಗೆಳತಿ’ ಅಂದಾಗ, ಒಬ್ಬ ಅಕ್ಕ ತನ್ನ ತಮ್ಮನಿಗೆ ‘ನನ್ನ ಪ್ರೀತಿ ತಮ್ಮ’ ಎಂದಾಗ, ಒಬ್ಬ ತಂಗಿ ತನ್ನ ಅಣ್ಣನಿಗೆ ‘ನನ್ನ ಪ್ರೀತಿ ಅಣ್ಣ’ ಎಂದಾಗ, ಅಲ್ಲೆಲ್ಲಾ ಪ್ರೀತಿ ಇದ್ದೇ ಇರುತ್ತದೆ.

ಆದರೆ ಜನ ಈ ಎಲ್ಲಾ ಪ್ರೀತಿಯನ್ನು ಮಮತೆ, ಮಮಕಾರ, ಸ್ನೇಹ ಎಂದು ಬೇರೆ ಬೇರೆ ಹೆಸರಿನಲ್ಲಿ ಕರೆದು ಅವು ಪ್ರೀತಿಯೇ ಅಲ್ಲವೆನ್ನುವಂತೆ ಪ್ರತಿಬಿಂಬಿಸುತ್ತಾರೆ. ಈ ಎಲ್ಲಾ ಸಂಬಂಧಗಳಲ್ಲೂ ಇರುವುದು ಅಪರಿಮಿತವಾದ ಪ್ರೀತಿಯಷ್ಟೇ. ಪ್ರೀತಿಯ ಹೆಸರು ಏನೇ ಇದ್ದರೂ ಅದು ಹೊರಹೊಮ್ಮುವ ಮತ್ತು ಒಂದು ಹೃದಯದಿಂದ ಮತ್ತೊಂದು ಹೃದಯಕ್ಕೆ ನೀಡುವ ನೆಮ್ಮದಿ, ಸಂತೋಷ ಇವುಗಳೆಲ್ಲಾ ಬಣ್ಣಿಸಲಸದಳ.

ಪ್ರೀತಿ ಬಯಸುವ ಪ್ರತಿಯೊಂದು ಹೃದಯಕ್ಕೂ ಪ್ರೀತಿ ದೊರೆತರೆ ಜಗತ್ತಿನಲ್ಲಿ ಯಾವುದೇ ರೀತಿಯ ಸಮಸ್ಯೆಗಳಿರುವುದಿಲ್ಲ. ಪ್ರೀತಿ ತುಂಬಿರುವ ಯಾವುದೇ ಹೃದಯವೂ ಕೆಟ್ಟದನ್ನು ಯೋಚಿಸುವುದಿಲ್ಲ. ಹೃದಯದ ತುಂಬ ಪ್ರೀತಿಯೇ ಇರುವಾಗ ಬೇರೆ ಯೋಚನೆಗಳಿಗೆ ಸ್ಥಳವೆಲ್ಲಿ? ಮನುಜಕುಲಕ್ಕೆ ಪ್ರೀತಿ ಯಾವಾಗಲೂ ಬೇಕು. ಎಲ್ಲರಲ್ಲೂ ಪ್ರೀತಿಯೊಂದಿದ್ದರೆ ಭೂಮಿ ಪ್ರಶಾಂತವಾಗಿರುತ್ತದೆ. ಪ್ರಭು ಏಸುಕ್ರಿಸ್ತರು ‘ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು’ ಎಂದು ಹೇಳುತ್ತಾರೆ. ಮನುಷ್ಯ ತನ್ನನ್ನು ತಾನು ಪ್ರೀತಿಸಿದಷ್ಟು ಬೇರೆ ಯಾರನ್ನೂ ಪ್ರೀತಿಸುವುದಿಲ್ಲವೆಂಬುದು ಜಗಜ್ಜಾಹೀರು. ಆದ್ದರಿಂದಲೇ ಅವರು ನಿನ್ನಂತೆಯೇ ಪರರನ್ನು ಪ್ರೀತಿಸು ಎಂದು ಹೇಳಿರುವುದು.

ಜಗತ್ತಿನಲ್ಲಿ ತಾಯಿ-ಮಗು ಪ್ರೀತಿ, ಸೋದರ ಪ್ರೀತಿ, ಗೆಳೆಯರ ಪ್ರೀತಿ, ಸಂಬಂಧಿಕರ ಪ್ರೀತಿ, ಎಂಥೆಂಥಾ ಪ್ರೀತಿ ಇದ್ದರೂ ಅವು ಹೆಚ್ಚು ಮಹತ್ವ ಹೊಂದುವುದಿಲ್ಲ. ಮಹತ್ವ ಪಡೆಯುವುದು, ಹೆಚ್ಚು ಚರ್ಚೆಗೊಳಗಾಗುವುದು ಯುವಜನರ ಪ್ರಣಯ, ಪ್ರೇಮ, ಪ್ರೀತಿ. ಆದರೆ ಈಗಿನ ಯುವ ಪೀಳಿಗೆಯ ಓಟವನ್ನು ನೋಡಿದರೆ ಪ್ರೀತಿ ತನ್ನ ಎಲ್ಲಾ ಮೌಲ್ಯಗಳನ್ನು ಕಳೆದುಕೊಂಡಿದೆ ಎಂದೆನಿಸುತ್ತದೆ. ಇವರೆಲ್ಲರಿಗೆ ಪ್ರೀತಿಯ ಮಹತ್ವ, ಅದರ ಅಗತ್ಯತೆ, ಅದರಿಂದ ಮನಸ್ಸಿಗೆ ಸಿಗುವ ನೆಮ್ಮದಿ, ಬಾಳಿಗೆ ಸಿಗುವ ಒಂದು ಗುರಿ ಮತ್ತು ಸರಿ ದಾರಿ ಯಾವುದೂ ಗೊತ್ತಿರುವುದಿಲ್ಲ. ದಿನ್ನಕ್ಕೊಂದು ಪ್ರೇಮ ಪ್ರಕರಣ. ವರ್ಷದಲ್ಲಿ ಏನಿಲ್ಲವೆಂದರೂ ಇಬ್ಬರು-ಮೂವರನ್ನು ಪ್ರೀತಿಸುವುದು ಅವರಿಂದ ಬೇರಾಗುವುದು. ಮತ್ತೆ ಅದೇ ಪುನರಾವರ್ತನೆ. ಈ ರೀತಿಯ ಸಂಬಂಧಗಳಲ್ಲಿ ಪ್ರೀತಿ ಇದೆ ಎಂದು ನಂಬುವುದಾದರೂ ಹೇಗೆ?

ಹಾಗಾದರೆ ಪ್ರೀತಿ ಈಗ ಜಗತ್ತಿನಲ್ಲಿ ಇಲ್ಲವೇ? ಇದೆ ಖಂಡಿತ ಇದೆ. ಆದರೆ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಬದಲು ವಸ್ತುಗಳನ್ನು ಪ್ರೀತಿಸುತ್ತಾನೆ. ಮನಸ್ಸನ್ನು ಪ್ರೀತಿಸುವ ಬದಲು ‘ಮನಿ’ಯನ್ನು ಪ್ರೀತಿಸುತ್ತಾನೆ. ಹಾಗಾಗಿ ಎಲ್ಲೂ ನಿರ್ಮಲ ಪ್ರೀತಿ-ಪ್ರೇಮ ನಮಗೆ ಸಿಗುವುದಿಲ್ಲ. ಎಲ್ಲರೂ ಒಂದು ರೀತಿಯ ಕಂಫರ್ಟ್‌ಗಾಗಿ ಹಾತೊರೆಯುತ್ತಾರೆ. ನಿಜ ಪ್ರೀತಿ ಯಾರಿಗೂ ಬೇಡವಾಗಿದೆ. ಜೊತೆಗೆ ಪ್ರೀತಿಯು ಒಂದು ರೀತಿಯ ಅನುಕೂಲಕ್ಕೆ ತಕ್ಕಂತ ಅಂಶವಾಗಿದೆ. ಅದನ್ನೇ ನಾನು ಅರೇಂಜ್ಡ್ ಲವ್ ಎಂದು ಕರೆಯುತ್ತೇನೆ.

ಕಾಲೇಜಿನಲ್ಲಿ ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡುತ್ತಾರೆ. ಅವರಲ್ಲಿ ಪರಿಚಯ ಸಹ ಬೆಳೆಯುತ್ತದೆ. ಅವರಲ್ಲಿ ಸೆಳೆತವಿದ್ದರೂ ಇಬ್ಬರೂ ಕೆಲವು ದಿನಗಳು ಸುಮ್ಮನಿರುತ್ತಾರೆ. ಒಂದು ಸುಂದರವಾದ ಸುಸಂದರ್ಭದಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಮತ್ತು ಅವರ ಮನೆಗಳಲ್ಲಿ ಒಪ್ಪಿಸಿ ಮದುವೆಯಾಗುತ್ತಾರೆ. ಈ ವಿಚಾರ ಸಾದಾ ಸೀದಾ ಎನಿಸಿದರೂ ಅದರ ಹಿಂದಿನ ಒಂದು ಮರ್ಮವನ್ನು ಹೇಳುತ್ತೇನೆ ಕೇಳಿ. ಪರಿಚಯವಾದ ಹುಡುಗ ಹುಡುಗಿ ಒಬ್ಬರಿಗೊಬ್ಬರು ತಿಳಿಯದಂತೆ ಅವರ ಹಿಂದಿನ ಇತಿಹಾಸವನ್ನು ಹುಡುಕುತ್ತಾರೆ. ಅವರು ಎಷ್ಟು ಜಾಣ್ಮೆಯಿಂದ ಈ ಕೆಲಸ ಮಾಡುತ್ತಾರೆಂದರೆ ಯಾರಿಗೂ ಅವರ ಬಗ್ಗೆ ಅನುಮಾನ ಬರುವುದಿಲ್ಲ. ಹುಡುಗ ಎಂಥ ಜಾತಿಯವನು ಎಂಬುದರಿಂದ ಹಿಡಿದು ಹುಡುಗಿಯ ಮನೆತನದವರು ಎಷ್ಟು ಶ್ರೀಮಂತರು ಎಂಬುವವರೆಗೂ ಎಲ್ಲವನ್ನೂ ಕೂಲಂಕುಶವಾಗಿ ತಿಳಿದುಕೊಂಡು ಎಲ್ಲಾ ಲೆಕ್ಕಾಚಾರಗಳನ್ನು ಕೂಡಿ, ಕಳೆದು, ಭಾಗಿಸಿ, ಗುಣಾಕಾರ ಹಾಕಿ ತಮಗೆ ಸರಿಹೊಂದುತ್ತದೆಯೇ? ಇಲ್ಲವೇ? ಎಂದೆಲ್ಲಾ ಯೋಚಿಸುತ್ತಾರೆ. ಸರಿಹೊಂದುವುದಿಲ್ಲವೆಂದಾದಲ್ಲಿ ಅವರ ಪರಿಚಯ ಕೇವಲ ಪರಿಚಯಕ್ಕೆ ನಿಂತು ಹೋಗುತ್ತದೆ. ಸರಿಹೊಂದುತ್ತದೆ ಎಂದು ತಿಳಿದ ನಂತರ ತಮ್ಮ ಪ್ರೇಮನಿವೇದನೆ ಮಾಡಿಕೊಳ್ಳುತ್ತಾರೆ.

ಹುಡುಗ ಒಳ್ಳೆಯ ಮನೆತನದವ, ಜೊತೆಗೆ ಒಂದೇ ಜಾತಿ, ಹುಡುಗಿಯ ಮನೆಯವರು ಇವರಿಗೆ ಸರಿಸಮಾನರು, ಮನೆಗಳಲ್ಲಿ ಹೇಳಿದರೂ ಅಡ್ಡಿ ಆತಂಕಗಳು ಬರುವುದಿಲ್ಲ. ಕಥೆ ಶುಭಂ ಆಗುತ್ತದೆ. ಆದರೆ ಇಂಥಹ ಪ್ರೀತಿಯನ್ನು ನಿಜವಾದ ಪ್ರೀತಿ ಎಂದು ಹೇಗೆ ಒಪ್ಪಿಕೊಳ್ಳುವುದು. ಇದನ್ನು ಅರೆಂಜ್ಡ್ ಲವ್ ಅನ್ನದೇ ಮತ್ತೇನು ಹೇಳಲು ಸಾಧ್ಯ?

ಹುಡುಗ ಹುಡುಗಿ ಒಂದೇ ಕಡೆ ಕೆಲಸ ಮಾಡುತ್ತಿರುತ್ತಾರೆ. ಇಬ್ಬರಿಗೂ ಉತ್ತಮ ಸಂಬಳ. ಹುಡುಗನಿಗೆ ಅಥವಾ ಹುಡುಗಿಗೆ ತನ್ನ ಸಹೋದ್ಯೋಗಿಯ ವೈಯಕ್ತಿಕ ವಿಚಾರಗಳು ತಿಳಿದ ನಂತರ ಕ್ರಮೇಣ ಒಬ್ಬರನ್ನೊಬ್ಬರು ಆಕರ್ಷಿಸಲು ಪ್ರಾರಂಭಿಸುತ್ತಾರೆ. ಆಕರ್ಷಣೆ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಪ್ರೀತಿಯಾದಮೇಲೆ ಇನ್ನೇನು ಮುಂದಿನ ಭವಿಷ್ಯದ ಪ್ಲಾನ್ ನಡೆಯುತ್ತದೆ. ಒಬ್ಬರಿಗೊಬ್ಬರು ನೇರವಾಗಿಯೇ ಎಲ್ಲಾ ವಿಚಾರಗಳನ್ನು ಮಾತನಾಡಿಕೊಳ್ಳುತ್ತಾರೆ. ನಾವಿಬ್ಬರೂ ಮದುವೆಯಾದರೆ ಉತ್ತಮವಾದ ಜೀವನ ನಡೆಸಬಹುದು ಎಂದು ಪ್ಲಾನ್ ಮಾಡಿಕೊಳ್ಳುತ್ತಾರೆ. ಇಬ್ಬರ ಮನೆಯಲ್ಲಿ ವಿಷಯ ತಿಳಿಸುತ್ತಾರೆ. ಅವರ ತಂದೆ-ತಾಯಿಯರು ಹುಡುಗ ಅಥವಾ ಹುಡುಗಿಯ ಜಾತಿ, ಕುಲ, ಗೋತ್ರ ಎಂದೆಲ್ಲಾ ಜಾಲಾಡಿ ಸರಿ ಹೊಂದಿದರೆ ಒಪ್ಪುತ್ತಾ ಇಲ್ಲವೇ ಒಪ್ಪುವುದಿಲ್ಲ. ಅವರೆಲ್ಲರೂ ಒಪ್ಪಲಿ ಬಿಡಲಿ ಹುಡುಗ ಹುಡುಗಿ ಮದುವೆಯಾಗುತ್ತಾರೆ. ಇದೂ ಕೂಡ ಅರೆಂಜ್ಡ್ ಲವ್ ತಾನೆ. ಇಲ್ಲಿ ಇಬ್ಬರಿಗೂ ಬೇಕಿರುವುದು ಅನುಕೂಲ, ಒಂದು ಕಂಫರ್ಟ್. ಅದು ಅವರಿಗೆ ದೊರಕುತ್ತದೆ. ಆದರೆ ಇಬ್ಬರಿಗೂ ಪ್ರೀತಿ ಬೇಕೆನಿಸಲಿಲ್ವೇ? ಅನಿಸುತ್ತದೆ. ಅನಿಸಿದಾಗ ವಿವಾಹ ವಿಚ್ಛೇದನ ಮರು ಮದುವೆ ನಡೆಯುತ್ತದೆ. ದೋಷ ಯಾರದ್ದು? ಎಲ್ಲಿ ತಪ್ಪಾಯ್ತು? ಎಲ್ಲಿ ಎಡೆವಿದೆವು? ಎಂದು ಇಬ್ಬರೂ ಯೋಚಿಸುವುದಿಲ್ಲ.

ಹುಡುಗ ಹುಡುಗಿ ಒಬ್ಬರನ್ನೊಬ್ಬರು ಪಂಚಪ್ರಾಣದಂತೆ ಪ್ರೀತಿಸಿಕೊಂಡಿದ್ದರು. ಅವರ ವಿಷಯ ಮನೆಯಲ್ಲಿ ಗೊತ್ತಾಗುವ ಮೊದಲೇ ಅವರಿಬ್ಬರಿಗೂ ಒಳ್ಳೆಯ ಸಂಬಂಧಗಳು ಬಂದವು. ಇಬ್ಬರೂ ತುಂಬಾ ಯೋಚಿಸಿದರು. ತುಂಬಾ ದಿನಗಳವರೆಗೆ ಅವರಲ್ಲಿ ಒಂದು ಸಂಘರ್ಷ ನಡೆಯುತ್ತದೆ. ಕೊನೆಗೆ ಒಂದು ದಿನ ಇಬ್ಬರೂ ಮದುವೆಯಾದರು! ಪ್ರೀತಿಸಿದವರನ್ನಲ್ಲ!! ಅವರಿಗೆ ಬಂದಿದ್ದ ಒಳ್ಳೆಯ ಸಂಬಂಧದ ಹುಡುಗ ಹುಡುಗಿಯೊಡನೆ ಅವರ ಮದುವೆಯಾಯಿತು. ಅವನು ಇವಳ ಮದುವೆಗೆ ಇವನು ಅವಳ ಮದುವೆ ಹೋಗಿ ಶುಭಕೋರಿ ಬರುತ್ತಾರೆ. ಇದೂ ಅರೆಂಜ್ಡ್ ಲವ್ ಅಲ್ಲವೇ? ಇದ್ದಷ್ಟು ದಿನ ಪ್ರೀತಿಸು ಮುಂದೆ ಗಾಳಿ ಬಂದಾಗ ತೂರಿಕೋ ಎಂಬಂಥ ಭಾವ ನಮ್ಮ ಕೆಲವು ಯುವಜನತೆಯಲ್ಲಿದೆ.

ಹುಡುಗ ತಮ್ಮ ಜಾತಿಯ ಸಮಾರಂಭದಲ್ಲಿ ಹುಡುಗಿಯನ್ನು ನೋಡುತ್ತಾನೆ. ಅವಳ ಪೂರ್ವಾಪರ ತಿಳಿದುಕೊಂಡು ಅವಳ ಹಿಂದೆ ಬಿದ್ದು. ತನ್ನ ಪ್ರೀತಿ ನಿವೇದಿಸಿ. ಅವಳನ್ನು ಒಪ್ಪಿಸುತ್ತಾನೆ. ಅವಳು ಸಹ ಹುಡುಗನ ಶ್ರೀಮಂತಿಕೆ, ಯೌವನ, ಅವನು ನೀಡುವ ಕಂಫರ್ಟ್ ಎಲ್ಲವನ್ನೂ ನೋಡಿ; ಸರಿ ಎಂದು ಒಪ್ಪುತ್ತಾಳೆ. ಹುಡುಗ ಹುಡುಗಿ ಒಪ್ಪಿದಮೇಲೆ ತಾನೇ ಬಂದು ಹುಡುಗಿಯ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡುತ್ತಾನೆ. ತನ್ನ ಎಲ್ಲಾ ವಿಷಯಗಳನ್ನು ತಿಳಿಸುತ್ತಾನೆ. ಹುಡುಗಿಯ ತಂದೆ ತಾಯಿ ಎಲ್ಲವನ್ನೂ ಮನನಮಾಡಿ ಒಪ್ಪಿಗೆ ಸೂಚಿಸುತ್ತಾರೆ. ಇವನು ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆ ಮಾಡಿಕೊಳ್ಳುತ್ತಾನೆ. ಮನೆಯವರು ಎಲ್ಲಾ ಸರಿಹೊಂದುತ್ತದೆಂದು ಮದುವೆ ಮಾಡಿಕೊಡುತ್ತಾರೆ. ಇದು ಅರೆಂಜ್ಡ್ ಲವ್ ಅಲ್ಲವೇ?

ಇನ್ನೂ ಕೆಲವು ಸಂದರ್ಭಗಳಲ್ಲಿ ಹುಡುಗ ಹುಡುಗಿಯರು ಸಮ ಅಂತಸ್ತಿನವರಾಗಿದ್ದಾಗ. ಕೆಲವು ಪೋಷಕರು ಜಾತಿಯ ಗೋಜಿಗೆ ಹೋಗದೆ ಮಕ್ಕಳ ಪ್ರೀತಿಗೆ ಸಮ್ಮತಿ ಸೂಚಿಸಿ ಮದುವೆಯನ್ನು ಮಾಡುತ್ತಾರೆ. ಎಲ್ಲರೂ ಅವರ ದೊಡ್ಡಗುಣವನ್ನು ಹೊಗಳುವವರೇ ಆಗಿರುತ್ತಾರೆ. ಆದರೆ ಒಣ ಹೂರಣ ಯಾರಿಗೂ ತಿಳಿದಿರುವುದಿಲ್ಲ. ಇಂತಹ ಮದುವೆಗಳಲ್ಲಿ ನಡೆಯುವ ಲೇವಾ ದೇವಿ, ಬೇರೆ ಯಾವ ಮದುವೆಗಳಲ್ಲೂ ನಡೆಯುವುದಿಲ್ಲ. ವರದಕ್ಷಿಣೆ, ವರೋಪಚಾರ ಜೋರಾಗಿಯೇ ಸಿಕ್ಕಿರುತ್ತದೆ. ಕೆಲವೊಮ್ಮೆ ವಧುದಕ್ಷಿಣೆ ಕೊಡುವುದೂ ಉಂಟು: ಅದು ಅಸಹಾಯಕ ಸ್ಥಿತಿಗಳಲ್ಲಿ ಮಾತ್ರ. ಹುಡುಗಿ ಕೆಲಸಕ್ಕೆ ಹೋಗುತ್ತಿದ್ದಾಳೆ, ದೊಡ್ಡ ಸಂಬಳದಾರಳು, ಅವಳನ್ನು ಜಿಗಣೆಯಂತೆ ಹೀರಿಕೊಳ್ಳಬಹುದು ಎಂಬೆಲ್ಲಾ ಲೆಕ್ಕಾಚಾರದಿಂದಲೇ ಎಲ್ಲರೂ ಇಂತಹ ಪ್ರೇಮ ವಿವಾಹಕ್ಕೆ ಸಮ್ಮತಿ ನೀಡುವುದು. ಇಲ್ಲಿ ಹುಡುಗ ಹುಡುಗಿಯ ಆಲೋಚನೆಗಳೂ ಬೇರೆಯಾಗಿರುವುದಿಲ್ಲ. ಅವರಿಬ್ಬರೂ ಮೊದಲು ಪ್ರೀತಿಸುವುದು ಅಂತಸ್ತನ್ನು, ನಂತರ ವ್ಯಕ್ತಿಯನ್ನು.

ಒಂದೇ ಜಾತಿ, ಒಂದೇ ಅಂತಸ್ತು, ಒಳ್ಳೆಯ ಕೆಲಸ, ಆಸ್ತಿ-ಪಾಸ್ತಿ, ಅನುಕೂಲಗಳನ್ನು ನೋಡಿ ಹುಟ್ಟುವುದು ಪ್ರೀತಿಯಲ್ಲ. ಅಂತಹ ಪ್ರೀತಿ ಕೇವಲ ಅರೆಂಜ್ಡ್ ಲವ್ ಆಗಿರುತ್ತದೆ. ನಿನ್ನಿಂದ ನನಗೆ ಅನುಕೂಲ, ನಮ್ಮ ಜಾತಿ ಒಂದೇ, ನಮ್ಮ ಅಂತಸ್ತು ಒಂದೇ, ನಾವು ಮದುವೆಯಾದರೆ ಸುಖವಾಗಿರಬಹುದು, ಈ ರೀತಿಯ ಲೆಕ್ಕಾಚಾರದ ಪ್ರೀತಿ ಪ್ರೀತಿಯಾಗಿರದೆ ಒಂದು ಭ್ರಮೆಯಾಗಿರುತ್ತದೆ. ಭ್ರಮೆ ಒಡೆದು ಹೋದರೆ ಭ್ರಮನಿರಸನವಾಗುವುದು ಖಚಿತ. ಅರೆಂಜ್ಡ್ ಲವ್ ಯಾವತ್ತಿದ್ದರೂ ಡೇಂಜರಸ್. ಅದು ಅಪಾಯವನ್ನು ನಾವೇ ಕರೆದು ಪಕ್ಕದಲ್ಲಿ ಕೂರಿಸಿಕೊಂಡಂತೆ. ಇಂತಹ ಎಷ್ಟೋ ಅರೆಂಜ್ಡ್ ಲವ್ ಕೊನೆಗೊಳ್ಳುವುದು ವಿಚ್ಛೇದನ ಅಥವಾ ಅಪರಾಧದಲ್ಲಿ. ಹೀಗೆ ಉದಾಹರಣೆಗಳು ಕೊಡುತ್ತಾ ಹೋದರೆ ಪುಟಗಟ್ಟಲೆ, ದಿನಗಟ್ಟಲೆ, ವರ್ಷಗಟ್ಟಲೆ ಕೊಡುತ್ತಿರಬಹುದು. ಇಂತಹುದೇ ಪ್ರೀತಿಯನ್ನು ನಮ್ಮ ಸುತ್ತಮುತ್ತ ನೋಡುತ್ತಿದ್ದೇವೆ, ನೋಡುತ್ತಲೇ ಇರುತ್ತೇವೆ.

ಯಾರಾದರೂ ಅಂತಹ ಅರೆಂಜ್ಡ್ ಲವ್‌ಗೆ ಪ್ಲಾನ್ ಮಾಡುತ್ತಿದ್ದರೆ ಅದನ್ನು ಕೈಬಿಡಿ. ಸ್ನೇಹಿತರು ಈ ಹಾದಿ ತುಳಿಯುತ್ತಿದ್ದಾರೆ ಎಂದು ನಿಮಗನ್ನಿಸಿದರೆ ಅವರಿಗೆ ಬುದ್ಧಿ ಹೇಳಿ ಅವರಿಗೆ ಮುಂದಿನ ಪರಿಣಾಮವನ್ನು ವಿವರಿಸಿ ಆ ಹಾದಿ ತುಳಿಯದಂತೆ ನೋಡಿಕೊಳ್ಳಿ. ಏಕೆಂದರೆ ಆ ಹಾದಿಯ ಅಂತ್ಯ ಅವರನ್ನು ಪ್ರಪಾತಕ್ಕೆ ತಳ್ಳುತ್ತದೆ. ಮತ್ತೆಂದೂ ಅವರು ಆ ಪ್ರಪಾತದಿಂದ ಮೇಲೇಳಲು ಸಾಧ್ಯವಿಲ್ಲ.

ಕೇವಲ ಯುವಕ ಯುವತಿಯರಲ್ಲಿ ಈ ಅರೆಂಜ್ಡ್ ಲವ್ ಇರುತ್ತದೆ ಎಂದು ಭಾವಿಸಬೇಡಿ.

ಇದು ಸಂಬಂಧಿಕರಲ್ಲಿ ಇರಬಹುದು, ಶ್ರೀಮಂತಿಕೆ ಇದ್ದಾಗ ಎಲ್ಲಾ ನೆಂಟರು ಇಷ್ಟರು ಹತ್ತಿರ ಇರುತ್ತಾರೆ, ‘ಬರಿಗೈ ನಾಯಿಗೂ ದೂರ’ ಎಂಬಂತೆ, ಬಡತನದಲ್ಲಿ ಎಲ್ಲರೂ ನಿಮ್ಮನ್ನು ತೊರೆದು ಹೋಗುತ್ತಾರೆ. ಅಥವಾ ಅಲ್ಲಿಯವರೆಗೆ ನೀವು ಯಾರು ಎಲ್ಲಿದ್ದೀರಿ ಹೇಗಿದ್ದೀರಿ ಎಂದೂ ಸಹ ತಿಳಿಯಲು ಇಚ್ಛಿಸದ ಸಂಬಂಧಿಕರು ನಿಮಗೆ ಒಳ್ಳೆಯ ಹೆಸರು, ಹಣ ಬಂದಾಗ ನಿಮ್ಮನ್ನು ಹುಡುಕಿಕೊಂಡು, ಬಾದರಾಯನ ಸಂಬಂಧ ಹೇಳಿಕೊಂಡು ನಿಮ್ಮ ಮನಸ್ಸಿನಲ್ಲಿ ಜಾಗ ಪಡೆಯಲು ಸರ್ಕಸ್ ಮಾಡುತ್ತಾರೆ. ಇದು ಅರೆಂಜ್ಡ್ ಲವ್ ಅಲ್ಲವೇ?

ಸ್ನೇಹಿತರಲ್ಲಿ ಇಂತಹ ಅರೆಂಜ್ಡ್ ಲವ್ ಕೇವಲ ೧% ಇರಬಹುದು. ಆದರೆ ಅದೂ ಇಲ್ಲದಿರುವುದೇ ನಿಜವಾದ ಸ್ನೇಹ. ಕೆಲವು ಹುಡುಗ ಹುಡುಗಿಯರನ್ನು ನಾನು ನೋಡಿದ್ದೇನೆ ಗಮನಿಸಿದ್ದೇನೆ. ಅವರು ತಮ್ಮ ಅಂತಸ್ತಿಗೆ ಸರಿಹೊಂದುವ ವ್ಯಕ್ತಿಗಳೊಡನೆ ಮಾತ್ರ ಸ್ನೇಹ ಮಾಡುತ್ತಾರೆ. ಅದೂ ತುಂಬಾ ಯೋಚಿಸಿ. ಯಾವುದೇ ಕಾರಣಕ್ಕೂ ತಮಗಿಂತ ಕಡಿಮೆಯವರಲ್ಲಿ ಅವರು ಪರಿಚಯವನ್ನೂ ಸಹ ಬೆಳೆಸಿಕೊಳ್ಳುವುದಿಲ್ಲ. ಹಾಗೆ ಕೆಲವು ಜಾತಿ ಸ್ನೇಹ, ಅನುಕೂಲ ಸ್ನೇಹ, ನಿಮಗೆ ಆಶ್ಚರ್ಯವಾಗಬಹುದು ಬಣ್ಣ ಸ್ನೇಹ ಕೂಡ ಇದೆ. ರೂಪಕ್ಕೆ ಕೊಟ್ಟಷ್ಟು ಬೆಲೆ ಜನ ಗುಣಕ್ಕೆ ನೀಡುವುದಿಲ್ಲ.

ಕೆಲವು ಸಂದರ್ಭಗಳಲ್ಲಿ ತಂದೆ-ತಾಯಿ ಮತ್ತು ಮಕ್ಕಳಲ್ಲೂ ಇರಬಹುದು. ಉದಾಹರಣೆಗೆ ಹುಟ್ಟಿದಾರಾಭ್ಯ ಒಂದು ಮಗುವನ್ನು ಕಡೆಗಣಿಸಿ ಆ ಮಗ/ಮಗಳು ದೊಡ್ಡ ಸಾಧನೆ ಮಾಡಿದಾಗ, ಅವರಿಗೆ ಶ್ರೀಮಂತಿಕೆ ಬಂದಾಗ ಅವರನ್ನು ಓಲೈಸುವುದು. ನನಗೆ ಮೊದಲಿಂದಲೂ ನೀನಂದ್ರೆ ಎಷ್ಟು ಪ್ರಾಣ. ನನಗೆ ಎಲ್ಲಾ ಮಕ್ಕಳಿಗಿಂತ ನೀನೇ ಮುಖ್ಯ. ನಿನ್ನನ್ನು ನಾನು ಹಾಗೆ ಸಾಕಿದೆ, ಹೀಗೆ ಬೆಳೆಸಿದೆ. ನನ್ನ ಜೀವ ನೀನೇ ಎಂದು ಪೋಷಕರು ಹೇಳಿರುವ ಎಷ್ಟೋ ಸಂದರ್ಭಗಳನ್ನು ನಾವು ನೋಡಿರುತ್ತೇವೆ. ಹಾಗೆಂದು ನಾನು ಎಲ್ಲರನ್ನೂ ದೂಷಿಸುತ್ತಿದ್ದೇನೆ ಎಂದಲ್ಲ. ಕ್ಷಮೆಯಿರಲಿ. ಸಂದರ್ಭಗಳು ಕೆಲವೊಮ್ಮೆ ಮನುಷ್ಯನ ಮನಸ್ಸಿನಲ್ಲಿ ಈ ಅರೆಂಜ್ಡ್ ಲವ್‌ಗೆ ಜಾಗ ಮಾಡಿಕೊಡುತ್ತವೆ.

ನಾವು ವಿವೇಕದಿಂದ ವರ್ತಿಸಿ ಅದು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು. ಯಾರನ್ನಾದರೂ ಇಷ್ಟಪಟ್ಟರೆ ಅವರು ಹೇಗಿರುವರೋ ಹಾಗೆಯೇ ಇಷ್ಟಪಡಬೇಕು. ಇಷ್ಟವಾಗಲಿಲ್ಲವೆ ಬಿಟ್ಟುಬಿಡಿ ಅಷ್ಟೆ. ಆದರೆ ಯಾವುದೇ ಕಾರಣಕ್ಕೂ ಅರೆಂಜ್ಡ್ ಲವ್ ಎಂಬ ಸುಳಿಯಲ್ಲಿ ಮಾತ್ರ ಬೀಳಬಾರದು. ಒಮ್ಮೆ ಬಿದ್ದೆವೆಂದರೆ ಅಲ್ಲಿಂದ ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಪಾರಾಗುವ ದಾರಿಯಿಲ್ಲದ ಈ ಸುಳಿ ಬಿದ್ದವರನ್ನು ನುಂಗಿಹಾಕುತ್ತದೆ. ಮತ್ತೆ ನಾವು ಮನುಷ್ಯರೆಂದು ಕರೆಸಿಕೊಳ್ಳುವುದಕ್ಕೆ ಸಾಧ್ಯವಾಗದಂತೆ ನಮ್ಮನ್ನು ಬದಲಾಯಿಸಿಬಿಡುತ್ತದೆ.

ಪ್ರೀತಿಯಲ್ಲಿ ಭಾವನೆಗಳು ಬೆರೆಯಬೇಕು. ಮನಸ್ಸು ಮನಸ್ಸುಗಳ ಮಂಥನವಾಗಬೇಕು. ಹೃದಯ ಹೃದಯಗಳ ಮಿಲನವಾಗಬೇಕು. ಅದುವೇ ಪವಿತ್ರ ಪ್ರೇಮ. ನಿಜವಾದ ಪ್ರೀತಿ. ಹಾಗಲ್ಲದೆ ಅನುಕೂಲಗಳು ಸೇರಿದರೆ ಅದು ಅರೆಂಜ್ಡ್ ಲವ್.

ಫೆಬ್ರವರಿ ೧೪ ಪ್ರೇಮಿಗಳ ದಿನ. ನಿಮ್ಮೆಲ್ಲರಿಗೂ ನಮ್ಮ ಕಿವಿಮಾತು, ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಗಾಗಿ ಹಂಚಿಕೊಳ್ಳಿ. ನಿಮ್ಮೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು.

********







ದುಡ್ಡು ಬಿತ್ತಿ, ದುಡ್ಡು ಬೆಳೆಯಬಹುದೇ…!?

ಕನ್ನಡದಲ್ಲಿ ಪ್ರಕಟವಾಗಿ ಅತ್ಯಂತ ಹೆಚ್ಚು ಮಾರಾಟವಾದ “ಮನಿ ಸೀಕ್ರೆಟ್ಸ್‌ ಹಾಗೂ ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್”‌ (ಅಮೇಜಾನಿನಲ್ಲಿ ಕೊಳ್ಳಲು ಲಿಂಕ್:‌ https://amzn....