ಶುಕ್ರವಾರ, ಜೂನ್ 3, 2011

ಬೇಕಾಗಿದ್ದಾರೆ.

ಅವಡುಗಚ್ಚಿ ಮೂಟೆಹೋರುವವರು
ಒಳಗೇನಿದೆ ಎಂದು ಕೇಳದವರು

ಅಂಟುಕೂತು ಕೀಬೋರ್ಡ್ ಕುಟ್ಟುವವರು
ದಣಿಯದ ಕಂಪ್ಯೂಟರ್‍ಗೆ ದಣಿಯದವರು

ಮಾತಿಗೆ ಮಾತು ಕೊಡದವರು
ಮಾತು ಬಂದರೂ ಮೂಕವಾದವರು

ಕಟ್ಟಿದ ಕೈ ಬಿಚ್ಚದವರು
ಆಗಾಗ ತಲೆ ಬಾಗುವವರು

ಕಿವಿಗಳಿಲ್ಲದೆ ಕವಿಗಳಾದವರು
ಮಾತಿನಲ್ಲೇ ಕಥೆ ಕಟ್ಟುವವರು

ಬಾಡಿಗೆಗೆ ಮಗುವ ಹೆರುವವರು
ಸಂಬಂಧಗಳ ಹಂಗಿಲ್ಲದೆ ಬದುಕುವವರು

ಸ್ವಾಭಿಮಾನದ ಹೆಸರು ಕೇಳದವರು
ಪ್ರಜಾಪ್ರಭುತ್ವ ಮರೆತಂತೆ ನಟಿಸುವವರು

ಅಘೋಷಿತ ದೊರೆಗಳಿಗೆ ಜೈ ಜೈ ಎನ್ನುವವರು
ಸಾಧಕರಲ್ಲದಿದ್ದರೂ ಥೈ ಥೈ ಕುಣಿಯುವವರು

ಮೇಲಿನ ಒಂದು ಅರ್ಹತೆ ನಿಮ್ಮದಾಗಿದ್ದರೆ
ಕ್ಷಮಿಸಿ, ಅರ್ಜಿ ಹಾಕುವ ಅವಶ್ಯಕತೆಯಿಲ್ಲ.

                                  - ಗುಬ್ಬಚ್ಚಿ ಸತೀಶ್.

ಸೋಮವಾರ, ಮೇ 23, 2011

ನಾವಿಬ್ಬರೂ ರೈಟ್ ಸೆಲೆಕ್ಷನ್ನೇ...


(ಪ್ರೀತಿಯ ಬ್ಲಾಗ್ ಮಿತ್ರರೆ, ಸಮಯದ ಅಭಾವದಿಂದ ಈ ಲೇಖನವನ್ನು ಸ್ಕ್ಯಾನ್ ಮಾಡಿ ಹಾಕಿದ್ದೇನೆ. ಓದಿ ಮರೆಯದೆ ಕಾಮೆಂಟಿಸಿ. ಈ ಲೇಖನವು ಏಪ್ರಿಲ್ ತಿಂಗಳ "ನಿಮ್ಮೆಲ್ಲರ ಮಾನಸ" ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ. ನನ್ನನ್ನು ಮತ್ತಷ್ಟು ಬರೆಯಲು ಪ್ರೋತ್ಸಾಹಿಸುತ್ತಿರುವ "ಆವಿ ಪುಸ್ತಕ ಮನೆ" ಬಳಗಕ್ಕೆ ಮತ್ತು ನಿಮಗೆ ನನ್ನ ವಂದನೆಗಳು.) 

ಭಾನುವಾರ, ಮೇ 8, 2011

ತುಂಟ ಮಗು



ಅಮ್ಮಾ ಅಮ್ಮಾ

ಪೆನ್ಸಿಲ್ ಕೊಡು

ಜೊತೆಗೆ ಒಂದು

ಹಾಳೆ ಕೊಡು


ಮಗುವೆ ಮಗುವೆ

ಚಂದದ ನಗುವೆ

ಪೆನ್ಸಿಲ್, ಹಾಳೆ

ಏಕೆ ಬೇಕು?


ನಿನ್ನಯ ಚಿತ್ರ

ನಾ ಬಿಡಿಸುವೆ

ಅಪ್ಪಗೆ ತೋರಿಸಿ

ಪಪ್ಪಿ ಕೊಡಿಸುವೆ!

      - ಗುಬ್ಬಚ್ಚಿ ಸತೀಶ್.

ಶುಕ್ರವಾರ, ಏಪ್ರಿಲ್ 22, 2011

ಮಳೆಯೆಂದರೆ. . . ಮಳೆಯಾ? ಎಲ್ಲವೂ ಅಸ್ಪಷ್ಟ!


ಅಂದು ಸೆಂಪ್ಟಂಬರ್ 24, 2010 ಶುಕ್ರವಾರ. ನನ್ನ ಪಾಲಿಗದು ಶುಭ ಶುಕ್ರವಾರವೇ! ಏಕೆಂದರೆ, ಅಂದು aiಐದು ದಿನಗಳಿಂದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ವೈದ್ಯರ ಗಮನದಲ್ಲಿದ್ದವನು, ಥೈರಾಯ್ಡ್ ಸಮಸ್ಯೆಯಿಂದ ಹೀಗಾಗಿದೆ ಅಷ್ಟೆ ಎಂದು ಸರ್ಟಿಫಿಕೇಟ್ ಪಡೆದುಕೊಂಡು ಡಿಸ್ಚಾರ್ಜ್ ಆಗಿದ್ದೆ.

ಸರಿಯಾಗಿ ಐದು ದಿನಗಳ ಹಿಂದೆ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದೆ. ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ ನನ್ನನ್ನು ಗೆಳೆಯರ ಸಲಹೆಯಂತೆ ನನ್ನಾಕೆಯು 108 ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಳಂತೆ. ಅಲ್ಲಿ ನನ್ನ ಮೇಲುಸ್ತುವಾರಿ ನೋಡಿಕೊಳ್ಳುವ "ಏಂಜೆಲ್" ಎಂದೇ ನಾವು ಕರೆಯುವ ಲೇಡಿ ಡಾಕ್ಟರ್‍ಗೆ ಇವಳು ಫೋನಿನಲ್ಲಿ ವಿಷಯ ತಿಳಿಸಿ, ಅವರನ್ನು ಬರಮಾಡಿಕೊಂಡಳಂತೆ. ಅವರು ಬಂದವರೇ ಎಮರ್ಜೆನ್ಸಿ ವಾರ್ಡಿನಲ್ಲಿ ಚಿಕಿತ್ಸೆ ಕೊಡಿಸಿ, ನನ್ನನ್ನು ತುರ್ತು ನಿಗಾದಲ್ಲಿ ಇಟ್ಟಿದ್ದರಂತೆ. ಮಂಗಳವಾರ ಬೆಳಿಗ್ಗೆ ಆ ಏಂಜೆಲ್ “‘ನಿಮಗೆ ಏನೂ ಆಗಿಲ್ಲ, ಆರಾಮವಾಗಿರಿ” ಎಂದು ನಗುಮೊಗದಿಂದ ಹೇಳಿ ಹೋದರು.

ಬಹಳ ಹೊತ್ತು ಮೌನದಲ್ಲಿದ್ದು, ನನ್ನವಳೆಡೆಗೆ ತಿರುಗಿ "ನನಗೆ ಏನಾಗಿದೆ?" ಎಂದು ಕೇಳಿದೆನು. ಅವಳು ಮುಗುಳ್ನಗುತ್ತಾ, "ಏನೂ ಇಲ್ಲಾ, ನಿಮಗೆ ಈ ಹಿಂದೆ ಕೊಟ್ಟಿದ್ದ ಮತ್ತು ಈಗ ಕೊಡುತ್ತಿದ್ದ ಮಾತ್ರೆಗಳಿಂದ, ಮೊದಲೇ ಸಮಸ್ಯೆಯಿದ್ದ ಥೈರಾಯ್ಡ್ ಮತ್ತೆ ತೊಂದರೆ ಮಾಡಿದೆ ಅಷ್ಟೆ. ನೀವು ಅವತ್ತು unconscious ಆಗಿದ್ದೀರಿ. ಮಾತ್ರೆಗಳ ಪ್ರಭಾವದಿಂದ ಹೀಗಾಗಿದೆ ಅಷ್ಟೆ. ಒಂದೇ ದಿನದಲ್ಲಿ ನಾರ್ಮಲ್ ಆಗಿದ್ದೀರಿ. ಏನೂ ತೊಂದರೆ ಇಲ್ಲ. ಇನ್ನೂ ಕೆಲವು ಟೆಸ್ಟ್ ಗಳನ್ನು ಮಾಡಾಬೇಕಾಗಿರುವುದರಿಂದ, ಆಸ್ಪತ್ರೆಯಲ್ಲೇ ಐದಾರು ದಿನ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ. ಏನೂ ಆಗಿಲ್ಲ, ಆರಾಮಾಗಿ ಮಲಗಿ, ಹೆಚ್ಚು ಮತನಾಡಬೇಡಿ” ಎಂದು ಸಮಾಧಾನದಿಂದ ನುಡಿದಳು. ನನಗೆ ಸಮಾಧಾನವಾಗಲಿಲ್ಲವಾದರೂ, ಏನು ಮಾಡುವುದೆಂದು ತೋಚದೆ ಸುಮ್ಮನೆ ಮಲಗಿದೆ.

ಎಲ್ಲಾ ಟೆಸ್ಟ್‍ಗಳು ಮುಗಿದ ನಂತರ ಶುಕ್ರವಾರ ಸಂಜೆ ಏಳರ ಸುಮಾರಿಗೆ ಡಿಸ್ಚಾರ್ಜ್ ಮಾಡಿಸಿಕೊಂಡು ಆಸ್ಪತ್ರೆಯಿಂದ ಹೊರಬಿದ್ದೆವು. ಹೊಟ್ಟೆ ಹಸಿಯುತ್ತಿದ್ದರೂ, ಮಳೆ ಬರುವಂತ ವಾತಾವರಣವಿದ್ದುದರಿಂದ ಬಸ್ಟಾಂಡಿನಲ್ಲಿಯೇ ಊಟ ಮಾಡಿದರಾಯಿತು ಎಂದುಕೊಂಡು ಆಟೋದವರೊಬ್ಬರಿಗೆ ‘ಮೆಜಿಸ್ಟಿಕ್’ ಎಂದೆವು. ನಾವು ಆಟೋ ಹತ್ತುವ ಸಮಯಕ್ಕೆ ಸರಿಯಾಗಿ ತುಂತುರು ಮಳೆ ಹನಿಯಲಾರಂಭಿಸಿತು. ಮೋಡ ದಟ್ಟವಾಗಿ ಹರಡಿತ್ತು. ಜೋರಾಗಿ ಮಳೆ ಬರುವ ಮುನ್ಸೂಚನೆಯಿತ್ತು. ಆಟೋದವರು, ““ಸಾರ್, ಎಲ್ಲಾಕಡೆ ತುಂಬಾ ಮಳೆ ಆಗ್ತಿದೆಯಂತೆ, ಇಲ್ಲೂ ಶುರುವಾಯ್ತು, ಮೆಜಸ್ಟಿಕ್‍ವರೆಗೆ ಹೋಗೋಕೆ ಆಗುತ್ತೋ... ಇಲ್ವೋ... ನೋಡ್ಬೇಕು”” ಎಂದರು. “ಹಾಗೆಲ್ಲಾ ಹೇಳ್ಬೇಡಿ ಸಾರ್, ನಾವು ಇವತ್ತು ತುಮಕೂರಿಗೆ ಹೋಗ್ಲೇಬೇಕು. ಏನಾದ್ರು ಮಾಡಿ ಮೆಜಸ್ಟಿಕ್‍ಗೆ ಬಿಟ್ಟುಬಿಡಿ. ಇಷ್ಟು ಹೊತ್ನಲ್ಲಿ ಟ್ರೈನೂ ಸಿಗಲ್ಲ”” ಎಂದಳು ನನ್ನ ಮಡದಿ. “ಆಯ್ತು ಮೇಡಂ, ನೋಡ್ತಿನಿ” ಎಂದು ಡ್ರೈವರ್ ಹೇಳಿದರು. ಅಷ್ಟೊತ್ತಿಗೆ ತುಂತುರು ಹನಿಗಳ ರೂಪದಲ್ಲಿದ್ದ ಮಳೆಯು ಧೋ ಎಂದು ಸುರಿಯಲಾರಂಭಿಸಿತು. ನನಗಂತೂ ಏನೂ ತೋಚುತ್ತಿಲ್ಲ. ಏನಾದರೂ ಹೇಳುವ ಸ್ಥಿತಿಯಲ್ಲೂ ನಾನಿರಲಿಲ್ಲ. ಹೇಗಿದ್ದರೂ ಇವಳೇ ನಿಭಾಯಿಸುತ್ತಾಳೆಂದು ಸುಮ್ಮನೆ ನಿರ್ಲಿಪ್ತನಾಗಿ ಕುಳಿತುಬಿಟ್ಟೆ.

ಸಾಮಾನ್ಯವಾಗಿ ಆಸ್ಪತ್ರೆಯಿಂದ ಮಡಿವಾಳ ಚೆಕ್ ಪೋಸ್ಟ್‍ನತ್ತ ತಿರುಗಿ, ವಿಲ್ಸನ್ ಗಾರ್ಡನ್ ಮುಖಾಂತರ ಮೆಜಿಸ್ಟಿಕ್‍ನತ್ತ ಹೋಗುತ್ತಿದ್ದ ಆಟೋದವರು, ಅಂದು ಅಲ್ಲಿ ಮಳೆಯೆಂದು ಕೋರಮಂಗಲದ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಸಾಗಿ ಆಡುಗೋಡಿ ಮುಖಾಂತರ ತೆರಳುತ್ತಿದ್ದರು. ಅಷ್ಟರಲ್ಲಾಗಲೇ ಭೀಕರವಾಗಿ ಸುರಿಯುತ್ತಿದ್ದ ಮಳೆಯು ಹೊಸಲೋಕವೊಂದನ್ನು ಸೃಷ್ಟಿಸಲು ತೊಡಗಿತ್ತು. ನಾವೆಂದೂ ಇಂತಹ ಮಳೆಯನ್ನು ನೋಡಿರಲಿಲ್ಲ. ನಾನಂತೂ ಇವತ್ತೇನೋ ಘಟಿಸಲಿದೆ ಎಂದು ಮನದಲ್ಲೇ ಅಂದುಕೊಂಡು, ಜಡ್ಡುಗಟ್ಟಿದ ಮನಸ್ಸನ್ನು ಜಾಗೃತಗೊಳಿಸಿ ಕುಳಿತೆ.

ಮಳೆಯಿಂದಾಗಿ ಟ್ರಾಫಿಕ್ ಅಸ್ತವ್ಯಸ್ತವಾಗಿತ್ತು. ಬೈಕ್ ಸವಾರರು ಎಲ್ಲೆಂದರಲ್ಲಿ ತಮ್ಮ ಗಾಡಿಗಳನ್ನು ನಿಲ್ಲಿಸಿ, ಸಿಕ್ಕ ಸಿಕ್ಕ ಜಾಗಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ನಮ್ಮ ಆಟೊವು ಸುರಿಯುವ ಮಳೆಯಲ್ಲಿ ಆಮೆವೇಗದಲ್ಲಿ ಓಡುತ್ತಿತ್ತು. ನಮ್ಮ ಆಟೋ ಡ್ರೈವರ್ “ಏನಪ್ಪ ಮಾಡೋದು ದೇವ್ರೇ?” ಎಂದು ನಿಟ್ಟುಸಿರು ಬಿಡುತ್ತಾ ಮುಂದೆ ಸಾಗಲು ಯತ್ನಿಸುತ್ತಿದ್ದರು. ಎತ್ತ ನೋಡಿದರೂ, ಟೂ ವೀಲರ್‍ಗಳು, ಕಾರುಗಳು, ಆಟೋಗಳು ಮತ್ತು ಆನೆಯಂತೆ ದಾರಿಯನ್ನೆಲ್ಲಾ ಅಕ್ರಮಿಸಿಕೊಂಡು ನಿಂತ ಬಿ.ಎಂ.ಟಿ.ಸಿ. ಬಸ್ಸುಗಳು!

ತೆವಳಿಕೊಂಡೇ ನಮ್ಮ ಆಟೋವೂ ಮುಂದೆ ಹೋಗುತ್ತಿದ್ದರೆ, ರಸ್ತೆಬದಿಯ ಚಿತ್ರಗಳು ಚಿತ್ರವಿಚಿತ್ರವಾಗಿದ್ದವು. ಟ್ರಾಫಿಕ್ ಪೋಲಿಸರಂತೂ ಆ ಮಳೆಯಲ್ಲೇ ತಮ್ಮ ಸಾಹಸದ ಸೇವೆಯನ್ನು ನೀಡುತ್ತಿದ್ದರು. ಟ್ರಾಫಿಕ್ ಹೆಚ್ಚಾದಾಗ ಬೈಕ್ ಸವಾರರು, ರಸ್ತೆಯ ಬದಿಯಲ್ಲಿದ್ದ ಮೋರಿಗಳು ತುಂಬಿ ತುಳುಕಿ ಹರಿಯುತ್ತಿದ್ದರೂ ಲೆಕ್ಕಿಸದೆ ಪುಟ್ಪಾದತಿನ ಮೇಲೆ ಹೋಗುತ್ತಿದ್ದರು. ಅವರ ಧೈರ್ಯ, ಸಾಹಸಕ್ಕೆ ಒಲ್ಲದ ಮನಸ್ಸಿನಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ, ಅವರಿಗೇನಾದರೂ ಹೆಚ್ಚು ಕಡಿಮೆ ಆದಿತೆಂಬ ಧಾವಂತ ಮನದಲ್ಲಿತ್ತು. ಅಷ್ಟರಲ್ಲಿ, ಇಬ್ಬರಿದ್ದ ಒಂದು ಬೈಕಿನ ಮುಂದಿನ ಚಕ್ರ ಕುಸಿದಿದ್ದ ಪುಟ್ಪಾ ತಿನೊಳಕ್ಕೆ ಸಿಕ್ಕಿಬಿಟ್ಟಿತು. ಅದನ್ನು ಕಂಡ ನಮಗೆಲ್ಲಾ ಅಯ್ಯೋ ಎಂದೆನಿಸಿದರೂ, ಅವರಿಬ್ಬರು ಯಾವ ನೋವನ್ನೂ ತೋರ್ಪಡಿಸದೆ ನಗುತ್ತಿದ್ದನ್ನು ಕಂಡು, ಸಂಕಷ್ಟದಲ್ಲಿದ್ದರೂ ನೋವನ್ನು ಮರೆತು ನಕ್ಕ ಅವರನ್ನು ನೋಡಿ ನಾವೂ ನಕ್ಕಿದೆವು. ಆ ನಗುವಿನಲ್ಲಿ ಇದ್ದದ್ದು ಅಸಾಯಕತೆಯಾ? ವ್ಯಂಗ್ಯವಾ? ಅಳು ಬರುವಂತಾ ಸಮಯದಲ್ಲೂ ಮಾನವ ನಕ್ಕು ಬಿಡುತ್ತಾನಲ್ಲ...! ಆ ನಿಲುವಿಗೆ ಧನ್ಯೋಸ್ಮಿ.

ಅಷ್ಟರಲ್ಲಿ ಬಹಳ ಹೊತ್ತಾದರೂ ಮುಂದೆ ಚಲಿಸಲಾಗದೆ ನಮ್ಮ ಆಟೋ ಡ್ರೈವರ್ ಎದುರಿಗೆ ಬರುತ್ತಿದ್ದವರ ಬಳಿ ಏನೋ ಕೇಳಿದವರು ನಮ್ಮ ಕಡೆ ತಿರುಗಿ, “ಸಾರ್, ಮುಂದೆ ಇರೋ ದೊಡ್ಡಮೋರಿ ಉಕ್ಕಿ ಹರಿಯುತ್ತಿದ್ಯಂತೆ, ಅದಕ್ಕೆ ಎಲ್ಲಾರು ಹಿಂದಕ್ಕೆ ತಿರುಗಿಸಿಕೊಂಡು ಹೋಗುತ್ತಿದ್ದಾರೆ. ನಾನೂ ಟ್ರೈ ಮಾಡ್ತೀನಿ ಸಾರ್. ಅಲ್ಲೊಂದು ದಾರಿಯಿದೆ. ಅಲ್ಲಿ ನೀರು ಕಡಿಮೆ ಇರ್ಬೋದು” ಎಂದವರೇ, ಹರಸಾಹಸದಿಂದ ಆಟೋ ತಿರುಗಿಸಿಕೊಂಡು ನಿಧಾನವಾಗಿ ಮುಂದೆ ಸಾಗಲಾರಂಭಿಸಿದರು. adAಅದಾಗ ನನಗೆ “Water, Water everywhere, / And all the boards did shrink; / Water, water everywhere, / Not a drop to drink” ಎಂಬ ಕವಿ ಎಸ್.ಟಿ.ಕಾಲ್ರಿಕಡ್ಜನ ಸಾಲುಗಳು ನೆನಪಾಗಿ ಒಂಥರಾ ಭಯವಾಗುತ್ತಿತ್ತು. ಬಹಳ ಹಿಂದೆ ನೋಡಿದ್ದ “Water World” ಸಿನಿಮಾ ನೆನಪಿಗೆ ಬರುತ್ತಿತ್ತು.

ನಮ್ಮ ಆಟೋ ಇದೀಗ ಹೋಗುತ್ತಿದ್ದ ದಾರಿ ನಮಗೆ ಹೊಸದಾಗಿತ್ತು. ಆ ಪರಿಸ್ಥಿತಿಯಲ್ಲೂ, ಅದಾಗಲೇ ಬಹಳಷ್ಟು ಆಟೋದವರಿಂದ ಮೋಸ ಹೋಗಿದ್ದ ನಮಗೆ, ಈ ಆಟೋದವರ ಮೇಲೆ ಅಪನಂಬಿಕೆ ಮೂಡಿ ಪರಸ್ಪರ ಮುಖ ನೋಡಿಕೊಂಡೆವು. ಮೋಸವನ್ನು ನಾವು ಸಹಿಸಿಕೊಳ್ಳದ್ದಿದ್ದರೂ, ನನ್ನಾಕೆಯು ಅದನ್ನು ವಿರೋಧಿಸದೆ ಬಿಡುವುದಿಲ್ಲ. ಇದನ್ನರಿತ ನಾನು ಕಣ್ಣುಗಳಲ್ಲೇ, ಬೇಡ...ಪ್ಲೀಸ್ ಸುಮ್ನೀರು... ಎಂದು ಕೋರಿದೆ. ಇನ್ನೇನು ಕೇಳಿಬಿಡಬೇಕು ಎಂದು ಕೊಂಡಿದ್ದವಳು, ನನ್ನ ಕೋರಿಕೆಯನ್ನು ಮನ್ನಿಸಿ ಸುಮ್ಮನಾದಳು.

ನಮ್ಮ ಮನಸ್ಥಿತಿಯನ್ನರಿತವರಂತೆ, ನಮ್ಮ ಆಟೋ ಡ್ರೈವರ್ “ಇಲ್ಲಿ ಸ್ವಲ್ಪ ಪರ್ವಾಗಿಲ್ಲ ಸಾರ್. ಶಾಂತಿನಗರದ ಬಸ್‍ಸ್ಟಾಂಡ್‍ನೊಳಗೆ ಹೋಗಿದ್ದರೆ ಚೆನ್ನಾಗಿತ್ತು. ಆದರೆ, ಅಲ್ಲಿ ಬಿಡ್ತಾ ಇರೋ ಹಾಗೆ ಕಾಣ್ತೀಲ್ಲ. ಈ ಕಡೆಯಿಂದ ಹೇಗೋ ಹೋಗ್ಬುಡ್ತೀನಿ” ಎಂದು ಎಡಕ್ಕೆ ತಿರುಗಿದರು. ರಸ್ತೆಯನ್ನು ಗಮನಿಸುತ್ತಿದ್ದವನು ಲಾಲ್‍ಬಾಗ್ ಕಂಡದ್ದನ್ನು ನೋಡಿ, “ಏ ಇವರು ಲಾಲ್‍ಬಾಗ್ ಕಡೆಯಿಂದ ಹೋಗ್ತಾ ಇದ್ದಾರೆ. ಸರಿಯಾಗೆ ಇದೆ ದಾರಿ” ಎಂದು ನನ್ನವಳಿಗೆ ಪಿಸುಗುಟ್ಟಿದೆ. ಸಮಾಧಾನಗೊಂಡಂತೆ ಕಂಡ ಅವಳ ಮುಖದಲ್ಲಿ ಹೌದೆಂಬ ಭಾವವಿತ್ತು.

ಹಾಗೆಯೇ ಮುಂದುವರೆಯುತ್ತಿದ್ದ ನಮಗೆ ಕಂಡದ್ದು, ಭೀಭತ್ಸ ದೃಶ್ಯಗಳು! ಸುರಿಯುವ ಆ ಮಳೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿದ್ದ ಬೈಕುಗಳು ಮಳೆಯ ರಭಸಕ್ಕೆ ಮಲಗಿಕೊಂಡಿದ್ದವು. ಅವುಗಳ ಮೇಲೆಲ್ಲಾ ತುಂಬಿ ಹರಿಯುತ್ತಿದ್ದ ಚರಂಡಿ ನೀರು ಪ್ರವಾಹ ಸ್ವರೂಪದ್ದಾಗಿತ್ತು. ಪಕ್ಕದಲ್ಲಿ ಆಟೋವೊಂದು ಮಗುಚಿ ಬಿದ್ದಿತ್ತು. ನಮ್ಮ ಆಟೋವು ಒಳಗೊಂಡಂತೆ, ಬಹಳ ಆಟೋಗಳ ಒಳಗೆಲ್ಲಾ ನೀರುನುಗ್ಗಿತ್ತು. ನೀರು ಹೆಚ್ಚೆಚ್ಚು ನುಗುತ್ತಿದ್ದ ಹಾಗೇ ನಮ್ಮ ಆಟೋದವರು ಸರಿಯಾಗಿ ಬ್ರೇಕ್ ಹಿಡಿಯಲು ಆಗುತ್ತಿಲ್ಲ ಸಾರ್. ಆದರೂ ಹೇಗೋ ಹೋಗುತ್ತಿದ್ದೇನೆ, ಎಂದೆನ್ನುತ್ತಿದ್ದರು. ಹೀಗೆ ಆಚೆ ಕಣ್ಣಾಡಿಸುತ್ತಿದ್ದವರಿಗೆ, ಪಕ್ಕದಲ್ಲಿದ್ದ ಮನೆ, ಅಂಗಡಿಗಳಿಗೆಲ್ಲಾ ನೀರು ನುಗ್ಗಿ, ಅವರೆಲ್ಲಾ ಅಲ್ಲಿಂದ ನೀರು ತೆಗೆಯುವುದನ್ನು ನೋಡುವುದೇ ಆಯಿತು. ಒಂದು ಮನೆಯಲ್ಲಂತೂ, ಮನೆಯ ಒಳಗೆ ಬರುತ್ತಿದ್ದ ನೀರನ್ನೇ ನೋಡಿ, ಬಾಗಿಲಲ್ಲೇ ಗಾಬರಿಯಿಂದ ಅಳುತ್ತಾ ನಿಂತಿದ್ದ ಮಗುವನ್ನು ನೋಡಿ ಕರುಳು ಚುರುಕ್ಕೆಂದಿತು. ನನ್ನವಳು ಅಯ್ಯೋ ಪಾಪವೆಂದಳು. ಇದಕ್ಕಿಂತ ಕ್ರೂರ ದೃಶ್ಯವೆಂದರೆ ಆ ಸುರಿವ ಮಳೆಯಲ್ಲಿ ಬೆತ್ತಲೆಯಾದ ವ್ಯಕ್ತಿಯೊಬ್ಬ ರಸ್ತೆಗೆ ಬೆನ್ನುಮಾಡಿ ಕುಳಿತಿದ್ದ. ಅವನು ಮಾನಸಿಕ ಅಸ್ವಸ್ಥನಿರಬೇಕು. ಆದರೆ ಅವನೂ ಮನುಷ್ಯನಲ್ಲವೇ? “ಛೇ” ಎಂಬ ನನ್ನ ಉದ್ಗಾರ ಕೇಳಿದ ನನ್ನವಳು “ಏನಾಯ್ತು?” ಎಂದಳು. ಅವಳ ದಿಗಿಲನ್ನು ನೋಡಿ “ನೋಡಮ್ಮ ಪಾಪ ಯಾರೋ ಹುಚ್ಚ; ಬರಿಮೈಯಲ್ಲಿ...” ಎಂದೆ. “ಅಯ್ಯೋ! ಆ ದೇವ್ರಿಗೆ ಸ್ವಲ್ಪನೂ ಕರುಣೆಯಿಲ್ವಾ?” ಎಂದು ಸೃಷ್ಠಿಕರ್ತನಿಗೆ ಬೈದಳು. ಅಷ್ಟರಲ್ಲಿ “ಅಲ್ನೋಡಿ ಮೇಡಂ, ದೇವಸ್ಥಾನ ಆಲ್ಮೋಸ್ಟ್ ಮುಳುಗೇ ಹೋಗಿದೆ” ಎಂದು ಆಟೋ ಡ್ರೈವರ್ ರಸ್ತೆ ಬದಿಯಲ್ಲಿದ್ದ ದೇವಸ್ಥಾನದತ್ತ ನಮ್ಮ ಗಮನ ಸೆಳೆದರು. ಅಲ್ಲಿ ನೋಡಿದರೆ ದೇವರೂ ಕೊಚ್ಚಿ ಹೋಗುವ ಭಯದಲ್ಲಿದ್ದ! ಅವನನ್ನು ರಕ್ಷಿಸಲು ಅಲ್ಲಿದ್ದ ಮನುಷ್ಯರೇ ಪ್ರಯತ್ನಿಸುತ್ತಿದ್ದರು!

ಆ ಭಗವಂತನೇ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಶಕ್ತನಾಗಿರುವಾಗ, ನಮ್ಮಂಥ ಹುಲುಮಾನವರನ್ನು ಹೇಗೆ ರಕ್ಷಿಸಿಯಾನು? ಎನ್ನುವ ಪ್ರಶ್ನೆ ನಮ್ಮ ಮನಗಳಲ್ಲಿ ಮೂಡುತ್ತಿತ್ತು. ಅಷ್ಟರಲ್ಲಿ ಹಾಗೂ-ಹೀಗೂ ಚಾಮರಾಜ ಪೇಟೆಯ ದಾರಿಯಿಂದ ಕಾಟನ್ ಪೇಟೆ ಕಡೆಗೆ ನಮ್ಮ ಆಟೋ ಚಲಿಸುತ್ತಿತ್ತು. ಇನ್ನೇನು ಬಸ್‍ಸ್ಟಾಂಡ್ ಹತ್ತಿರ ಬಂದೇ ಬಿಟ್ಟೆವು ಎಂದು ನಾ ಅಂದುಕೊಂಡ ಸಮಯಕ್ಕೆ, ಎದುರಿನಿಂದ ಬರುತ್ತಿದ್ದ ಆಟೋದವರೊಬ್ಬರು, ನಮ್ಮ ಆಟೋದವರಿಗೆ ಮೆಜಸ್ಟಿಕ್‍ಗೆ ಹೋಗಲು ಆಗುವುದಿಲ್ಲವೆಂದು ತಿಳಿಸಿದರು. ನಮ್ಮ ಆಟೋದವರು ರಸ್ತೆಯ ಪಕ್ಕಕ್ಕೆ ಆಟೋ ನಿಲ್ಲಿಸಿ, “ಏನ್ ಮಾಡ್ಲಿ ಸಾರ್? ಇನ್ನೊಂದು ಸ್ವಲ್ಪ ಮುಂದೆ ಬಿಡುತ್ತೇನೆ. ಅಲ್ಲಿಂದ ನಡೆದುಕೊಂಡು ಹೋಗ್ತೀರೋ?” ಎಂದು ಕೇಳಿದರು. ಈ ಮಳೆಯಲ್ಲಿ ಹೇಗಪ್ಪಾ ನಡೆಯೋದು ಎನ್ನುವ ದಿಗಿಲು ಶುರುವಾಯಿತು. ನನ್ನಾಕೆಯು, “ಹೇಗಾದರೂ ಮಾಡಿ, ಮೆಜಸ್ಟಿಕ್‍ಗೆ ಬಿಟ್ಟು ಬಿಡಿ” ಎಂದು ಕೇಳತೊಡಗಿದಳು. “ನಾ ಏನ್ ಮಾಡ್ಲಿ ಮೇಡಂ, ಮೆಜಸ್ಟಿಕ್ ತುಂಬಾ ಡೌನ್‍ನಲ್ಲಿದೆ. ಈಗಾಗಲೇ ಸಾಕಷ್ಟು ನೀರು ನುಗ್ಗಿರುತ್ತೆ. ಟ್ರಾಫಿಕ್ ಜಾಮ್ ಬೇರೆ ಆಗಿರುತ್ತೆ’ ಎಂದರು. ಅಷ್ಟರಲ್ಲಿ ಇವಳ ಮೊಬೈಲ್ ರಿಂಗಣಿಸತೊಡಗಿತು. ಬ್ಯಾಗಿನಿಂದ ಮೊಬೈಲ್ ತೆಗೆದು ನೋಡಿದವಳೆ “ಅಮ್ಮಾ” ಎಂದು ಮಾತನಾಡತೊಡಗಿದಳು. ಕೆಲವು ಕ್ಷಣಗಳ ನಂತರ ಮೊಬೈಲ್ ಕಟ್ ಮಾಡಿ “ಈ ಮಳೇಲಿ ಹೇಗೆ ಹೋಗ್ತಿರಾ? ಸುಮ್ನೆ ಮನೆಗೆ ಬನ್ನಿ” ಎಂದು ಬೈಯುತ್ತಿದ್ದಾರೆ ಎಂದಳು.

ಇದನ್ನು ಕೇಳಿಸಿಕೊಂಡ ನಮ್ಮ ಆಟೋದವರು “ಎಲ್ಲಿ ಮೇಡಂ ನಿಮ್ಮ ಮನೆ?” ಎಂದರು. “ಮಾಗಡಿ ರೋಡ್” ಇವಳೆಂದಳು. “ಹಾಗಾದ್ರೆ ನಂಗೂ ಹತ್ರ ಮೇಡಂ. ನಮ್ಮನೆ ಪೀಣ್ಯದಲ್ಲಿರೋದು. ನಿಮ್ಮನ್ನ ಬಿಟ್ಟು ನಾನೂ ಸೀದಾ ಮನೆಗೆ ಹೋಗ್ಬಿಡ್ತೀನಿ, ದಾರಿ ಹೇಳಿ” ಎಂದು ಮಾಗಡಿ ರೋಡಿನ ಕಡೆಗೆ ಆಟೋ ತಿರುಗಿಸಿದರು. ನಾನು ಮೌನದಿಂದ ಸಮ್ಮತಿಸಿದೆ. ಸ್ವಲ್ಪ ಹೊತ್ತಿಗೆಲ್ಲಾ ನನ್ನತ್ತೆಯ ಮನೆಗೆ ಬಂದೆವು. ಆಟೋ ಇಳಿದು, ಮಾನವತೆಯೇ ಮೈವೆತ್ತಂತ್ತಿದ್ದ ಆಟೋದವರಿಗೆ ಹಣ ನೀಡಿ, ಥ್ಯಾಂಕ್ಸ್ ಹೇಳಿದೆವು. ಅವರು ಪ್ರತ್ಯುತ್ತರವಾಗಿ, “ನೀವು ಆಸ್ಪತ್ರೆಯಿಂದ ಬಂದವರೆಂದು ತಿಳಿದು. ನನಗೂ ನಿಮ್ಮನ್ನು ದಾರಿ ಮಧ್ಯದಲ್ಲಿ ಇಳಿಸಲು ಮನಸ್ಸಾಗಲಿಲ್ಲ ಸಾರ್. ಒಳ್ಳೆಯದಾಗಲಿ ನಿಮಗೆ, ಬರ್ತೀನಿ” ಎಂದವರೇ ಮುಂದೆ ಚಲಿಸಿದರು.

ನಾವಿಬ್ಬರೂ ಮನೆಯೊಕ್ಕಿದ್ದೆ ತಡ, “ಅಪ್ಪಾ...” ಎಂದು ಸ್ವೆಟರ್ ಮತ್ತು ಟೋಪಿಯಲ್ಲಿ ಕವರಾಗಿದ್ದ ನಮ್ಮ ಗುಬ್ಬಚ್ಚಿ ಮರಿ ಗೋಮಿನಿಯು ಓಡೋಡಿ ಬಂದಳು. ಆ ಮಳೆಯಲ್ಲಿ ಊರಿಗೆ ಹೊರಟಿದ್ದ ನಮ್ಮನ್ನು ಮನೆಯಲ್ಲಿದ್ದವರೆಲ್ಲಾ ಚೆನ್ನಾಗಿಯೇ ತರಾಟೆ ತೆಗೆದುಕೊಂಡರು. ಊಟ ಮಾಡಿ ಮಲಗಿದ ನನಗೆ ನಿದ್ದೆಯಲ್ಲೂ ಮಳೆಯಿಂದ ಆದ ಅಸ್ತವ್ಯಸ್ತ ಜಗತ್ತಿನ ಅಸ್ಪಷ್ಟ ಚಿತ್ರಗಳು ಕಾಡುತ್ತಿದ್ದವು.

- ಗುಬ್ಬಚ್ಚಿ ಸತೀಶ್.

ಶನಿವಾರ, ಏಪ್ರಿಲ್ 9, 2011

ಎದೆಯ ಹಾಡು

ಎದೆಯಲ್ಲಿ ಹಾಡುವ ಈ ಹಾಡು
ಎಷ್ಟು ಹಾಡಿದರೂ ಎಷ್ಟು ಕೇಳಿದರೂ
ಎನಗರಿವಿಲ್ಲದೆಯೆ ಮತ್ತೆ ಹಾಡಿತು ಪಲ್ಲವಿ.

ಚೆಂದ ಚೆಂದದ ಚೂಡಿ
ತೊಟ್ಟಿ ಮಾಡಿದೆ ಮೋಡಿ
ಬೆರಗಾದ ಮಳೆಬಿಲ್ಲ ವರ್ಣ

ಅಂದ ಅಂದದ ಮೊಗಕೆ
ಚಂದ್ರಕಾತಿಯ ಹೊದಿಕೆ
ಮಾಯವಾದ ಬಾನ ಚಂದ್ರ

ಗಂಧ ಗಂಧದ ನಗುವು
ನಗಲಾರದೇನೋ ಮಗುವು
ಉಳಿದ ಸದ್ದೆಲ್ಲಾ ಸ್ತಬ್ಧ

ಜನ್ಮ ಜನ್ಮದ ಒಲವು
ಸರಿಸಾಟಿಯಿಲ್ಲದ ಚೆಲುವು
ಎಂದೆಂದೂ ನಿನ್ನದೇ ಹಾಡು.

              --- ಗುಬ್ಬಚ್ಚಿ ಸತೀಶ್.

("ಮಳೆಯಾಗು ನೀ" ಕವನ ಸಂಕಲದಿಂದ)

ಶುಕ್ರವಾರ, ಏಪ್ರಿಲ್ 1, 2011

ಕ್ರಿಕೆಟ್ ವಿಶ್ವಕಪ್ ೨೦೧೧ ಸುಪ್ರಭಾತ

ಯುವ ಭಾರತ ಯುವ ಭಾರತ
ಯುವ ಭಾರತದ ಕ್ರಿಕೆಟ್ ಕಲಿಗಳೇ
೧೯೮೩ ವಿಶ್ವಕಪ್‍ನ ವಿಜೇತರೆ
ಈ ಬಾರಿಯೂ ಗೆಲ್ಲಿರಿ ನಮ್ಮ ಹುಲಿಗಳೇ

ಹುರಿದುಂಬಿಸಲು ಧೋನಿ ಮಹಾರಾಜನು
ಬಾಲಿಗೊಂದು ಸಿಕ್ಸರ್ ಎತ್ತಲಿ ಯುವರಾಜನು
ಮೊದಮೊದಲೇ ಚಚ್ಚಲಿ ಸಚಿನ್ನ! ಸೆಹವಾಗನು
ಜೊತೆಗೆ ಸಾಥ್ ನೀಡಲಿ ಗೌತಮ ಗಂಭೀರನು

ಬಿರುಗಾಳಿ ಚಂಡೆಸೆಯಲಿ ಜಹೀರ್, ಮುನಾಫನು
ಸುಂಟರಗಾಳಿ ಚೆಂಡಲಿಡಲಿ ಹರಭಜನನು
ಜೊತೆಜೊತೆಯಲೇ ಮಿಂಚಲು ಎಲ್ಲಾ ಬೌಲರ್‍ಗಳು
ಆಲ್‍ರೌಂಡರ್‍ಗಳ ಮಹಾಪೂರವೇ ಕೈ ಜೋಡಿಸುವರು

ನಾವೆಲ್ಲರೂ ನಿಮ್ಮೊಂದಿಗೆ, ನಾವೆಲ್ಲರೂ ನಿಮ್ಮೊಂದಿಗೆ
ಈ ಬಾರಿಯ ವಿಶ್ವಕಪ್ ನಮ್ಮದಾಗಲಿ
ಇಡೀ ವಿಶ್ವವೇ ಕೊಂಡಾಡಲಿ ನಮ್ಮ ವಿಜಯವ
ಎಲ್ಲರೂ ಹಾರಿಸಲಿ ನಮ್ಮ ತ್ರಿವರ್ಣ ಧ್ವಜವ

                                           - ಗುಬ್ಬಚ್ಚಿ ಸತೀಶ್.

ಶುಕ್ರವಾರ, ಮಾರ್ಚ್ 18, 2011

ಗಡ್ಡ ಧಾರಿ ನಲ್ಲ

ಗಡ್ಡ ಧಾರಿ ನಲ್ಲ


ಪಿಯುಸಿಯಲ್ಲಿದ್ದಾಗ ಇರಬೇಕು ನನ್ನ ಗಡ್ಡ ಚಿಗುರತೊಡಗಿತ್ತು. ಹಾಲುಗೆನ್ನೆಯ ಮೇಲೆ ಅಲ್ಲೊಂದು ಇಲ್ಲೊಂದು ಕೂದಲು. ನುಣುಪಾದ ಕಲ್ಲಿನ ಮೇಲಿನ ಪಾಚಿಯಂತೆ. ಮೀಸೆ ಚಿಗುರಿದ ಸ್ವಲ್ಪ ದಿನಗಳಲ್ಲೇ ಗಡ್ಡವೂ ಚಿಗುರತೊಡಗಿತಲ್ಲ, ಶುರುವಾಯಿತು ಪೀಕಲಾಟ. ಒಂದು ಕಡೆ ನಾನು ಗಂಡಸಾಗುತ್ತಿದ್ದೀನಲ್ಲ ಎಂಬ ಹರ್ಷ. ಮತ್ತೊಂದೆಡೆ ನಯವಾದ ಕೆನ್ನೆಗಳು ಒರಟಾಗುತ್ತವಲ್ಲ ಎಂಬ ಯೋಚನೆ. ಯಾವುದೇ ಕಾರಣಕ್ಕೂ ಜೀವನದಲ್ಲಿ ಗಡ್ಡ ಬಿಡಬಾರದು, ಯಾವಾಗಲೂ ನೀಟಾಗಿ ಶೇವ್ಮಾಎಡಿಕೊಂಡು ಮೀಸೆ ಇರುವ ಅನಂತ್ನಾಕಗ್ನಂ್ತೆ ಕಾಣುವ ಆಸೆ ಮೊದಲಿನಿಂದಲೂ ಮನದಲ್ಲಿತ್ತು. ಬಯಲುದಾರಿಯ ಸುರಸುಂದರಾಂಗ ಅನಂತ್ ನೀಟಾಗಿ ಶೇವ್‍ ಮಾಡಿಕೊಂಡು ಅದೆಷ್ಟು ಸುಂದರವಾಗಿ ಕಾಣುತ್ತಿದ್ದ. ಆಗ ಆತನಿಗೆ ಮೀಸೆ ಇದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿದ್ದನೆನೋ?

ಗಡ್ಡ ಚಿಗುರಿದ ಮೇಲೆ ಹೇರ್ ಕಟಿಂಗ್ ಮಾಡುವವರ (ನಾನು ಅವರನ್ನು ಹಜಾಮನೆನ್ನುವುದಿಲ್ಲ) ಬಳಿ ಹೋದಾಗ ಬಹಳ ಭಯ ಶುರುವಾಗಿತ್ತು. ಅವರೇನಾದರೂ ಹೊಚ್ಚ ಹೊಸ ಬ್ಲೇಡನ್ನು ತಮ್ಮ ಕತ್ತಿಗೆ ಸಿಲುಕಿಸಿಕೊಂಡು ಕೆನ್ನೆಗೆ ಬುರ ಬುರ ನೊರೆಹಚ್ಚಿ ಪರಪರ ಕೆರೆದರೆ ಎಂಬ ಭಯ. ಅಂದು ಹೇರ್ ಕಟಿಂಗ್ ಆದ ನಂತರ ಅವರೇ “ನಿನಗೆ ಈಗಲೇ ಶೇವ್ ಮಾಡುವುದಿಲ್ಲ. ಟ್ರಿಮ್ ಮೇಷಿನ್ನಿಂ ದ ಗಡ್ಡವನ್ನು ಟ್ರಿಮ್ ಮಾಡುತ್ತೇನೆ. ಚೆನ್ನಾಗಿ ಬೆಳೆಯುವವರೆಗೆ ಎಲ್ಲೂ ಶೇವ್ ಮಾಡಿಸಬೇಡಿ” ಎಂದರು. ನನ್ನ ಭಯಕ್ಕಿಂತ ಮುಖ್ಯವಾಗಿ ನಮ್ಮಂಥ ಯುವಕರ ಮುಖ ಬೇಗ ಹಾಳಾಗದಿರಲಿ ಎಂಬುದು ಅವರ ಅಭಿಲಾಷೆಯಾಗಿರಬೇಕು. ಸದ್ಯ! ದೇವರೇ ಕಾಪಾಡಿದ.

ಹೇಳಿ ಕೇಳಿ ಗಡ್ಡ! ನನ್ನ ಮಾತೆಲ್ಲಿ ಕೇಳಬೇಕು. ದಿನಗಳೆದಂತೆಲ್ಲಾ ಮತ್ತೆ ಬೆಳೆಯತೊಡಗಿತು. ಅಲ್ಲೊಂದು ಇಲ್ಲೊಂದು ಬೆಳೆಯುತಿದ್ದ ಕೂದಲುಗಳು ದಟ್ಟವಾಗತೊಡಗಿದವು. ನಾನೇನು ಅದಕ್ಕೆ ಪ್ರತ್ಯೇಕವಾಗಿ ನೀರು, ಗೊಬ್ಬರ ಹಾಕಿರಲಿಲ್ಲ. ಆದರೂ ಸೊಂಪಾಗಿ ಬೆಳೆಯತೊಡಗಿತು ನನ್ನ ಗಡ್ಡ. ಎಷ್ಟು ಸಲ ಟ್ರಿಮ್ ಮಾಡಿಸುವುದು? ಕಡೆಗೊಂದು ದಿನ ಹೇರ್ ಕಟಿಂಗ್ ಮಾಡುತ್ತಿದ್ದವರು ಹೇಳಿಯೇ ಬಿಟ್ಟರು: “ನೀವು ಇನ್ನು ಮುಂದೆ ಶೇವ್ ಮಾಡಿಸಿಕೊಂಡು ಬಿಡಿ. ಸಾಧ್ಯವಾದರೇ ಮನೆಯಲ್ಲೇ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ”. ಆತ ಹೇಳಿದ್ದು ನನಗೆ ವೇದವಾಕ್ಯದಂತಿತ್ತು.

ವೇದವಾಕ್ಯ ಯಾಕೆಂದರೆ ಅದಾಗಲೇ ಮಹಾಮಾರಿ ಏಡ್ಸ್ ಜಗತ್ತಿನಲ್ಲೆಲ್ಲಾ ಹರಡತೊಡಗಿತ್ತು. ಹರಡುವ ವಿಧಾನಗಳಲ್ಲಿ ಯಾರಾದರೂ ಏಡ್ಸ್ ರೋಗಿಯ ಗಡ್ಡವನ್ನು ತೆಗೆದ ಬ್ಲೇಡ್ನೆಲ್ಲಿ ರಕ್ತ ಅಂಟಿದ್ದರೆ, ಅದೇ ಬ್ಲೇಡ್ನಿಂಾದ ಶೇವ್ ಮಾಡಿಸಿಕೊಳ್ಳುವ ಆರೋಗ್ಯವಂತನಿಗೂ ಏಡ್ಸ್ ಬರುವ ಸಾಧ್ಯತೆ ಬಹಳವಿರುತ್ತದೆ ಎಂಬುದು. ಇದು ಮೊದಲೇ ತಿಳಿದುದರಿಂದ ನಾ ಅಂದು ಶೇವ್ ಮಾಡಿಸಿಕೊಳ್ಳಲಿಲ್ಲ. ಅದಾಗಲೇ ಸಲೂನ್ರದವರು ಎಲ್ಲರಿಗೂ ಪ್ರತ್ಯೇಕವಾದ ಬ್ಲೇಡ್ ಬಳಸುತ್ತಿದ್ದರೂ ನನಗೆ ಯಾಕೋ ಹಾಳು ಅನುಮಾನ ಮತ್ತು precaution is better than cure ಎಂಬ ನಿರ್ಧಾರ.

ಅಲ್ಲಿಗೆ ನಾನೇ ದಿನಾ ಶೇವ್ ಮಾಡಿಕೊಳ್ಳುವುದೆಂದು ನಿರ್ಧರಿಸಿಯಾಗಿತ್ತು. ಹೇಗಿದ್ದರೂ ಚಿಕ್ಕಂದಿನಲ್ಲಿ ತಾತ, ಅಪ್ಪ, ಚಿಕ್ಕಂಪ್ಪಂದಿರು ಶೇವ್ಮಾಂಡಿಕೊಳ್ಳುತ್ತಿದ್ದುದನ್ನು ತನ್ಮಯನಾಗಿ ನೋಡಿದ್ದೆ. ಅದಾಗಲೇ ಅಣ್ಣನೂ ಶೇವ್ ಮಾಡಿಕೊಳ್ಳಲು ಶುರುಮಾಡಿದ್ದ. ಹೊಚ್ಚಹೊಸ ಬ್ಲೇಡ್ ತೆಗೆದುಕೊಂಡು ಅಂತೂ ಇಂತೂ ಶೇವ್ ಮಾಡಿಕೊಂಡೆ, ಮೊದಲನೆಯ ಶೇವಿಂಗ್ ಎಕ್ಸ್‍ಪಿರಿಯನ್ಸ್ ಮೊದಲ ಗೆಳತಿಯಷ್ಟೆ ನಿಚ್ಚಳ! ಅಲ್ಲಲ್ಲಿ ಕೆಂಪಾದಂತೆ ಕಂಡರೂ, ಮುಖ ಕಪ್ಪಾಗುತ್ತೆಂಬ ಭೀತಿಯಲ್ಲಿ After Shave ಬಳಸಬಾರದೆಂದು ನಿರ್ಧರಿಸಿದ್ದೆ. ಎಲ್ಲದಕ್ಕೂ ಬಿಸಿ ನೀರು ಅಷ್ಟೆ.

ಕಾಲೇಜಿನ ದಿನಗಳಲ್ಲಿ ಪ್ರತಿ ಭಾನುವಾರದಂದು ಶೇವ್ ಮಾಡಿಕೊಳ್ಳುವುದು ಅಭ್ಯಾಸವಾಯಿತು. ಪದವಿ ಮುಗಿದು ಕೆಲಸಕ್ಕೆ ಸೇರಿದ ಮೇಲೆ ದಿನವೂ ಶೇವ್ ಮಾಡುವುದು ರೂಢಿಯಾಯಿತು. ದಿನಾಗಲೂ ಶೇವ್ ಮಾಡಿಕೊಂಡು ನೀಟಾಗಿ ಬರುವ ಬೆರಳೆಣಿಕೆಯಷ್ಟು ಸಿಬ್ಬಂದಿ ವರ್ಗದವರ ಲಿಸ್ಟಿಗೆ ಸೇರಿದ್ದೂ ಆಯಿತು. ಆಫೀಸಿನಲ್ಲಿ ಕೆಲವರಂತೂ ಮುಖವೇ ಕಾಣದ ಹಾಗೆ ಗಡ್ಡ ಬಿಟ್ಟಿದ್ದರು. ಕಾರಣ ಕೇಳಿದರೆ, “ಅಲರ್ಜಿ ಆಗುತ್ತದೆ. ಟೈಮಿಲ್ಲ. ಹೀಗೆ ಚೆನ್ನಾಗಿ ಕಾಣುತ್ತದೆ” ಎಂದುತ್ತರಿಸುತ್ತಿದ್ದರು. ಆದರೂ ನಾನು ಕೇಳುವುದನ್ನು ಬಿಡುತ್ತಿರಲಿಲ್ಲ. ಏನಾದರೂ ಮಾಡಿ ಇವರ ಗಡ್ಡ ತೆಗೆಸಿ ಸರಿಯಾಗಿ ಅವರ ಮುಖ ನೋಡಬೇಕೆನ್ನುವ ಹಠ. ನನ್ನ ಹಿಂಸೆಗೆ ಒಬ್ಬೊಬ್ಬರು ಗಡ್ಡ ಬೋಳಿಸಿಕೊಂಡು ಬಂದು ಎಲ್ಲರಿಗೂ ಹಿಂಸೆ ಕೊಡಲು ಶುರುಮಾಡಿದ್ದರು.

ಇವರೆಲ್ಲರನ್ನೂ ನೋಡಿ ನನಗೂ ಗಡ್ಡ ಬಿಡಬೇಕೆಂಬ ಆಲೋಚನೆ ಇಣುಕಹತ್ತಿತ್ತು. ಈ ಆಲೋಚನೆಗೆ ನನ್ನ ನೆಚ್ಚಿನ ಮತ್ತೊಬ್ಬ ನಟ ಶಂಕರನಾಗ್ ಗಡ್ಡದ inspiration ಬೇರೆ kuಕುಮ್ಮಕ್ಕು ನೀಡತೊಡಗಿತು. ಜಾರ್ಜ್ ಬರ್ನಾಡ್ ಶಾರಂತೂ ದಿನಕ್ಕೆ ನಾಲ್ಕು ನಿಮಿಷ ವೇಷ್ಟೆಂದು ಗಡ್ಡವನ್ನು ತೆಗೆಯುತ್ತಿರಲಿಲ್ಲ. ಗಡ್ಡವನ್ನು ಬಿಟ್ಟರೆ ಟೈಮೂ ಉಳಿಯುತ್ತಿದ್ದರಿಂದ ಇನ್ನಷ್ಟು ಹೆಚ್ಚು ಓದಬಹುದಲ್ಲ ಎಂಬ ಆಸೆ ಬೇರೆ ಜೊತೆಗೂಡಿತು. ಆದರೆ ಯಾಕೋ ಮನಸೇ ಬರಲಿಲ್ಲ. ಅಲ್ಲಿಗೆ ಗಡ್ಡ ಬಿಡುವ ವಿಚಾರ ಕೈ ಬಿಟ್ಟಂತಾಯಿತು. ಜೊತೆಗೆ ದಿನಾಗಲೂ ನೀಟಾಗಿ ಶೇವ್ ಮಾಡಿಕೊಂಡು ಆಫೀಸಿಗೆ ಹೋಗು ಎನ್ನುವ ಅಪ್ಪನ ಅಡ್ವೈಸಿತ್ತು.

ವರ್ಷಗಳು ಉರುಳಿದವು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಲಕ್ಷ್ಮಿಯನ್ನು ಕೈ ಹಿಡಿಯುವ ಮುಹೂರ್ತ ಬಂತು. ಸರಳ ಸುಂದರ ವಿವಾಹ. ಅಂದಂತೂ ಮೂರು ಬಾರಿ ಶೇವ್ ಮಾಡಿಕೊಂಡಿದ್ದಾಯಿತು. ಮನತುಂಬಿದ್ದವಳನ್ನು ಮದುವೆಯಾಗಿ ಮನೆ ತುಂಬಿಸಿಕೊಂಡದ್ದಾಯಿತು. ಮೊದಲ ರಾತ್ರಿಯೇ ನನ್ನ ನಯವಾದ ಕೆನ್ನೆಯನ್ನು ಮೆಚ್ಚಿ hಹೊಗಳಿದ್ದಳು ನನ್ನ ಮಡದಿ. ಅದಕ್ಕೆ ಬೋನಸ್ಸಾಗಿ ಎರಡು ಸಿಹಿಮುತ್ತುಗಳು ಹೆಚ್ಚಾಗಿವೇ ದೊರೆತವು. ಅಲ್ಲಿಗೆ ದಿನಾಗಲೂ ನಯವಾಗಿ ಶೇವ್ ಮಾಡಿಕೊಳ್ಳುವುದರ ಖುಷಿಯ ಜೊತೆಗೆ ಪ್ರಯೋಜನವಾಗತೊಡಗಿತ್ತು.

ಅದೇನಾಯಿತೋ ಏನೋ ಇದ್ದಕ್ಕಿದ್ದಂತೆ ನನ್ನ ಹೆಂಡತಿಗೆ ನನ್ನ ಗಡ್ಡವನ್ನು ನೋಡುವ ಬಯಕೆಯಾಯಿತು. ಒಂದು ದಿನ ಬಿಂಕದಿಂದ “ರೀ, ನೀವು ಒಂದು ತಿಂಗಳ ಕಾಲ ಗಡ್ಡ ಬಿಟ್ಟು ಬಿಡಿ. ನಿಮ್ಮನ್ನು ಗಡ್ಡದಲ್ಲಿ ನೋಡುವ ಆಸೆಯಾಗಿದೆ” ಎಂದು ಕೋರಿಕೆಯಿಟ್ಟಳು. ನಾ ಬೇಡವೆಂದೆ. ಅವಳು ಬಿಡಲಿಲ್ಲ. ಕಡೆಗೆ ಅವಳ ಹುಸಿಕೋಪಕ್ಕೆ ಭಯವಾಗಿ ನಾನೇ ಸೋತೆ. ಆದರೆ ನನ್ನದೊಂದು ಕಂಡಿಷನ್ ಮೇಲೆ. ಏನೆಂದರೆ ನಾನು ಗಡ್ಡ ಬಿಟ್ಟಾಗಲೂ ದಿನಾಲೂ ಕೊಡುವ ಬೋನಸ್ ಮುತ್ತುಗಳನ್ನು ತಪ್ಪಿಸಬಾರದೆಂದು. ಅದಕ್ಕವಳು ಒಪ್ಪಿ ಕೆನ್ನೆಯ ಮೇಲೆ ರುಜು ಹಾಕಿದಳು.

ಹೆಂಡತಿಗಾಗಿ ಯಾರ್ಯಾರೋ ಏನೇನನ್ನೋ ಮಾಡಿದ್ದಾರೆ. ಆರನೇ ಜಾರ್ಜ್, ಬ್ರಿಟಿಷ್ ಸಾಮ್ರಾಟ ಸಿಂಹಾಸನವನ್ನೇ ತ್ಯಜಿಸಲಿಲ್ಲವೇ? ಅಂದಿನಿಂದ ಗಡ್ಡ ಬಿಡುವುದು ಶುರುವಾಯಿತು. ಮೊದಲ ದಿನದ ಗಡ್ಡವನ್ನು ಕನ್ನಡಿಯಲ್ಲಿ ನೋಡಿಕೊಂಡರೆ ಎನೋ ಇರುಸುಮುರುಸು. ಕನ್ನಡಿಯೂ ಬೇಜಾರು ಮಾಡಿಕೊಂಡಂತಿತ್ತು. ಬದಲಾವಣೆ ಜಗದ ನಿಯಮವಾಗಿರುವಾಗ ನನ್ನದೇನು ಎಂದು ಕೊಂಡು ಆಫೀಸಿಗೆ ಹೋರಟ್ಟದಾಯಿತು. ಬಾಗಿಲ ಬಳಿ ನಿಂತು ಮಡದಿ ಮುಸಿಮುಸಿ ನಗುತ್ತಿದ್ದಳು. ಕಣ್ಣಲ್ಲೇ ಚೆನ್ನಾಗಿದೆ ಎಂದಳು.

For the first time in my life ಗಡ್ಡದ ಜೊತೆ ಆಫೀಸಿಗೆ ಹೊರಟ್ಟಿದ್ದೆ. ದಾರಿಯಲ್ಲೆಲ್ಲಾ ನನ್ನನ್ನೇ ನೋಡುತ್ತಿದ್ದಾರೇನೋ ಎಂದೆನಿಸುತ್ತಿತ್ತು. ಆಫೀಸಿನಲ್ಲಿ ಕಿಚಾಯಿಸುವವರನ್ನು ನೆನೆದು ಭಯವಾಗುತ್ತಿತ್ತು. ಹೆಂಡತಿ ಹೇಳಿದರೆ ಕೇಳಲೇಬೇಕು ಎಂಬ ಹಾಡನ್ನು ನೆನೆದು ಸಮಾಧಾನಮಾಡಿಕೊಂಡು, ಏನಾದರಾಗಲಿ ಯಾರಿಗೂ ಗಡ್ಡ ಬಿಟ್ಟ ಕಾರಣವನ್ನು ಹೇಳಬಾರದೆಂದು ಆಫೀಸಿಗೆ ಕಾಲಿಟ್ಟಿದ್ದಾಯಿತು.

ಮೊದಲ ದಿನವಾದ್ದರಿಂದ ಅಷ್ಟಾಗಿ ಯಾರೂ ಗಮನಿಸಲಿಲ್ಲ. ಎರಡು, ಮೂರು ದಿನ ಕಳೆದ ಮೇಲೆ ಎಲ್ಲರೂ ನನ್ನನ್ನೇ ದಿಟ್ಟಿಸತೊಡಗಿದರು. ಕಡೆಗೂ ರೆಗ್ಯೂಲರ್ರಾಗಿ ಗಡ್ಡ ಬಿಡುತ್ತಿದ್ದವರೊಬ್ಬರಿಂದ ನಿರೀಕ್ಷಿತ ಪ್ರಶ್ನೆ ಬಂತು. “ಏನ್ರೀ? ಗಡ್ಡ ಬಿಟ್ಬುಟಿದ್ದೀರಾ?” ವ್ಯಂಗ್ಯ ಬೆರೆತ ಧ್ವನಿ. “ಏನಿಲ್ಲಾ ಸಾರ್, ಫಾರ ಎ ಚೇಂಜ್ ಅಷ್ಟೆ” ಎಂದು ಅಂದು ಮಾತು ತೇಲಿಸಿದ್ದಾಯಿತು. ಆದರೆ ಕಿಚಾಯಿಸುವವರು ಅಷ್ಟಕ್ಕೇ ಸುಮ್ಮನಿರಬೇಕಲ್ಲಾ? ಮೊದಲೆಲ್ಲಾ ನಾನು ರೇಗಿಸುತ್ತಿದ್ದವರಿಗೆಲ್ಲಾ ನನ್ನನ್ನು ರೇಗಿಸಲು ನಾನಾಗಿಯೇ ಒಂದು ಟಾಪಿಕ್ ಕೊಟ್ಟಂತಾಗಿತ್ತು. ಮತ್ತೆ ದಿನಾಗಲೂ ನನ್ನ ಗಡ್ಡದ ಬಗ್ಗೆಯೇ ಪ್ರಶ್ನೆಗಳ ಮಳೆ ಶುರುವಾಯಿತು. ದಿನಾಲು ಏನಾದರೊಂದು ಹೇಳಿ, ನನ್ನ ನಲ್ಲೆಯನ್ನು ಮನದಲ್ಲೇ ನೆನೆಯುತ್ತಾ, ಒಳಗೊಳಗೇ ನಗುತ್ತಾ ಆಗುತ್ತಿದ್ದ ಮುಜುಗರದಿಂದ ತಪ್ಪಿಸಿಕೊಳ್ಳತೊಡಗಿದೆನು. ಎಲ್ಲಿಯವರೆಗೂ ತಪ್ಪಿಸಿಕೊಳ್ಳುವುದು? ಕಡೆಗೂ ಆಘಾತವಾಗುವಂತ ಒಂದು ಪ್ರಶ್ನೆ ಮೂಡಿಬಂತು. “ಏನಪ್ಪ ಮದುವೆಯಾಗಿ ಮೂರೇ ತಿಂಗಳಿಗೆ ಏನಾದ್ರೂ ಪ್ರಾಬ್ಲಮ್ಮ?” ಶಶಿ ಆತ್ಮೀಯತೆಯಿಂದ ಕೇಳಿದರೂ ಅವನ ಪ್ರಶ್ನೆ ನನ್ನನ್ನು ಕ್ಷಣಕಾಲ ವಿಚಲಿತನನ್ನಾಗಿಸಿತು. “ಏ ಏನಿಲಮ್ಮಾ?” ಎಂದು ನಕ್ಕಿದೆ. ಮುಂದುವರೆದ ಅವನು “ಎಲ್ಲಾರೂ ನಿನ್ನ ಹಿಂದೆ ನಿನ್ನ ಗಡ್ಡದ ಬಗ್ಗೆಯೇ ಮಾತಾಡುತ್ತಿದ್ದಾರೆ. ಏನೋ ಪ್ರಾಬ್ಲಂ ಇರ್ಬೇಕು ಅದಕ್ಕೆ ಗಡ್ಡ ಬಿಟ್ಟವ್ನೆ ಅಂತಾ. ಬೇಜಾರ್ ಮಾಡ್ಕೋಬೇಡಪ್ಪ” ಎಂಬ ಸಮಾಧಾನದ ಆದರೆ ಎಚ್ಚರಿಕೆಯ ಮಾತನಾಡಿದ್ದ.

ನನ್ನ ಕಷ್ಟ ಅವನಿಗೇನು ಗೊತ್ತು. ಹೇಳುವ ಹಾಗೂ ಇಲ್ಲಾ, ಬಿಡುವ ಹಾಗೂ ಇಲ್ಲ. ಬಾಯಲ್ಲಿ ಬಿಸಿ ತುಪ್ಪ, ಉಗುಳುವ ಹಾಗೂ ಇಲ್ಲ, ನುಂಗುವ ಹಾಗೂ ಇಲ್ಲ. ಏನಾದರಾಗಲಿ ಯಾರಿಗೂ ನಾನು ಗಡ್ಡ ಬಿಟ್ಟ ಕಾರಣವನ್ನು ಹೇಳುವ ಹಾಗಿರಲಿಲ್ಲ. ಹೇಳಲೇಬಾರದೆಂಬ ಮಡದಿಯ ಒತ್ತಾಸೆಯಿತ್ತಲ್ಲ! ಸರಿ, ಹಾಗೆಯೇ ದಿನ ಕಳೆಯುತ್ತಾ, ಕಳೆಯುತ್ತಾ ನನ್ನ ಗಡ್ಡ ಮತ್ತಷ್ಟು, ಮೊಗದಷ್ಟು ಸೊಂಪಾಗಿ ಬೆಳೆಯತೊಡಗಿತು. ಕೇಳುವವರು ಎಷ್ಟು ಅಂತಾ ಎದುರಿಗೆ ಕೇಳಿಯಾರು? ಆದರೆ ಹಿಂದೆ ಪಿಸುಪಿಸು ಗುಸುಗುಸು ತಪ್ಪಲಿಲ್ಲ. ಹೇಳಬೇಕೆಂದರೆ ಅದು ಇನ್ನೂ ಹೆಚ್ಚಾಯಿತು.

ಹೀಗೆ ಇಪ್ಪತ್ತು ದಿನಗಳು ಕಳೆದವು. ಗಡ್ಡದ ಬಗೆಗಿನ ಇತರರ ಕುತೂಹಲ ನನಗೆ ಸಹಿಸಲಾಗಲಿಲ್ಲ. ಅವರ ನೋಟಗಳಲ್ಲೇ ಏನಾದ್ರು ಪ್ರಾಬ್ಲಮ್ಮ? ಎಂಬ ಮೊನಚು ಪ್ರಶ್ನೆಗಳು ಕಾಡುತ್ತಿದ್ದವು. ನನಗೆ ಇನ್ನು ತಡೆಯಲಾಗಲಿಲ್ಲ. ಇಷ್ಟೂ ದಿನವೂ ನನ್ನ ಮಡದಿ ನಿಮ್ಮ ಗಡ್ಡದ ಬಗ್ಗೆ ಆಫೀಸಿನಲ್ಲಿ ಯಾರೂ ಏನೂ ಕೇಳಲಿಲ್ಲವಾ? ಎಂಬ ಪ್ರಶ್ನೆಗೆ ಇಲ್ಲಾ ಎಂದೇ ಉತ್ತರಿಸಿ ಸುಮ್ಮನಾಗುತ್ತಿದ್ದವನು, ಒಂದು ರಾತ್ರಿ ಮಲಗುವ ಮುನ್ನ ಅವಳ ಮುಖವನ್ನೇ ದಿಟ್ಟಿಸುತ್ತಾ ಆಫೀಸಿನಲ್ಲಿ ನನ್ನ ಗಡ್ಡದ ಬಗ್ಗೆ ಮೂಡಿರುವ ಸಂದೇಹಗಳು, ಸಹೋದ್ಯೋಗಿಗಳ ಕುಹಕ ಪ್ರಶ್ನೆಗಳ ಬಗ್ಗೆ ಹೇಳಿದೆ. “ಅವರಿಗೇನಂತೆ?” ಎಂದು ತಕ್ಷಣ ಕೇಳಿದವಳು, ಏನೋ ತಪ್ಪಿ ನುಡಿದವಳಂತೆ ಮತ್ತೆ “ಬೇಡ ಬಿಡಿ, ನಾಳೇನೇ ಗಡ್ಡ ತೆಗೆದುಬಿಡಿ” ಎಂದಳು. “ಏಯ್! ಇಲ್ಲಾ ಕಣೆ, ಯಾರ್ ಏನೇ ಹೇಳ್ಲಿ ನಾನು ಮಾತಿಗ್ ತಪ್ಪಲ್ಲ. ಅದೇನಾಗುತ್ತೋ ಆಗ್ಲಿ ಬಿಡು. ಕೆಲವರನ್ನ ಅರ್ಥಮಾಡ್ಕೋಳ್ಳೊಕ್ಕೂ ಇದು ಒಳ್ಳೆ ಟೈಮು ಅಂತ ಸುಮ್ನೆ ಇದ್ದುಬಿಡ್ತೀನಿ. ನೀ ಸುಮ್ನಿರು ಜಾಸ್ತಿ ತಲೆ ಕೆಡಿಸ್ಕೋಬೇಡ” ಅಂದೆ. ಅದಕ್ಕವಳು, “ಅದು ಹಾಗಲ್ಲಾರೀ... ಅವರೆಲ್ಲಾ ನಮ್ಮ ಸಂಬಂಧದಲ್ಲಿ ಏನೋ ಸಮಸ್ಯೆ ಆಗಿದೆ ಅಂತಾ ತಪ್ಪು ತಿಳ್ಕೋಂಡಿದಾರೆ... ಅದು ನನಗೆ ಅಷ್ಟು ಸರಿ ಕಾಣ್ತಾ ಇಲ್ಲಾ... ಪ್ಲೀಸ್... ನಾಳೇನೇ ಗಡ್ಡ ತೆಗೆಸಿಬಿಡಿ...” ಎಂದು ಗೋಗರೆದಳು. “ಇದೇನೇ ನೀನು, ಗಡ್ಡ ಬಿಡಿ ಅಂತ್ಯಾ, ತೆಗಿಸ್ರಿ ಅಂತ್ಯಾ, ನಾ ಮೊದ್ಲೆ ಬೇಡ ಅಂತಾ ಹೇಳುದ್ನೋ ಇಲ್ವೊ?” ಎಂದು ಸ್ವಲ್ಪ ಬೇಸರದಿಂದಲೇ ನುಡಿದೆ. ಅದಕ್ಕವಳು “ರೀ... ಸಾರಿ ರೀ... ಪ್ಲೀಸ್... ನಾಳೆ ತೆಗೆದ್ಬುಡಿ” ಎಂದು ಅಳುವಂತೆ ಆಡಿದಳು. ನನಗೂ ಗಡ್ಡದ ಕಿರಿಕಿರಿ ಸಾಕಾಗಿತ್ತು. ಇವಳು ಒಪ್ಪಿದ ಮೇಲೆ ಇನ್ನೇನು? ಸರಿ ಎಂದು ಮನದಲ್ಲೇ ಅಂದುಕೊಂಡು, ಇವಳೆಡೆಗೆ ಬಾಗಿ “ಪಾಪಿ ಗಡ್ಡಕ್ಕೆ ಇವತ್ತೇ ಲಾಸ್ಟ್ ಛಾನ್ಸ್” ಎಂದೆ. ಎಂದಿನಂತೆ ಅವಳು ನಗುಮೊಗದಿಂದ ಗಡ್ಡಕ್ಕೆ ಬಾಯ್ ಹೇಳಿದಳು.

---





ವಿವಿಧ ದತ್ತಿ ಪುಸ್ತಕ ಪುರಸ್ಕಾರಗಳು...

ವಿವಿಧ ದತ್ತಿ ಪುಸ್ತಕ ಪುರಸ್ಕಾರಗಳು... ಕನ್ನಡ ಸಾಹಿತ್ಯ ಪರಿಷತ್ತು 2023 ನೇ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಕೃತಿಗಳ...