ಭಾನುವಾರ, ಮಾರ್ಚ್ 17, 2024

ಹಿರಿತನ (ನ್ಯಾನೋ ಕತೆ)


ಯತೀಶ, ಆನಂದ, ಲಿಂಗಪ್ಪ, ರಾಜ ಎಲ್ಲಾ ಹೇಗಿದ್ದೀರ? ಏನು ಓದುದ್ರಿ? ಏನು ಬರೆದ್ರಿ? ಎನ್ನುತ್ತಲೇ ಕಾಫಿ ಬಾರಿಗೆ ಬರುತ್ತಿದ್ದ ಹಿರಿಯ ಸಾಹಿತಿಗಳನ್ನು ಕಂಡ ಕೂಡಲೇ ಅಲ್ಲಿದ್ದ ಯುವ ಸಾಹಿತಿಗಳು, ಸಾಹಿತ್ಯ ಸಂಚಾಲಕರೆಲ್ಲ ಎದ್ದು ನಿಂತು ಗೌರವಿಸುತ್ತಿದ್ದರು. ಅದು ಆಗ. ಇತ್ತೀಚೆಗೆ ಈ ಹಿರಿಯ ಸಾಹಿತಿಗಳಿಗೆ ಯಾರೂ ಸಿಗಲಿಲ್ಲವೆಂದು ಗೌರವವೊಂದು ಸಮರ್ಪಣೆಯಾಗಿದೆ. ಈಗ ಅವರು ಠೀವಿಯಿಂದ ಏನನ್ನೂ ಮಾತನಾಡದೆ, ಯಾರನ್ನೂ ಮಾತನಾಡಿಸದೆ ಕಾಫಿ ಬಾರಿಗೆ ಗಜಗಾಂಭೀರ್ಯದಲ್ಲಿ ಬರುತ್ತಾರೆ. ಆ ಸಮಯಕ್ಕೆ ಸರಿಯಾಗಿ ಅಲ್ಲಿಂದ ಯುವ ಸಾಹಿತಿಗಳು, ಸಾಹಿತ್ಯ ಸಂಚಾಲಕರೆಲ್ಲ ಏನೋ ಕೆಲಸವಿರುವವರಂತೆ ಗೊಣಗಾಡುತ್ತಾ ಮೆಲ್ಲನೆ ಜಾಗ ಖಾಲಿ ಮಾಡುತ್ತಾರೆ.

- ಗುಬ್ಬಚ್ಚಿ ಸತೀಶ್.

ಶನಿವಾರ, ಮಾರ್ಚ್ 16, 2024

ಕನ್ನಡ ಭಾಷೆ, ಸಾಹಿತ್ಯ, ರಂಗಭೂಮಿ, ಸಿನಿಮಾಗಳ ಸಂಗಮ “ಬ್ಲಿಂಕ್”‌ ಸಿನಿಮಾ

 


ಯೂಟ್ಯೂಬರ್‌ ಆಗಿ ಕನ್ನಡಿಗರಿಗೆ ಪರಿಚಯವಿದ್ದ ಶ್ರೀನಿಧಿ ಬೆಂಗಳೂರು ಮತ್ತು ತಂಡ ಕನ್ನಡ ಚಲನಚಿತ್ರರಂಗಕ್ಕೆ ನೀಡಿರುವ ಅಪರೂಪದ ಕೊಡುಗೆಯೇ “ಬ್ಲಿಂಕ್”‌ ಸಿನಿಮಾ. ತಮ್ಮ ಅಪಾರ ಓದಿನ ಮತ್ತು ಸಿನಿಮಾ ಅಭಿರುಚಿಯ ಅನುಭವದಿಂದ ಈ ಕತೆಯನ್ನು ತೆರೆಯ ಮೇಲೆ ತಂದಿದ್ದಾರೆ ಶ್ರೀನಿಧಿ. ಗ್ರೀಕ್‌ನ ದುರಂತ ನಾಟಕ ಸಾಫೋಕ್ಲಿಸ್‌ನ “ಈಡಿಪಸ್‌” ಸರಣಿಯ ನಾಟಕಗಳು ಮತ್ತು ನಾಡಿನ ಹೆಮ್ಮೆಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್‌ ಅವರ “ರಂಗನಾಯಕಿ” ಸಿನಿಮಾದಿಂದ ಪ್ರೇರಣೆಗೊಂಡಿರುವ ನಿರ್ದೇಶಕರು “ಬ್ಲಿಂಕ್” ಸಿನಿಮಾವನ್ನು ಪ್ರೇಕ್ಷಕ ಕಣ್ಣು ಮಿಟುಕಿಸದೇ ನೋಡುವಂತೆ ಮಾಡಿ ಅವನ ಮನ ಗೆದಿದ್ದಾರೆ. ನಾಯಕ ನಟನ ಹೆಚ್ಚು ಹೊತ್ತು ಕಣ್ಣು ಮಿಟುಕಿಸದೇ ಇರುವ ಶಕ್ತಿಯೇ ಅವನ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ನೆರವಾಗಿ ಅವನ ಪಾಲಿಗದು ದೈಹಿಕ ಮತ್ತು ಮಾನಸಿಕ ಹಿಂಸೆಯಾಗುವುದೇ ಸಿನಿಮಾ. ಇದನ್ನು ಟೈಮ್‌ ಟ್ರಾವೆಲಿಂಗ್‌ ತಂತ್ರದ ಮೂಲಕ ಹೇಳಲು ಹೊರಟು ನಿರ್ದೇಶಕರು ಮತ್ತು ತಂಡ ಯಶಸ್ವಿಯಾಗಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ, ರಂಗಭೂಮಿ, ಸಿನಿಮಾಗಳ ಸಂಗಮ “ಬ್ಲಿಂಕ್”‌ ಸಿನಿಮಾ ಎಂದೇ ಹೇಳಲು ನಾನು ಇಷ್ಟಪಡುತ್ತೇನೆ. ಲಂಕೇಶರು “ಈಡಿಪಸ್”‌ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಂಕೇಶರ ಸಂದರ್ಶನದ ಮಾತುಗಳ ಮೂಲಕವೇ ಆರಂಭವಾಗುವ ಸಿನಿಮಾ ಅಂತ್ಯದವರೆಗೂ ಪ್ರೇಕ್ಷಕನನ್ನು ತಲ್ಲೀನನಾಗಿಸಿ ನೋಡಿಸಿಕೊಳ್ಳುತ್ತದೆ. ಕಣ್ಣು, ಕಿವಿಗಳಿಗಷ್ಟೇ ಅಲ್ಲದೇ ಮೆದುಳಿಗೂ ನಿರ್ದೇಶಕರು ಪ್ರೇಕ್ಷಕನಿಗೆ ಕೆಲಸ ಕೊಡುವುದರಿಂದ ಒಂದು ಹಿತವಾದ ತಲೆನೋವು ಪ್ರೇಕ್ಷಕನಿಗೆ ಕಾಡಿದರೂ ಅಚ್ಚರಿಯಿಲ್ಲ. ಆ ಹಿತವಾದ ತಲೆನೋವಿನಲ್ಲಿಯೇ ನೋಡುಗನಿಗೆ ಅಪಾರ ನಲಿವಿದೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೆ ಚಂದವಂತೆ. ಆದರೆ, ಸಿನಿಮಾದಲ್ಲಿ ಪ್ರೇಕ್ಷಕನ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ. ಒಂದು ಚಂದದ, ಅನನ್ಯ, ಅಪರೂಪದ ಸಿನಿಮಾ ನೋಡಿದ ಅನುಭವ ಪ್ರೇಕ್ಷಕನಿಗೆ ಖಂಡಿತ ಆಗುತ್ತದೆ.



ದೀಕ್ಷಿತ್‌ ಶೆಟ್ಟಿ ಅವರ ನಟನೆ ಈ ಚಿತ್ರದ ಪ್ಲಸ್‌ ಪಾಯಿಂಟ್.‌ ಉಳಿದೆಲ್ಲಾ ನಟರು ಕೂಡ ತಮ್ಮ ಪಾತ್ರಕ್ಕೆ ಪೂರಕವಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಿರ್ದೇಶಕರು, ನಿರ್ಮಾಪಕರು ಮತ್ತು ತಂಡದ ಕೆಲಸವನ್ನು ಮೆಚ್ಚಲೇಬೇಕು.  ಇಡೀ ಸಿನಿಮಾ ತಂಡಕ್ಕೆ ಒಂದು ಹ್ಯಾಟ್ಸಾಫ್.

ಮಾರ್ಚ್‌ 8ರಂದೇ ಬಿಡುಗಡೆಯಾಗಿದ್ದ ಸಿನಿಮಾ ತುಮಕೂರಿನಲ್ಲಿ ಮಾರ್ಚ್‌ 15ರಂದು ಅಂದರೇ ಒಂದು ವಾರದ ನಂತರ ನೋಡಲು ಸಿಕ್ಕಿತು. ಬಹಳ ರಶ್‌ ಕೂಡ ಇತ್ತು. ಸೋಶಿಯಲ್‌ ಮೀಡಿಯಾದ ಮೂಲಕವೇ ಅಪಾರ ಪ್ರಶಂಸೆಗೆ, ಪ್ರೀತಿಗೆ ಒಳಗಾಗಿರುವ ಸಿನಿಮಾವನ್ನು ಕನ್ನಡದ ಮಕ್ಕಳೆಲ್ಲಾ, ಬಹುಮುಖ್ಯವಾಗಿ ಕನ್ನಡ ಸಿನಿಮಾ ಪ್ರೇಮಿಗಳೆಲ್ಲಾ ಆದಷ್ಟು ಬೇಗ ಒಂದಾಗಿ ನೋಡಿ. ನೀವು ನೋಡಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್‌ ಮಾಡಿ ತಿಳಿಸಿ. ನೋಡಿಲ್ಲವಾದರೆ, ನೋಡಿಕೊಂಡು ಬಂದು ತಿಳಿಸಿ.

ಪ್ರೀತಿಯಿಂದ,

-        ಗುಬ್ಬಚ್ಚಿ ಸತೀಶ್.

ಶುಕ್ರವಾರ, ಮಾರ್ಚ್ 15, 2024

ನಾನೇಕೆ ಅಮೇಜಾನ್‌ ಸಪೋರ್ಟ್‌ ಮಾಡ್ತೀನಿ



ಸ್ನೇಹಿತರೇ, ನಾನು ಆಗಾಗ ಇಲ್ಲಿ ಅಮೇಜಾನ್ಲಿಂಕ್ಹಾಕುವುದನ್ನು ನೋಡಿರುತ್ತೀರಿ. ಕೆಲವು ಸ್ನೇಹಿತರು ನಾನು ಹಾಕಿದ ಲಿಂಕಿನಿಂದ ತಮಗೆ ಬೇಕಾದ ವಸ್ತುವನ್ನು ಕೊಂಡು ಚೆನ್ನಾಗಿದೆ ಎಂದು ನನಗೆ ತಿಳಿಸಿದ್ದೀರಿ ಕೂಡ. ಮತ್ತೆ ಕೆಲವು ಆತ್ಮೀಯರು ನೀನ್ಯಾಕೆ ಅಮೇಜಾನ್ಸಪೋರ್ಟ್ಮಾಡುತ್ತೀಯ ಅಂತ ನೇರವಾಗಿ ಮತ್ತು ಮೆಸೇಜ್ಕೂಡ ಮಾಡಿ ಕೇಳಿದಿರಿ. ಕೆಲವರು ಹೇಗೆ ಕೇಳುವುದು ಅಂತ ಸುಮ್ಮನಾದಿರಿ. ನಾನಿಲ್ಲಿ ಒಂದು ವಿಷಯ ಸ್ಪಷ್ಟಪಡಿಸಲು ಇಷ್ಟ ಪಡುತ್ತೇನೆ. ಅಮೇಜಾನ್ಅಮೇರಿಕಾದಾದ್ದರೂ ಇಂಡಿಯಾದ ಪ್ರತ್ಯೇಕ ವೆಬ್ಸೈಟ್ಇದೆ. ಅಮೇಜಾನ್.ಇನ್ಅಂತ. ಅಮೇಜಾನ್ಇಂಡಿಯಾ ಅಂತಲೂ ಕರೆಯಬಹುದು. ಇವರು ಇಲ್ಲಿನ ವ್ಯಾಪಾರಿಗಳಿಗೆ ಇಲ್ಲಿಯೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟು ಬಹಳ ವರ್ಷಗಳಾದವು. ಬೆಲೆಯೂ ಸ್ಪರ್ಧಾತ್ಮಕವಾಗಿರುವುದರಿಂದ ಗ್ರಾಹಕರಿಗೂ ಅನುಕೂಲವಾಗಿದೆ. ಇವರು ಇಲ್ಲಿ ಮಾಡುವ ವ್ಯಾಪಾರಕ್ಕೆ ಇಲ್ಲಿಯೇ ತೆರಿಗೆಯನ್ನು ಕೂಡ ಕಟ್ಟುತ್ತಾರೆ. ಈಗ ಅಮೇರಿಕಾದಲ್ಲಿರುವ ಉಡುಪಿಯ ಹೋಟೆಲ್‌ ಅಥವಾ ಮತ್ತೊಂದು ನಮ್ಮ ದೇಶದ ಉದ್ಯಮವೊಂದು ಅಲ್ಲಿ ವ್ಯಾಪಾರ ವಹಿವಾಟು ನಡೆಸಿ ಅಲ್ಲಿನ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾರಲ್ಲಾ ಅದೇ ರೀತಿ. ಇದು ಜಾಗತೀಕರಣ ಒದಗಿಸಿದ ಅನುಕೂಲಗಳಲ್ಲೊಂದು.

ಎಲ್ಲಾ ರೀತಿಯ ವ್ಯಾಪಾರಗಳಲ್ಲಿರುವ ಸಮಸ್ಯೆಗಳಂತೆ ಇಲ್ಲೂ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರಗಳೂ ಇವೆ. ಮೋಸವೂ ಇದೆ, ಜೊತೆಗೆ ಕಾನೂನು ಕೂಡ ಇದೆ.



ನಾನು ಅಮೇಜಾನನ್ನು ಬಹುಮುಖ್ಯವಾಗಿ ಇಷ್ಟಪಡುವುದು ಪುಸ್ತಕಗಳ ಮಾರಾಟದಿಂದಲೇ ದ್ಯೆತ್ಯ ಸಂಸ್ಥೆಯಾಗಿ ಬೆಳೆದ ಅಮೇಜಾನ್‌ ನಮ್ಮ ದೇಶದಲ್ಲೂ ಅತಿ ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡುವ ಆನ್‌ಲೈನ್‌ ಅಂಗಡಿಯಾಗಿರುವ ಕಾರಣದಿಂದ. ನಮ್ಮ ಕನ್ನಡದ ಪುಸ್ತಕಗಳನ್ನು ಮಾರಾಟಮಾಡಲು ಇಲ್ಲಿ ವಿಪುಲ ಅವಕಾಶಗಳಿವೆ. ಮತ್ತು ಈಗಾಗಲೇ ದಿನಂಪ್ರತಿ ಲಕ್ಷಾಂತರ ರೂಗಳ ಕನ್ನಡ ಪುಸ್ತಕಗಳ ವಹಿವಾಟು ಇಲ್ಲಿ ನಡೆಯುತ್ತಿದೆ. ನಾನು ಕೂಡ ನಮ್ಮ ಪ್ರಕಾಶನದ ಆನ್‌ಲೈನ್‌ ಅಂಗಡಿಯನ್ನು ಬಹಳ ವರ್ಷಗಳ ಹಿಂದೆಯೇ ತೆರೆದಿದ್ದರೂ ಮಾರಾಟ ಶುರುಮಾಡಿದ್ದು ಇತ್ತೀಚಿನ ವರ್ಷಗಳಲ್ಲಿ ಮಾತ್ರ. ಮುಂಚೆಯೇ ಶುರುಮಾಡಿದ್ದರೆ ಚೆಂದವಿತ್ತು ಅಂತ ಆಗಾಗ ಅನ್ನಿಸಿದ್ದು ಉಂಟು. ಕಾರಣ, ಆಗ ಈಗಷ್ಟು ಸ್ಪರ್ಧೆ ಇರಲಿಲ್ಲ. ಇರಲಿಬಿಡಿ. ಆದರೆ, ಇದು ಬಹುತೇಕ ಪ್ರಕಾಶಕರಿಗೆ ಮತ್ತು ಮಾರಾಟಗಾರರಿಗೆ ವರವಾಗಿರುವುದಂತೂ ಸತ್ಯ.

ನಾನು ಮೊದಲು ಮೊಬೈಲ್‌ ಕೊಂಡದ್ದು ಇಲ್ಲಿನ ಒಂದು ಮೊಬೈಲ್‌ ಅಂಗಡಿಯಲ್ಲಿ. ಎರಡನೇ ಮೊಬೈಲ್‌ (ಸ್ಮಾರ್ಟ್‌ಫೋನ್) ಕೊಂಡದ್ದು‌ ಅಮೇಜಾನಿನಲ್ಲಿ. ನನ್ನ ಸ್ನೇಹಿತರು ನನಗೆ ಹೇಳಿದ್ದರಿಂದ. ನಂತರ, ಅಷ್ಟರಲ್ಲಾಗಲೇ ಅಮೇಜಾನಿನಲ್ಲಿ ಸಿಗುವ ಬೆಲೆಗೆ ಅಂಗಡಿಗಳವರೂ ಮಾರಲು ಶುರುಮಾಡಿದ್ದರಿಂದ ಮತ್ತೆರೆಡು ಮೊಬೈಲ್‌ಗಳನ್ನು ಇಲ್ಲಿನ ಅಂಗಡಿಯಲ್ಲಿಯೇ ಕೊಂಡಿದ್ದೇನೆ. ಇದೇ ರೀತಿ ಈಗ ಎಲ್ಲಾ ವಸ್ತುಗಳ ಮಾರಾಟಕ್ಕೆ ಪೈಪೋಟಿಯಿರುವುದು ನಿಮಗೆಲ್ಲಾ ಗೊತ್ತೇ ಇದೆ.  ಇದೇ ಕಾರಣದಿಂದ, ಪುಸ್ತಕಗಳ ಹೊರತಾಗಿಯೂ ನಾನು ಪ್ರಮೋಟ್‌ ಮಾಡುವ ಇತರ ವಸ್ತುಗಳು ನನ್ನ ಸ್ನೇಹಿತರಿಗೆ, ಪರಿಚಯದವರಿಗೆ ಉಪಯೋಗವಾಗಬಹುದೆಂದು ಒಂದು ಲಿಂಕನ್ನು ನಾನು ಸಾಮಾಜಿಕ ತಾಣಗಳಲ್ಲಿ ಆಗಾಗ ಹಾಕಿರುತ್ತೇನೆ. ವಿಶೇಷ ರಿಯಾಯಿತಿಯ ಪ್ರಯೋಜನ ನನ್ನ ಸ್ನೇಹಿತರಿಗೂ ಸಿಗಲಿ ಎಂಬುದಷ್ಟೇ ನನ್ನ ಪ್ರಮುಖ ಆಶಯ.

ಬೇಕಿದ್ದರೆ, ಒಮ್ಮೆ ಚೆಕ್‌ ಮಾಡಿ ನೋಡಿ: https://amzn.to/43qdjiz

ಮತ್ತೇನಾದರೂ ಪ್ರಶ್ನೆ, ಅನುಮಾನಗಳಿದ್ದರೆ ಕಾಮೆಂಟ್‌ ಮಾಡಿ ತಿಳಿಸಿ. ಉತ್ತರಿಸುತ್ತೇನೆ.

ಧನ್ಯವಾದಗಳು,

ಪ್ರೀತಿಯಿಂದ,

-         ಗುಬ್ಬಚ್ಚಿ ಸತೀಶ್.

ಹಿರಿತನ (ನ್ಯಾನೋ ಕತೆ)

ಯತೀಶ, ಆನಂದ, ಲಿಂಗಪ್ಪ, ರಾಜ ಎಲ್ಲಾ ಹೇಗಿದ್ದೀರ? ಏನು ಓದುದ್ರಿ? ಏನು ಬರೆದ್ರಿ? ಎನ್ನುತ್ತಲೇ ಕಾಫಿ ಬಾರಿಗೆ ಬರುತ್ತಿದ್ದ ಹಿರಿಯ ಸಾಹಿತಿಗಳನ್ನು ಕಂಡ ಕೂಡಲೇ ಅಲ್ಲಿದ್ದ ...