ಬುಧವಾರ, ಜನವರಿ 26, 2011

ಕನ್ನಡಮ್ಮನ ಕಥೆ.

“ಸಾರ್ ಈ ೩೦ನೇ ತಾರೀಖು ಫ್ರೀ ಇರ್ತೀರಾ” ನಾನು ವಿನಯದಿಂದ ಕೇಳಿದೆ. “ಈ ಮೂವತ್ತಾ...? ಇರ್ತೀನಿ” ಎಂದು ಯೋಚಿಸಿ ನುಡಿದ ನಮ್ಮೂರ ಇಂಗ್ಲಿಷ್ ಮೇಷ್ಟ್ರು, ಮುಂದುವರೆಯುತ್ತಾ, “ಆದರೆ ಫೆಬ್ರವರಿ ೪, ೫, ೬ ಇರಲ್ಲ” ಎಂದರು. “ಹೌದಾ ಸಾರ್. ಯಾಕ್ ಸಾರ್” ಎಂದೆ. “ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗ್ತಾ ಇದ್ದೇನೆ” ಎಂದು ಬಹಳ ಖುಷಿಯಿಂದ ಹೇಳಿದರು. ಅವರ ಕನ್ನಡ ಪ್ರೀತಿಯನ್ನು ಮನಸಾರೆ ಒಪ್ಪಿದ ನಾನು, “ನಾನು ಬರ್ತೀದೀನಿ ಸಾರ್. ಈ ವಾರ ನನ್ನ ಕವನ ಸಂಕಲನ ಬಿಡುಗಡೆಯಾಗುತ್ತೆ. ತಗೊಂಡು ನಾನೂ ಹೋಗ್ತೀನಿ. ನಿಮ್ಮನ್ನ ನನ್ನ ಕಾರ್ಯಕ್ರಮಕ್ಕೆ ಕರೆಯೋಣ ಅಂತಾನೆ ಬಂದೆ ಸಾರ್” ಎಂದೆ. “ಹೌದಾ...!? ಆದರೆ ಬರ್ತೀನಿ... ನಾನು ನನ್ನ ಪುಸ್ತಕ “ಕನ್ನಡದ ಮೂಲಕ ಇಂಗ್ಲೀಷ್ ಕಲಿಯಿರಿ. ೧೩ನೇ ಪ್ರಿಂಟ್ ತಗೊಂಡು ಹೋಗ್ತಿದೀನಿ” ಎಂದು ಮತ್ತಷ್ಟು ಖುಷಿಯಿಂದ ನುಡಿದರು. ಅಷ್ಟರಲ್ಲಿ ಇಂಟರ್ ಸಿಟಿ ರೈಲು ಕೂಗಿತು. ಜೈ ಹೋ ಕನ್ನಡ!

- ಗುಬ್ಬಚ್ಚಿ ಸತೀಶ್, ಗುಬ್ಬಿ.

(ಬ್ರೇಕಿಂಗ್ ನ್ಯೂಸ್: ಆತ್ಮೀಯರೇ ನನ್ನ ಮೊದಲ ಪುಸ್ತಕ “ಮಳೆಯಾಗು ನೀ...” ಕವನ ಸಂಕಲನ ಇದೇ ಭಾನುವಾರ ತುಮಕೂರಿನಲ್ಲಿ. ಹೆಚ್ಚಿನ ವಿವರಗಳನ್ನು ಹಲವು ಕಾರಣಗಳಿಂದ ಇದೀಗ ನೀಡಲಾಗುತ್ತಿಲ್ಲ ಅದಕ್ಕಾಗಿ ವಿಷಾದಿಸುತ್ತೇನೆ. ಹೆಚ್ಚಿನ ಮಾಹಿತಿಗೆ ನಿಮ್ಮ ಈ ಮೈಲ್, ನನ್ನ ಬ್ಲಾಗ್ ನೋಡುತ್ತಿರಿ)



ಶುಕ್ರವಾರ, ಜನವರಿ 21, 2011

ಅವಳ ಬೈಸಿಕಲ್ಲು



“ಬರುತ್ತೇನೆ” ಎಂದವಳಿಗೆ
ಹೋಗುವ ಮನಸ್ಸಿಲ್ಲ
ಆದರೂ ಹೋಗಲೇಬೇಕು
ಅಮ್ಮ ಬೇಗ ಬಾ ಎಂದಿದ್ದಾಳೆ
ಇಷ್ಟಕ್ಕೂ ಇವಳು ಹೇಳಿ
ಬಂದಿರುವುದು, ಗೆಳತಿಯ ಮನೆಗೆಂಬ
ಹಸಿಸುಳ್ಳು. ಆ ದಿನದ
“ದಿನಕ್ಕೊಂದು” ಹೊಸಸುಳ್ಳು!

ಸಿನಿಮಾ ಮುಗಿದರೂ
ಎಳಲೊಲ್ಲದ ಜನರಂತೆ
ಎದ್ದವಳು, ನಡಿಗೆಯಲ್ಲೇ ತೆವಳಿ
ಅವಳ ಬೈಸಿಕಲ್ಲಿನ ಬೀಗಕ್ಕೆ
ಕೀ ಹಚ್ಚಿ, ನನ್ನೆಡೆಗೆ ತಿರುಗಿ
ಕಣ್ಣಲೇ “ಮತ್ತೆ ಬರುತ್ತೇನೆ”
ಎಂದು ಸೈಕಲ್ ಹತ್ತಿದಳು.
ಮತ್ತೊಂದು ಷೋನ ಟಿಕೆಟಿಗಾಗಿ
ನಿಂತವನಂತೆ ನಾನು ನಿಂತೇ ಇದ್ದೆ!

ನನ್ನ ಕಣ್ಣಿಂದ ಬೇಗ
ಮರೆಯಾಗಲಿಚ್ಚಿಸದ
ಬೈಸಿಕಲ್ಲೂ-ಅವಳೂ
ನಿಧಾನವಾಗಿ ನನ್ನಿಂದ
ಸ್ವಲ್ಪ-ಸ್ವಲ್ಪ ದೂರವಾಗುತ್ತಿದ್ದಾರೆ
ಬೈಸಿಕಲ್ಲು ಅವಳದ್ದೆ, ಆದರದು
ನನ್ನ ಮನಸ್ಸು!

ಮತ್ತವಳು, ತನ್ನ
ಬೈಸಿಕಲ್ಲಿನ ಮೇಲೆ
ಹಿಂದಿರುಗಿ ಬರುವ ತನಕ
ನನ್ನ ಮನಸ್ಸು
ಅವಳ ಬೈಸಿಕಲ್ಲು!

- ಗುಬ್ಬಚ್ಚಿ ಸತೀಶ್.

ಶುಕ್ರವಾರ, ಜನವರಿ 14, 2011

ಚಳಿಗಾಲದ ಚುಟುಕುಗಳು


ಬೆಚ್ಚಗೆ
ಎಲ್ಲಾ ಕಾಲದಲ್ಲೂ
ಬೆಚ್ಚಗಿರಲು
ಹೆಂಗಸರಿಗೆ ನೈಟಿ!!
ಗಂಡಸರಿಗೆ ನೈಂಟಿ!

ಮುತ್ತಿನ ಅರ್ಥ
ನೀ ಕೊಟ್ಟ ಮುತ್ತು
ಹೇಳುತ್ತಿದೆ ಸಾವಿರಾರು ಅರ್ಥ
ಮೊದಲರ್ಥ ಮುತ್ತಿನ ಮತ್ತು!
ಉಳಿದೆಲ್ಲಾರ್ಥ ಮತ್ತಿನ ಗಮ್ಮತ್ತು!!

ತಬ್ಬಲಿ
ನಲ್ಲೆ,
ನೀ ನನ್ನ ಮೈ ತಡವಿದರೆ
ನಾ ಹೆಬ್ಬುಲಿ!
ನಲ್ಲೆ,
ನೀ ನನ್ನ ಮೈ ಕೊಡವಿದರೆ
ನಾ ಯಾರ ತಬ್ಬಲಿ!

ಮಿಲನ
ಆಗಸಕ್ಕೆ ತಿಳಿನೀಲಿ
ಕಾಮನಬಿಲ್ಲಿಗೆ ಚಿತ್ತಾರ
ಮಗುವಿಗೆ ನಗುವು
ಗುಲಾಬಿಗೆ ಕೆಂಬಣ್ಣ
ನದಿಗೆ ಹರಿವು
ಪ್ರಕೃತಿಗೆ ಹಸಿರು
ನಮ್ಮ ಮಿಲನ!

         - ಗುಬ್ಬಚ್ಚಿ ಸತೀಶ್.

ಶುಕ್ರವಾರ, ಜನವರಿ 7, 2011

ಸುಗ್ಗಿ ಪ್ರೀತಿ

ಹೊಸ ವರುಷದ ಸನಿಹದಲ್ಲಿ

ದಿವ್ಯ ಬೆಳಕಿನ ಸನ್ನಿಧಿಯಲ್ಲಿ

ಕಾದಿರುವೆ ನನ್ನ ಚೇತನವೆ

ನಿನಗಾಗಿ ನಿನಗಾಗಿ ನಿನಗಾಗಿ


ಹಳೇ ವರುಷದ ಚಿಗುರು

ಹೊಸ ವರುಷದಲಿ ಪೈರಾಗಿ

ತೆನೆ ತೆನೆಯಲೂ ಚಿಮ್ಮಲಿ

ಸಂಭ್ರಮ ಸುಗ್ಗಿಯ ಸಡಗರದಲ್ಲಿ


ಹೊಸ ವಸಂತ ಹೊಸ ದಿಗಂತ

ನನ್ನೆದೆಯ ನಿನ್ನೆದೆಯ ಕೋಗಿಲೆಗೆ

ಹೊಸ ದನಿಯಾಗಿ ಸೃಜಿಸಲಿ

ನಮ್ಮ ಪ್ರೀತಿಯು ಹಸಿರಾಗಲಿ.

                            - ಗುಬ್ಬಚ್ಚಿ ಸತೀಶ್
(ಈ ಕವನ ನಾನು ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನ ನಲ್ಲೆಯ ಸೇವೆಯನ್ನು ನೋಡಿ ಬಿಲ್ ಹಿಂಭಾಗದಲ್ಲಿ ಬರೆದದ್ದು. ಪ್ರೇರಣೆ: ಜಿ.ಎಸ್.ಎಸ್ ರವರ "ಬೆಳಗು ಬಾ ಹಣತೆಯನು" ಕವನ. ಹೊಸವರ್ಷದ ಮತ್ತು ಸಂಕ್ರಾತಿಯ ಶುಭಾಷಯಗಳೊಂದಿಗೆ - ಗುಬ್ಬಚ್ಚಿ ಕುಟುಂಬ)

ಹೇಗಿದೆ “ಯುವ?” ಸಖತ್‌ “ಪವರ್‌”ಪುಲ್‌ ಶಿವ!

ಪ್ರಿಯ ಸ್ನೇಹಿತರೇ, ಬೆಳಿಗ್ಗೆ ಐದಕ್ಕೇ ಅಲಾರಂ ಇಟ್ಟುಕೊಂಡು, ನೆನ್ನೆಯೇ ಇಂದಿನ ಬೆಳಗಿನ 9.30ರ ಶೋಗೆ ಬುಕ್‌ ಮಾಡಿದ್ದ “ಯುವ” ಸಿನಿಮಾಗೆ ಹೋಗಿ ಬಂದೆ. ತುಮಕೂರಿನ ಐನೋಕ್...