ಬುಧವಾರ, ಅಕ್ಟೋಬರ್ 30, 2013

ಮದುವೆಯೆಂಬುದು ಒಂದು ಖಾಸಗಿ ವಿಷಯ

Sneha Madabekinthavala

"Happy marriages begin when we marry the ones we love, 
and they blossom when we love the ones we marry."
ನಮ್ಮಿಬ್ಬರ ಭೇಟಿಗಳು ಕಥೆಗಳ ಸುತ್ತಾ ಸುತ್ತ ತೊಡಗಿದವು. ಈ ಬಾರಿಯ ಭೇಟಿಯಲ್ಲಿ ನಮ್ಮ ಮದುವೆಯ ಬಗ್ಗೆ ಮಾತನಾಡೋಣ ಎಂದುಕೊಂಡು, ಅರ್ಧಗಂಟೆಯಿಂದ ತನ್ಮಯಳಾಗಿ ನನ್ನನ್ನೇ ನೋಡುತ್ತಿದ್ದ ಲಕ್ಷ್ಮೀಗೆ, ನಮ್ಮ ಮದುವೆ ಯಾವಾಗ? ಎಂದು ಥಟ್ಟನೆ ಕೇಳಿದೆ.
ಮದುವೆ!? ಅವಳ ಒಂದೇ ಮಾತಿನ ಪದದಲ್ಲಿ ಬೆಚ್ಚಿದ ಭಾವವಿತ್ತು.
ಹೌದು. ಮದುವೆ! ತಣ್ಣಗೆ ನಾ ಮತ್ತೆ ನುಡಿದೆ.
ಪ್ರೀತಿಸಿದವರು ಮದುವೆಯಾಗಲೇಬೇಕಾ?
ಮತ್ತೆ, ಪ್ರೀತಿ ಸಾರ್ಥಕವಾಗುವುದು ಆವಾಗಲೇ ಅಲ್ಲವೇ? ನಿನಗೇನು ನನ್ನ ಮದುವೆಯಾಗಲು ಯಾವುದಾದರೂ ಅಡ್ಡಿ, ಆತಂಕ?
ಹಾಗೇನಿಲ್ಲ, ಹೇಗಿದ್ದರೂ ಮದುವೆಯೆಂಬುದು ಒಂದು ಖಾಸಗಿ ವಿಷಯವಲ್ಲವೇ?
ಖಾಸಗಿ ವಿಷಯವೇ? ಆಗಿದ್ದರೆ ನೀನು ಯಾರನ್ನೂ ಕೇಳುವುದಿಲ್ಲವಾ?
ಕೇಳಬೇಕೆಂದೆನೋ ಇದ್ದೇನೆ. ಆದರೆ, ಅವರು ಒಪ್ಪಲಿಲ್ಲವೆಂದರೆ, ನಿಮ್ಮನ್ನು ಮದುವೆಯಾಗದೇ ಉಳಿಯಲಾಗುತ್ತದೆಯೇ?
ಮತ್ತೆ?
ನಿಮ್ಮ ಸಹವಾಸ ದೋಷದಿಂದ ನಾನೂ ಇತ್ತೀಚೆಗೆ ಬಿಡುವುದಾಗಲೆಲ್ಲಾ ಓದುವುದನ್ನು ರೂಢಿಸಿಕೊಂಡಿದ್ದೇನೆ. ಅದಕ್ಕೆ ಇವತ್ತು ನಾ ಒಂದು ಕಥೆ ಹೇಳಿಬಿಡುತ್ತೇನೆ, ಕೇಳಿಬಿಡಿರಿ.
ಕಥೆಯಾ!? ಓ ಗ್ರೇಟ್. ಹೇಳು, ಹೇಳು ನನ್ನ ಜೀವನವೆಲ್ಲಾ ಬರಿ ಕಥೆ ಹೇಳಿದ್ದೇ ಆಯ್ತು. ಇಂದು ಒಂದಾದರೂ ಕಥೆ ಕೆಳೋಣ.
ಈ ಕಥೆಯನ್ನು ನೀವು ಹಿಂದೆ ಓದಿರಬಹುದು?
ಎಲ್ಲವನ್ನೂ ಓದಲಿಕ್ಕಾಗುತ್ತದೆಯೆ? ನೀನು ಹೇಳು ನಾ ಕೇಳುತ್ತಾನೆ.
ಇದು ಆಫ್ರಿಕಾದ ಪ್ರಖ್ಯಾತ ಲೇಖಕ ಚಿನುವಾ ಅಚೆಬೆಯ ಕಥೆ.
ಚಿನುವಾ ಅಚೆಬೆಯೆ!? ಅವನ ಥಿಂಗ್ಸ್ ಫಾಲ್ ಅಪಾರ್ಟ್ ಕಾದಂಬರಿ ನಮಗೆ ಪದವಿಯಲ್ಲಿತ್ತಲಾ? ತುಂಬಾ ಪ್ರಸಿದ್ಧ ಲೇಖಕ.
ಹೌದು, ಅವನ Marriage is a private affair ಎಂಬ ಕಥೆಯನ್ನು ನಿಮಗೆ ನನಗೆ ಬಂದಂತೆ ಹೇಳಿಬಿಡುತ್ತೇನೆ, ಕೇಳಿಬಿಡಿ.
ನಾನು ಅಚೆಬೆಯ ಇನ್ಯಾವುದೇ ಕಥೆಯನ್ನು ಓದಿಲ್ಲ. ಖಂಡಿತ ಕೇಳುತ್ತೇನೆ, ಹೇಳು. ಈ ಕಥೆಯು ಮದುವೆಯ ಬಗ್ಗೆ ನಿನ್ನ ನಿರ್ಧಾರದಂತೆಯೂ ನನಗೆ ಅನ್ನಿಸತೊಡಗಿದೆ. ಎಂದು ತನ್ಮಯನಾಗಿ ಕುಳಿತೆ.
...
ಈ ಕಥೆಯ ನಲ್ಲೆ ನೇನೆ ತನ್ನನ್ನು ಪ್ರೀತಿಸುತ್ತ್ತಿದ್ದ ನಲ್ಲ ಎಮೇಕಾನಿಗೆ, ತಮ್ಮ ಮದುವೆಯ ವಿಷಯ ನಿಮ್ಮ ತಂದೆಗೆ ತಿಳಿಸಿದ್ದೀರಾ? ಎಂದು ಕೇಳುತ್ತಾಳೆ. ಅದಕ್ಕವನು ರಜೆಗೆ ಹಳ್ಳಿಗೆ ಹೋದಾಗ ತಿಳಿಸುತ್ತೇನೆ ಎನ್ನುತ್ತಾನೆ. ಅದಕ್ಕವಳು ರಜೆ ಬರುವುದಕ್ಕೆ ಇನ್ನೂ ತುಂಬಾ ದಿನಗಳಿವೆ ಎನ್ನುತ್ತಾಳೆ. ಅದಾಗ ಯೋಚಿಸುತ್ತಾ ಕುಳಿತ ಎಮೇಕಾ, ನನಗನ್ನಿಸಿದೆ ಈ ವಿಷಯ ನಮ್ಮ ತಂದೆಗೆ ಸಂತಸವನ್ನುಂಟು ಮಾಡುತ್ತದೆಯೆಂದು ಹೇಳುತ್ತಾನೆ. ಅದಕ್ಕವಳು, ಹೌದು ಅವರಿಗೆ ಸಂತೋಷವಾಗಲೇಬೇಕು. ಯಾಕಾಗಬಾರದು? ಎಂಬ ಪ್ರಶ್ನೆಯೆತ್ತುತ್ತಾಳೆ. ಅದಕ್ಕವನು, ನೀನು ನಿನ್ನ ಜೀವನವನ್ನೆಲ್ಲಾ ಪಟ್ಟಣದಲ್ಲೇ ಬಾಳಿದ್ದೀಯಾ. ನಿನಗೆ ದೇಶದ ಹಳ್ಳಿಗಳಲ್ಲಿ ವಾಸಿಸುವ ಜನರ ಬಗ್ಗೆ ಅಷ್ಟಾಗಿ ತಿಳಿದಿಲ್ಲ.
ನೀವು ಅದನ್ನೇ ಯಾವಾಗಲೂ ಹೇಳುತ್ತೀರಾ. ಆದರೆ, ತಮ್ಮ ಮಗನ ಮದುವೆ ನಿಶ್ಚಿತವಾದರೆ ಯಾರೂ ದುಃಖಿಸುವುದಿಲ್ಲ...ಅಲ್ಲವೇ? ಎಂದು ಕೇಳುತ್ತಾಳೆ.
ಹೌದು. ಆದರೆ, ಮದುವೆ ಅವರಿಂದ ನಿಶ್ಚಿತವಾಗಿಲ್ಲದಿದ್ದರೆ ಖಂಡಿತ ದುಃಖಿಸುತ್ತಾರೆ. ನಮ್ಮ ವಿಷಯದಲ್ಲಿ ಅದು ವಿಪರೀತಕ್ಕೆ ಹೋಗುವ ಸಾಧ್ಯತೆಯಿದೆ. ಯಾಕೆಂದರೆ, ನೀನು ನಮ್ಮ ಇಬೋ (Ibo) ಜನಾಂಗಕ್ಕೆ ಸೇರಿದವಳಲ್ಲ
ಅವನು ಅದೆಷ್ಟು ಗಂಭೀರನಾಗಿ ಹೇಳಿದೆನೆಂದರೆ, ನಾಯಕಿಗೆ ಸ್ವಲ್ಪ ಹೊತ್ತು ಮಾತೇ ಹೊರಡಲಿಲ್ಲ. ನಗರದ ಕಾಸ್ಮಾಪಾಲಿಟನ ಪರಿಸರದಲ್ಲಿ ಅವಳಿಗೆಂದೂ ಜನಾಂಗವೊಂದು ಮದುವೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅನ್ನಿಸಿರಲೇ ಇಲ್ಲ. ಅದನ್ನು ತಮಾಷೆಯೆಂದೇ ತಿಳಿದಿದ್ದಳು.
ಕಡೆಗೆ ಅವಳೇ ಸಮಾಧಾನದಿಂದ, ಅದೊಂದೇ ಕಾರಣದಿಂದ ಅವರು ನಮ್ಮ ಮದುವೆಯನ್ನು ತಿರಸ್ಕರಿಸುತ್ತಾರೆಂದು ನೀವು ಹೇಳುತ್ತಿಲ್ಲವಷ್ಟೇ? ನಿಮ್ಮ ಜನಾಂಗದವರು ಬಹಳ ಮೆದು ಮನಸ್ಸಿನವರು ಎಂದು ತಿಳಿದಿದ್ದೇನೆ ಎಂದಳು.
ಹೌದು, ನಮ್ಮ ಜನ ಮೆದು ಮನಸ್ಸಿನವರೆನೋ ನಿಜ. ಆದರೆ, ಮದುವೆಯ ವಿಷಯಕ್ಕೆ ಬಂದಾಗ, ಅದು ಅಷ್ಟೊಂದು ಸರಳವಲ್ಲ. ಇದು ಇಬೋಗಳಿಗೆ ಮಾತ್ರ ಸೀಮಿತವಲ್ಲ. ನಿಮ್ಮ ತಂದೆ ಜೀವಂತವಾಗಿದ್ದು, ನಮ್ಮ ಜನರ ನಡುವೆಯೇ ಬದುಕಿದ್ದರೆ, ಅವರೂ ನಮ್ಮ ತಂದೆಯಂತೆಯೇ ಇರುತ್ತಿದ್ದರು.
ನನಗೆ ಗೊತ್ತಿಲ್ಲ. ಏನಾದರಾಗಲೀ, ನಿಮ್ಮ ತಂದೆ ನಿನ್ನನ್ನು ತುಂಬಾ ಇಷ್ಟ ಪಡುತ್ತಾರೆ. ನಿನ್ನನವರು ಖಂಡಿತ ಕ್ಷಮಿಸುತ್ತಾರೆ. ಆದುದರಿಂದ ಒಳ್ಳೆಯ ಹುಡುಗನಾದ ನೀನು ಅವರಿಗೊಂದು ಸುಂದರ ಪತ್ರವನ್ನು ಈಗಲೇ ಬರೆದುಬಿಡು.
ಒಂದು ಪತ್ರದ ಮೂಲಕ ಅವರಿಗೆ ವಿಷಯವನ್ನು ತಿಳಿಸುವುದು ಅಷ್ಟು ಸಮಂಜಸವಲ್ಲ. ಅದು ಅವರಿಗೆ ಶಾಕ್ ಕೂಡ ನೀಡಬಹುದು.
ಆಗಲಿ ಬಿಡಿ. ನೀವು ಸರಿಯಾಗಿ ಸಿದ್ದರಾಗಿರಿ. ನಿಮ್ಮ ತಂದೆ ನಿಮಗೇ ಗೊತ್ತು.
ಆ ಸಂಜೆ ಮನೆಗೆ ನಡೆಯುತ್ತಾ ಬಂದ ಎಮೇಕಾ ತನ್ನ ತಂದೆಯನ್ನು ಒಪ್ಪಿಸುವ ಹಲವು ಸಾಧ್ಯತೆಗಳ ಬಗ್ಗೆ ಚಿಂತಿಸುತ್ತಾ ಇದ್ದ. ಅದರಲ್ಲೂ ಅವನ ತಂದೆ ಇವನಿಗಾಗಿ ಒಬ್ಬಳು ಹುಡುಗಿಯನ್ನು ನೋಡಿದ್ದಾನೆ. ಈ ವಿಷಯವನ್ನು ಹೊತ್ತು ಬಂದಿರುವ ಪತ್ರವನ್ನು ನೇನೆಗೆ ತೋರಿಸಿ ಬೇಕೆಂದುಕೊಂಡರೂ ಈಗ ಬೇಡ ಎಂದು ಸುಮ್ಮನಾಗಿದ್ದ. ಮನೆಗೆ ಬಂದ ನಂತರ ಮತ್ತೆ ಪತ್ರವನ್ನು ಓದಿದವನಿಗೆ ನಗು ತಡೆಯಲಾಗುತ್ತಿಲ್ಲ. ತಂದೆ ನೋಡಿರುವ ಹುಡುಗಿ ಇವನಿಗೆ ಚೆನ್ನಾಗಿ ನೆನಪಿದ್ದಾಳೆ. ಗಂಡುಬೀರಿಯಾದ ಅವಳು ಎಲ್ಲಾ ಹುಡುಗರನ್ನು, ಇವನನ್ನು ಹೊಳೆಗೆ ಹೋಗುವ ದಾರಿಯಲ್ಲಿ ಹೊಡೆಯುತ್ತಿದ್ದಳು. ಶಾಲೆಯಲ್ಲಿ ಮಹಾನ್ ದಡ್ಡಿಯಾಗಿದ್ದಳು.
ನಾನು ನಿನಗೊಬ್ಬಳು ಒಪ್ಪುವ ಹುಡುಗಿಯನ್ನು ನೋಡಿದ್ದೇನೆ. ನಮ್ಮ ನೆರೆಯವರ ಹಿರಿಯ ಮಗಳಾಕೆ. ಅವಳು ಸರಿಯಾದ ರೀತಿಯಲ್ಲಿ ಕ್ರಿಶ್ಚಿಯನ್ ಆಗಿ ಬೆಳೆದಿದ್ದಾಳೆ. ಕೆಲವು ವರ್ಷಗಳ ಹಿಂದೆ ಅವಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದಾಗ ಅವಳ ತಂದೆ (ಸರಿಯಾದ ನಿರ್ಧಾರವುಳ್ಳ ಮನುಷ್ಯ) ಅವಳನ್ನು ಪಾದ್ರಿಯೊಬ್ಬರ ಮನೆಯಲ್ಲಿರಿಸಿ ಗೃಹಿಣಿಯಾಗಬೇಕಾದ ಎಲ್ಲಾ ತರಬೇತಿಯನ್ನು ಕೊಡಿಸಿದ್ದಾರೆ. ಅವಳ ಭಾನುವಾರದ ಶಾಲೆಯ ಶಿಕ್ಷಕರು ಅವಳು ಬೈಬಲನ್ನು ನಿರರ್ಗಳವಾಗಿ ಓದುತ್ತಾಳೆ ಎಂದು ನನಗೆ ಹೇಳಿದ್ದಾರೆ. ನೀನು ಡಿಸೆಂಬರ್‌ಗೆ ಬಂದಾಗ ಮದುವೆಯ ಮಾತುಕತೆಯನ್ನು ಆಡಬಹುದೆಂದು ಭಾವಿಸುತ್ತೇನೆ.
ಲಾಗೋಸ್‌ನಿಂದ ಬಂದ ಎರಡನೇ ದಿನದ ಸಂಜೆ ಎಮೇಕಾ ತನ್ನ ತಂದೆಯೊಡನೆ ಒಂದು ಮರದ ಕೆಳಗೆ ಕುಳಿತ. ಅದು ಅವರ ತಂದೆ ವಿಶ್ರಮಿಸುವ ಸ್ಥಳ. ಚರುಗುಡುವ ಸೂರ‍್ಯ ಅಸ್ತಮಿಸಿ, ತಂಗಾಳಿ ಬೀಸುವ ಸಮಯಕ್ಕೆ ಅವರಲ್ಲಿ ಬೈಬಲ್ ಓದಲು ತೊಡಗುತ್ತಿದ್ದರು.
ಅಪ್ಪಾ, ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಂದಿದ್ದೇನೆ ಎಂದು ಮೌನಮುರಿದ ಎಮೇಕಾ.
ಕ್ಷಮೆ!? ಯಾವುದಕ್ಕೆ ಮಗನೇ!? ಆಶ್ಚರ್ಯದಿಂದ ನುಡಿದ.
ಇದು ಈ ಮದುವೆಯ ಕುರಿತ ಪ್ರಶ್ನೆ
ಯಾವ ಮದುವೆಯ ಪ್ರಶ್ನೆ?
ನನಗಾಗೊಲ್ಲ...ನಾವು ಖಂಡಿತಾ...ನಾ ಹೇಳುವುದೆನೇಂದೆರೆ ನಮ್ಮ ನೆರೆಯವನ ಮಗಳನ್ನು ಮದುವೆಯಾಗಲು ಸಾಧ್ಯವಿಲ್ಲ.
ಸಾಧ್ಯವಿಲ್ಲ? ಯಾಕೆ? ತಂದೆ ಕೇಳಿದ.
ನನಗವಳಲ್ಲ ಮೇಲೆ ಪ್ರೀತಿ ಇಲ್ಲ.
ನೀ ಪ್ರೀತಿಸು ಎಂದು ಯಾರೂ ನಿನಗೆ ಹೇಳಿಲ್ಲವಲ್ಲ. ನಿನ್ಯಾಕೆ ಪ್ರೀತಿಸಬೇಕು?
ಮದುವೆ ಇಂದು ಬದಲಾಗಿದೆ
ನೋಡು ಮಗನೇ, ಯಾವುದೂ ಬದಲಾಗಿಲ್ಲ. ಒಬ್ಬಳು ಗೃಹಿಣಿಗೆ ಬೇಕಾದದ್ದು ಸನ್ನಡತೆ ಮತ್ತು ಕ್ರಿಶ್ಚಿಯನ್  ಸಂಸ್ಕಾರ, ಮಗನ ಮಾತನ್ನು ತಡೆದು ನುಡಿದ.
ಅದಾಗ ಎಮೇಕಾನಿಗೆ ತಂದೆಯೊಡನೆ ವಾದಿಸುವುದರಲ್ಲಿ ಯಾವುದೇ ಭರವಸೆ ಕಾಣಲಿಲ್ಲ.
ಅಷ್ಟಕ್ಕೂ, ನೀವು ನೋಡಿರುವ ಹುಡುಗಿಯ ಎಲ್ಲಾ ಗುಣಗಳನ್ನು ಹೊಂದಿರುವ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ ಮತ್ತು ಅವಳು...
ಅವನ ತಂದೆಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. ನೀ ಏನು ಹೇಳ್ತಾ ಇದ್ದೀಯಾ? ಗಲಿಬಿಲಿಯಿಂದ ಕೇಳಿದ.
ಅವಳು ಒಳ್ಳೆಯ ಕ್ರಿಶ್ಚಿಯನ್ನು, ಮುಂದುವರೆಯುತ್ತಾ ಹೇಳಿದ, ಮತ್ತು ಲಾಗೋಸ್‌ನ ಬಾಲಕಿಯರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಳೆ.
ಶಿಕ್ಷಕಿ...!? ಅದು ಉತ್ತಮ ಗೃಹಿಣಿಯಾಗಲು ಅರ್ಹತೆಯಾದರೆ, ನಿನಗೊಂದು ವಿಷಯ ಹೇಳುತ್ತೇನೆ ಕೇಳು, ಕ್ರಿಶ್ಚಿಯನ್ ಮಹಿಳೆ ಪಾಠ ಮಾಡಬಾರದು. ಸಂತ ಪೌಲ್ ತನ್ನದೊಂದು ಪತ್ರದಲ್ಲಿ ಮಹಿಳೆಯರು ಮೌನವಾಗಿರಬೇಕು ಎಂದು ಹೇಳಿದ್ದಾರೆ, ಎಂದು ಹೇಳಿ ನಿಧಾನವಾಗಿ ಮೇಲೆದ್ದು ಹಿಂದಕ್ಕೆ ಮುಂದಕ್ಕೆ ಓಡಾಡತೊಡಗಿದ. ಇದು ಅವನಿಗೆ ಬಹಳ ಇಷ್ಟದ ವಿಚಾರ, ಚರ್ಚುಗಳಲ್ಲಿ ಮಹಿಳೆಯರು ಪಾಠ ಮಾಡುವುದನ್ನು ಪ್ರೋತ್ಸಾಹಿಸುವುದನ್ನು ಉಗ್ರವಾಗಿ ವಿರೋಧಿಸುತ್ತಿದ್ದ. ಸ್ವಲ್ಪ ಸಮಾಧಾನಗೊಂಡ ಬಳಿಕ ಮಗನ ನಿಶ್ಚಿತಾರ್ಥದ ವಿಷಯಕ್ಕೆ ಮರಳಿದ.
ಹೋಗಲಿ, ಅವಳು ಯಾರ ಮಗಳು?, ಮೆದುವಾಗಿ ಕೇಳಿದ.
ಅವಳು...ನೇನೆ ಅತಂಗ್.
ಏನು!?, ಮರಳಿದ್ದ ಮೆದುಭಾವ ಅಲ್ಲಿರಲಿಲ್ಲ. ನೀ ಹೇಳುವುದು ನೇನೆ ಅತಾಗ. ಅಂದರೆ ಏನು?
ಕ್ಯಾಲಬಾರ್‌ನ ನೇನೆ ಅತಂಗ. ನಾ ಮದುವೆಯಾಗುವುದಾದರೆ ಅವಳನ್ನು ಮಾತ್ರ.
ಈ ಕಡು ಉತ್ತರದಿಂದ ಎಮೇಕಾ ತನ್ನ ತಂದೆ ಸಿಡಿಯಲಿದ್ದಾರೆ ಎಂದು ಎಣಿಸಿದ್ದ. ಆದರೆ, ಅದಾಗಲಿಲ್ಲ. ಅವನ ತಂದೆ ಸುಮ್ಮನೆ ತನ್ನ ಕೊಠಡಿಗೆ ತೆರಳಿದ. ಇದು ಅನಿರೀಕ್ಷಿತವಾಗಿತ್ತು ಮತ್ತು ಎಮೇಕಾನನ್ನು ಗಾಬರಿಪಡಿಸಿತು. ಅವನ ತಂದೆಯ ಮೌನ ಮಾತಿಗಿಂತ ಹರಿತವಾಗಿ ಇರಿದಿತ್ತು. ಆ ರಾತ್ರಿ ಅವನ ತಂದೆ ಊಟವನ್ನು ಮಾಡಲಿಲ್ಲ.
ಮರುದಿನ ಎಮೇಕಾನನ್ನು ಕಳುಹಿಸುವ ಮುನ್ನ ಮಗನ ಮನವೊಲಿಸುವ ಎಲ್ಲಾ ಪ್ರಯತ್ನವನ್ನು ತಂದೆ ಮಾಡಿದ. ಮಗನ ನಿರ್ಧಾರ ಖಚಿತವಾದದ್ದು ಎಂದರಿತ ಮೇಲೆ ಸುಮ್ಮನಾಗಿಬಿಟ್ಟ.
ತಿಳಿದಿರು ಮಗನೇ, ನಿನಗೆ ಸರಿ ತಪ್ಪು ಯಾವುದೆಂದು ಹೇಳುವುದು ನನ್ನ ಕರ್ತವ್ಯವೆಂದು ಹೇಳಿದೆ. ನಿನ್ನ ತಲೆಗೆ ಈ ವಿಷಯವನ್ನು ಯಾರು ತುಂಬಿದರೋ ಅವರು ನಿನ್ನ ಕುತ್ತಿಗೆಯನ್ನು ಸೀಳಿದ್ದರೆ ಚೆನ್ನಾಗಿತ್ತು. ಇದು ಸೈತಾನನ ಕೆಲಸವೇ ಸರಿ ಎಂದು ಹೇಳುತ್ತಾ ಮಗನೆಡೆಗೆ ಕೈ ಬೀಸಿದ.
ನೀವು ನೇನೆಯ ಬಗ್ಗೆ ತಿಳಿದರೆ, ನಿಮ್ಮ ನಿರ್ಧಾರವನ್ನು ಬದಲಿಸುತ್ತೀರಾ ಅಪ್ಪ.
ನಾನವಳನ್ನು ಎಂದೂ ನೋಡುವುದಿಲ್ಲ ಎಂಬ ಉತ್ತರ ಬಂದಿತು.
ಆ ರಾತ್ರಿಯಿಂದ ಮಗನೊಡನೆ ಮಾತು ಅಪರೂಪವಾಯಿತು. ತನ್ನ ಮಗನು ತನ್ನ ನಿರ್ಧಾರದಿಂದ ಆಗಬಹುದಾದ ಅಪಾಯಗಳು ಅವನಿಗೆ ಅರ್ಥವಾಗಬಹುದೆಂಬ ಭರವಸೆಯಿತ್ತು. ಹಗಲು, ರಾತ್ರಿ ಮಗನ ಒಳಿತಿಗಾಗಿ ಪ್ರಾರ್ಥಿಸತೊಡಗಿದ.
ಎಮೇಕಾ ತನ್ನ ತಂದೆಯ ದುಃಖದಿಂದ ಬಹಳ ನೊಂದುಕೊಂಡ. ಈ ಕೆಟ್ಟ ಸಮಯ ಕಳೆದು ಹೋಗುತ್ತದೆಯೆಂಬ ಆಶಾಭಾವ ಹೊಂದಿದ್ದ. ಇತಿಹಾಸದಲ್ಲೇ ಯಾರೂ ಈ ರೀತಿ ಮದುವೆಯಾಗಿಲ್ಲವಾಗಿದ್ದರೆ ಅವನಿಗೆ ಇಷ್ಟು ಭರವಸೆ ಉಳಿಯುತ್ತಿರಲಿಲ್ಲ.
ಯಾವತ್ತೂ ಇದನ್ನು ಕೇಳಿರಲಿಲ್ಲ, ಎಂಬ ಒಂದೇ ಸಾಲಿನ ಪತ್ರ ಕೆಲವು ವಾರಗಳ ನಂತರ ಬಂದಿತು. ಅದರಲ್ಲಿ ತನ್ನೆಲ್ಲಾ ಜನರ ಪರವಾಗಿ ಆತ ಹೇಳಿದಂತಿತ್ತು.
ಒಕೋಕೆಯ ಪರವಾಗಿ ಅನುಕಂಪದಿಂದ ಮಾತನಾಡಲು ಈತನ ಮಗನ ವಿಷಯ ತಿಳಿದ ಹಲವರು ಬಂದರು. ಆ ಸಮಯದಲ್ಲಿ ಮಗನು ಲಾಗೋಸ್‌ಗೆ ಹಿಂತಿರುಗಿದ್ದ.
ಯಾವತ್ತೂ ಇದನ್ನು ಕೇಳಿರಲಿಲ್ಲ ದುಃಖದಿಂದ ತಲೆಯಾಡಿಸುತ್ತಾ ಮುದುಕ ನುಡಿದ.
ನಮ್ಮ ದೇವರು ಏನನ್ನು ಹೇಳುತ್ತಾರೆ? ಮತ್ತೊಬ್ಬ ಜಂಟಲ್‌ಮ್ಯಾನ್ ನುಡಿದ.
ಮಕ್ಕಳು ತಂದೆಯ ವಿರುದ್ಧ ನಿಲ್ಲುತ್ತಾರೆ; ಎಂದು ಹೋಲಿ ಪುಸ್ತಕದಲ್ಲಿದೆ.
ಇದು ಮುಕ್ತಾಯದ ಆರಂಭ! ಮತ್ತೊಬ್ಬ ನುಡಿದ.
ಈ ರೀತಿ ನಡೆಯುತ್ತಿದ್ದ ಚರ್ಚೆ ವೇಂದಾತದತ್ತ (ಥಿಯಾಲಜಿ) ಹೊರಳಿತು. ಒಬ್ಬ ಪಕ್ಕಾ ಪ್ರಾಕ್ಟಿಕಲ್ ಮನುಷ್ಯ, ಚರ್ಚೆಯನ್ನು ಸರಳೀಕರಣಗೊಳಿಸಲು ತೊಡಗಿದ.
ನೀನು ಯಾರಾದರೂ ಸ್ಥಳೀಯ ವೈದ್ಯರನ್ನು ಭೇಟಿಮಾಡಬೇಕಿತ್ತು ಎಂದು ಎಮೇಕಾನ ತಂದೆಗೆ ಸೂಚಿಸಿದ.
ಅವನೇನೂ ಅನಾರೋಗಿಯಲ್ಲ ಎಂಬ ಉತ್ತರ ಬಂತು.
ಮತ್ತಿನೇನು? ಅವನ ತಲೆ ಕೆಟ್ಟಿದೆಯಷ್ಟೆ. ಇದನ್ನು ಒಬ್ಬ ಒಳ್ಳೆಯ ಗಿಡಮೂಲಿಕೆಯ ತಜ್ಞನೊಬ್ಬ ಸರಿದಾರಿಗೆ ತರಬಹುದು. ಅವನಿಗೆ ಅಮಲೈನ್ ಎಂಬ ಔಷಧಿಯ ಅಗತ್ಯವಿದೆ. ಹಾದಿ ಬಿಡುವ ಗಂಡನನ್ನು ತನ್ನ ಹತೋಟಿಯಲ್ಲಿಟ್ಟು ಕೊಳ್ಳಲು ಹೆಣ್ಣು ಇದನ್ನು ಸರಿಯಾಗಿ ಬಳಸುತ್ತಾಳೆ.
ಅವನು ಹೇಳಿದ್ದು ಸರಿ, ಮತ್ತೊಬ್ಬ ನುಡಿದು, ಮುಂದುವರಿಯುತ್ತಾ ಇದಕ್ಕೆ ಖಂಡಿತಾ ಮದ್ದಿನ ಅಗತ್ಯವಿದೆ ಎಂದನು.
ನಾ ಯಾವುದೇ ಸ್ಥಳೀಯ ವೈದ್ಯರನ್ನು ಭೇಟಿಯಾಗುವುದಿಲ್ಲ, ಎಮೇಕಾನ ತಂದೆ ತನ್ನ ಮೌಢ್ಯ ನೆರೆಯಯವರಿಗಿಂತ ಮುಂದಿದ್ದು, ಇವರ ಮಾತಿಗೆಲ್ಲಾ ಜಗ್ಗದವನಾಗಿದ್ದ. ನಾನು ಮತ್ತೊಬ್ಬ ಶ್ರೀಮತಿ ಒಚುಬನಾಗಲಾರೆ. ನನ್ನ ಮಗ ತನ್ನಷ್ಟಕ್ಕೆ ತನ್ನನ್ನು ಕೊಂದುಕೊಳ್ಳುತ್ತಾನೆಂದರೆ, ಕೊಂದು ಕೊಳ್ಳಲಿ. ನಾ ಅವನಿಗೆ ಸಹಾಯ ಮಾಡುವುದಿಲ್ಲ.
ಇದು ಅವಳ ತಪ್ಪು, ಮದುಗ್ವು ನುಡಿದ. ಅವಳು ಯಾವನೋ ವೈದ್ಯನನ್ನು ಸಂರ್ಪಕಿಸಿದ್ದಾಳೆ. ಬಹುಷಃ ಮೋಸದ ಹೆಂಗಸಿರಬೇಕು.
ಅವಳು ಕೊಲೆಪಾತಕಿಯೇ ಸರಿ, ಅಪರೂಪಕ್ಕೊಮ್ಮೆ ಕಾರಣವಿಲ್ಲದೆ ವಾದಿಸುತ್ತಾರೆ ಎಂದು ತನ್ನ ನೆರೆಯವರಿಗೆ ಹಂಗಿಸುತ್ತಿದ್ದ ಜೋನಾಥಾನ್ ಎಂಬುವವನು ನುಡಿದ, ಅವಳ ಗಂಡನಿಗಾಗಿಯೇ ಔಷಧಿಯನ್ನು ತಯಾರಿಸುತ್ತಾರೆ. ಅದನ್ನು ತಯಾರು ಮಾಡುವಾಗ ಆತನ ಹೆಸರನ್ನು ಹೇಳುವುದರಿಂದ ಅದು ಫಲಕಾರಿಯಾಗಿರುತ್ತದೆ. ಅದನ್ನು ಆಹಾರದಲ್ಲಿ ಸೇರಿಸಿ ನೀಡಲಾಗಿರುತ್ತದೆ.
ಆರು ತಿಂಗಳ ನಂತರ, ಎಮೇಕಾ ತನ್ನ ಹೆಂಡತಿಗೆ ತಂದೆಯಿಂದ ಬಂದ ಒಂದು ಸಣ್ಣ ಪತ್ರವನ್ನು ತೋರಿಸುತ್ತಿದ್ದ:
ನಿನ್ನ ಮದುವೆಯ ಪೋಟೋವನ್ನು ಕಳುಹಿಸಲು ನಿನಗೆ ಮನಸ್ಸು ಬಂದದ್ದು ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿದೆ. ನಾ ಅದನ್ನು ವಾಪಸ್ಸು ಕಳುಹಿಸಬಹುದಿತ್ತು. ಆದರೆ, ಮತ್ತೊಮ್ಮೆ ಯೋಚಿಸಿ ನಿನ್ನ ಹೆಂಡತಿಯನ್ನು ಕತ್ತರಿಸಿ ನಿನಗೇ ವಾಪಸ್ಸು ಕಳುಹಿಸುತ್ತಿದ್ದೇನೆ. ಏಕೆಂದರೆ, ಅವಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಿನ್ನೊಂದಿಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಲು ನನಗೆ ಮನಸ್ಸಾದರೂ ಹೇಗೆ ಬಂದೀತು.
ಪತ್ರವನ್ನೊದಿದ ನೇನೆ ಕತ್ತರಿಸದ್ದ ತನ್ನ ಪೋಟೋವನ್ನು ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡಳು. ಮತ್ತು ಅಳುವುದಕ್ಕೆ ಶುರುಮಾಡಿದಳು.
ಅಳಬೇಡ ಪ್ರಿಯತಮೆ, ಎಂದು ಗಂಡ ಸಮಾಧಾನ ಮಾಡಲು ಯತ್ನಿಸಿದ, ಅವನು ಸ್ವಭಾವತಃ ಒಳ್ಳೆಯ ಮನುಷ್ಯ. ಒಂದಲ್ಲ ಒಂದು ದಿನ ನಮ್ಮ ಮದುವೆಯನ್ನು ಒಪ್ಪಿಯೇ ಒಪ್ಪುತ್ತಾನೆ.
ಹಲವು ವರ್ಷಗಳು ಕಳೆದರೂ ಆ ದಿನ ಬರಲೇ ಇಲ್ಲ.
ಎಂಟು ವರ್ಷಗಳು, ಒಕೋಕೆ ಮತ್ತು ಎಮೇಕಾನ ನಡುವೆ ಯಾವ ಚರ್ಚೆಯೂ ನಡೆಯಲಿಲ್ಲ. ಮೂರು ಬಾರಿ ಮಾತ್ರ, ಅದೂ ಎಮೇಕಾ ತನ್ನ ರಜೆಯನ್ನು ಕಳೆಯಲು ಊರಿಗೆ ಬರಲು ಕೇಳಲು ಬರೆದಿದ್ದನು.
ನಿನ್ನನ್ನು ನನ್ನ ಮನೆಯಲ್ಲಿ ಸೇರಿಸುವುದಿಲ್ಲ, ಒಮ್ಮೆ ತಂದೆ ಪ್ರತಿಕ್ರಿಯಿಸಿ ಬರೆದಿದ್ದ, ನೀನು ನಿನ್ನ ರಜೆಯನ್ನು ಅಥವಾ ಜೀವನವನ್ನು ಎಲ್ಲಿ ಮತ್ತು ಹೇಗೆ ಕಳೆಯುತ್ತೀಯಾ ಎಂಬುದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದ.
ಎಮೇಕಾನ ಮದುವೆಯ ಬಗ್ಗೆ ಆತನ ಹಳ್ಳಿಯಲ್ಲಷ್ಟೇ ಪೂರ್ವಾಗ್ರಹಪೀಡಿತರಿರಲಿಲ್ಲ. ಲಾಗೋಸ್‌ನಲ್ಲೂ ಕೆಲಸಮಾಡುತ್ತಿದ್ದ ಎಮೇಕಾನ ಕುಲದವರು ತಾರತಮ್ಯ ತೋರುತ್ತಿದ್ದರು. ಎಮೇಕಾನ ಕುಲದ ಹೆಂಗಸರು ತಮ್ಮ ಹಳ್ಳಿ ಜನರ ಸಭೆ ಸೇರಿದಾಗ ನೇನೆಯನ್ನು ದ್ವೇಷಿಸದಿದ್ದರೂ, ಅವಳನ್ನು ಬಹಳ ಗೌರವ ಮನೋಭಾವದಿಂದ ನೋಡುವ ಮೂಲಕ ಅವಳು ತಮ್ಮವಳಲ್ಲ ಎಂಬುದನ್ನು ವ್ಯಕ್ತಪಡಿಸುತ್ತಿದ್ದರು. ಆದರೆ, ಸಮಯ ಕಳೆದಂತೆ ನೇನೆ ಅವರಲ್ಲೂ ಗೆಳತಿಯರನ್ನು ಸಂಪಾದಿಸುವ ಮೂಲಕ ಅವರೊಳಗೊಬ್ಬಳಾಗಿ ಅವರ ಮನಗೆದ್ದಳು. ಸ್ವಲ್ಪ ತಡವಾಗಿಯಾದರೂ ಅವರು ನೇನೆ ತಮಗಿಂತಲೂ ತನ್ನ ಮನೆಯನ್ನು ಅಚ್ಚ್ಚುಕಟ್ಟಾಗಿಯೇ ಇಟ್ಟುಕೊಳ್ಳುತ್ತಾಳೆ ಎಂದು ಹೊಟ್ಟೆಕಿಚ್ಚಿನಿಂದಲೇ ಒಪ್ಪಿಕೊಳ್ಳತೊಡಗಿದರು.
ನಿಧಾನವಾಗಿ ಇಬೋ ಪ್ರದೇಶದ ಹೃದಯ ಭಾಗದಲ್ಲಿದ್ದ ಎಮೇಕಾನ ಹಳ್ಳಿಗೆ ಇವರಿಬ್ಬರೂ ಸಂತೋಷದಿಂದ ವಾಸಿಸುತ್ತಿರುವ ವಿಷಯ ತಿಳಿಯಿತು. ವಿಷಯ ತಿಳಿಯದಿದ್ದ ಕೆಲವೇ ಜನರಲ್ಲಿ ಎಮೇಕಾನ ತಂದೆಯೂ ಸೇರಿದ್ದ. ತನ್ನ ಮಗನ ಹೆಸರನ್ನು ಹೇಳಿದರೆ ಉರಿದುಬೀಳುತ್ತಿದ್ದದನ್ನು ಕಂಡು, ಯಾರೂ ಎಮೇಕಾನ ಹೆಸರನ್ನು ಅವನ ಬಳಿ ಎತ್ತುತ್ತಿರಲಿಲ್ಲ. ತನ್ನ ಮನಃಶಕ್ತಿಯಿಂದ ಮಗನನ್ನು ಮನದ ಮೂಲೆಗೆ ಸೇರಿಸಲು ಸಫಲನಾಗಿದ್ದ. ಆ ನೋವು ಆತನಿಗೆ ಮಾರಣಾಂತಿಕವಾಗಿತ್ತು. ಆದರೂ ಅವನು ಗೆದ್ದಿದ್ದ.
ಒಂದು ದಿನ ನೇನೆಯಿಂದ ಬಂದ ಪತ್ರವನ್ನು ಕಾಟಾಚಾರಕ್ಕೆ ಓದಲು ಶುರುಮಾಡಿದವನ ಮುಖದ ಭಾವನೆಗಳು ಬದಲಾಗತೊಡಗಿದವು ಮತ್ತು ಇದೀಗ ಗಮನವಿಟ್ಟು ಓದತೊಡಗಿದ,
...ನಮ್ಮಿಬ್ಬರು ಮಕ್ಕಳು ತಮಗೆ ತಾತ ಇದ್ದಾರೆ ಎಂದು ತಿಳಿದ ದಿನದಿಂದ ನಿಮ್ಮಲಿಗೆ ಕರೆದುಕೊಂಡು ಹೋಗಬೇಕೆಂದು ಪೀಡಿಸುತ್ತಿದ್ದಾರೆ. ನೀವು ಅವರನ್ನು ನೋಡಲು ಇಷ್ಟಪಡುವುದಿಲ್ಲವೆಂದು ಹೇಳಲು ನನಗೆ ಮನಸ್ಸಾಗುತ್ತಿಲ್ಲ. ಮುಂದಿನ ತಿಂಗಳ ರಜೆಯಲ್ಲಿ ಅವರನ್ನು ನಿಮ್ಮಲಿಗೆ ಕರೆದುಕೊಂಡು ಬರಲು ಎಮೇಕಾಗೆ ಅವಕಾಶ ನೀಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ. ನಾನು ಲಾಗೋಸ್‌ನಲ್ಲೇ ಉಳಿಯುತ್ತೇನೆ...
ಆತನಿಗೆ ಒಂದು ಕ್ಷಣ ಇಷ್ಟು ವರ್ಷಗಳ ತನ್ನ ನಿರ್ಧಾರ ಸಡಿಲವಾದಂತೆ ತೋರಿತು. ತನ್ನಷ್ಟಕ್ಕೆ ತಾನು ಸೋಲಬಾರದು ಎಂದು ಕೊಂಡ. ಎಲ್ಲಾ ಭಾವನೆಗಳನ್ನು ತಡೆಯಲು ಯತ್ನಿಸಿದ. ಮತ್ತೊಂದು ಸಂಘರ್ಷ ಅವನಿಗೆದುರಾಯಿತು. ಕಿಟಕಿಗೆ ಆತುಕೊಂಡು ಹೊರಗೆ ನೋಡತೊಡಗಿದ. ಆಕಾಶದಲ್ಲಿ ಕಾರ್ಮೋಡ ಕವಿದು, ಜೋರಾದ ಗಾಳಿ ಒಣಗಿದ ಎಲೆಗಳು ಮತ್ತು ಧೂಳಿಂದ ಕೂಡಿತು. ಮಾನವನ ಸಂಘರ್ಷದಲ್ಲಿ ಪ್ರಕೃತಿಯೂ ಕೈ ಜೋಡಿಸಿದ ಒಂದು ಅಪೂರ್ವ ಕ್ಷಣವದು. ಕ್ಷಣಕಾಲದಲ್ಲಿ ಶುರುವಾದ ಮಳೆ, ವರ್ಷದ ಮೊದಲ ಮಳೆಯಾಗಿತ್ತು. ದಪ್ಪ ದಪ್ಪ ಮೊನಚಾದ ಹನಿಗಳು ಮಿಂಚು, ಗುಡುಗಿನೊಂದಿಗೆ ಮಳೆಗಾಲ ಆರಂಭವಾದದ್ದನ್ನು ತಿಳಿಯಲೆತ್ನಿಸುತ್ತಿದ್ದವು. ತನ್ನಿಬ್ಬರು ಮೊಮ್ಮಕ್ಕಳನ್ನು ನೆನೆಯದಿರಲು ಒಕೋಕೆ ಪ್ರಯತ್ನಿಸುತ್ತಿದ್ದ. ಆದರೆ, ಈ ಬಾರಿಯ ಸಂಘರ್ಷದಲ್ಲಿ ತನಗೆ ಸೋಲು ಎಂಬುದು ಅವನಿಗೆ ಅರಿವಾಗತೊಡಗಿತ್ತು. ತನಗಿಷ್ಟವಾದ ದೇವರ ಸ್ತ್ರೋತ್ರವನ್ನು ಗುನುಗಲು ಆರಂಭಿಸಿದ. ಆದರದು ಮಳೆಯ ಚಟಪಟ ಸದ್ದಿನಲ್ಲಿ ಲೀನವಾಯಿತು. ತತ್‌ಕ್ಷಣ ಆತನ ಮನಸ್ಸು ಮೊಮ್ಮಕ್ಕಳೆಡೆಗೆ ಹರಿಯಿತು. ಅವರಿಗೆ ತನ್ನ ಮನೆಯ ಬಾಗಿಲನ್ನು ಹೇಗೆ ತಾನೇ ಮುಚ್ಚಾನು? ಕುತೂಹಲಭರಿತ ಅವನ ಮನಸ್ಸ್ಸಿನಲ್ಲಿ ಆ ಮಕ್ಕಳು ದುಃಖಭರಿತರಾಗಿ ಭೀಕರ ಮಳೆಯಲ್ಲಿ ತನ್ನ ಮನೆಯ ಹೊರಗೆ ಅನಾಥವಾಗಿ ನಿಂತಿರುವುದನ್ನು ಕಲ್ಪಿಸಿಕೊಂಡ.
ಪಶ್ಚಾತ್ತಾಪದಿಂದ ಮತ್ತು ಅವರನ್ನು ಸೇರದೆ ಸಾಯುತ್ತೇನೆಂಬ ಅನಿಶ್ಚಿತ ಭಯದಿಂದ, ಅವನಿಗೆ ಆ ರಾತ್ರಿ ನಿದ್ದೆ ಬರಲಿಲ್ಲ.
...
ಅಬ್ಬಾ ಮುಗೀತು... ಎಂದು ನಿಟ್ಟುಸಿರುಬಿಟ್ಟವಳೇ, ಅಲ್ಲಿದ್ದ ನೀರಿನ ಬಾಟಲಿಯನ್ನು ಎತ್ತಿಕೊಂಡು ಗಟಗಟ ಕುಡಿಯತೊಡಗಿದಳು.
ಅವಳು ಮುಗಿಸುವ ಕ್ಷಣಕ್ಕಾಗಿ ಕಾದಿದ್ದ ನಾನು ಅದನ್ನು ಕಿತ್ತುಕೊಂಡು ಉಳಿದ ನೀರನ್ನು ಒಂದೇ ಸಲಕ್ಕೆ ಕುಡಿದು, ಏನು ನೀನು ಕತೆ ಹೇಳ್ತೀನಿ ಅಂತಾ ಪುರಾಣ ಹೇಳ್ದಲ್ಲ ಎಂದೆ.
ಇದು ಪುರಾಣನ? ನಮ್ದೂ ಇದೇ ಕತೆ ಆಗುತ್ತೇನೋ...?
ಇದು ಮುಕ್ತಾಯದ ಆರಂಭ!
ಬಹುಷಃ...ಹೌದು. ಅದಕ್ಕೆ ನಾ ತಾಳ್ಮೆಯಿಂದ ಕತೆ ಕೇಳ್ತಾ ಕೂತಿದ್ದೆ. ಈಗಲಿಂದಲೇ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದಲ್ಲವೇ?
ನೋಡೋಣ...ಕಾಲಾಯ ತಸ್ಮೈ ನಮಃ ಎಂದು ಒಲ್ಲದ ಮನಸ್ಸಿನಿಂದಲೇ ನಾವಿಬ್ಬರೂ ನಿರ್ಗಮಿಸಿದೆವು.

(ಸ್ನೇಹ ಮಾಡಬೇಕಿಂಥವಳ... ಸಂಕಲದಿಂದ. ಅನುವಾದಿತ ಕತೆ ಈ ಹಿಂದೆ ಉದಯವಾಣಿಯಲ್ಲಿ ಪ್ರಕಟವಾಗಿತ್ತು.)




ಇದು ಭಾರತದ “ಅಮೃತ ಕಾಲ”ವೇ!?

  ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ. ʼಭಾರತ ಬದಲಾಗಿದೆ! ಯಾರದ್ದ...