ಮಂಗಳವಾರ, ಆಗಸ್ಟ್ 14, 2012

೨೦೦೮ರ ಆಗಸ್ಟ್ ೧೫, ೧೬ ಮತ್ತು ೧೭ರಲ್ಲಿ ನಾಗತಿಹಳ್ಳಿಯಲ್ಲಿ ನಡೆದ ಚಿತ್ರಕಥಾ ಶಿಬಿರದ ಅನುಭವಗಳು.



‘ಸಾಕ್ಷಾತ್ಕಾರ’ ನನ್ನ ಗಮನವನ್ನು ಸೆಳೆದ ಮೊದಲ ಚಲನಚಿತ್ರ. ಆ ಚಿತ್ರದ ’ಒಲವೇ ಜೀವನ ಸಾಕ್ಷಾತ್ಕಾರ’ ಎಂಬ ಹಾಡಂತೂ ನನ್ನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅದಾದ ಮೇಲೆ ಸಾಕಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದರೂ ಇಷ್ಟವಾಗುತಿದ್ದದು ಡಾ//ರಾಜ್ ಅಭಿನಯದ ಚಿತ್ರಗಳು, ಪುಟ್ಟಣ್ಣ ಕಣಗಾಲರ ಚಿತ್ರಗಳು, ಶಂಕರ್‌ನಾಗ್ ಚಿತ್ರಗಳು ಮತ್ತು ಆಗೊಮ್ಮೆ ಈಗೊಮ್ಮೆ ವಿಷ್ಣುವರ್ಧನ್, ರವಿಚಂದ್ರನ್, ಜಗ್ಗೇಶ್, ಶಿವರಾಜ್‌ಕುಮಾರ್ ಚಿತ್ರಗಳು ಮತ್ತು ಮಕ್ಕಳ ಚಿತ್ರಗಳು. ಅಪರೂಪಕೊಮ್ಮೆ, ಕನ್ನಡದಲ್ಲಿ ಉತ್ತಮ ಚಿತ್ರಗಳು ಬರುತ್ತಿದ್ದರೂ ಅವುಗಳನ್ನು ನೋಡುವುದು ಸ್ವಲ್ಪ ಕಷ್ಟವಾಗುತ್ತಿತ್ತು, ಸಿನಿಮಾಗಿಂತ ಓದುವುದೇ ಮೇಲು ಎಂದು ಪುಸ್ತಕ ಪ್ರಪಂಚದಲ್ಲೇ ಮುಳುಗಿಬಿಟ್ಟಿದ್ದೆ.

‘ಅಮೆರಿಕಾ ಅಮೆರಿಕಾ’ ಚಿತ್ರ ಬಿಡುಗಡೆಯಾದಾಗ ಬಹಳ ಇಷ್ಟ ಪಟ್ಟು ನೋಡಿ, ‘ನೂರು ಜನ್ಮಕೂ, ನೂರಾರು ಜನ್ಮಕೂ’ ಎಂದೂ ಹಾಡಿದ್ದು ಬಿಟ್ಟರೆ ಸೀರಿಯಸ್ಸಾಗಿ ಚಿತ್ರಗಳನ್ನು ನೋಡಿದ್ದು ಕಮ್ಮಿ. ಆಗ ಬಂತು ನೋಡಿ ’ಮುಂಗಾರು ಮಳೆ’ ಯೆಂಬ ಕುಂಭದ್ರೋಣ ಮಳೆ. ಊರವರೆಲ್ಲಾ ಮುಂಗಾರುಮಳೆಯಲ್ಲಿ ತೋಯ್ದು ತೆಪ್ಪೆಯಾದರೂ ನನಗೇಕೋ ಮಳೆಯಲಿ ನೆನೆಯುವ ಮನಸ್ಸಾಗಿರಲಿಲ್ಲ. ‘ನಾ ನಾಲ್ಕುಸಲ ನೋಡಿದೆ. ಹತ್ತು ಸಲ ನೋಡಿದೆ ಎಂದು ಕೆಲವರು ಅಂದರೂ, ಕೆಲವರು ಅಂಕಣಗಳಲ್ಲಿ ಚಿತ್ರದ ಬಗ್ಗೆ ಬಂದರೂ ತಲೆಕೆಡಿಸಿಕೊಳ್ಳದ ನಾನು ಮುಂಗಾರುಮಳೆ ಐವತ್ತು ದಿನಗಳನ್ನು ಪೂರೈಸಿ ಶತದಿನೋತ್ಸವದತ್ತ ದಾಪುಗಾಲಿಟ್ಟಾಗ ಇದ್ದಕ್ಕಿದ್ದಂತೆ ಎಲ್ಲಾ ಪುಸ್ತಕಗಳನ್ನು ಎತ್ತಿಟ್ಟು ಯುಗಾದಿ ಹಬ್ಬದಂದು ಆ ಚಿತ್ರವನ್ನು ನೋಡಿದೆ. ಅಬ್ಬಾ ! ಎಂಥಾ ಚಿತ್ರ ! ಚಲನಚಿತ್ರವನ್ನು ಕನ್ನಡದಲ್ಲಿ ಹೀಗೂ ಮಾಡಬಹುದಾ ಅನ್ನಿಸಿತ್ತು.

ನಂತರ ನನ್ನಾಕೆಯ ಜೊತೆ ನೋಡಿದ ಮೊದಲ ಸಿನಿಮಾ ’ದುನಿಯಾ’ ಹೊಸ ರೀತಿಯಲ್ಲಿ ಕಾಣಿಸಿತು. ಅದಾಗಲೇ ನನ್ನ ತಲೆಯಲ್ಲಿ ಈಗ ಬರುತ್ತಿರುವ ಎಷ್ಟೋ ಕೆಟ್ಟ ಚಲನಚಿತ್ರಗಳಿಗಿಂತ ನನ್ನ ತಲೆಯಲ್ಲಿರುವ ಕಥೆಗಳು ಉತ್ತಮ ಚಲನಚಿತ್ರವಾಗಬಹುದಲ್ಲವೇ? ಎಂಬ ಪ್ರಶ್ನೆ ಮೂಡುತ್ತಿತ್ತು. ಆ ಪ್ರಶ್ನೆಯನ್ನು ಪರೀಕ್ಷೆಯ (ಎಂ.ಎ) ನೆಪವೂಡ್ಡಿ ತಡೆದಿದ್ದೆ.
ಪರೀಕ್ಷೆ ಮುಗಿಯಿತು ನೋಡಿ, ನನ್ನಲ್ಲಿದ್ದ ಕಥೆಗಾರ ಅವಾಗವಾಗ ಜಾಡಿಸಿ ಒದೆಯಲು ಶುರುಮಾಡಿದ. ಈ ಮಧ್ಯೆ ಒಂದು ಸಿನಿಮಾ ಆಗಬಹುದೇನೋ ಎಂದು ನಾನಂದು ಕೊಂಡಿರುವ ಕಥೆಯನ್ನು ’ಪೆನ್ ಎತ್ ಬರಿ, ಸ್ಯಾಂಡಲ್‌ವುಡ್‌ನಲ್ಲಿ ಮೆರಿ’ ಎಂಬ ಮಿರ್ಚಿಮೂವೀಸ್‌ರವರ ಸಿನಿಮಾ ಕಥಾ ಸ್ಪರ್ಧೆಗೆ ಕಳಿಸಿದ್ದೆ. ಅದಿನ್ನೂ ರಿಸಲ್ಟ್ ಬರುವುದರಲ್ಲಿದೆ(ಬರುವುದಿಲ್ಲವೆಂದು ಖಚಿತವಾಗಿದೆ).


ಅಷ್ಟೊತ್ತಿಗಾಗಲೇ ಸಿನಿಮಾಗೆ ಕಥೆ ಬರೆದರೆ ಅಷ್ಟೇ ಸಾಲದು, ಸಿನಿಮಾಗೆ ಚಿತ್ರಕಥೆಯನ್ನು ಬರೆಯಬೇಕು. ಅದು ಚಲನಚಿತ್ರದ ಪ್ರಮುಖ ಅಂಗ ಎಂಬುದು ಮನದಟ್ಟಾಗಿತ್ತು. ಇಂಟರ್‌ನೆಟ್‌ನಲ್ಲಿ ಸಾಕಷ್ಟು ಹುಡುಕಿ ತಿಳಿದುಕ್ಕೊಳಲು ಯತ್ನಿಸಿದ್ದರೂ ಸರಿಯಾದ ಮಾರ್ಗ ತಿಳಿದಿರಲಿಲ್ಲ. ಆಗ ಇದ್ದಕ್ಕಿದ್ದಂತೆ ಚಿತ್ರಲೋಕ.ಕಾಮ್‌ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ರವರ ನೇತೃತ್ವದಲ್ಲಿ ‘ರಾಜ್ಯಮಟ್ಟದ ಚಿತ್ರಕಥಾ ತರಬೇತಿ ಶಿಬರ’ ದ ಬಗ್ಗೆ ಮಾಹಿತಿಯಿತ್ತು. ತಕ್ಷಣ ಅರ್ಜಿ ಲಗಾಯಿಸಿ, ಬಂದಿದ್ದ ಸಾವಿರಾರು ಅರ್ಜಿಗಳ ಪೈಕಿ ಆಯ್ಕೆಯಾದ ನೂರಕ್ಕಿಂತ ಸ್ವಲ್ಪ ಹೆಚ್ಚು ಜನರಲ್ಲಿ ನಾನು ಒಬ್ಬನಾದಾಗ ನನ್ನ ಆನಂದಕ್ಕೆ ಮಿತಿಯಿರಲಿಲ್ಲ.

ಅಂತೂ ಇಂತೂ ಆಗಸ್ಟ್ ೨೦೦೮, ೧೫ ರ ಬೆಳಗ್ಗೆ ನಾ ನಾಗತಿಹಳ್ಳಿಯಲ್ಲಿದ್ದೆ. ಬೆಳಿಗ್ಗೆ ಒಂಬತ್ತರ ಹೊತ್ತಿಗೆ ಅ. ನಾಗತಿಹಳ್ಳಿಯ ಶಾಲೆ (ನಾಗ್ತಿ ಸಾರ್ ಅಲ್ಲೇ ಓದಿದ್ದು) ಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ನೇರವೇರಿತು. ನಂತರ ನಾಗ್ತಿಸರ್‌ರವರ ಮನೆಯ ದರ್ಶನವಾಯಿತು. ಮನೆಯ ಬದಿಯಲ್ಲೇ ಊಟತಿಂಡಿಗೆ ವ್ಯವಸ್ಥೆಯಾಗಿದ್ದರಿಂದ ಬೆಳಗಿನ ತಿಂಡಿಯಾಯಿತು. ಅಲ್ಲಿಂದ ಮತ್ತೆ ಶಾಲೆಯ ಬಳಿ ಬಂದೆ ಆ ಶಾಲೆಯ ಹಿಂಭಾಗದಲ್ಲಿ ನಾಗ್ತಿಸರ್‌ರವರು ಕಟ್ಟಿಸಿರುವ ‘ಸಿಹಿಕನಸು’ ಬಯಲು ರಂಗಮಂದಿರವಿದೆ. ಅದು ಅದಾಗಲೇ ಶಿಬಿರಕ್ಕೆ ಸಜ್ಜಾಗಿತ್ತು. ಆ ರಂಗಮಂದಿರದ ಲಂಬಕ್ಕೆ ನಾಗ್ತಿಸರ್ ತಮ್ಮ ತಂದೆ-ತಾಯಿಯ ಹೆಸರಿನಲ್ಲಿ ಗ್ರಂಥಾಲಯ ಕಟ್ಟಿಸಿದ್ದಾರೆ. ಪಕ್ಕಕ್ಕೆ ಶ್ರೀಮತಿ ನಾಗ್ತಿಸಾರ್‌ರವರ ಹೆಸರಿನಲ್ಲಿ ಕಂಪ್ಯೂಟರ್ ಸೆಂಟರಿದೆ. ಇದನ್ನೆಲ್ಲಾ ಗಮನಿಸುತ್ತಿದ್ದ ಸ್ವಲ್ಪ ಹೊತ್ತಿಗೆ ನಾಗ್ತಿಸರ್‌ರವರ ದರ್ಶನವಾಯಿತು. ಸೀದಾ ಹೋದವನೇ ಕೈ ಮುಗಿದು ‘ಹ್ಯಾಪಿ ಬರ್ತಡೇ ಸಾರ್’ ಎಂದೆ. ಅವರ ಗಮನವೆಲ್ಲಾ ಶಿಬಿರದ ಆರಂಭದ ತಯಾರಿಕಡೆಗಿತ್ತು. ‘ಕುಳಿತುಕ್ಕೊಳ್ಳಿ, ಸ್ವಲ್ಪ ಹೊತ್ತಿನಲ್ಲಿ ರಿಜಿಸ್ಟ್ರೇಷನ್ ಶುರು ಮಾಡುತ್ತೇವೆ, ತಿಂಡಿಯಾಗಿಲ್ಲದಿದ್ದರೆ ಮಾಡಿಕೊಂಡು ಬನ್ನಿ’ ಎಂದು ಹೇಳಿದರು. ತಿಂಡಿಯಾಗಿದ್ದರಿಂದ ನಾ ಬಂದು ಅವರನ್ನೇ ಗಮನಿಸುತ್ತಾ ಕುಳಿತೆ.

ಎಲ್ಲರ ರಿಜಿಸ್ಟ್ರೇಷನ್ ಆದ ಬಳಿಕ ಅಷ್ಟೊತ್ತಿಗಾಗಲೇ ಬಂದಿದ್ದ ಬಿ.ಸುರೇಶ್ (ಉದಯ ಟೀವಿಯ ’ನಾಕುತಂತಿ’ ಖ್ಯಾತಿ)ರವರು ತಮ್ಮ ಉಪನ್ಯಾಸವನ್ನು ನಡೆಸಿಕೊಟ್ಟರು. ಶಿಬಿರದ ಎಲ್ಲಾ ಅಭ್ಯರ್ಥಿಗಳು ಉತ್ಸುಕತೆಯಿಂದ ಪ್ರಶ್ನೋತ್ತರದಲ್ಲಿ ಭಾಗಿಯಾದರು. ನಮಗೆಲ್ಲಾ ಹೊಸ ಪ್ರಪಂಚದ ರೂಪುರೇಶೆಗಳು ಅರ್ಥವಾಗುತ್ತಾ ಹೋದವು. ಬಿ.ಸುರೇಶ್‌ರವರು ಬಹಳ ತಾಳ್ಮೆಯಿಂದ ಸಿನಿಮಾ ಮತ್ತು ಟಿವಿಯ ಎಬಿಸಿಡಿಯ ಬಗ್ಗೆ ಮತ್ತದರ ಹಲವಾರು ಮಜಲುಗಳ ಬಗ್ಗೆ ಮನದಟ್ಟು ಮಾಡಿದರು.

ಅವರಿಗೆ ವಿದಾಯ ಹೇಳಿದ ನಂತರ ಊಟ ಮಾಡಿ ಬಂದವರಿಗೆ ಯುವ ನಿರ್ದೇಶಕ, ಯುವಕ. ಯುವತಿಯರಿಗೋಸ್ಕರವೇ ಚಿತ್ರಮಾಡುತ್ತೇನೆ ಎಂದು ಹೇಳುವ, ಆದರೆ ತಮಗೆ ಗೊತ್ತಿದ್ದೋ-ಗೊತ್ತಿಲ್ಲದೆಯೋ ಕಿರಿಯರಿಂದ-ಹಿರಿಯರ ತನಕ ಎಲ್ಲರನ್ನೂ ಸೆಳೆದಿಡಬಲ್ಲ ಚಿತ್ರಗಳನ್ನು ಕೊಟ್ಟಿರುವ, ಮುಂಗಾರು ಮಳೆ ಖ್ಯಾತಿ ಯೋಗರಾಜ್‌ಭಟ್ಟರು ನಮಗಾಗಿ ಕಾಯುತ್ತಿದ್ದರು. ಅವರೊಡನೆ ಮೊದಲಿಗೆ ಸಂವಾದ ಶುರುವಾಯಿತು. ಏನಾದರು ಪ್ರಶ್ನೆಗಳಿದ್ದರೆ ಕೇಳಿ ಎಂದು ಅವರು ಮೊದಲೇ ಹೇಳಿದ್ದರಿಂದ ಪ್ರಶ್ನೆಗಳ ಸುರಿಮಳೆಯಾಯಿತು. ಎಲ್ಲಾ ಉದ್ದುದ್ದದ ಪ್ರಶ್ನೆಗಳಿಗೂ ಚೋಟುದ್ದದ ಉತ್ತರ ಕೊಡುತ್ತಿದ್ದ ಭಟ್ಟರು ಸಿನಿಮಾದ ಕಷ್ಟಸಾಧ್ಯತೆಗಳ ಬಗ್ಗೆ ಪರೋಕ್ಷವಾಗಿ ಹೇಳಿದರು. ಅವರಿಗೆ ಪಾತ್ರಗಳೇ ಕಥೆ. ಇದು ಒಂದು ತರಹದ ವಿರೋಧಾಭಾಸವಾಗಿ ಕಂಡರೂ ಅದು ಅವರ ಶೈಲಿ. ಮೇಕಿಂಗ್ ಆಫ್ ಮುಂಗಾರುಮಳೆಯ ಬಗ್ಗೆ ಸಾಕಷ್ಟು ಹೇಳಿದರು. ಅವರನ್ನೆಕೋ ಕಳುಹಿಸಿಕೊಡಲು ನಮಗೆ ಮನಸೇ ಬರಲಿಲ್ಲ

ಅದಾಗಲೇಸಂಜೆಯಾಗಿತ್ತು. ಇವೆಲ್ಲದರ ಮಧ್ಯೆ ಮತ್ತು ಸಂಜೆಯಲ್ಲಿ ನಮ್ಮೆಲ್ಲರ ನಾಗ್ತಿಸಾರ್ ಅಥವಾ ನಾಗತಿಹಳ್ಳಿಯ ಚಂದ್ರಣ್ಣ ಮೇಷ್ಟ್ರರ ಸಂದೋರ್ಭಚಿತ ಮಾತುಗಳು, ಸಲಹೆಗಳು ಚಿತ್ರಕಥೆಯ ಶಕ್ತಿ, ಮುಂತಾದ ವಿಷಯಗಳ ಬಹಳ ಧೀರ್ಘವಾದ ಉಪನ್ಯಾಸ ಮತ್ತು ಚರ್ಚೆ ನಡೆಯಿತು. ನಂತರ ಸಾಕ್ಷಾತ್ ವರಮಹಾಲಕ್ಷ್ಮೀಯಂತೆ ಬಂದ ಡಾ// ಜಯಮಾಲರೊಂದಿಗೆ ಮಾತುಕತೆ ನಡೆಯಿತು. ಶಾಲೆಯ ಸಹಾಯಕಿ ಮಣಕಮ್ಮ ನಾಗ್ತಿಸಾರ್‌ರವರ ’ಹೊಳೆದಂಡೆ’ ಕೃತಿಯನ್ನು ಅನಾವರಣ ಗೋಳಿಸಿದ್ದು ಸಂಜೆಯ ವಿಶೇಷವಾಗಿತ್ತು. ರಾತ್ರಿಯ ಊಟಮುಗಿಸಿದವರು ನಿದ್ದೇಗಣ್ಣಿನಲ್ಲೇ ಊರಿನ ಅರೆಶಿಕ್ಷಿತ ಮಹಿಳೆಯರು ಅಭಿನಯಿಸಿದ ’ಕರಿಭಂಟ’ ಎಂಬ ಅಮೋಘ ನಾಟಕವನ್ನು ನೋಡಿದೆವ. ನಮಗೆಲ್ಲಾ ತಂಗಲು ಸಮೀಪದ ಹಾಸ್ಟೆಲ್‌ವೊಂದರಲ್ಲಿ ವ್ಯವಸ್ಥೆಯಾಗಿತ್ತು. ಮಲಗಿದಾಗ ರಾತ್ರಿ ಹನ್ನೇರಡಾಗಿತ್ತು. ನಿದ್ದೆಯು ಬರಲೊಲ್ಲದು. ಕಣ್ಮುಚ್ಚಿದ್ದರೂ ಸಿನಿಮಾದ ಚಿಂತೆ. ಹಾಗೂ ಹೀಗೂ ಬೆಳಕಾಯಿತು.


ಆಗಸ್ಟ್ ೧೬ರಂದು ಬೆಳಗ್ಗೆಯೇ ನಾಗ್ತಿ ಸಾರ್‌ರವರು ಕಥೆಯ ಆಯ್ಕೆ ಮತ್ತು ಚಿತ್ರಕಥೆಯ ಬೇಸಿಕ್ಸ್‌ಗಳನ್ನು ಹೇಳಿಕೊಟ್ಟರು. ನಮಗೆಲ್ಲಾ ಅಂದು ಹಬ್ಬದ ದಿನವಾಗಿತ್ತು. ಏಕೆಂದರೆ ಅಂದು ‘ಆದಿನಗಳು’ ನಿರ್ದೇಶಕ ಚೈತನ್ಯ, ‘ಕಾಡಬೆಳದಿಂಗಳು’ ಚಿತ್ರದ ಚಿತ್ರಕಥೆಗಾರ ಮತ್ತು ನಮ್ಮೆಲ್ಲರ ಆರಾಧ್ಯದೈವ ಬರಹಗಾರ ಜೋಗಿ ಉರ್ಫ್ ಜಾನಕಿ ‘ಈ ಟಿವಿ’ ಯ ಸೂರಿ, ‘ಹೂಮಳೆ’, ಇತ್ತೀಚೀನ ‘ಆಕ್ಸಿಡೆಂಟ್’ ಚಿತ್ರಗಳ ಸಿನಿಮಾಟೋಗ್ರಾಫ್‌ರ್ ಜಿ.ಎಸ್. ಭಾಸ್ಕರ್ ಮತ್ತು ‘ಪ್ರೇಮಲೋಕ’ದ ಮಾಂತ್ರಿಕ ಹಂಸಲೇಖಾ ಮತ್ತು ಲತಾಹಂಸಲೇಖ ಬಂದಿದ್ದರು. ಚೈತನ್ಯ "ರೋಡ್ ಟು ಪರ್ಡಿಶನ್" ಎಂಬ ಚಿತ್ರದ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ನಂತರ ‘ನಾಯಿನೆರಳು’ ಮತ್ತು ದೂರದರ್ಶನದಲ್ಲಿ ಹಲವು ವರ್ಷಗಳ ಹಿಂದೆ ಪ್ರದರ್ಶನಗೊಂಡಿದ್ದ ‘ಅತೀತ’ (ಈ ಟೀವಿಯ ಸುರೇಂದ್ರನಾಥ್) ಎಂಬ ಕಿರುಚಿತ್ರವನ್ನು ವೀಕ್ಷಿಸಿದೆವು. ಇದರ ಕುರಿತು ಜೋಗಿ ಮತ್ತು ಸೂರಿಯವರ ಜೊತೆ ಚರ್ಚೆಯಾಯಿತು. ‘ಮೊಫಲ್-ಇ-ಆಜಮ್’ ಮತ್ತು ‘೮ ೧/೨’ ಎಂಬ ಚಿತ್ರಗಳ ಮೂಲಕ ಜಿ.ಎಸ್. ಭಾಸ್ಕರ್‌ರವರು ಚಿತ್ರದಲ್ಲಿ ಕ್ಯಾಮರದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

ತದನಂತರ ಸಿನಿಮಾದಲ್ಲಿ ಸಂಗೀತದ ಮಹತ್ವ ಕುರಿತು ‘ನಾದಬ್ರಹ್ಮ’ ಹಂಸಲೇಖರಿಂದ ಸಾಕಷ್ಟು ತಿಳಿದು ಕೊಂಡೆವು. ಇವರೆಲ್ಲರೂ ತಮ್ಮತಮ್ಮ ಕ್ಷೇತ್ರದ ಹಲವು ಮಜಲುಗಳನ್ನು ತಿಳಿಸಿಕೊಟ್ಟು ನಮ್ಮನ್ನೆಲ್ಲಾ ಪ್ರೋತ್ಸಾಹಿಸಿದರು. ಸ್ವಲ್ಪ ಬಿಡುವಿನ ಸಮಯ ಸಿಕ್ಕರೂ ಸಾಕು ನಮ್ಮೂಂದಿಗೆ ಶಿಬಿರದ ಅಭ್ಯರ್ಥಿಯಂತೆಯೇ ಕುಳಿತು ನೋಟ್ಸ್ ಮಾಡಿಕೊಳ್ಳುತ್ತಿದ್ದ ನಾಗ್ತಿಸಾರ್‌ರವರು ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದರು.

ಹದಿನೇಳರಂದು, ಮೊದಲ ದಿನವೇ ನಾಗ್ತಿ ಸಾರ್‌ರವರು ನಮಗೆಲ್ಲಾ ತಿಳಿಸಿದಂತೆ ‘ಪದ್ಮಪ್ರಿಯ ಪ್ರಕರಣ’, ‘ಆರುಷಿ ಪ್ರಕರಣ’, ‘ತೇಜಸ್ವಿಯವರ ಮಾಯಾಮೃಗ’ ಅಥವಾ ನಮ್ಮದೇ ಯಾವುದಾದರೊಂದು ಆಯ್ಕೆಯ ಕಥೆ (ಪ್ರಕರಣ) ಕುರಿತು ಹತ್ತು ನಿಮಿಷಗಳ ಕಿರುಚಿತ್ರವಾಗುವಷ್ಟು ಹತ್ತು ಪುಟಗಳ ಚಿತ್ರಕಥೆ ಬರೆಯಬೇಕಿತ್ತು. ಅದು ಶಿಬಿರದ ಅಸೈನ್‌ಮೆಂಟ್. ಎಲ್ಲರೂ ಬಹಳ ಉತ್ಸುಕತೆಯಿಂದ ಯೂನಿವರ್ಸಿಟಿಯ ಪರೀಕ್ಷೆ ಬರೆದಂತೆ ಬೆಳಗಿನಿಂದ ಸಂಜೆಯವರೆಗೂ ಅವರವರ ಆಯ್ಕೆಯ ಚಿತ್ರಕಥೆಗಳನ್ನು ಬರೆದರು. ನಾಗ್ತಿ ಸಾರ್‌ರವರೇ ಆದಷ್ಟು ಅಭ್ಯರ್ಥಿಗಳ ಚಿತ್ರಕಥೆಗಳನ್ನು ನೋಡಿ ತಮ್ಮ ಸಲಹೆ-ಮಾರ್ಗದರ್ಶನ ನೀಡಿದರು. ನಾವದನ್ನು ತಿದ್ದಿ-ತೀಡಿ, ಒಪ್ಪ-ಒರಣ ಮಾಡಿ ಅವರ ಆಫೀಸಿಗೆ ಕಳುಹಿಸಿ ಮಾರ್ಗದರ್ಶನ ಪಡೆಯಬಹುದೆಂದು ಹೇಳಿದರು.

ಕೆಲವರು ಇನ್ನು ಬರೆಯುತ್ತಿದ್ದಾಗಲೇ ಮೂರೂ ದಿನಗಳಿಂದ ತಡೆದಿತ್ತೇನೋ ಎಂಬಂತೆ ಧಾರಾಕಾರವಾಗಿ ಮಳೆಯಾಯಿತು. ನಮ್ಮಗಳ ಚಿತ್ರಕಥೆಗಳನ್ನು ನೋಡಿ ಮೇಘರಾಜನು ಆನಂದಬಾಷ್ಪ ಸುರಿಸಿದನೆಂದು ಮೇಷ್ಟ್ರು ನಗೆ ಚಟಾಕಿ ಹಾರಿಸಿದರು. ಇನ್ನೇನು ಮಳೆ ನಿಂತಿತು ಅನ್ನುವಾಗಲೇ ಆ ಶಿಬಿರಕ್ಕೆ ಕಳಸವಿಟ್ಟಂತೆ ಗಿರೀಶ್‌ಕಾಸರವಳ್ಳಿಯವರ ಆಗಮನವಾಯಿತು. ಅವರೊಡನೆ ಸುದೀರ್ಘ ಚರ್ಚೆಯಾಯಿತು. ಮನರಂಜನೆ, ಸಿನಿಮಾ ಮತ್ತು ಸಾಹಿತ್ಯಗಳ ಭಿನ್ನತೆ, ಸಾಹಿತ್ಯವನ್ನು ಸಿನಿಮಾಕ್ಕೆ ಬಳಸುವ ಬಗ್ಗೆ ಸಿನಿಮಾದ ತಂತ್ರಗಳು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪೂರಕ ಮಾಹಿತಿ ನೀಡಿದರು. ನಮಗೆಲ್ಲಾ ಅವರು ಶಿಬಿರದ ‘ಪ್ರಮಾಣಪತ್ರ’ ವನ್ನು ನೀಡಿದರು. ಅವರ ಹಸನ್ಮುಖ ನನ್ನನು ಕಾಡಿದ್ದಂತೂ ನಿಜ.

ರಾತ್ರಿಯೇ ನಾವೆಲ್ಲಾ ಊಟಮುಗಿಸಿ ಒಲ್ಲದ ಮನಸ್ಸಿನಿಂದ ನಾಗ್ತಿ ಸಾರ್‌ರವರಿಗೆ, ಮೂರೂದಿನಗಳು ಹೊಸ ಪ್ರಪಂಚವನ್ನೇ ತೋರಿಸಿದ ಸುಂದರ ಹಳ್ಳಿ ಅ.ನಾಗತಿಹಳ್ಳಿಗೆ ಮತ್ತು ಅಲ್ಲಿನ ಸುಸಂಸ್ಕೃತ ಜನರಿಗೆ ಮತ್ತು ಶಿಬಿರದ ಎಲ್ಲಾ ಗೆಳೆಯ-ಗೆಳತಿಯರಿಗೆ ವಿದಾಯ ಹೇಳಬೇಕಾಯಿತು. ಕೆಲ ಅತಿಥಿಗಳು ಬರಲಿಲ್ಲವಾದರೂ ಅದು ಒಳ್ಳೆಯದೇ ಆಯಿತು. ಬಂದವರೊಡನೆ ಹೆಚ್ಚು ಹೊತ್ತು ಸಂವಾದ ನಡೆಸಲು ದಾರಿ ಮಾಡಿ ಕೊಟ್ಟಿತು. ಕಿರುತೆರೆಯ ಧಾರವಾಹಿಗಳ ಪಿತಾಮಹ ಟಿ.ಎನ್.ಸೀತಾರಾಂರವರು ಬಂದಿದ್ದರೆ ಚೆನ್ನಾಗಿತ್ತು ಎಂದು ಎಲ್ಲೋ ಒಂದು ಕಡೆ ಅನ್ನಿಸಿದ್ದು ನಿಜವಾದರೂ, ಕಾರ್ಯಾಗಾರದ ಅತಿಥಿಗಳ ಲಿಸ್ಟಲ್ಲಿ ಅವರಿರಲಿಲ್ಲ. ಶಿಬಿರದಲ್ಲಿ ಪ್ರಮುಖವಾಗಿ ಎದ್ದು ಕಂಡದ್ದು ನೂರಕ್ಕಿಂತ ಹೆಚ್ಚು ಶಿಬಿರಾರ್ಥಿಗಳಿದ್ದರೂ ಕಾಪಾಡಿದ ತರಗತಿಯ ಘನತೆ-ಗಾಂಭೀರ್ಯ. ನಾಗ್ತಿ ಸರ್‌ರವರ ಒಲವು ಅದೇ ಆಗಿತ್ತು. ಐವತ್ತು ವರ್ಷಪೂರೈಸಿದ ನಾಗ್ತಿ ಸರ್‌ರವರು ನಮ್ಮಗಳ ಜೊತೆ ಲವಲವಿಕೆಯಿಂದ ಓಡಾಡಿ ಕಾರ್ಯಾಗಾರವನ್ನು ಬಹಳ ಯಶಸ್ವಿಯಾಗಿ ನಡೆಸಿಕೊಟ್ಟರು.

ಮೂರು ದಿನಗಳಲ್ಲೂ ಅವರ ಸ್ನೇಹಿತರು, ಸಹಾಯಕರು, ಊರಿನ ವ್ಯಕ್ತಿಗಳು, ನಾಗ್ತಿ ಸಾರ್‌ರವರ ಶ್ರೀಮತಿ ಮತ್ತು ಮಕ್ಕಳು, ಅಡುಗೆ ಮಾಡಿ ಬಡಿಸಿದವರು, ಸೈಲೆಂಟಾಗಿ ನಮ್ಮೊಡನೆಯೇ ಕುಳಿತಿದ್ದ ‘ಬಯಲು ಸೀಮೆಯ ಕಟ್ಟೆ ಪುರಾಣ (ಲಂಕೇಶ್ ಪತ್ರಿಕೆ) ಖ್ಯಾತಿಯ ಡಾ||ಡಿ.ಬಿ.ಚಂದ್ರೇಗೌಡರು, ಮಲಗಲು ಜಾಗಕೊಟ್ಟ ಹಿರಿಯರೊಬ್ಬರು. ಬಸ್ಸಿನ ಡ್ರೈವರ್‌ಗಳು ಎಲ್ಲರೂ ತಮ್ಮ ಮನೆಯ ಮಕ್ಕಳಂತೆಯೇ ನಮ್ಮನ್ನು ನೋಡಿಕೊಂಡರು.

ಇದೆಲ್ಲಾ ಮೊದಲ ಚಿತ್ರಕಥಾ ಶಿಬಿರದ ಅನುಭವಗಳಾದರೆ, ೨೦೦೯ರ ಯುಗಾದಿಯ ಸಂದರ್ಭದಲ್ಲಿ ನಡೆದ ಶಿಬಿರದ್ದು ಮತ್ತೊಂದು ಕಥೆ. ಅದನ್ನು ಮತ್ತೊಮ್ಮೆ ಹಂಚಿಕೊಳ್ಳುತ್ತೇನೆ.

ನಾಲ್ಕು ವರ್ಷಗಳ ನಂತರ ಈ ಶಿಬಿರದ ಪ್ರಯೋಜನಗಳೇನು ಎಂದು ಕೇಳಿಕೊಂಡರೆ, ಉತ್ತರ ನಿಚ್ಚಳವಾಗಿದೆ. ನನ್ನ ‘ಮಳೆಯಾಗು ನೀ...’ ಕವನ ಸಂಕಲನ ಮೊದಲಿಗೆ ಪ್ರಕಟವಾಯಿತು. ನಂತರ, ‘ಮುಗುಳ್ನಗೆ’ ಎಂದು ಸಿನಿಮಾಗಾಗಿ ಬರೆದ ಕಥೆಯನ್ನು ಕಾದಂಬರಿಯ ರೂಪದಲ್ಲಿ ಪ್ರಕಟಿಸಿದೆ. ‘ಸ್ನೇಹ ಮಾಡಬೇಕಿಂಥವಳ’ ಎಂಬ ಪುಸ್ತಕ ಇದೇ ತಿಂಗಳಲ್ಲಿ ಪ್ರಕಟವಾಗಲಿದೆ. ಜೊತೆಗೆ ಅಲ್ಲೊಂದು ಇಲ್ಲೊಂದು ಸಿನಿಮಾ ಕಥೆಗಾಗಿ ಕರೆಗಳು ಬರುತ್ತಿವೆ.

ಎಲ್ಲದ್ದಕ್ಕಿಂತ ಬಹುಮುಖ್ಯವಾಗಿ, ಶಿಬಿರದಲ್ಲಿ ಸಿಕ್ಕ ಗೆಳೆಯರು, ಜೀವದ ಗೆಳೆಯರಾಗಿದ್ದಾರೆ. ಕಾದಂಬರಿಕಾರ ರಾಜು ಗಡ್ಡಿ, ಸಹೃದಯಿ ಅಜಿತ್ ಕೌಂಡಿನ್ಯ, ಇದಾಗಲೇ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ಆಕಾಶ ಆರಾಧ್ಯ ಮತ್ತು ಅನೇಕ ಗೆಳೆಯರು ‘ಜೀವನದಲ್ಲಿ ಸ್ನೇಹಿತರಲ್ಲ, ಸ್ನೇಹಿತರಿಂದಲೇ ಜೀವನ’ ಎಂದುಕೊಂಡಿರುವ ನನ್ನ ಜೀವನದಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ.

ಗುರುವಾರ, ಜುಲೈ 5, 2012

ಉಪ್ಪಾರಹಳ್ಳಿಯ ರೈಲ್ವೆಗೇಟ್‍ನಲ್ಲೊಂದು ಕುಹೂ ಕುಹೂ

ಮಗ್ಗಿ ಪುಸ್ತಕದಲ್ಲಿರುತ್ತಿದ್ದ ಉಗಿಬಂಡಿಯಂತಹ ರೈಲಿನಲ್ಲೇ ಚಿಕ್ಕಂದಿನಿಂದ ಓಡಾಡುತ್ತಿದ್ದರೂ ನನಗೆ ಮೊದಲು ಅನುಭವಕ್ಕೆ ಬಂದ ರೈಲ್ವೇ ಗೇಟಿನ ನೆನಪೆಂದರೇ, ನಾಲ್ಕನೇ ತರಗತಿಯಲ್ಲಿದ್ದಾಗ ನನ್ನ ಸೋದರತ್ತೆ ಮನೆಯಿಂದ ಖುಷಿಯಿಂದಲೇ ರಜೆಯನ್ನು ಮುಗಿಸಿಕೊಂಡು ಹೊರಟವನು ತಲೆಯೆತ್ತಿಯೂ ನೋಡದೆ ನನ್ನದೇ ಲೋಕದಲ್ಲಿ ಆಡಿಕೊಳ್ಳುತ್ತಾ ಭೀಮಸಂದ್ರದ ರೈಲ್ವೇ ಗೇಟನ್ನು ದಾಟುವ ಸಮಯಕ್ಕೆ ಸರಿಯಾಗಿ ತುಮಕೂರಿನ ಕಡೆಯಿಂದ ಬರುವ ರೈಲನ್ನು ಗಮನಿಸಿದ ನನ್ನ ಸೋದರತ್ತೆ, “ಏ ಸತೀಶ...” ಎಂದು ಕೂಗಿ ಕೈಹಿಡಿದು ಎಳೆದದ್ದು. ಅಂದು ಅತ್ತೆ ಕೈಹಿಡಿದು ಎಳೆಯದಿದ್ದರೆ ಇಂದು ನಾನು ನಾನಾಗಿರುತ್ತಿರಲಿಲ್ಲ. ಈ ರೀತಿಯಾಗಿ ಅಂದಿನ ಭಯಾನಕ ಅನುಭವದೊಂದಿಗೆ ಶುರುವಾದ ರೈಲ್ವೇ ಗೇಟಿನ ಸಂಬಂಧ ಇಂದಿನ ನನ್ನ ದೈನಂದಿನ ಚಟುವಟಿಕೆಯ ಒಂದು ಅವಿಭಾಜ್ಯ ಅಂಗವಾಗಿರುವ ತುಮಕೂರಿನ ಉಪ್ಪಾರಹಳ್ಳಿಯ ರೈಲ್ವೇ ಗೇಟ್ ನಿಂದ ಒಂದು ನಂಟಂತೆ ಬೆಸೆದುಕೊಂಡಿದೆ.

ಉಪ್ಪಾರಹಳ್ಳಿಯ ರೈಲ್ವೆಗೇಟನ್ನು ನಾನು ಮೊದಲು ನೋಡಿದ್ದು ಬಿ.ಎಸ್ಸಿ., ಓದುತ್ತಿದ್ದಾಗ. ಒಂದು ಸಂಜೆ ಕಂಪ್ಯೂಟರ್ ಲ್ಯಾಬನ್ನು ಮುಗಿಸಿಕೊಂಡು ನಾನು ಮತ್ತು ನನ್ನ ಕೆಲವು ಕಂಪ್ಯೂಟರ್ ಸೈನ್ಸ್‍ನ ಗೆಳೆಯರು “ಟ್ರೂ ಲೈಸ್” ಎಂಬ ಇಂಗ್ಲೀಷ್ ಸಿನಿಮಾವನ್ನು ನೋಡಲು ಆಗಿದ್ದ “ರೇಣುಕಾ” ಥೀಯೆಟರ್‍ಗೆ ನಡೆದುಕೊಂಡೇ ಹೋಗಿದ್ದೆವು. ಟೌನ್ ಹಾಲ್ ನಿಂದ ನಡೆದು ರೈಲ್ವೇ ಸ್ಟೇಷನ್ ಮಾರ್ಗವಾಗಿ ಉಪ್ಪಾರಹಳ್ಳಿ ರೈಲ್ವೇ ಗೇಟನ್ನು ದಾಟಿ ಶೆಟ್ಟಿಹಳ್ಳಿಯ ರೇಣುಕಾ ಥೀಯೆಟರ್‍ಗೆ ಹೋಗುವುದೆಂದೂ, ಮೂರು ರೂಪಾಯಿ ಆಟೋ ಛಾರ್ಜನ್ನು ಉಳಿಸುವುದೆಂದೂ ನಾವೆಲ್ಲ ನಿರ್ಧರಿಸಿದ್ದೆವು. ಏಕೆಂದರೆ ಮತ್ತೇಳು ರೂಪಾಯಿಗೆ ಸಿನಿಮಾ ಟಿಕಿಟೇ ಬಂದು ಬಿಡುತ್ತಿತ್ತು! ಪದವಿಯಲ್ಲಿದ್ದಾಗಲು ಬಹಳ ಸಂಕೋಚದಿಂದಲೇ ನಗರದ ಗೆಳೆಯರೊಂದಿಗೆ ಬೆರೆಯುತ್ತಿದ್ದ ನಾವೊಂದಿಷ್ಟು ಹಳ್ಳಿಯ ಕಡೆಯ ಹುಡುಗರಿಗೆ ಮೂರು ರೂಪಾಯಿಯೂ ಬಹಳ ದೊಡ್ಡ ಮೊತ್ತವಾಗಿತ್ತು. ಅಂದು ನಮ್ಮ ತುಮಕೂರಿನ ಗೆಳೆಯರಲೊಬ್ಬ ನಾವಿನ್ನೇನು ಉಪ್ಪಾರಹಳ್ಳಿ ರೈಲ್ವೇ ಗೇಟನ್ನು ದಾಟಿ, ಎಡಕ್ಕೆ ಚಲಿಸಿ ಶೆಟ್ಟಿಹಳ್ಳಿಯ ಕಡೆಗೆ ಹೋಗುವಾಗ ಅಲ್ಲಿದ್ದ ಒಂದು ದೊಡ್ಡ ಹಳೆಯ ಕಟ್ಟಡವನ್ನು ತೋರಿಸಿ ಇದು ಕುಮಾರ ಇರೋ ಚನ್ನಂಜಪ್ಪ ಹಾಸ್ಟೆಲ್ ಎಂದು ಹೇಳಿದ್ದ. ಅದು ಗುಬ್ಬಿಯ ಬಳಿಯ ಸುಗ್ಗನಪಾಳ್ಯ ಎಂಬ ಹಳ್ಳಿಯಿಂದ ಬಂದರೂ ಶ್ರಮದಿಂದ ಓದಿ ಗುಬ್ಬಿಯ ಪಿ.ಯು.ಕಾಲೇಜಿನಲ್ಲಿ ಸೈನ್ಸ್ ನಲ್ಲಿ ಪಾಸಗಿ ನಮ್ಮ ಕಾಲೇಜಿನಲ್ಲೇ ರಸಾಯನ ಶಾಸ್ತ್ರವನ್ನು ಐಚ್ಚಿಕವಾಗಿ ಪದವಿಯಲ್ಲಿ ಓದುತ್ತಿದ್ದ ಪ್ರತಿಭಾವಂತ ಗೆಳೆಯ ಕುಮಾರನದಾಗಿತ್ತು. ಗಣಿತ ಮತ್ತು ಭೌತಶಾಸ್ತ್ರದ ತರಗತಿಗಳಲ್ಲಿ ನಮ್ಮ ಜೊತೆಯೇ ಇರುತ್ತಿದ್ದ ಅವನು ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ರಸಾಯನ ಶಾಸ್ತ್ರದ ತರಗತಿಗಳಿಗೆ ಮಾತ್ರ ನಮ್ಮಿಂದ ದೂರವಾಗುತ್ತಿದ್ದ. ರಸಾಯನವನ್ನು ಮಾತ್ರ ಇಷ್ಟಪಡುವ ನಮಗೆ ಇವನು ಅದರ ಶಾಸ್ತ್ರವನ್ನೂ ಇಷ್ಟಪಡುತ್ತಿದುದು ಅಚ್ಚರಿಯ ಸಂಗತಿಯಾಗಿತ್ತು. ಅವನು ಬಿಡುವಾದ ವೇಳೆಯಲ್ಲಿ ಸಿಕ್ಕಾಗ, ಹೇಗಿದೆಯಮ್ಮ ನಿಮ್ಮ ಹಾಸ್ಟೆಲ್ ಎಂದು ಕೇಳಿದರೆ, ಪರವಾಗಿಲ್ಲ ಕಣಮ್ಮಾ, ಆಗಾಗ ಅನ್ನದಲ್ಲಿ ಕಲ್ಲು, ಸಾರಿನಲ್ಲಿ ಹುಳ ಸಿಗುತ್ತಿರುತ್ತೆ. ಏನ್ಮಾಡದಪ್ಪ ನಂಗೆ ಹಳ್ಳಿಯಿಂದ ಓಡಾಡಿಕೊಂಡು ಓದೋಕೆ ಆಗಲ್ಲ ಅಂತಾ ತನ್ನ ಬೇಸರವನ್ನು ಹೇಳಿಕೊಳ್ಳುತ್ತಿದ್ದ.

ನಂತರ ಅಷ್ಟಾಗಿ ಉಪ್ಪಾರಹಳ್ಳಿಯ ರೈಲ್ವೆ ಗೇಟಿನ ಕಡೆ ಬರದ ನಾನು ಕಳೆದ ಐದು ವರ್ಷಗಳ ಹಿಂದೆ, ಕೆಲಸದ ಸಲುವಾಗಿ ತುಮಕೂರಿನ ಶಾಂತಿನಗರದಲ್ಲಿ ಮನೆ ಮಾಡಿಕೊಂಡಾಗ, ಉಪ್ಪಾರಹಳ್ಳಿಯ ಪಕ್ಕದಲ್ಲೇ ಇದ್ದ ಶಾಂತಿನಗರಕ್ಕೂ ಮತ್ತು ಎಸ್.ಎಸ್.ಪುರಂನಲ್ಲಿದ್ದ ನಮ್ಮ ಬ್ಯಾಂಕಿಗೂ ಮಧ್ಯೆ ಒಂದು ಸೇತುವೆಯಂತೆ ಈ ರೈಲ್ವೇ ಗೇಟ್ ಕಾರ್ಯನಿರ್ವಹಿಸತೊಡಗಿತು. ಆಗಿನ್ನೂ ನನ್ನ ಬಳಿ ಟೂ ವೀಲರ್ ಇರಲಿಲ್ಲವಾದ್ದರಿಂದ ಹಲವು ಬಾರಿ ರೈಲ್ವೇ ಸ್ಟೇಷನ್ ಪಕ್ಕಕ್ಕೇ ಇದ್ದ ಗೂಡ್ ಶೇಡ್ ಕಾಲೋನಿಯ ಸಂದಿಯ ಮೂಲಕ ರೈಲ್ವೇ ಹಳಿಗಳನ್ನು ದಾಟಿ ಬ್ಯಾಂಕಿಗೂ ಮನೆಗೂ ಓಡಾಡುತ್ತಿದ್ದರಿಂದ ಅಷ್ಟಾಗಿ ಉಪ್ಪಾರಹಳ್ಳಿಯ ರೈಲ್ವೇಗೇಟಿನ ಮುಖಾಂತರ ಓಡಾಡುವ ಪ್ರಸಂಗವೂ ಬರುತ್ತಿರಲಿಲ್ಲ. ತಿಂಗಳಿಗೊಮ್ಮೆ ಆಟೋದಲ್ಲಿ ರೇಷನ್ ತೆಗೆದುಕೊಂಡು ಮನೆಗೆ ಹೋಗುವಾಗಲೋ, ಅಥವಾ ಯಾರಾದರೂ ನಮ್ಮ ಏರಿಯಾದಲ್ಲಿದ್ದ ಸಹೋದ್ಯೋಗಿ ಮಿತ್ರರು ಡ್ರಾಪ್ ನೀಡುತ್ತೇನೆಂದು ಹೇಳಿದಾಗ ಮಾತ್ರ ಉಪ್ಪಾರಹಳ್ಳಿಯ ರೈಲ್ವೇಗೇಟನ್ನು ದಾಟಿ ಹೋಗುವ ಪ್ರಸಂಗ ಬರುತ್ತಿತ್ತು. ಆಗೆಲ್ಲಾ ಒಂದೇ ಟ್ರಾಕ್ ಇದ್ದುದರಿಂದ ಮತ್ತು ಅಪರೂಪಕ್ಕೊಮ್ಮೆ ಆ ದಾರಿಯಲ್ಲಿ ಓಡಾಡುತ್ತಿದ್ದುದರಿಂದಲೋ ಏನೋ ರೈಲ್ವೇಗೇಟಿನ ನಿಜ ಸ್ವರೂಪ ಅಷ್ಟಾಗಿ ನನ್ನ ಗಮನಕ್ಕೆ ಬಂದಿರಲಿಲ್ಲ. ಆಗಿನ್ನೂ ಡಬ್ಬಲ್ ಟ್ರ್ಯಾಕ್ ಹಾಕುವ ಕಾರ್ಯ ಪ್ರಗತಿಯಲ್ಲಿತ್ತು. ಮತ್ತು ಶೀಘ್ರದಲ್ಲೇ ಮೇಲ್ಸೆತುವೆ ಕಾರ್ಯ ಶುರುವಾಗುವುದೆಂದು ಸುದ್ದಿಯಾಗುತ್ತಿತ್ತು.

ಒಮ್ಮೊಮ್ಮೆ ಬ್ಯಾಂಕಿನಲ್ಲಿ ತಡವಾಗಿ ತುಂಬಾ ಕತ್ತಲಾದಾಗ ನಮ್ಮ ಮನೆಯ ಹತ್ತಿರವೇ ಇದ್ದ ಸಹೋದ್ಯೋಗಿ ಮಿತ್ರ ಚಿದುವಿನ ಜೊತೆ ರಾತ್ರಿಯಲ್ಲಿ ಅಷ್ಟು ಸುರಕ್ಷಿತವಲ್ಲದ ಹತ್ತಿರದ ಕಾಲುದಾರಿಯನ್ನು ಬಿಟ್ಟು ಉಪ್ಪಾರಹಳ್ಳಿಯ ರೈಲ್ವೇಗೇಟಿನ ಮುಖಾಂತರ ನಡೆದುಕೊಂಡೇ ಮನೆ ಸೇರುತ್ತಿದ್ದೆ. ಆಗ ಗೇಟ್ ಹಾಕಿದ್ದರೂ ನಮಗೇನು ತೊಂದರೆ ಇರುತ್ತಿರಲಿಲ್ಲ. ಗೇಟಿನ ಪಕ್ಕದಲ್ಲೇ ಇರುತ್ತಿದ್ದ ಜಾಗದಲ್ಲಿ ಹಳಿಗಳನ್ನು ದಾಟಿ ಮನೆ ಸೇರಿಕೊಂಡು ಬಿಡುತ್ತಿದ್ದವು. ಆಗೆಲ್ಲಾ ರೈಲ್ವೇಗೇಟಿನ ಮುಖಾಂತರ ಹಾದು ಹೋಗಲು ಕಾಯುತ್ತಿದ್ದ ವಾಹನಗಳ ಆತುರತೆ ನಮ್ಮ ನೋಟಕ್ಕಷ್ಟೇ ಸೀಮಿತವಾಗಿತ್ತು. ಮಾತಾಡಿಕೊಂಡೇ ಮನೆ ಸೇರುತ್ತಿದ್ದ ನಮ್ಮ ಮಾತುಗಳಲ್ಲಿ ಆ ಗೇಟಿನ ಆಸುಪಾಸಿನಲ್ಲಿ ನಡೆದ ಘಟನೆಗಳ ಬಗ್ಗೆಯೂ ನಮ್ಮ ಮಾತು ವಿಸ್ತರಿಸುತ್ತಿತ್ತು.

ಹಿಂದೊಮ್ಮೆ ಗೇಟಿನ ಬಳಿಯೇ ಇರುವ ಬಾರಿನಲ್ಲಿ ಕುಡಿದುಕೊಂಡು ಹೋಗುತ್ತಿದ್ದವನೊಬ್ಬ, ಜೊತೆಯಲ್ಲಿ ಹೋಗುತ್ತಿದ್ದ ದಂಪತಿಗಳನ್ನು ಚುಡಾಯಿಸಿ ಒದೆ ತಿಂದಿದ್ದ ಪ್ರಸಂಗ ಕೋರ್ಟ್ ಮೆಟ್ಟಿಲ್ಲನೇರಿ ಅದಕ್ಕೆ ನನ್ನ ಗೆಳೆಯರೂ ಸಾಕ್ಷಿಯಾದ ಘಟನೆ, ಮತ್ತು ಎತ್ತಿನ ಕೈಯಲ್ಲಿ ತಿವಿಸಿಕೊಂಡ ಉಪ್ಪರಾಹಳ್ಳಿಯವನೊಬ್ಬನನ್ನು ಆಟೋದಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ಗೇಟ್ ಹಾಕಿದ್ದರಿಂದ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದು ರೈಲ್ವೇಗೇಟಿನ ಬಳಿ ನಡೆದ ಪ್ರಮುಖ ಆವಾಂತರಗಳಾಗಿದ್ದವು. ಈ ಘಟನೆಗಳನ್ನು ಅವರು ಹೇಳುತ್ತಿದ್ದರೆ ಯಾರದರೂ ಗರ್ಭಿಣಿಯನ್ನು ಹೆರಿಗೆಗಾಗಿ ಕರೆದುಕೊಂಡು ಹೋಗುವ ಸಮಯಕ್ಕೆ ಸರಿಯಾಗಿ ಏನಾದರೂ ಗೇಟ್ ಹಾಕಿಬಿಟ್ಟಿದ್ದರೆ ಏನ್ಮಡ್ತಾರಪ್ಪ ಎಂದು ನಾನು ಚಿಂತಿಸುತ್ತಿದ್ದೆ.

ಮೂರುವರ್ಷಗಳ ಹಿಂದೆ ನಾನು ಹೊಂಡ ಆಕ್ಟೀವಾವನ್ನು ತೆಗೆದುಕೊಂಡ ದಿನದಿಂದ ಉಪಾರಹಳ್ಳಿಯ ರೈಲ್ವೇಗೇಟಿನ ನಿಜ ಮುಖದ ಪರಿಚಯವಾಗತೊಡಗಿತು. ಆ ಸಮಯಕ್ಕೆ ಅದಾಗಲೇ ತುಮಕೂರು ಬೆಂಗಳೂರಿನ ನಡುವೆ ಡಬ್ಬಲ್ ಟ್ರ್ಯಾಕಿನ ಕಾರ್ಯ ಮುಗಿದು, ಎರಡೂ ಟ್ರ್ಯಾಕ್ ಗಳಲ್ಲಿ ರೈಲುಗಳು ಓಡಾಡಲು ಶುರುವಾಗಿದ್ದವು. ಮೇಲ್ಸೆತುವೆ ಕಾಮಗಾರಿಯೂ ಶುರುವಾಗಿತ್ತು. ಅಂದಿನಿಂದ ಉಪ್ಪಾರಹಳ್ಳಿಯ ರೈಲ್ವೇ ಗೇಟನ್ನು ದಾಟುವ ಆತುರ ನನ್ನದಾಯಿತು.

ಬೆಳಿಗ್ಗೆ ಹತ್ತೂ ಕಾಲಿಗೆ ಬ್ಯಾಂಕಿಗೆ ಹೋಗಬೇಕು. ತರಾತುರಿಯಲ್ಲಿ ಸಿದ್ದವಾಗಿ ಇನ್ನೇನು ಮನೆಯಿಂದ ಹೊರಟೆ ಎನ್ನುವಷ್ಟರಲ್ಲಿ “ಢಣ್ ಢಣ್” ಎಂದು ಗಂಟೆಯ ಶಬ್ಢ ಕೇಳಿಸಿತೆಂದರೆ ಅದು ಮುಲಾಜಿಲ್ಲದೆ ಉಪ್ಪಾರಹಳ್ಳಿಯ ರೈಲ್ವೇ ಗೇಟ್‍ನದ್ದೆ! ಅಲ್ಲಿಗೆ ಸರಿಯಾದ ಟೈಮಿಗೆ ಬ್ಯಾಂಕಿಗೆ ಇವತ್ತಾದರೂ ಹೋಗುತ್ತೇನೆಂಬುದು ಕನಸಾಗಿಬಿಟ್ಟಿರುತ್ತದೆ. ರೈಲ್ವೇ ಗೇಟ್ ತಲುಪುವಷ್ಟರಲ್ಲಿ ಸ್ಕೂಲಿಗೆ, ಆಫೀಸಿಗೆ, ಮತ್ತ್ಯಾವುದೋ ಕೆಲಸಕ್ಕೆ ಹೊರಟವರ ವಾಹನಗಳ ಸಂತೆಯೇ ರೈಲ್ವೇ ಗೇಟಿನ ಬಳಿ ಸೇರಿರುತ್ತದೆ. ನಮ್ಮ ಪುಣ್ಯಕ್ಕೆ ಒಂದೇ ರೈಲು ಬಂದಿತೆಂದರೆ ಓಕೆ. ಬಚಾವ್! ಇಲ್ಲಾ, ಆ ಕಡೆಯಿಂದ ಒಂದು, ಈ ಕಡೆಯಿಂದ ಒಂದು, ಅದೂ ಇಲ್ಲ ಒಂದು ಉದ್ದನೆಯ ಗೂಡ್ಸ್ ಬಂತೆಂದರೆ ಮುಗಿಯಿತು. ಇನ್ನು ಮೇಲೆ ಏನಾದರೂ ಮಾಡಿ ಒಂದೈದು ನಿಮಿಷ ಬೇಗ ಮನೆ ಬಿಡಬೇಕು ಎಂಬ ದಿನನಿತ್ಯದ ರೆಸಲ್ಯೂಷನ್ ನವೀಕರಣಗೊಂಡಿರುತ್ತದೆ.

ಅಂತೂ ಇಂತೂ ರೈಲು ಬಂತು ಎಂಬಂತಾಗಿ ಗೇಟ್ ತೆಗೆದರೆಂದರೆ, ನಾಮುಂದು ತಾಮುಂದು ಎಂದು ತಮ್ಮ ತಮ್ಮ ವಾಹನಗಳನ್ನು ನುಗ್ಗಿಸಿಕೊಂಡು ಎಲ್ಲರಿಗಿಂತ ಮುಂದಾಗಿ ರೈಲ್ವೇ ಗೇಟನ್ನು ದಾಟಿಬಿಡುವ ಪ್ರಯತ್ನದಲ್ಲಿ ಎಲ್ಲರೂ ಮುಳುಗಿಬಿಡುತ್ತಾರೆ. ಈ ಪ್ರಕ್ರಿಯೆ ಗೇಟಿನ ಎರಡೂ ತುದಿಗಳಿಂದ ನಡೆಯುವುದರಿಂದ ಎರಡೂ ಕಡೆಯವರಿಗೂ ಘನಘೋರ ಯುದ್ಧ ಶುರುವಾಗುವಂತೆ ತೋರುತ್ತಿರುತ್ತದೆ. ಯಾರು ದಾಟಿದರೆಷ್ಟು, ಬಿಟ್ಟರೆಷ್ಟು ನಾನಂತೂ ದಾಟಿಬಿಡಬೇಕೆನ್ನುವ ಎಲ್ಲರ ಮನೋಭಾವ ನಾನೊಬ್ಬ ಬದುಕಿದರೆ ಸಾಕೆಂಬಂತಿರುತ್ತದೆ. ಇವೆಲ್ಲದಕ್ಕೂ ಹಿಮ್ಮೆಳವೆಂಬಂತೆ ಕಿವಿಗಡಚಿಕ್ಕುವ ಹಾರನ್‍ಗಳು ಮೊಳಗಿರುತ್ತವೆ.

ಬೆಳಿಗ್ಗೆ ಬ್ಯಾಂಕಿಗೆ ಹೋಗುವಾಗ ಒಂದು ಕಥೆಯಾದರೆ, ಮಧ್ಯಾಹ್ನ ಊಟಕ್ಕೇನಾದರೂ ಮನೆಗೆ ಹೋಗೋಣವೆಂದುಕೊಂಡು ಬಂದರೆ ಆವಾಗ ರೈಲ್ವೇಗೇಟ್ ಹಾಕಿದ್ದರೆ ಹೊಟ್ಟೆಹಸಿವಿನ ಕಥೆ ಶುರುವಾಗುವುದು ಮತ್ತೊಂದು ಕಥೆ. ಮತ್ತೆ ಊಟ ಮುಗಿಸಿ ಹೋಗುವಾಗ ಸರಿಯಾದ ಸಮಯಕ್ಕೆ ಬೆಂಗಳೂರಿನಿಂದ ತುಮಕೂರಿಗೆ ಬರುವ ಪುಶ್ ಪುಲ್ ತಪ್ಪದೆ ಬರುತ್ತದೆ. ಅದು ದಿನನಿತ್ಯದ ಕಥೆ.

ಇತ್ತ ಸಂಜೆ ಏನಾದರೂ ಹೆಂಡತಿ “ರೀ ಬೇಗ ಮನೇಗ್ ಬನ್ನಿ” ಎಂದು ಹೇಳಿದ್ದರೆ, ನನಗೇ ಹೇಳಿದ್ದೇನೋ ಎಂಬಂತೆ ಯಾವುದಾದರೂ ರೈಲು ಬಂದೇ ಬರುತ್ತದೆ. ತಡವಾಗಿ ಮನೆಗೆ ಹೋದಾಗ ಹೆಂಡತಿಯ ರುದ್ರ ದರ್ಶನವೂ ಆಗುತ್ತದೆ. ಮತ್ತಿನ್ಯಾವಾಗಲಾದರೂ ಎಲ್ಲಾದರೂ ಹೊರಗಡೆ ಹೋಗಬೇಕೆಂದು ಕೊಂಡು ಸಿಟಿಗೆ ಹೊರಟ್ಟಿದ್ದರೆ ಯಾವುದಾದರೂ ರೈಲಿನ ದರ್ಶನ ಪಡೆದೇ ಹೋಗಬೇಕು.

ಅಲ್ಲಿಗೆ ಈ ದಿನಚರಿ ದಿನದ ಇಪ್ಪತ್ತನಾಲ್ಕು ಘಂಟೆ, ವಾರದ ಏಳೂ ದಿನ, ತಿಂಗಳ ನಾಲ್ಕೂ ವಾರಗಳು, ವರ್ಷದ ಮುನ್ನೂರ ಅರವತ್ತೈದು ದಿನಗಳು ಚಾಚೂ ತಪ್ಪದೆ ನಡೆಯುತ್ತದೆ. ಬೇಕೆಂದರೆ 24 x 7 ಎಂದುಕೊಳ್ಳಿ. ಆದುದರಿಂದ ಇದುವರೆವಿಗೂ ಇಲ್ಲಿ ನನಗಾದ ವಿಶೇಷ ಅನುಭವಗಳನ್ನು ಮಾತ್ರ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಒಮ್ಮೊಮ್ಮೆ ರೈಲ್ವೇಗೇಟ್ ಹಾಕಿದ ಸಮಯಕ್ಕೆ ಸರಿಯಾಗಿ ನಾನೂ ಹೋಗಿ ಗೇಟಿನ ಮುಂಭಾಗದಲ್ಲಿ ಮೊದಲನೆಯವನಾಗಿ ಸಿಕ್ಕಿಕೊಂಡು ನಿಂತ ಅನುಭವಗಳು ಹಲವಾರಿವೆ. ಒಂದು ದಿನ ಇದೇ ರೀತಿ ನಿಂತು ಕೊಂಡಿದ್ದಾಗ ನನ್ನಂತೆಯೇ ಎದುರಿನಿಂದ ಬಂದ ಆನೆಯಾಕಾರದ ಸೀಮೆ ಹಸುವೊಂದು ತನ್ನ ದಾರಿಗೆ ಅಡ್ಡಾಲಾಗಿ ಬಂದ ಗೇಟನ್ನು ಗುದ್ದಿ ತನಗೇನೋ ಅರಿವಾದಂತೆ ಮುಗ್ಧವಾಗಿ ನಿಂತುಬಿಟ್ಟಿತ್ತು. ಅಯ್ಯೋ ನನ್ನ ಕ್ಯಾಮರವನ್ನು ತಂದಿದ್ದರೆ ಒಂದು ಅತ್ಯುತ್ತಮ ಚಿತ್ರ ದಾಖಲಾಗುತ್ತಿತ್ತಲ್ಲ ಎಂದು ಮರುಗಿಕೊಂಡೆ. ಆದರೂ ಅದು ನನ್ನ ಸ್ಪೃತಿಪಟಲದಲ್ಲಿ ಶಾಶ್ವತವಾಗಿ ಅಚ್ಚಾಗಿದೆ. ಮತ್ತೊಂದು ಮರೆಯಲಾಗದ ಅನುಭವವೆಂದರೆ ಹೀಗೆಯೇ ಮತ್ತೊಮ್ಮೆ ಆದಾಗ ನನ್ನ ಜೇಬಿನಲ್ಲಿದ್ದ ಕೆ. ಗಣೇಶ್ ಕೋಡೂರ್ ರವರ “ಒನ್ ಮಿನಿಟ್ ಸಕ್ಸಸ್” ಎಂಬ ಪುಟ್ಟ ಪುಸ್ತಕವನ್ನು ತೆಗೆದುಕೊಂಡು ಬಹಳಷ್ಟು ಭಾಗವನ್ನು ಅಲ್ಲಿಯೇ ಓದಿಬಿಟ್ಟಿದ್ದೆ. ನಂತರ ರೈಲು ಬಂದಾಗ ತಲೆಯೆತ್ತಿ ನೋಡಿದರೆ ನನ್ನ ಪಕ್ಕದಲ್ಲಿದ್ದವನು ನನ್ನ ಕಡೆಗೆ ನೋಡಿ ನಗುತ್ತಿದ್ದ!

ಇತ್ತೀಚಿಗಷ್ಟೇ ನಡೆದ ಘಟನೆಯೆಂದರೆ, ನಾನು ಮತ್ತು ನನ್ನ ಗೆಳಯರೊಬ್ಬರು ಮಧ್ಯಾಹ್ನದ ಊಟ ಮುಗಿಸಿ ಬ್ಯಾಂಕಿಗೆ ಹಿಂತಿರುಗುವ ಸಮಯಕ್ಕೆ ಸರಿಯಾಗಿ ಪುಶ್-ಪುಲ್ ರೈಲು ಬರುವ ಸಮಯವಾದ್ದರಿಂದ ಗೇಟ್ ಹಾಕಿಬಿಟ್ಟಿತ್ತು. ಆಗ ಅಲ್ಲಿ ಎಲ್ಲರಿಗಿಂತಲೂ ಮೊದಲು ನಿಂತದ್ದು ಒಂದು ದೊಡ್ಡ ಬುಲ್ಡೋಜಾರ್! ಅದರ ಹಿಂಭಾಗದ ಚಕ್ರಗಳು ಟೈರಿನದಾಗಿದ್ದು ಇವುಗಳು ಪಂಕ್ಚರಾದರೆ ಏನುಮಾಡುತ್ತಾರೆ ಎಂಬ ಪ್ರಶ್ನೆ ನನ್ನ ತಲೆಯಲ್ಲಿ ಕೊರೆಯಲಾರಂಭಿಸಿತು. ಇದೇ ಪ್ರಶ್ನೆಯನ್ನು ನಂತರ ನನ್ನ ಗೆಳೆಯರಿಗೆ ಕೇಳಲಾಗಿ, ಅವರು ಅದೇ ಪ್ರಶ್ನೆ ತಮಗೂ ಕಾಡುತ್ತಿತ್ತು ಎಂಬಂದು ತಮಾಷೆಯಾಗಿ, ನಂತರ ಗೆಳಯರೊಬ್ಬರಲ್ಲಿ ವಿಚಾರಿಸಿ ಆ ಟೈರುಗಳಿಗೆ ಪಂಕ್ಚರ್ ಹಾಕುವ ಪ್ರಮಯವೇ ಬರುವುದಿಲ್ಲವೆಂಬ ವಿಷಯ ತಿಳಿದು ನಮ್ಮ ಸಾಮಾನ್ಯ ಜ್ಞಾನವೂ ಹೆಚ್ಚಿತು.

ಈ ರೀತಿಯ ಹಲವು ಪ್ರಸಂಗಗಳಿಗೆ ಕಳಶವಿಟ್ಟಂತೆ ನಡೆದ ಘಟನೆಯೆಂದರೆ: ಒಂದು ಸುಂದರ ಸಂಜೆ ನಾನು ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ ರೈಲ್ವೇಗೇಟ್ ಹಾಕಲಾಗಿ ಅದಾಗಲೇ ಹಲವಾರು ವಾಹನಗಳು ಜಮಾಯಿಸಿ ಬಹಳ ಹೊತ್ತಾಗಿತ್ತು. ನಾನು ಸ್ವಲ್ಪ ದೂರದಲ್ಲೇ ನನ್ನ ಆಕ್ಟಿವಾವನ್ನು ನಿಲ್ಲಿಸಿ ಅದರ ಮೇಲಿಂದಲೇ ಸುತ್ತಮುತ್ತಲಿನ ಚಟುವಟಿಕೆಗಳನ್ನು ತನ್ಮಯನಾಗಿ ನೋಡುತ್ತಾ ಕುಳಿತಿದ್ದೆ. ಅಲ್ಲಿ ವಾಹನಗಳ ಜಾತ್ರೆಯೇ ಸೇರಿದ್ದರೂ, ಎಲ್ಲಾ ಸಮಯಕ್ಕಿಂತಲೂ ಸಂಜೆ ಹೊತ್ತಿನಲ್ಲಿ ಸ್ವಲ್ಪ ಸಮಾಧಾನದಿಂದ ಇರುವಂತೆ ಜನ ಕಾಣುತ್ತಿದ್ದರು. ಒಂದು ರೈಲು ಬಂತು, ಹೋಯ್ತು. ಇನ್ನೇನು ಗೇಟ್ ತೆಗೆಯುತ್ತಾರೆ ಎಂದು ಎಲ್ಲಾ ವಾಹನಗಳು ಸ್ಟಾರ್ಟ್ ಆದವು. ಹಾರನ್ ಮಾಡ ತೊಡಗಿದವು. ಆದರೆ, ಬಹಳ ಹೊತ್ತಾದರೂ ಗೇಟ್ ತೆಗೆಯಲೇ ಇಲ್ಲ. ಅಲ್ಲಿಗೆ ಇನ್ನೊಂದು ರೈಲು ಬರುವುದು ಖಚಿತವಾಯಿತು. ಆದುದರಿಂದ ಎಲ್ಲಾ ವಾಹನಗಳು ಆಫ್ ಆದವು. ಕ್ಷಣದಲ್ಲೇ ಅಲ್ಲೆಲ್ಲಾ ಸ್ಮಶಾನ ಮೌನ ಆವರಿಸಿತು. ನನ್ನ ಗಮನ ಅಲ್ಲಿದ್ದ ಬಿಳಿ ಅಂಬಾಸಿಡರ್ ಕಾರಿನ ಕಡೆ ಹರಿಯಿತು. ಮೈ ತೊಳೆದ ಎತ್ತಿನಂತೆ ಆ ಕಾರು ನಿಂತಿತ್ತು. ಅದರ ಹಿಂಭಾಗದಲ್ಲಿ “ಅಲ್ಲಮ” ಎಂದು ಬರೆದಿತ್ತು. ಯಾರೋ ಕವಿಮಹಾಶಯನೇ ಇರಬೇಕು ಎಂದು ಕೊಂಡೆ. ನಂತರ ನನ್ನ ಗಮನ ಸ್ಕೂಟಿ ಮೇಲಿದ್ದ ಒಬ್ಬಳು ಹುಡುಗಿಯ ಕಡೆಗೆ ಹರಿಯಿತು. ಬರಬೇಕಾಗಿದ್ದ ಬಾಯ್ ಫ್ರೆಂಡ್ ಎಷ್ಟು ಹೊತ್ತಾದರೂ ಬರಲಿಲ್ಲವೆನೋ ಎಂದು ಆಕೆ ಚಡಪಡಿಸಿದಂತೆ ಕಾಣುತ್ತಿತ್ತು. ಗೇಟ್ ತೆಗೆಯದಿದ್ದರೆ ಹಾರಿಸಿಕೊಂಡು ಹೋಗುವಂತೆ ಆ ಕಡೆ, ಈ ಕಡೆ, ಯಾವ ಕಡೆ ರೈಲು ಬರ್ತಿದೆ ಎಂದು ನೋಡುತ್ತಾ ತವಕಿಸುತ್ತಿದ್ದಳು. ಒಂದೇ ರೈಲಿಗೆ ಸುಸ್ತಾಗಿದ್ದ ಜನ ಮತ್ತೊಂದು ರೈಲು ಬರುವುದು ಖಚಿತವಾದಂತೆ ತಮ್ಮ ತಮ್ಮ ಗಾಡಿಗಳ ಮೇಲೆ ಧ್ಯಾನಸ್ಥರಾದರು. ಕೆಲವರು ತೂಕಡಿಸಲಿರಲಿಕ್ಕೂ ಸಾಕು! ಅದಾಗ ಉಂಟಾದ ಮೌನದ ವಾತಾವರಣ ನನಗೆಕೋ ಹೆಚ್ಚು ಆಪ್ತವಾಯಿತು. ಆ ಜಾಗದಲ್ಲೇ ಹಲವು ವರುಷಗಳಿಂದ ಜೀವಿಸುತ್ತಿದ್ದಿವೇನೋ ಎಂಬ ಭಾವ ಮನದಲ್ಲಿ ಇಣುಕಿತು. ಆಗ “ಕುಹೂ... ಕುಹೂ...” ಎಂಬ ಕೋಗಿಲೆಯೆ ಹಾಡು ಉಪ್ಪಾರಹಳ್ಳಿಯ ಕಡೆಯಿಂದ ತೇಲಿಬಂದು ನನ್ನನ್ನು ಮೂಕವಿಸ್ಮಿತನಾಗಿಸಿತು. ಅದನ್ನು ಉಪ್ಪಾರಹಳ್ಳಿಗೆ ಹೊಂದಿಕೊಂಡಂತೆಯೇ ಇದ್ದ ಶಾಂತಿನಗರದ ನಮ್ಮ ಮನೆಯಿಂದಲೇ ಬಂದ ನನ್ನ ಹೆಂಡತಿಯ ಕರೆ ಎಂದು ನಾನು ಭಾವಿಸಿದೆ ಮತ್ತು ಮುಗುಮ್ಮಾಗಿ ನಕ್ಕೆ.

ಆ ಕ್ಷಣ ಮೈಮರೆತಿದ್ದವನಿಗೆ ರೈಲು ಬರುವ ಎಲ್ಲಾ ಸೂಚನೆಗೆಳು ಸಿಕ್ಕಿ ರೈಲು ಬಂದೇ ಬಿಟ್ಟಿತು. ಅಲ್ಲಿಯವರೆವಿಗೂ ತಪೋನಿರತರಾಗಿದ್ದ, ತೂಕಡಿಸುತ್ತಿದ್ದ ಎಲ್ಲಾ ವಾಹನ ಸವಾರರುಗಳು ತಮ್ಮ ತಮ್ಮ ವಾಹನವನ್ನು ಸ್ಟಾರ್ಟ್ ಮಾಡಿಕೊಂಡು ದಿನನಿತ್ಯದ ಯುದ್ಧಕ್ಕೆ ಸಜ್ಜಾದರು. ಗೇಟ್ ತೆಗೆಯುತ್ತಿದ್ದಂತೆ ಮಿಂಚಿನಂತೆ ಸ್ಕೂಟಿ ಮೇಲಿದ್ದ ಹುಡುಗಿ ಮಾಯವಾದಳು. “ಅಲ್ಲಮ” ಅಂಬಾಸಿಡರ್ ಕಾರ್ ಮುಂದೆ ಹೋಗಿ ಯಾಕೋ ಹಿಮ್ಮುಖವಾಗಿ ನಿಧಾನವಾಗಿ ಚಲಿಸತೊಡಗಿತು. ಅದಕ್ಕೆ ಗೇಟಿನ ಬಳಿ ಇದ್ದ ಏರನ್ನು ಏರಲಾಗಿರಲಿಲ್ಲ. ಚಕ್ಕನೆ ಬ್ರೇಕ್ ಹಾಕಿ ನಿಂತ ಕಾರಿನಿಂದ ಇಳಿದವರನ್ನು ನೋಡಿದೆ. ಹೌದು. ಅವರು ನಾನು ಭಾವಿಸಿದಂತೆ ಕವಿಯೇ ಆಗಿದ್ದರು. ಅವರು ಕಾರನ್ನು ಮುಂದೆ ಚಲಿಸಲು ಅನುವಾಗುವಂತೆ ಡ್ರೈವರನಿಗೆ ಕೆಲವು ಸೂಚನೆಗಳನ್ನು ಕೊಟ್ಟರು. ಕಾರು ಸ್ವಲ್ಪ ಮುಂದೆ ಹೋದ ಮೇಲೆ ಮತ್ತೆ ಹತ್ತಿ ಕುಳಿತರು. “ಅಲ್ಲಮ” ಮುಂದೆ ಚಲಿಸಿತು. ಆವಾಗ ಹಿಂದೊಮ್ಮೆ ಬಸ್ಸೊಂದು ಹಿಮ್ಮುಖವಾಗಿ ಚಲಿಸಿ ಅದರ ಹಿಂಭಾಗದಲ್ಲಿ ಆಟೋವೊಂದು ಸಿಲುಕಿ ನುಜ್ಜುಗುಜ್ಜಾಗಿದ್ದು ನೆನಪಿಗೆ ಬಂದಿತು. ಸದ್ಯ ಅಂತದ್ದೇನೂ ಸಂಭವಿಸಲಿಲ್ಲ. ನಂತರ ಎಲ್ಲಾ ವಾಹನಗಳು ಹೋಗಿಬಿಡಲಿ ಎಂದು ಕ್ಷಣಕಾಲ ಕಾದು ನಿಂತ ನಾನು ಗೇಟ್ ದಾಟಿ ಮನೆಗೆ ಹೋದೆ. ಅಂದಿನಿಂದ ಇಂದಿನವರೆವಿಗೂ ಉಪ್ಪಾರಹಳ್ಳಿಯ ರೈಲ್ವೇ ಗೇಟಿನ ಕುಹೂ ಕುಹೂ ನನ್ನೆದೆಯಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ.

ಇತ್ತೀಚಿನ ದಿನಗಳಲ್ಲಿ ನನ್ನ ಮಗಳನ್ನು ಎಸ್.ಎಸ್.ಪುರಂನಲ್ಲಿರುವ ಪ್ಲೇಹೋಮಿಗೆ ಬಿಡಲು ಹೋಗುವಾಗ, ಸಂಜೆ ವಾಪಸ್ಸು ಕರೆತರುವಾಗ ರೈಲ್ವೇ ಗೇಟ್ ಹಾಕಿಬಿಟ್ಟರೆ ನನ್ನ ಮಗಳಿಗೆ ರೈಲು ತೋರಿಸುವಾಗ ಅವಳು ಮೊದಲೆಲ್ಲಾ ಅದಕ್ಕೆ ಹೆದರಿಕೊಳ್ಳುತ್ತಿದ್ದುದು, ಇದೀಗ “ಅಪ್ಪಾ ರೈಲು...ರೈಲು...” ಎಂದು ಒಂದೇ ಸಮನೆ ಕೂಗುವುದು ನನ್ನ ಜೀವನದ ಮಧುರ ಅನುಭವಗಳಲ್ಲೊಂದಾಗಿದೆ.

ರೈಲ್ವೇಗೇಟ್‍ನಲ್ಲಿ ಅಪರೂಪಕ್ಕೊಮ್ಮೆ ಸಿಗುವ ಗೆಳೆಯರು, ಅಚಾನಕ್ಕಾಗಿ ಸಿಕ್ಕ ನಮ್ಮ ಏಳನೇ ಕ್ಲಾಸಿನ ಇಂಗ್ಲೀಷ್ ಮೇಡಮ್ಮು. ಅಲ್ಲಿ ನಡೆಯುವ ಘಟನೆಗಳು, ಬಡವರ ಬಂಧುವಂತಿದ್ದ ಚನ್ನಂಜಪ್ಪ ಹಾಸ್ಟೆಲ್ ಮೇಲ್ಸೆತುವೆಯ ಕೃಪಾಕಟಾಕ್ಷದಿಂದ ಅವಸಾನದ ಅಂಚಿನಲ್ಲಿ ಅನೈತಿಕ ಚಟುವಟಿಕೆಗಳ ತಾಣವಾದದ್ದು, ಅಲ್ಲಿನ ಮತ್ತೆ ಮತ್ತೆ ನೆನಪಾಗುವ ಕುಮಾರ ಹೇಳಿದ್ದ ಕಲ್ಲಿನ ಅನ್ನ, ಹುಳದ ಸಾರು, ಎಂದೆಂದೂ ಮರೆಯಲಾಗದ ಸಂಜೆಯ ಕುಹೂ... ಕುಹೂ... ಮತ್ತಷ್ಟು ಮೊಗದಷ್ಟು ಉಪ್ಪಾರಹಳ್ಳಿಯ ರೈಲ್ವೇಗೇಟ್ ನೆನಪುಗಳು ನುಗ್ಗಿ ನುಗ್ಗಿ ಬಂದು ಮನಸ್ಸಿನಲ್ಲಿ ಸುಗ್ಗಿಯಾಗುತ್ತಿದ್ದರೂ, ಐದು ವರುಷಗಳಾದರೂ ಮುಗಿಯದ ಮೇಲ್ಸೆತುವೆ ಯಾವುದೋ ಯುದ್ಧಕ್ಕೆ ನಲುಗಿದಂತೆ ಕಂಡು ಮನಸ್ಸು ಬೇಸರದಿಂದ ಕೂಡುತ್ತದೆ. ನಮ್ಮ ಪ್ರೀತಿಯ ರಾಷ್ಟ್ರಪತಿಯಾಗಿದ್ದ ಡಾ ಎ.ಪಿ.ಜೆ. ಅಬ್ದುಲ್ ಕಲಾಂರವರ ಕನಸು “ವಿಶನ್ 2020” ನನಸಾಗುವ ಹೊತ್ತಿಗಾದರೂ ಮೇಲ್ಸೆತುವೆ ಕಾರ್ಯ ಮುಗಿದು ಓಡಾಟಕ್ಕೆ ತೆರವಾದರೆ, ಸೇತುವೆ ಮೇಲಿನಿಂದ ಒಂದು ರೈಲಿನ ಚಿತ್ರವನ್ನು ತೆಗೆಯಬೇಕೆಂಬ ನನ್ನ ಕನಸೂ ಸಫಲವಾದೀತು.

                                                                                                                         - ಗುಬ್ಬಚ್ಚಿ ಸತೀಶ್.





ಬುಧವಾರ, ಏಪ್ರಿಲ್ 11, 2012

ಬರ್ಮಾದ ಬುದ್ಧ


ಈಕೆಯನ್ನು ನೋಡಿದಾಗಲೆಲ್ಲಾ
ನೆನಪಾಗುವುದು ನನಗೆ, ಬಹುಷಃ ನಿಮಗೂ
ನಮ್ಮ ಮಹಾತ್ಮ ಗಾಂಧಿ, ಇಲ್ಲವೇ ನೆಲ್ಸನ್ ಮಂಡೇಲಾ
ಆಕೆಯೇ ನೊಬೆಲ್ ಶಾಂತಿ ಪುರಸ್ಕೃತೆ
“ಬರ್ಮಾದ ಬೆಳಕು”
ಆಂಗ್ ಸಾನ್ ಸೂಕಿ

ವಿರೋಧಿಗಳ ಸಂಚಿಗೆ ಬಲಿಯಾದ
ರಾಷ್ಟ್ರನಾಯಕನ ಮಗಳೀಕೆ
ತಂದೆಯ ಪಡಿಯಚ್ಚು
ಅಪ್ಪನ ದೇಶಪ್ರೇಮದ ಜೊತೆಜೊತೆಗೆ
ಸ್ವಸಾಮರ್ಥ್ಯದ ಬುದ್ಧಿವಂತೆ
ಗೆಳೆಯರ, ಹಿತೈಷಿಗಳ ಅಕ್ಕರೆಯ “ಸೂ”

ಗೃಹವಿದ್ದರೂ ಬಂಧನ
ಅಮ್ಮ, ಗಂಡ, ಮಕ್ಕಳ ಅಗಲಿಕೆಗೆ,
ತನ್ನ ಹತ್ಯೆಯ ಪ್ರಯತ್ನಗಳಿಗೆ
ಧೃತಿಗೆಡದ ಕೃಶಾಂಗಿ
“ದೇಶ ನನಗಲ್ಲ, ನಾನು ದೇಶಕ್ಕಾಗಿ”
ಎಂದ ಸ್ವಾತಂತ್ರ್ಯದ ಸಂಕೇತ ಈ ದೇಶಭಕ್ತೆ

ಆ ಬುದ್ಧ, ಅದ್ಯಾವ ಘಳಿಗೆಯಲ್ಲಿ
ಇವಳ ಕಿವಿಯಲ್ಲಿ ಉಸಿರಿದನೋ
“ನೀನು ನಿನ್ನ ದೀಪವಾಗು” ಎಂದು
ಇವಳು ತಾನೇ ಉರಿದು
ಎಂದೆಂದಿಗೂ ಆರದ ದೀಪವಾದಳು
ಬರ್ಮಾದ ಬುದ್ಧನಾದಳು.

(ಆಂಗ್ ಸಾನ್ ಸೂಕಿಯವರ ನ್ಯಾಷನಲ್ ಲೀಗ್ ಫಾರ್ ಡೆಮಕ್ರಸಿ (ಎನ್ ಎಲ್ ಡಿ) ಪಕ್ಷ
ಬರ್ಮಾದ ಸಂಸತ್ತಿನಲ್ಲಿ ದಿಗ್ವಿಜಯ ಸಾಧಿಸಿದ ನೆನಪಿನಲ್ಲಿ ಸೂಕಿಯವರಿಗೆ ಅರ್ಪಣೆ)

                                                   - ಗುಬ್ಬಚ್ಚಿ ಸತೀಶ್.

ಶುಕ್ರವಾರ, ಮಾರ್ಚ್ 23, 2012

ನಂದನ ಯುಗಾದಿ

ಬಂದಿದೆ ಯುಗಾದಿ
ನಂದದ ಯುಗಾದಿ
ಚಂದನ ಯುಗಾದಿ
ಸಂಭ್ರಮದ ಈ ನಂದನ ಯುಗಾದಿ

ಶತಮಾನಗಳ ಯುಗಾದಿ
ದಶಕದ ಪ್ರೀತಿಯ ಯುಗಾದಿ
ಕಳೆದೈದು ವಸಂತಗಳ ಯುಗಾದಿ
ನಲ್ಲನಲ್ಲೆಯರ ಬಂಧನದ ಯುಗಾದಿ

ಸರಸ-ವಿರಸದ ಯುಗಾದಿ
ಬೇವು-ಬೆಲ್ಲದ ಯುಗಾದಿ
ಹಾವು-ಏಣಿಯಾಟದ ಯುಗಾದಿ
ಗುಬ್ಬಚ್ಚಿಗಳ ಗೂಡಿನಲ್ಲೊಂದು ಚಿಲಿಪಿಲಿ ಯುಗಾದಿ

ಬಂದಿದೆ ಯುಗಾದಿ
ನಂದದ ಯುಗಾದಿ
ಚಂದನ ಯುಗಾದಿ
ಸಂಭ್ರಮದ ಈ ನಂದನ ಯುಗಾದಿ

                        - ಗುಬ್ಬಚ್ಚಿ ಸತೀಶ್.

ಭಾನುವಾರ, ಫೆಬ್ರವರಿ 19, 2012

ಗಂಧರ್ವರಲ್ಲ, ಬುದ್ಧರಲ್ಲ, ಜೀವನಕ್ಕೆ ಬದ್ಧರಾದವರು.


ಖ್ಯಾತ ಚಲನಚಿತ್ರ ಸಾಹಿತಿ, ಕವಿರಾಜರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ “ಭಾವಸಿಂಚನ” orkut ಕವಿತೆಗಳ ಸಂಕಲನ ಒಂದು ನವೀನ ಭಾವದ ಸಿಂಚನವಾಗಿದೆ. ಗೂಗಲ್ ನ ಆಕುರ್ಟ್ ಮೂಲಕ ಗೆಳೆಯರಾದ ಅನೇಕರ ಆಯ್ದ ಕವನಗಳ ಸಂಕಲನ ಇದಾಗಿದೆ. ಸಂಕಲನದ ಮೊದಲ ಕವಿತೆಯಾದ “ವಿನಿಮಯ...” ಕವನವು ನಾನಿರುವೆ ನಮ್ಮೂರಲ್ಲಿ / ನೀನೆಲ್ಲೋ ಪರದೇಶದಲ್ಲಿ / ಸುಡುವ ಬೆಳದಿಂಗಳ ಇರುಳು / ಬಿಗಿದು ಬಂದಿದೆ ಕೊರಳು / ಚಂದಿರನ ನೋಡೋಣವೇ / ಒಂದೇ ಸಮಯದಲ್ಲಿ ಇನಿಯ / ನಡೆಯಲಿ ಮುಗುಳುನಗೆಯ ವಿನಿಮಯ...” ಎಂದು ಆರಂಭಗೊಂಡು ನಂತರ ಮತ್ತಿಬ್ಬರು ಕವಿಗಳು ಅದನ್ನು ಚೆಂದವಾಗಿ ಮುಂದುವರಿಸಿದ್ದಾರೆ. ಕವನದ ಈ ಮೊದಲ ಸಾಲುಗಳೇ ಈ ಆಕುರ್ಟ್ ಸಮುದಾಯವನ್ನು ಪ್ರತಿಬಿಂಬಿಸುತ್ತಿವೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಅಂತರ್ಜಾಲದ ಮೂಲಕ ಗೆಳೆಯರಾಗಿರುವ ಇವರ ನೋವನ್ನು ಮತ್ತು ನಲಿವನ್ನು ಹೇಳುತ್ತಿವೆ.

ಪ್ರೀತಿಪ್ರೇಮದ ಕವನಗಳೇ ಹೆಚ್ಚಾಗಿರುವ ಸಂಕಲನದಲ್ಲಿ ಅಮ್ಮನ ಬಗ್ಗೆಯೂ ಕವನವಿದೆ. ಕನ್ನಡಮ್ಮನ ಕುರಿತೂ ಕವನಗಳಿವೆ. ಅರುಣ್ ಕುಮಾರ್ ರವರ ಚಂದ್ರಸಾಕ್ಷಿ ಕವನವು ಪ್ರೇಮಿಗಳ ನೋವಿಗೆ, ಸಾಂತ್ವನಕ್ಕೆ ಚಂದ್ರನನ್ನು ಸಾಕ್ಷಿಯಾಗಿಸಿದ್ದರೆ, ಅರುಣ್ ಕುಮಾರ್ ಕೆ.ಕೆ. ಯವರ ಕವನ “ನೀರಿನಲ್ಲಿ ಅಲೆಯ ಉಂಗುರ” ಇದೇ ಹೆಸರಿನ ಜನಪ್ರಿಯ ಚಿತ್ರಗೀತೆಯ ಪ್ರಭಾವದಿಂದ ಬರೆದಿದ್ದಾಗಿದೆ. “ನಾನಿನ್ನು ಕವನ ಬರೆಯೋಲ್ಲ...” ಎನ್ನುವ ಮಹೇಶ್ ಮೂರ್ತಿಯವರ ಕವನವು ಮುನ್ನುಡಿಯಲ್ಲಿ ಕವಿರಾಜರು ಹೇಳಿರುವಂತೆ ಬಹುತೇಕ ಕವಿತೆಗಳ ದ್ವಂದ್ವವನ್ನು ಪ್ರತಿನಿಧಿಸುತ್ತಾ ಲಘುಧಾಟಿಯಲ್ಲಿ ಭಗ್ನ ಪ್ರೇಮದ ಸಮಾಧಿ ಕೆದಕಿ ವಿಷಾದ ಉಕ್ಕಿಸುತ್ತದೆ. ಸ್ವಲ್ಪ ಗದ್ಯದಂತೆಯೇ ಭಾಸವಾಗುವ ವೆಂಕಟೇಶ್ ಹೆಗಡೆಯವರ “ನನ್ನ ಪ್ರೀತಿಯ ಹುಡುಗಿ” ಕವನದ ಕೊನೆಯ ಸಾಲುಗಳು “ಕವಿತೆ ಹುಟ್ಟುವುದು ಪ್ರೀತಿ ಮೊಳೆಯುವುದು / ಒಂದೇ ಜಾಗದಲ್ಲಿ ಎದೆಯ ಗೂಡಿನ ಮೌನದಲ್ಲಿ” ಎಂಬ ಅದ್ಬುತವಾದ ಸಾಲುಗಳಿಂದ ಇಷ್ಟವಾಗುತ್ತದೆ. ಪ್ರದೀಪ್ ರಾವ್ ರವರ ಅನೇಕ ಪ್ರೇಮ ಕವನಗಳಲ್ಲಿ “ನದಿ-ದಡ” ತನ್ನ ನವಿರುತನದಿಂದ ಗಮನ ಸೆಳೆಯುತ್ತದೆ. ದಡವನ್ನು ಬಿಟ್ಟು ಹರಿದು ಹೋದ ನದಿ, ಮೋಡವಾಗಿ, ಮಳೆಯಾಗಿ ಮತ್ತೆ ದಡಕ್ಕೆ ಬರುವ ಕವನದ ಆಶಯ, ತೊರೆದು ಹೋದ ಗೆಳತಿ ಮತ್ತೆ ಬರುತ್ತಾಳೆ ಎಂಬ ಆಶಾವಾದದಿಂದ ಆಪ್ತವಾಗುತ್ತದೆ. ಚೇತನ್ ಕುಮಾರ್ ರವರ “ಮಳೆಗೊಂದು ಕೊಡೆ ತೊಡಿಸಿ” ಪ್ರೀತಿಯ ತುಂಟಾಟವನ್ನು ಹೇಳಿದರೆ, ಕೊನೆಯಲ್ಲಿ ಬರುವ ಸಿಂಧುರವರ ಕವನಗಳು ಸ್ವಗತದ ಧಾಟಿಯಲ್ಲಿದ್ದು, ಪ್ರೀತಿಯ ಸಾರ್ಥಕತೆಯನ್ನು ಹೇಳಲು ಪ್ರಯತ್ನಿಸಿವೆ. ಪ್ರೀತಿ ಕೊಡುವ ಸಾಂತ್ವನವೂ ಇವುಗಳಲ್ಲಿವೆ, ಜೊತೆಗೆ ಸೋತಾಗ ಸ್ವಾನ್ವೇಷಣೆಗೂ ಹೊರಡುತ್ತಾರೆ.

ಸಂಕಲನದಲ್ಲಿ ಬರಿ ಪ್ರೀತಿಪ್ರೇಮಕ್ಕಷ್ಟೇ ಸೀಮಿತವಾಗದೆ ಸಮಕಾಲೀನ ಘಟನೆಗಳಿಗೆ ಸ್ಪಂದಿಸಿರುವ ಅನೇಕ ಕವಿತೆಗಳಿವೆ. ಮತ್ತು ಅವುಗಳಲ್ಲಿ ಕೆಲವು ಯುಗಪುರುಷನ ನೀರಿಕ್ಷೆಯಲ್ಲಿವೆ. ಭರತ್ ಆರ್ ಭಟ್ ರ ಕವನ “ಅವತಾರ!” ಕವನವಂತೂ ಎಲ್ಲಾ ಬಗೆಯ ಮಾನವರನ್ನೂ ತರಾಟೆಗೆ ತೆಗೆದುಕೊಂಡಿದೆ. ಸ್ವಾಮೀಜಿಗಳನ್ನೂ ಬಿಟ್ಟಿಲ್ಲವೆಂಬುದಕ್ಕೆ ಈ ಕವನದ “ಸ್ವಾಮಿಗಳ ಮನಸಿನಲ್ಲೂ / ಮಾಸಿದ ಮಾತುಗಳಿವೆ” ಎಂಬ ಸಾಲುಗಳು ಕವನದ ತೀವ್ರತೆಯನ್ನು ಹೆಚ್ಚಿಸಿವೆ. ಇದೇ ಕವನದ “ಇರುವವರೆಲ್ಲ ದುಷ್ಟರಾದರೂ / ಕಾಲವೇ ಕೆಟ್ಟದೆಂದು ದೂರಲಾಗಿದೆ” ಎಂಬ ಸಾಲುಗಳು ಇಂದಿನ ಮನುಷ್ಯನ ದುರ್ಬುದ್ಧಿಯನ್ನು ಎತ್ತಿ ಹಿಡಿದು, ದುಷ್ಟಸಂಹಾರಕ್ಕೆ ಯುಗಪುರುಷನು ಬರಲಿ ಎಂದು ಧೇನಿಸುತ್ತಿವೆ. ಪ್ರದೀಪ್ ರಾವ್ ರವರ “ಒಬಾಮಾಯಣ” ಪುರಾಣವನ್ನು ವರ್ತಮಾನಕ್ಕೆ ಸಮೀಕರಿಸುವ ಪ್ರಯತ್ನದಲ್ಲಿ ಸಫಲವಾಗಿದೆ. ಇಲ್ಲಿ ಒಸಮಾಸುರನ ಸಂಹಾರಕ್ಕೆ ಒಬಾಮ ರಾಮನಾಗಿದ್ದಾನೆ. “ತ್ರೇತಾಯುಗದಲ್ಲಿ ಸೀತಾಪಹರಣ / ಕಲಿಯುಗವಿನ್ನೂ ಕೀಳು / ವಿಮಾನದ್ದೇ ಅಪಹರಣ / ಸಂಭವಾಮಿ ಯುಗೇ ಯುಗೇ” ಎನ್ನುವ ಸಾಲುಗಳೊಂದಿಗೆ ಗಮನಸೆಳೆಯುವುದರ ಮೂಲಕ ಯುಗಪುರಷನ ಧ್ಯಾನದಲ್ಲಿದೆ. ಮಾನವನ ಜೀವನ ನಶ್ವರ ಎಂದು ಹೇಳುವ ವೆಂಕಟೇಶ್ ಹೆಗಡೆಯವರ “ಬುಗುರಿ” ಕವನವು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದಲ್ಲಿರುವ “ತಿರು ತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು...” ಎನ್ನುವ ಸಾಲುಗಳನ್ನು ನೆನಪಿಸುವುದರ ಮೂಲಕ ಇಂದು ಮನುಷ್ಯ ಹಣ ಅಂತಸ್ತು ಎಂದು ಸಾಯುತ್ತಾನೆ ಎಂದು ಹೇಳುತ್ತವೆ. ಈ ಸಂತಾನವು ಮುಂದುವರೆಯುವುದನ್ನೂ ಅವರು ಕವನದಲ್ಲಿ ಸೂಚಿಸಿದ್ದಾರೆ.

ಇಲ್ಲಿನ ಕೆಲವು ಕವನಗಳು ಬಾಲ್ಯದ ನೆನಪುಗಳನ್ನು ಬಿಚ್ಚಿಡುವುದರ ಮೂಲಕ ಓದುಗರನ್ನು ಬೆಚ್ಚಗಾಗಿಸುತ್ತವೆ. “ಪುಟ್ಟ” ಎಂಬ ಅರುಣ್ ಕುಮಾರ್ ಕೆ.ಕೆ.ಯವರ ಕವನ ಜೆ.ಪಿ.ರಾಜರತ್ನಂರವರ ರತ್ನನ ಪದಗಳ ಧಾಟಿಯಲ್ಲಿ ಕಳೆದುಹೋದ ಬಾಲ್ಯದ ಹುಡುಕಾಟದಲ್ಲಿದ್ದರೆ, ಕವನದ ಹೊಸಸಾಧ್ಯತೆಗಳನ್ನು ತೆರೆದಿಟ್ಟಿರುವ ಅನುಪಮಾ ಹೆಗಡೆಯವರ “ಜಾಣ ಕುರುಡು” ಕವನವು ಬಾಲ್ಯವನ್ನು ಕನ್ನಡದಲ್ಲಿ ಹೇಳಿ, ನಂತರದ ಯೌವ್ವನದ ಉದ್ಯೋಗದ ದಿನಗಳನ್ನು ಇಂಗ್ಲೀಷ್ ಬೆರೆತ ಕನ್ನಡದಲ್ಲಿ ಹೇಳುವ ಮೂಲಕ ಇಂಗ್ಲೀಷ್ ನ ಅರಿವಿಲ್ಲದ ಬಾಲ್ಯ ಮತ್ತು ಇಂಗ್ಲೀಷ್ ಅನಿವಾರ್ಯವಾದ ದಿನಗಳನ್ನು ಸೊಗಸಾಗಿ ಬಿಚ್ಚಿಟ್ಟು ಓದುಗನನ್ನು ಬೆರಗಾಗಿಸುತ್ತಾರೆ. ಇಲ್ಲಿ ಎಸಿ ರೂಮಿನಲ್ಲಿ ಕಾಫೀ ಕುಡಿದರೂ ಆಯಿಯ “ಚಾ” ಕಾಡುತ್ತದೆ. ಜಾತಿಮತಗಳನ್ನು ಮರೆತು ಬೆರೆತ ಬಾಲ್ಯವನ್ನು ನೆನೆಯುವ ಅಶೋಕ್ ವಿ ಶೆಟ್ಟಿ” ಜಾತಿಮತ ಭೇದವಿಲ್ಲದ ಬಾಲ್ಯ ಚಂದವೆನ್ನುತ್ತಾರೆ.

ಈ ಕವನ ಸಂಕಲನಕ್ಕೆ ಗರಿಯಿಟ್ಟಂತೆ ಮಂಜುನಾಥ ಕೊಳ್ಳೆಗಾಲರವರ ಕವನಗಳಿವೆ. ಅಲ್ಲಲ್ಲಿ ರೂಪಾರವರ ಕವನಗಳು, ಅನುಪಮ ಹೆಗಡೆಯವರ ಕವನಗಳು ಮಿನುಗಿದ್ದು, ಈ ಮೂವರೇ ಸಂಕಲನದ ಆಯ್ಕೆಗಾರರಾಗಿರುವುದರಿಂದ (ನಾನಿನ್ನೂ ಕವನ ಕಟ್ಟುವಿಕೆಯ ವಿದ್ಯಾರ್ಥಿಯಾಗಿರುವುದರಿಂದ) ಇವರುಗಳ ಕವನಗಳ ಬಗ್ಗೆ ಏನನ್ನೂ ಹೇಳಲು ಹೋಗಿಲ್ಲ. ಅರ್ಥಪೂರ್ಣವಾದ ಮುನ್ನುಡಿಯೊಂದಿಗಿರುವ “ಭಾವಸಿಂಚನ”ವು ತಮ್ಮ ಮೊದಲ ಮಾತುಗಳಲ್ಲಿ ಅನುಪಮಾ ಹೆಗಡೆಯವರು ಹೇಳಿರುವಂತೆ ಶಾಲಾ ವಾರ್ಷಿಕೋತ್ಸವದಲ್ಲಿ ಎಲ್.ಕೆ.ಜಿ ಮಕ್ಕಳಿಂದ ಹಿಡಿದು ೧೦ನೇ ತರಗತಿಯ ಮಕ್ಕಳವರೆಗೆ ಎಲ್ಲರ ಕಾರ್ಯಕ್ರಮಗಳೂ ಇರುವಂತೆ ಇಲ್ಲಿನ ಕವನಗಳೂ ಇದ್ದು ಮನತಣಿಸುತ್ತವೆ. ದಯಮಾಡಿ ಮೂವರು ಆಯ್ಕೆಗಾರರೂ ಪಾಸಾದ ಹೈಸ್ಕೂಲ್ ವಿದ್ಯಾರ್ಥಿಗಳು ಮತ್ತೆ ಮರಳಿ ತಮ್ಮ ಶಾಲೆಯ ಹೊಸ ವಿದ್ಯಾರ್ಥಿಗಳೊಂದಿಗೆ ಬೆರೆತು ಮಾರ್ಗದರ್ಶಕರಾಗಿದ್ದಾರೆ ಎಂದು ಭಾವಿಸಲಿ!

ರೂಪರವರು ಬೆನ್ನುಡಿಯಲ್ಲಿ ಹೇಳಿರುವಂತೆ ಜಾತ್ಯಾತೀತವಾಗಿ ಬೆಳೆದ “3k” ಅಂತರ್ಜಾಲ ಸಮುದಾಯ ತನ್ಮೂಲಕ ಮತ್ತಷ್ಟು ಪ್ರತಿಭೆಗಳನ್ನು ಬೆಳಕಿಗೆ ತರಲಿ, ನಿಮ್ಮೆಲ್ಲರ ಆಶಯ: “ಈ ಸಮುದಾಯ ಕನ್ನಡ ಪ್ರಿಯರಿಗೆ ಒಂದು ವೇದಿಕೆಯಾಗಲಿ” ಎಂಬುದು ಮತ್ತು ನಿಮ್ಮೆಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸುವ ಮೂಲಕ, ಪುಸ್ತಕ ಕಳುಹಿಸಿದ ಗೆಳೆಯ ಪ್ರದೀಪ್ ಗೆ ಧನ್ಯವಾದಗಳನ್ನು ಹೇಳುತ್ತಾ ಮತ್ತು ಈ ಕವನ ಸಂಕಲನದಲ್ಲಿ ನನಗೆ ಮೆಚ್ಚುಗೆಯಾದ ಭರತ್ ಆರ್. ಭಟ್ ರ ಕವನದ ಸಾಲುಗಳಾದ, “ಗಂಧರ್ವರಾಗಬೇಕಿಲ್ಲ.../ ಬುದ್ಧರಾಗಬೇಕಿಲ್ಲ / ಗಾಂಚಾಲಿಯ ಬಿಟ್ಟು / ಜೀವನಕ್ಕೆ ಬದ್ಧರಾಗಿರೋಣ” ಉಲ್ಲೇಖಿಸುತ್ತಾ ನನ್ನ ಅಭಿಪ್ರಾಯ (ದಯಮಾಡಿ ವಿಮರ್ಶೆಯೆನ್ನಬೇಡಿ) ಕ್ಕೊಂದು ಚುಕ್ಕಿಯಿಡುತ್ತೇನೆ.

ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.



ಹೇಗಿದೆ “ಯುವ?” ಸಖತ್‌ “ಪವರ್‌”ಪುಲ್‌ ಶಿವ!

ಪ್ರಿಯ ಸ್ನೇಹಿತರೇ, ಬೆಳಿಗ್ಗೆ ಐದಕ್ಕೇ ಅಲಾರಂ ಇಟ್ಟುಕೊಂಡು, ನೆನ್ನೆಯೇ ಇಂದಿನ ಬೆಳಗಿನ 9.30ರ ಶೋಗೆ ಬುಕ್‌ ಮಾಡಿದ್ದ “ಯುವ” ಸಿನಿಮಾಗೆ ಹೋಗಿ ಬಂದೆ. ತುಮಕೂರಿನ ಐನೋಕ್...