ಗುರುವಾರ, ಅಕ್ಟೋಬರ್ 27, 2011

ಟ್ಯೂಷನ್ ಫೀಸು (ಒಂದು ಕಥೆ)

ಅಂದು ಅಮರಗೊಂಡದ ಮಧ್ಯದಲ್ಲಿದ್ದ ದೇಶಾವರಪೇಟೆಯ ದೀಪು ಮನೆಯಲ್ಲಿ ಸಂಭ್ರಮವೋ ಸಂಭ್ರಮ! ಮಗ ಏಳನೇ ತರಗತಿಯಲ್ಲಿ ಶಾಲೆಗೇ ಎರಡನೆಯವನಾಗಿ ಪಾಸಾಗಿದ್ದಾನೆ ಎಂದು ಜಯಣ್ಣ ಬೀಗುತ್ತಿದ್ದರೆ, ಅಮ್ಮ ಮಂಜುಳಳಿಗೆ ಕೂತ ಕಡೆ ಕೂಡಲಾಗುತ್ತಿಲ್ಲ. “ನಮ್ಮನೇಲಿ ಯಾರೂ ಇಷ್ಟೊಂದು ಚೆನ್ನಾಗಿ ಓದಿರಲಿಲ್ಲ” ಎಂದು ಒಬ್ಬರಿಗೊಬ್ಬರು ಹೇಳಿಕೊಂಡು ಇಬ್ಬರೂ ಮಹದಾನಂದದಲ್ಲಿ ತೇಲುತ್ತಿದ್ದರು. ಅವರಿಬ್ಬರೂ ಅದಾಗಲೇ ಬೀದಿಯಲ್ಲೆಲ್ಲಾ ಮಗನ ಗುಣಗಾನ ಮಾಡಿ ಮನೆಗೆ ಬಂದು ವರಾಂಡದಲ್ಲಿ ಕುಳಿತು ಒಬ್ಬರನೊಬ್ಬರ ಮುಖ ನೋಡಿ ಸುಮ್ಮಸುಮ್ಮನೆ ನಗುತ್ತಿದ್ದಾರೆ. ಮಧ್ಯದಲ್ಲಿ “ಅವನು ನನ್ನ ಮಗ, ನನ್ನ ಮಗ” ಎಂದು ಹುಸಿ ಜಗಳವಾಡುತ್ತಿದ್ದಾರೆ.

ಆಗ ಇದ್ದಕ್ಕಿದ್ದಂತೆ ಏನೋ ಕಳೆದು ಕೊಂಡುವಳಂತೆ ವರಾಂಡದಲ್ಲೆಲ್ಲಾ ಕಣ್ಣಾಡಿಸಿದ ಮಂಜುಳ, “ದೀಪು ಎಲ್ರಿ ಕಾಣ್ತಿಲ್ಲಾ?” ಎಂದಳು. “ಯಾರೋ ಸ್ನೇಹಿತನ ಮನೆಗೆ ಹೋಗಿರ್ಬೇಕು, ಬರ್ತಾನೆ ಬಿಡೇ” ಎಂದ ಜಯಣ್ಣ ಮುಂದುವರಿಯುತ್ತಾ “ನಾವು ಆಚೆ ಹೋದಾಗ ಅವನು ಮನೆಯಲ್ಲೇ ಇದ್ದ, ಅಲ್ವಾ!?” ಎಂದು ಆಶ್ಚರ್ಯಭರಿತನಾಗಿ ಹೇಳುತ್ತಾ “ದೀಪು, ದೀಪು” ಎನ್ನುತ್ತಾ ಮನೆ ಒಳಗಡೆ ಹುಡುಕಲಾರಂಭಿಸಿದ. ಅಡುಗೆಮನೆ, ಮಲಗುವ ಕೋಣೆ, ಬಚ್ಚಲು ಮನೆಯಲ್ಲೆಲ್ಲಾ ಹುಡುಕಿದ ಮೇಲೆ ಗಾಬರಿಯಿಂದ ಹಿತ್ತಲಿನ ಕಡೆ ನೋಡಲು, ಹಿಂದಿನ ಕದ ತೆಗೆದಿರುವುದನ್ನು ಗಮನಿಸಿ, ಹಿತ್ತಿಲನ ಕಡೆ ನಡೆದ. ಆ ಸಣ್ಣ ಹಿತ್ತಲಿನಲ್ಲಿ ದೀಪು ದಾಳಿಂಬೆ ಗಿಡದ ಬಳಿ ನಿಂತು ಅಳುತ್ತಿದ್ದಾನೆ. ಬಳಿಗೆ ಬಂದ ಜಯಣ್ಣ ಮಗನನ್ನು ಸಂತೈಸುತ್ತಾ, “ಯಾಕೋ ಮಗಾ ಅಳ್ತಾ ಇದ್ಯಾ?” ಎಂದು ಕೇಳಲು, “ಅಪ್ಪಾ..., ಅಪ್ಪಾ...” ಎಂದು ದೀಪು ತೊದಲಿದನು. “ಯಾಕೋ ಮಗಾ ಏನಾಯ್ತು ಹೇಳಪ್ಪ, ಶಾಲೆಗೆ ಮೊದಲನೆಯವನ್ನಾಗಲಿಲ್ಲ ಅಂತಾ ಬೇಜಾರ? ಇಲ್ಲಾ...ನಾನಿನ್ನೂ ಸ್ವೀಟ್ಸ್ ತಂದು ಕೊಟ್ಟಿಲ್ಲಾ ಅಂತಾ ಸಿಟ್ಟಾ? ಹೇಳು ಕಂದಾ” ಎಂದನು. ಮಾತಾಡಲು ತಡವರಿಸುತ್ತಾ ದೀಪು “ಅಪ್ಪಾ, ನಾನು...ನಾನು...ಹೈಸ್ಕೂಲಿಗೆ ಹೊಗ್ಬೇಕು, ಚೆನ್ನಾಗಿ ಓದ್ಬೇಕು. ಆದರೆ, ನಮ್ಮನೆಲೀ ತುಂಬಾ ಬಡತನ ಇದೆ. ಅದಕ್ಕೆ ಓದೋಕೆ ಆಗುತ್ತೋ ಇಲ್ವಾ ಅಂತ...” ಬಿಕ್ಕಳಿಸುತ್ತಿದ್ದ ಮಗನನ್ನು ತಡೆದ ಜಯಣ್ಣ, “ಅಯ್ಯೋ ಅದಕ್ಯಾಕೆ ಅಷ್ಟೊಂದು ಯೋಚನೆ ಮಾಡ್ತಾ ಅಳ್ತೀದ್ದೀ. ಅದೆನಾದ್ರು ಆಗ್ಲಿ ನಾನು ನಿನ್ನ ಕಷ್ಟ ಪಟ್ಟು ಓದಿಸ್ತೀನಿ. ನೀ ಚೆನ್ನಾಗ್ ಓದು ಮಗಾ” ಎಂದು ಸಂತೈಸಲು ಖುಷಿಗೊಂಡ ದೀಪು ಕಣ್ಣೀರು ಒರೆಸಿಕೊಳ್ಳುತ್ತಾ ಅಪ್ಪನನ್ನು ಅಪ್ಪಿಕೊಂಡನು.

ಅಮರಗೊಂಡದ ಬಸ್ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನವನ್ನು ಕಷ್ಟದಿಂದ ನಿಭಾಯಿಸುತ್ತಿದ್ದ ಜಯಣ್ಣನಿಗೆ ಅಪ್ಪ ಬಿಟ್ಟುಹೋದ ಮನೆಯೊಂದನ್ನು ಬಿಟ್ಟು ಬೇರೆಯೇನೂ ಇರಲಿಲ್ಲ. ಒಂದು ಒಳ್ಳೆಯ ದಿನ ನೋಡಿ ಹೇಗೋ ಹಣ ಹೊಂದಿಸಿಕೊಂಡು ಮಗನನ್ನು ಹೈಸ್ಕೂಲಿಗೆ ಸೇರಿಸಲು ದೀಪುವನ್ನು ಕರೆದುಕೊಂಡು ಹೈಸ್ಕೂಲಿಗೆ ಬಂದನು. ಜಯಣ್ಣನಿಗೆ ಆ ಶಾಲೆಯ ವಿಜ್ಜಾನದ ಶಿಕ್ಷಕರಾದ ನಾರಾಯಣಪ್ಪನವರು ಪರಿಚಯವಿದ್ದದರಿಂದ ಸೀದಾ ಅವರಿದ್ದ ಕೋಣೆಯನ್ನು ಕೇಳಿಕೊಂಡು ಅವರ ಬಳಿ ಹೋಗಿ ತನ್ನ ಪರಿಚಯವನ್ನು ಹೇಳಿಕೊಂಡು ತಾನು ಬಂದ ಕಾರಣವನ್ನು ನೀವೆದಿಸಿಕೊಂಡನು. ಶಿಸ್ತಿನ ಸಿಪಾಯಿಯಂತೆ ಕಾಣುತ್ತಿದ್ದ ಮಾಸ್ತರರನ್ನು ನೋಡಿ ದೀಪುವಿಗೆ ಸಣ್ಣ ನಡುಕವುಂಟಾದರೂ, ಧೈರ್ಯ ತಂದುಕೊಂಡು, “ನಮಸ್ಕಾರ ಸಾರ್” ಎಂದ. “ನಮಸ್ಕಾರ ಕಣಪ್ಪ, ಏನ್ ನಿನ್ನ ಹೆಸರು”? ಗಂಭೀರದಿಂದ ಮೇಷ್ಟರು ಕೇಳಿದರು. ಮೇಷ್ಟ್ರೇ ನಮಸ್ಕಾರ ಅಂತಾ ಇದ್ದಾರಲ್ಲ....? ಒಳ್ಳೆ ಮೇಷ್ಟ್ರಿರಬೇಕು ಎಂದು ಕೊಳ್ಳುತ್ತಾ, “ದೀಪಕ್ ಜೆ. ಸಾರ್” ಎಂದು ವಿನಯದಿಂದ ನುಡಿದ.

ಹೀಗೇ ವಿಚಾರಿಸುತ್ತಾ ಎಲ್ಲಾ ಕಾಲಂಗಳನು ಭರ್ತಿಮಾಡಿಕೊಂಡ ಮಾಸ್ತರರು, “ನೀ ಕನ್ನಡ ಮೀಡಿಯಂನಲ್ಲೇ ಓದಿರೋದ್ರಿಂದ ಎಂಟನೇ ತರಗತಿಗೂ ಕನ್ನಡ ಮೀಡಿಯಂ ಇರ್ಲಿ ಅಂತಾ ಅದನ್ನೇ ಟಿಕ್ ಮಾಡ್ತೀನಿ” ಅಂದ್ರು. ತಕ್ಷಣವೇ ದೀಪು “ಬೇಡ ಸರ್. ನನ್ನ ಫ್ರೇಂಡ್ಸೆಲ್ಲಾ ಇಂಗ್ಲೀಷ್ ಮೀಡಿಯಂ ಸೇರ್ತಿವಿ ಅಂತಾ ಹೇಳಿದ್ದಾರೆ. ನಂಗೂ ಇಂಗ್ಲೀಷ್ ಮೀಡಿಯಂ ಕೊಡಿ” ಎಂದು ವಿನಂತಿಸಿದ. ದೀಪುವನ್ನು ನೋಡಿದ ಮಾಸ್ತರರು ಮೀಸೆ ಮರೆಯಲ್ಲೇ ನಕ್ಕು, “ಆಯ್ತಪ್ಪಾ, ಆದರೆ ತುಂಬಾ ಕಷ್ಟ ಆಗುತ್ತೆ. ಚೆನ್ನಾಗಿ ಓದ್ಬೇಕು ಅಷ್ಟೆ” ಎಂದು ತುಸು ಜೋರಾಗಿಯೇ ಹೇಳಿದರು. “ಆಯ್ತು ಸರ್. ತುಂಬಾ ಥ್ಯಾಂಕ್ಸ್” ಎಂದು ಅವರ ಕಾಲಿಗೆ ನಮಸ್ಕರಿಸಿದ. ನಯವಾಗಿಯೇ ಬೇಡವೆಂದ ಮಾಸ್ತರರು ಹುಡುಗನ ವೇಗಕ್ಕೆ ತಕ್ಷಣ ಪ್ರತಿಕ್ರಿಯಿಸಿ ಅವನ ಕ್ರಿಯೆಯನ್ನು ತಡೆಯಲಾಗಲಿಲ್ಲ. ತನ್ನ ಮಗನ ಧೈರ್ಯವನ್ನು ಮೌನವಾಗಿ ಗಮನಿಸುತ್ತಿದ್ದ ಜಯಣ್ಣ, ಮೇಷ್ಟರಿಗೆ ವಂದಿಸಿ ಅಲ್ಲಿಂದ ಮಗನೊಡನೆ ಹೊರಟ.

ಶಾಲೆ ಆರಂಭವಾಯಿತು. ಮೊದಲ ವಾರದಲ್ಲೇ ದೀಪುವಿಗೆ ಇಂಗ್ಲೀಷ್ ಮೀಡಿಯಂ ಕಭ್ಭಿಣದ ಕಡಲೆಯಾಗತೊಡಗಿತು. ಎಲ್ಲಾ ವಿಷಯಗಳನ್ನು ಇಂಗ್ಲೀಷಲ್ಲಿ ಪಾಠ ಮಾಡಿ ನಂತರ ಕನ್ನಡದಲ್ಲೂ ಅರ್ಥೈಸುತ್ತಿದುದ್ದರಿಂದ ಸ್ವಲ್ಪ ಸ್ವಲ್ಪ ಅರ್ಥವಾದರೂ ಇಂಗ್ಲೀಷು ಏನೇನೂ ಅರ್ಥವಾಗದಂತಾಯಿತು. ಇದಕ್ಕೆ ಕಾರಣ ಇಂಗ್ಲೀಷ್ ಮೇಷ್ಟ್ರಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಜೊತೆಗೆ ದೀಪು ಕನ್ನಡ ಮೀಡಿಯಂನಲ್ಲಿ ಓದಿದ್ದು. ಗಾಯದ ಮೇಲೆ ಬರೆ ಎಳೆದಂತಾಗಿತ್ತು.

ಇದ್ದುದರಲ್ಲೇ ವಿಜ್ಞಾನ ಬೋಧಿಸುತ್ತಿದ್ದ ನಾರಾಯಣಪ್ಪ ಮಾಸ್ತರರ ಪಾಠ ಅರ್ಥವಾಗುತಿತ್ತು ಎಂಬುದನ್ನು ಬಿಟ್ಟರೆ ಕನ್ನಡ ಮೀಡಿಯಂನಿಂದ ಬಂದ ವಿದ್ಯಾರ್ಥಿಗಳ ಗೋಳಿನ ಕಥೆ ಕೇಳುವವರು ಯಾರು ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಕನ್ನಡ ಮೀಡಿಯಂನಿಂದ ಬಂದ ಕೆಲವರು ಅವರವರಲ್ಲೇ ಮಾತಾಡಿಕೊಳ್ಳುತ್ತಿದ್ದಾಗ, ದೀಪುವಿನ ಗೆಳೆಯನೊಬ್ಬ “ನಾವೆಲ್ಲಾ ನಾರಾಯಣಪ್ಪ ಮಾಸ್ತರ ಮನೆಗೆ ಟ್ಯೂಷನ್‍ಗೆ ಹೋಗೋಣ. ಅವ್ರು ತುಂಬಾ ಚೆನ್ನಾಗಿ ಮನೆ ಪಾಠ ಮಾಡ್ತಾರಂತೆ. ವಿಜ್ಜಾನ, ಗಣಿತದ ಜೊತೆಗೆ, ಇಂಗ್ಲೀಷು ಮತ್ತು ಸಮಾಜವನ್ನು ಹೇಳಿ ಕೊಡ್ತಾರಂತೆ. ಇಂಗ್ಲೀಷಂತೂ ಎಂತವರಿಗೂ ಕಲಿಸ್ತಾರಂತೆ. ನಮ್ಮಕ್ಕ ಹೇಳ್ತಿದ್ರು” ಎಂದನು. ಕೇಳಿದ ಎಲ್ಲರಿಗೂ ಕಠಿಣವಾದ ಲೆಕ್ಕವೊಂದಕ್ಕೆ ಉತ್ತರ ದೊರೆತಂತಾಯಿತು. ಎಲ್ಲರೂ ಬಹಳ ಸಂತೋಷದಿಂದ ನಾಳೆಯಿಂದಲೇ ಟ್ಯೂಷನ್‍ಗೆ ಹೋಗೋಣ ಎಂದಾಗ ಇದಾಗಲೇ ಅಪ್ಪ ಹೈಸ್ಕೂಲಿಗೆ ಸೇರಿಸಿರುವುದೇ ತನ್ನ ಪುಣ್ಯ ಎಂದುಕೊಂಡಿದ್ದ ದೀಪುವಿಗೆ ಇದರ ಬಗ್ಗೆ ಅಪ್ಪನನ್ನು ಹೇಗೆ ಕೇಳುವುದು ಎಂದು ಯೋಚನೆಗೆ ಹತ್ತಿಕೊಂಡಿತು. “ಫೀಸ್ ಎಷ್ಟು ಕೊಡಬೇಕು” ತಡೆಯಲಾಗದೇ ಕೇಳಿಯೇಬಿಟ್ಟ. “ತಿಂಗಳಿಗೆ ನೂರು ರೂಪಾಯಿಗಳು” ಪ್ರಶ್ನೆಗೆ ಕಾಯುತ್ತಿದ್ದವನಂತೆ ಟ್ಯೂಷನ್ ಐಡಿಯಾ ಕೊಟ್ಟ ಗೆಳೆಯ ಹೇಳಿಯೇಬಿಟ್ಟ.

“ನೂರು ರೂಪಾಯಿಗಳು”! ದೀಪುವಿಗೆ ಮತ್ತೆ ಯೋಚನೆ ಕಾಡತೊಡಗಿತು. ಇದಾಗಲೇ ಅಪ್ಪ ಸಾಲ ಮಾಡಿ ಶಾಲೆಗೆ ಸೇರಿಸಿದ್ದಾಗಿದೆ. ಮತ್ತೆ ಹೇಗೆ ಕೇಳುವುದು. ತಿಂಗಳಿಗೆ ನೂರು ರೂಪಾಯಿಗಳು. ಏನು ಮಾಡುವುದು. ಟ್ಯೂಷನ್ನಿಗೆ ಹೋಗದಿದ್ದರೆ ಪಾಠ ಅರ್ಥವಾಗುವುದಿಲ್ಲ. ಅರ್ಥವಾಗದಿದ್ದರೆ ಫೇಲ್ ಆಗುತ್ತೇನೆ. ಬೇರೆ ದಾರಿಕಾಣದೆ ಅಪ್ಪನನ್ನೇ ಕೇಳೋಣವೆಂದು ಮನೆಯ ದಾರಿ ಹಿಡಿದನು.

ಮನೆಗೆ ಬಂದವನೇ, “ಅಪ್ಪಾ, ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಪಾಠ ಮಾಡುವುದು ಹೆಚ್ಚಾಗಿ ಇಂಗ್ಲೀಷ್ನಲ್ಲೆ. ಅಷ್ಟಾಗಿ ಅರ್ಥವಾಗುವುದಿಲ್ಲ. ಅದಕ್ಕೆ ಎಲ್ಲಾ ಹುಡುಗರು ನಾರಾಯಣಪ್ಪ ಸರ್ ಹತ್ತಿರ ಟ್ಯೂಷನ್ಗೆ ಸೇರಿಕೊಳ್ಳುತ್ತಿದ್ದಾರೆ. ನನ್ನನ್ನೂ ಸೇರಿಸಪ್ಪ. ಇಲ್ಲವಾದರೆ ತುಂಬಾ ಕಷ್ಟವಾಗುತ್ತದೆ” ಎಂದು ಪ್ರೀತಿಯಿಂದ ವಿನಂತಿಸಿದ. ಮುದ್ದಿನ ಮಗನ ವಿನಂತಿಯನ್ನು ಪ್ರೀತಿಯಿಂದ ಸಮ್ಮತಿಸಿದ ಜಯಣ್ಣ “ಆಯ್ತು ಮಗಾ, ಹೆಂಗೋ ನೀ ಚೆನ್ನಾಗಿ ಓದಿದರೆ ಅಷ್ಟೆ ಸಾಕು” ಎಂದವನ ಕಣ್ಣಲ್ಲಿ ನನ್ನ ಮಗ ಬಟ್ಟೆ ಬರೆ ಕೇಳದೆ ಓದಿಗೆ ಎಷ್ಟೆಲ್ಲಾ ಅಕ್ಕರೆ ತೋರಿಸುತ್ತಾನೆ ಎಂಬ ಭಾವ ಮಿಂಚಿ ಮಾಯವಾಯಿತು. ಕೂಲಿ ಕೆಲಸದಿಂದ ಆಗುತ್ತಿದ್ದ ಕಷ್ಟ, ಅವಮಾನಗಳು ಅವನಿಗೆ ಚೆನ್ನಾಗಿ ಗೊತ್ತಿತ್ತು. ಹಗಲು ರಾತ್ರಿ ದುಡಿದಾದರು ಸರಿ, ಮಗನನ್ನು ಚೆನ್ನಾಗಿ ಓದಿಸಬೇಕೆಂದು ಮನದಲ್ಲೇ ಪಣತೊಟ್ಟಿದ್ದ.

ಬೆಳಿಗ್ಗೆ ಆರರಿಂದ ಎಂಟರವರೆಗೆ ನಾರಾಯಣಪ್ಪರ ಟ್ಯೂಷನ್ ಶುರುವಾಯಿತು. ಒಂದು ದಿನವೂ ತಪ್ಪಿಸದೆ ಐದಕ್ಕೆಲ್ಲ ಎದ್ದು ಸರಿಯಾಗಿ ಆರಕ್ಕೆ ದೀಪು ಟ್ಯೂಷನ್ಗೆ ಹೋಗುತ್ತಿದ್ದ. ಅವನ ಶಿಸ್ತನ್ನು ಕಂಡು ಜಯಣ್ಣ, ಮಂಜಮ್ಮನಿಗೆ ಬಹಳ ಹೆಮ್ಮೆಯಾಗುತ್ತಿತ್ತು. ಇತ್ತ ದೀಪು ತನ್ನ ಬುದ್ದಿವಂತಿಕೆಯಿಂದ ನಾರಾಯಣಪ್ಪ ಮಾಸ್ತರರ ಗಮನ ಸೆಳೆದಿದ್ದ. ನಾರಾಯಣಪ್ಪ ಮಾಸ್ತರರು ತಿಂಗಳಿಗೊಂದು ಪರೀಕ್ಷೆ ಮಾಡುತ್ತಿದ್ದರು. ಕಡಿಮೆ ಅಂಕಗಳನ್ನು ತೆಗೆದವರನ್ನು ಮುಲಾಜಿಲ್ಲದೆ ಶಿಕ್ಷಿಸುತ್ತಿದ್ದರು. ಅದರಲ್ಲೂ ಪಾಠ ಮಾಡುವಾಗ ಯಾರಾದರೂ ಆಕಳಿಸಿದರೆ, ತೂಕಡಿಸಿದರೆ ಮತ್ತೆ ಯಾವ ಜನ್ಮದಲ್ಲೂ ನಿದ್ರಿಸದಂತೆ ಒಳಶುಂಠಿ ನೀಡುತ್ತಿದ್ದರು. ತರಲೆ ಮಾಡಿದರಂತೂ ಮುಗಿದೇ ಹೋಯಿತು. ತಾವು ಕಟ್ಟಿದ್ದ ವಾಚನ್ನು ಬಿಚ್ಚಿಟ್ಟು, ಮುಂದೇ ಕುಳಿತ್ತಿದ್ದ ಹುಡುಗರನ್ನು ಹಿಂದೆ ಸರಿಸಿ, ತರಲೆ ಮಾಡಿದವನನ್ನು ತಮ್ಮ ಮುಂದೆ ಕೂರಿಸಿಕೊಂಡು ದನಕ್ಕೆ ಚಚ್ಚುವಂತೆ ಅವನ ಬೆನ್ನಿಗೆ ಹೊಡೆಯುತ್ತಿದ್ದರು. ಅದಕ್ಕೆ ಹೆದರಿಯೇ ಸೋಂಬೇರಿ, ತರಲೆ ಹುಡುಗರಾರು ಮುಂದೆ ಕೂಡಲು ಇಷ್ಟ ಪಡುತ್ತಿರಲಿಲ್ಲ. ಆದರೆ, ಮಾಸ್ತರರು ಇವತ್ತು ಶಿಕ್ಷೆಗೆ ಯಾರು ಗುರಿಯಾಗಬೇಕೆಂದು ಮೊದಲೇ ನಿರ್ಧರಿಸಿದಂತೆ ಅವರನ್ನು ಕರೆದು ಮುಂದೆ ಕೂಡಿಸಿಕೊಳ್ಳುತ್ತಿದರು. ಅದಕ್ಕೆಲ್ಲಾ ವಿದ್ಯಾರ್ಥಿಗಳ ಪೋಷಕರು ಕೊಟ್ಟ ಕಂಪ್ಲೇಟೂ ಕಾರಣವಾಗುತ್ತಿತ್ತು. ಯಾರನ್ನು ಕರೆದೂ ಕರೆದೂ ಮುಂದೆ ಕೂಡಿಸಿಕೊಂಡಿರುತ್ತಾರೋ ಅವರಿಗೆ ಏಟು ಬೀಳುವ ಘಳಿಗೆ ಕಲ್ಪಿಸಿಕೊಂಡು ಹಲವರು ಬೆವೆತಿರುತ್ತಿದ್ದರು ಅಂದಮೇಲೆ ಮುಂದೆ ಕೂತವರನ್ನು ದೇವರೂ ಕಾಪಾಡುವಂತಿರಲಿಲ್ಲ. ಅವರಿಗೆ, ಇವತ್ತು ಟ್ಯೂಷನ್ ಬೇಗ ಬಿಡಲಿ ಅಥವಾ ಮಾಸ್ತರರಿಗೆ ಯಾರಾದರು ಬೇರೆ ಕಡೆ ಗಮನಹರಿಸಲಿ ಎಂದು ಜಪಿಸುತ್ತಾ ಮಾಸ್ತರರನ್ನೇ ದಿಟ್ಟಿಸುತ್ತಾ ಗಾರೆ ಕಿತ್ತುಹೋದ ಜಾರಬಂಡಿಯ ಮೇಲೆ ಕೂತ ಅನುಭವವಾಗುತ್ತಿತ್ತು. ಜೊತೆಗೆ ಮಾಸ್ತರು ಬೈಯುವಾಗ, ಹೊಡೆಯುವಾಗ ಹುಡುಗಿಯರು ಯಾರದರೂ ಕಿಸಕ್ಕನ್ನೆ ನಕ್ಕರೆ ಆಗುವ ಅವಮಾನ ನೆನೆದು ಈ ಓದೋದು ಬೇಡ, ಟ್ಯೂಷನ್ ಬೇಡ ಎಂಬ ಭಾವನೆ ಇಣುಕುತ್ತಿತ್ತು. ಅಂದಮಾತ್ರಕ್ಕೆ ಮಾಸ್ತರರು ಹುಡುಗರನ್ನು ಮಾತ್ರ ಶಿಕ್ಷಿಸುತ್ತಿದ್ದರೆಂದು ಭಾವಿಸಬೇಕಿರಲಿಲ್ಲ. ಹುಡುಗಿಯರಿಗೆ ಬೈಯುವ, ಕೆಲವೊಮ್ಮೆ ಕೋಲಿನಿಂದ ಹೋಡೆಯುವ ಪ್ರಕ್ರಿಯೆಯೂ ಇರುತ್ತಿತ್ತು. ಆದರೆ, ಇದನ್ನು ನೋಡುವ ಭಾಗ್ಯ ಮಾತ್ರ ಹುಡುಗರಿಗಿರಲಿಲ್ಲ. ಏಕೆಂದರೆ, ಹುಡುಗರನೆಲ್ಲಾ ಐದು ನಿಮಿಷ ಮೊದಲೇ ಇವತ್ತಿಗೆ ಇಷ್ಟು ಸಾಕು ಎಂದು ಮನೆಗೆ ಕಳುಹಿಸದರೆಂದರೆ ಅವತ್ತು ಯಾವುದೋ ಹುಡುಗಿಗೋ ಇಲ್ಲಾ ಹುಡುಗಿಯರಿಗೋ ಲಾತ ಗ್ಯಾರಂಟಿ. ಪಾಪ, ಹುಡುಗಿಯರು ಒದೆ ತಿನ್ನುವದನ್ನು ಕಲ್ಪಿಸಿಕೊಂಡೇ ಹುಡುಗರು ಮನೆಕಡೆಗೆ ಅಲ್ಪತೃಪ್ತಿಯಿಂದ ತೆರುಳುತ್ತಿದ್ದರು. ಈ ವಿಷಯದಲ್ಲೂ ಅವರಿಗೆ ಅವಮಾನವಾಗುತ್ತಿತ್ತು.

ಪಾಠದಲ್ಲಿ ಮತ್ತು ಶಿಕ್ಷಿಸುವುದರಲ್ಲಿ ಎತ್ತಿದ ಕೈ ಆಗಿದ್ದ ಮಾಸ್ತರರು ಟ್ಯೂಷನ್ ಫೀ ವಸೂಲು ಮಾಡುವುದರಲ್ಲೂ ಮುಲಾಜು ನೋಡುತ್ತಿರಲಿಲ್ಲ. ಎಲ್ಲರ ಫೀಯನ್ನು ಪ್ರತಿ ತಿಂಗಳು ಐದನೇ ತಾರೀಖಿಗೆ ಕೇಳಿ ಪಡೆಯುತ್ತಿದ್ದರು. ಕೆಲವರಂತೂ ಮುಂಚೆಯೇ ನೀಡುತ್ತಿದ್ದರೆ ಮತ್ತೆ ಕೆಲವರಿಗೆ ಅನಿವಾರ್ಯ ಕಾರಣಗಳಿಂದ ಕೊಡಲಾಗುತ್ತಿರಲಿಲ್ಲ. ಅಂತವರಿಗೆಲ್ಲಾ ಹತ್ತನೇ ತಾರೀಖಿನ ಒಳಗೆ ತಂದು ಕೊಡುವಂತೆ ಮಾಸ್ತರರು ಹೇಳುತ್ತಿದ್ದರು. ಯಾವುದೇ ಕಾರಣಕ್ಕೂ ಹತ್ತನೇ ತಾರೀಖಿನವರೆಗೂ ಮತ್ತೆ ಕೇಳುತ್ತಿರಲಿಲ್ಲ. ಅವಾಗಲೂ ಕೊಡಲಿಲ್ಲವೆಂದರೆ ಫೀ ಕೊಡದವರನ್ನು ಕೂಡಿಸಿಕೊಂಡು, ಉಳಿದವರನ್ನು ಕಳುಹಿಸಿ, ಕಾರಣ ಕೇಳಿ ಅವರ ತಂದೆಯನ್ನೊ, ತಾಯಿಯನ್ನೊ ಕರೆದುಕೊಂಡು ಬರುವಂತೆ ಹೇಳುತ್ತಿದ್ದರು. ಕೆಲವು ಮಕ್ಕಳ ಪೋಷಕರೇ ಬಂದು ಫೀ ಕೊಟ್ಟು ತಮ್ಮ ಮಕ್ಕಳ ಓದಿನ ಬಗ್ಗೆ ಕೇಳುತ್ತಿದ್ದರು ಮತ್ತು ಸಾಧ್ಯವಾದರೇ ಚಾಡಿ ಹೇಳುತ್ತಿದ್ದರು. ನಾನು ನೋಡಿಕೊಳ್ಳುತ್ತೇನೆ ಬಿಡಿ ಎಂಬ ಭರವಸೆಯೊಂದಿಗೆ ಮಾಸ್ತರರು ಅವರನ್ನು ಸಾಗಹಾಕುತ್ತಿದ್ದರು. ಜಯಣ್ಣ ಸಾಧ್ಯವಾದಷ್ಟು ಬೇಗ ಫೀಯನ್ನು ದೀಪು ಕೈಯಲ್ಲೇ ಕೊಟ್ಟು ಕಳುಹಿಸುತ್ತಿದ್ದ. ಆದುದರಿಂದ ಯಾವುದೇ ಯೋಚನೆಯಿಲ್ಲದೆ ದೀಪುವಿಗೆ ಚೆನ್ನಾಗಿ ಓದುವುದಷ್ಟೇ ಕೆಲಸವಾಯಿತು.

ಹೀಗೆ ಆರು ತಿಂಗಳು ಕಳೆಯಿತು. ದೀಪು ಚೆನ್ನಾಗಿಯೇ ಓದುತ್ತಿದ್ದ ವಿಷಯ, ಶಾಲೆಯ ತಿಂಗಳ ಪರೀಕ್ಷೆಗಳಲ್ಲಿ ಮತ್ತು ಟ್ಯೂಷನ್ ಪರೀಕ್ಷೆಗಳಲ್ಲಿ ಅವನು ತೆಗೆಯುತ್ತಿದ್ದ ಮಾರ್ಕ್ಸ್ ಗಳಿಂದಲೇ ತಿಳಿಯುತ್ತಿತ್ತು. ಎಲ್ಲಾ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಳ್ಳುವಾಗಲೇ ಜಯಣ್ಣನಿಗೆ ಸಣ್ಣಗೆ ಕಾಣಿಸಿಕೊಂಡ ಜ್ವರ ದಿನಕಳೆದಂತೆಲ್ಲಾ ಏರಿ ಅವನನ್ನು ದಿನಗಟ್ಟಲೆ ಮನೆಯಲ್ಲೇ ಮಲಗುವಂತೆ ಮಾಡಿತು. ಸರಿಯಾಗಿ ಔಷಧಿ ತೆಗೆದು ಕೊಳ್ಳಲೂ ಆಗದಂತಹ ಬಡತನ ಹಗಲು ರಾತ್ರಿ ಮೂಟೆ ಹೋರುತ್ತಿದ್ದವನನ್ನು ತನ್ನ ಬೆಡ್ ಶೀಟ್ ತಾನೆ ಹೊದಿಯಲಾಗದಂತೆ ನಿತ್ರಾಣನನ್ನಾಗಿಸಿತು. ಸರ್ಕಾರಿ ಆಸ್ಪತ್ರೆಯ ವೈದ್ಯರು ಒಂದೆರಡು ತಿಂಗಳ ವಿಶ್ರಾಂತಿ ಒಳ್ಳೆಯದೆಂದು ಹೇಳಿ ಒಂದಷ್ಟು ಮಾತ್ರೆ ಕೊಟ್ಟು ಕಳುಹಿಸಿದ್ದರು. ಕೂಲಿಯವನಾದರು ನೆರೆಹೊರೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದ ಜಯಣ್ಣ ಮತ್ತು ಆತನಿಗೆ ಹೇಳಿ ಮಾಡಿಸಿದ ಜೋಡಿಯಂತಿದ್ದ ಮಂಜಮ್ಮನಿಗೆ, ಕೆಲವು ದಿನ ನೆರೆಹೊರೆಯವರ ನೆರವಿನಿಂದ ಊಟಕ್ಕೆ ಅಗತ್ಯ ನೆರವು ಒದಗಿಬಂತು. ಆದರೆ, ಆ ತಿಂಗಳು ಐದಾದರೂ ಟ್ಯೂಷನ್ ಫೀಗೆ ಕೊಡಲು ಜಯಣ್ಣನ ಬಳಿ ಹಣವಿರಲಿಲ್ಲ. ಗಂಡನ ಅನಾರೋಗ್ಯದಿಂದ ತತ್ತರಿಸಿದ್ದ ಮಂಜಮ್ಮಳಿಗೆ ಸಾಧ್ಯವೇ ಇರಲಿಲ್ಲ. ದೀಪುವಿಗೂ ಪರಿಸ್ಥಿತಿ ಅರ್ಥವಾಗಿತ್ತು. ಆರೋಗ್ಯವಿಲ್ಲದ ತಂದೆಯನ್ನು ಹೇಗೆ ಕೇಳುವುದು? ಮಾಸ್ತರರಿಗೆ ಏನು ಹೇಳುವುದು? ಅಮ್ಮ ತಾನೆ ಏನು ಮಾಡಿಯಾಳು? ಪುಟ್ಟ ತಲೆಯಲ್ಲಿ ದೊಡ್ಡ ದೊಡ್ಡ ಯೋಚನೆಗಳು ಮೂಡತೊಡಗಿದವು. ಬೇರೆ ದಾರಿಕಾಣದೆ ಮನಸ್ಸಿಲ್ಲದ ಮನಸ್ಸಿನಲ್ಲಿ ಅಂದು ಟ್ಯೂಷನ್ ಗೆ ಹೊರಡುವ ಮುನ್ನ ತಂದೆಯ ಮುಖವನ್ನೊಮ್ಮೆ ನೋಡಿದ. ಮಗನನ್ನು ನೋಡಿದ ಜಯಣ್ಣ, “ಇಂದು ಹೋಗಿಬಾರಪ್ಪ, ಮಾಸ್ತರರಿಗೆ ಮುಂದಿನ ತಿಂಗಳು ಕೊಡುತ್ತೇನೆಂದು ಹೇಳು” ಎಂದು ಅಸಾಯಕತೆಯಿಂದ ನುಡಿದರು. ದೀಪು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಟ್ಯೂಷನ್ ಬಿಡಬೇಕಾಗುವುದೇನೋ ಎಂಬ ಚಿಂತೆ ತಲೆಗೆ ಹತ್ತಿ ಹಗಲು ರಾತ್ರಿ ಕಾಡತೊಡಗಿತು.

ಅಂದು ಟ್ಯೂಷನ್ ಬಿಟ್ಟ ನಂತರ, ಮಾಸ್ತರರ ಬಳಿ ಬಂದ ದೀಪು “ಸಾರ್, ನಮ್ಮ ತಂದೆಗೆ ಆರೋಗ್ಯ ಸರಿಯಿಲ್ಲ. ಈ ತಿಂಗಳ ಟ್ಯೂಷನ್ ಫೀಯನ್ನು ಮುಂದಿನ ತಿಂಗಳು ಕೊಡುತ್ತಾರಂತೆ” ಎಂದು ನಡುಗುವ ದನಿಯಲ್ಲೇ ಹೇಳಿದ. “ಆಗ್ಲಪ್ಪಾ, ನಿಮ್ಮ ತಂದೆ ನನಗೆ ಚೆನ್ನಾಗಿ ಗೊತ್ತು. ಪರವಾಗಿಲ್ಲಾ. ಮುಂದಿನ ತಿಂಗಳೇ ಕೊಡು. ಆದರೆ ಟ್ಯೂಷನ್ನಿಗೆ ಬರೋದು ಬಿಡಬೇಡ ಅಷ್ಟೆ” ಎಂದು ನಗುಮೊಗದಿಂದಲೇ ಉತ್ತರಿಸಿದರು. “ಥ್ಯಾಂಕ್ಯು ಸರ್” ಎಂದ ದೀಪು ನಿಶ್ಚಿಂತನಾಗಿ ಮನೆಯ ದಾರಿ ಇಡಿದ.

ತಿಂಗಳು ಕಳೆದರೂ ಜಯಣ್ಣನ ಆರೋಗ್ಯ ಸುಧಾರಿಸಲಿಲ್ಲ. ಮನೆಯಲ್ಲಿ ಕಷ್ಟಗಳ ಸುರಿಮಳೆಯಾಗುತ್ತಿದೆ ಎಂದರಿತ ದೀಪು ಅಪ್ಪನನ್ನು ಟ್ಯೂಷನ್ ಫೀ ಕೇಳುವ ಗೊಡವೆಗೆ ಹೋಗಲಿಲ್ಲ. ಅವನಿಗೆ ಅಪ್ಪ ಬೇಗ ಹುಷಾರಾದರೆ ಹೇಗಾದರೂ ಹಣ ಹೊಂದಿಸುತ್ತಾರೆಂಬ ಭರವಸೆಯಿತ್ತು. ಆದರಿಂದ ಅಮ್ಮ ಕೊಟ್ಟದ್ದನ್ನೇ ತಿಂದುಕೊಂಡು ಚೆನ್ನಾಗಿ ಓದಬೇಕೆಂಬ ಛಲವನ್ನು ಬಿಡದೆ ಟ್ಯೂಷನ್ನಿಗೆ, ಶಾಲೆಗೆ ಹೋಗುತ್ತಿದ್ದ. ಪ್ರತಿ ತಿಂಗಳ ಐದನೇ ತಾರೀಖು ಮೇಷ್ಟರ ಮುಖವನೊಮ್ಮೆ ದಿಟ್ಟಿಸಿ ಭಯದಿಂದ ನೋಡುತ್ತಿದ್ದ. ಮೇಷ್ಟರು ಎಲ್ಲಾ ಅರಿತವರಂತೆ ನಗುತ್ತಾ ತಲೆಯಾಡಿಸುತ್ತಿದ್ದರು. “ಕೊಡುವಿಯಂತೆ ಹೋಗು” ಎಂಬ ಮಾತು ಅವರ ಭಾವನೆಯಲ್ಲಿ ವ್ಯಕ್ತವಾಗುತ್ತಿತ್ತು. ದೀಪು ಸಮಾಧಾನದಿಂದ ಹೋಗುತ್ತಿದ್ದ.

ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆ ಮುಗಿಯುವ ಹೊತ್ತಿಗೆ ಜಯಣ್ಣ ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಕೆಲಸಕ್ಕೆ ಹೋಗಲು ಶುರುಮಾಡಿದ್ದ. ಚೆನ್ನಾಗಿಯೆ ಪರೀಕ್ಷೆ ಬರೆದಿದ್ದ ದೀಪು ಅದಕ್ಕೆಲ್ಲಾ ಕಾರಣರಾದ ನಾರಾಯಣಪ್ಪ ಮಾಸ್ತರರನ್ನು ಮನದಲ್ಲೇ ಅಭಿನಂದಿಸಿದರೂ ಅವರಿಗೆ ಟ್ಯೂಷನ್ ಫೀಯನ್ನು ಕೊಡಲಾಗದಿದ್ದಕ್ಕೆ ನೊಂದುಕೊಳುತ್ತಿದ್ದ. ಪರೀಕ್ಷೆ ಮುಗಿದ ಮೇಲೆ ಮಾಸ್ತರರನ್ನು ಕಂಡು ಧನ್ಯವಾದ ಹೇಳಿಬರಬೇಕು ಎಂದುಕೊಂಡವನಿಗೆ ಫೀಸ್ ಇಲ್ಲದೆ ಅವರನ್ನು ನೋಡಲು ಧೈರ್ಯಬರಲಿಲ್ಲ. ಹೇಗಿದ್ದರೂ ಅಪ್ಪ ಹುಷಾರಾಗಿದ್ದರೆ, ಇನ್ನು ಸ್ವಲ್ಪ ದಿನದಲ್ಲಿ ಫೀಸು ಕೊಡುತ್ತಾರೆ. ಆವಾಗ ಮೇಷ್ಟರ ಬಳಿ ಹೋಗುವುದು ಎಂದುಕೊಂಡು ದೀಪು ಸ್ವಲ್ಪ ಧೈರ್ಯತಂದುಕೊಂಡು ಸುಮ್ಮನಾದ.

ಅಪ್ಪ ಮತ್ತೆ ಕೆಲಸಕ್ಕೆ ಹೋಗುತ್ತಿದ್ದರಿಂದ ಬಂದ ಹಣ ಅವರ ಅನಾರೋಗ್ಯದ ದಿನಗಳಲ್ಲಿ ಆದ ಸಾಲಕ್ಕೆ ಹೋಗುತ್ತಿದ್ದುದರಿಂದ ಟ್ಯೂಷನ್ ಫೀಗೆ ಸದ್ಯಕ್ಕೆ ಹಣ ಒದಗಿಬರುವುದಿಲ್ಲವೆಂಬುದು ದೀಪುವಿಗೂ ಮನದಟ್ಟಾಗಿತ್ತು. ಆದರೂ ಅಳುಕು ಅವನನ್ನು ಕಾಡುತ್ತಿತ್ತು. ಇವನು ಕುಳಿತಲ್ಲಿ, ನಿಂತಲ್ಲಿ ಮೇಷ್ಟರು ಬಂದು ಇವನಿಗೆ “ಟ್ಯೂಷನ್ ಫೀ” ಎಲ್ಲಿ ಎಂದು ಕೇಳಿದಂತೆ ಭಾಸವಾಗುತ್ತಿತ್ತು. ದೀಪುವಿಗೆ ಎಲ್ಲಾದರೂ ನಡೆದು ಹೋಗುವಾಗಲು ಮೇಷ್ಟರು ಎದುರುಗಡೆಯಿಂದಲೋ, ಹಿಂದಿನಿಂದಲೋ ಬಂದು ಹಿಡಿದುಕೊಂಡು ಕೇಳಿದರೆ ಏನು ಮಾಡುವುದು ಎಂಬ ದಿಗಿಲು ಅವನನ್ನು ನಿಶ್ಚಿಂತನಾಗಿ ಬೇಸಿಗೆಯ ರಜಾದಿನಗಳನ್ನು ಕಳೆಯಲು ಬಿಡಲಿಲ್ಲ. ರಜೆಯೆಲ್ಲಾ ಮುಗಿದು ಶಾಲೆ ಶುರುವಾಗಲು ಇನ್ನೊಂದು ವಾರ ಬಾಕಿ ಇದೆ ಎನ್ನುವಾಗ ಒಬ್ಬಂಟಿಯಾಗಿ ದೀಪು ಅಮರಗೊಂಡದ ಮುಖ್ಯರಸ್ತೆಯ ಬದಿಯಲ್ಲಿ ನಡೆಯುತ್ತಾ ಗೆಳೆಯನ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬಲಿಷ್ಟ ಕೈ ಅವನ ಹೆಗಲನ್ನು ಬಳಸಿ ಹಿಡಿಯಿತು. ಮೊದಲೇ ದಿಗಿಲಿಂದ ಓಡಾಡುತ್ತಿದ್ದ ದೀಪು ಆದ ಶಾಕಿನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಅದು ಮೇಷ್ಟರೇ ಎಂಬುದು ನಿಚ್ಚಳವಾಗಿತ್ತು. ಮೇಷ್ಟರು ಅದೇ ನಗುಮೊಗದಿಂದ ಅವನ ಭುಜವನ್ನು ಬಿಗಿಯಾಗಿ ಅಮುಕುತ್ತಾ “ಎಕ್ಸಾಮ್ ಎಲ್ಲಾ ಚೆನ್ನಾಗಿ ಬರೆದ? ನನಗೆ ಹೇಳೋಕೆ ಬರ್ಲಿಲ್ಲ ನೀನು” ಎಂದರು. “ಸರ್, ಅದು...ಅದು..” ಎಂದು ದೀಪು ತಡವರೆಸುತ್ತಿದ್ದಾಗಲೆ, “ನಂಗೆಲ್ಲಾ ಗೊತ್ತು. ನಿಮ್ಮಪ್ಪ ಫೀಸು ಕೊಟ್ಟರೆ ಅದರಲ್ಲಿ ಚೆನ್ನಾಗಿರೋ ಎರಡು ಅಂಗಿ ತಗೋ. ಒಂಭತ್ತನ್ನೇ ಕ್ಲಾಸಿಗೆ ಟ್ಯೂಷನ್ಗೆ ಬರೋದು ಮರಿಬೇಡ. ಆಯ್ತಾ?” ಎಂದು ಅವನ ಮುಖವನ್ನೊಮ್ಮೆ ದಿಟ್ಟಿಸುತ್ತಾ ಭುಜದ ಮೇಲಿನ ಕೈತೆಗೆದು ಮೃದುವಾಗಿ ದೀಪುವಿನ ಬೆನ್ನಿಗೊಂದು ತಟ್ಟಿ ಮುಂದೆ ನಡೆದರು. ಮೇಷ್ಟರ ಈ ಮಾತು, ನಡೆವಳಿಕೆಯನ್ನು ಅರ್ಥೈಸಿಕೊಂಡ ದೀಪು ತನ್ನ ಬಲ ಹೆಗಲೊನ್ನಮ್ಮೆ ನೋಡಿಕೊಂಡ. ತೊಟ್ಟಿದ್ದ ಅಂಗಿ ಹರಿದದ್ದು ಸ್ಪಷ್ಟವಾಗಿತ್ತು. ಅದರ ಮೇಲೆ ಕೈಯಿಟ್ಟಿದ್ದ ಮೇಷ್ಟರ ಬಲಿಷ್ಟಕೈ ಇನ್ನೂ ಅಲ್ಲೇ ಇದೆ ಎನ್ನುವಂತೆ ದೀಪುವಿಗೆ ಭಾಸವಾಗುತ್ತಿತ್ತು. ತನ್ನ ಎಡಗೈಯಿಂದ ಬಲಭುಜವನ್ನು ಮುಟ್ಟಿಕೊಂಡ ದೀಪುವಿಗೆ ಮೇಷ್ಟರ ಬಲಗೈ ಮುಟ್ಟಿದಂತಾಯಿತು. “ಅಬ್ಬಾ ಮೇಷ್ಟರು ಎಷ್ಟು ಒಳ್ಳೆಯವರು” ಎಂದು ಅವನ ಮನ ಹಿಗ್ಗಿತು. ಅದೇ ಖುಷಿಯಲ್ಲಿ ಮೇಷ್ಟರು ಹೋದ ದಾರಿಯತ್ತಲ್ಲೇ ನೋಡಿದ. ನಾರಾಯಣಪ್ಪ ಮೇಷ್ಟರು ಬಹಳ ವೇಗವಾಗಿ ಮುಂದೆ ಹೋಗುತ್ತಿದ್ದರು. ಅವರನ್ನು ಧನ್ಯತಾಭಾವದಿಂದ ನೋಡುತ್ತಿದ್ದ ದೀಪುವಿಗೆ ಅವನ ಬೆನ್ನನ್ನು ಮೇಷ್ಟರು ಇನ್ನೂ ತಟ್ಟುತ್ತಿದ್ದಾರೆ ಎಂದೆನಿಸುತ್ತಿತ್ತು.

                                                                                     - ಗುಬ್ಬಚ್ಚಿ ಸತೀಶ್.





ಶುಕ್ರವಾರ, ಅಕ್ಟೋಬರ್ 7, 2011

ಕಳ್ಳನ ಮೆಟ್ಟು

ಕಳ್ಳನ ಮೆಟ್ಟು


ಅದೊಂದು ಮೋಡ ಮುಸುಕಿದ ಮುಂಜಾವು. ಪೂರ್ವದತ್ತ ಬೀಸುತ್ತಿದ್ದ ತಂಗಾಳಿ ತುಸು ಜೋರಾಗಿಯೇ ಇತ್ತು. ಎಂತಹವರನ್ನು ಬೇಕಾದರೂ ಹೆದರಿಸುತ್ತೇನೆ ಎಂದು ಕೊರೆಯುತ್ತಿತ್ತು. ಸುಮಾರು ಒಂದು ಕ್ವಿಂಟಾಲಿಗಿಂತ ಸ್ವಲ್ಪ ಕಡಿಮೆಯಿದ್ದ ನನ್ನ ಧಡೂತಿ ದೇಹವು ನಾನು ಏನನ್ನೂ ಲೆಕ್ಕಿಸುವುದಿಲ್ಲ ಎಂದು ಯೋಗ ಮಂದಿರದತ್ತ ಬಿರುಸಾಗಿಯೇ ಹೆಜ್ಜೆ ಹಾಕಿತು. ಸಮಯ ಅದಾಗಲೇ ಆರಾದರೂ ಅರೆಬರೆ ಎದ್ದಿದ ಅಮರಗೊಂಡದ ಬೀದಿಗಳಲ್ಲಿ ಚಳಿಗೆ ಕಾಪಿಯನ್ನೋ, ಟೀಯನ್ನೋ ಕುಡಿಯುವ ಮನಸ್ಸುಳವರು ನಿದ್ದೆ ಬಿಟ್ಟ ಕಣ್ಣುಗಳನ್ನು ಅಗಲಿಸಿಕೊಂಡು ಹಾಲಿನ ಪ್ಯಾಕೆಟ್ಟನ್ನೋ, ಪಾತ್ರೆಯನ್ನೋ ಹಿಡಿದು ಮನೆಗಳತ್ತ ತೆರಳುತ್ತಿದ್ದರು. ಇನ್ನೂ ಹಾಲನ್ನು ತರಬೇಕಿದ್ದವರು ಕಣ್ಣುಜ್ಜುತ್ತಾ ಲಗುಬಗೆಯಲ್ಲಿ ಅಂಗಡಿಗಳೆಡೆಗೆ ಧಾವಿಸುತ್ತಿದ್ದರು. ಹಾಲನ್ನು ಮನೆಮನೆಗೆ ಹಾಕುವವರು ಎಲ್ಲರಿಗಿಂತ ತುರ್ತಾಗಿ ಸಂಚರಿಸುತ್ತಿದ್ದರು. ಪತ್ರಿಕೆ ಹಂಚುವ ಹುಡುಗರಂತೂ ತುರಾತುರಿಯಲ್ಲಿ ಪತ್ರಿಕೆಗಳನ್ನು ತರಿಸುವವರ ಮನೆಗಳೆಡೆಗೆ ಎಸೆದು, ಎದ್ದೆವೋ ಬಿದ್ದೆವೋ ಅಂತಲೂ ನೋಡದೆ ಸೈಕಲ್ ಹತ್ತಿ ಯಾವುದೋ ತಿರುವಿನಲ್ಲಿ ಮರೆಯಾಗುತ್ತಿದ್ದರು. ಅರೆಕ್ಷಣದಲ್ಲಿ ಮತ್ತೊಂದು ತಿರುವಿನಲ್ಲಿ ಪ್ರತ್ಯಕ್ಷರಾಗಿರುತ್ತಿದ್ದರು. ರಾತ್ರಿಯೆಲ್ಲಾ ನಿದ್ದೆ ಮಾಡದವರೆಂತೆ ಕಾಣುತ್ತಿದ್ದ ಭಿಕ್ಷುಕರು ತಾವು ನಿಂತ ಮನೆಗಳೆದೆರು ಮನೆಯವರು ಎದ್ದಿರುವರೋ ಇಲ್ಲವೋ ಎಂಬ ಭಾವದಲ್ಲಿ, ಇನ್ನೆಲ್ಲಿ ಮುಂದೆ ಹೋಗು ಅನ್ನುತ್ತಾರೋ ಎನ್ನುವ ಆತಂಕದಲ್ಲಿ “ಅಮ್ಮಾ...ತಾಯಿ...ಏನಾದರು ಭಿಕ್ಷೆ ಹಾಕ್ರಮ್ಮ” ಎಂದು ಕೇಳುತ್ತಿದ್ದರು. ತರಕಾರಿ, ಹಣ್ಣು, ಹೂ ಮಾರುವವರು ತುಸು ಸಂಭ್ರಮದಲ್ಲೇ ವ್ಯಾಪಾರಕ್ಕೆ ಇಳಿದಿದ್ದರು. ತನಗಿಂತ ಮುಂಚೆಯೇ ಎಚ್ಚರವಾದ ಈ ಜಗತ್ತಿನ ಬಗ್ಗೆ ಸೂರ್ಯನಿಗೆ ನಾಚಿಕೆಯಾಗಿ ತನ್ನನ್ನೇ ನೆಚ್ಚಿರುವ ಜಗತ್ತಿಗೆ ಮತ್ತಷ್ಟು ಲವಲವಿಕೆ ತುಂಬುವ ಸಲುವಾಗಿ ನಿಧಾನವಾಗಿ ಬಾನಂಚಿನಲ್ಲಿ ತನ್ನ ಕಣ್ಣುಗಳನ್ನು ಮೋಡಗಳ ಮರೆಯಲ್ಲೇ ತೆರೆಯಲಾರಂಭಿಸಿದನು. ಎಲ್ಲವನ್ನೂ ಗಮನಿಸುತ್ತ, ಕಣ್ತುಂಬಿಕೊಳ್ಳುತ್ತಾ ಸುಮಾರು ಅರ್ಧ ಮೈಲಿಯಷ್ಟಿದ್ದ ಯೋಗ ಮಂದಿರವನ್ನು ನಾನು ತಲುಪವಷ್ಟರಾಗಲೇ ಅದು ಕೂಡ ಲವಲವಿಕೆಯಿಂದ ತುಂಬಿತ್ತು.

ನಾನು ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ ನಮ್ಮ ಶಾಲೆಗೆ ಹೊಂದಿಕೊಂಡಿದ್ದ ಈ ಯೋಗಮಂದಿರ ವಾಚನಾಲಯವಾಗಿತ್ತು. ಅದಕ್ಕೂ ಮುಂಚೆ ಶಾಲೆಗೇ ಸೇರಿದ್ದ ಆ ಕೊಠಡಿಯಲ್ಲಿ ತರಗತಿಗಳು ನಡೆಯುತ್ತಿದ್ದವಂತೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಸಂಸ್ಕೃತಿ ನಶಿಸುವ ಕಾಲ ಉದಯವಾಗುತ್ತಿದ್ದ ಆ ಸಮಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿ ಎರೆಡೆರಡು ಸೆಕ್ಷನ್ ಗಳು ಒಂದಾಗಿ ಅನಾಥವಾದ ಹಲವು ಕೊಠಡಿಗಳಲ್ಲಿ ಆ ಕೊಠಡಿಯೇ ಮೊದಲಾಯಿತು. ಹಾಳಾಗುವ ಮೊದಲೇ ಹಲವಾರು ವರ್ಷಗಳ ಕಾಲ ನಮ್ಮೂರಿನ ಕೆಲ ಯುವಕರು ಸ್ವಯಂ ಸೇವಕರಾಗಿ ಆ ಕೊಠಡಿಯಲ್ಲಿ ಉತ್ಸಾಹದಿಂದಲೇ ವಾಚನಲಯವನ್ನು ನಡೆಸಿದಾದರೂ, ಕಾಲ ಕಳೆದಂತೆ ತಮ್ಮ ಜೀವನದ ನಿರ್ವಹಣೆಗಾಗಿ ಹಲವು ಕಡೆ ಹರಿದು ಹೋದುದರಿಂದ, ಹೊಸಬರಾರು ಅದರ ಮೇಲ್ವಿಚಾರಣೆಗಾಗಿ ಬರದೆ ಹೋದುದರಿಂದ ವಾಚನಲಾಯಕ್ಕೆ ಬೀಗ ಬಿತ್ತು. ಸಮಯ ಕಳೆದಂತೆ ಮತ್ತಷ್ಟು ಶಿಥಿಲಾವಸ್ಥೆ ತಲುಪುವ ಮೊದಲೇ ಎಲ್ಲಿಂದಲ್ಲೋ ಬಂದ ನಮ್ಮ ಯೋಗ ಗುರುಗಳ ಕಣ್ಣಿಗೆ ಬಿದ್ದು, ಯೋಗಾಭ್ಯಾಸಕ್ಕೆ ಸರಿಯಾದ ಜಾಗವೆಂದು ಊರಿನ ಮುಖಂಡರ ಮತ್ತು ಮುಖ್ಯ ಶಿಕ್ಷಕರ ಸಹಕಾರದಿಂದ ಅಲ್ಲಿ ಮಾರುತಿ ಯೋಗಮಂದಿರವೆಂಬ ಹೆಸರಿನಲ್ಲಿ ಯೋಗಮಂದಿರವೊಂದು ತಲೆಯೆತ್ತಿತು.

ವಿದ್ಯಾರ್ಥಿಯಾಗಿ ಆ ಕೊಠಡಿಯಲ್ಲಿ ಕಲಿಯದಿದ್ದರೂ, ಅಲ್ಲಿ ಮೊದಲಿದ್ದ ವಾಚನಾಲಯ ಎಷ್ಟೋಬಾರಿ ನನ್ನ ಓದಿನ ಹಸಿವನ್ನು ತೀರಿಸುವುದರ ಮೂಲಕ ನನ್ನ ತಿಳುವಳಿಕೆಯನ್ನು ಹೆಚ್ಚಿಸಿತ್ತು. ಇದೀಗ ದಿನಾ ದಿನ ನನಗರಿವಿಲ್ಲದಯೇ ದೊಡ್ಡದಾದ ಹೊಟ್ಟೆಯನ್ನು ಸಣ್ಣದಾಗಿಸಲು ಯೋಗ ಮಾಡಲು ತೊಡಗಿಸಿಕೊಂಡಾಗ ಆ ಕೊಠಡಿಯೇ ನನ್ನ ದೇಹವನ್ನು ದಂಡಿಸುವ ಸ್ಥಳವಾದುದು ನನಗೆ ಬಹಳ ಪ್ರಿಯವಾಗಿತ್ತು.

ಸುತ್ತಲು ತಂತಿಬೇಲಿಯನ್ನು ಹೊಂದಿದ್ದ ಯೋಗ ಮಂದಿರದ ಒಳ ಹೋಗಬೇಕೆಂದರೆ ಚಪ್ಪಲಿಗಳನ್ನು ಹೊರಗೆ ಬಿಟ್ಟು ಮೂರು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು. ಒಳಗೆ ಹೋದವನೇ ಅದಾಗಲೇ ತುಂಬಿದ್ದ ಅಲ್ಲಿ, ನಗುತ್ತಾ ಸ್ವಲ್ಪ ಜಾಗ ಬಿಟ್ಟ ಶಾಂತಪ್ಪ ಮಾಸ್ತರರ ಪಕ್ಕದಲ್ಲೇ ಯೋಗಾಭ್ಯಾಸವನ್ನು ಶುರುಮಾಡಿದೆ. ಬರಬೇಕಾದವರೆಲ್ಲ ಬಂದಾಗಿತ್ತು. ಶಾಂತಪ್ಪ ಮಾಸ್ತರರು ನನಗೇನೂ ಗುರುಗಳಾಗಿರದಿದ್ದರೂ, ವೃತ್ತಿಯಲ್ಲಿ ಅಧ್ಯಾಪಕರಾಗಿದುದರಿಂದ ನಾವೆಲ್ಲರೂ “ಸರ್” ಎಂದೇ ಸಂಬೋಧಿಸುತ್ತಿದ್ದೆವು. “ಸ್ವಲ್ಪ ನಿಧಾನವಾಗಿ...ಇನ್ನೂ ಸ್ವಲ್ಪ ಬೆಂಡ್ ಮಾಡಿ... ಜೋರಾಗಿ ಉಸಿರು ತೆಗೆದುಕೊಳ್ಳಿ... ಈಗ ನಿಧಾನವಾಗಿ ಉಸಿರು ಬಿಡಿ...” ಎಂಬಂತಹ ಅತ್ತಿಂದಿತ್ತ ಓಡಾಡುತ್ತಿದ್ದ ಯೋಗ ಗುರುಗಳ ಮಾತುಗಳು ಮಂತ್ರದಂತೆ ಕೇಳಿಸುತ್ತಿತ್ತು. ನನಗೆ ಬಾಗಿಲ ಬಳಿಯೇ ಜಾಗ ಸಿಕ್ಕಿದುದರಿಂದ ಯೋಗ ಮಂದಿರದ ಮುಂದೆಯಿದ್ದ ರಸ್ತೆಯ ಕಡೆ ಆಗಾಗ ನೋಟ ಹರಿಸುವಂತೆ, ಅಲ್ಲಿನ ಚಟುವಟಿಕೆಗಳು ಪ್ರೇರೆಪಿಸುತ್ತಿದ್ದವು. ಈ ಸಮಯದಲ್ಲಿ ಯೋಗಮಂದಿರದ ಮೆಟ್ಟಿಲ ಬಳಿ ಒಬ್ಬ ಹುಡುಗ ಬಂದು ಮೊದಲನೇ ಮೆಟ್ಟಿಲಿನ ಮೇಲೆ ಕೂಳಿತುಕೊಂಡು ಒಳಗೆ ಇಣುಕತೊಡಗಿದ. ಆ ಹುಡುಗನನ್ನು ಹಿಂದೊಮ್ಮೆ ಅಲ್ಲಿಯೇ ನೋಡಿದ ನೆನಪಿದ್ದರೂ ಅವನ್ಯಾರೆಂದು ನನಗೆ ಗೊತ್ತಿರಲಿಲ್ಲ. ಬಹುಷಃ ಅವನಿಗೆ ಯೋಗದಲ್ಲಿ ಆಸಕ್ತಿಯಿತ್ತೆಂದು ಕಾಣುತ್ತದೆ, ಕತ್ತೆತ್ತಿ ಕತ್ತೆತ್ತಿ ಒಳಗೇ ಇಣುಕತೊಡಗಿದ. ಒಳಗೆ ಬರುವ ಧೈರ್ಯ ಮಾತ್ರ ಮಾಡಲಿಲ್ಲ.

“ಸಾರ್, ಗಮನವಿಟ್ಟು ಅಭ್ಯಾಸ ಮಾಡಿ” ಎಂಬ ಯೋಗ ಗುರುಗಳ ಮಾತು ನನಗೇ ಎಂದರಿತ ನಾನು ನನ್ನ ಗಮನವನ್ನು ಯೋಗದೆಡೆಗೆ ಹರಿಸಿದೆ. ಹೀಗೆಯೇ ಸ್ವಲ್ಪ ಹೊತ್ತು ಕಳೆದ ಮೇಲೆ, ಬಾಗಿಲ ಬಳಿ ಏನೋ ಚಲಿಸಿದಂತಾಗಿ ನನ್ನ ನೋಟ ಆ ಕಡೆ ಹರಿಯುವ ಸಮಯಕ್ಕೆ ಅಲ್ಲಿ ಅಷ್ಟೊತ್ತು ಕುಳಿತ್ತಿದ್ದ ಆ ಹುಡುಗ ಸರ್ರನ್ನೆ ಎದ್ದು ರಸ್ತೆಯ ಕಡೆ ಓಡಲು ಶುರುಮಾಡಿದ್ದ. ಇದ್ದೆಲ್ಲವನ್ನು ನನಗೆ ಪರಿವೆ ಇಲ್ಲದಂತೆ ಗಮನಿಸುತ್ತಿದ್ದ ಶಾಂತಪ್ಪ ಸರ್ ಭರ್ರನೆ ಎದ್ದು “ರೀ ಅವನು ಚಪ್ಪಲಿ ಹಾಕ್ಕೊಂಡು ಹೋಗ್ತಾ ಇದ್ದಾನೆ ಕಣ್ರೀ” ಅಂದವರೇ, ಯಾರ ಉತ್ತರಕ್ಕೂ ಕಾಯದೇ ನನ್ನ ಮೇಲಿಂದ ಹಾರಿ ಆ ಹುಡುಗನ ಹಿಂದೆ ಓಡ ತೊಡಗಿದರು. ಇವರ ಮಾತನ್ನು ಕೇಳಿದ ನಾವೆಲ್ಲಾ ಯೋಗಭ್ಯಾಸ ಬಿಟ್ಟು ಆಚೆ ಬರುವಷ್ಟರಲ್ಲಿ, ಶಾಂತಪ್ಪ ಸರ್ ಹಿಂದೆಯೇ ಮತ್ತಿಬ್ಬರು ಅಭ್ಯಾಸ ಮಾಡುತ್ತಿದ್ದ ಹುಡುಗರು ಓಡಲು ಶುರುಮಾಡಿದರು. ಹಿಂದೆ ಯಾರೋ ಮೂರು ಜನ ಓಡಿ ಬರುತ್ತಿದ್ದಾರೆ ಎಂದೋ ಅಥವಾ ಸಹಜ ವೇಗದಲ್ಲಿಯೋ ಆ ಹುಡುಗ ಮಿಂಚಿನಂತೆ ರಸ್ತೆಯ ತಿರುವಿನಲ್ಲಿ ಮರೆಯಾದ. ಅವನನ್ನು ಹಿಮ್ಮೆಟ್ಟಿದ್ದ ಮೂವರೂ ಆ ತಿರುವಿನಲ್ಲಿ ಮರೆಯಾದರು.

ಆಚೆ ಬಂದ ನಾವೆಲ್ಲರೂ ನಮ್ಮ ನಮ್ಮ ಚಪ್ಪಲಿಗಳನ್ನು ನೋಡಿಕೊಂಡು ಸಮಾಧಾನ ಪಟ್ಟುಕೊಂಡೆವು. ನಮ್ಮವೆಲ್ಲ ಮಿಕ್ಕಿ ಮತ್ತೂ ಮೂರು ಜತೆ ಚಪ್ಪಲಿ ಅಲ್ಲಿ ಉಳಿದವು. ಅದಾಗ ನಮ್ಮ ಯೋಗ ಗುರುಗಳು “ಇನ್ನೂ ಮೂರು ಜತೆ ಇವರದೇ ಇರಬೇಕು. ಹಿಂದೆ ಮುಂದೆ ನೋಡದೆ, ಇವರ್ಯಾಕೆ ಓಡಿದರೋ...!?” ಎಂದು ಹೇಳುತ್ತಾ “ಬನ್ನಿ ಬನ್ನಿ ನಾವೆಲ್ಲಾ ಅಭ್ಯಾಸ ಮುಂದುವರೆಸೋಣ” ಎಂದು ನಮ್ಮನ್ನೆಲ್ಲಾ ಒಳಗೆ ಕರೆದುಕೊಂಡು ಹೋದರು.

“ಎಲ್ಲರ ಚಪ್ಪಲಿಗಳು ಇಲ್ಲೇ ಇರುವಾಗ ಆ ಹುಡುಗನು ಹಾಕಿಕೊಂಡು ಹೋದ ಚಪ್ಪಲಿಗಳು ಯಾರವು?” ಎಂದು ನಮ್ಮನಮ್ಮಲೇ ಮಾತಾಡಿಕೊಳ್ಳುತ್ತಾ ಯೋಗಾಭ್ಯಾಸ ಮುಂದುವರೆಸಿದವು. ಸುಮಾರು ಅರ್ಧಗಂಟೆ ಕಳೆದಿರಬೇಕು, ನಾವೆಲ್ಲಾ ಶವಾಸನ ಹಾಕುವ ಹೊತ್ತಿಗೆ ಪೆಚ್ಚುಮೋರೆಯಿಂದ ಶಾಂತಪ್ಪ ಮಾಸ್ತರರು, ಅವರ ಜೊತೆ ಓಡಿ ಬಂದಿದ್ದ ಹುಡುಗರ ಜೊತೆ ಹಿಂತಿರುಗಿದರು. ಬಂದವರೇ ಬಾಗಿಲ ಬಳಿ ಇದ್ದ ಚಪ್ಪಲಿಗಳಲ್ಲಿ ಅವರದೂ ಇರುವುದನ್ನು ಖಾತ್ರಿಪಡಿಸಿಕೊಂಡು ಒಳಗೆ ಬಂದರು. ಅವರಲ್ಲಿ ಒಬ್ಬ ಹುಡುಗ ಮುಸುಮುಸು ನಗುತ್ತಿದ್ದ.

ನಾವೆಲ್ಲ ಕೇಳುವ ಮೊದಲೇ ನಿಟ್ಟುಸಿರು ಬಿಡುತ್ತಾ “ಆ ಹುಡುಗನ್ನ ಅವರ ಮನೆಯತ್ತಿರ ಹೋಗಿ ಹಿಡುದ್ವು. “ಅವನನ್ನು ಹಿಡಿದು ಯಾಕೋ ಓಡಿಬಂದೆ? ಯಾರ ಚಪ್ಪಲಿ ಕದ್ದುಕೊಂಡು ಬಂದೆ?” ಎಂದು ದಬಾಯಿಸಿದೆವು. ಅದಕ್ಕವನು, “ಸರ್, ನನ್ನ ಚಪ್ಪಲಿ ಹಾಕ್ಕೊಂಡು ನಾ ಬಂದೆ ಅಷ್ಟೆ. ಹಾಲಾಕಕೆ ಟೈಮಾಯ್ತು, ನಮ್ಮಮ್ಮ ಬೈಯ್ತಾಳೆ ಅಂತ ಓಡಿ ಬಂದೆ. ಬಿಡಿ ಸರ್” ಎಂದು ಜೋರು ಮಾಡಿದ. ಅಷ್ಟರಲ್ಲಿ ತಗಳಪ್ಪಾ ಮನೆಯೊಳಗಿದ್ದ ಅವರಮ್ಮ ಹೊರಗೆ ಬಂದು ಸ್ವಲ್ಪ ದೂರದಲ್ಲಿದ್ದ ನಮ್ಮನ್ನೆಲ್ಲಾ ನೋಡಿ “ಯಾರೋ ಇವರೆಲ್ಲಾ?” ಎಂದು ಆ ಹುಡುಗನೆಡೆಗೆ ಅರಚುತ್ತಾ ಬರತೊಡಗಿದಳು. ಆಕೆ ನಮ್ಮೆಡೆಗೆ ಬರುತ್ತಿದ್ದ ವೇಗವನ್ನು ನೋಡಿಯೇ ನಾವೆಲ್ಲ ಆ ಹುಡುಗನನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತೆವು. ಸದ್ಯ! ಆಯಮ್ಮ ನಮ್ಮನ್ನು ಅಟ್ಟಿಸಿಕೊಂಡು ಬಂದು ಏನನ್ನೂ ಕೇಳಲಿಲ್ಲ.” ಎಂದು ಒಂದೇ ಸಮನೆ ಹೇಳುತ್ತಲೇ ಕುಳಿತರು. ಮುಂದುವರೆಯುತ್ತಾ “ಅಷ್ಟಕ್ಕೂ ಅವನು ಅವನ ಚಪ್ಪಲಿಯನ್ನ ಮೆಟ್ಟಿಕೊಂಡು ಹೋದದ್ದಕ್ಕೆ ನಾವೆಲ್ಲಾ ಯಾಕೆ ದೆವ್ವ ಮೆಟ್ಟಿದಂಗೆ ಅವನ ಹಿಂದೆ ಓಡಿದೆವು?” ಎಂದು ಪರಿತಪಿಸತೊಡಗಿದರು.

“ಹೋಗ್ಲಿ ಬಿಡಿ ಸರ್, ಅದು ಅವನ ಚಪ್ಪಲಿ ಅಂತ ಮುಂಚೆಯೇ ನಿಮಗೇನು ಗೊತ್ತಿತ್ತೇ? ಸಮಾಧಾನ ಮಾಡ್ಕೋಳಿ” ಎಂದು ಯೋಗಗುರುಗಳು ಹೇಳಿದರೂ ಶಾಂತಪ್ಪ ಮಾಸ್ತರರಿಗೆ ಸಮಾಧಾನವಾದಂತೆ ಕಾಣಲಿಲ್ಲ. ಅಲ್ಲಿದ್ದವರೆಲ್ಲಾ ತಲೆಗೊಂದೊಂದು ಮಾತನ್ನು ಆಡುತ್ತಾ, ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಶಾಂತಪ್ಪ ಮಾಸ್ತರರು ಅದ್ಯಾಕೋ ಗರಬಡಿದವರಂತೆ ಕೂತುಬಿಟ್ಟರು. ಪಾಪ ಅವರಿಗೆ ಈ ಘಟನೆಯಿಂದ ಅದೆಷ್ಟು ಬೇಜಾರಾಗಿತ್ತೋ? ಅವರನ್ನು ಅವರ ಪಾಡಿಗೆ ಬಿಟ್ಟು ನಾನು ಶವಾಸನ ಹಾಕಿದೆ. ನನ್ನ ಮನದಲ್ಲಿ “ಈ ಜಗತ್ತಿನಲ್ಲಿ ನಮ್ಮ ಚಪ್ಪಲಿಗಳನ್ನು ನಾವು ಹಾಕಿಕೊಳ್ಳುವುದೂ ಕೂಡಾ ಎಷ್ಟು ಕಷ್ಟ” ಎಂಬ ಮಾತು ಅದೇಕೋ ನನ್ನ ಉಸಿರಿನೊಂದಿಗೆ ಪಯಣಿಸತೊಡಗಿತು.

                                                                                                 - ಗುಬ್ಬಚ್ಚಿ ಸತೀಶ್.

ಶನಿವಾರ, ಸೆಪ್ಟೆಂಬರ್ 10, 2011

“ನಲ್ಲನಲ್ಲೆ” ಗೆ ಒಂದು ವರ್ಷ.

“ಅವುಗಳು ಎಷ್ಟಾದರೂ ಉಸಿರಾಡುವ ಶಬ್ಧಗಳು
ನನ್ನ ಅಣತಿಯಂತೆ
ಆದರೂ ಅವು ಶಾಶ್ವತ”
         - ಶ್ರೀಮತಿ ವಿಜಯಲಕ್ಷ್ಮೀ (ದಿ.ಕಿ.ರಂ.ನಾಗರಾಜರ ಪತ್ನಿ)

ಪ್ರೀತಿ ನಮ್ಮ ಹೃದಯದಲ್ಲಿರುತ್ತದೆ. ಆದರೆ, ಅದು ಗೊತ್ತಾಗುವುದು ನಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಮತ್ತೊಂದು ಪ್ರೀತಿಯ ಹೃದಯ ಸಿಕ್ಕಾಗ ಮಾತ್ರ. ಪ್ರೀತಿ ಸಾರ್ಥಕವಾಗುವುದೂ ಆವಾಗಲೇ. ಇಲ್ಲವಾದರೆ ಪ್ರೀತಿ ವ್ಯರ್ಥವಾಗುತ್ತದೆ ಮತ್ತು ತನ್ನಲ್ಲೆ ಸೊರಗುತ್ತದೆ. ಅದೃಷ್ಟಕ್ಕೆ, ನನ್ನ ಪ್ರೀತಿಯನ್ನು ಹೇಳಿಕೊಳ್ಳಲು ನಾನು ಕಾದಂತೆ, ತಾನೂ ಕಾಯುತ್ತಿದ್ದ, ನನ್ನ ನಲ್ಲೆಯ ಪ್ರೀತಿಯ ಹೃದಯ ಪ್ರೀತಿಯನ್ನು ನಿವೇದಿಸಿಕೊಂಡಾಗ, ಪ್ರೀತಿಗಾಗಿ ಪರಿತಪಿಸುತ್ತಿದ್ದ ನನ್ನ ಹೃದಯ ಹಾಲೆರೆಯಿತು. ಮರೆಯಲಾಗದ ಅಮೃತಘಳಿಗೆಯಲ್ಲಿ ಟಿಸಿಲೊಡೆದ ನಲ್ಲೆನಲ್ಲೆಯರ ಪ್ರೀತಿ ಮೊಗ್ಗಾಗಿ, ಹೂವಾಗಿ, ಬೀಜವಾಗಿ ಮತ್ತೊಂದು ಪುಟ್ಟ ಹೃದಯವನ್ನು ಕಾಣಿಕೆಯಾಗಿ ಪಡೆಯಿತು.

ಈ ಮೇಲಿನ ಸಾಲುಗಳು ನನ್ನ ಅಕ್ಷರ ಪ್ರೀತಿಗೂ ಒಪ್ಪುತ್ತವೆ. ಚಿಕ್ಕಂದಿನಲ್ಲೆಯೇ ಓದುವುದನ್ನು ರೂಢಿಸಿಕೊಂಡ ನನಗೆ, ಎಂಟನೇ ತರಗತಿಯಲ್ಲೇ ಬರೆಯುವ ಗೀಳು ಹತ್ತಿತು. ಆದರೆ, ಭಯ! ಮತ್ತು ಬರೆಯುವವರು ಸಾಮಾನ್ಯರಲ್ಲ, ದೇವಲೋಕ ಅಥವಾ ಇನ್ಯಾವುದೋ ಲೋಕದಿಂದ ಬಂದವರೆಂಬ ನನ್ನದೇ ಆದ ಭಾವನೆ! ಅದಕ್ಕೋ, ಏನೋ ಎಂಟನೇ ತರಗತಿಯಲ್ಲಿ ಎಲ್ಲಾ ಭಯವನ್ನು ಕಿತ್ತೊಗೆದು ಬರೆದ “ತ್ಯಾಗ” ವೆಂಬ ಕಥೆಯ ಅರ್ಧ ಪುಟ ಚೂರು ಚೂರಾಗಿ ನೀರಿನ ಒಲೆ ಸೇರಿ ಅಮರವಾಯಿತು! ನೀವು ನಂಬಲೇಬೇಕು ಈ “ತ್ಯಾಗ” ಕಥೆಯ ವಸ್ತು ಹಲವು ವರ್ಷಗಳ ನಂತರ ಬಂದು, ಭರ್ಜರಿ ಯಶಸ್ಸುಗಳಿಸಿದ “ಮುಂಗಾರು ಮಳೆ” ಸಿನಿಮಾ ಕಥೆಗೆ ಬಹಳ ಹತ್ತಿರವಾಗಿತ್ತು. “ಮುಂಗಾರು ಮಳೆ”ಯ “ಪ್ರೀತಿ ಮಧುರ, ತ್ಯಾಗ ಅಮರ” ಸಂದೇಶಕ್ಕೆ ನನ್ನ ಕಥೆ ಬಹಳ ಹೋಲುತ್ತಿತ್ತು. ಇರಲಿಬಿಡಿ. ಅದೇ ಕಥೆಯನ್ನು ಹೊಸ ರೀತಿಯ ನಿರೂಪಣೆಯಲ್ಲಿ ಸದ್ಯದಲ್ಲೆ ಬರೆದು ನಿಮ್ಮ ಕೈಗೆ ಇಡುತ್ತೇನೆ, ಆಗಲಾದರೂ ನಂಬುವಿರಂತೆ. ನನ್ನ ಬರವಣಿಗೆಗೆ ಮತ್ತೊಂದು ಮುಖ್ಯ ತೊಡರುಗಾಲು ಎದುರಾದದ್ದು ಬಡತನ. ಇದಕ್ಕೆ ಪೂರಕವಂತೆ, ಹಿರಿಯರೊಬ್ಬರು ನನಗೆ ಚಿಕ್ಕಂದಿನಲ್ಲೇ, ಇದಾಗಲೇ ನನ್ನ ಕವನ ಸಂಕಲನ “ಮಳೆಯಾಗು ನೀ...” ಯ “ನನ್ನ ನುಡಿ” ಯಲ್ಲಿ ನಾನು ಬರೆದು ಕೊಡಿರುವಂತೆ “ಕವಿಯಾದರೆ ಚಿತ್ರಾನ್ನಕೆ ಕಾಸಿರುವುದಿಲ್ಲ” ಎಂಬ ಹೆದರಿದವನ ಮೇಲೆ ಹಗ್ಗವೆಸೆದು, ಹಾವು ಎನ್ನುವ ಮಾತುಗಳು.

ಆದರೆ, ನನ್ನ ಅನಾರೋಗ್ಯದ ದಿನಗಳು ಮತ್ತೊಮ್ಮೆ ನನ್ನನ್ನು ಹೆಚ್ಚು ಓದುವ ಹವ್ಯಾಸಕ್ಕೆ ಮುನ್ನುಡಿಯಾದವು. ಓದುತ್ತಾ ಓದುತ್ತಾ ಬರೆಯುವಂತೆ ನನ್ನ ಮನ ಮತ್ತೆ ಮತ್ತೆ ಪ್ರೇರೆಪಿಸ ತೊಡಗಿತು. ಅದಾಗಲೇ ನಾನು ಕೆಲವು ಕವನಗಳನ್ನು ಬರೆದು ಗೆಳೆಯರ ಮಧ್ಯೆ ಒಬ್ಬ ಕವಿಯೂ ಆಗಿ ಗುರ್ತಿಸಿಕೊಳ್ಳತೊಡಗಿದ್ದು.

ನಾನು ಕೆಲಸ ಮಾಡುತ್ತಿದ್ದ ಶಾಲೆಯ ವಾರ್ಷಿಕ ಸಂಚಿಕೆಗೆ ಹಲವು ಲೇಖನಗಳನ್ನು ಬರೆದಾದ ಮೇಲೆ, ಮತ್ತೆನಾದರೂ ಹೊಸದಾಗಿ ಬರೆಯಬೇಕೆಂದು ಕೊಂಡವನು, ಬಿಡುವು ಸಿಕ್ಕಾಗಲೆಲ್ಲಾ ಅನಿಸಿದ್ದನ್ನು ಬರೆದು ಸುಮ್ಮನಾಗಿಬಿಡುತ್ತಿದ್ದೆ. ಅವುಗಳಿಗೆಲ್ಲಾ ಸೂಕ್ತವಾದ ವೇದಿಕೆ ಸಿಗದೆ, ಕೂತಲ್ಲೇ ತೂಕಡಿಸುತ್ತಿದ್ದವು. ಮತ್ತಷ್ಟು ಹೊಸದನ್ನು ಬರೆಯಲು ಮನಸ್ಸಿದ್ದರೂ, ಬರೆದು ಏನು ಮಾಡಬೇಕೆಂದು ಉಡಾಫೆ ಮಾಡುತ್ತಾ ಸುಮ್ಮನಿರುತ್ತಿದೆ.

ಆಗ ನೋಡಿ ಪರಿಚಿತವಾಯಿತು “ಬ್ಲಾಗ್ ಲೋಕ.” ಈ ಲೋಕವನ್ನು ಮೊದಲು ಪರಿಚಯಿಸಿದ್ದು ನನ್ನ ಗೆಳೆಯ-ಗುರು ಬಿ.ಮೃತ್ಯುಂಜಯ. ಅವರನ್ನು ನಾ ಪ್ರೀತಿಯಿಂದ “ಅರ್ಧರಾತ್ರಿಯಲ್ಲಿ ಕಂಪ್ಯೂಟರ್ ಕಲಿಸಿದ ಗುರುವು” ಎಂದೇ ಮನದಲ್ಲೇ ನೆನೆಯುತ್ತೇನೆ. ಸುಮಾರು ಐದು ವರ್ಷದ ಹಿಂದೆ ನಾ ಬರೆದ ಒಂದು ಸಣ್ಣ ಇಂಗ್ಲೀಷ್ ಕಥೆಯನ್ನು ಓದಿ, ಒಂದು ಬ್ಲಾಗ್ ಮಾಡಿ ಹಾಕು ಎಂದಿದ್ದರು. ನಾನು ನಿಧಾನವಾಗಿ ಹಾಕೋಣವೆಂದು ಕೊಂಡು ಉದಾಸೀನ ಮಾಡಿದ್ದೆ. ನಂತರ ಮೂರ್ನಾಲ್ಕು ವರ್ಷದ ಕೆಳಗೆ ಇಂಗ್ಲೀಷ್ನುಲ್ಲಿ ಒಂದು ಬ್ಲಾಗ್ ತೆರೆದು ನನ್ನ ವಿವರಗಳು ಮತ್ತು ಅನಾರೋಗ್ಯದ ಬಗ್ಗೆ ಬರೆದು ಪೋಸ್ಟ್ ಮಾಡಿದೆನಾದರೂ, ಆರು ತಿಂಗಳುಗಳ ಕಾಲ ಅದನ್ಯಾರು ನೋಡಿರುವ ಸಾಧ್ಯತೆಯೇ ಇಲ್ಲ ಎಂಬುದು ಮನದಟ್ಟಾಯಿತು. ಅದಾಗ ಕೆಲವು ಕನ್ನಡದ ಬ್ಲಾಗುಗಳು ಪರಿಚಿತವಾದವು. ಅವುಗಳಲ್ಲಿ ಮುಖ್ಯವಾದವು ಮತ್ತು ನಾನು ಪದೇ ಪದೇ ತೆರೆದು ನೋಡುತ್ತಿದ್ದವು: ಪ್ರಕಾಶ್ ಹೆಗಡೆಯವರ “ಇಟ್ಟಿಗೆ ಸಿಮೆಂಟು”, ಕೆ.ಶಿವುರವರ “ಛಾಯಾ ಕನ್ನಡಿ” ಮತ್ತು ಡಿ.ಜಿ ಮಲ್ಲಿಕಾರ್ಜುನ್ರ್ವರ “ಡಿ.ಜಿ ಮಲ್ಲಿಕಾರ್ಜುನ್‍” ಬ್ಲಾಗುಗಳು.

ಈ ಬ್ಲಾಗುಗಳನ್ನು ಅದೆಷ್ಟು ಬಾರಿ ನೋಡಿಕೊಂಡೆನೋ!? ಓದಿಕೊಂಡೇನೋ!?

ಆ ಸಮಯದಲ್ಲಿ ದುರಾದೃಷ್ಟವಶಾತ್ ಮತ್ತೆ ಹಾಸಿಗೆ ಹಿಡಿದಾಗ, ನಾಗತಿಹಳ್ಳಿಯ ಚಿತ್ರಕಥಾ ಶಿಬಿರದಲ್ಲಿ ಪರಿಚಿತವಾದ ಕೆಲವು ಅಮೂಲ್ಯ ಗೆಳೆಯರಲ್ಲಿ ಒಬ್ಬರಾದ ಅಜಿತ್ ಕೌಂಡಿನ್ಯ ಕೊರಿಯರ್ ಮುಖಾಂತರ ಪ್ರೀತಿಯಿಂದ, ಪ್ರಕಾಶ್ ಹೆಗಡೆಯವರ “ಇಟ್ಟಿಗೆ ಸಿಮೆಂಟು” ಮತ್ತು ಕೆ. ಶಿವುರವರ “ವೆಂಡರ್ ಕಣ್ಣು” ಪುಸ್ತಕಗಳನ್ನು ಕಳುಹಿಸಿದ್ದರು. ಆ ಪುಸ್ತಕಗಳನ್ನು ಓದಿ ಆನಂದಿಸಿದೆ. ಈ ಸಮಯದಲ್ಲಿ ನಾಗತಿಹಳ್ಳಿಯ ಶಿಬಿರದ ಮೊದಲ ಗೆಳೆಯ ಹುಬ್ಬಳ್ಳಿಯ ಕಾದಂಬರಿಕಾರ ರಾಜುಗಡ್ಡಿ ತನ್ನ ಎರಡನೇ ಕಾದಂಬರಿ “ಒಂದು ನೂರು ರೂಪಾಯಿಗಳು” ವನ್ನು ಕಳುಹಿಸಿದ್ದರು. ಇವುಗಳ ಜೊತೆಗೆ ಹಲವು ಪುಸ್ತಕಗಳು ನನ್ನ ಸಂಗಾತಿಯಾಗಿ ಮತ್ತೆ ಮತ್ತೆ ನನ್ನನ್ನು ಬರೆಯಲು ಪ್ರೇರೆಪಿಸತೊಡಗಿದವು. (ಗಮನಿಸಿ: ಶಿಶುವಿನಹಳ್ಳಿಯ ಮನೆಯಲ್ಲಿ ಕುಳಿತು ಬರೆಯುವ, ವೃತ್ತಿಯಲ್ಲಿ ಕೆಪಿಟಿಸಿಲ್ ಮೀಟರ್ ರೀಡರ್ ಆಗಿರುವ ರಾಜುಗಡ್ಡಿಯ ಈ ಪುಸ್ತಕದ ಎಲ್ಲಾ ಪ್ರತಿಗಳು ಬಿಡುಗಡೆಯಾದ ಒಂದೇ ವರ್ಷದಲ್ಲಿ ಮಾರಾಟವಾಗಿವೆ. ಇವರು ಇದುವರೆವಿಗೂ ಮೂರು ಕಾದಂಬರಿಗಳನ್ನು ಬರೆದಿದ್ದಾರೆ)

ಆಗ ನೋಡಿ ಬ್ಲಾಗ್ ಶುರುಮಾಡಬೇಕೆಂಬ ಹಂಬಲ ಮತ್ತೆ ಶುರುವಾಯಿತು. ಕಂಪ್ಯೂಟರ್ ಶಿಕ್ಷಕನಾದರೂ ಬ್ಲಾಗ್ ರೂಪಿಸಲು ತುಸು ಕಷ್ಟವೇ ಆಯಿತು. ಆ ಸಮಯದಲ್ಲಿ ಅಜಿತ್ ಕೌಂಡಿನ್ಯ ನನ್ನ “nallanalle.blogspot.com” ರೂಪಿಸಲು ದೂರದ ಶಿಡ್ಲಘಟ್ಟದಲ್ಲಿಯೇ ಕುಳಿತು ಸಹಕರಿಸಿದರು. ಅಲ್ಲಿಗೆ ೨೦೧೦ ರ ಆಗಸ್ಟ್ ನಲ್ಲಿ ನನ್ನ ಬ್ಲಾಗ್ ಶುರುವಾಯಿತು. ಮೊದಲ ಪೋಸ್ಟ್ ಆಗಿ “ಸ್ನೇಹ ಮಾಡಬೇಕಿಂಥವಳಾ...” ಲೇಖನ ಪ್ರಕಟವಾಯಿತು. ಈ ಸಂತೋಷವನ್ನು ನನ್ನ ಈಮೈಲಿನ ಎಲ್ಲಾ ಗೆಳೆಯರಿಗೆ ಮೈಲ್ ಮಾಡಿದೆ. ಜೊತೆಗೆ ಬ್ಲಾಗ್ ಲೋಕದ ಸಚಿನ್ ತೆಂಡಲ್ಕೂರ್ ಪ್ರಕಾಶಣ್ಣನ ಮೊಬೈಲ್ ಗೆ ಪೋನ್ ಮಾಡಿ ಹೇಳಿದೆ. ಅವರು ಪ್ರೀತಿಯಿಂದ ನನ್ನ ಬ್ಲಾಗ್ ನ ಬಗ್ಗೆ ತಮ್ಮ ಗೆಳೆಯರಿಗೆಲ್ಲಾ ಪರಿಚಯಿತ್ತೇನೆ ಎಂದು ಹೇಳಿ ನನ್ನ ಬ್ಲಾಗಿಗೆ ತಮ್ಮ ಹಲವು ಗೆಳೆಯರನ್ನು ಪರಿಚಯಿಸಿದರು. ಮತ್ತೆ ನನ್ನ ಗುರುಗಳೇ ಮೊದಲ ಕಾಮೆಂಟ್ ಹಾಕುವ ಮೂಲಕ ಶುಭ ಹಾರೈಸಿದರು. ಹೀಗೆಯೇ ಮುಂದುವರೆದು ಬ್ಲಾಗ್ ಲೋಕದ ಮೂಲಕ ಹಲವು ಬ್ಲಾಗಿಗರು ಗೆಳೆಯರಾದರು.

ಈ ಮಧ್ಯೆ ನನ್ನ ಮೊದಲ ಪುಸ್ತಕ “ಮಳೆಯಾಗು ನೀ...” ಕವನ ಸಂಕಲನ ಪ್ರಕಟವಾಯಿತು.

ನಾ ಬ್ಲಾಗ್ ಶುರುಮಾಡುವ ಸಮಯದಲ್ಲಿ ಅಜಿತ್ ಹೇಳಿದ್ದರು, “ಸರ್, “ಅವಧಿ” ಯಲ್ಲಿ ನಿಮ್ಮ ಲೇಖನ ಬಂದರೆ ಚೆನ್ನಾಗಿರುತ್ತೆ. ಅವರು ಗಮನಿಸುತ್ತಾ ಇರ್ತಾರೆ.” ಎಂದು. ಇತ್ತೀಚಿಗೆ “ಗಾಳಿಪಟದ ಬಾಲ ಎನ್ನ ಮನ” ಎಂಬ ಲೇಖನ “ಅವಧಿ”ಯಲ್ಲಿ ಪ್ರಕಟವಾಯಿತು. ಈ ಲೇಖನಕ್ಕೆ ಒಂದು ಪ್ರಶಸ್ತಿಯೂ ಬಂತು (ಸಾಹಿತ್ಯದಲ್ಲಿ ನನಗೆ ಮೊದಲ ಬಹುಮಾನ). ತುಂಬಾ ಖುಷಿಯಾಯಿತು.

ಆದರೆ, ತದನಂತರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿ ಬ್ಲಾಗ್ ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಗುತ್ತಿಲ್ಲ. ಹಲವು ಗೆಳೆಯರ ಬ್ಲಾಗ್ ಗಳನ್ನೂ ಓದಲಾಗುತ್ತಿಲ್ಲ. ಈ ಸಮಯದಲ್ಲಿ ಸದ್ದಿಲ್ಲದೆ ನನ್ನ ಬ್ಲಾಗಿಗೆ ಒಂದು ವರ್ಷವಾಯಿತು. ಈ ಸಂತೋಷವನ್ನು ನಿಮ್ಮಲ್ಲಿ ಹೇಳಿಕೊಳ್ಳದೆ ಇರಲಾಗುತ್ತಿಲ್ಲ. ನಿಮಗೆಲ್ಲರಿಗೂ ನನ್ನ ವಂದನೆಗಳು.

ಮತ್ತೆ ಈ ಲೋಕದಲ್ಲಿ ಸಕ್ರಿಯವಾಗಿರುತ್ತೇನೆ ಎಂಬ ಭರವಸೆಯೊಂದಿಗೆ,

ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.

ಶನಿವಾರ, ಆಗಸ್ಟ್ 6, 2011

“ಜೀವನದಲ್ಲಿ ಸ್ನೇಹಿತರಲ್ಲ. ಸ್ನೇಹಿತರಿಂದಲೇ ಜೀವನ”

ಗೆಳೆತನ ಕುರಿತ
ಕನ್ನಡದ ಕೆಲವು ಸಾಲುಗಳು :

“ಜೀವನದಲ್ಲಿ ಸ್ನೇಹಿತರಲ್ಲ. ಸ್ನೇಹಿತರಿಂದಲೇ ಜೀವನ”
                  - ಗೆಳೆಯನೊಬ್ಬನ ಡೈರಿಯ ಮೊದಲ ಪುಟದಿಂದ.
                    (ನನ್ನ ಜೀವನಕ್ಕೆ ಹೆಚ್ಚು ಅನ್ವಯ)

“ನೀ ಹುಟ್ಟಿದಾಗ ಧಾರಾಕಾರ ಮಳೆ ಬೀಳುತ್ತಿತ್ತು.
ಯಾಕಂತ ಗೊತ್ತಾ?
ನಕ್ಷತ್ರವೊಂದನ್ನು ಕಳಿಸಿಕೊಡುವಾಗ ಬಾನು ಅಳುತ್ತಿತ್ತು.
ಸುಂದರ ನಕ್ಷತ್ರವೊಂದರ ಸ್ನೇಹ ಪಡೆದ ನಾನು ಅದೃಷ್ಟಶಾಲಿ.”
                   - ಬರೆದವರು ಗೊತ್ತಿಲ್ಲ.

“ಗೆಳೆತನವೆಂಬುದು ಆಶ್ರಯ ನೀಡುವ ಒಂದು ಬೃಹತ್ ವೃಕ್ಷ”
                   - ಸ್ಯಾಮ್ಯುಯಲ್ ಟೇಲರ್ ಕೋಲರಿಜ್.

“ನಾವು ಆಡುವ ಮಾತು ಹೀಗಿರಲಿ ಗೆಳೆಯಾ, ಮೃದುವಚನ
ಮೂರ್ಲೋಕ ಗೆಲ್ಲುವುದು ತಿಳಿಯಾ, ಮೌನ ಮೊಗ್ಗೆಯನೊಡೆದು
ಮಾತರಳಿ ಬರಲಿ. ಮೂರು ದಿನಗಳ ಬಾಳು ಘಮಘಮಿಸುತಿರಲಿ”
                    - ಚೆನ್ನವೀರ ಕಣವಿ.

ನನ್ನವೆರಡು :

“ನನಗೆ ದೇವರ ಮೇಲೆ ನಂಬಿಕೆಯಿದೆ. ಏಕೆಂದರೆ?
ನಾನು ದೇವರನ್ನು ಗೆಳೆಯರ ರೂಪದಲ್ಲಿ ನೋಡಿದ್ದೇನೆ”
                    - ಗುಬ್ಬಚ್ಚಿ ಸತೀಶ್.

“ನನ್ನೆಲ್ಲಾ ನೋವುಗಳನ್ನು ನೆನೆದು ಇನ್ನೇನು ಅಳಬೇಕು,
ಅಷ್ಟರಲ್ಲಿ ಅದ್ಯಾವ ಮಾಯೆಯಲ್ಲಿ ಬಂದರೋ ಗೆಳೆಯರು!
ಕಚಗುಳಿಯಿಟ್ಟು ನನ್ನನ್ನು ಮನ ತುಂಬಾ ನಗಿಸಿದರು.
ಬಂದ ದಾರಿಗೆ ಸುಂಕವಿಲ್ಲವೆಂದು ಅಳುವು ಕೊರಗಿ ಸತ್ತಿತು”.
                    - ಗುಬ್ಬಚ್ಚಿ ಸತೀಶ್.

ಇಂಗ್ಲಿಷಿನವೆರಡು :

“Come, fair friend.
  you never can
  be old
  for as you were
  when first your
  eyes eyed
  such is your beauty still.”
        - Shakespeare

“Friends are the most important
  ingredient in this recipe of life.”
        - Writer Unknown.


“MY FRIENDS, WISH YOU ALL HAPPY FRIENDSHIP DAY”













ಸೋಮವಾರ, ಜುಲೈ 4, 2011

ಗಾಳಿಪಟದ ಬಾಲ ಎನ್ನ ಮನ.

“ಚಿಕ್ಕವಸ್ತುಗಳನ್ನು ಕಡೆಗಣಿಸಬೇಡಿ, ಗಾಳಿಪಟ ಹಾರುವುದು ಅದರ ಬಾಲದಿಂದಲೇ”.
                                                                                    - ಹವೈನ್ ಗಾದೆ.

ಆಷಾಢವೆಂಬ ಗಾಳಿಮಾಸ ಶುರುವಾಗುತ್ತಿರುವ ಮುನ್ಸೂಚನೆ ನಮಗೆಲ್ಲಾ ಸ್ವಲ್ಪ ದಿನಗಳ ಮುಂಚೆಯೇ ಸಿಗುತ್ತಿತ್ತು. ಶಾಲೆಯಿಂದ ಹೊರಟಾಗಲೇ ಸುಯ್ ಎಂದು ಬೀಸುತ್ತಿದ್ದ ಗಾಳಿ ನಮ್ಮನ್ನೆಲ್ಲಾ ಒಂದೇ ಬಾರಿ ಮನೆಯ ಹತ್ತಿರಕ್ಕೆ ಹೊತ್ತಯ್ಯಬಾರದೇ ಎಂಬ ಆಸೆ ಇಣುಕುತ್ತಿತ್ತು. ಮೋಡ ಕವಿದ ವಾತಾವರಣ, ಇದ್ದಕ್ಕಿದ್ದಂತೆ ಯಾವ ಆರ್ಭಟವೂ ಇಲ್ಲದೆ ಸುರಿಯುತ್ತಿದ್ದ ಮಳೆ, ದೇಹ ಮತ್ತು ಮನಸ್ಸು ಎರಡನ್ನೂ ತಂಪಾಗಿಸುತ್ತಿದ್ದ ತಂಗಾಳಿ ಬೆಚ್ಚನೆಯ ಮುದ ಕೊಡುತ್ತಿತ್ತು.

ಆ ದಿನಗಳಲ್ಲಿ ಶನಿವಾರದ ಮಾರ್ನಿಂಗ್ ಸ್ಕೂಲ್ ಮುಗಿಸಿಕೊಂಡು ನಾವೊಂದಷ್ಟು ಹುಡುಗರು ಮನೆಯಲ್ಲಿ ಕೊಟ್ಟ ಎನನ್ನಾದರೂ ತಿಂಡಿಯನ್ನು ತಿಂದುಕೊಂಡು ಮಧ್ಯಾಹ್ನದ ಹೊತ್ತಿಗೆ ನನ್ನ ಗುಬ್ಬಿ ಮನೆಯ ಎದುರಿಗಿದ್ದ ಹಿಟ್ಟಿನ ಗಿರಣಿಯ ಮಾಲೀಕರಾದ ಆದಿರಾಜುರವರಿಗೆ “ಆದಣ್ಣ...ಆದಪ್ಪಜ್ಜಿ...ಗಾಳಿಪಟ ಮಾಡಿಕೊಡಿ” ಎಂದು ದಂಬಾಲು ಬೀಳುತ್ತಿದ್ದೆವು. ನಮ್ಮ ಗುಂಪಿನ ಹುಡುಗರು ಅಷ್ಟೇನು ಸ್ಥಿತಿವಂತರಲ್ಲದ ಕಾರಣ ಸೇಠು ಅಂಗಡಿಗಳಲ್ಲಿ ಸಿಗುತ್ತಿದ್ದ ರೆಡಿಮೇಡ್ ಗಾಳಿಪಟವನ್ನು ಕೊಂಡುಕೊಳ್ಳಲು ಹಣವಿರುತ್ತಿರಲಿಲ್ಲ, ನಾವೆಲ್ಲಾ ಪ್ರೀತಿಯಿಂದ ಆದಣ್ಣನ ಕೈಹಿಡಿದು ಜಗ್ಗತೊಡಗಿದರೆ ಅವರೆಂದೂ ಇಲ್ಲ ಎಂದದ್ದೇ ಇಲ್ಲ. “ಬರ್ತೀನಿ ಕೈ ಬಿಡಿ” ಎಂದು ಬೀದಿಯ ಯಾವುದಾದರೊಂದು ಮನೆಯ ವಿಶಾಲವಾದ ಜಗುಲಿಯಲ್ಲಿ ಆಸೀನರಾಗುತ್ತಿದ್ದರು. “ಏಯ್, ನೀನ್ ಹೋಗಿ ಮನೇಲಿ ಹೊಗೆಸೊಪ್ಪಿನ ಡಬ್ಬ ತೆಗೆದುಕೊಂಡು ಬಾ” ಅಂತಿದ್ರು. ಅವರು ಯಾರಿಗೆ ಹೇಳುವರೋ ಅವರು ಮೊದಲೇ ಇವರ ಆಣತಿಗೆ ಕಾಯ್ಯುತ್ತಿದ್ದವರಂತೆ ರೊಯ್ ಅಂತಾ ಹೋಗಿ ರೊಯ್ ಅಂತ ಬಂದು ಬುಸುಗುಡುತ್ತಾ ಹೊಗೆಸೊಪ್ಪಿನ ಡಬ್ಬವನ್ನು ಅವರ ಮುಂದೆ ಇಡುತ್ತಿದ್ದರು. ಡಬ್ಬದಿಂದ ಹೊಗೆಸೊಪ್ಪನ್ನು ಎಲೆ ಅಡಿಕೆಯ ಜೊತೆ ಬೆರೆಸಿ ಬಾಯಿಗಿಡುತ್ತಾ “ಯಾರ್ಯಾರಿಗೆ ಗಾಳಿಪಟ ಬೇಕೋ ಅವರು ನ್ಯೂಸ್ ಪೇಪರ್ರು, ಗರಿ ಕಡ್ಡಿ, ದಾರ ಮತ್ತು ಸ್ವಲ್ಪ ಗೊಂದು ತಗೊಂಡು ಬನ್ನಿ” ಎನ್ನುತ್ತಿದ್ದರು. ಕೆಲವರು ಮೊದಲೇ ಇವುಗಳನ್ನೆಲ್ಲಾ ತಂದಿರಿಸಿಕೊಂಡು “ನಂಗೆ ಮೊದ್ಲು ಮಾಡಿ ಕೊಡಿ” ಎಂದು ವಿನಂತಿಸುತ್ತಿದ್ದರು. ಬೇಕಾದ ವಸ್ತುಗಳನ್ನು ತರದವರು ಮತ್ತೆ ಮನೆಯಕಡೆ ಓಡುತ್ತಿದ್ದರು. “ಆದಣ್ಣ” ಅಂದರೂ ಆಯ್ತು ಅಥವಾ “ಆದಪ್ಪಜ್ಜಿ” ಎಂದರೂ ಸರಿಯೇ ನಗುನಗುತ್ತಲೇ ಗಾಳಿಪಟ ಮಾಡಲು ಶುರುಮಾಡುತ್ತಿದ್ದರು.

ತಮ್ಮ ಹೊಗೆಸೊಪ್ಪಿನ ಡಬ್ಬದಲ್ಲೇ ಇರುತ್ತಿದ್ದ ಕೆಲವು ಉಪಕರಣಗಳಲ್ಲಿ ಒಂದಾದ ಕತ್ತರಿಯನ್ನು ತೆಗೆದು ಚಕಚಕನೆ ಪೇಪರ್ ಕಟ್ ಮಾಡಿಕೊಂಡು, ಗರಿಕಡ್ಡಿಯನ್ನು ಅಳೆತೆಗೆ ತಕ್ಕಂತೆ ಮುರಿದುಕೊಂಡು, ಡೈಮಂಡ್ ವಿನ್ಯಾಸಕ್ಕೆ ಕಟ್ಟಿ ಅದನ್ನು ಪೇಪರಿಗೆ ಅಂಟಿಸಿ, ಒಣಗಿದ ಕೂಡಲೇ ಸ್ವಲ್ಪ ದಾರವನ್ನು ಕಟ್ಟಿ, ಬಾಲಂಗೋಚಿಯನ್ನು ಕಟ್ಟಿ, ಕೈಯಲ್ಲಿಡಿದು, ಮೇಲಕ್ಕೆತ್ತಿ ಸರಿಯಾಯಿತೇ ಎಂದು ಪರೀಕ್ಷಿಸಿ ನೋಡುತ್ತಿದ್ದರು. “ಸ್ವಲ್ಪ ವ್ಯತ್ಯಾಸವಾದರೂ ಲಾಗ ಹಾಕ್ಬುಡುತ್ತೆ” ಎಂದು ನಗುತ್ತಿದ್ದರು. ಅವರ ಈ ಮಾತುಗಳು ಜೀವನಕ್ಕೂ ಅನ್ವಯಿಸುತ್ತವೆ ಎಂಬುದು ನಮಗೆಲ್ಲಾ ದೊಡ್ಡವರಾದ ಮೇಲೆಯೇ ತಿಳಿದದ್ದು. “ಜೀವನವೇ ಗಾಳಿಪಟವೆಂದುಕೊಂಡರೇ, ಮನಸ್ಸು ಅದರ ಬಾಲವಲ್ಲದೇ ಮತ್ತೇನು? ಮನಸ್ಸೆಂಬ ಬಾಲವಿದ್ದರೆ ಜೀವನವೆಂಬ ಗಾಳಿಪಟವನ್ನು ಎತ್ತರೆತ್ತರಕ್ಕೆ ಕರೆದೊಯ್ಯಬಲ್ಲದು ಅಲ್ಲವೇ?”

ಸರಿ, ಸಿದ್ದವಾದ ಗಾಳಿಪಟವನ್ನು “ಎಲ್ಲಿ ಒಂದು ರೌಂಡ್ ಹೋಗ್ಬ” ಎಂದೊಡನೆ ಗಾಳಿಪಟ ಮಾಡಿಸಿಕೊಂಡವನು ಅದನ್ನು ತೆಗೆದುಕೊಂಡು ಅಲ್ಲೇ ಬೀದಿಯಲ್ಲೆ ಓಡುತ್ತಿದ್ದನು. ಮನೆಗಳ ಹತ್ತಿರ ಬೀಸುತ್ತಿದ್ದ ಗಾಳಿ ಗಾಳಿಪಟ ಹಾರಿಸಲು ಸೂಕ್ತವಲ್ಲದಿದ್ದರೂ ಅದನ್ನು ಪರಿಕ್ಷೀಸುವ ಸಲುವಾಗಿ ಹಿಂದಕ್ಕೆ ನೋಡಿಕೊಂಡೇ ಓಡುತ್ತಿದ್ದ ಹುಡುಗನ ವೇಗಕ್ಕೆ ತಕ್ಕಂತೆ ಹಾರುತ್ತಿತ್ತು. ಒಂದು ರೌಂಡ್ ಬಂದ ಮೇಲೆ ಕುಳಿತಲ್ಲಿಂದಲೇ ಗಮನಿಸುತ್ತಿದ್ದ ಆದಣ್ಣನವರು ಗಾಳಿಪಟ ಸರಿಯಿದಯೇ ಇಲ್ಲವೇ ಎಂದು ಹೇಳಿ ಆಕಸ್ಮಾತ್ತೆನಾದರೂ ತೊಂದರೆ ಕಂಡರೆ ಅದನ್ನು ಸರಿ ಮಾಡುತ್ತಿದ್ದರು.

ಹೀಗೆಯೇ ನಾಲ್ಕೈದು ಗಾಳಿಪಟವನ್ನು ನಮಗೆಲ್ಲರಿಗೂ ಮಾಡಿಕೊಟ್ಟು, “ಹೋಗಿ ಹೈಸ್ಕೂಲ್ ಫೀಲ್ಡಿನಲ್ಲಿ ಹಾರಿಸಿ. ಹುಷಾರು...ಲೈಟ್ ಕಂಬದ ಹತ್ತಿರ, ಮರದ ಹತ್ತಿರ ಹಾರಿಸಬೇಡಿ” ಎಂದು ಎಚ್ಚರಿಸುತ್ತಿದ್ದರು. ಅವರವರ ಶಕ್ತ್ಯಾನುಸಾರ ಉದ್ದವಿರುತ್ತಿದ್ದ ದಾರವನ್ನು ಬಿದಿರು ಕಡ್ಡಿಗೋ, ಸರ್ವೆಕಡ್ಡಿಗೋ ಸುತ್ತಿಕೊಂಡು ನಾವೆಲ್ಲರು ಫೀಲ್ಡಿಗೆ ಹೋಗುತ್ತಿದ್ದೆವು. ದಾರವಿಲ್ಲದವರಿಗೆ ವಾಪಸ್ಸು ಕೊಡಬೇಕೆಂದು ಹೇಳಿ ಅವರ ಬಳಿ ಇರುತ್ತಿದ್ದ ದಾರವನ್ನು ಕೊಡುತ್ತಿದ್ದರು ನಮ್ಮೆಲ್ಲರ ಪ್ರೀತಿಯ ಆದಪ್ಪಾಜಿ. ನಾವೆಲ್ಲರೂ ಹಳೆಯ ನ್ಯೂಸ್ ಪೇಪರ್ಗಳಲ್ಲೇ ಗಾಳಿಪಟವನ್ನು ಮಾಡಿಸಿಕೊಳ್ಳುತ್ತಿದ್ದರಿಂದ ಮತ್ತು ಗೊಂದೇನಾದರೂ ಬೇಕೆಂದರೆ ನಮ್ಮ ಮನೆಯಲ್ಲಿ ಪೇಪರ್ ಕವರ್‍ಗಳನ್ನು ಮಾಡಲು ಸದಾ ಸಿದ್ದವಿರುತ್ತಿದ್ದ ಮೈದಾ ಹಿಟ್ಟಿನ ಅಂಟನ್ನು ಕೊಡುತ್ತಿದ್ದರಿಂದ ಮತ್ತು ಮುಖ್ಯವಾಗಿ ಗಾಳಿಪಟವನ್ನು ತಯಾರು ಮಾಡಲು ಆದಣ್ಣನವರು ಹಣವನ್ನು ತೆಗೆದುಕೊಳ್ಳುತ್ತಿರಲಿಲ್ಲವಾದ್ದರಿಂದ ಖರ್ಚೇನು ಇರುತ್ತಿರಲ್ಲಿಲ್ಲ. ಆದರೆ, ಯಾರಿಗಾದರೂ ಬಣ್ಣದ ಗಾಳಿಪಟ ಬೇಕಿದ್ದರೆ ಅವರು ಬಣ್ಣದ ಪೇಪರ್ ತಂದುಕೊಡಬೇಕಿತ್ತು ಮತ್ತು ಆದಪ್ಪಾಜಿಗೆ ಎಲೆ ಅಡಿಕೆಯನ್ನೊ, ಹೊಗೆಸೊಪ್ಪನ್ನೊ ತಂದುಕೊಡಬೇಕಿತ್ತು. ಹಣವನ್ನು ಮಾತ್ರ ಯಾವುದೇ ಕಾರಣಕ್ಕೂ ತೆಗೆದುಕೊಳ್ಳುತ್ತಿರಲಿಲ್ಲ.

ಗಾಳಿಪಟವನ್ನು ಹಿಡಿದು ನಾವೆಲ್ಲರೂ ಹೈಸ್ಕೂಲ್ ಫೀಲ್ಡಿಗೆ ಲಗ್ಗೆ ಹಾಕುತ್ತಿದ್ದೆವು. ವಿಶಾಲವಾದ ಗುಬ್ಬಿ ಮೈದಾನದಲ್ಲಿ ಅದಾಗಲೇ ಕೆಲವು ಗಾಳಿಪಟ ಪ್ರೇಮಿಗಳು ಗಾಳಿಪಟ ಆರಿಸುವುದರಲ್ಲಿ ಮಗ್ನರಾಗಿರುತ್ತಿದ್ದರು. ನಾವೆಲ್ಲರು ನಮ್ಮ ನಮ್ಮ ಗಾಳಿಪಟವನ್ನು ಮೈದಾನಕ್ಕಿಂತ ವಿಶಾಲವಾದ ಆಕಾಶಕ್ಕೆ ಹಾರಿಬಿಡುತ್ತೆದ್ದೆವು. ಅವುಗಳು ಮೇಲೆ ಮೇಲೆ ಹೋಗುತ್ತಿದ್ದಂತೆ ನಮ್ಮ ಹರ್ಷವೂ ಮುಗಿಲು ಮುಟ್ಟುತ್ತಿತ್ತು. ಸಂಜೆಯಾಗುವಷ್ಟರಲ್ಲಿ ಮನಸಿಲ್ಲದಿದ್ದರೂ ಮುಷ್ಟಿಯಲ್ಲಿಡಿದ ಖುಷಿಯನ್ನು ಹೊತ್ತು ಮನೆಗೆ ತೆರಳುತ್ತಿದ್ದೆವು. ಹೇಗಿದ್ದರೂ ನಾಳೆ ಭಾನುವಾರ! ಎಂಬ ಸಮಾಧಾನ ಜೊತೆಗಿರುತ್ತಿತ್ತು.

ಆಷಾಢ ಮುಗಿಯುವವರೆಗೂ ಡಬ್ಬಗಳಲ್ಲೇ ದುಃಖಿಸುತ್ತಿದ್ದ ಗೋಲಿಗಳು, ಮಂಚದ ಕೆಳಗೆ ಯಾವುದೋ ಮೂಲೆಯಲ್ಲಿ ನರಳುತ್ತಿದ್ದ ಲಗೋರಿ ಬಾಲು, ಕ್ರಿಕೆಟ್ ಬ್ಯಾಟುಗಳು ಗಾಳಿಪಟವನ್ನು ನೋಡಿ ಹೊಟ್ಟೆ ಉರಿದುಕೊಂಡಿರಲು ಸಾಕು. ಅದೇಕೋ, ನಾವೆಲ್ಲ ಇನ್ನೇನು ಹೈಸ್ಕೂಲಿಗೆ ಕಾಲಿಟ್ಟಾಗ ಅದ್ಯಾವ ಗಾಳಿ ಬೀಸಿತೋ ಗಾಳಿಪಟಗಳೆಲ್ಲಾ ಅಟ್ಟ ಸೇರಿದವು. ನಮ್ಮ ಪ್ರೀತಿಯ ಆದಣ್ಣನವರ ಸುತ್ತ ಆಷಾಢಗಳಲ್ಲಿ ನಮಗಿಂತಲೂ ಕಿರಿಯ ಹುಡಗರು ಸೇರತೊಡಗಿದರು.

ನಾನೂ ಕೆಲವು ಕಿರಿಯರಿಗೆ ಗಾಳಿಪಟ ಮಾಡಿಕೊಡಲು ಪ್ರಯತ್ನಿಸಿದ್ದೆನಾದರೂ, ಆದಣ್ಣನವರಂತೆ ಯಶಸ್ವಿಯಾಗಿರಲಿಲ್ಲ. ಆದರೆ, ಆಷಾಢದ ಬಾಲ್ಯದ ದಿನಗಳಲ್ಲಿ ಗಾಳಿಪಟವೆಂಬ ಒಂದು ಆಕರ್ಷಣೆಗೆ ಬಾಲವಾಗಿದ್ದ ನನ್ನ ಮನ ಇದೀಗ ಗಾಳಿಪಟವೆಂದರೆ, “ಜೀವನವೇ ಒಂದು ಗಾಳಿಪಟ” ಎಂಬ ತತ್ತ್ವ ಹೇಳಲು ಶುರುಮಾಡುತ್ತದೆ.

ಹೀಗೆಲ್ಲಾ ಗಾಳಿಪಟದ ಬಗ್ಗೆ ಚಿಂತಿಸಿ ಅದರ ಬಗ್ಗೆ ತಿಳಿದುಕೊಳ್ಳಲು ಗೂಗಲಿಸಿದಾಗ ಒಂದು ಪುಸ್ತಕವೇ ಆಗಬಹುದಾದಷ್ಟು ಮಾಹಿತಿ ಅಂತರ್ಜಾಲದಲ್ಲಿ ಸಿಕ್ಕಿತ್ತಾದರೂ ಅದರಲ್ಲಿ ನನ್ನ ಭಾವನಗಳೇ ಇರಲಿಲ್ಲ. ಯಾವತ್ತಾದರೂ ಒಂದು ದಿನ ನನ್ನ ಮತ್ತು ಗಾಳಿಪಟದ ನಂಟು ವಿಕಿಪೀಡಿಯಾದಲ್ಲಿ ಸೇರುತ್ತದೇನೋ ಎಂಬ ನನ್ನನೆಂದೂ ಕೈಬಿಡದ ನನ್ನ ಆತ್ಮವಿಶ್ವಾಸ ಮನದಲ್ಲಿ ಕನಸೊಂದನ್ನು ಮೂಡಿಸುತ್ತಿದೆ. ಅದನ್ನು ನಿಮ್ಮಲ್ಲಿ ಹೇಳಿಯೇ ಬಿಡುತ್ತೇನೆ. ಅಷ್ಟಕ್ಕೂ ನಿಮ್ಮಲಲ್ಲದೆ ಇನ್ಯಾರಲ್ಲಿ ನನ್ನ ಕನಸನ್ನು ಹಂಚಿಕೊಳ್ಳಲಿ!

ಸಮುದ್ರ ತೀರ ಗಾಳಿಪಟ ಹಾರಿಸಲು ಸೂಕ್ತ ಸ್ಥಳವಂತೆ!, ಕೊರಿಯದಲ್ಲಿ ಗಂಡು ಮಕ್ಕಳ ಹೆಸರು ಮತ್ತು ಜನ್ಮ ದಿನಾಂಕವನ್ನು ಗಾಳಿಪಟದ ಮೇಲೆ ಬರೆದು, ಅದನ್ನು ಹಾರಿಸಿ, ನಂತರ ದಾರವನ್ನು ಕತ್ತರಿಸಿ ಗಾಳಿಪಟದೊಡನೆ ಎಲ್ಲ ದುಷ್ಟಶಕ್ತಿಗಳು ಹೊರಟುಹೋಗಲಿ, ಮಗುವಿಗೆ ಒಳ್ಳೆಯದಾಗಲಿ ಎಂಬ ಪದ್ದತಿಯಿದೆಯಂತೆ! ಮತ್ತು ವಿಯೆಟ್ನಾಂನಲ್ಲಿ ಬಾಲದ ಬದಲಿಗೆ ಸಣ್ಣ ಕೊಳಲನ್ನು ಕಟ್ಟಿ ಗಾಳಿಪಟವನ್ನು ಹಾರಿಸಿ ಕೊಳಲಿನ ನಾದವನ್ನು ಆಲಿಸುತ್ತಾರಂತೆ!

ನಂದೇನಪ್ಪಾ ಕನಸು ಅಂದರೆ : “ಕಲ್ಪನೆಯೇ ಅತಿ ಎತ್ತರಕ್ಕೆ ಹಾರಬಹುದಾದ ಗಾಳಿಪಟ” ಎಂದು ಅಮೆರಿಕದ ನಟಿ ಲೌರೆನ್ ಬಕಲ್ ಹೇಳಿದಂತೆ, ನಾನು ತುಂಬಾ ಇಷ್ಟಪಡುವ ಸ್ಥಳ ಕನ್ಯಾಕುಮಾರಿಯ ಸಮುದ್ರ ತೀರದಲ್ಲಿ, ನನ್ನ ನಲ್ಲೆಯೊಡನೆ, ನಮ್ಮ ಮುದ್ದಿನ ಮಗಳೊಂದಿಗೆ ಅವಳ ಹೆಸರು, ಜನ್ಮದಿನಾಂಕವನ್ನು ಬರೆದು, ಬಾಲದ ಬದಲು ನಮ್ಮ ಮಗಳಷ್ಟೇ ಪುಟ್ಟದಾದ ಕೊಳಲೊಂದನ್ನು ಕಟ್ಟಿ, ಮಕರ ಸಂಕ್ರಾಂತಿಯಂದು ಗಾಳಿಪಟವನ್ನು ಹಾರಿಬಿಡಬೇಕೆಂದು!

ಎಂದಿನಂತೆ ನಿಮ್ಮ ಪ್ರೀತಿಯ ಹಾರೈಕೆಯಿರಲಿ.

                                                                                                             - ಗುಬ್ಬಚ್ಚಿ ಸತೀಶ್.

ಸೋಮವಾರ, ಜೂನ್ 20, 2011

ಉತ್ತೇಜನ (Fueled)

ಉತ್ತೇಜನ

ಇಂಗ್ಲೀಷ್‍ ಮೂಲ : ಮಾರ್ಸಿ ಹ್ಯಾನ್ಸ್
ಕನ್ನಡಕ್ಕೆ : ಗುಬ್ಬಚ್ಚಿ ಸತೀಶ್

ಉತ್ತೇಜನ:
ಸಹಸ್ರಾರು
ಮಾನವ ಕೈಗಳು ನಿರ್ಮಿತ
ಅಗ್ನಿಯ ರೆಕ್ಕೆಗಳಿಂದ
ಆಗಸವ ಸೀಳಿದ ರಾಕೆಟ್ಟು
ಬಾನಿಗೊಂದು ಸುರಂಗ ತೋಡಿತು.
ಎಲ್ಲರೂ ಕೇಕೆಹಾಕಿದರು.

ಉತ್ತೇಜನ:
ಸೃಷ್ಟಿಕರ್ತನ ಆಲೋಚನೆಯೊಂದರಿಂದಲೇ
ಬೀಜಾಂಕುರವು
ಸ್ವಯಂ ಪ್ರೇರಿತವಾಗಿ
ಕತ್ತಲ ಗರ್ಭವನ್ನು ಭೇದಿಸಿ
ಕಠಿಣ ಒಳಮಾಳಿಗೆಯನ್ನು ಛೇದಿಸಿ
ತನ್ನಷ್ಟಕ್ಕೆ ತಾನು ಪಥಕ್ರಮಣ ಆರಂಭಿಸಿ
ಆಕಾಶದತ್ತ ಮುಖಮಾಡಿತು.
ಯಾರೊಬ್ಬರೂ
ಒಂದು
ಸಣ್ಣ ಚಪ್ಪಾಳೆಯನ್ನೂ
ತಟ್ಟಲಿಲ್ಲ.





ಶನಿವಾರ, ಜೂನ್ 11, 2011

ನಿದ್ರಿತ


ಜರ್ಮನ್ ಮೂಲ : ಅರ್ನ್ಸ್ಟ್ ಜಂಡಿ
ಇಂಗ್ಲೀಷ್‍ಗೆ : ಮೈಕೆಲ್ ಹಮ್‍ಬರ್ಗರ್
ಕನ್ನಡಕ್ಕೆ : ಗುಬ್ಬಚ್ಚಿ ಸತೀಶ್


ಅವನು ಮರವೊಂದರ ಬಳಿ ಬಂದ.
ಆ ಮರದಡಿಯಲ್ಲಿ ತನ್ನ ಮನೆ ಕಟ್ಟಿದ.
ಮರದಿಂದಲೇ ಕತ್ತರಿಸಿಕೊಂಡು
ಕೋಲು ಮಾಡಿಕೊಂಡ.
ಕೋಲು ಭರ್ಜಿಯಾಯಿತು.
ಭರ್ಜಿ ಬಂದೂಕಾಯಿತು.
ಬಂದೂಕು ಗನ್ನಾಯಿತು.
ಗನ್ನು ಸಿಡಿಗುಂಡಾಯಿತು.
ಸಿಡಿದ ಸಿಡಿಗುಂಡು ಅವನ ಮನೆಗೇ ಬಡಿಯಿತು
ಮತ್ತು ಮರವನ್ನು ಬೇರುಸಮೇತ ಸೀಳಿಹಾಕಿತು.
ಆಶ್ಚರ್ಯಗೊಂಡ ಅವನು ಅಲ್ಲಿಯೇ ನಿಂತಿದ್ದ.
ಆದರವನು, ಎಚ್ಚರಗೊಳ್ಳಲೇ ಇಲ್ಲ.


(ಈ ಕವನದಲ್ಲಿ, ಜರ್ಮನ್ ಕವಿ ಅರ್ನ್ಸ್ಟ್ ಜಂಡಿ (Ernst Jandi) ಮಾನವ ಸ್ವಾರ್ಥಿ ಎಂದು ಹೇಳುತ್ತಿದ್ದಾರೆ. ತಾನು ಪ್ರಕೃತಿಯನ್ನು ಉಪಯೋಗಿಸುಕೊಳ್ಳುವುದರ ಜೊತೆಗೆ ಹಾಳು ಮಾಡುವ ಮಾನವನ ಸ್ವಾರ್ಥ ಗುಣ ಇಲ್ಲಿ ಮೂಡಿಬಂದಿದೆ. ಕವಿ ಬೇಕೆಂತಲೇ “ನಿದ್ರಿತ” (Asleep) ಎಂಬ ಶೀರ್ಷಿಕೆಯನ್ನು ಕೊಟ್ಟಿರುತ್ತಾರೆ. ಮನುಷ್ಯ ಸದಾಕಾಲ ಕಣ್ಣು ತೆರೆದುಕೊಂಡೇ ನಿದ್ರಿತನಾಗಿರುತ್ತಾನೆ ಮತ್ತು ಕವನದ ಕೊನೆಯಲ್ಲಿ ಅವನು ಎಚ್ಚರಗೊಂಡು ಆಶ್ಚರ್ಯಪಟ್ಟರೂ ಅವನು ಮಾಡಿದ ಅವಾಂತರ ಅವನ ಅರಿವಿಗೆ ಬರುವುದಿಲ್ಲ ಎಂದು ಕವಿ ವಿಶಾದಿಸುತ್ತಾರೆ.)



ಇದು ಭಾರತದ “ಅಮೃತ ಕಾಲ”ವೇ!?

  ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ. ʼಭಾರತ ಬದಲಾಗಿದೆ! ಯಾರದ್ದ...