ಶುಕ್ರವಾರ, ಏಪ್ರಿಲ್ 22, 2011

ಮಳೆಯೆಂದರೆ. . . ಮಳೆಯಾ? ಎಲ್ಲವೂ ಅಸ್ಪಷ್ಟ!


ಅಂದು ಸೆಂಪ್ಟಂಬರ್ 24, 2010 ಶುಕ್ರವಾರ. ನನ್ನ ಪಾಲಿಗದು ಶುಭ ಶುಕ್ರವಾರವೇ! ಏಕೆಂದರೆ, ಅಂದು aiಐದು ದಿನಗಳಿಂದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ವೈದ್ಯರ ಗಮನದಲ್ಲಿದ್ದವನು, ಥೈರಾಯ್ಡ್ ಸಮಸ್ಯೆಯಿಂದ ಹೀಗಾಗಿದೆ ಅಷ್ಟೆ ಎಂದು ಸರ್ಟಿಫಿಕೇಟ್ ಪಡೆದುಕೊಂಡು ಡಿಸ್ಚಾರ್ಜ್ ಆಗಿದ್ದೆ.

ಸರಿಯಾಗಿ ಐದು ದಿನಗಳ ಹಿಂದೆ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದೆ. ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ ನನ್ನನ್ನು ಗೆಳೆಯರ ಸಲಹೆಯಂತೆ ನನ್ನಾಕೆಯು 108 ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಳಂತೆ. ಅಲ್ಲಿ ನನ್ನ ಮೇಲುಸ್ತುವಾರಿ ನೋಡಿಕೊಳ್ಳುವ "ಏಂಜೆಲ್" ಎಂದೇ ನಾವು ಕರೆಯುವ ಲೇಡಿ ಡಾಕ್ಟರ್‍ಗೆ ಇವಳು ಫೋನಿನಲ್ಲಿ ವಿಷಯ ತಿಳಿಸಿ, ಅವರನ್ನು ಬರಮಾಡಿಕೊಂಡಳಂತೆ. ಅವರು ಬಂದವರೇ ಎಮರ್ಜೆನ್ಸಿ ವಾರ್ಡಿನಲ್ಲಿ ಚಿಕಿತ್ಸೆ ಕೊಡಿಸಿ, ನನ್ನನ್ನು ತುರ್ತು ನಿಗಾದಲ್ಲಿ ಇಟ್ಟಿದ್ದರಂತೆ. ಮಂಗಳವಾರ ಬೆಳಿಗ್ಗೆ ಆ ಏಂಜೆಲ್ “‘ನಿಮಗೆ ಏನೂ ಆಗಿಲ್ಲ, ಆರಾಮವಾಗಿರಿ” ಎಂದು ನಗುಮೊಗದಿಂದ ಹೇಳಿ ಹೋದರು.

ಬಹಳ ಹೊತ್ತು ಮೌನದಲ್ಲಿದ್ದು, ನನ್ನವಳೆಡೆಗೆ ತಿರುಗಿ "ನನಗೆ ಏನಾಗಿದೆ?" ಎಂದು ಕೇಳಿದೆನು. ಅವಳು ಮುಗುಳ್ನಗುತ್ತಾ, "ಏನೂ ಇಲ್ಲಾ, ನಿಮಗೆ ಈ ಹಿಂದೆ ಕೊಟ್ಟಿದ್ದ ಮತ್ತು ಈಗ ಕೊಡುತ್ತಿದ್ದ ಮಾತ್ರೆಗಳಿಂದ, ಮೊದಲೇ ಸಮಸ್ಯೆಯಿದ್ದ ಥೈರಾಯ್ಡ್ ಮತ್ತೆ ತೊಂದರೆ ಮಾಡಿದೆ ಅಷ್ಟೆ. ನೀವು ಅವತ್ತು unconscious ಆಗಿದ್ದೀರಿ. ಮಾತ್ರೆಗಳ ಪ್ರಭಾವದಿಂದ ಹೀಗಾಗಿದೆ ಅಷ್ಟೆ. ಒಂದೇ ದಿನದಲ್ಲಿ ನಾರ್ಮಲ್ ಆಗಿದ್ದೀರಿ. ಏನೂ ತೊಂದರೆ ಇಲ್ಲ. ಇನ್ನೂ ಕೆಲವು ಟೆಸ್ಟ್ ಗಳನ್ನು ಮಾಡಾಬೇಕಾಗಿರುವುದರಿಂದ, ಆಸ್ಪತ್ರೆಯಲ್ಲೇ ಐದಾರು ದಿನ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ. ಏನೂ ಆಗಿಲ್ಲ, ಆರಾಮಾಗಿ ಮಲಗಿ, ಹೆಚ್ಚು ಮತನಾಡಬೇಡಿ” ಎಂದು ಸಮಾಧಾನದಿಂದ ನುಡಿದಳು. ನನಗೆ ಸಮಾಧಾನವಾಗಲಿಲ್ಲವಾದರೂ, ಏನು ಮಾಡುವುದೆಂದು ತೋಚದೆ ಸುಮ್ಮನೆ ಮಲಗಿದೆ.

ಎಲ್ಲಾ ಟೆಸ್ಟ್‍ಗಳು ಮುಗಿದ ನಂತರ ಶುಕ್ರವಾರ ಸಂಜೆ ಏಳರ ಸುಮಾರಿಗೆ ಡಿಸ್ಚಾರ್ಜ್ ಮಾಡಿಸಿಕೊಂಡು ಆಸ್ಪತ್ರೆಯಿಂದ ಹೊರಬಿದ್ದೆವು. ಹೊಟ್ಟೆ ಹಸಿಯುತ್ತಿದ್ದರೂ, ಮಳೆ ಬರುವಂತ ವಾತಾವರಣವಿದ್ದುದರಿಂದ ಬಸ್ಟಾಂಡಿನಲ್ಲಿಯೇ ಊಟ ಮಾಡಿದರಾಯಿತು ಎಂದುಕೊಂಡು ಆಟೋದವರೊಬ್ಬರಿಗೆ ‘ಮೆಜಿಸ್ಟಿಕ್’ ಎಂದೆವು. ನಾವು ಆಟೋ ಹತ್ತುವ ಸಮಯಕ್ಕೆ ಸರಿಯಾಗಿ ತುಂತುರು ಮಳೆ ಹನಿಯಲಾರಂಭಿಸಿತು. ಮೋಡ ದಟ್ಟವಾಗಿ ಹರಡಿತ್ತು. ಜೋರಾಗಿ ಮಳೆ ಬರುವ ಮುನ್ಸೂಚನೆಯಿತ್ತು. ಆಟೋದವರು, ““ಸಾರ್, ಎಲ್ಲಾಕಡೆ ತುಂಬಾ ಮಳೆ ಆಗ್ತಿದೆಯಂತೆ, ಇಲ್ಲೂ ಶುರುವಾಯ್ತು, ಮೆಜಸ್ಟಿಕ್‍ವರೆಗೆ ಹೋಗೋಕೆ ಆಗುತ್ತೋ... ಇಲ್ವೋ... ನೋಡ್ಬೇಕು”” ಎಂದರು. “ಹಾಗೆಲ್ಲಾ ಹೇಳ್ಬೇಡಿ ಸಾರ್, ನಾವು ಇವತ್ತು ತುಮಕೂರಿಗೆ ಹೋಗ್ಲೇಬೇಕು. ಏನಾದ್ರು ಮಾಡಿ ಮೆಜಸ್ಟಿಕ್‍ಗೆ ಬಿಟ್ಟುಬಿಡಿ. ಇಷ್ಟು ಹೊತ್ನಲ್ಲಿ ಟ್ರೈನೂ ಸಿಗಲ್ಲ”” ಎಂದಳು ನನ್ನ ಮಡದಿ. “ಆಯ್ತು ಮೇಡಂ, ನೋಡ್ತಿನಿ” ಎಂದು ಡ್ರೈವರ್ ಹೇಳಿದರು. ಅಷ್ಟೊತ್ತಿಗೆ ತುಂತುರು ಹನಿಗಳ ರೂಪದಲ್ಲಿದ್ದ ಮಳೆಯು ಧೋ ಎಂದು ಸುರಿಯಲಾರಂಭಿಸಿತು. ನನಗಂತೂ ಏನೂ ತೋಚುತ್ತಿಲ್ಲ. ಏನಾದರೂ ಹೇಳುವ ಸ್ಥಿತಿಯಲ್ಲೂ ನಾನಿರಲಿಲ್ಲ. ಹೇಗಿದ್ದರೂ ಇವಳೇ ನಿಭಾಯಿಸುತ್ತಾಳೆಂದು ಸುಮ್ಮನೆ ನಿರ್ಲಿಪ್ತನಾಗಿ ಕುಳಿತುಬಿಟ್ಟೆ.

ಸಾಮಾನ್ಯವಾಗಿ ಆಸ್ಪತ್ರೆಯಿಂದ ಮಡಿವಾಳ ಚೆಕ್ ಪೋಸ್ಟ್‍ನತ್ತ ತಿರುಗಿ, ವಿಲ್ಸನ್ ಗಾರ್ಡನ್ ಮುಖಾಂತರ ಮೆಜಿಸ್ಟಿಕ್‍ನತ್ತ ಹೋಗುತ್ತಿದ್ದ ಆಟೋದವರು, ಅಂದು ಅಲ್ಲಿ ಮಳೆಯೆಂದು ಕೋರಮಂಗಲದ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಸಾಗಿ ಆಡುಗೋಡಿ ಮುಖಾಂತರ ತೆರಳುತ್ತಿದ್ದರು. ಅಷ್ಟರಲ್ಲಾಗಲೇ ಭೀಕರವಾಗಿ ಸುರಿಯುತ್ತಿದ್ದ ಮಳೆಯು ಹೊಸಲೋಕವೊಂದನ್ನು ಸೃಷ್ಟಿಸಲು ತೊಡಗಿತ್ತು. ನಾವೆಂದೂ ಇಂತಹ ಮಳೆಯನ್ನು ನೋಡಿರಲಿಲ್ಲ. ನಾನಂತೂ ಇವತ್ತೇನೋ ಘಟಿಸಲಿದೆ ಎಂದು ಮನದಲ್ಲೇ ಅಂದುಕೊಂಡು, ಜಡ್ಡುಗಟ್ಟಿದ ಮನಸ್ಸನ್ನು ಜಾಗೃತಗೊಳಿಸಿ ಕುಳಿತೆ.

ಮಳೆಯಿಂದಾಗಿ ಟ್ರಾಫಿಕ್ ಅಸ್ತವ್ಯಸ್ತವಾಗಿತ್ತು. ಬೈಕ್ ಸವಾರರು ಎಲ್ಲೆಂದರಲ್ಲಿ ತಮ್ಮ ಗಾಡಿಗಳನ್ನು ನಿಲ್ಲಿಸಿ, ಸಿಕ್ಕ ಸಿಕ್ಕ ಜಾಗಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ನಮ್ಮ ಆಟೊವು ಸುರಿಯುವ ಮಳೆಯಲ್ಲಿ ಆಮೆವೇಗದಲ್ಲಿ ಓಡುತ್ತಿತ್ತು. ನಮ್ಮ ಆಟೋ ಡ್ರೈವರ್ “ಏನಪ್ಪ ಮಾಡೋದು ದೇವ್ರೇ?” ಎಂದು ನಿಟ್ಟುಸಿರು ಬಿಡುತ್ತಾ ಮುಂದೆ ಸಾಗಲು ಯತ್ನಿಸುತ್ತಿದ್ದರು. ಎತ್ತ ನೋಡಿದರೂ, ಟೂ ವೀಲರ್‍ಗಳು, ಕಾರುಗಳು, ಆಟೋಗಳು ಮತ್ತು ಆನೆಯಂತೆ ದಾರಿಯನ್ನೆಲ್ಲಾ ಅಕ್ರಮಿಸಿಕೊಂಡು ನಿಂತ ಬಿ.ಎಂ.ಟಿ.ಸಿ. ಬಸ್ಸುಗಳು!

ತೆವಳಿಕೊಂಡೇ ನಮ್ಮ ಆಟೋವೂ ಮುಂದೆ ಹೋಗುತ್ತಿದ್ದರೆ, ರಸ್ತೆಬದಿಯ ಚಿತ್ರಗಳು ಚಿತ್ರವಿಚಿತ್ರವಾಗಿದ್ದವು. ಟ್ರಾಫಿಕ್ ಪೋಲಿಸರಂತೂ ಆ ಮಳೆಯಲ್ಲೇ ತಮ್ಮ ಸಾಹಸದ ಸೇವೆಯನ್ನು ನೀಡುತ್ತಿದ್ದರು. ಟ್ರಾಫಿಕ್ ಹೆಚ್ಚಾದಾಗ ಬೈಕ್ ಸವಾರರು, ರಸ್ತೆಯ ಬದಿಯಲ್ಲಿದ್ದ ಮೋರಿಗಳು ತುಂಬಿ ತುಳುಕಿ ಹರಿಯುತ್ತಿದ್ದರೂ ಲೆಕ್ಕಿಸದೆ ಪುಟ್ಪಾದತಿನ ಮೇಲೆ ಹೋಗುತ್ತಿದ್ದರು. ಅವರ ಧೈರ್ಯ, ಸಾಹಸಕ್ಕೆ ಒಲ್ಲದ ಮನಸ್ಸಿನಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ, ಅವರಿಗೇನಾದರೂ ಹೆಚ್ಚು ಕಡಿಮೆ ಆದಿತೆಂಬ ಧಾವಂತ ಮನದಲ್ಲಿತ್ತು. ಅಷ್ಟರಲ್ಲಿ, ಇಬ್ಬರಿದ್ದ ಒಂದು ಬೈಕಿನ ಮುಂದಿನ ಚಕ್ರ ಕುಸಿದಿದ್ದ ಪುಟ್ಪಾ ತಿನೊಳಕ್ಕೆ ಸಿಕ್ಕಿಬಿಟ್ಟಿತು. ಅದನ್ನು ಕಂಡ ನಮಗೆಲ್ಲಾ ಅಯ್ಯೋ ಎಂದೆನಿಸಿದರೂ, ಅವರಿಬ್ಬರು ಯಾವ ನೋವನ್ನೂ ತೋರ್ಪಡಿಸದೆ ನಗುತ್ತಿದ್ದನ್ನು ಕಂಡು, ಸಂಕಷ್ಟದಲ್ಲಿದ್ದರೂ ನೋವನ್ನು ಮರೆತು ನಕ್ಕ ಅವರನ್ನು ನೋಡಿ ನಾವೂ ನಕ್ಕಿದೆವು. ಆ ನಗುವಿನಲ್ಲಿ ಇದ್ದದ್ದು ಅಸಾಯಕತೆಯಾ? ವ್ಯಂಗ್ಯವಾ? ಅಳು ಬರುವಂತಾ ಸಮಯದಲ್ಲೂ ಮಾನವ ನಕ್ಕು ಬಿಡುತ್ತಾನಲ್ಲ...! ಆ ನಿಲುವಿಗೆ ಧನ್ಯೋಸ್ಮಿ.

ಅಷ್ಟರಲ್ಲಿ ಬಹಳ ಹೊತ್ತಾದರೂ ಮುಂದೆ ಚಲಿಸಲಾಗದೆ ನಮ್ಮ ಆಟೋ ಡ್ರೈವರ್ ಎದುರಿಗೆ ಬರುತ್ತಿದ್ದವರ ಬಳಿ ಏನೋ ಕೇಳಿದವರು ನಮ್ಮ ಕಡೆ ತಿರುಗಿ, “ಸಾರ್, ಮುಂದೆ ಇರೋ ದೊಡ್ಡಮೋರಿ ಉಕ್ಕಿ ಹರಿಯುತ್ತಿದ್ಯಂತೆ, ಅದಕ್ಕೆ ಎಲ್ಲಾರು ಹಿಂದಕ್ಕೆ ತಿರುಗಿಸಿಕೊಂಡು ಹೋಗುತ್ತಿದ್ದಾರೆ. ನಾನೂ ಟ್ರೈ ಮಾಡ್ತೀನಿ ಸಾರ್. ಅಲ್ಲೊಂದು ದಾರಿಯಿದೆ. ಅಲ್ಲಿ ನೀರು ಕಡಿಮೆ ಇರ್ಬೋದು” ಎಂದವರೇ, ಹರಸಾಹಸದಿಂದ ಆಟೋ ತಿರುಗಿಸಿಕೊಂಡು ನಿಧಾನವಾಗಿ ಮುಂದೆ ಸಾಗಲಾರಂಭಿಸಿದರು. adAಅದಾಗ ನನಗೆ “Water, Water everywhere, / And all the boards did shrink; / Water, water everywhere, / Not a drop to drink” ಎಂಬ ಕವಿ ಎಸ್.ಟಿ.ಕಾಲ್ರಿಕಡ್ಜನ ಸಾಲುಗಳು ನೆನಪಾಗಿ ಒಂಥರಾ ಭಯವಾಗುತ್ತಿತ್ತು. ಬಹಳ ಹಿಂದೆ ನೋಡಿದ್ದ “Water World” ಸಿನಿಮಾ ನೆನಪಿಗೆ ಬರುತ್ತಿತ್ತು.

ನಮ್ಮ ಆಟೋ ಇದೀಗ ಹೋಗುತ್ತಿದ್ದ ದಾರಿ ನಮಗೆ ಹೊಸದಾಗಿತ್ತು. ಆ ಪರಿಸ್ಥಿತಿಯಲ್ಲೂ, ಅದಾಗಲೇ ಬಹಳಷ್ಟು ಆಟೋದವರಿಂದ ಮೋಸ ಹೋಗಿದ್ದ ನಮಗೆ, ಈ ಆಟೋದವರ ಮೇಲೆ ಅಪನಂಬಿಕೆ ಮೂಡಿ ಪರಸ್ಪರ ಮುಖ ನೋಡಿಕೊಂಡೆವು. ಮೋಸವನ್ನು ನಾವು ಸಹಿಸಿಕೊಳ್ಳದ್ದಿದ್ದರೂ, ನನ್ನಾಕೆಯು ಅದನ್ನು ವಿರೋಧಿಸದೆ ಬಿಡುವುದಿಲ್ಲ. ಇದನ್ನರಿತ ನಾನು ಕಣ್ಣುಗಳಲ್ಲೇ, ಬೇಡ...ಪ್ಲೀಸ್ ಸುಮ್ನೀರು... ಎಂದು ಕೋರಿದೆ. ಇನ್ನೇನು ಕೇಳಿಬಿಡಬೇಕು ಎಂದು ಕೊಂಡಿದ್ದವಳು, ನನ್ನ ಕೋರಿಕೆಯನ್ನು ಮನ್ನಿಸಿ ಸುಮ್ಮನಾದಳು.

ನಮ್ಮ ಮನಸ್ಥಿತಿಯನ್ನರಿತವರಂತೆ, ನಮ್ಮ ಆಟೋ ಡ್ರೈವರ್ “ಇಲ್ಲಿ ಸ್ವಲ್ಪ ಪರ್ವಾಗಿಲ್ಲ ಸಾರ್. ಶಾಂತಿನಗರದ ಬಸ್‍ಸ್ಟಾಂಡ್‍ನೊಳಗೆ ಹೋಗಿದ್ದರೆ ಚೆನ್ನಾಗಿತ್ತು. ಆದರೆ, ಅಲ್ಲಿ ಬಿಡ್ತಾ ಇರೋ ಹಾಗೆ ಕಾಣ್ತೀಲ್ಲ. ಈ ಕಡೆಯಿಂದ ಹೇಗೋ ಹೋಗ್ಬುಡ್ತೀನಿ” ಎಂದು ಎಡಕ್ಕೆ ತಿರುಗಿದರು. ರಸ್ತೆಯನ್ನು ಗಮನಿಸುತ್ತಿದ್ದವನು ಲಾಲ್‍ಬಾಗ್ ಕಂಡದ್ದನ್ನು ನೋಡಿ, “ಏ ಇವರು ಲಾಲ್‍ಬಾಗ್ ಕಡೆಯಿಂದ ಹೋಗ್ತಾ ಇದ್ದಾರೆ. ಸರಿಯಾಗೆ ಇದೆ ದಾರಿ” ಎಂದು ನನ್ನವಳಿಗೆ ಪಿಸುಗುಟ್ಟಿದೆ. ಸಮಾಧಾನಗೊಂಡಂತೆ ಕಂಡ ಅವಳ ಮುಖದಲ್ಲಿ ಹೌದೆಂಬ ಭಾವವಿತ್ತು.

ಹಾಗೆಯೇ ಮುಂದುವರೆಯುತ್ತಿದ್ದ ನಮಗೆ ಕಂಡದ್ದು, ಭೀಭತ್ಸ ದೃಶ್ಯಗಳು! ಸುರಿಯುವ ಆ ಮಳೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿದ್ದ ಬೈಕುಗಳು ಮಳೆಯ ರಭಸಕ್ಕೆ ಮಲಗಿಕೊಂಡಿದ್ದವು. ಅವುಗಳ ಮೇಲೆಲ್ಲಾ ತುಂಬಿ ಹರಿಯುತ್ತಿದ್ದ ಚರಂಡಿ ನೀರು ಪ್ರವಾಹ ಸ್ವರೂಪದ್ದಾಗಿತ್ತು. ಪಕ್ಕದಲ್ಲಿ ಆಟೋವೊಂದು ಮಗುಚಿ ಬಿದ್ದಿತ್ತು. ನಮ್ಮ ಆಟೋವು ಒಳಗೊಂಡಂತೆ, ಬಹಳ ಆಟೋಗಳ ಒಳಗೆಲ್ಲಾ ನೀರುನುಗ್ಗಿತ್ತು. ನೀರು ಹೆಚ್ಚೆಚ್ಚು ನುಗುತ್ತಿದ್ದ ಹಾಗೇ ನಮ್ಮ ಆಟೋದವರು ಸರಿಯಾಗಿ ಬ್ರೇಕ್ ಹಿಡಿಯಲು ಆಗುತ್ತಿಲ್ಲ ಸಾರ್. ಆದರೂ ಹೇಗೋ ಹೋಗುತ್ತಿದ್ದೇನೆ, ಎಂದೆನ್ನುತ್ತಿದ್ದರು. ಹೀಗೆ ಆಚೆ ಕಣ್ಣಾಡಿಸುತ್ತಿದ್ದವರಿಗೆ, ಪಕ್ಕದಲ್ಲಿದ್ದ ಮನೆ, ಅಂಗಡಿಗಳಿಗೆಲ್ಲಾ ನೀರು ನುಗ್ಗಿ, ಅವರೆಲ್ಲಾ ಅಲ್ಲಿಂದ ನೀರು ತೆಗೆಯುವುದನ್ನು ನೋಡುವುದೇ ಆಯಿತು. ಒಂದು ಮನೆಯಲ್ಲಂತೂ, ಮನೆಯ ಒಳಗೆ ಬರುತ್ತಿದ್ದ ನೀರನ್ನೇ ನೋಡಿ, ಬಾಗಿಲಲ್ಲೇ ಗಾಬರಿಯಿಂದ ಅಳುತ್ತಾ ನಿಂತಿದ್ದ ಮಗುವನ್ನು ನೋಡಿ ಕರುಳು ಚುರುಕ್ಕೆಂದಿತು. ನನ್ನವಳು ಅಯ್ಯೋ ಪಾಪವೆಂದಳು. ಇದಕ್ಕಿಂತ ಕ್ರೂರ ದೃಶ್ಯವೆಂದರೆ ಆ ಸುರಿವ ಮಳೆಯಲ್ಲಿ ಬೆತ್ತಲೆಯಾದ ವ್ಯಕ್ತಿಯೊಬ್ಬ ರಸ್ತೆಗೆ ಬೆನ್ನುಮಾಡಿ ಕುಳಿತಿದ್ದ. ಅವನು ಮಾನಸಿಕ ಅಸ್ವಸ್ಥನಿರಬೇಕು. ಆದರೆ ಅವನೂ ಮನುಷ್ಯನಲ್ಲವೇ? “ಛೇ” ಎಂಬ ನನ್ನ ಉದ್ಗಾರ ಕೇಳಿದ ನನ್ನವಳು “ಏನಾಯ್ತು?” ಎಂದಳು. ಅವಳ ದಿಗಿಲನ್ನು ನೋಡಿ “ನೋಡಮ್ಮ ಪಾಪ ಯಾರೋ ಹುಚ್ಚ; ಬರಿಮೈಯಲ್ಲಿ...” ಎಂದೆ. “ಅಯ್ಯೋ! ಆ ದೇವ್ರಿಗೆ ಸ್ವಲ್ಪನೂ ಕರುಣೆಯಿಲ್ವಾ?” ಎಂದು ಸೃಷ್ಠಿಕರ್ತನಿಗೆ ಬೈದಳು. ಅಷ್ಟರಲ್ಲಿ “ಅಲ್ನೋಡಿ ಮೇಡಂ, ದೇವಸ್ಥಾನ ಆಲ್ಮೋಸ್ಟ್ ಮುಳುಗೇ ಹೋಗಿದೆ” ಎಂದು ಆಟೋ ಡ್ರೈವರ್ ರಸ್ತೆ ಬದಿಯಲ್ಲಿದ್ದ ದೇವಸ್ಥಾನದತ್ತ ನಮ್ಮ ಗಮನ ಸೆಳೆದರು. ಅಲ್ಲಿ ನೋಡಿದರೆ ದೇವರೂ ಕೊಚ್ಚಿ ಹೋಗುವ ಭಯದಲ್ಲಿದ್ದ! ಅವನನ್ನು ರಕ್ಷಿಸಲು ಅಲ್ಲಿದ್ದ ಮನುಷ್ಯರೇ ಪ್ರಯತ್ನಿಸುತ್ತಿದ್ದರು!

ಆ ಭಗವಂತನೇ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಶಕ್ತನಾಗಿರುವಾಗ, ನಮ್ಮಂಥ ಹುಲುಮಾನವರನ್ನು ಹೇಗೆ ರಕ್ಷಿಸಿಯಾನು? ಎನ್ನುವ ಪ್ರಶ್ನೆ ನಮ್ಮ ಮನಗಳಲ್ಲಿ ಮೂಡುತ್ತಿತ್ತು. ಅಷ್ಟರಲ್ಲಿ ಹಾಗೂ-ಹೀಗೂ ಚಾಮರಾಜ ಪೇಟೆಯ ದಾರಿಯಿಂದ ಕಾಟನ್ ಪೇಟೆ ಕಡೆಗೆ ನಮ್ಮ ಆಟೋ ಚಲಿಸುತ್ತಿತ್ತು. ಇನ್ನೇನು ಬಸ್‍ಸ್ಟಾಂಡ್ ಹತ್ತಿರ ಬಂದೇ ಬಿಟ್ಟೆವು ಎಂದು ನಾ ಅಂದುಕೊಂಡ ಸಮಯಕ್ಕೆ, ಎದುರಿನಿಂದ ಬರುತ್ತಿದ್ದ ಆಟೋದವರೊಬ್ಬರು, ನಮ್ಮ ಆಟೋದವರಿಗೆ ಮೆಜಸ್ಟಿಕ್‍ಗೆ ಹೋಗಲು ಆಗುವುದಿಲ್ಲವೆಂದು ತಿಳಿಸಿದರು. ನಮ್ಮ ಆಟೋದವರು ರಸ್ತೆಯ ಪಕ್ಕಕ್ಕೆ ಆಟೋ ನಿಲ್ಲಿಸಿ, “ಏನ್ ಮಾಡ್ಲಿ ಸಾರ್? ಇನ್ನೊಂದು ಸ್ವಲ್ಪ ಮುಂದೆ ಬಿಡುತ್ತೇನೆ. ಅಲ್ಲಿಂದ ನಡೆದುಕೊಂಡು ಹೋಗ್ತೀರೋ?” ಎಂದು ಕೇಳಿದರು. ಈ ಮಳೆಯಲ್ಲಿ ಹೇಗಪ್ಪಾ ನಡೆಯೋದು ಎನ್ನುವ ದಿಗಿಲು ಶುರುವಾಯಿತು. ನನ್ನಾಕೆಯು, “ಹೇಗಾದರೂ ಮಾಡಿ, ಮೆಜಸ್ಟಿಕ್‍ಗೆ ಬಿಟ್ಟು ಬಿಡಿ” ಎಂದು ಕೇಳತೊಡಗಿದಳು. “ನಾ ಏನ್ ಮಾಡ್ಲಿ ಮೇಡಂ, ಮೆಜಸ್ಟಿಕ್ ತುಂಬಾ ಡೌನ್‍ನಲ್ಲಿದೆ. ಈಗಾಗಲೇ ಸಾಕಷ್ಟು ನೀರು ನುಗ್ಗಿರುತ್ತೆ. ಟ್ರಾಫಿಕ್ ಜಾಮ್ ಬೇರೆ ಆಗಿರುತ್ತೆ’ ಎಂದರು. ಅಷ್ಟರಲ್ಲಿ ಇವಳ ಮೊಬೈಲ್ ರಿಂಗಣಿಸತೊಡಗಿತು. ಬ್ಯಾಗಿನಿಂದ ಮೊಬೈಲ್ ತೆಗೆದು ನೋಡಿದವಳೆ “ಅಮ್ಮಾ” ಎಂದು ಮಾತನಾಡತೊಡಗಿದಳು. ಕೆಲವು ಕ್ಷಣಗಳ ನಂತರ ಮೊಬೈಲ್ ಕಟ್ ಮಾಡಿ “ಈ ಮಳೇಲಿ ಹೇಗೆ ಹೋಗ್ತಿರಾ? ಸುಮ್ನೆ ಮನೆಗೆ ಬನ್ನಿ” ಎಂದು ಬೈಯುತ್ತಿದ್ದಾರೆ ಎಂದಳು.

ಇದನ್ನು ಕೇಳಿಸಿಕೊಂಡ ನಮ್ಮ ಆಟೋದವರು “ಎಲ್ಲಿ ಮೇಡಂ ನಿಮ್ಮ ಮನೆ?” ಎಂದರು. “ಮಾಗಡಿ ರೋಡ್” ಇವಳೆಂದಳು. “ಹಾಗಾದ್ರೆ ನಂಗೂ ಹತ್ರ ಮೇಡಂ. ನಮ್ಮನೆ ಪೀಣ್ಯದಲ್ಲಿರೋದು. ನಿಮ್ಮನ್ನ ಬಿಟ್ಟು ನಾನೂ ಸೀದಾ ಮನೆಗೆ ಹೋಗ್ಬಿಡ್ತೀನಿ, ದಾರಿ ಹೇಳಿ” ಎಂದು ಮಾಗಡಿ ರೋಡಿನ ಕಡೆಗೆ ಆಟೋ ತಿರುಗಿಸಿದರು. ನಾನು ಮೌನದಿಂದ ಸಮ್ಮತಿಸಿದೆ. ಸ್ವಲ್ಪ ಹೊತ್ತಿಗೆಲ್ಲಾ ನನ್ನತ್ತೆಯ ಮನೆಗೆ ಬಂದೆವು. ಆಟೋ ಇಳಿದು, ಮಾನವತೆಯೇ ಮೈವೆತ್ತಂತ್ತಿದ್ದ ಆಟೋದವರಿಗೆ ಹಣ ನೀಡಿ, ಥ್ಯಾಂಕ್ಸ್ ಹೇಳಿದೆವು. ಅವರು ಪ್ರತ್ಯುತ್ತರವಾಗಿ, “ನೀವು ಆಸ್ಪತ್ರೆಯಿಂದ ಬಂದವರೆಂದು ತಿಳಿದು. ನನಗೂ ನಿಮ್ಮನ್ನು ದಾರಿ ಮಧ್ಯದಲ್ಲಿ ಇಳಿಸಲು ಮನಸ್ಸಾಗಲಿಲ್ಲ ಸಾರ್. ಒಳ್ಳೆಯದಾಗಲಿ ನಿಮಗೆ, ಬರ್ತೀನಿ” ಎಂದವರೇ ಮುಂದೆ ಚಲಿಸಿದರು.

ನಾವಿಬ್ಬರೂ ಮನೆಯೊಕ್ಕಿದ್ದೆ ತಡ, “ಅಪ್ಪಾ...” ಎಂದು ಸ್ವೆಟರ್ ಮತ್ತು ಟೋಪಿಯಲ್ಲಿ ಕವರಾಗಿದ್ದ ನಮ್ಮ ಗುಬ್ಬಚ್ಚಿ ಮರಿ ಗೋಮಿನಿಯು ಓಡೋಡಿ ಬಂದಳು. ಆ ಮಳೆಯಲ್ಲಿ ಊರಿಗೆ ಹೊರಟಿದ್ದ ನಮ್ಮನ್ನು ಮನೆಯಲ್ಲಿದ್ದವರೆಲ್ಲಾ ಚೆನ್ನಾಗಿಯೇ ತರಾಟೆ ತೆಗೆದುಕೊಂಡರು. ಊಟ ಮಾಡಿ ಮಲಗಿದ ನನಗೆ ನಿದ್ದೆಯಲ್ಲೂ ಮಳೆಯಿಂದ ಆದ ಅಸ್ತವ್ಯಸ್ತ ಜಗತ್ತಿನ ಅಸ್ಪಷ್ಟ ಚಿತ್ರಗಳು ಕಾಡುತ್ತಿದ್ದವು.

- ಗುಬ್ಬಚ್ಚಿ ಸತೀಶ್.

ಶನಿವಾರ, ಏಪ್ರಿಲ್ 9, 2011

ಎದೆಯ ಹಾಡು

ಎದೆಯಲ್ಲಿ ಹಾಡುವ ಈ ಹಾಡು
ಎಷ್ಟು ಹಾಡಿದರೂ ಎಷ್ಟು ಕೇಳಿದರೂ
ಎನಗರಿವಿಲ್ಲದೆಯೆ ಮತ್ತೆ ಹಾಡಿತು ಪಲ್ಲವಿ.

ಚೆಂದ ಚೆಂದದ ಚೂಡಿ
ತೊಟ್ಟಿ ಮಾಡಿದೆ ಮೋಡಿ
ಬೆರಗಾದ ಮಳೆಬಿಲ್ಲ ವರ್ಣ

ಅಂದ ಅಂದದ ಮೊಗಕೆ
ಚಂದ್ರಕಾತಿಯ ಹೊದಿಕೆ
ಮಾಯವಾದ ಬಾನ ಚಂದ್ರ

ಗಂಧ ಗಂಧದ ನಗುವು
ನಗಲಾರದೇನೋ ಮಗುವು
ಉಳಿದ ಸದ್ದೆಲ್ಲಾ ಸ್ತಬ್ಧ

ಜನ್ಮ ಜನ್ಮದ ಒಲವು
ಸರಿಸಾಟಿಯಿಲ್ಲದ ಚೆಲುವು
ಎಂದೆಂದೂ ನಿನ್ನದೇ ಹಾಡು.

              --- ಗುಬ್ಬಚ್ಚಿ ಸತೀಶ್.

("ಮಳೆಯಾಗು ನೀ" ಕವನ ಸಂಕಲದಿಂದ)

ಶುಕ್ರವಾರ, ಏಪ್ರಿಲ್ 1, 2011

ಕ್ರಿಕೆಟ್ ವಿಶ್ವಕಪ್ ೨೦೧೧ ಸುಪ್ರಭಾತ

ಯುವ ಭಾರತ ಯುವ ಭಾರತ
ಯುವ ಭಾರತದ ಕ್ರಿಕೆಟ್ ಕಲಿಗಳೇ
೧೯೮೩ ವಿಶ್ವಕಪ್‍ನ ವಿಜೇತರೆ
ಈ ಬಾರಿಯೂ ಗೆಲ್ಲಿರಿ ನಮ್ಮ ಹುಲಿಗಳೇ

ಹುರಿದುಂಬಿಸಲು ಧೋನಿ ಮಹಾರಾಜನು
ಬಾಲಿಗೊಂದು ಸಿಕ್ಸರ್ ಎತ್ತಲಿ ಯುವರಾಜನು
ಮೊದಮೊದಲೇ ಚಚ್ಚಲಿ ಸಚಿನ್ನ! ಸೆಹವಾಗನು
ಜೊತೆಗೆ ಸಾಥ್ ನೀಡಲಿ ಗೌತಮ ಗಂಭೀರನು

ಬಿರುಗಾಳಿ ಚಂಡೆಸೆಯಲಿ ಜಹೀರ್, ಮುನಾಫನು
ಸುಂಟರಗಾಳಿ ಚೆಂಡಲಿಡಲಿ ಹರಭಜನನು
ಜೊತೆಜೊತೆಯಲೇ ಮಿಂಚಲು ಎಲ್ಲಾ ಬೌಲರ್‍ಗಳು
ಆಲ್‍ರೌಂಡರ್‍ಗಳ ಮಹಾಪೂರವೇ ಕೈ ಜೋಡಿಸುವರು

ನಾವೆಲ್ಲರೂ ನಿಮ್ಮೊಂದಿಗೆ, ನಾವೆಲ್ಲರೂ ನಿಮ್ಮೊಂದಿಗೆ
ಈ ಬಾರಿಯ ವಿಶ್ವಕಪ್ ನಮ್ಮದಾಗಲಿ
ಇಡೀ ವಿಶ್ವವೇ ಕೊಂಡಾಡಲಿ ನಮ್ಮ ವಿಜಯವ
ಎಲ್ಲರೂ ಹಾರಿಸಲಿ ನಮ್ಮ ತ್ರಿವರ್ಣ ಧ್ವಜವ

                                           - ಗುಬ್ಬಚ್ಚಿ ಸತೀಶ್.

ಶುಕ್ರವಾರ, ಮಾರ್ಚ್ 18, 2011

ಗಡ್ಡ ಧಾರಿ ನಲ್ಲ

ಗಡ್ಡ ಧಾರಿ ನಲ್ಲ


ಪಿಯುಸಿಯಲ್ಲಿದ್ದಾಗ ಇರಬೇಕು ನನ್ನ ಗಡ್ಡ ಚಿಗುರತೊಡಗಿತ್ತು. ಹಾಲುಗೆನ್ನೆಯ ಮೇಲೆ ಅಲ್ಲೊಂದು ಇಲ್ಲೊಂದು ಕೂದಲು. ನುಣುಪಾದ ಕಲ್ಲಿನ ಮೇಲಿನ ಪಾಚಿಯಂತೆ. ಮೀಸೆ ಚಿಗುರಿದ ಸ್ವಲ್ಪ ದಿನಗಳಲ್ಲೇ ಗಡ್ಡವೂ ಚಿಗುರತೊಡಗಿತಲ್ಲ, ಶುರುವಾಯಿತು ಪೀಕಲಾಟ. ಒಂದು ಕಡೆ ನಾನು ಗಂಡಸಾಗುತ್ತಿದ್ದೀನಲ್ಲ ಎಂಬ ಹರ್ಷ. ಮತ್ತೊಂದೆಡೆ ನಯವಾದ ಕೆನ್ನೆಗಳು ಒರಟಾಗುತ್ತವಲ್ಲ ಎಂಬ ಯೋಚನೆ. ಯಾವುದೇ ಕಾರಣಕ್ಕೂ ಜೀವನದಲ್ಲಿ ಗಡ್ಡ ಬಿಡಬಾರದು, ಯಾವಾಗಲೂ ನೀಟಾಗಿ ಶೇವ್ಮಾಎಡಿಕೊಂಡು ಮೀಸೆ ಇರುವ ಅನಂತ್ನಾಕಗ್ನಂ್ತೆ ಕಾಣುವ ಆಸೆ ಮೊದಲಿನಿಂದಲೂ ಮನದಲ್ಲಿತ್ತು. ಬಯಲುದಾರಿಯ ಸುರಸುಂದರಾಂಗ ಅನಂತ್ ನೀಟಾಗಿ ಶೇವ್‍ ಮಾಡಿಕೊಂಡು ಅದೆಷ್ಟು ಸುಂದರವಾಗಿ ಕಾಣುತ್ತಿದ್ದ. ಆಗ ಆತನಿಗೆ ಮೀಸೆ ಇದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿದ್ದನೆನೋ?

ಗಡ್ಡ ಚಿಗುರಿದ ಮೇಲೆ ಹೇರ್ ಕಟಿಂಗ್ ಮಾಡುವವರ (ನಾನು ಅವರನ್ನು ಹಜಾಮನೆನ್ನುವುದಿಲ್ಲ) ಬಳಿ ಹೋದಾಗ ಬಹಳ ಭಯ ಶುರುವಾಗಿತ್ತು. ಅವರೇನಾದರೂ ಹೊಚ್ಚ ಹೊಸ ಬ್ಲೇಡನ್ನು ತಮ್ಮ ಕತ್ತಿಗೆ ಸಿಲುಕಿಸಿಕೊಂಡು ಕೆನ್ನೆಗೆ ಬುರ ಬುರ ನೊರೆಹಚ್ಚಿ ಪರಪರ ಕೆರೆದರೆ ಎಂಬ ಭಯ. ಅಂದು ಹೇರ್ ಕಟಿಂಗ್ ಆದ ನಂತರ ಅವರೇ “ನಿನಗೆ ಈಗಲೇ ಶೇವ್ ಮಾಡುವುದಿಲ್ಲ. ಟ್ರಿಮ್ ಮೇಷಿನ್ನಿಂ ದ ಗಡ್ಡವನ್ನು ಟ್ರಿಮ್ ಮಾಡುತ್ತೇನೆ. ಚೆನ್ನಾಗಿ ಬೆಳೆಯುವವರೆಗೆ ಎಲ್ಲೂ ಶೇವ್ ಮಾಡಿಸಬೇಡಿ” ಎಂದರು. ನನ್ನ ಭಯಕ್ಕಿಂತ ಮುಖ್ಯವಾಗಿ ನಮ್ಮಂಥ ಯುವಕರ ಮುಖ ಬೇಗ ಹಾಳಾಗದಿರಲಿ ಎಂಬುದು ಅವರ ಅಭಿಲಾಷೆಯಾಗಿರಬೇಕು. ಸದ್ಯ! ದೇವರೇ ಕಾಪಾಡಿದ.

ಹೇಳಿ ಕೇಳಿ ಗಡ್ಡ! ನನ್ನ ಮಾತೆಲ್ಲಿ ಕೇಳಬೇಕು. ದಿನಗಳೆದಂತೆಲ್ಲಾ ಮತ್ತೆ ಬೆಳೆಯತೊಡಗಿತು. ಅಲ್ಲೊಂದು ಇಲ್ಲೊಂದು ಬೆಳೆಯುತಿದ್ದ ಕೂದಲುಗಳು ದಟ್ಟವಾಗತೊಡಗಿದವು. ನಾನೇನು ಅದಕ್ಕೆ ಪ್ರತ್ಯೇಕವಾಗಿ ನೀರು, ಗೊಬ್ಬರ ಹಾಕಿರಲಿಲ್ಲ. ಆದರೂ ಸೊಂಪಾಗಿ ಬೆಳೆಯತೊಡಗಿತು ನನ್ನ ಗಡ್ಡ. ಎಷ್ಟು ಸಲ ಟ್ರಿಮ್ ಮಾಡಿಸುವುದು? ಕಡೆಗೊಂದು ದಿನ ಹೇರ್ ಕಟಿಂಗ್ ಮಾಡುತ್ತಿದ್ದವರು ಹೇಳಿಯೇ ಬಿಟ್ಟರು: “ನೀವು ಇನ್ನು ಮುಂದೆ ಶೇವ್ ಮಾಡಿಸಿಕೊಂಡು ಬಿಡಿ. ಸಾಧ್ಯವಾದರೇ ಮನೆಯಲ್ಲೇ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ”. ಆತ ಹೇಳಿದ್ದು ನನಗೆ ವೇದವಾಕ್ಯದಂತಿತ್ತು.

ವೇದವಾಕ್ಯ ಯಾಕೆಂದರೆ ಅದಾಗಲೇ ಮಹಾಮಾರಿ ಏಡ್ಸ್ ಜಗತ್ತಿನಲ್ಲೆಲ್ಲಾ ಹರಡತೊಡಗಿತ್ತು. ಹರಡುವ ವಿಧಾನಗಳಲ್ಲಿ ಯಾರಾದರೂ ಏಡ್ಸ್ ರೋಗಿಯ ಗಡ್ಡವನ್ನು ತೆಗೆದ ಬ್ಲೇಡ್ನೆಲ್ಲಿ ರಕ್ತ ಅಂಟಿದ್ದರೆ, ಅದೇ ಬ್ಲೇಡ್ನಿಂಾದ ಶೇವ್ ಮಾಡಿಸಿಕೊಳ್ಳುವ ಆರೋಗ್ಯವಂತನಿಗೂ ಏಡ್ಸ್ ಬರುವ ಸಾಧ್ಯತೆ ಬಹಳವಿರುತ್ತದೆ ಎಂಬುದು. ಇದು ಮೊದಲೇ ತಿಳಿದುದರಿಂದ ನಾ ಅಂದು ಶೇವ್ ಮಾಡಿಸಿಕೊಳ್ಳಲಿಲ್ಲ. ಅದಾಗಲೇ ಸಲೂನ್ರದವರು ಎಲ್ಲರಿಗೂ ಪ್ರತ್ಯೇಕವಾದ ಬ್ಲೇಡ್ ಬಳಸುತ್ತಿದ್ದರೂ ನನಗೆ ಯಾಕೋ ಹಾಳು ಅನುಮಾನ ಮತ್ತು precaution is better than cure ಎಂಬ ನಿರ್ಧಾರ.

ಅಲ್ಲಿಗೆ ನಾನೇ ದಿನಾ ಶೇವ್ ಮಾಡಿಕೊಳ್ಳುವುದೆಂದು ನಿರ್ಧರಿಸಿಯಾಗಿತ್ತು. ಹೇಗಿದ್ದರೂ ಚಿಕ್ಕಂದಿನಲ್ಲಿ ತಾತ, ಅಪ್ಪ, ಚಿಕ್ಕಂಪ್ಪಂದಿರು ಶೇವ್ಮಾಂಡಿಕೊಳ್ಳುತ್ತಿದ್ದುದನ್ನು ತನ್ಮಯನಾಗಿ ನೋಡಿದ್ದೆ. ಅದಾಗಲೇ ಅಣ್ಣನೂ ಶೇವ್ ಮಾಡಿಕೊಳ್ಳಲು ಶುರುಮಾಡಿದ್ದ. ಹೊಚ್ಚಹೊಸ ಬ್ಲೇಡ್ ತೆಗೆದುಕೊಂಡು ಅಂತೂ ಇಂತೂ ಶೇವ್ ಮಾಡಿಕೊಂಡೆ, ಮೊದಲನೆಯ ಶೇವಿಂಗ್ ಎಕ್ಸ್‍ಪಿರಿಯನ್ಸ್ ಮೊದಲ ಗೆಳತಿಯಷ್ಟೆ ನಿಚ್ಚಳ! ಅಲ್ಲಲ್ಲಿ ಕೆಂಪಾದಂತೆ ಕಂಡರೂ, ಮುಖ ಕಪ್ಪಾಗುತ್ತೆಂಬ ಭೀತಿಯಲ್ಲಿ After Shave ಬಳಸಬಾರದೆಂದು ನಿರ್ಧರಿಸಿದ್ದೆ. ಎಲ್ಲದಕ್ಕೂ ಬಿಸಿ ನೀರು ಅಷ್ಟೆ.

ಕಾಲೇಜಿನ ದಿನಗಳಲ್ಲಿ ಪ್ರತಿ ಭಾನುವಾರದಂದು ಶೇವ್ ಮಾಡಿಕೊಳ್ಳುವುದು ಅಭ್ಯಾಸವಾಯಿತು. ಪದವಿ ಮುಗಿದು ಕೆಲಸಕ್ಕೆ ಸೇರಿದ ಮೇಲೆ ದಿನವೂ ಶೇವ್ ಮಾಡುವುದು ರೂಢಿಯಾಯಿತು. ದಿನಾಗಲೂ ಶೇವ್ ಮಾಡಿಕೊಂಡು ನೀಟಾಗಿ ಬರುವ ಬೆರಳೆಣಿಕೆಯಷ್ಟು ಸಿಬ್ಬಂದಿ ವರ್ಗದವರ ಲಿಸ್ಟಿಗೆ ಸೇರಿದ್ದೂ ಆಯಿತು. ಆಫೀಸಿನಲ್ಲಿ ಕೆಲವರಂತೂ ಮುಖವೇ ಕಾಣದ ಹಾಗೆ ಗಡ್ಡ ಬಿಟ್ಟಿದ್ದರು. ಕಾರಣ ಕೇಳಿದರೆ, “ಅಲರ್ಜಿ ಆಗುತ್ತದೆ. ಟೈಮಿಲ್ಲ. ಹೀಗೆ ಚೆನ್ನಾಗಿ ಕಾಣುತ್ತದೆ” ಎಂದುತ್ತರಿಸುತ್ತಿದ್ದರು. ಆದರೂ ನಾನು ಕೇಳುವುದನ್ನು ಬಿಡುತ್ತಿರಲಿಲ್ಲ. ಏನಾದರೂ ಮಾಡಿ ಇವರ ಗಡ್ಡ ತೆಗೆಸಿ ಸರಿಯಾಗಿ ಅವರ ಮುಖ ನೋಡಬೇಕೆನ್ನುವ ಹಠ. ನನ್ನ ಹಿಂಸೆಗೆ ಒಬ್ಬೊಬ್ಬರು ಗಡ್ಡ ಬೋಳಿಸಿಕೊಂಡು ಬಂದು ಎಲ್ಲರಿಗೂ ಹಿಂಸೆ ಕೊಡಲು ಶುರುಮಾಡಿದ್ದರು.

ಇವರೆಲ್ಲರನ್ನೂ ನೋಡಿ ನನಗೂ ಗಡ್ಡ ಬಿಡಬೇಕೆಂಬ ಆಲೋಚನೆ ಇಣುಕಹತ್ತಿತ್ತು. ಈ ಆಲೋಚನೆಗೆ ನನ್ನ ನೆಚ್ಚಿನ ಮತ್ತೊಬ್ಬ ನಟ ಶಂಕರನಾಗ್ ಗಡ್ಡದ inspiration ಬೇರೆ kuಕುಮ್ಮಕ್ಕು ನೀಡತೊಡಗಿತು. ಜಾರ್ಜ್ ಬರ್ನಾಡ್ ಶಾರಂತೂ ದಿನಕ್ಕೆ ನಾಲ್ಕು ನಿಮಿಷ ವೇಷ್ಟೆಂದು ಗಡ್ಡವನ್ನು ತೆಗೆಯುತ್ತಿರಲಿಲ್ಲ. ಗಡ್ಡವನ್ನು ಬಿಟ್ಟರೆ ಟೈಮೂ ಉಳಿಯುತ್ತಿದ್ದರಿಂದ ಇನ್ನಷ್ಟು ಹೆಚ್ಚು ಓದಬಹುದಲ್ಲ ಎಂಬ ಆಸೆ ಬೇರೆ ಜೊತೆಗೂಡಿತು. ಆದರೆ ಯಾಕೋ ಮನಸೇ ಬರಲಿಲ್ಲ. ಅಲ್ಲಿಗೆ ಗಡ್ಡ ಬಿಡುವ ವಿಚಾರ ಕೈ ಬಿಟ್ಟಂತಾಯಿತು. ಜೊತೆಗೆ ದಿನಾಗಲೂ ನೀಟಾಗಿ ಶೇವ್ ಮಾಡಿಕೊಂಡು ಆಫೀಸಿಗೆ ಹೋಗು ಎನ್ನುವ ಅಪ್ಪನ ಅಡ್ವೈಸಿತ್ತು.

ವರ್ಷಗಳು ಉರುಳಿದವು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಲಕ್ಷ್ಮಿಯನ್ನು ಕೈ ಹಿಡಿಯುವ ಮುಹೂರ್ತ ಬಂತು. ಸರಳ ಸುಂದರ ವಿವಾಹ. ಅಂದಂತೂ ಮೂರು ಬಾರಿ ಶೇವ್ ಮಾಡಿಕೊಂಡಿದ್ದಾಯಿತು. ಮನತುಂಬಿದ್ದವಳನ್ನು ಮದುವೆಯಾಗಿ ಮನೆ ತುಂಬಿಸಿಕೊಂಡದ್ದಾಯಿತು. ಮೊದಲ ರಾತ್ರಿಯೇ ನನ್ನ ನಯವಾದ ಕೆನ್ನೆಯನ್ನು ಮೆಚ್ಚಿ hಹೊಗಳಿದ್ದಳು ನನ್ನ ಮಡದಿ. ಅದಕ್ಕೆ ಬೋನಸ್ಸಾಗಿ ಎರಡು ಸಿಹಿಮುತ್ತುಗಳು ಹೆಚ್ಚಾಗಿವೇ ದೊರೆತವು. ಅಲ್ಲಿಗೆ ದಿನಾಗಲೂ ನಯವಾಗಿ ಶೇವ್ ಮಾಡಿಕೊಳ್ಳುವುದರ ಖುಷಿಯ ಜೊತೆಗೆ ಪ್ರಯೋಜನವಾಗತೊಡಗಿತ್ತು.

ಅದೇನಾಯಿತೋ ಏನೋ ಇದ್ದಕ್ಕಿದ್ದಂತೆ ನನ್ನ ಹೆಂಡತಿಗೆ ನನ್ನ ಗಡ್ಡವನ್ನು ನೋಡುವ ಬಯಕೆಯಾಯಿತು. ಒಂದು ದಿನ ಬಿಂಕದಿಂದ “ರೀ, ನೀವು ಒಂದು ತಿಂಗಳ ಕಾಲ ಗಡ್ಡ ಬಿಟ್ಟು ಬಿಡಿ. ನಿಮ್ಮನ್ನು ಗಡ್ಡದಲ್ಲಿ ನೋಡುವ ಆಸೆಯಾಗಿದೆ” ಎಂದು ಕೋರಿಕೆಯಿಟ್ಟಳು. ನಾ ಬೇಡವೆಂದೆ. ಅವಳು ಬಿಡಲಿಲ್ಲ. ಕಡೆಗೆ ಅವಳ ಹುಸಿಕೋಪಕ್ಕೆ ಭಯವಾಗಿ ನಾನೇ ಸೋತೆ. ಆದರೆ ನನ್ನದೊಂದು ಕಂಡಿಷನ್ ಮೇಲೆ. ಏನೆಂದರೆ ನಾನು ಗಡ್ಡ ಬಿಟ್ಟಾಗಲೂ ದಿನಾಲೂ ಕೊಡುವ ಬೋನಸ್ ಮುತ್ತುಗಳನ್ನು ತಪ್ಪಿಸಬಾರದೆಂದು. ಅದಕ್ಕವಳು ಒಪ್ಪಿ ಕೆನ್ನೆಯ ಮೇಲೆ ರುಜು ಹಾಕಿದಳು.

ಹೆಂಡತಿಗಾಗಿ ಯಾರ್ಯಾರೋ ಏನೇನನ್ನೋ ಮಾಡಿದ್ದಾರೆ. ಆರನೇ ಜಾರ್ಜ್, ಬ್ರಿಟಿಷ್ ಸಾಮ್ರಾಟ ಸಿಂಹಾಸನವನ್ನೇ ತ್ಯಜಿಸಲಿಲ್ಲವೇ? ಅಂದಿನಿಂದ ಗಡ್ಡ ಬಿಡುವುದು ಶುರುವಾಯಿತು. ಮೊದಲ ದಿನದ ಗಡ್ಡವನ್ನು ಕನ್ನಡಿಯಲ್ಲಿ ನೋಡಿಕೊಂಡರೆ ಎನೋ ಇರುಸುಮುರುಸು. ಕನ್ನಡಿಯೂ ಬೇಜಾರು ಮಾಡಿಕೊಂಡಂತಿತ್ತು. ಬದಲಾವಣೆ ಜಗದ ನಿಯಮವಾಗಿರುವಾಗ ನನ್ನದೇನು ಎಂದು ಕೊಂಡು ಆಫೀಸಿಗೆ ಹೋರಟ್ಟದಾಯಿತು. ಬಾಗಿಲ ಬಳಿ ನಿಂತು ಮಡದಿ ಮುಸಿಮುಸಿ ನಗುತ್ತಿದ್ದಳು. ಕಣ್ಣಲ್ಲೇ ಚೆನ್ನಾಗಿದೆ ಎಂದಳು.

For the first time in my life ಗಡ್ಡದ ಜೊತೆ ಆಫೀಸಿಗೆ ಹೊರಟ್ಟಿದ್ದೆ. ದಾರಿಯಲ್ಲೆಲ್ಲಾ ನನ್ನನ್ನೇ ನೋಡುತ್ತಿದ್ದಾರೇನೋ ಎಂದೆನಿಸುತ್ತಿತ್ತು. ಆಫೀಸಿನಲ್ಲಿ ಕಿಚಾಯಿಸುವವರನ್ನು ನೆನೆದು ಭಯವಾಗುತ್ತಿತ್ತು. ಹೆಂಡತಿ ಹೇಳಿದರೆ ಕೇಳಲೇಬೇಕು ಎಂಬ ಹಾಡನ್ನು ನೆನೆದು ಸಮಾಧಾನಮಾಡಿಕೊಂಡು, ಏನಾದರಾಗಲಿ ಯಾರಿಗೂ ಗಡ್ಡ ಬಿಟ್ಟ ಕಾರಣವನ್ನು ಹೇಳಬಾರದೆಂದು ಆಫೀಸಿಗೆ ಕಾಲಿಟ್ಟಿದ್ದಾಯಿತು.

ಮೊದಲ ದಿನವಾದ್ದರಿಂದ ಅಷ್ಟಾಗಿ ಯಾರೂ ಗಮನಿಸಲಿಲ್ಲ. ಎರಡು, ಮೂರು ದಿನ ಕಳೆದ ಮೇಲೆ ಎಲ್ಲರೂ ನನ್ನನ್ನೇ ದಿಟ್ಟಿಸತೊಡಗಿದರು. ಕಡೆಗೂ ರೆಗ್ಯೂಲರ್ರಾಗಿ ಗಡ್ಡ ಬಿಡುತ್ತಿದ್ದವರೊಬ್ಬರಿಂದ ನಿರೀಕ್ಷಿತ ಪ್ರಶ್ನೆ ಬಂತು. “ಏನ್ರೀ? ಗಡ್ಡ ಬಿಟ್ಬುಟಿದ್ದೀರಾ?” ವ್ಯಂಗ್ಯ ಬೆರೆತ ಧ್ವನಿ. “ಏನಿಲ್ಲಾ ಸಾರ್, ಫಾರ ಎ ಚೇಂಜ್ ಅಷ್ಟೆ” ಎಂದು ಅಂದು ಮಾತು ತೇಲಿಸಿದ್ದಾಯಿತು. ಆದರೆ ಕಿಚಾಯಿಸುವವರು ಅಷ್ಟಕ್ಕೇ ಸುಮ್ಮನಿರಬೇಕಲ್ಲಾ? ಮೊದಲೆಲ್ಲಾ ನಾನು ರೇಗಿಸುತ್ತಿದ್ದವರಿಗೆಲ್ಲಾ ನನ್ನನ್ನು ರೇಗಿಸಲು ನಾನಾಗಿಯೇ ಒಂದು ಟಾಪಿಕ್ ಕೊಟ್ಟಂತಾಗಿತ್ತು. ಮತ್ತೆ ದಿನಾಗಲೂ ನನ್ನ ಗಡ್ಡದ ಬಗ್ಗೆಯೇ ಪ್ರಶ್ನೆಗಳ ಮಳೆ ಶುರುವಾಯಿತು. ದಿನಾಲು ಏನಾದರೊಂದು ಹೇಳಿ, ನನ್ನ ನಲ್ಲೆಯನ್ನು ಮನದಲ್ಲೇ ನೆನೆಯುತ್ತಾ, ಒಳಗೊಳಗೇ ನಗುತ್ತಾ ಆಗುತ್ತಿದ್ದ ಮುಜುಗರದಿಂದ ತಪ್ಪಿಸಿಕೊಳ್ಳತೊಡಗಿದೆನು. ಎಲ್ಲಿಯವರೆಗೂ ತಪ್ಪಿಸಿಕೊಳ್ಳುವುದು? ಕಡೆಗೂ ಆಘಾತವಾಗುವಂತ ಒಂದು ಪ್ರಶ್ನೆ ಮೂಡಿಬಂತು. “ಏನಪ್ಪ ಮದುವೆಯಾಗಿ ಮೂರೇ ತಿಂಗಳಿಗೆ ಏನಾದ್ರೂ ಪ್ರಾಬ್ಲಮ್ಮ?” ಶಶಿ ಆತ್ಮೀಯತೆಯಿಂದ ಕೇಳಿದರೂ ಅವನ ಪ್ರಶ್ನೆ ನನ್ನನ್ನು ಕ್ಷಣಕಾಲ ವಿಚಲಿತನನ್ನಾಗಿಸಿತು. “ಏ ಏನಿಲಮ್ಮಾ?” ಎಂದು ನಕ್ಕಿದೆ. ಮುಂದುವರೆದ ಅವನು “ಎಲ್ಲಾರೂ ನಿನ್ನ ಹಿಂದೆ ನಿನ್ನ ಗಡ್ಡದ ಬಗ್ಗೆಯೇ ಮಾತಾಡುತ್ತಿದ್ದಾರೆ. ಏನೋ ಪ್ರಾಬ್ಲಂ ಇರ್ಬೇಕು ಅದಕ್ಕೆ ಗಡ್ಡ ಬಿಟ್ಟವ್ನೆ ಅಂತಾ. ಬೇಜಾರ್ ಮಾಡ್ಕೋಬೇಡಪ್ಪ” ಎಂಬ ಸಮಾಧಾನದ ಆದರೆ ಎಚ್ಚರಿಕೆಯ ಮಾತನಾಡಿದ್ದ.

ನನ್ನ ಕಷ್ಟ ಅವನಿಗೇನು ಗೊತ್ತು. ಹೇಳುವ ಹಾಗೂ ಇಲ್ಲಾ, ಬಿಡುವ ಹಾಗೂ ಇಲ್ಲ. ಬಾಯಲ್ಲಿ ಬಿಸಿ ತುಪ್ಪ, ಉಗುಳುವ ಹಾಗೂ ಇಲ್ಲ, ನುಂಗುವ ಹಾಗೂ ಇಲ್ಲ. ಏನಾದರಾಗಲಿ ಯಾರಿಗೂ ನಾನು ಗಡ್ಡ ಬಿಟ್ಟ ಕಾರಣವನ್ನು ಹೇಳುವ ಹಾಗಿರಲಿಲ್ಲ. ಹೇಳಲೇಬಾರದೆಂಬ ಮಡದಿಯ ಒತ್ತಾಸೆಯಿತ್ತಲ್ಲ! ಸರಿ, ಹಾಗೆಯೇ ದಿನ ಕಳೆಯುತ್ತಾ, ಕಳೆಯುತ್ತಾ ನನ್ನ ಗಡ್ಡ ಮತ್ತಷ್ಟು, ಮೊಗದಷ್ಟು ಸೊಂಪಾಗಿ ಬೆಳೆಯತೊಡಗಿತು. ಕೇಳುವವರು ಎಷ್ಟು ಅಂತಾ ಎದುರಿಗೆ ಕೇಳಿಯಾರು? ಆದರೆ ಹಿಂದೆ ಪಿಸುಪಿಸು ಗುಸುಗುಸು ತಪ್ಪಲಿಲ್ಲ. ಹೇಳಬೇಕೆಂದರೆ ಅದು ಇನ್ನೂ ಹೆಚ್ಚಾಯಿತು.

ಹೀಗೆ ಇಪ್ಪತ್ತು ದಿನಗಳು ಕಳೆದವು. ಗಡ್ಡದ ಬಗೆಗಿನ ಇತರರ ಕುತೂಹಲ ನನಗೆ ಸಹಿಸಲಾಗಲಿಲ್ಲ. ಅವರ ನೋಟಗಳಲ್ಲೇ ಏನಾದ್ರು ಪ್ರಾಬ್ಲಮ್ಮ? ಎಂಬ ಮೊನಚು ಪ್ರಶ್ನೆಗಳು ಕಾಡುತ್ತಿದ್ದವು. ನನಗೆ ಇನ್ನು ತಡೆಯಲಾಗಲಿಲ್ಲ. ಇಷ್ಟೂ ದಿನವೂ ನನ್ನ ಮಡದಿ ನಿಮ್ಮ ಗಡ್ಡದ ಬಗ್ಗೆ ಆಫೀಸಿನಲ್ಲಿ ಯಾರೂ ಏನೂ ಕೇಳಲಿಲ್ಲವಾ? ಎಂಬ ಪ್ರಶ್ನೆಗೆ ಇಲ್ಲಾ ಎಂದೇ ಉತ್ತರಿಸಿ ಸುಮ್ಮನಾಗುತ್ತಿದ್ದವನು, ಒಂದು ರಾತ್ರಿ ಮಲಗುವ ಮುನ್ನ ಅವಳ ಮುಖವನ್ನೇ ದಿಟ್ಟಿಸುತ್ತಾ ಆಫೀಸಿನಲ್ಲಿ ನನ್ನ ಗಡ್ಡದ ಬಗ್ಗೆ ಮೂಡಿರುವ ಸಂದೇಹಗಳು, ಸಹೋದ್ಯೋಗಿಗಳ ಕುಹಕ ಪ್ರಶ್ನೆಗಳ ಬಗ್ಗೆ ಹೇಳಿದೆ. “ಅವರಿಗೇನಂತೆ?” ಎಂದು ತಕ್ಷಣ ಕೇಳಿದವಳು, ಏನೋ ತಪ್ಪಿ ನುಡಿದವಳಂತೆ ಮತ್ತೆ “ಬೇಡ ಬಿಡಿ, ನಾಳೇನೇ ಗಡ್ಡ ತೆಗೆದುಬಿಡಿ” ಎಂದಳು. “ಏಯ್! ಇಲ್ಲಾ ಕಣೆ, ಯಾರ್ ಏನೇ ಹೇಳ್ಲಿ ನಾನು ಮಾತಿಗ್ ತಪ್ಪಲ್ಲ. ಅದೇನಾಗುತ್ತೋ ಆಗ್ಲಿ ಬಿಡು. ಕೆಲವರನ್ನ ಅರ್ಥಮಾಡ್ಕೋಳ್ಳೊಕ್ಕೂ ಇದು ಒಳ್ಳೆ ಟೈಮು ಅಂತ ಸುಮ್ನೆ ಇದ್ದುಬಿಡ್ತೀನಿ. ನೀ ಸುಮ್ನಿರು ಜಾಸ್ತಿ ತಲೆ ಕೆಡಿಸ್ಕೋಬೇಡ” ಅಂದೆ. ಅದಕ್ಕವಳು, “ಅದು ಹಾಗಲ್ಲಾರೀ... ಅವರೆಲ್ಲಾ ನಮ್ಮ ಸಂಬಂಧದಲ್ಲಿ ಏನೋ ಸಮಸ್ಯೆ ಆಗಿದೆ ಅಂತಾ ತಪ್ಪು ತಿಳ್ಕೋಂಡಿದಾರೆ... ಅದು ನನಗೆ ಅಷ್ಟು ಸರಿ ಕಾಣ್ತಾ ಇಲ್ಲಾ... ಪ್ಲೀಸ್... ನಾಳೇನೇ ಗಡ್ಡ ತೆಗೆಸಿಬಿಡಿ...” ಎಂದು ಗೋಗರೆದಳು. “ಇದೇನೇ ನೀನು, ಗಡ್ಡ ಬಿಡಿ ಅಂತ್ಯಾ, ತೆಗಿಸ್ರಿ ಅಂತ್ಯಾ, ನಾ ಮೊದ್ಲೆ ಬೇಡ ಅಂತಾ ಹೇಳುದ್ನೋ ಇಲ್ವೊ?” ಎಂದು ಸ್ವಲ್ಪ ಬೇಸರದಿಂದಲೇ ನುಡಿದೆ. ಅದಕ್ಕವಳು “ರೀ... ಸಾರಿ ರೀ... ಪ್ಲೀಸ್... ನಾಳೆ ತೆಗೆದ್ಬುಡಿ” ಎಂದು ಅಳುವಂತೆ ಆಡಿದಳು. ನನಗೂ ಗಡ್ಡದ ಕಿರಿಕಿರಿ ಸಾಕಾಗಿತ್ತು. ಇವಳು ಒಪ್ಪಿದ ಮೇಲೆ ಇನ್ನೇನು? ಸರಿ ಎಂದು ಮನದಲ್ಲೇ ಅಂದುಕೊಂಡು, ಇವಳೆಡೆಗೆ ಬಾಗಿ “ಪಾಪಿ ಗಡ್ಡಕ್ಕೆ ಇವತ್ತೇ ಲಾಸ್ಟ್ ಛಾನ್ಸ್” ಎಂದೆ. ಎಂದಿನಂತೆ ಅವಳು ನಗುಮೊಗದಿಂದ ಗಡ್ಡಕ್ಕೆ ಬಾಯ್ ಹೇಳಿದಳು.

---





ಶನಿವಾರ, ಮಾರ್ಚ್ 5, 2011

SWEET DREAM


SWEET DREAM



Oh! Dear,
You left me alone!
You said, I am possessive
Yes, I am. But,
It’s my passion
Towards you and your love!

Again, and again
I failed to control my tears!
The tiny drops, which falls apart,
Floating on waves beneath my legs
Let them find you
And cleanse your heart!

Even, the Sun is setting
Cool breeze, smoothing my heart
This evening, especially for us!
Let your heart, accompany mine
Set the night, like a
Sweet dream in our life!

(This poem is dedicated to our beloved brother Prakashanna)

                                - Gubbachchi Sathish.

ಗುರುವಾರ, ಫೆಬ್ರವರಿ 24, 2011

ದಶರಥ್ ಮಂಜಿ ಎಂಬ ಮೌಂಟೆನ್ ಮ್ಯಾನ್ ನ ಕಥೆ...


ಇವಳಿಗೆ ಲೆಫ್ಟಿನೆಂಟ್ ಬ್ಲಾಂಡ್ ಪೋರ್ಡ್‍ನ ಕಥೆಯನ್ನು ಹೇಳಿದ್ದೆ ತಪ್ಪಾಯಿತು ಎಂದೆನಿಸುತ್ತದೆ. ಮತ್ತೆ ಮತ್ತೆ ಸಿಕ್ಕಿದಾಗಲೆಲ್ಲಾ ಕಥೆ ಹೇಳಿ ಎಂದು ಕಾಡ ತೊಡಗಿದಳು. ಕಥೆ ಹೇಳಿದರೆ ಬೋನಸ್ ಹೂ ಮುತ್ತುಗಳು ಸಿಗುವುದು ಗ್ಯಾರಂಟಿಯಾದರೂ... ಇಂದಿನ ದಿನಗಳಲ್ಲಿ ಯಾವ ಕಥೆಯನ್ನು ಹೇಳುವುದು? ಅದೂ ಇವಳಿಗೆ ಎಂದ ಮೇಲೆ ಅದು ಪ್ರೀತಿಯ ಕಥೆಯೇ ಆಗಿರಬೇಕು. ಈ ಹುಡುಗಿ ಬೇರೆ ತಾನು ಹೇಳಿದ ಮೇಲೆ ಮುಗಿಯಿತು. ಅದು ಆಗಲೇ ಬೇಕು ಎಂಬ ಮನಸ್ಥಿತಿಯಲ್ಲಿದ್ದಾಳೆ. ಯಾವ ಕಥೆ ಹೇಳುವುದು ಎಂದು ಚಿಂತಿಸುತ್ತಲೇ, “ಮತ್ತೆ ಸಿಕ್ಕಾಗ ಹೇಳುತ್ತೇನೆ” ಎಂದು ಕಥೆ ಹೇಳುವ ಕ್ರಿಯೆಯಿಂದ ತಪ್ಪಿಸಿಕೊಳ್ಳತೊಡಗಿದೆ. ಆದರೂ ಹೂಮುತ್ತುಗಳು ಸಿಗುತ್ತಿದ್ದವು. ಆದರೆ ಮುನಿಸಿನಿಂದ ಮತ್ತು ಬೋನಸ್ ಇರುತ್ತಿರಲಿಲ್ಲ.

ಎಷ್ಟು ದಿನ ಹೀಗೆ ತಪ್ಪಿಸಿಕೊಳ್ಳಲು ಸಾಧ್ಯ? ಅಂತೂ ಇಂತೂ ವ್ಯಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು. ಅಂದು ನಮಗೆ ಅಂತಹ ವಿಶೇಷವೇನಿಲ್ಲದಿದ್ದರೂ, ಬದಲಾದ ಕಾಲಕ್ಕೆ ತಕ್ಕಂತೆ ನಡೆಯಬೇಕು ಮತ್ತು ಸಮಕಾಲೀನತೆಯ ಟಚ್ ಮಿಸ್ ಮಾಡಿಕೊಳ್ಳುತ್ತಿವೇನೋ ಎಂಬ ಆತಂಕದಲ್ಲೇ ಮೀಟ್ ಆದೆವು.

ಭೇಟಿಯಾಗುತ್ತಿದ್ದಂತೆ “ಇಂದು ಕಥೆ ಹೇಳಲೇಬೇಕು” ಎಂದು ವರಾತ ತೆಗೆದಳು. Most expected Question ಎಂದುಕೊಂಡು “ಸರಿ” ಎಂದೆ. “ಯಾವ ಕಥೆ?” ಎಂದಳು. ಅವಳ ಕುತೂಹಲ ಕಂಡು, ಸ್ವಲ್ಪ ಆಟ ಆಡಿಸೋಣ ಎಂದುಕೊಳ್ಳುತ್ತಾ, “ವ್ಯಾಲೆಂಟೈನ್ ಸಂತನ ಕಥೆ ಬೇಡ” ಎಂದೆನು. “ನನಗೂ ಆ ಕಥೆ ಬೇಡ” ಎಂದಳು. ತಗಳಪ್ಪ... ಎಂದು ಕೊಂಡು “ತಾಜ್ ಮಹಲ್ ಕಥೆ ಹೇಳ್ಲ?” ಎಂದೆ. “ಅದೂ ನಂಗೊತ್ತು. ಕೇಳೋದಕ್ಕೆನೋ ಚೆನ್ನಾಗಿರುತ್ತೆ. ಆದರೆ, ಈ ನಡುವೆ ಆ ಕಥೆಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ” ವೆಂದಳು. “ಸರಿ ಮತ್ತೆ, ಯಾವ ಕಥೆ ಹೇಳೋದು? ಏನೂ ಬೇಡ ಬಿಡು” ಎಂದೆ. “ಅದೆಲ್ಲಾ ಇಲ್ಲಾ, ಇವತ್ತು ಯಾವುದಾದರೂ ಹೊಸ ಕಥೆ ಹೇಳ್ಲೇಬೇಕು” ಎಂದು ಮತ್ತೆ ರಚ್ಚೆ ಹಿಡಿದ ಮಗುವಿನಂತೆ ಆಡತೊಡಗಿದಳು. ಕ್ಷಣಕಾಲ ಯೋಚಿಸಿ, “ಹೂಂ... ಸರಿ. ಹಾಗಾದ್ರೆ ಇವತ್ತು ದಶರಥ್ ಮಂಜಿಯ ಕಥೆ ಹೇಳ್ತೇನೆ?” ಎಂದು ಉತ್ಸಾಹದಲ್ಲೇ ನುಡಿದೆ. “ದಶರಥ್ ಮಂಜಿ?” ಅವಳ ಮುಖವೆಲ್ಲಾ ಆಶ್ಚರ್ಯ ಸೂಚಕದ ಜೊತೆಗೆ ಪ್ರಶ್ನಾರ್ಥಕ!?. “ಹೌದು. ದಶರಥ್ ಮಂಜಿಯ ಕಥೆ!. ಇವತ್ತಿನ ಕಾಲದಲ್ಲಿ ಅವನು ನಿಜಕ್ಕೂ ಗ್ರೇಟ್” ಎಂದೆ. “ಹಾಗಾದರೆ ಬೇಗ ಹೇಳಿ” ಎಂದು ಪುಟ್ಟ ಮಗುವಿನಂತೆ ನನ್ನ ಮುಂದೆ ಕೈ ಕಟ್ಟಿ ಕುಳಿತಳು.

“ದಶರಥ್ ಮಂಜಿ 1934 ರಲ್ಲಿ ಬಡತನದ ಕುಟುಂಬವೊಂದರಲ್ಲಿ, ಬಿಹಾರದ ಗಯಾದ ಸಮೀಪವಿರುವ ಗೆಹ್ಲಾರ್ (Gahlour) ಎಂಬ ಹಳ್ಳಿಯಲ್ಲಿ ಹುಟ್ಟಿದ. ಅವನು ಮುಸಾಹರ್ (Musahars) ಎಂಬ ವಂಶಕ್ಕೆ ಸೇರಿದವನಾಗಿದ್ದ. ಅವನ ಜಾತಿಯನ್ನು ಸಮಾಜದಲ್ಲಿ ದಲಿತರೆಂದು ಪರಿಗಣಿಸಲಾಗಿತ್ತು. ಮುಸಾಹರ್^ಗಳನ್ನು ಇಲಿ ತಿನ್ನುವವರು ಮತ್ತು ಸ್ವಚ್ಚಂದವಾಗಿ ಕುಡಿಯುವವರೆಂದು ಪಾರಂಪರಿಕವಾಗಿ ಘೋಷಿಸಲಾಗಿತ್ತು. ಮತ್ತು ಅವರೆಲ್ಲಾ ಇಲಿ ಹೆಗ್ಗNaNಣಗಳು ಸಂಗ್ರಹಿಸುವ ಆಹಾರ ಧಾನ್ಯಗಳನ್ನು ಅವುಗಳ ಬಿಲಗಳಿಂದ ಕೆದಕಿ ತಿಂದು ಜೀವಿಸುವವರು ಎಂದು ಗುರುತಿಸುತ್ತಿದ್ದರು. ಅವರೆಲ್ಲಾ ಸಮಾಜದ ಬಡವರಲ್ಲಿ ಬಡವರಾಗಿದ್ದರು.”

“ಇದರಲ್ಲಿ ಅಂತಾ ಕಥೆಯೇನಿದೆ?” ಎಂದು ಇವಳು ಕಟ್ಟಿದ್ದ ಕೈಯನ್ನು ತೆಗೆದಳು.

ಸಾಮಾನ್ಯವಾಗಿ ಮಧ್ಯದಲ್ಲಿ ಬಾಯಿ ಹಾಕದ ಇವಳ ಪ್ರಶ್ನೆ ಸಹಜವಾದುದೇ ಎಂದೆನಿಸಿತು. ಅಷ್ಟಕ್ಕೂ ಬಡವರ ಕಥೆ ಯಾರಿಗೆ ತಾನೆ ಸಹ್ಯವಾದೀತು?

“ಹಾಗಾದರೆ, ಕಥೆ ಬೇಡವಾ?” ನಾನಂದೆ.

“ಬೇಕು... ಆದರೆ?” ಎಂದಳು.

“ಆದ್ರೆ ಗಿದ್ರೆ ಬಿಟ್ಟು, ತಾಳ್ಮೆಯಿಂದ ಕೇಳುದ್ರೆ ಹೇಳ್ತೀನಿ” ಎಂದೆ.

“ಆಯ್ತು ಹೇಳಿ. ಮಧ್ಯ ಬಾಯಿ ಹಾಕಲ್ಲ” ಎನ್ನುತ್ತಾ ಮತ್ತೆ ಕೈ ಕಟ್ಟಿ ಕೂತೂಹಲದಿಂದ ನೋಡತೊಡಗಿದಳು.

“ಅವಿದ್ಯಾವಂತನಾದ ದಶರಥ್ ಮಂಜಿ ತನ್ನ ಹಳ್ಳಿಯ ಸುತ್ತಮುತ್ತಲೇ ಇದ್ದ ಹೊಲಗದ್ದೆಗಳಲ್ಲಿ ಕೂಲಿ ಕೆಲಸ ಮಾಡಬೇಕಾಗಿ ಬಂತು. ಅವನು ಕೆಲಸ ಮಾಡುತ್ತಿದ್ದ ಹೊಲದ ಪಕ್ಕದಲ್ಲೇ ಆ ಹಳ್ಳಿಯ ಒಂದು ತುದಿಗೆ ಬೆಟ್ಟವೊಂದಿತ್ತು. ಆ ಬೆಟ್ಟವನ್ನು ಬಳಸಿ ಪಕ್ಕದೂರಿಗೆ ಹೋಗುವ ದಾರಿ ತುಂಬಾ ದೂರ, ಜೊತೆಗೆ ಚಿಕ್ಕದು ಮತ್ತು ದುರ್ಗಮವಾಗಿತ್ತು. ಅತ್ರಿ (Atri) ಮತ್ತು ವಾಜಿರ್ ಗಂಜ್ (Vazirganz) ಎಂಬ ಗಯಾದ ಎರಡು ಉಪಭಾಗಗಳ ನಡುವೆ ಸುಮಾರು 50 ಕಿಲೋಮೀಟರ್ ದೂರವಿತ್ತು.

1967 ರಲ್ಲಿ ಒಂದು ದಿನ, ದಶರಥ್ ಮಂಜಿಯ ಹೆಂಡತಿ ಫಗುನಿ ದೇವಿ ಗಂಡನಿಗೆ ಊಟ ತೆಗೆದುಕೊಂಡು ಹೋಗುವಾಗ ಆ ದುರ್ಗಮ ಹಾದಿಯಲ್ಲಿ ಜಾರಿ ಬಿದ್ದಳು. ಅವಳಿಗೆ ತುಂಬಾ ಪೆಟ್ಟಾಗಿತ್ತು. ಆ ಬೆಟ್ಟವನ್ನು ಸುತ್ತಿ ಅವಳನ್ನು ಆಸ್ಪತ್ರೆಗೆ ಸಾಗಿಸಲು ಮಂಜಿ ಬಹಳ ಕಷ್ಟ ಪಡಬೇಕಾಯಿತು. ಈ ಘಟನೆ ದಶರಥ ಮಂಜಿಯನ್ನು ವಿಚಲಿತಗೊಳಿಸಿತು. ಅಂದು ರಾತ್ರಿಯೇ ದಶರಥ ಮಂಜಿಯು ಆ ಬೆಟ್ಟವನ್ನು ಸೀಳಿ ರಸ್ತೆ ಮಾಡಬೇಕೆಂದು ನಿರ್ಧರಿಸಿದನು. ಬೆಳಿಗ್ಗೆ ಎದ್ದವನೇ ಸುತ್ತಿಗೆ ಮತ್ತು ಉಳಿಯನ್ನು ತೆಗೆದುಕೊಂಡು ಬೆಟ್ಟದ ಬಳಿ ಹೋಗಿ ತನ್ನ ಕೆಲಸ ಶುರುಮಾಡಿಯೇ ಬಿಟ್ಟನು. ಅದು ಅಂದಿನಿಂದ ಅವನ ಕಾಯಕವೇ ಆಗಿಬಿಟ್ಟಿತು. ಜನ ಇವನ ಭ್ರಾಂತಿಯನ್ನು ನೋಡಿ ಹುಚ್ಚನೆನ್ನತೊಡಗಿದರು. ಮಂಜಿಗೆ ಅದರ ಪರಿವೆಯೇ ಇರಲಿಲ್ಲ.

ಏಕಾಂಗಿಯಾಗಿ ಕೇವಲ ಸುತ್ತಿಗೆ ಉಳಿಗಳಿಂದ ಆತ ಹಾಕಿದ ಸತತ ವರ್ಷಗಳ ಪರಿಶ್ರಮ ವ್ಯರ್ಥವಾಗಲಿಲ್ಲ. 1988 ರ ಸುಮಾರಿಗೆ, ಅಂದರೆ 22 ವರ್ಷಗಳ ನಂತರ ಆತನಿಗೆ ಪ್ರತಿಫಲಸಿಕ್ಕಿತ್ತು. 50 ಕಿಲೋಮೀಟರ್‍ಗಳ ದುರ್ಗಮ ಹಾದಿ ಬರೀ 8 ಕಿಲೋಮೀಟರ್‌ಗಳ, 360 ಅಡಿ ಉದ್ದದ, 30 ಅಡಿ ಎತ್ತರದ, 25 ಅಡಿ ಅಗಲದ ಸುಲಭದ ಮಾರ್ಗವಾಗಿತ್ತು.

“ವಾವ್ ಗ್ರೇಟ್!” ಎಂಬ ಉದ್ಗಾರ ಇವಳಿಂದ.

“ಆದರೆ, ದುರದೃಷ್ಟವಶಾತ್, ತನ್ನ ಗಂಡನ ಸಾಹಸವನ್ನು ನೋಡುವ ಮೊದಲೇ ಫಲ್ಗುಣಿ ದೇವಿ ತೀರಿಕೊಂಡಿದ್ದಳು” ಬೇಸರದಿಂದ ನಾನು ನುಡಿದೆ.

“ಅಯ್ಯೋ, ಪಾಪ” ವೆಂದಳು.

ಅತ್ತುಗಿತ್ತಳು ಎಂದು ಅವಳ ಕಣ್ಣನ್ನೇ ಗಮನಿಸುತ್ತಿದ್ದ ನನಗೆ ಏನು ಹೇಳಬೇಕೆಂದು ತೋಚಲಿಲ್ಲ.

“ಮುಂದೆ...ದಶರಥ್ ಮಂಜಿ ಏನಾದ?” ಎಂದು ಪ್ರಶ್ನಿಸಿದಳು.

ಅಳುತ್ತಾಳೆಂದು ಕೊಂಡವನಿಗೆ ಅವಳ ಪ್ರಶ್ನೆ ಕಾಡತೊಡಗಿತು.

ಒಲ್ಲದ ಮನಸ್ಸಿನಿಂದ, “ಇನ್ನೇನು, ಅವನು ದಂತಕಥೆಯೇ ಆಗಿಬಿಟ್ಟ! ಇಲ್ಲಿಗೆ ಕಥೆ ಮುಗಿಯಿತು” ಎಂದು ನಾನಂದೆ.

“ಇಲ್ಲ, ಇಲ್ಲ ಅವನ ಮುಂದಿನ ಕಥೆ ಏನಾಯಿತು? ಅವನಿಗೆ ಪ್ರಶಸ್ತಿ ಪುರಸ್ಕಾರಗಳು? ಅವನು ಈಗ ಇದ್ದಾನೆಯೆ? ಇದ್ದರೆ ಹೇಗಿದ್ದಾನೆ? ಎಲ್ಲಿದ್ದಾನೆ?” ಪ್ರಶ್ನೆಗಳ ಸುರಿಮಳೆಯಾಯಿತು.

“ಬೇಡ ಬಿಡು ಲಕ್ಷ್ಮಿ. ಅವನು ಹೇಗಿದ್ದರೆ ನಮಗೇನು? ಅವನ ತ್ಯಾಗ, ಹೆಂಡತಿಯ ಮೇಲಿನ ಪ್ರತೀಕವಾಗಿಯಷ್ಟೇ ಈ ಕಥೆಯನ್ನು ಹೇಳಿದೆ. ಸಾಕು ಬಿಡು ಬರುತ್ತೇನೆ” ಎಂದು ನಾ ಹೇಳಿದೆ.

“ಇಲ್ಲಾ ನೀವು ಇವತ್ತು ಹೇಳ್ಲೇಬೇಕು” ಎಂದು ಹಠ ಹಿಡಿದಳು.

ನನಗೂ ತಡೆಯಲಾಗಲಿಲ್ಲ. ಮುಂದುವರೆದು ಹೇಳಿದೆ:

“ದಶರಥ್ ದಾಸ್, ದಶರಥ್ ಮಂಜಿ, ದಶರಥ್ ಭುಯ್ಯಾ ಎಂದೆಲ್ಲಾ ಹಳ್ಳಿಗರಿಂದ ಕರೆಯಲ್ಪಡುತ್ತಿದ್ದವನು ಅವರ ಪಾಲಿಗೆ “ಸಾಧು ಬಾಬಾ”ನೇ ಆಗಿಬಿಟ್ಟ. ಅವನನ್ನು ಹರಸಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಬಂದವು. ಆ ಹಾದಿಯಲ್ಲಿ ಬಿಗಿಯಾದ ರಸ್ತೆಯನ್ನು ಮಾಡಬೇಕೆಂದು ಸರ್ಕಾರಕ್ಕೆ ಆತ ಮೊರೆಯಿಟ್ಟ. ಬೆಟ್ಟವನ್ನು ತನ್ನ ಪರಿಶ್ರಮದಿಂದ ಸಿಗಿದದಲ್ಲದೇ ಅವನ ಹಳ್ಳಿಯಿಂದ ದಿಲ್ಲಿಯವರೆಗೆ ರೈಲ್ವೇ ಹಾದಿಯಲ್ಲಿ ಚಲಿಸಿ, ದಾಖಲೆಗೆ ತನ್ನ ಡೈರಿಯಲ್ಲಿ ಆ ಹಾದಿಯ ಎಲ್ಲಾ ಸ್ಟೇಷನ್ ಮಾಸ್ಟರ್ ಗಳ ಸಹಿ ಸಂಗ್ರಹಿಸಿದ.

ಆದರೆ, ಅವನ ಪರಿಶ್ರಮ ನಿರೀಕ್ಷಿತ ಫಲವನ್ನು ನೀಡಲಿಲ್ಲ. ರಾಜಕಾರಣಿಗಳು ದಶರಥ್ ಮಂಜಿಯನ್ನು ಕಾಟಾಚಾರಕ್ಕೆ ಭೇಟಿಯಾದರು. ಪಟ್ನಾ ದೂರದರ್ಶನದವರು ಅವನ ಕಥೆಗೆ ಐವತ್ತು ಸಾವಿರ ರೂಪಾಯಿ ನೀಡಿ ಟೆಲಿಚಿತ್ರ ಮಾಡುತ್ತೇವೆ ಎಂದರು. ಚಿತ್ರ ಮುಗಿದರೂ ಆ ದುಡ್ಡು ಅವನ ಕೈ ಸೇರಲಿಲ್ಲ. ಅಲ್ಲಿನ ಜಿಲ್ಲಾಧಿಕಾರಿ ದಶರಥ್ ಮಂಜಿಗೆ ರಾಷ್ಟ್ರಪತಿ ಪ್ರಶಸ್ತಿ ನೀಡಬೇಕೆಂದು ಶಿಫಾರಸ್ಸು ಮಾಡಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಅದೂ ಪ್ರಯೋಜನವಾಗಲಿಲ್ಲ. ರಾಷ್ಟ್ರಪತಿಗಳನ್ನು ಭೇಟಿಯಾಗಲು ಮಂಜಿಯ ಹಲವು ಪ್ರಯತ್ನಗಳು ವಿಫಲವಾದವು. ಆ ಸಮಯದಲ್ಲಿ ದಿಲ್ಲಿಯಲ್ಲೇ ದೂರದ ಸಂಬಂಧಿಗಳ ಜೊತೆಯಿದ್ದ ಅವನ ಸಾಹಸಗಳನ್ನು ಸರಿಯಾಗಿ ಯಾರೂ ಗುರುತಿಸಲಿಲ್ಲ.

ಆದರೆ, ಅಂದಿನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‍ರನ್ನು ಪಟ್ನಾದ ಜನಾತ ದರ್ಬಾರ್ ನಲ್ಲಿ ದಶರಥ್ ಮಂಜಿ ಭೇಟಿಯಾದಾಗ, ಮಂಜಿಯ ಸಾಹಸಗಳನ್ನು ಮೆಚ್ಚಿದ ಮುಖ್ಯಮಂತ್ರಿಗಳು ಆತನ ಗೌರವಾರ್ಥ ತಮ್ಮ ಸೀಟಿನಲ್ಲಿ ಆತನನ್ನು ಕೂಡಿಸಿ ಸನ್ಮಾನಿಸಿದ್ದರು. ಆತನಿಗೆ ನಾಲ್ಕು ಎಕರೆ ಜಮೀನನ್ನು ಆ ಹಳ್ಳಿಯಲ್ಲಿ ನೀಡಿದ್ದರು. ಆ ಜಮೀನನ್ನು ಮಂಜಿಯು ಆಸ್ಪತ್ರೆ ಕಟ್ಟಲು ನೀಡಿದನು.

ಇಷ್ಟೆಲ್ಲಾ ಮಾಡಿದ ಮಂಜಿ ಬಹಳ ದಿನ ಉಳಿಯಲಿಲ್ಲ. ಅಂದಿನ ನಿತೀಶ್ ಸರ್ಕಾರ ಆತನಿಗೆ ಪ್ರಖ್ಯಾತ ದಿಲ್ಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್‍ನಲ್ಲಿ ಚಿಕಿತ್ಸೆ ನೀಡಿದರೂ, ಅದು ಫಲಕಾರಿಯಾಗಲಿಲ್ಲ. ಆತನನ್ನು ಕಾಡುತ್ತಿದ್ದ ಪಿತ್ತಕೋಶದ ಕ್ಯಾನ್ಸರ್ ಅವನನ್ನು 2007 ರ ಆಗಷ್ಟ್^ನಲ್ಲಿ ಬಲಿತೆಗೆದುಕೊಂಡಿತು. ಆತನ ಅಂತಿನ ಸಂಸ್ಕಾರವನ್ನು ಸರ್ಕಾರದ ಸಕಲ ಮರ್ಯಾದೆಯೊಂದಿಗೆ ನೇರವೇರಿಸಲಾಯಿತು. ನಂತರ ಆ ಬೆಟ್ಟದ ರಸ್ತೆಗೆ ಆತನ ಹೆಸರನ್ನೇ ಇಡಲಾಯಿತು. ಮತ್ತು ಆತನಿಗೆ ನೀಡಿದ್ದ ಜಮೀನಿನಲ್ಲಿ ಆತನ ಕೋರಿಕೆಯಂತೆ ಆಸ್ಪತ್ರೆ ಕಟ್ಟಿಸಿ ಮಂಜಿ ಹೆಸರನ್ನೇ ಇಡಲಾಗಿದೆ.

ದಶರಥ್ ಮಂಜಿಯ ಪ್ರೀತಿಯ ಪ್ರತೀಕದಂತಿರುವ ಆ ರಸ್ತೆಯು ಷಹಜಹಾನನ ತಾಜ್‍ಮಹಲ್‍ನಷ್ಟು ಸುಂದರವಾಗಿರಲಿಲ್ಲದಿದ್ದರೂ, ಅದಕ್ಕಿಂತ ಗ್ರೇಟ್ ಅಲ್ಲವೇನೇ?” ಎಂದು ಒಂದೇ ಉಸುರಿಗೆ ಹೇಳಿ ಮಾತು ನಿಲ್ಲಿಸಿದವನು ಅವಳ ಪ್ರತಿಕ್ರಿಯೆಗೆ ಅವಳತ್ತ ದಿಟ್ಟಿಸಿ ನೋಡಿದೆನು.

ಅವಳ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬವು ಮಂಜು ಮಂಜಾಗುತ್ತಾ ಹೋಯಿತು.

ಗುರುವಾರ, ಫೆಬ್ರವರಿ 10, 2011

ಲ್ಯಾಪ್ ಟಾಪ್ ಭಂಗಿಯಲ್ಲಿ... ಪ್ರೀತಿಯೊಡನೆ ಒಂದು ಸಂಜೆ...

ಲ್ಯಾಪ್ ಟಾಪ್ ಭಂಗಿಯಲ್ಲಿ... ಪ್ರೀತಿಯೊಡನೆ ಒಂದು ಸಂಜೆ...




ಹೊಸ ವರ್ಷ, ಹೊಸ ಉಲ್ಲಾಸದೊಂದಿಗೆ ನಾವಿಬ್ಬರೂ ಭೇಟಿಯಾದೆವು. ಪರಸ್ಪರ ಚಾಕಲೇಟ್, ಶುಭಾಷಯಗಳ ವಿನಿಮಯವಾಯಿತು. ಅವಳು ನನ್ನ ಕಣ್ಣಲ್ಲಿ ದೃಷ್ಠಿಯಿಟ್ಟು ನೋಡುತ್ತಿದ್ದರೆ, ನಮ್ಮಿಬ್ಬರ ಪ್ರೀತಿ ಅದೆಷ್ಟು ಅಗಾಧಾವಾದುದು ಎಂದೆನಿಸುತ್ತಿತ್ತು. ನಾನೇ ಮಾತಿಗಿಳಿದು “ಹೊಸವರ್ಷದ ಮೊದಲ ದಿನ ಒಂದು ಒಳ್ಳೆಯ ಕೆಲಸ ಮಾಡಬೇಕೆಂದಿರುವೆ” ಎಂದೆ. ನಾನು ಅಪರೂಪಕೊಮ್ಮೆ ಮಾಡುವ ಒಳ್ಳೆಯ ಕೆಲಸವೆನೆಂದು ಅವಳಿಗೆ ಗೊತ್ತು. ನನ್ನ ಪಕ್ಕದಲ್ಲಿ ಬಂದು ಕುಳಿತಳು. ಅವಳ ಲ್ಯಾಪ್ (ತೊಡೆ) ಮೇಲೆ ನನ್ನ ಟಾಪ್ (ತಲೆ) ಇಟ್ಟು ಮಲಗಿದೆ. “ಇದೇ ತಾನೇ, ನಿಮ್ಮ ಒಳ್ಳೆಯ ಕೆಲಸ” ಎಂದಳು. “ಇಲ್ಲಾ, ಇವತ್ತು ಇನ್ನೂ ಸ್ವಲ್ಪ ಇದೆ” ಎಂದೆ. “ಆಸೆ, ದೋಸೆ, ಹಪ್ಪಳ, ಅವೆಲ್ಲಾ ಎನೂ ಇಲ್ಲ, ಸುಮ್ಮನೆ ಮಲಗಬೇಕು ಅಷ್ಟೆ” ಎಂದು ನನ್ನ ತಲೆಯಲ್ಲಿ ನವಿರಾಗಿ ಕೈಯಾಡಿಸುತ್ತಿದ್ದಳು. ಅವಳ ಪುಟ್ಟ ಬೆರಳುಗಳು ನನ್ನ ಕೂದಲಿನ ಜೊತೆ ಆಟವಾಡುತ್ತಿದ್ದರೆ ಮಧುರಾನುಭವ. “ಛೇ! ಅದಲ್ಲಾ... ಒಂದು ಕಥೆ ಹೇಳಬೇಕೆಂದಿರುವೆ” ನಾನಂದೆ. “ಹೇಳಿ” ಎಂದಳು. “ಇದೊಂದು ಇಂಗ್ಲೀಷ್ ನಲ್ಲಿ ನಾ ಓದಿದ ಒಂದು ಅಪೂರ್ವ ಪ್ರೇಮ ಕಥನ” ಎಂದು ಶುರುವಿಟ್ಟುಕೊಂಡೆ.

ಸಂಜೆಯ ಆರಕ್ಕೆ ಆರು ನಿಮಿಷ ಮಾತ್ರ ಬಾಕಿಯಿದೆ ಎಂದು ನಗರದ ರೈಲ್ವೇಸ್ಟೇಷನ್ ಮಾಹಿತಿ ಕೇಂದ್ರದ ಮೇಲಿದ್ದ ಬೃಹತ್ ಗಡಿಯಾರ ತೋರಿಸುತ್ತಿತ್ತು. ಉದ್ದವಾಗಿದ್ದ ತರುಣ ಸೇನಾಧಿಕಾರಿ ರೈಲ್ವೇಸ್ಟೇಷನ್ನಿಂದ ಆಗಷ್ಟೆ ಹೊರಗೆ ಬಂದು ಸೂರ್ಯನ ಕಿರಣಗಳಿಂದ ಕಂದಾಗಿದ್ದ ಮುಖವೆತ್ತಿ ತನ್ನ ಕೈ ಗಡಿಯಾರದಲ್ಲಿ ದೃಷ್ಠಿನೆಟ್ಟು ಸಮಯವನ್ನು ಧೃಡಪಡಿಸಿಕೊಂಡ. ಅವನ ಎದೆಯ ಸದ್ದು ಕೇಳಿ ಭಯಗೊಂಡಿದ್ದರೂ ತಹಬದಿಗೆ ತರಲಾಗುತ್ತಿರಲಿಲ್ಲ. ಇನ್ನಾರು ನಿಮಿಷಕ್ಕೆ ಆತ ತನ್ನ ಜೀವನದಲ್ಲಿ ಹದಿಮೂರು ತಿಂಗಳುಗಳಿಂದ ವಿಶೇಷ ಸ್ಥಾನ ಪಡೆದಿದ್ದ ಆಕೆಯನ್ನು ಭೇಟಿಯಾಗಲಿದ್ದಾನೆ. ಅವಳನ್ನೆಂದೂ ನೋಡಿಲ್ಲ. ಆದರೆ ಆಕೆಯ ಪತ್ರಗಳು ಮಾತ್ರ ಅವನ ಜೊತೆಯಲ್ಲಿ ಇವೆ ಮತ್ತು ಅವನಿಗೆ ಬೆಂಬಲವಾಗಿವೆ.

ಮಾಹಿತಿ ಕೇಂದ್ರಕ್ಕೆ ಅಂಟಿ ಕುಳಿತಾತನ ಪಕ್ಕದಲ್ಲೇ ಜನರು ಅಲ್ಲಿನ ಅಧಿಕಾರಿಗಳಿಗೆ ಪ್ರಶ್ನೆಗಳ ಮಳೆ ಸುರಿಸುತ್ತಿದ್ದರು.

ಲೆಫ್ಟಿನೆಂಟ್ ಬ್ಲಾಂಡ್ಪೋಿರ್ಡ್ ತಾನು ಯುದ್ದ ಮಾಡಿದ್ದ ಒಂದು ಭಯಾನಕ ರಾತ್ರಿಯನ್ನು ನೆನಪಿಸಿಕೊಳ್ಳುತಿದ್ದ. ವೈರಿಗಳ ಪಾಳಯದಲ್ಲಿ ತನ್ನ ಯುದ್ದವಿಮಾನ ಸಿಕ್ಕಿತ್ತು. ವೈರಿ ಪೈಲಟ್ನತ ಕುಹಕ ನಗೆ ಕಂಡಿತ್ತು.

ತನ್ನದೊಂದು ಪತ್ರದಲ್ಲಿ ಅವನು ಪದೇಪದೇ ಭಯ ಬೀಳುತ್ತಿದ್ದುದ್ದನ್ನು ನಿವೇದಿಸಿಕೊಂಡಿದ್ದ. ಆ ಭಯಾನಕ ಯುದ್ದದ ಸ್ವಲ್ಪ ದಿನಗಳ ಮುಂಚೆ ಅವಳಿಂದ ಉತ್ತರವೂ ಬಂದಿತ್ತು. “ಹೌದು, ನೀನು ಭಯಗೊಂಡಿರುವೆ...ಎಲ್ಲ ಯೋಧರಂತೆ. ಕಿಂಗ್ ಡೇವಿಡ್ಗೂ ಭಯವಿರಲಿಲ್ಲವೇ? ಅದಕ್ಕೋಸ್ಕರವೇ ಆತ ಇಪ್ಪತ್ತಮೂರನೇ ಪವಿತ್ರಗೀತೆ (ಕ್ರಿಶ್ಚಿಯನ್ನರ) ಯನ್ನು ಬರೆದಿದ್ದು. ಮುಂದಿನ ಬಾರಿ ನೀ ಭಯಗೊಂಡಾಗ, ನನ್ನ ಧ್ವನಿಯು ನಿನ್ನಲ್ಲಿ ಕೇಳಿಸಲಿ: “ಸಾವಿನ ನೆರಳಿನ ಕಣಿವೆಯಲ್ಲಿ ನಾ ನಡೆಯುತ್ತಿದ್ದರೂ, ನನಗ್ಯಾವ ದುಷ್ಟಶಕ್ತಿಗಳ ಭಯವಿಲ್ಲ. ಏಕೆಂದರೆ ನೀ ನನ್ನ ಜೊತೆಗಿರುವೆ” ”. ಅವಳ ಕಲ್ಪಿತ ಧ್ವನಿಯಿಂದ ಉತ್ತೇಜಿತನಾಗಿ ಆ ಯುದ್ದದಲ್ಲಿ ಗೆದ್ದಿದ್ದ.

ಆರಕ್ಕೆ ನಾಲ್ಕು ನಿಮಿಷ ಬಾಕಿಯಿದೆ. ಇನ್ನೇನೂ ಅವಳ ನಿಜವಾದ ಮಧುರ ಧ್ವನಿಯನ್ನು ಕೇಳಲಿದ್ದಾನೆ. ಅವನ ಮುಖದಲ್ಲಿ ಕುತೂಹಲವಿದೆ.

ಅಗಣಿತ ತಾರಾಗಣಗಳ ಚಪ್ಪರದ ಕೆಳಗೆ ಲಗುಬಗೆಯಿಂದ ಜನಗಳು ಓಡಾಡುತ್ತಿದ್ದರು. ಒಬ್ಬಳು ಚೆಂದದ ಹುಡುಗಿ ಅವನ ಹತ್ತಿರದಲ್ಲೇ ನಡೆದು ಹೋದಳು. ಲೆಫ್ಟಿನೆಂಟ್ ಬ್ಲಾಂಡ್ಪೋಯರ್ಡ್ ಕುಳಿತಲ್ಲೇ ಚಲಿಸಿದ. ಅವಳ ಮೇಲುವಂಗಿಯ ಮೇಲೆ ಗುಲಾಬಿಯಿತ್ತು. ಆದರದು ಕಡು ಕೆಂಪು ಬಣ್ಣದ್ದು. ಇವರಿಬ್ಬರ ಒಪ್ಪಂದದಂತೆ ಕೆಂಪಾದ ಚಿಕ್ಕ ಗುಲಾಬಿಯಾಗಿರಲಿಲ್ಲ. ಮತ್ತು, ಆ ಹುಡುಗಿ ಹದಿನೆಂಟರ ತರುಣಿಯಂತಿದ್ದಳು. ಆದರೆ ಹೋಲಿಸ್ ಮೇನೆಲ್ ಮುಚ್ಚು ಮರೆಯಿಲ್ಲದೆಯೇ ತನಗೆ ಮೂವತ್ತು ಎಂದು ಬರೆದಿದ್ದಳು. “ಆದರೇನಂತೆ? ನನಗಾಗಲೇ ಮೂವತ್ತೆರಡು ಎಂದು ಸಮಾಧಾನಗೊಂಡಿದ್ದ.

ಅವನ ಮನಸ್ಸು ಆ ಪುಸ್ತಕಕ್ಕೆ ಮರಳಿತ್ತು. ಫ್ಲೋರಿಡಾದ ತರಬೇತಿ ಶಿಬಿರದಲ್ಲಿದ್ದವನಿಗೆ ಸೈನ್ಯದ ಗ್ರಂಥಾಲಯದಲ್ಲಿದ್ದ ಸಾವಿರಾರು ಪುಸ್ತಕಗಳಲ್ಲಿ ದೇವರೇ ಆ ಪುಸ್ತಕವನ್ನು ಇವನ ಕೈಗೆ ನೀಡಿದಂತಿತ್ತು. “Of Human Bondage” ಎಂಬ ಆ ಪುಸ್ತಕದ ತುಂಬಾ ಮಹಿಳೆಯೊಬ್ಬಳು ಬರೆದಿದ್ದ ನೋಟ್ಸಗಳಿದ್ದವು. ಈ ರೀತಿಯ ಬರವಣಿಗೆ ಆತನಿಗೆ ಇಷ್ಟವಾಗುತ್ತಿರಲಿಲ್ಲವಾದರೂ, ಅಭಿಪ್ರಾಯಗಳು ವಿಭಿನ್ನವಾಗಿದ್ದವು. ಒಬ್ಬಳು ಹೆಂಗಸು ಗಂಡಸಿನ ಎದೆಯಾಳವನ್ನು ಅರ್ಥಮಾಡಿ ಕೊಳ್ಳಬಹುದೆಂಬ ಉಹೆಯೂ ಆತನಿಗಿರಲಿಲ್ಲ. ಆಕೆಯ ಹೆಸರು ಪುಸ್ತಕದಲ್ಲಿತ್ತು: “ಹೋಲಿಸ್ ಮೇನೆಲ್”. ನ್ಯೂಯಾರ್ಕ್ ಟೆಲಿಪೋನ್ ಡೈರೆಕ್ಟರಿ ತೆಗೆದುಕೊಂಡು ಅವಳ ವಿಳಾಸವನ್ನು ಪತ್ತೆ ಹಚ್ಚಿದ್ದ. ಅವಳಿಗೆ ಪತ್ರ ಬರೆದ. ಅವಳೂ ಉತ್ತರಿಸಿದಳು. ಇವನೆಲ್ಲಿಗೋದರೂ ಪತ್ರವ್ಯವಹಾರ ಮುಂದುವರೆಯಿತು.

ಹದಿಮೂರು ತಿಂಗಳುಗಳು ಅವಳು ಚಾಚೂ ತಪ್ಪದೇ ಉತ್ತರ ಬರೆಯುತ್ತಿದ್ದಳು ಮತ್ತು ಅವನಿಂದ ಕಾಗದ ಬರದಿದ್ದರೆ ಅವಳೇ ಬರೆಯುತ್ತಿದ್ದಳು. ಮತ್ತಾಗ ಅವಳು ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ನಂಬಿದ್ದ. ಅವಳೂ ಪ್ರೀತಿಸುತ್ತಿದ್ದಳು.

ಆದರೆ, ಆತನ ಮನವಿಯನ್ನು ತಿರಸ್ಕರಿಸಿ ತನ್ನ ಪೋಟೋವನ್ನು ಕಳುಹಿಸಿರಲಿಲ್ಲ. ಸ್ವಲ್ಪ ಅತಿಶಯೋಕ್ತಿಯೆನಿಸಿದರೂ ನಿಜವಾಗಿತ್ತು. ಆದರವಳು ಕಾರಣವನ್ನು ವಿವರಿಸಿದ್ದಳು. “ನಿನ್ನ ಭಾವನೆಗಳು ನಿಜವೇ ಆಗಿದ್ದರೆ ನಿಷ್ಕಪಟವಾದ ತಳಹದಿಯಿದ್ದರೆ ನನ್ನ ರೂಪ ಮುಖ್ಯವಾಗುವುದಿಲ್ಲ. ನಾನೇನಾದರೂ ರೂಪವತಿಯಾಗಿದ್ದರೆ, ನೀ ನನ್ನ ರೂಪಕ್ಕೆ ಮರುಳಾಗಿ ಪ್ರೀತಿಸಿದೆ ಎಂಬ ಭಾವನೆ ನನ್ನನ್ನು ಕಾಡುತ್ತಿರುತ್ತದೆ. ಮತ್ತು ಆ ರೀತಿಯ ಪ್ರೀತಿ ನನಗೆ ಅಸಹ್ಯವಾಗುತ್ತದೆ. ನಾನೇನಾದರೂ ಸಾಧಾರಣವಾಗಿದ್ದರೆ (ಇರಬಹುದೆಂದು ನೀನು ಒಪ್ಪಿಕೊಳ್ಳಬೇಕು) ನೀನು ಒಂಟಿಯಾಗಿರುವೆ ಮತ್ತು ಅದೇ ಕಾರಣಕ್ಕೆ ನನಗೆ ಪತ್ರ ಬರೆಯುತ್ತಿದ್ದೀಯಾ ಎಂದು ಪರಿತಪಿಸಬೇಕಾಗುತ್ತದೆ. ಬೇಡ, ನನ್ನ ಪೋಟೋವನ್ನು ಕೇಳಬೇಡ. ನೀನೇ ನ್ಯೂಯಾರ್ಕಿಗೆ ಬಂದಾಗ ನನ್ನನ್ನು ನೋಡಿದ ಮೇಲೆ ನಿರ್ಧಾರಕ್ಕೆ ಬರುವಿಯಂತೆ. ಜ್ನಾಪಕವಿರಲಿ ನಾವಿಬ್ಬರೂ ಈ ಸಂಬಂಧವನ್ನು ನಿಲ್ಲಿಸುವುದೋ ಅಥವಾ ಮುಂದುವರೆಸುವುದೋ ನಮ್ಮದೇ ಸ್ವತಂತ್ರ ಆಯ್ಕೆ.

ಆರಕ್ಕೆ ಒಂದು ನಿಮಿಷ ಮಾತ್ರ. ಬಿಗಿಯಾಗಿ ಸಿಗರೇಟಿನ ಧಮ್ ಎಳೆದ (ನಾ ಸೇದುವುದಿಲ್ಲವಾದ್ದರಿಂದ ನಿಟ್ಟುಸಿರಿಟ್ಟೆ) ಲೆಫ್ಟಿನೆಂಟ್ ಬ್ಲಾಂಡ್ಪೋೇರ್ಡ್ನವ ಎದೆ ಆತನ ವಿಮಾನಕ್ಕಿಂತ ಎತ್ತರಕ್ಕೆ ಜಿಗಿದಿತ್ತು.

ಒಬ್ಬಳು ಹೆಂಗಸು ಅವನ ಬಳಿಗೆ ನಡೆದು ಬರುತ್ತಿದ್ದಳು. ಉದ್ದ ಮತ್ತು ತೆಳುವಾಗಿದ್ದಳು. ಚೆಲುವಾದ ಕೂದಲು ಸುರುಳಿಯಾಕಾರದಲ್ಲಿ ಕಿವಿಯ ಬದಿಯಲ್ಲಿದ್ದವು. ಕಣ್ಣುಗಳು ನೀಲಿ ಹೂಗಳಂತಿದ್ದವು. ಅವಳ ತುಟಿ ಮತ್ತು ಗಲ್ಲ ಮೃದು ನಿಲುವು ತಳೆದಿದ್ದವು. ಅವಳ ತಿಳಿ ಹಸುರಿನ ಉಡುಗೆಯಲ್ಲಿ ವಸಂತ ಋತುವೆ ಮೈವೆತ್ತಂತೆ ಬಂದಳು.

ಅವನು ಅವಳೆಡೆಗೆ ಚಲಿಸಿದ. ಅವಳು ಗುಲಾಬಿಯನ್ನು ತೊಟ್ಟಿಲ್ಲವೆಂಬುದನ್ನು ಸಂಪೂರ್ಣವಾಗಿ ಮರೆತಿದ್ದ. ಆತ ಅವಳನ್ನು ಸಮೀಪಿಸಿದಂತೆ ಅವಳ ತುಟಿಗಳಲ್ಲಿ ಸಣ್ಣದಾಗಿ ಕೆಣಕುವ ನಗೆ ಮೂಡಿತ್ತು.

“ನೀವು ನನ್ನ ಹಾದಿಯಲ್ಲಿದ್ದೀರಾ, ಲೆಫ್ಟಿನೆಂಟ್?” ಅವಳು ಗೊಣಗುಟ್ಟಿದ್ದಳು.

ತನಗರಿವಿಲ್ಲದೆಯೇ, ಆತ ಒಂದು ಹೆಜ್ಜೆ ಅವಳಿಗೆ ಹತ್ತಿರವಾದ. ಅದಾಗ ಹೋಲಿಸ್ ಮೇನೆಲಳನ್ನು ನೋಡಿದ.

ಹೋಲಿಸ್ ಮೆನೆಲ್ ಸರಿಯಾಗಿ ಆ ಹುಡುಗಿಯ ಹಿಂದೆಯೇ ನಿಂತಿದ್ದಳು. ನಲವತ್ತರ ವಯಸ್ಸನ್ನು ದಾಟಿರಬಹುದಾದ ಹೆಂಗಸು. ಅವಳ ಮಾಸುತ್ತಿದ್ದ ಕೂದಲುಗಳು ಧರಿಸಿದ್ದ ಟೋಪಿಯೊಳಗಿದ್ದವು. ಸ್ವಲ್ಪ ಧಡೂತಿಯಾಗಿದ್ದಳು. ದಪ್ಪನೆಯ ಕಾಲುಗಳು ಶೂನೊಳಗೆ ತುರುಕಿದಂತಿದ್ದವು. ಆದರೆ ಅವಳ ಸುಕ್ಕುಗಟ್ಟಿದ್ದ ಮೇಲಂಗಿಯಲ್ಲಿ ಕೆಂಪು ಗುಲಾಬಿ ಧರಿಸಿದ್ದಳು.

ತಿಳಿ ಹಸಿರು ಬಣ್ಣದ ಉಡುಗೆ ತೊಟ್ಟಿದ್ದ ಹುಡುಗಿ ಮೆಲ್ಲನೆ ಅಲ್ಲಿಂದಾ ಮಾಯವಾದಳು.

ಬ್ಲಾಂಡ್ಪೋುರ್ಡ್ನತ ಮನಸ್ಸು ಇಬ್ಬಂದಿಯಾಯಿತು. ಅಲ್ಲಿಂದ ಮಾಯವಾದ ಹುಡುಗಿಯನ್ನು ಹಿಂಬಾಲಿಸಲು ಯೋಚಿಸಿದನಾದರೂ ತನ್ನ ಜೊತೆಯಲ್ಲೇ ಇರುತ್ತಿದ್ದ ಹೋಲಿಸ್ ಮೇನೆಲ್ಳ ಚೈತನ್ಯಕ್ಕೆ ಅವನ ಮನಸ್ಸು ಸೋತಿತ್ತು. ಮುಖಾಮುಖಿ ಅವರಿಬ್ಬರು ನಿಂತಿದ್ದಾರೆ. ಅವಳ ಮಂದವಾದ ದುಂಡು ದಂಡಾದ ಮುಖದಲ್ಲಿ ಕೋಮಲತೆಯಿತ್ತು. ಕಂದು ಬಣ್ಣದ ಕಣ್ಣುಗಳಲ್ಲಿ ಬೆಚ್ಚನೆಯ ಪ್ರೀತಿ ಇಣುಕುತಿತ್ತು.

ಲೆಫ್ಟಿನೆಂಟ್ ಬ್ಲಾಂಡ್ಪೋ್ರ್ಡ್ ಹಿಂದೆ ಸರಿಯಲಿಲ್ಲ. ಆತನ ಕೈ ಬೆರಳುಗಳು ಸ್ವಲ್ಪ ಹರಿದಿದ್ದ “Of Human Bondage” ಪುಸ್ತಕವನ್ನು ಧೃಡವಾಗಿ ಹಿಡಿದಿವು. ಅದು ಆಕೆಗೆ ಈತನನ್ನು ಗುರುತುಹಿಡಿಯಲು ಸಹಕಾರಿ. ಪ್ರಯಶಃ ಇದು ಪ್ರೀತಿಯಲ್ಲ, ಅದಕ್ಕಿಂತಲೂ ಮಿಗಿಲಾದ, ಒಂದು ಅಮೂಲ್ಯವಾದ ಜೀವಮಾನವೀಡಿ ಋಣಿಯಾಗಿರಬೇಕಾದ ಸ್ನೇಹ ಸಂಬಂಧ.

ಆತ ಆಕೆಗೆ ಸೆಲ್ಯೂಟ್ ಮಾಡುತ್ತಾ, ತನ್ನ ಕೈಯಲ್ಲಿದ್ದ ಪುಸ್ತಕವನ್ನು ಅವಳೆಡೆಗೆ ಚಾಚುತ್ತಾ, ತನಗೆ ನಿರಾಶೆಯಾದರು ಹೇಳಿದ: “ನಾನು ಲೆಫ್ಟಿನೆಂಟ್ ಜಾನ್ ಬ್ಲಾಂಡ್ಪೋ್ರ್ಡ್. ಮತ್ತು ನೀವು... ನೀವು... ಮಿಸ್ ಮೇನೆಲ್? ನಿಮ್ಮನ್ನು ಭೇಟಿಯಾದದ್ದು ಬಹಳ ಸಂತೋಷವಾಯಿತು. ನನ್ನ ಜೊತೆ... ಊಟಕ್ಕೆ ಬರುವಿರೋ?”

ಅವಳ ಮುಖ ನಗುವಿನಿಂದ ಅರಳಿತು. “ಏನಾಗುತ್ತಿದೆಯೆಂದು ನನಗೆ ಗೊತ್ತಿಲ್ಲ ಮಗು” ಎಂದು ಆಶ್ಚರ್ಯಚಕಿತವಾಗಿ ಉತ್ತರಿಸಿದಳು. ಮುಂದುವರೆಯುತ್ತಾ, “ಇದೀಗ ತಾನೇ ಇಲ್ಲಿಂದ ಹೋದ ತಿಳಿ ಹಸಿರು ಬಟ್ಟೆ ತೊಟ್ಟಿದ್ದ ಆ ಯುವತಿ ಈ ಗುಲಾಬಿಯನ್ನು ತೋಡುವಂತೆ ವಿನಂತಿಸಿದಳು. ನೀವೇನಾದರೂ ಊಟಕ್ಕೆ ನನ್ನನ್ನು ಕರೆದರೆ ಅವಳು ನಿಮಗೆ ಮುಂದಿನ ರಸ್ತೆಯಲ್ಲಿರುವ ಹೋಟೆಲ್ನೆಲ್ಲಿ ಕಾಯುತ್ತಿರುತ್ತಾಳೆಂದು ಹೇಳಬೇಕೆಂದಳು. ಇದೊಂದು ರೀತಿಯ ಪ್ರೇಮಪರೀಕ್ಷೆ ಎಂದು ಹೇಳಿದಳು. ನನಗಿಗಾಗಲೇ ಅಂಕಲ್ ಸ್ಯಾಮ್ನೊಂನದಿಗೆ ಇಬ್ಬರು ಮಕ್ಕಳಿದ್ದಾರೆ. ಅದಕ್ಕೆ ನಾನೂ ಆ ಯುವತಿಯ ಮಾತಿಗೆ ಸಮ್ಮತಿಸಿದೆ.” ಎಂದು ನಗುತ್ತಾ ಅಲ್ಲಿಂದ ತೆರಳಿದಳು.

ಕಥೆ ಕೇಳಿದ ನನ್ನುಡಿಗೆ ಹಣೆಗೊಂದು ಹೂ ಮುತ್ತನಿಟ್ಟಳು.



(ಪ್ರೇರಣೆ: ಎರಡನೇ ಪಿ.ಯು.ಸಿ. ಪಠ್ಯವಾಗಿರುವ, ಚಿಕನ್ ಸೂಪ್ ಫಾರ್ ದಿ ಸೋಲ್ ಪುಸ್ತಕದ, ಸುಲಮಿತ್ ಈಶ್-ಕಿಶೋರ್ ರವರ “Appointment with Love” ಎಂಬ ಕಥೆ)

- ಗುಬ್ಬಚ್ಚಿ ಸತೀಶ್, ಗುಬ್ಬಿ.

ಇದು ಭಾರತದ “ಅಮೃತ ಕಾಲ”ವೇ!?

  ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ. ʼಭಾರತ ಬದಲಾಗಿದೆ! ಯಾರದ್ದ...