ಗುರುವಾರ, ಸೆಪ್ಟೆಂಬರ್ 16, 2010

ಒಂದನೇ ಕ್ಲಾಸ್ ಇಂಗ್ಲೀಷ್ ಡೈಜೆಸ್ಟ್

ಸಂಜೆಯಾಯಿತೆಂದರೆ ತುಮಕೂರಿನ ಎಂ.ಜಿ. ರೋಡಿನಲ್ಲಿ ವಾಹನಗಳಿಂದವಿರಲಿ, ಜನಗಳಿಂದಲೇ ಆಗುವ ತಿಕ್ಕಾಟವನ್ನು ತಪ್ಪಿಸಿಕೊಂಡು ನಡೆಯುವುದು ಕಷ್ಟ. ನನಗೆ ಡ್ರಾಯಿಂಗ್ ಶೀಟ್ಸ್‍ಗಳನ್ನು ತೆಗೆದುಕೊಳ್ಳಬೇಕು. ಅಷ್ಟಕ್ಕೂ ಅದು ನನಗಲ್ಲ. ನನ್ನ ಏಕೈಕ ಹೆಂಡತಿಗೆ. ನೆನ್ನೆ ರಾತ್ರಿಯೇ ಇದರ ಬಗ್ಗೆ ಅವಳು ಹೇಳಿದ್ದಳು. ಸಂಜೆ ಫೋನ್ ಮೂಲಕ ಮತ್ತೊಮ್ಮೆ ಜ್ಞಾಪಿಸಿದ್ದಾಳೆ ಎಂದ ಮೇಲೆ ತೆಗೆದುಕೊಂಡು ಹೋಗಲೇಬೇಕು.


ಗಾಡಿ ಪಾರ್ಕ್ ಮಾಡಿ, ಯಾರಿಗೂ ತಿಕ್ಕದೆ, ತಿಕ್ಕಿಸಿಕೊಳ್ಳದೆ ಪುಸ್ತಕದಂಗಡಿಯ ಬಾಗಿಲ ಬಳಿಗೆ ಬಂದೆ. ಅಂಗಡಿಯ ಮುಂದೆ ಹಲವಾರು ಜನ ವ್ಯಾಪಾರ ಮಾಡುತ್ತಿದ್ದರು. ನಾ ಮೊದಲು ಎಡಗಡೆಗೆ ನಿಂತೆ. ಕಾರಣ, ಬಲಗಡೆ ಹುಡುಗಿಯರು ಹೆಚ್ಚಿದ್ದರು. ಎಡಗಡೆ ಇಬ್ಬರು ಹುಡುಗರಿದ್ದರು. ನಾ ತುಂಬಾ ಹೊತ್ತು ಅಲ್ಲಿನ ಚಲನವಲನಗಳನ್ನು ಗಮನಿಸುತ್ತಾ ನಿಂತೇ ಇದ್ದೆ. ನನ್ನ ಕಡೆಯಿದ್ದ ಆ ಹುಡುಗರು ಬೇಗ ವ್ಯಾಪಾರ ಮುಗಿಸಲೇ ಇಲ್ಲ. ಅಷ್ಟರಲ್ಲಿ ಬಲಗಡೆಯಿದ್ದ ಹುಡುಗಿಯೊಬ್ಬಳು ವ್ಯಾಪಾರ ಮುಗಿಸಿ ಅಲ್ಲಿಂದ ತೆರಳಿದಳು. ನಾನು ಆ ಜಾಗಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಮಧ್ಯವಯಸ್ಕ ಗಂಡಸರೊಬ್ಬರು ಪುಸಕ್ಕನೆ ಬಂದು ನಿಂತರು. ನಿರಾಸೆಯಾಯಿತು.


ಅಂಗಡಿಯಲ್ಲಿ ಇಬ್ಬರು ಕೆಲಸದ ಹುಡುಗರೊಂದಿಗೆ ಅಂಗಡಿಯ ಯಜಮಾನರಿದ್ದರೂ ಗಿರಾಕಿಗಳನ್ನು ಸಂಭಾಳಿಸಲಾಗುತ್ತಿರಲಿಲ್ಲ. ಅಷ್ಟರಲ್ಲಿ ಎಡಗಡೆಯಿದ್ದ ಆ ಇಬ್ಬರು ಹುಡುಗರೂ, ಮತ್ತೊಬ್ಬಳು ಹುಡುಗಿ ನಿರ್ಗಮಿಸಿದರು. ಖಾಲಿಯಾದ ಜಾಗಕ್ಕೆ ಎತ್ತರದಿಂದ ಕೆಳಕ್ಕೆ ಜಿಗಿಯುವ ನೀರಿನಂತೆ ಜಿಗಿದು ನಾನು ಆ ಜಾಗವನ್ನು ಆಕ್ರಮಿಸಿದೆ. ಅದೇ ಸಮಯಕ್ಕೆ ನನ್ನ ಪಕ್ಕಕ್ಕೆ ಒಬ್ಬಳು ಚಿಕ್ಕ ಹುಡುಗಿ, ಮತ್ತೊಬ್ಬಳು ದೊಡ್ಡ ಹುಡುಗಿ ಬಂದರು. ಆ ಚಿಕ್ಕ ಹುಡುಗಿ ತುಸು ಜೋರಾಗಿಯೇ, ‘ಮಮ್ಮಿ, ನಂಗೆ ಅನಿಮಲ್ಸ್ ಚಾರ್ಟ್ ಬೇಕು’, ಎಂದದನ್ನು ಕೇಳಿಸಿಕೊಂಡು ಆ ದೊಡ್ಡ ಹುಡುಗಿಯ ಕಡೆ ನೋಡಿದೆ. ಆ ಹುಡುಗಿ ಚಿಕ್ಕ ಹುಡುಗಿಯ ಅಮ್ಮ!? ಎಂದು ಅರ್ಥಮಾಡಿಕೊಂಡಾಗ, ಸಂತೂರ್ ಸಾಬೂನಿನ ಜಾಹೀರಾತು ನೆನಪಾಗಿ ಮನಸ್ಸಲ್ಲೇ ಮುಗುಮ್ಮಾಗಿ ನಕ್ಕೆ.

‘ಏನ್ಬೇಕು ಸಾರ್’, ಅಂಗಡಿಯ ಹುಡುಗನೊಬ್ಬ ಕೇಳಿದ. ಸಂತೂರ್ ಜಾಹಿರಾತಿನಿಂದ ಹೊರಬಂದವನು ‘ಎಲ್ಲಾ ಕಲರ್‍ದೂ ಒಂದೊಂದು ಡ್ರಾಯಿಂಗ್ ಶೀಟ್ ಕೊಡಪ್ಪ’ ಅಂದೆ. ‘ಎಲ್ಲೊನ ಸಾರ್’ ಎಂದು ಹುಡುಗ ನನ್ನ ಮುಖವನ್ನೊಮ್ಮೆ ನೋಡಿದ. ‘ಅಲ್ಲಪ್ಪಾ, ಎಲ್ಲಾ ಕಲರ್‍ದೂ, means, all colours’ ಎಂದೆ. ‘ಸರಿ ಸಾರ್’, ಎಂದು ಡ್ರಾಯಿಂಗ್ ಶೀಟ್ಸ್ ತರಲು ಅಂಗಡಿಯ ಒಳಕ್ಕೆ ಹೋದ. ಇಂಗ್ಲೀಷ್ ಪೀಡಿತ, ಕನ್ನಡ ಬರ ನಾಡಲ್ಲಿ ‘ಎಲ್ಲಾ’ ಎಂದದ್ದು ಅವನಿಗೆ ‘ಎಲ್ಲೊ’ ಎಂದು ಕೇಳಿಸಿರಬೇಕು.

ಒಳಕ್ಕೆ ಹೋದ ಹುಡುಗನನ್ನು ಕಾಯುತ್ತಾ ನಿಂತ ನನ್ನ ಚಂಚಲ ಕಣ್ಣುಗಳು ಬಲಗಡೆ ನಿಂತಿದ್ದ ಮಧ್ಯವಯಸ್ಕನೆಡೆಗೆ ತಿರುಗಿದವು. ಅರೇ! ಈತ ಇನ್ನೂ ಇಲ್ಲಿಯೇ ನಿಂತಿದ್ದಾರೆ. ಆತ ಅದೇಕೋ ಬೆವರಿದಂತೆ ಕಾಣುತ್ತಿದ್ದರು. ಕರ್ಚೀಪಿನಿಂದ ಮುಖ ಒರೆಸಿಕೊಳ್ಳುತ್ತಾ, ಏನನ್ನೋ ಕೇಳುವುದೋ ಬೇಡವೋ ಎನ್ನುವಂತೆ ನಿಂತಿದ್ದವರು ಇದ್ದಕ್ಕಿದ್ದಂತೆ, ‘ಒಂದನೇ ಕ್ಲಾಸಿನ ಇಂಗ್ಲೀಷ್ ಡೈಜೆಸ್ಟ್ ಕೊಡಿ’, ಎಂದು ಅಂಗಡಿಯ ಯಜಮಾನನನ್ನು ಯಾವುದೋ ತಪ್ಪು ಮಾಡಿದವನು ದಯಮಾಡಿ ಬಿಟ್ಟು ಬಿಡಿ ಎಂದು ಕೇಳುವವನಂತೆ ಕೇಳಿದ. ಇದನ್ನು ಕೇಳಿದ ಯಜಮಾನನು ಈತನೆಡೆಗೆ ತಿರುಗಿಯೂ ನೋಡದೆ, ಒಳಗೊಳಗೇ ನಗುತ್ತಾ, ‘ಒಂದನೇ ಕ್ಲಾಸಿಗೆ ಇಂಗ್ಲೀಷ್ ಡೈಜೆಸ್ಟೇನ್ರಿ? ಅದೇ ಬರಿ ಎ, ಬಿ, ಸಿ, ಡಿ ಇರಬೇಕು ಅಷ್ಟೆ’, ಎಂದು ತಲೆಯೆತ್ತಿ ಆ ಮಧ್ಯವಯಸ್ಕರ ಕಡೆಗೆ ನೋಡಿ ‘ಹ್ಹ ಹ್ಹ ಹ್ಹಾ. . .! ಇಲ್ಲಾರಿ’’ ಎಂದು ಸ್ವಲ್ಪ ಜೋರಾಗಿಯೇ ನಕ್ಕ. ಪಾಪ, ಅವಮಾನವಾದಂತಾಗಿ ತಲೆತಗ್ಗಿಸಿ ಆ ಮಧ್ಯವಯಸ್ಕರು ಅಲ್ಲಿಂದ ತೆರಳಿದರು.

‘ತಗೊಳ್ಳಿ ಸಾರ್ ಡ್ರಾಯಿಂಗ್ ಶೀಟ್ಸ್, ಇಪ್ಪತ್ತು ರೂಪಾಯಿ ಕೊಡಿ’, ಎಂದು ಅಂಗಡಿಯ ಹುಡುಗನು ಅಂದಾಗ, ಇಪ್ಪತ್ತು ರೂಪಾಯಿಗಳನ್ನು ಕೊಟ್ಟು, ಅವನು ಸುತ್ತಿಕೊಟ್ಟ ಶೀಟ್ಸ್ ‍ಗಳನ್ನು ಪಡೆದು, ಯಜಮಾನನೊಮ್ಮೆ ನೋಡಿ ಅಲ್ಲಿಂದ ತೆರಳಿದೆನು.

ಪಾರ್ಕ್ ಮಾಡಿದ್ದ ಜಾಗದಿಂದ ಗಾಡಿಯನ್ನು ತೆಗೆಯಲು ಹೋದವನು, ಅಲ್ಲೇ ಎದುರುಗಡೆಯಿದ್ದ ಜಿಲೇಬಿಯಂಗಡಿಯ ಹತ್ತಿರ ಜಿಲೇಬಿ ತಿನ್ನುತ್ತಿದ್ದ ಪುಸ್ತಕದಂಗಡಿಯಲ್ಲಿದ್ದ ಆ ಮಧ್ಯವಯಸ್ಕರನ್ನು ನೋಡಿದ ಕೂಡಲೇ ಯಾಕೋ ಅಲ್ಲೇ ನಿಂತೆನು. ಜಿಲೇಬಿ ತಿನ್ನುತ್ತಿದ್ದರೂ ಆತ ಬೇಸರದಲ್ಲಿದ್ದನು. ಆತ ಜಿಲೇಬಿ ತಿಂದದ್ದು ಮುಗಿದ ಕೂಡಲೇ ಆತನ ಬಳಿ ಅವಸರವಾಗಿ ನಡೆದು, ‘ಸಾರ್, ನಮಸ್ಕಾರ’ ಎಂದೆ. ಜಿಲೇಬಿಯ ಕಡೆಯ ಚೂರನ್ನು ಬಾಯಲಿಟ್ಟುಕೊಂಡದ್ದರಿಂದಲೋ ಅಥವಾ ಬೇಸರದಿಂದಲೋ ಏನೋ ಆತ ನಮಸ್ಕಾರವೆಂದು ಕೈಯಲ್ಲೇ ಸಂಜ್ಞೆ ಮಾಡಿದರು. ಪರವಾಗಿಲ್ಲ ಇರಲಿ ಎಂದುಕೊಂಡ ನಾನು ಮುಂದುವರಿದು, ‘ಸಾರ್, ಆ ಅಂಗಡಿಯಲ್ಲಿ ತಾವು ಒಂದನೇ ಕ್ಲಾಸ್ ಇಂಗ್ಲೀಷ್ ಡೈಜೆಸ್ಟ್ ಕೇಳುದ್ರಲ್ಲಾ. . . , ಒಂದನೇ ಕ್ಲಾಸ್ ಇಂಗ್ಲೀಷ್ ನಿಮ್ಮ ಮಗುಗೆ ಅಷ್ಟು ಕಷ್ಟ ಆಗ್ತಿದ್ಯಾ ಸಾರ್?’ ಎಂದೆ. ಅದಕ್ಕೆ ಆತ, ಹಿಂದೆ-ಮುಂದೆ, ಮೇಲೆ-ಕೆಳಗೆ ನೋಡುತ್ತಾ, ‘ಅದೇನೋ ಗೊತ್ತಿಲ್ಲ ಸಾರ್. ನಾನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡದ ಗೌರವ ಉಪನ್ಯಾಸಕನಾಗಿ ಕೆಲಸ ಮಾಡ್ತಿದೀನಿ. ನನಗೆ ಇನ್ನೂ ಮಕ್ಕಳಿಲ್ಲ. ನನ್ನ ಹೆಂಡತಿ ಬಿ.ಎ ಮಾಡಿದ್ದಾಳೆ. ಇತ್ತೀಚೆಗೆ ಅವಳಿಗೆ ಪ್ರೈವೇಟ್ ಸ್ಕೂಲಲ್ಲಿ ಕೆಲಸ ಸಿಕ್ಕಿದೆ. ಅದು ಸಿ.ಬಿ.ಎಸ್.ಸಿ ಸಿಲಬಸ್ ಇರೋ ಸ್ಕೂಲಂತೆ! ಅವಳೋದಿದ್ದು ಕನ್ನಡ ಮೀಡಿಯಮ್ಮಿನಲ್ಲಿ. ಕೆಲಸಕ್ಕೆ ಹೋದ ಮೊದಲನೇ ದಿನಾನೇ ಫಸ್ಟ್ ಸ್ಟಾಂಡರ್ಡ್ ಇಂಗ್ಲೀಷು ತುಂಬಾ ಕಷ್ಟ ಕಣ್ರೀ. ನಂಗೊಂದು ಡೈಜೆಸ್ಟ್ ತಂದು ಕೊಡಿ ಅಂದಳು. ಅದಕ್ಕೆ ಅಂತಾ ಬಂದರೆ... ಆ ಅಂಗಡಿಯವನು ಹಂಗಾ ಸಾರ್ ಅನ್ನೋದು’, ಎಂದು ಅಲ್ಲಿಂದ ಸರಸರನೆ ಹೊರಟು ಹೋದರು.

ಅವಕ್ಕಾದ ನಾನು, ‘ಯಾರು ಸರಿ ಅನ್ನೋದು!?’ ಎಂದು ಯೋಚಿಸುತ್ತಾ, ತಲೆಕೆರೆದುಕೊಂಡು ಕ್ಷಣಕಾಲ ನಿಂತಲ್ಲೇ ನಿಂತಿದ್ದೆ.

                                                                               - ಗುಬ್ಬಚ್ಚಿ ಸತೀಶ್

ಬುಧವಾರ, ಸೆಪ್ಟೆಂಬರ್ 1, 2010

ನಿನ್ನ ಮನೆಯ, ನನ್ನ ಮನದ ಲಕ್ಷ್ಮಿಯು ನೀನು...

ಡಿಯರ್ ಲಕ್ಷ್ಮೀ !,

ಇಂದು ವರಮಹಾಲಕ್ಷ್ಮಿ ವ್ರತ. ಇಂದಾದರೂ ದೇವಿಯ ದರ್ಶನವಾಗಬಹುದೆಂದು ಬೆಳಿಗ್ಗೆ ನಾಲ್ಕಕ್ಕೇ ಎದ್ದೆ. ಆಚೆ ಬಂದು ನೋಡಿದರೆ ರಾತ್ರಿ ಕವಿದ ಮೋDaDDaಡ ಇನ್ನೂ ಕರಗಿಲ್ಲ. ತುಂತುರು ಹನಿಯುತ್ತಿತ್ತು. ನಿನ್ನ ನೆನಪಲ್ಲೇ ಮುಖವೊಡ್ಡಿ ನಿಲ್ಲುವ ಆಸೆ. ಜೊತೆಗೆ ಸರಸರನೆ ರೆಡಿಯಾಗಿ, ಯೋಗ, ಧ್ಯಾನ ಮುಗಿಸಿ, ನ್ಯೂಸ್ ಪೇಪರ್ ಓದಿ, ಸರಿಯಾಗಿ ಏಳು ಕಾಲಿಗೆ ರೈಲ್ವೇಸ್ಟೇಶನ್ನಿನ ಎರಡನೇ ಗೇಟಿಗೆ ಬಂದು ನಿಲ್ಲಬೇಕು.

ಒಳಗೆ ಬಂದವನೇ ಬೆಳಗಿನ ಎಲ್ಲಾ ಕೆಲಸಗಳನ್ನು ಮುಗಿಸಿ, ಯೋಗ ಮಾಡಿ, ನಿನ್ನ ಧ್ಯಾನದಲ್ಲೇ ಧ್ಯಾನಕ್ಕೆ ಕುಳಿತೆ. ಕಣ್ಣುಗಳ ಒಳಗೆ ಪ್ರತಿಫಲಿಸುತ್ತಿದ್ದ ನಿನ್ನ ಚಿತ್ರವನ್ನು ಕಣ್ತುಂಬಿಕೊಂಡು ಲಕ್ಷ್ಮೀ ದೇವರಿಗೆ ಎರೆಡೆರಡು ಸಲ ಕೈ ಮುಗಿದೆ. ಆ ದೇವರ ಭಾವಚಿತ್ರವೂ ನಕ್ಕಂತಾಯಿತು. ಅಲ್ಲಿಗೆ ಖಂಡಿತಾ ನಿನ್ನನ್ನು ನೋಡಿಯೇ ತೀರುತ್ತೇನೆಂಬ ಆಸೆಯ ಮೊಗ್ಗು ಬಿರಿದು ಹೂವಾಯಿತು.

ಅಮ್ಮ ಕೊಟ್ಟ ಕಾಫಿ ಕುಡಿದು, ಚಳಿಯಿದ್ದುದರಿಂದ ಜರ್ಕಿನ್ ತೊಟ್ಟು ಹೊರಗೆ ಬಂದರೆ ಕವಳ ಸುರಿಯುತ್ತಿದೆ. ದಾರಿಯೂ ಸರಿಯಾಗಿ ಕಾಣುತ್ತಿಲ್ಲ. ಎಲ್ಲಾ ಮಬ್ಬು; ನನ್ನ ಜೀವನದ ಗುರಿಯಂತೆ. ಪ್ರೀತಿಯ ವಿಷಯದಲ್ಲಿ ನೀನೇ ನನ್ನ ultimate. ಆದರೆ ಜೀವನಕ್ಕೆ ಎಂದು ಒಂದು ಕೆಲಸ ಬೇಕಲ್ಲ? ಅದು ಅಸ್ಪಷ್ಟ. ಅದಾಗಲೇ ಪಕ್ಕದ್ಮನೆ ರತಿ ನೈಟಿಯಲ್ಲೇ ರಂಗೋಲಿ ಹಾಕುತ್ತಿದ್ದವಳು, ನನ್ನನ್ನೇ ನೋಡಲು ಶುರು ಮಾಡಿದಳು. ಅವಳು ಏನು ಮಾಡಿದರೇನು, ನನ್ನ ಕಣ್ಣಲ್ಲೆಲ್ಲಾ ನೀನೇ...

ಇಂದು ವರಮಹಾಲಕ್ಷ್ಮೀ ವ್ರತ. ನಿನ್ನ ಮನೆಯ, ನನ್ನ ಮನದ ಲಕ್ಷ್ಮೀಯು ನೀನು. ನಿಮ್ಮಪ್ಪಾಮ್ಮ ಇವತ್ತು ರಜೆ ಹಾಕಿ ಮನೆಯಲ್ಲಿರು ಎಂದಿರುತ್ತಾರೆ. ಆದರೆ ದೇವರಿಗೆ ದಿಂಡರಿಗೆ ರಜೆ ಹಾಕಿ ಮನೆಯಲ್ಲೇ ಕುಳಿತವಳಲ್ಲ ನೀನು. ಬಿ.ಕಾಂ., ಓದುವಾಗಲೂ ಕಾಲೇಜಿಗೆ ರಜೆ ಕೊಡದ ಹೊರತು ನೀ ಎಂದೂ ಕಾಲೇಜು ತಪ್ಪಿಸಿದವಳಲ್ಲ. ರಜೆ ಸಿಕ್ಕಾಗಲೂ ರಜೆಯನ್ನು ಓದಿಗೆ ಉಪಯೋಗಿಸುತ್ತಿದ್ದ ಶಾರದೆಯು ನೀನು. ಸಾಕ್ಷಾತ್ ಸರಸ್ವತಿ! ಇದೀಗ ತಾನೇ ಬೆಂಗಳೂರಿನ ಆಡಿಟರ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿ ಸಿ.ಎ., ಮಾಡಬೇಕೆಂದಿರುವ ನೀನು ಖಂಡಿತ ರಜೆ ಹಾಕಿರುವುದಿಲ್ಲ ಎನ್ನುವುದು ನನಗೆ ಗೊತ್ತು. ಆದರೂ ಮನದ ಮೂಲೆಯಲ್ಲೆಲ್ಲೋ ಒಂದು ಪುಟ್ಟ ಭಯ ಇಣುಕುತ್ತಿದೆ.

ಸಮಯ ಏಳು ಗಂಟೆ ಐದು ನಿಮಿಷವಾಗಿದೆ. ಸರಸರನೆ ನಡೆದು ಏಳು ಹತ್ತಾಗುವಷ್ಟರಲ್ಲಿ ಸ್ಟೇಶನ್ನಿನ ಎರಡನೇ ಗೇಟ್ ಬಳಿ ಬಂದು ಪ್ಲಾಟ್ ಫಾರಂ ಕಡೆ ನೋಡಿದರೆ ಜನವೋ ಜನ. ಅಲ್ಲಿಗೆ ಇನ್ನೂ ಅರಸೀಕೆರೆಯಿಂದ ಬರುವ ಪುಶ್-ಪುಲ್ ರೈಲು ಗುಬ್ಬಿಯಲ್ಲಿ ನಿನ್ನನ್ನು ಹತ್ತಿಸಿಕೊಂಡು ತುಮಕೂರಿಗೆ ಬಂದಿಲ್ಲ ಎಂದು ಸಮಾಧಾನವಾಯಿತು. ಯಾರೋ ಹತ್ತು ನಿಮಿಷ ಲೇಟು ಅಂದರು. ಅಲ್ಲಿಗೆ ಹದಿನೈದು ನಿಮಿಷಗಳು ಕಾಯಬೇಕು. ಕ್ಷಣಕ್ಷಣವನ್ನೂ ನಿನಗಾಗಿ ಕಾಯುತ್ತಿರುವವನಿಗೆ ಅದೇನು ದೊಡ್ಡದಲ್ಲ. ಆದರೆ,

ಕಾದೆ ಕಾದೆ ಕಾದೆ
ನೀನು ಮಾತ್ರ ಬರದೆ ಹೋದೆ
ಓ ನನ್ನ ರಾಧೆ...

ಎಂದಾಗಬಾರದೆಂದು ಮತ್ತೊಮ್ಮೆ ಲಕ್ಷ್ಮೀ ದೇವರಿಗೆ ಮನದಲ್ಲೇ ಕೈ ಮುಗಿದೆ.

ರೈಲಿನ ಮೊದಲ ಬೋಗಿ ಸರಿಯಾಗಿ ಎರಡನೇ ಗೇಟಿನ ಬಳಿ ಬಂದು ನಿಲ್ಲಬೇಕು. ನೀ ಯಾವಾಗಲೂ ಮೊದಲ ಬೋಗಿಯಲ್ಲೇ ಇರುತ್ತೀಯೆಂದು ಗೊತ್ತು. ಕ್ಲಾಸಿನಲ್ಲೂ ಮೊದಲ ಬೆಂಚಿನಲ್ಲೇ ಕುಳಿತಿರುತ್ತಿದ್ದೆ. ನಾನು ಹಿಂದಿನ ಬೆಂಚಿನಿಂದ ಪಾಠ ಕೇಳುತ್ತಾ ಕೇಳುತ್ತಾ ನಿನ್ನ ಕಡೆಗೇ ದೃಷ್ಟಿ ನೆಟ್ಟು ಬಿಡುತ್ತಿದ್ದೆ. ಈಗಲೂ ಅದೇ ಜಾಯಮಾನದವಳು ನೀನು. ಮುಂದೆ ಬನ್ನಿ ಎಂದು ಯಾರೂ ಹೇಳುವುದೇ ಬೇಡ ನಿನಗೆ. ರೈಲು ಬರುವುದಕ್ಕೆ ಇನ್ನೂ ಸಮಯವಿದೆ. ಅಷ್ಟರಲ್ಲಿ ರೈಲಿನ ಕೊನೆಯ ಬೋಗಿ ನಿಲ್ಲುವ ಬಳಿ ಇರುವ ಪುಸ್ತಕದಂಗಡಿಯಲ್ಲಿ ಹೊಸ Competition success review ತಗೋಬೇಕು. ಅದೆಷ್ಟು ವರ್ಷಗಳಿಂದ ನೀನು ಈ ಮ್ಯಾಗಜಿನ್ ಓದುತ್ತಿದ್ದೀಯೋ? ನನಗಂತೂ ನಿನ್ನಲ್ಲಿ ಮೋಹ ಹುಟ್ಟಿದ ಮರುಗಳಿಗೆಯಿಂದಲೇ ನೀ ಯಾವಾಗಲೂ ನಿನ್ನೆದೆಗೆ ಅವುಚಿಕೊಂಡಿರುತ್ತಿದ್ದ ಕಾಲೇಜಿನ ಪುಸ್ತಕಗಳ ಜೊತೆಗಿರುತ್ತಿದ್ದ ಈ ಮ್ಯಾಗಜಿನ್ ಬಗೆಗೂ ವ್ಯಾಮೋಹ ಹುಟ್ಟಿ ಬಿಟ್ಟಿತು. ಸರಿಯಾಗಿ ಓದುವುದು ಬೇರೆ ಮಾತು, ಆದರೂ ಇನ್ನಾದರೂ ಚೆನ್ನಾಗಿ ಓದಿ ಯಾವುದಾದರೂ ಬ್ಯಾಂಕ್‍ನಲ್ಲಿ ಕೆಲಸ ಗಿಟ್ಟಿಸಬೇಕು ಅನ್ನಿಸುತ್ತಿದೆ. ಆವಾಗಲಾದರೂ ನೀನು ನನ್ನನ್ನು ಒಪ್ಪಬಹುದು ಎನ್ನುವ ಆಸೆ!

ಪ್ಲಾಟ್ ಫಾರಂ ತುಂಬಾ ಜನ. ಈ ತುದಿಯಿಂದ ಆ ತುದಿಗೆ ಹೋಗಿ ಬರುವುದು ಹರಸಾಹಸವೇ ಸರಿ. ಆದರೂ ಹೊರಟೆ. ಅಲ್ಲೊಬ್ಬಳು ಪಕಪಕನೆ ನಗುತ್ತಿದ್ದಳು. ಅಲ್ಲಿದ್ದ ಹುಡುಗರೆಲ್ಲರೂ ಅವಳನ್ನು ತಿನ್ನುವಂತೆ ನೋಡುತ್ತಿದ್ದರು. ಯಾವ ಹುಡುಗಿ ನಕ್ಕರೆ ನನಗೇನು? ನಿನ್ನ ಮಂದಸ್ಮಿತ ಮುಖದ ಹೊರತು ನನಗಿನ್ಯಾವ ನಗುವೂ ಬೇಕಿಲ್ಲ. ಜನಸಂದಣಿ ಬಹಳವಿದ್ದುದರಿಂದ ಪುಸ್ತಕದಂಗಡಿ ತಲುಪುವಷ್ಟರಲ್ಲಿ ಹನ್ನೆರಡು ನಿಮಿಷ ಮುಗಿದು ಹೋಗಿತ್ತು. ಐವತ್ತರ ನೋಟೊಂದನ್ನು ತೆಗೆದು ಅಂಗಡಿಯವನ ಕೈಗಿತ್ತು, Competition success review ಎಂದೆ. ಅವನ ಕೈಯಿಂದ ನನ್ನ ಕೈಗೆ ಮ್ಯಾಗಜಿನ್ ಬಂದ ತಕ್ಷಣ, ಅಲ್ಲಿದ್ದವರಲ್ಲಿ ಯಾರೋ ‘ಟ್ರೈನು ಬಂತು...’ ಎಂದರು. ಗುಬ್ಬಿಯ ದಾರಿಯ ಕಡೆ ನೋಡಿದರೆ ಅದಾಗಲೇ ನೀ ಬರುತ್ತಿದ್ದ ರಥ ಬರುತ್ತಿತ್ತು. ಈ ಜನಸಂದಣಿಯಲ್ಲಿ ಮತ್ತೆ ಹಿಂದಕ್ಕೆ ಹೋಗುವುದು ಬೇಡ ಎಂದು ಅಲ್ಲೇ ಸ್ಥಬ್ತನಾದೆ. ರೈಲಿನ ಇಂಜಿನ್ನು ನನ್ನನ್ನು ದಾಟಿ ಮುಂದಕ್ಕೆ ಹೋಯಿತು. ಅದರ ಹಿಂದೆಯೇ ಇದ್ದ ಬೋಗಿಯ ಮೊದಲ ಕಿಟಕಿಗೆ ಆತು, ಕೈಯನ್ನು ಗಲ್ಲಕ್ಕೆ ಕೊಟ್ಟು ಕೂತಿದ್ದವಳು ನೀನೇನಾ?

ಸರಿಯಾಗಿ ನೋಡುವಷ್ಟರಲ್ಲಿ ರೈಲು ಮುಂದೆ ಮುಂದೆ, ನಾನು ಹಿಂದೆ ಹಿಂದೆ... ಆ ಜನಗಳ ಸುಳಿಯಲ್ಲಿ ಸುಳಿದು ಎರಡನೇ ಗೇಟಿನ ಬಳಿ ಬರುವುದು ಸಾಧ್ಯವಿಲ್ಲವೆನ್ನಿಸಿತು. ಮಾಡುವುದೇನು? ನಿನ್ನ ಪ್ರೀತಿಯ ವಿಚಾರದಲ್ಲಿ ಮಾತ್ರ ಸೂಪರ್ ಟ್ರೈನಿಗಿಂತ ವೇಗವಾಗಿ ಓಡುತ್ತದೆ ನನ್ನ ತಲೆ. ರೈಲು ನಿಂತ ತಕ್ಷಣ ಅದರ ಹಿಂಬದಿಗೆ ಹೋಗಿ ಪ್ಲಾಟ್ ಫಾರ್ಂನ ಇನ್ನೊಂದು ಮಗ್ಗುಲಿಗೆ ಜಿಗಿದು ಮೊದಲ ಬೋಗಿಯ ಕಡೆ ಓಡಲು ಶುರು ಮಾಡಿದೆ. ಚಿರತೆಯ ಓಟ. ಒಂದೇ ನಿಮಿಷದಲ್ಲಿ ಮೊದಲ ಬೋಗಿಯ ಬಳಿ ಬಂದು ನೋಡಿದರೆ ಅಲ್ಲಿ ನೀನಿಲ್ಲ! ಬೋಗಿಯ ಒಳಗೆಲ್ಲಾ ಕಣ್ಣಾಡಿಸಿದರೂ ನೀನು ಕಾಣುತ್ತಿಲ್ಲ. ಹೇಗಾಗಬೇಕು ನನ್ನ ಜೀವಕ್ಕೆ? ಇನ್ನು ನಾಲ್ಕೇ ನಿಮಿಷದಲ್ಲಿ ರೈಲು ಹೊರಡುತ್ತದೆ. ಹುಡುಕುವುದೆಲ್ಲಿ? ಸುಮ್ಮನೆ ನಿಂತು ಬಿಟ್ಟೆ. ಲಕ್ಷ್ಮೀ ದೇವರ ಕೃಪೆಯಿದ್ದರೆ ಖಂಡಿತಾ ಇಂದು ನಿನ್ನನ್ನು ನೋಡಿಯೇ ತೀರುತ್ತೇನೆ. ನಿನಗೇ ಗೊತ್ತಲ್ಲ ಚಿನ್ನು, ನಾನೊಬ್ಬ stubborn optimist...

ರೈಲು ಹೊರಟೇ ಬಿಟ್ಟಿತು. ನಾ ನಿಂತಲ್ಲೇ ಅದು ಮುಂದೆ ಮುಂದೆ... ಎಲ್ಲಾ ಬೋಗಿಗಳ ಕಿಟಕಿಗಳು, ಬಾಗಿಲುಗಳು ಮೆಲ್ಲಮೆಲ್ಲನೆ ಮುಂದೆ ಸಾಗುತ್ತಿವೆ. ರೈಲಿನ ವೇಗವೂ ಹೆಚ್ಚುತ್ತಿದೆ. ನನ್ನ ಹೃದಯದ ಬಡಿತದಂತೆ. ಅಯ್ಯೋ! ಕಡೆ ಬೋಗಿಯೂ ಬಂತಲ್ಲಪ್ಪಾ ದೇವ್ರೇ!! ಎಂದುಕೊಳ್ಳುವಷ್ಟರಲ್ಲಿ ತಿಳಿ ಹಳದಿ ಚೂಡೀದಾರ್‍ನಲ್ಲಿ ಎಂದೂ ಮಾಸದ ಮಂದಸ್ಮಿತವನ್ನು ಸೂಸುತ್ತಾ, ಕೈಯಲ್ಲಿ ಹೊಚ್ಚಹೊಸ com Competition success review ಹಿಡಿದು ನಿಂತಿದ್ದೆಯಲ್ಲೇ ನನ್ನ ಲಕ್ಷ್ಮೀ...! ಆ ಲಕ್ಷ್ಮೀಯೇ, ಸಾಕ್ಷಾತ್ ವರಮಹಾಲಕ್ಷ್ಮಿಯೇ ಧರೆಗಿಳಿದಂತಾಯಿತು ಕಣೇ ಹುಡುಗಿ. ನನ್ನ ಬದುಕು ಹಬ್ಬದ ದಿನವೇ ಪಾವನವಾಯಿತು. ವ್ರತ ಫಲಿಸಿತು... ಬದುಕು ಅರಳಲು ಇನ್ನೆಷ್ಟು ಹೊತ್ತು ಹೇಳು?


ಎಂದೆಂದೂ ನಿನ್ನ ಆರಾಧಕ,

- ಗುಬ್ಬಚ್ಚಿ ಹುಡುಗ

ಸೋಮವಾರ, ಆಗಸ್ಟ್ 23, 2010

ಅಣ್ಣನ ಜನುಮದಿನ

ಅಣ್ಣಾ, ಇಂದು ನಿಮ್ಮ ಜನುಮದಿನ

ಈ ಪುಟ್ಟ ತಂಗಿಯ ಸಂಭ್ರಮದ ದಿನ

ಅಪ್ಪ ಅಮ್ಮನ ಪ್ರೀತಿಗೆ ಗರಿಯಿಟ್ಟ ದಿನ

ನಮ್ಮೆಲ್ಲರಿಗೂ ಇದುವೇ ಶುಭದಿನ !


ಕಣ್ಣ ಮುಂದೆಯೇ ಇದೇ

ಮೈಸೂರು ಕಾಣದ ದಸರಾ

ನಿಮ್ಮ ಬೆನ್ನ ಮೇಲೆ ನನ್ನ ಅಂಬಾರಿ


ಇಂದೂ ಕೂಡ ಹೊಳೆಯುತ್ತಿದೆ !

ಅಪ್ಪ ಬೈದಾಗ, ಅಮ್ಮ ಹೊಡೆದಾಗ

ನೀವು ಸಂತೈಸಿ ಹಣೆಗಿಟ್ಟ ಮುತ್ತು !


ಇವತ್ತಿಗೂ ಹಸಿಯಾಗಿಯೇ ಇದೇ

ನಾ ಜಾರಿಬಿದ್ದಾಗ, ಕಾಲೆಡವಿದಾಗ

ಕಣ್ಣೀರ ಸುರಿಸುತ್ತಾ, ನೀವು ಹಚ್ಚಿದ ಎಂಜಲು !


ದಿನದಿನವೂ ಸಿಹಿ ಹೆಚ್ಚುತ್ತಲೇ ಇದೇ

ಕದ್ದು ನಾವಿಬ್ಬರೇ ಮೇಯ್ದ ಕೊಬ್ಬರಿ ಬೆಲ್ಲ

ನೀವು ಗೋಳಾಡಿಸಿ ಕೊಟ್ಟ ಚಾಕ್ ಲೇಟ್!


ಪ್ರತಿ ಹೆಜ್ಜೆಯಲ್ಲೂ ಬೆಳಕಾಗಿಯೇ ಇದೆ

ಕತ್ತಲಲ್ಲಿ ನಾ ತಪ್ಪೆಜ್ಜೆಯಿಟ್ಟಾಗ

ನೀವು ಹಚ್ಚಿಟ್ಟ ದೀಪ!


ಅಣ್ಣಾ, ಇಂದು ನಿಮ್ಮ ಜನುಮದಿನ

ಅದೇಕೋ ಕಾಣೇ ಆನಂದ ಬಾಷ್ಪ

ನೀವು ಪ್ರೀತಿಯಿಂದ ಒರೆಸಲೆಂದಿರಬೇಕು!

ಆರೋಗ್ಯ, ಐಶ್ವರ್ಯದಿಂದ ನೀವು

ನೂರಾರು ವರುಷ ಹರುಷದಿಂದ ಬಾಳಬೇಕು.

                             ನಿಮ್ಮ ಮುದ್ದಿನ

                             ಪೆದ್ದು ಪೆದ್ದಾದ

                                  ತಂಗಿ
                                         

ಬುಧವಾರ, ಆಗಸ್ಟ್ 18, 2010

ಸ್ನೇಹ ಮಾಡಬೇಕಿಂಥವಳಾ...



ಅಂದು ಭಾನುವಾರ. ಸಂಜೆ ಗೆಳೆಯನೊಬ್ಬನ ನಿರೀಕ್ಷೆಯಲ್ಲಿದ್ದೆ. ಆತ ಹತ್ತಿರದ ನರ್ಸಿಂಗ್ ಹೋಂನಲ್ಲಿ ಸಿಗುತ್ತೇನೆ ಎಂದಿದ್ದ. ಆತನು ಅಲ್ಲಿಗೆ ಬರುವ ಮುಂಚೆಯೇ ನಾನಲ್ಲಿದ್ದೆ. ಎಷ್ಟು ಹೊತ್ತಾದರು ಆತ ಅಲ್ಲಿಗೆ ಬರಲೇ ಇಲ್ಲ. ಬರತ್ತೇನೆ ಎಂದ ಮೇಲೆ ಬಂದೇ ಬರುತ್ತಾನೆ ಎಂದು ನಾನು ಅಲ್ಲಿಯೇ ಕಾಯುತ್ತಾ ಕುಳಿತೆ.


ಆತನ ನಿರೀಕ್ಷೆಯಲ್ಲಿ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಅದಾಗಲೇ ರಾತ್ರಿ ಒಂಭತ್ತಾಗಿತ್ತು. ನಮ್ಮ ಏರಿಯಾಗೆ ಹೋಗುವ ಕಡೆಯ ಸಿಟಿಬಸ್ ನರ್ಸಿಂಗ್ ಹೋಂನ ಸ್ಟಾಪ್‍ನಿಂದ ಹೋಗಿ ಅರ್ಧಗಂಟೆಯಾಗಿತ್ತು. ನನಗೆ ಊಟ ಮಾಡುವುದಕ್ಕೂ ಮನಸ್ಸಿರಲಿಲ್ಲ. ಅಷ್ಟಕ್ಕೂ ಬರುತ್ತೇನೆಂದ ಗೆಳೆಯ ಬರಬೇಕು ಅಷ್ಟೆ. ನನ್ನ ಭಾಷೆಯಲ್ಲಿ ಗೆಳೆತನವೆಂದರೆ ನಂಬಿಕೆಯಷ್ಟೆ. ಅವನು ಬರುವವರೆಗೂ ಕಾಯಬೇಕೆಂದು ಅದೇ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತಿದ್ದ ಪರಿಚಯದವರನ್ನು ಮಲಗಲು ಸ್ವಲ್ಪ ಜಾಗ ಸಿಗುತ್ತದಾ ಎಂದು ಕೇಳಿದೆ. ಅವರು ಆಗಲಿ ಎಂದರು. ಸ್ವಲ್ಪ ಸಮಾಧಾನವಾಯಿತು. ನರ್ಸಿಂಗ್ ಹೋಮಿನ ವರಾಂಡದಲ್ಲಿ ಅಡ್ಡಾಡತೊಡಗಿದೆ.


ಅದು ಚಿಕ್ಕದಾದ, ಚೊಕ್ಕವಾದ ನರ್ಸಿಂಗ್ ಹೋಂ. ಎಲ್ಲಾ ರೂಂಗಳೂ ಭರ್ತಿಯಾದಂತೆ ಕಾಣುತ್ತಿತ್ತು. ಒಂದು ರೂಮಿನಲ್ಲಿ ಯಾರೂ ಇರಲಿಲ್ಲದ್ದು ತೆರೆದ ಬಾಗಿಲಿನಿಂದ ಸ್ಪಷ್ಟವಾಗಿತ್ತು. ಆ ರೂಮಿನಲ್ಲಿ ಎರಡು ಮಂಚಗಳಿದ್ದವು. ಭಾಗಶಃ ಒಂದು ರೂಮಿಗೆ ಇಬ್ಬರು ಪೇಶಂಟ್ ಗಳು ಇರಬೇಕು. ಗೆಳೆಯ ಬಂದಂತೆ ಕಾಣಲಿಲ್ಲ. ಅಲ್ಲಿದ್ದ ಖಾಲಿ ರೂಂ ಅದೊಂದೇ ಎಂದೆನಿಸಿದ್ದರಿಂದ, ನನಗೆ ಅಲ್ಲಿಯೇ ಮಲಗಲು ಅವಕಾಶ ಸಿಗಬಹುದೆಂದು ಪರಿಚಿತರು ಆ ಕಡೆ ಬರುವ ತನಕ ಅಲ್ಲಿಯೇ ಬಾಗಿಲ ಬಳಿ ಕುಳಿತೆ.


ಕುಳಿತ ಸ್ವಲ್ಪ ಹೊತ್ತಿಗೆ, ಆ ರೂಮಿಗೆ ಸುಂದರವಾದ ದೇವತೆಯಂಥವಳಬ್ಬೊಳನ್ನು ಕರೆತಂದರು. ಆಕೆಯ ಕಣ್ಣು ತೆರೆದಿರಲಿಲ್ಲ. ತೆರೆದ ನನ್ನ ಕಣ್ಣುಗಳು ಅವಳನ್ನೇ ನೋಡುತ್ತಿದ್ದವು. ಅವಳ ಜೊತೆ ಹಿರಿಯ ಹೆಂಗಸಬ್ಬೊರಿದ್ದರು. ಖಾಲಿಯಿದ್ದ ರೂಮಿಗೆ ಒಬ್ಬರು ಬಂದಂತಾಯಿತು. ಕಣ್ಣು ಮುಚ್ಚಿದ್ದರೂ ದೇವತೆಯಂತೆ ಕಾಣುತ್ತಿದ್ದ ಅವಳನ್ನು ಪೇಶಂಟ್ ಎಂದು ಮನಸ್ಸು ಒಪ್ಪಲಿಲ್ಲ. ಅವಳನ್ನು ನೋಡಿದ ಮೇಲೆ ಮನಸ್ಸೇಕೋ ನಿರೀಕ್ಷೆಯಲ್ಲಿದ್ದ ಗೆಳೆಯನನ್ನೇ ಮರೆಯಿತು.


ಇದೇ ಲಹರಿಯಲ್ಲಿದ್ದವನನ್ನು ನರ್ಸಿಂಗ್ ಹೋಮಿನ ಪರಿಚಯದವರು ಬಂದು ನೀವು ಇದೇ ರೂಮಿನ ಆ ಕಡೆಯ ಬೆಡ್ ಮೇಲೆ ಮಲಗಿ ಎಂದರು. ರೋಗಿ ಬಯಸಿದ್ದೂ ಹಾಲು ಅನ್ನ, ವ್ಯೆದ್ಯರು ಹೇಳಿದ್ದು ಹಾಲು ಅನ್ನವೆಂಬಂತೆ ಥ್ಯಾಂಕ್ಸ್ ಹೇಳಿ ಖಾಲಿ ಹಾಸಿಗೆ ಮೇಲೆ ಮೈಚಾಚಿದೆ. ಪಕ್ಕದ ಹಾಸಿಗೆಯಲ್ಲಿ ಆ ದೇವತೆಯಂಥಾ ಸುಂದರಿ ಕಣ್ಮುಚ್ಚಿಕೊಂಡು ನಗುತ್ತಿರುವಂತೆ ಕಾಣುತ್ತಿತ್ತು. ಆಕೆಯನ್ನು ನೋಡುತ್ತಾ ರಾತ್ರಿಯೆಲ್ಲಾ ನಿದ್ದೆಯೇ ಬರಲಿಲ್ಲ. ಆಗೊಮ್ಮೆ ಈಗೊಮ್ಮೆ ಆ ದೇವತೆಯನ್ನು ಆಕೆಯ ಜೊತೆಗಿದ್ದ ದೊಡ್ಡ ಹೆಂಗಸು ಹೊರಗೆ ಕರೆದುಕೊಂಡು ಹೋಗಿ ಬರುತ್ತಿದ್ದರು.


ಬೆಳಿಗ್ಗೆ ಬೇಗ ಎದ್ದು ನಾನು ಅಲ್ಲಿಂದ ಜಾಗ ಖಾಲಿ ಮಾಡಿದೆ. ಮನೆಗೆ ಬಂದರೂ ಅವಳ ನೆನಪೇ ಕಾಡುತಿದೆ. ಬೇಗ ಬೇಗ ರೆಡಿಯಾಗಿ ಮತ್ತೆ ನರ್ಸಿಂಗ್ ಹೋಂಗೆ ಹೋದೆ. ಅವಳು ಇನ್ನೂ ಕಣ್ಣು ಬಿಟ್ಟಿರಲಿಲ್ಲ. ದೇವರೆ, ಬೇಗ ಅವಳು ಕಣ್ಣು ಬಿತ್ತು ನೋಡಲೆಂದು ಪ್ರಾರ್ಥಿಸಿ ಅಲ್ಲಿಂದ ತೆರಳಿದೆ. ಮತ್ತೆ ಮನೆಗೆ ಹೋಗಲು ಮನಸ್ಸಾಗಲಿಲ್ಲ. ಅಲ್ಲೇ ಹತ್ತಿರದ ಹೋಟೆಲಿನಲ್ಲಿ ತಿಂಡಿ ತಿಂದು ಮತ್ತೆ ನರ್ಸಿಂಗ್ ಹೋಮಿನ ಆ ರೂಮಿನ ಬಳಿ ಹೋಗಿ ನೋಡಿದೆ. ಅವಳ ನಯನಗಳು ಅರಳಿದ್ದವು! ನನ್ನ ಕಡೆಗೆ ನೋಡಿದಳು. ನನ್ನ ಮನಸ್ಸು ಧನ್ಯತಾಭಾವದಲ್ಲಿ ತೇಲಿತು. ಇವಳೇ ನನ್ನ ಜನ್ಮದ ಗೆಳತಿಯೆಂದು ಅನ್ನಿಸತೊಡಗಿತು.


ದಿನಾಲೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆಯೆನ್ನದೆ ಅವಳನ್ನು ಹೋಗಿ ನೋಡುವುದೇ ನನ್ನ ಕೆಲಸವಾಯಿತು. ಅವಳೂ ನನ್ನನ್ನು ನೋಡಲಿ ಎಂದು ಹಪಹಪಿಸುವುದೇ ಆಯಿತು. ಅವಳು ನನ್ನೆಡೆಗೆ ನೋಡುತ್ತಿದ್ದ ಹಾಗೇ ಆ ಕ್ಷಣಗಳಲ್ಲಿ ನನಗೆ ರೋಮಾಂಚನವಾಗುತ್ತಿತ್ತು. ಅವಳ ಗುಲಾಬಿ ತುಟಿಗಳಿಂದ ಒಂದು ಮಾತೂ ಬರುತ್ತಿರಲಿಲ್ಲ. ನನಗೆ ಅವಳ ಮೌನವೇ ಹೆಚ್ಚು ಆಪ್ತವಾಗಿತ್ತು.


ಇದೇ ರೀತಿ ಐದು ದಿನಗಳು ಕಳೆದ ಮೇಲೆ ಆಕೆಯನ್ನು ನರ್ಸಿಂಗ್ ಹೋಂನಿಂದ ಅವಳ ಮನೆಗೆ ಕಳುಹಿಸಿದರು. ನನಗೆ ಅವಳನ್ನು ಬಿಟ್ಟು ಹೋಗಲು ಸಾಧ್ಯವೇ ಇರಲಿಲ್ಲ. ನಾನೂ ಒಂದು ರೀತಿಯಲ್ಲಿ ಅವಳೊಂದಿಗೆ ಹೊರಟು ಹೋದೆ.


ಯಾಕೋ, ಏನೋ ಇದ್ದಕ್ಕಿಂದಂತೆ ನನ್ನ ಆರೋಗ್ಯ ಕೆಡಲಾರಂಭಿಸಿತು. ಜೀವನದಲ್ಲೇ ಜಿಗುಪ್ಸೆಯಾಗಿತ್ತು. ಅಂದು ಬೆಳಿಗ್ಗೆಯೇ ಬೆಂಗಳೂರಿನ ಆಸ್ಪತ್ರೆಗೆ ಹೋಗಬೇಕು. ಬೆಳಗ್ಗೆ ನಾಲ್ಕಕ್ಕೇ ಎದ್ದೆ. ಎದ್ದವನಿಗೆ ಜೀವನವೇಕೆ ಅನ್ನಿಸತೊಡಗಿತು. ನನ್ನ ಈ ಕಷ್ಟದಲ್ಲಿ ಯಾರೂ ಜೊತೆಗಿಲ್ಲವಲ್ಲವೆನ್ನಿಸತೊಡಗಿತು. ಯಾರಿಗಾಗಿ ಈ ಬದುಕು ಎಂದೆನ್ನಿಸತೊಡಗಿತು. ಅದಾಗ, ಅದ್ಯಾವ ಮಾಯೆಯೋ ಎನೋ ಯಾರೋ ಪಕ್ಕದಲ್ಲಿ ನನ್ನ ನೋವಿಗೆ ಕನಲಿದಂತಾಯಿತು. ಅರೆ... ಅವಳೇ ನರ್ಸಿಂಗ್ ಹೋಂನಲ್ಲಿ ಸಿಕ್ಕಿದ್ದ ಕಿನ್ನರಿ. ನನ್ನ ನೋಡಿ ನಕ್ಕಳು. ನಾನಿದ್ದೇನೆ ನಿನ್ನೊಂದಿಗೆ ಎಂಬ ಭರವಸೆ ಅವಳ ಕಣ್ಣುಗಳಿಂದ ಸೂಸುತ್ತಿತ್ತು. ಮುದಗೊಂಡ ಮನಸ್ಸು ಹಾಸಿಗೆಯಿಂದ ಎದ್ದಿತ್ತು.


ಇದಾದ ಕೆಲವು ತಿಂಗಳುಗಳ ನಂತರ ಆರೋಗ್ಯ ಸ್ವಲ್ಪ ಸುಧಾರಿಸಿತ್ತು. ಒಂದು ದಿನ ಬೆಳಿಗ್ಗಿನ ತಿಂಡಿ ಇಡ್ಲಿ ತಿನ್ನುತ್ತಾ ಕೂತಿದ್ದೆ. ಆ ಕಿನ್ನರಿ ಇದ್ದಕ್ಕಿದ್ದಂತೆ ಬಂದು ನನ್ನ ಪಕ್ಕ ಕೂತಳು. ನನಗೆ ಆಫೀಸಿಗೆ ಲೇಟಾಗಿತ್ತು. ಆದ್ದರಿಂದ ಅವಳ ಕಡೆ ಹೆಚ್ಚು ಗಮನ ಕೊಡಲಾಗಲಿಲ್ಲ. ನನ್ನನ್ನೇ ತಿನ್ನುವಂತೆ ನೋಡುತ್ತಿದ್ದಳು. ನಾನು ಅವಳನ್ನೇ ನೋಡುತ್ತಾ, ಮಾತನಾಡದೆ ಗಬಗಬನೆ ಇಡ್ಲಿ ತಿನ್ನುತ್ತಿದ್ದೆ. ಇದ್ದಕ್ಕಿದ್ದಂತೆ ಅ ಕಿನ್ನರಿ “ಯೇ...” ಎಂದಳು. ನನಗೆ ಶಾಕ್ ಆಯಿತು. ಪಾಪ! ಅವಳಿಗೂ ಹೊಟ್ಟೆ ಹಸಿದಿತ್ತೋ, ಏನೋ? ನಾನು ತಿನ್ನುವುದನು ಬಿಟ್ಟು ಎದ್ದು ಹೋಗಿ ಅವಳಿಗೆ ಅಡುಗೆಮನೆಯಿಂದ ಇಡ್ಲಿ ತಂದು ಕೊಟ್ಟೆ.


ಆ ಕಿನ್ನರಿ ಮಾತನಾಡುತ್ತಿರಲಿಲ್ಲ. ಅವಳಿಗೆ ಮಾತು ಬರುವುದಿಲ್ಲವೆಂದು ನನ್ನ ಮನಸ್ಸು ಒಪ್ಪಿರಲಿಲ್ಲ. ಅವಳು ತನ್ನ ಹಾವಭಾವಗಳಿಂದಲೇ ನನಗೆಲ್ಲವನ್ನು ಅರ್ಥಮಾಡಿಸಲು ಪ್ರಯತ್ನಿಸುತ್ತಿದ್ದಳು. ಆಗೊಮ್ಮೆ ಈಗೊಮ್ಮೆ ಏನಾದರೂ ಮಾತನಾಡಿದಂತೆ ಕೇಳಿಸಿದರೂ, ನನಗೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಗೆಳೆತನದಲ್ಲಿ ಮಾತೇಕೆ? ಎಲ್ಲವೂ ಮೌನದಲ್ಲೇ ಮಾತನಾಡಬೇಕು, ಅರ್ಥವಾಗಬೇಕು. ನನ್ನ ಬಿಡುವಿನ ಸಮಯವೆಲ್ಲಾ ಅವಳೊಂದಿಗೆ ಕಳೆಯುವುದೇ ಹವ್ಯಾಸವಾಯಿತು. ಆ ಕ್ಷಣಗಳೆಲ್ಲಾ ಬದುಕಿನ ರಸನಿಮಿಷಗಳು!


ಎಷ್ಟೋ ಬಾರಿ ಅವಳೊಂದಿಗೆ ಹೊರಗಡೆ ಹೋಗುವ ಅವಕಾಶಗಳು ಲಬ್ಧವಾದವು. ಅವಳೊಟ್ಟಿಗೆ ಹೆಜ್ಜೆ ಹಾಕುವುದೇ ಹೆಮ್ಮೆಯ ವಿಷಯವಾಯಿತು. ಎದೆಯುಬ್ಬಿಸಿ ನಡೆಯತೊಡಗಿದೆ. ಹಲವು ತಿಂಗಳುಗಳ ನಂತರ ಅವಳಿಗೆ ಪ್ರಪಂಚವನ್ನು ನೋಡುವ ಅವಕಾಶ ಲಭಿಸಿತ್ತು. ನಾನಂತೂ, ಅಮ್ಮ ತನ್ನ ಮಗುವನ್ನು ಮೊದಲಬಾರಿಗೆ ಕೈ ಹಿಡಿದು ನಡೆಸುವಂತೆ ಅವಳನ್ನು ಸಾಕಷ್ಟು ಕಡೆ ಸುತ್ತಿಸಿದೆ. ಊರಿನ ಪಾರ್ಕು, ದೇವಸ್ಥಾನಗಳೆಲ್ಲಾ ಬೇಜಾರಾದವು. ಒಂದು ದಿನ ಅವಳ ಜೊತೆ ಲಾಲ್‍ಬಾಗಿಗೆ ಹೋಗುವ ಯೋಗವೂ ಬಂತು. ಅಲ್ಲಿ ಅವಳ ಜೊತೆಗೊಂದು ಫೋಟೋವನ್ನು ತೆಗಿಸಿಕೊಂಡೆ. ಅಲ್ಲಿದ್ದ ಕೆರೆಯ ದಂಡೆಯ ಮೇಲೆ ನಾವಿಬ್ಬರೂ ಕೈ ಹಿಡಿದು ನಡೆದಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ನನ್ನ ಕೈ ಕೊಡವಿ ನೀರಿನ ಬಳಿ ಹೋಗಿ ನೀರನ್ನು ಹತ್ತಿರದಿಂದ ನೋಡಿ ಆಶ್ಚರ್ಯ ಚಕಿತಳಾದಳು. ಮೊದಲೇ ನೀರಿಗೆ ಹೆದರುವ ನನಗೆ, ಅವಳೆಲ್ಲಿ ನಿನ್ನ ಜೊತೆ ಈಜಾಡಬೇಕೆಂದರೆ ಏನು ಮಾಡಬೇಕೆಂದು ತೋಚದೆ ಬೆದರಿ ನೀರಾದೆ.


ನಾವಿಬ್ಬರೂ ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ದನ್ನು ಕಂಡು ಕೆಲವರು ಸಹಿಸಲಿಲ್ಲ. ಸುತ್ತಿದ್ದು ಸಾಕೆನ್ನ ತೊಡಗಿದರು. ಈ ವಿಷಯದಲ್ಲಿ ಇಬ್ಬರಿಗೂ ಸಿಟ್ಟು ಬಂದಿತು. ನಮ್ಮ ಗೆಳತನವನ್ನು ಇವರಾರೂ ಸಹಿಸುತ್ತಿಲ್ಲ ಎನ್ನಿಸತೊಡಗಿತ್ತು. ಆದದ್ದಾಗಲ್ಲಿ ಎನ್ನುವ ಮನೋಭಾವ ಇಬ್ಬರಲ್ಲೂ ಮನೆಮಾಡಿತ್ತು. ಅದಕ್ಕೆ ಯಾರಿಗೂ ಹೆದರದೆ ಒಬ್ಬರನೊಬ್ಬರು ಬಿಡದೆ ಇರುತ್ತಿದ್ದೆವು. ನಾನೆಲ್ಲೋ... ಅವಳಲ್ಲಿ. ಅವಳೆಲ್ಲೋ... ನಾನಲ್ಲಿ. ಅಂದು ಬೆಳಗ್ಗೆ ನಾನು ಬಚ್ಚಲಲ್ಲಿ ಹಲ್ಲುಜ್ಜಿಕೊಳ್ಳುತ್ತಿದ್ದೆ. ಅವಳು ಸೀದಾ ಅಲ್ಲಿಗೇ ಬಂದಳು, ನಾನಿನ್ನೂ ಪೂರ್ತೀ ಬಟ್ಟೆ ಬಿಚ್ಚಿರಲಿಲ್ಲವಾದರೂ ಷೇಮ್ ಷೇಮ್ ಎಂದು ಸನ್ನೆ ಮಾಡುತ್ತಾ ನಕ್ಕಳು. ನನಗೆ ಬಂದ ಸಿಟ್ಟನ್ನು ತಡೆಯುತ್ತಾ, ಹುಸಿಕೋಪದಲ್ಲಿ “ಹೇ! ನಡಿ ಆ ಕಡೆ” ಎಂದೆ ಅಷ್ಟೆ. ಅವಳು ಆ ಕಡೆ ಹೋದಳು. ಮರುಕ್ಷಣವೇ “ಹೋ...” ಎಂದು ಅಳತೊಡಗಿದಳು. ನಾನು ಕೈ ಬಾಯಿ ತೊಳೆದುಕೊಂಡು ಆಚೆ ಬಂದು “ಸಾರಿ ಪುಟ್ಟು, ಚಿನ್ನು” ಎಂದು ಅವಳ ಮನವೊಲಿಸಲು ಯತ್ನಿಸಿದೆ. ಅವಳು ಸ್ವಲ್ಪ ಹೊತ್ತು ಅಳುತ್ತಲೇ ಇದ್ದಳು, ನಾನು ಅವಳನ್ನು ಸುಮ್ಮನಾಗಿಸಲು ಇನ್ನಿಲ್ಲದ ಸರ್ಕಸ್ ಮಾಡಿದೆ. “ಇಲ್ಲಮ್ಮ ನಂದು ತಪ್ಪಾಯ್ತು ನಂಗೆ ಅತ್ತ, ಅತ್ತ ಮಾಡು” ಎಂದೆ. ಮರುಕ್ಷಣವೇ ನಕ್ಕ ಆ ಪುಟ್ಟ ಕಿನ್ನರಿಯು “ಅಪ್ಪ... ಅತ್ತ... ಅತ್ತ...” ಎನ್ನುತ್ತಾ ತನ್ನ ಪುಟ್ಟ ಬೆರಳಿನಿಂದ ಹೊಡೆಯುವಂತೆ ಮಾಡಿದಳು. ಬಾಚಿ ತಬ್ಬಿಕೊಂಡು ಅವಳ ಕೆನ್ನೆಗೊಂದು ಮುತ್ತಿಟ್ಟೆ. ಅವಳೂ ಗೆಳೆಯನ ಸಿಟ್ಟನ್ನು ಮನ್ನಿಸಿ, “ಅಪ್ಪ... ಮೂ...” ಎಂದು ನನಗೊಂದು ಮುತ್ತಿಟ್ಟಳು.


“I love you ಗುಬ್ಬಚ್ಚಿ ಮರಿ! Happy friendship day ಮಗಳೇ!!”


– ಗುಬ್ಬಚ್ಚಿ ಸತೀಶ್.






ಇದು ಭಾರತದ “ಅಮೃತ ಕಾಲ”ವೇ!?

  ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ. ʼಭಾರತ ಬದಲಾಗಿದೆ! ಯಾರದ್ದ...