ಗುರುವಾರ, ಫೆಬ್ರವರಿ 24, 2011

ದಶರಥ್ ಮಂಜಿ ಎಂಬ ಮೌಂಟೆನ್ ಮ್ಯಾನ್ ನ ಕಥೆ...


ಇವಳಿಗೆ ಲೆಫ್ಟಿನೆಂಟ್ ಬ್ಲಾಂಡ್ ಪೋರ್ಡ್‍ನ ಕಥೆಯನ್ನು ಹೇಳಿದ್ದೆ ತಪ್ಪಾಯಿತು ಎಂದೆನಿಸುತ್ತದೆ. ಮತ್ತೆ ಮತ್ತೆ ಸಿಕ್ಕಿದಾಗಲೆಲ್ಲಾ ಕಥೆ ಹೇಳಿ ಎಂದು ಕಾಡ ತೊಡಗಿದಳು. ಕಥೆ ಹೇಳಿದರೆ ಬೋನಸ್ ಹೂ ಮುತ್ತುಗಳು ಸಿಗುವುದು ಗ್ಯಾರಂಟಿಯಾದರೂ... ಇಂದಿನ ದಿನಗಳಲ್ಲಿ ಯಾವ ಕಥೆಯನ್ನು ಹೇಳುವುದು? ಅದೂ ಇವಳಿಗೆ ಎಂದ ಮೇಲೆ ಅದು ಪ್ರೀತಿಯ ಕಥೆಯೇ ಆಗಿರಬೇಕು. ಈ ಹುಡುಗಿ ಬೇರೆ ತಾನು ಹೇಳಿದ ಮೇಲೆ ಮುಗಿಯಿತು. ಅದು ಆಗಲೇ ಬೇಕು ಎಂಬ ಮನಸ್ಥಿತಿಯಲ್ಲಿದ್ದಾಳೆ. ಯಾವ ಕಥೆ ಹೇಳುವುದು ಎಂದು ಚಿಂತಿಸುತ್ತಲೇ, “ಮತ್ತೆ ಸಿಕ್ಕಾಗ ಹೇಳುತ್ತೇನೆ” ಎಂದು ಕಥೆ ಹೇಳುವ ಕ್ರಿಯೆಯಿಂದ ತಪ್ಪಿಸಿಕೊಳ್ಳತೊಡಗಿದೆ. ಆದರೂ ಹೂಮುತ್ತುಗಳು ಸಿಗುತ್ತಿದ್ದವು. ಆದರೆ ಮುನಿಸಿನಿಂದ ಮತ್ತು ಬೋನಸ್ ಇರುತ್ತಿರಲಿಲ್ಲ.

ಎಷ್ಟು ದಿನ ಹೀಗೆ ತಪ್ಪಿಸಿಕೊಳ್ಳಲು ಸಾಧ್ಯ? ಅಂತೂ ಇಂತೂ ವ್ಯಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು. ಅಂದು ನಮಗೆ ಅಂತಹ ವಿಶೇಷವೇನಿಲ್ಲದಿದ್ದರೂ, ಬದಲಾದ ಕಾಲಕ್ಕೆ ತಕ್ಕಂತೆ ನಡೆಯಬೇಕು ಮತ್ತು ಸಮಕಾಲೀನತೆಯ ಟಚ್ ಮಿಸ್ ಮಾಡಿಕೊಳ್ಳುತ್ತಿವೇನೋ ಎಂಬ ಆತಂಕದಲ್ಲೇ ಮೀಟ್ ಆದೆವು.

ಭೇಟಿಯಾಗುತ್ತಿದ್ದಂತೆ “ಇಂದು ಕಥೆ ಹೇಳಲೇಬೇಕು” ಎಂದು ವರಾತ ತೆಗೆದಳು. Most expected Question ಎಂದುಕೊಂಡು “ಸರಿ” ಎಂದೆ. “ಯಾವ ಕಥೆ?” ಎಂದಳು. ಅವಳ ಕುತೂಹಲ ಕಂಡು, ಸ್ವಲ್ಪ ಆಟ ಆಡಿಸೋಣ ಎಂದುಕೊಳ್ಳುತ್ತಾ, “ವ್ಯಾಲೆಂಟೈನ್ ಸಂತನ ಕಥೆ ಬೇಡ” ಎಂದೆನು. “ನನಗೂ ಆ ಕಥೆ ಬೇಡ” ಎಂದಳು. ತಗಳಪ್ಪ... ಎಂದು ಕೊಂಡು “ತಾಜ್ ಮಹಲ್ ಕಥೆ ಹೇಳ್ಲ?” ಎಂದೆ. “ಅದೂ ನಂಗೊತ್ತು. ಕೇಳೋದಕ್ಕೆನೋ ಚೆನ್ನಾಗಿರುತ್ತೆ. ಆದರೆ, ಈ ನಡುವೆ ಆ ಕಥೆಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ” ವೆಂದಳು. “ಸರಿ ಮತ್ತೆ, ಯಾವ ಕಥೆ ಹೇಳೋದು? ಏನೂ ಬೇಡ ಬಿಡು” ಎಂದೆ. “ಅದೆಲ್ಲಾ ಇಲ್ಲಾ, ಇವತ್ತು ಯಾವುದಾದರೂ ಹೊಸ ಕಥೆ ಹೇಳ್ಲೇಬೇಕು” ಎಂದು ಮತ್ತೆ ರಚ್ಚೆ ಹಿಡಿದ ಮಗುವಿನಂತೆ ಆಡತೊಡಗಿದಳು. ಕ್ಷಣಕಾಲ ಯೋಚಿಸಿ, “ಹೂಂ... ಸರಿ. ಹಾಗಾದ್ರೆ ಇವತ್ತು ದಶರಥ್ ಮಂಜಿಯ ಕಥೆ ಹೇಳ್ತೇನೆ?” ಎಂದು ಉತ್ಸಾಹದಲ್ಲೇ ನುಡಿದೆ. “ದಶರಥ್ ಮಂಜಿ?” ಅವಳ ಮುಖವೆಲ್ಲಾ ಆಶ್ಚರ್ಯ ಸೂಚಕದ ಜೊತೆಗೆ ಪ್ರಶ್ನಾರ್ಥಕ!?. “ಹೌದು. ದಶರಥ್ ಮಂಜಿಯ ಕಥೆ!. ಇವತ್ತಿನ ಕಾಲದಲ್ಲಿ ಅವನು ನಿಜಕ್ಕೂ ಗ್ರೇಟ್” ಎಂದೆ. “ಹಾಗಾದರೆ ಬೇಗ ಹೇಳಿ” ಎಂದು ಪುಟ್ಟ ಮಗುವಿನಂತೆ ನನ್ನ ಮುಂದೆ ಕೈ ಕಟ್ಟಿ ಕುಳಿತಳು.

“ದಶರಥ್ ಮಂಜಿ 1934 ರಲ್ಲಿ ಬಡತನದ ಕುಟುಂಬವೊಂದರಲ್ಲಿ, ಬಿಹಾರದ ಗಯಾದ ಸಮೀಪವಿರುವ ಗೆಹ್ಲಾರ್ (Gahlour) ಎಂಬ ಹಳ್ಳಿಯಲ್ಲಿ ಹುಟ್ಟಿದ. ಅವನು ಮುಸಾಹರ್ (Musahars) ಎಂಬ ವಂಶಕ್ಕೆ ಸೇರಿದವನಾಗಿದ್ದ. ಅವನ ಜಾತಿಯನ್ನು ಸಮಾಜದಲ್ಲಿ ದಲಿತರೆಂದು ಪರಿಗಣಿಸಲಾಗಿತ್ತು. ಮುಸಾಹರ್^ಗಳನ್ನು ಇಲಿ ತಿನ್ನುವವರು ಮತ್ತು ಸ್ವಚ್ಚಂದವಾಗಿ ಕುಡಿಯುವವರೆಂದು ಪಾರಂಪರಿಕವಾಗಿ ಘೋಷಿಸಲಾಗಿತ್ತು. ಮತ್ತು ಅವರೆಲ್ಲಾ ಇಲಿ ಹೆಗ್ಗNaNಣಗಳು ಸಂಗ್ರಹಿಸುವ ಆಹಾರ ಧಾನ್ಯಗಳನ್ನು ಅವುಗಳ ಬಿಲಗಳಿಂದ ಕೆದಕಿ ತಿಂದು ಜೀವಿಸುವವರು ಎಂದು ಗುರುತಿಸುತ್ತಿದ್ದರು. ಅವರೆಲ್ಲಾ ಸಮಾಜದ ಬಡವರಲ್ಲಿ ಬಡವರಾಗಿದ್ದರು.”

“ಇದರಲ್ಲಿ ಅಂತಾ ಕಥೆಯೇನಿದೆ?” ಎಂದು ಇವಳು ಕಟ್ಟಿದ್ದ ಕೈಯನ್ನು ತೆಗೆದಳು.

ಸಾಮಾನ್ಯವಾಗಿ ಮಧ್ಯದಲ್ಲಿ ಬಾಯಿ ಹಾಕದ ಇವಳ ಪ್ರಶ್ನೆ ಸಹಜವಾದುದೇ ಎಂದೆನಿಸಿತು. ಅಷ್ಟಕ್ಕೂ ಬಡವರ ಕಥೆ ಯಾರಿಗೆ ತಾನೆ ಸಹ್ಯವಾದೀತು?

“ಹಾಗಾದರೆ, ಕಥೆ ಬೇಡವಾ?” ನಾನಂದೆ.

“ಬೇಕು... ಆದರೆ?” ಎಂದಳು.

“ಆದ್ರೆ ಗಿದ್ರೆ ಬಿಟ್ಟು, ತಾಳ್ಮೆಯಿಂದ ಕೇಳುದ್ರೆ ಹೇಳ್ತೀನಿ” ಎಂದೆ.

“ಆಯ್ತು ಹೇಳಿ. ಮಧ್ಯ ಬಾಯಿ ಹಾಕಲ್ಲ” ಎನ್ನುತ್ತಾ ಮತ್ತೆ ಕೈ ಕಟ್ಟಿ ಕೂತೂಹಲದಿಂದ ನೋಡತೊಡಗಿದಳು.

“ಅವಿದ್ಯಾವಂತನಾದ ದಶರಥ್ ಮಂಜಿ ತನ್ನ ಹಳ್ಳಿಯ ಸುತ್ತಮುತ್ತಲೇ ಇದ್ದ ಹೊಲಗದ್ದೆಗಳಲ್ಲಿ ಕೂಲಿ ಕೆಲಸ ಮಾಡಬೇಕಾಗಿ ಬಂತು. ಅವನು ಕೆಲಸ ಮಾಡುತ್ತಿದ್ದ ಹೊಲದ ಪಕ್ಕದಲ್ಲೇ ಆ ಹಳ್ಳಿಯ ಒಂದು ತುದಿಗೆ ಬೆಟ್ಟವೊಂದಿತ್ತು. ಆ ಬೆಟ್ಟವನ್ನು ಬಳಸಿ ಪಕ್ಕದೂರಿಗೆ ಹೋಗುವ ದಾರಿ ತುಂಬಾ ದೂರ, ಜೊತೆಗೆ ಚಿಕ್ಕದು ಮತ್ತು ದುರ್ಗಮವಾಗಿತ್ತು. ಅತ್ರಿ (Atri) ಮತ್ತು ವಾಜಿರ್ ಗಂಜ್ (Vazirganz) ಎಂಬ ಗಯಾದ ಎರಡು ಉಪಭಾಗಗಳ ನಡುವೆ ಸುಮಾರು 50 ಕಿಲೋಮೀಟರ್ ದೂರವಿತ್ತು.

1967 ರಲ್ಲಿ ಒಂದು ದಿನ, ದಶರಥ್ ಮಂಜಿಯ ಹೆಂಡತಿ ಫಗುನಿ ದೇವಿ ಗಂಡನಿಗೆ ಊಟ ತೆಗೆದುಕೊಂಡು ಹೋಗುವಾಗ ಆ ದುರ್ಗಮ ಹಾದಿಯಲ್ಲಿ ಜಾರಿ ಬಿದ್ದಳು. ಅವಳಿಗೆ ತುಂಬಾ ಪೆಟ್ಟಾಗಿತ್ತು. ಆ ಬೆಟ್ಟವನ್ನು ಸುತ್ತಿ ಅವಳನ್ನು ಆಸ್ಪತ್ರೆಗೆ ಸಾಗಿಸಲು ಮಂಜಿ ಬಹಳ ಕಷ್ಟ ಪಡಬೇಕಾಯಿತು. ಈ ಘಟನೆ ದಶರಥ ಮಂಜಿಯನ್ನು ವಿಚಲಿತಗೊಳಿಸಿತು. ಅಂದು ರಾತ್ರಿಯೇ ದಶರಥ ಮಂಜಿಯು ಆ ಬೆಟ್ಟವನ್ನು ಸೀಳಿ ರಸ್ತೆ ಮಾಡಬೇಕೆಂದು ನಿರ್ಧರಿಸಿದನು. ಬೆಳಿಗ್ಗೆ ಎದ್ದವನೇ ಸುತ್ತಿಗೆ ಮತ್ತು ಉಳಿಯನ್ನು ತೆಗೆದುಕೊಂಡು ಬೆಟ್ಟದ ಬಳಿ ಹೋಗಿ ತನ್ನ ಕೆಲಸ ಶುರುಮಾಡಿಯೇ ಬಿಟ್ಟನು. ಅದು ಅಂದಿನಿಂದ ಅವನ ಕಾಯಕವೇ ಆಗಿಬಿಟ್ಟಿತು. ಜನ ಇವನ ಭ್ರಾಂತಿಯನ್ನು ನೋಡಿ ಹುಚ್ಚನೆನ್ನತೊಡಗಿದರು. ಮಂಜಿಗೆ ಅದರ ಪರಿವೆಯೇ ಇರಲಿಲ್ಲ.

ಏಕಾಂಗಿಯಾಗಿ ಕೇವಲ ಸುತ್ತಿಗೆ ಉಳಿಗಳಿಂದ ಆತ ಹಾಕಿದ ಸತತ ವರ್ಷಗಳ ಪರಿಶ್ರಮ ವ್ಯರ್ಥವಾಗಲಿಲ್ಲ. 1988 ರ ಸುಮಾರಿಗೆ, ಅಂದರೆ 22 ವರ್ಷಗಳ ನಂತರ ಆತನಿಗೆ ಪ್ರತಿಫಲಸಿಕ್ಕಿತ್ತು. 50 ಕಿಲೋಮೀಟರ್‍ಗಳ ದುರ್ಗಮ ಹಾದಿ ಬರೀ 8 ಕಿಲೋಮೀಟರ್‌ಗಳ, 360 ಅಡಿ ಉದ್ದದ, 30 ಅಡಿ ಎತ್ತರದ, 25 ಅಡಿ ಅಗಲದ ಸುಲಭದ ಮಾರ್ಗವಾಗಿತ್ತು.

“ವಾವ್ ಗ್ರೇಟ್!” ಎಂಬ ಉದ್ಗಾರ ಇವಳಿಂದ.

“ಆದರೆ, ದುರದೃಷ್ಟವಶಾತ್, ತನ್ನ ಗಂಡನ ಸಾಹಸವನ್ನು ನೋಡುವ ಮೊದಲೇ ಫಲ್ಗುಣಿ ದೇವಿ ತೀರಿಕೊಂಡಿದ್ದಳು” ಬೇಸರದಿಂದ ನಾನು ನುಡಿದೆ.

“ಅಯ್ಯೋ, ಪಾಪ” ವೆಂದಳು.

ಅತ್ತುಗಿತ್ತಳು ಎಂದು ಅವಳ ಕಣ್ಣನ್ನೇ ಗಮನಿಸುತ್ತಿದ್ದ ನನಗೆ ಏನು ಹೇಳಬೇಕೆಂದು ತೋಚಲಿಲ್ಲ.

“ಮುಂದೆ...ದಶರಥ್ ಮಂಜಿ ಏನಾದ?” ಎಂದು ಪ್ರಶ್ನಿಸಿದಳು.

ಅಳುತ್ತಾಳೆಂದು ಕೊಂಡವನಿಗೆ ಅವಳ ಪ್ರಶ್ನೆ ಕಾಡತೊಡಗಿತು.

ಒಲ್ಲದ ಮನಸ್ಸಿನಿಂದ, “ಇನ್ನೇನು, ಅವನು ದಂತಕಥೆಯೇ ಆಗಿಬಿಟ್ಟ! ಇಲ್ಲಿಗೆ ಕಥೆ ಮುಗಿಯಿತು” ಎಂದು ನಾನಂದೆ.

“ಇಲ್ಲ, ಇಲ್ಲ ಅವನ ಮುಂದಿನ ಕಥೆ ಏನಾಯಿತು? ಅವನಿಗೆ ಪ್ರಶಸ್ತಿ ಪುರಸ್ಕಾರಗಳು? ಅವನು ಈಗ ಇದ್ದಾನೆಯೆ? ಇದ್ದರೆ ಹೇಗಿದ್ದಾನೆ? ಎಲ್ಲಿದ್ದಾನೆ?” ಪ್ರಶ್ನೆಗಳ ಸುರಿಮಳೆಯಾಯಿತು.

“ಬೇಡ ಬಿಡು ಲಕ್ಷ್ಮಿ. ಅವನು ಹೇಗಿದ್ದರೆ ನಮಗೇನು? ಅವನ ತ್ಯಾಗ, ಹೆಂಡತಿಯ ಮೇಲಿನ ಪ್ರತೀಕವಾಗಿಯಷ್ಟೇ ಈ ಕಥೆಯನ್ನು ಹೇಳಿದೆ. ಸಾಕು ಬಿಡು ಬರುತ್ತೇನೆ” ಎಂದು ನಾ ಹೇಳಿದೆ.

“ಇಲ್ಲಾ ನೀವು ಇವತ್ತು ಹೇಳ್ಲೇಬೇಕು” ಎಂದು ಹಠ ಹಿಡಿದಳು.

ನನಗೂ ತಡೆಯಲಾಗಲಿಲ್ಲ. ಮುಂದುವರೆದು ಹೇಳಿದೆ:

“ದಶರಥ್ ದಾಸ್, ದಶರಥ್ ಮಂಜಿ, ದಶರಥ್ ಭುಯ್ಯಾ ಎಂದೆಲ್ಲಾ ಹಳ್ಳಿಗರಿಂದ ಕರೆಯಲ್ಪಡುತ್ತಿದ್ದವನು ಅವರ ಪಾಲಿಗೆ “ಸಾಧು ಬಾಬಾ”ನೇ ಆಗಿಬಿಟ್ಟ. ಅವನನ್ನು ಹರಸಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಬಂದವು. ಆ ಹಾದಿಯಲ್ಲಿ ಬಿಗಿಯಾದ ರಸ್ತೆಯನ್ನು ಮಾಡಬೇಕೆಂದು ಸರ್ಕಾರಕ್ಕೆ ಆತ ಮೊರೆಯಿಟ್ಟ. ಬೆಟ್ಟವನ್ನು ತನ್ನ ಪರಿಶ್ರಮದಿಂದ ಸಿಗಿದದಲ್ಲದೇ ಅವನ ಹಳ್ಳಿಯಿಂದ ದಿಲ್ಲಿಯವರೆಗೆ ರೈಲ್ವೇ ಹಾದಿಯಲ್ಲಿ ಚಲಿಸಿ, ದಾಖಲೆಗೆ ತನ್ನ ಡೈರಿಯಲ್ಲಿ ಆ ಹಾದಿಯ ಎಲ್ಲಾ ಸ್ಟೇಷನ್ ಮಾಸ್ಟರ್ ಗಳ ಸಹಿ ಸಂಗ್ರಹಿಸಿದ.

ಆದರೆ, ಅವನ ಪರಿಶ್ರಮ ನಿರೀಕ್ಷಿತ ಫಲವನ್ನು ನೀಡಲಿಲ್ಲ. ರಾಜಕಾರಣಿಗಳು ದಶರಥ್ ಮಂಜಿಯನ್ನು ಕಾಟಾಚಾರಕ್ಕೆ ಭೇಟಿಯಾದರು. ಪಟ್ನಾ ದೂರದರ್ಶನದವರು ಅವನ ಕಥೆಗೆ ಐವತ್ತು ಸಾವಿರ ರೂಪಾಯಿ ನೀಡಿ ಟೆಲಿಚಿತ್ರ ಮಾಡುತ್ತೇವೆ ಎಂದರು. ಚಿತ್ರ ಮುಗಿದರೂ ಆ ದುಡ್ಡು ಅವನ ಕೈ ಸೇರಲಿಲ್ಲ. ಅಲ್ಲಿನ ಜಿಲ್ಲಾಧಿಕಾರಿ ದಶರಥ್ ಮಂಜಿಗೆ ರಾಷ್ಟ್ರಪತಿ ಪ್ರಶಸ್ತಿ ನೀಡಬೇಕೆಂದು ಶಿಫಾರಸ್ಸು ಮಾಡಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಅದೂ ಪ್ರಯೋಜನವಾಗಲಿಲ್ಲ. ರಾಷ್ಟ್ರಪತಿಗಳನ್ನು ಭೇಟಿಯಾಗಲು ಮಂಜಿಯ ಹಲವು ಪ್ರಯತ್ನಗಳು ವಿಫಲವಾದವು. ಆ ಸಮಯದಲ್ಲಿ ದಿಲ್ಲಿಯಲ್ಲೇ ದೂರದ ಸಂಬಂಧಿಗಳ ಜೊತೆಯಿದ್ದ ಅವನ ಸಾಹಸಗಳನ್ನು ಸರಿಯಾಗಿ ಯಾರೂ ಗುರುತಿಸಲಿಲ್ಲ.

ಆದರೆ, ಅಂದಿನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‍ರನ್ನು ಪಟ್ನಾದ ಜನಾತ ದರ್ಬಾರ್ ನಲ್ಲಿ ದಶರಥ್ ಮಂಜಿ ಭೇಟಿಯಾದಾಗ, ಮಂಜಿಯ ಸಾಹಸಗಳನ್ನು ಮೆಚ್ಚಿದ ಮುಖ್ಯಮಂತ್ರಿಗಳು ಆತನ ಗೌರವಾರ್ಥ ತಮ್ಮ ಸೀಟಿನಲ್ಲಿ ಆತನನ್ನು ಕೂಡಿಸಿ ಸನ್ಮಾನಿಸಿದ್ದರು. ಆತನಿಗೆ ನಾಲ್ಕು ಎಕರೆ ಜಮೀನನ್ನು ಆ ಹಳ್ಳಿಯಲ್ಲಿ ನೀಡಿದ್ದರು. ಆ ಜಮೀನನ್ನು ಮಂಜಿಯು ಆಸ್ಪತ್ರೆ ಕಟ್ಟಲು ನೀಡಿದನು.

ಇಷ್ಟೆಲ್ಲಾ ಮಾಡಿದ ಮಂಜಿ ಬಹಳ ದಿನ ಉಳಿಯಲಿಲ್ಲ. ಅಂದಿನ ನಿತೀಶ್ ಸರ್ಕಾರ ಆತನಿಗೆ ಪ್ರಖ್ಯಾತ ದಿಲ್ಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್‍ನಲ್ಲಿ ಚಿಕಿತ್ಸೆ ನೀಡಿದರೂ, ಅದು ಫಲಕಾರಿಯಾಗಲಿಲ್ಲ. ಆತನನ್ನು ಕಾಡುತ್ತಿದ್ದ ಪಿತ್ತಕೋಶದ ಕ್ಯಾನ್ಸರ್ ಅವನನ್ನು 2007 ರ ಆಗಷ್ಟ್^ನಲ್ಲಿ ಬಲಿತೆಗೆದುಕೊಂಡಿತು. ಆತನ ಅಂತಿನ ಸಂಸ್ಕಾರವನ್ನು ಸರ್ಕಾರದ ಸಕಲ ಮರ್ಯಾದೆಯೊಂದಿಗೆ ನೇರವೇರಿಸಲಾಯಿತು. ನಂತರ ಆ ಬೆಟ್ಟದ ರಸ್ತೆಗೆ ಆತನ ಹೆಸರನ್ನೇ ಇಡಲಾಯಿತು. ಮತ್ತು ಆತನಿಗೆ ನೀಡಿದ್ದ ಜಮೀನಿನಲ್ಲಿ ಆತನ ಕೋರಿಕೆಯಂತೆ ಆಸ್ಪತ್ರೆ ಕಟ್ಟಿಸಿ ಮಂಜಿ ಹೆಸರನ್ನೇ ಇಡಲಾಗಿದೆ.

ದಶರಥ್ ಮಂಜಿಯ ಪ್ರೀತಿಯ ಪ್ರತೀಕದಂತಿರುವ ಆ ರಸ್ತೆಯು ಷಹಜಹಾನನ ತಾಜ್‍ಮಹಲ್‍ನಷ್ಟು ಸುಂದರವಾಗಿರಲಿಲ್ಲದಿದ್ದರೂ, ಅದಕ್ಕಿಂತ ಗ್ರೇಟ್ ಅಲ್ಲವೇನೇ?” ಎಂದು ಒಂದೇ ಉಸುರಿಗೆ ಹೇಳಿ ಮಾತು ನಿಲ್ಲಿಸಿದವನು ಅವಳ ಪ್ರತಿಕ್ರಿಯೆಗೆ ಅವಳತ್ತ ದಿಟ್ಟಿಸಿ ನೋಡಿದೆನು.

ಅವಳ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬವು ಮಂಜು ಮಂಜಾಗುತ್ತಾ ಹೋಯಿತು.

ಗುರುವಾರ, ಫೆಬ್ರವರಿ 10, 2011

ಲ್ಯಾಪ್ ಟಾಪ್ ಭಂಗಿಯಲ್ಲಿ... ಪ್ರೀತಿಯೊಡನೆ ಒಂದು ಸಂಜೆ...

ಲ್ಯಾಪ್ ಟಾಪ್ ಭಂಗಿಯಲ್ಲಿ... ಪ್ರೀತಿಯೊಡನೆ ಒಂದು ಸಂಜೆ...




ಹೊಸ ವರ್ಷ, ಹೊಸ ಉಲ್ಲಾಸದೊಂದಿಗೆ ನಾವಿಬ್ಬರೂ ಭೇಟಿಯಾದೆವು. ಪರಸ್ಪರ ಚಾಕಲೇಟ್, ಶುಭಾಷಯಗಳ ವಿನಿಮಯವಾಯಿತು. ಅವಳು ನನ್ನ ಕಣ್ಣಲ್ಲಿ ದೃಷ್ಠಿಯಿಟ್ಟು ನೋಡುತ್ತಿದ್ದರೆ, ನಮ್ಮಿಬ್ಬರ ಪ್ರೀತಿ ಅದೆಷ್ಟು ಅಗಾಧಾವಾದುದು ಎಂದೆನಿಸುತ್ತಿತ್ತು. ನಾನೇ ಮಾತಿಗಿಳಿದು “ಹೊಸವರ್ಷದ ಮೊದಲ ದಿನ ಒಂದು ಒಳ್ಳೆಯ ಕೆಲಸ ಮಾಡಬೇಕೆಂದಿರುವೆ” ಎಂದೆ. ನಾನು ಅಪರೂಪಕೊಮ್ಮೆ ಮಾಡುವ ಒಳ್ಳೆಯ ಕೆಲಸವೆನೆಂದು ಅವಳಿಗೆ ಗೊತ್ತು. ನನ್ನ ಪಕ್ಕದಲ್ಲಿ ಬಂದು ಕುಳಿತಳು. ಅವಳ ಲ್ಯಾಪ್ (ತೊಡೆ) ಮೇಲೆ ನನ್ನ ಟಾಪ್ (ತಲೆ) ಇಟ್ಟು ಮಲಗಿದೆ. “ಇದೇ ತಾನೇ, ನಿಮ್ಮ ಒಳ್ಳೆಯ ಕೆಲಸ” ಎಂದಳು. “ಇಲ್ಲಾ, ಇವತ್ತು ಇನ್ನೂ ಸ್ವಲ್ಪ ಇದೆ” ಎಂದೆ. “ಆಸೆ, ದೋಸೆ, ಹಪ್ಪಳ, ಅವೆಲ್ಲಾ ಎನೂ ಇಲ್ಲ, ಸುಮ್ಮನೆ ಮಲಗಬೇಕು ಅಷ್ಟೆ” ಎಂದು ನನ್ನ ತಲೆಯಲ್ಲಿ ನವಿರಾಗಿ ಕೈಯಾಡಿಸುತ್ತಿದ್ದಳು. ಅವಳ ಪುಟ್ಟ ಬೆರಳುಗಳು ನನ್ನ ಕೂದಲಿನ ಜೊತೆ ಆಟವಾಡುತ್ತಿದ್ದರೆ ಮಧುರಾನುಭವ. “ಛೇ! ಅದಲ್ಲಾ... ಒಂದು ಕಥೆ ಹೇಳಬೇಕೆಂದಿರುವೆ” ನಾನಂದೆ. “ಹೇಳಿ” ಎಂದಳು. “ಇದೊಂದು ಇಂಗ್ಲೀಷ್ ನಲ್ಲಿ ನಾ ಓದಿದ ಒಂದು ಅಪೂರ್ವ ಪ್ರೇಮ ಕಥನ” ಎಂದು ಶುರುವಿಟ್ಟುಕೊಂಡೆ.

ಸಂಜೆಯ ಆರಕ್ಕೆ ಆರು ನಿಮಿಷ ಮಾತ್ರ ಬಾಕಿಯಿದೆ ಎಂದು ನಗರದ ರೈಲ್ವೇಸ್ಟೇಷನ್ ಮಾಹಿತಿ ಕೇಂದ್ರದ ಮೇಲಿದ್ದ ಬೃಹತ್ ಗಡಿಯಾರ ತೋರಿಸುತ್ತಿತ್ತು. ಉದ್ದವಾಗಿದ್ದ ತರುಣ ಸೇನಾಧಿಕಾರಿ ರೈಲ್ವೇಸ್ಟೇಷನ್ನಿಂದ ಆಗಷ್ಟೆ ಹೊರಗೆ ಬಂದು ಸೂರ್ಯನ ಕಿರಣಗಳಿಂದ ಕಂದಾಗಿದ್ದ ಮುಖವೆತ್ತಿ ತನ್ನ ಕೈ ಗಡಿಯಾರದಲ್ಲಿ ದೃಷ್ಠಿನೆಟ್ಟು ಸಮಯವನ್ನು ಧೃಡಪಡಿಸಿಕೊಂಡ. ಅವನ ಎದೆಯ ಸದ್ದು ಕೇಳಿ ಭಯಗೊಂಡಿದ್ದರೂ ತಹಬದಿಗೆ ತರಲಾಗುತ್ತಿರಲಿಲ್ಲ. ಇನ್ನಾರು ನಿಮಿಷಕ್ಕೆ ಆತ ತನ್ನ ಜೀವನದಲ್ಲಿ ಹದಿಮೂರು ತಿಂಗಳುಗಳಿಂದ ವಿಶೇಷ ಸ್ಥಾನ ಪಡೆದಿದ್ದ ಆಕೆಯನ್ನು ಭೇಟಿಯಾಗಲಿದ್ದಾನೆ. ಅವಳನ್ನೆಂದೂ ನೋಡಿಲ್ಲ. ಆದರೆ ಆಕೆಯ ಪತ್ರಗಳು ಮಾತ್ರ ಅವನ ಜೊತೆಯಲ್ಲಿ ಇವೆ ಮತ್ತು ಅವನಿಗೆ ಬೆಂಬಲವಾಗಿವೆ.

ಮಾಹಿತಿ ಕೇಂದ್ರಕ್ಕೆ ಅಂಟಿ ಕುಳಿತಾತನ ಪಕ್ಕದಲ್ಲೇ ಜನರು ಅಲ್ಲಿನ ಅಧಿಕಾರಿಗಳಿಗೆ ಪ್ರಶ್ನೆಗಳ ಮಳೆ ಸುರಿಸುತ್ತಿದ್ದರು.

ಲೆಫ್ಟಿನೆಂಟ್ ಬ್ಲಾಂಡ್ಪೋಿರ್ಡ್ ತಾನು ಯುದ್ದ ಮಾಡಿದ್ದ ಒಂದು ಭಯಾನಕ ರಾತ್ರಿಯನ್ನು ನೆನಪಿಸಿಕೊಳ್ಳುತಿದ್ದ. ವೈರಿಗಳ ಪಾಳಯದಲ್ಲಿ ತನ್ನ ಯುದ್ದವಿಮಾನ ಸಿಕ್ಕಿತ್ತು. ವೈರಿ ಪೈಲಟ್ನತ ಕುಹಕ ನಗೆ ಕಂಡಿತ್ತು.

ತನ್ನದೊಂದು ಪತ್ರದಲ್ಲಿ ಅವನು ಪದೇಪದೇ ಭಯ ಬೀಳುತ್ತಿದ್ದುದ್ದನ್ನು ನಿವೇದಿಸಿಕೊಂಡಿದ್ದ. ಆ ಭಯಾನಕ ಯುದ್ದದ ಸ್ವಲ್ಪ ದಿನಗಳ ಮುಂಚೆ ಅವಳಿಂದ ಉತ್ತರವೂ ಬಂದಿತ್ತು. “ಹೌದು, ನೀನು ಭಯಗೊಂಡಿರುವೆ...ಎಲ್ಲ ಯೋಧರಂತೆ. ಕಿಂಗ್ ಡೇವಿಡ್ಗೂ ಭಯವಿರಲಿಲ್ಲವೇ? ಅದಕ್ಕೋಸ್ಕರವೇ ಆತ ಇಪ್ಪತ್ತಮೂರನೇ ಪವಿತ್ರಗೀತೆ (ಕ್ರಿಶ್ಚಿಯನ್ನರ) ಯನ್ನು ಬರೆದಿದ್ದು. ಮುಂದಿನ ಬಾರಿ ನೀ ಭಯಗೊಂಡಾಗ, ನನ್ನ ಧ್ವನಿಯು ನಿನ್ನಲ್ಲಿ ಕೇಳಿಸಲಿ: “ಸಾವಿನ ನೆರಳಿನ ಕಣಿವೆಯಲ್ಲಿ ನಾ ನಡೆಯುತ್ತಿದ್ದರೂ, ನನಗ್ಯಾವ ದುಷ್ಟಶಕ್ತಿಗಳ ಭಯವಿಲ್ಲ. ಏಕೆಂದರೆ ನೀ ನನ್ನ ಜೊತೆಗಿರುವೆ” ”. ಅವಳ ಕಲ್ಪಿತ ಧ್ವನಿಯಿಂದ ಉತ್ತೇಜಿತನಾಗಿ ಆ ಯುದ್ದದಲ್ಲಿ ಗೆದ್ದಿದ್ದ.

ಆರಕ್ಕೆ ನಾಲ್ಕು ನಿಮಿಷ ಬಾಕಿಯಿದೆ. ಇನ್ನೇನೂ ಅವಳ ನಿಜವಾದ ಮಧುರ ಧ್ವನಿಯನ್ನು ಕೇಳಲಿದ್ದಾನೆ. ಅವನ ಮುಖದಲ್ಲಿ ಕುತೂಹಲವಿದೆ.

ಅಗಣಿತ ತಾರಾಗಣಗಳ ಚಪ್ಪರದ ಕೆಳಗೆ ಲಗುಬಗೆಯಿಂದ ಜನಗಳು ಓಡಾಡುತ್ತಿದ್ದರು. ಒಬ್ಬಳು ಚೆಂದದ ಹುಡುಗಿ ಅವನ ಹತ್ತಿರದಲ್ಲೇ ನಡೆದು ಹೋದಳು. ಲೆಫ್ಟಿನೆಂಟ್ ಬ್ಲಾಂಡ್ಪೋಯರ್ಡ್ ಕುಳಿತಲ್ಲೇ ಚಲಿಸಿದ. ಅವಳ ಮೇಲುವಂಗಿಯ ಮೇಲೆ ಗುಲಾಬಿಯಿತ್ತು. ಆದರದು ಕಡು ಕೆಂಪು ಬಣ್ಣದ್ದು. ಇವರಿಬ್ಬರ ಒಪ್ಪಂದದಂತೆ ಕೆಂಪಾದ ಚಿಕ್ಕ ಗುಲಾಬಿಯಾಗಿರಲಿಲ್ಲ. ಮತ್ತು, ಆ ಹುಡುಗಿ ಹದಿನೆಂಟರ ತರುಣಿಯಂತಿದ್ದಳು. ಆದರೆ ಹೋಲಿಸ್ ಮೇನೆಲ್ ಮುಚ್ಚು ಮರೆಯಿಲ್ಲದೆಯೇ ತನಗೆ ಮೂವತ್ತು ಎಂದು ಬರೆದಿದ್ದಳು. “ಆದರೇನಂತೆ? ನನಗಾಗಲೇ ಮೂವತ್ತೆರಡು ಎಂದು ಸಮಾಧಾನಗೊಂಡಿದ್ದ.

ಅವನ ಮನಸ್ಸು ಆ ಪುಸ್ತಕಕ್ಕೆ ಮರಳಿತ್ತು. ಫ್ಲೋರಿಡಾದ ತರಬೇತಿ ಶಿಬಿರದಲ್ಲಿದ್ದವನಿಗೆ ಸೈನ್ಯದ ಗ್ರಂಥಾಲಯದಲ್ಲಿದ್ದ ಸಾವಿರಾರು ಪುಸ್ತಕಗಳಲ್ಲಿ ದೇವರೇ ಆ ಪುಸ್ತಕವನ್ನು ಇವನ ಕೈಗೆ ನೀಡಿದಂತಿತ್ತು. “Of Human Bondage” ಎಂಬ ಆ ಪುಸ್ತಕದ ತುಂಬಾ ಮಹಿಳೆಯೊಬ್ಬಳು ಬರೆದಿದ್ದ ನೋಟ್ಸಗಳಿದ್ದವು. ಈ ರೀತಿಯ ಬರವಣಿಗೆ ಆತನಿಗೆ ಇಷ್ಟವಾಗುತ್ತಿರಲಿಲ್ಲವಾದರೂ, ಅಭಿಪ್ರಾಯಗಳು ವಿಭಿನ್ನವಾಗಿದ್ದವು. ಒಬ್ಬಳು ಹೆಂಗಸು ಗಂಡಸಿನ ಎದೆಯಾಳವನ್ನು ಅರ್ಥಮಾಡಿ ಕೊಳ್ಳಬಹುದೆಂಬ ಉಹೆಯೂ ಆತನಿಗಿರಲಿಲ್ಲ. ಆಕೆಯ ಹೆಸರು ಪುಸ್ತಕದಲ್ಲಿತ್ತು: “ಹೋಲಿಸ್ ಮೇನೆಲ್”. ನ್ಯೂಯಾರ್ಕ್ ಟೆಲಿಪೋನ್ ಡೈರೆಕ್ಟರಿ ತೆಗೆದುಕೊಂಡು ಅವಳ ವಿಳಾಸವನ್ನು ಪತ್ತೆ ಹಚ್ಚಿದ್ದ. ಅವಳಿಗೆ ಪತ್ರ ಬರೆದ. ಅವಳೂ ಉತ್ತರಿಸಿದಳು. ಇವನೆಲ್ಲಿಗೋದರೂ ಪತ್ರವ್ಯವಹಾರ ಮುಂದುವರೆಯಿತು.

ಹದಿಮೂರು ತಿಂಗಳುಗಳು ಅವಳು ಚಾಚೂ ತಪ್ಪದೇ ಉತ್ತರ ಬರೆಯುತ್ತಿದ್ದಳು ಮತ್ತು ಅವನಿಂದ ಕಾಗದ ಬರದಿದ್ದರೆ ಅವಳೇ ಬರೆಯುತ್ತಿದ್ದಳು. ಮತ್ತಾಗ ಅವಳು ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ನಂಬಿದ್ದ. ಅವಳೂ ಪ್ರೀತಿಸುತ್ತಿದ್ದಳು.

ಆದರೆ, ಆತನ ಮನವಿಯನ್ನು ತಿರಸ್ಕರಿಸಿ ತನ್ನ ಪೋಟೋವನ್ನು ಕಳುಹಿಸಿರಲಿಲ್ಲ. ಸ್ವಲ್ಪ ಅತಿಶಯೋಕ್ತಿಯೆನಿಸಿದರೂ ನಿಜವಾಗಿತ್ತು. ಆದರವಳು ಕಾರಣವನ್ನು ವಿವರಿಸಿದ್ದಳು. “ನಿನ್ನ ಭಾವನೆಗಳು ನಿಜವೇ ಆಗಿದ್ದರೆ ನಿಷ್ಕಪಟವಾದ ತಳಹದಿಯಿದ್ದರೆ ನನ್ನ ರೂಪ ಮುಖ್ಯವಾಗುವುದಿಲ್ಲ. ನಾನೇನಾದರೂ ರೂಪವತಿಯಾಗಿದ್ದರೆ, ನೀ ನನ್ನ ರೂಪಕ್ಕೆ ಮರುಳಾಗಿ ಪ್ರೀತಿಸಿದೆ ಎಂಬ ಭಾವನೆ ನನ್ನನ್ನು ಕಾಡುತ್ತಿರುತ್ತದೆ. ಮತ್ತು ಆ ರೀತಿಯ ಪ್ರೀತಿ ನನಗೆ ಅಸಹ್ಯವಾಗುತ್ತದೆ. ನಾನೇನಾದರೂ ಸಾಧಾರಣವಾಗಿದ್ದರೆ (ಇರಬಹುದೆಂದು ನೀನು ಒಪ್ಪಿಕೊಳ್ಳಬೇಕು) ನೀನು ಒಂಟಿಯಾಗಿರುವೆ ಮತ್ತು ಅದೇ ಕಾರಣಕ್ಕೆ ನನಗೆ ಪತ್ರ ಬರೆಯುತ್ತಿದ್ದೀಯಾ ಎಂದು ಪರಿತಪಿಸಬೇಕಾಗುತ್ತದೆ. ಬೇಡ, ನನ್ನ ಪೋಟೋವನ್ನು ಕೇಳಬೇಡ. ನೀನೇ ನ್ಯೂಯಾರ್ಕಿಗೆ ಬಂದಾಗ ನನ್ನನ್ನು ನೋಡಿದ ಮೇಲೆ ನಿರ್ಧಾರಕ್ಕೆ ಬರುವಿಯಂತೆ. ಜ್ನಾಪಕವಿರಲಿ ನಾವಿಬ್ಬರೂ ಈ ಸಂಬಂಧವನ್ನು ನಿಲ್ಲಿಸುವುದೋ ಅಥವಾ ಮುಂದುವರೆಸುವುದೋ ನಮ್ಮದೇ ಸ್ವತಂತ್ರ ಆಯ್ಕೆ.

ಆರಕ್ಕೆ ಒಂದು ನಿಮಿಷ ಮಾತ್ರ. ಬಿಗಿಯಾಗಿ ಸಿಗರೇಟಿನ ಧಮ್ ಎಳೆದ (ನಾ ಸೇದುವುದಿಲ್ಲವಾದ್ದರಿಂದ ನಿಟ್ಟುಸಿರಿಟ್ಟೆ) ಲೆಫ್ಟಿನೆಂಟ್ ಬ್ಲಾಂಡ್ಪೋೇರ್ಡ್ನವ ಎದೆ ಆತನ ವಿಮಾನಕ್ಕಿಂತ ಎತ್ತರಕ್ಕೆ ಜಿಗಿದಿತ್ತು.

ಒಬ್ಬಳು ಹೆಂಗಸು ಅವನ ಬಳಿಗೆ ನಡೆದು ಬರುತ್ತಿದ್ದಳು. ಉದ್ದ ಮತ್ತು ತೆಳುವಾಗಿದ್ದಳು. ಚೆಲುವಾದ ಕೂದಲು ಸುರುಳಿಯಾಕಾರದಲ್ಲಿ ಕಿವಿಯ ಬದಿಯಲ್ಲಿದ್ದವು. ಕಣ್ಣುಗಳು ನೀಲಿ ಹೂಗಳಂತಿದ್ದವು. ಅವಳ ತುಟಿ ಮತ್ತು ಗಲ್ಲ ಮೃದು ನಿಲುವು ತಳೆದಿದ್ದವು. ಅವಳ ತಿಳಿ ಹಸುರಿನ ಉಡುಗೆಯಲ್ಲಿ ವಸಂತ ಋತುವೆ ಮೈವೆತ್ತಂತೆ ಬಂದಳು.

ಅವನು ಅವಳೆಡೆಗೆ ಚಲಿಸಿದ. ಅವಳು ಗುಲಾಬಿಯನ್ನು ತೊಟ್ಟಿಲ್ಲವೆಂಬುದನ್ನು ಸಂಪೂರ್ಣವಾಗಿ ಮರೆತಿದ್ದ. ಆತ ಅವಳನ್ನು ಸಮೀಪಿಸಿದಂತೆ ಅವಳ ತುಟಿಗಳಲ್ಲಿ ಸಣ್ಣದಾಗಿ ಕೆಣಕುವ ನಗೆ ಮೂಡಿತ್ತು.

“ನೀವು ನನ್ನ ಹಾದಿಯಲ್ಲಿದ್ದೀರಾ, ಲೆಫ್ಟಿನೆಂಟ್?” ಅವಳು ಗೊಣಗುಟ್ಟಿದ್ದಳು.

ತನಗರಿವಿಲ್ಲದೆಯೇ, ಆತ ಒಂದು ಹೆಜ್ಜೆ ಅವಳಿಗೆ ಹತ್ತಿರವಾದ. ಅದಾಗ ಹೋಲಿಸ್ ಮೇನೆಲಳನ್ನು ನೋಡಿದ.

ಹೋಲಿಸ್ ಮೆನೆಲ್ ಸರಿಯಾಗಿ ಆ ಹುಡುಗಿಯ ಹಿಂದೆಯೇ ನಿಂತಿದ್ದಳು. ನಲವತ್ತರ ವಯಸ್ಸನ್ನು ದಾಟಿರಬಹುದಾದ ಹೆಂಗಸು. ಅವಳ ಮಾಸುತ್ತಿದ್ದ ಕೂದಲುಗಳು ಧರಿಸಿದ್ದ ಟೋಪಿಯೊಳಗಿದ್ದವು. ಸ್ವಲ್ಪ ಧಡೂತಿಯಾಗಿದ್ದಳು. ದಪ್ಪನೆಯ ಕಾಲುಗಳು ಶೂನೊಳಗೆ ತುರುಕಿದಂತಿದ್ದವು. ಆದರೆ ಅವಳ ಸುಕ್ಕುಗಟ್ಟಿದ್ದ ಮೇಲಂಗಿಯಲ್ಲಿ ಕೆಂಪು ಗುಲಾಬಿ ಧರಿಸಿದ್ದಳು.

ತಿಳಿ ಹಸಿರು ಬಣ್ಣದ ಉಡುಗೆ ತೊಟ್ಟಿದ್ದ ಹುಡುಗಿ ಮೆಲ್ಲನೆ ಅಲ್ಲಿಂದಾ ಮಾಯವಾದಳು.

ಬ್ಲಾಂಡ್ಪೋುರ್ಡ್ನತ ಮನಸ್ಸು ಇಬ್ಬಂದಿಯಾಯಿತು. ಅಲ್ಲಿಂದ ಮಾಯವಾದ ಹುಡುಗಿಯನ್ನು ಹಿಂಬಾಲಿಸಲು ಯೋಚಿಸಿದನಾದರೂ ತನ್ನ ಜೊತೆಯಲ್ಲೇ ಇರುತ್ತಿದ್ದ ಹೋಲಿಸ್ ಮೇನೆಲ್ಳ ಚೈತನ್ಯಕ್ಕೆ ಅವನ ಮನಸ್ಸು ಸೋತಿತ್ತು. ಮುಖಾಮುಖಿ ಅವರಿಬ್ಬರು ನಿಂತಿದ್ದಾರೆ. ಅವಳ ಮಂದವಾದ ದುಂಡು ದಂಡಾದ ಮುಖದಲ್ಲಿ ಕೋಮಲತೆಯಿತ್ತು. ಕಂದು ಬಣ್ಣದ ಕಣ್ಣುಗಳಲ್ಲಿ ಬೆಚ್ಚನೆಯ ಪ್ರೀತಿ ಇಣುಕುತಿತ್ತು.

ಲೆಫ್ಟಿನೆಂಟ್ ಬ್ಲಾಂಡ್ಪೋ್ರ್ಡ್ ಹಿಂದೆ ಸರಿಯಲಿಲ್ಲ. ಆತನ ಕೈ ಬೆರಳುಗಳು ಸ್ವಲ್ಪ ಹರಿದಿದ್ದ “Of Human Bondage” ಪುಸ್ತಕವನ್ನು ಧೃಡವಾಗಿ ಹಿಡಿದಿವು. ಅದು ಆಕೆಗೆ ಈತನನ್ನು ಗುರುತುಹಿಡಿಯಲು ಸಹಕಾರಿ. ಪ್ರಯಶಃ ಇದು ಪ್ರೀತಿಯಲ್ಲ, ಅದಕ್ಕಿಂತಲೂ ಮಿಗಿಲಾದ, ಒಂದು ಅಮೂಲ್ಯವಾದ ಜೀವಮಾನವೀಡಿ ಋಣಿಯಾಗಿರಬೇಕಾದ ಸ್ನೇಹ ಸಂಬಂಧ.

ಆತ ಆಕೆಗೆ ಸೆಲ್ಯೂಟ್ ಮಾಡುತ್ತಾ, ತನ್ನ ಕೈಯಲ್ಲಿದ್ದ ಪುಸ್ತಕವನ್ನು ಅವಳೆಡೆಗೆ ಚಾಚುತ್ತಾ, ತನಗೆ ನಿರಾಶೆಯಾದರು ಹೇಳಿದ: “ನಾನು ಲೆಫ್ಟಿನೆಂಟ್ ಜಾನ್ ಬ್ಲಾಂಡ್ಪೋ್ರ್ಡ್. ಮತ್ತು ನೀವು... ನೀವು... ಮಿಸ್ ಮೇನೆಲ್? ನಿಮ್ಮನ್ನು ಭೇಟಿಯಾದದ್ದು ಬಹಳ ಸಂತೋಷವಾಯಿತು. ನನ್ನ ಜೊತೆ... ಊಟಕ್ಕೆ ಬರುವಿರೋ?”

ಅವಳ ಮುಖ ನಗುವಿನಿಂದ ಅರಳಿತು. “ಏನಾಗುತ್ತಿದೆಯೆಂದು ನನಗೆ ಗೊತ್ತಿಲ್ಲ ಮಗು” ಎಂದು ಆಶ್ಚರ್ಯಚಕಿತವಾಗಿ ಉತ್ತರಿಸಿದಳು. ಮುಂದುವರೆಯುತ್ತಾ, “ಇದೀಗ ತಾನೇ ಇಲ್ಲಿಂದ ಹೋದ ತಿಳಿ ಹಸಿರು ಬಟ್ಟೆ ತೊಟ್ಟಿದ್ದ ಆ ಯುವತಿ ಈ ಗುಲಾಬಿಯನ್ನು ತೋಡುವಂತೆ ವಿನಂತಿಸಿದಳು. ನೀವೇನಾದರೂ ಊಟಕ್ಕೆ ನನ್ನನ್ನು ಕರೆದರೆ ಅವಳು ನಿಮಗೆ ಮುಂದಿನ ರಸ್ತೆಯಲ್ಲಿರುವ ಹೋಟೆಲ್ನೆಲ್ಲಿ ಕಾಯುತ್ತಿರುತ್ತಾಳೆಂದು ಹೇಳಬೇಕೆಂದಳು. ಇದೊಂದು ರೀತಿಯ ಪ್ರೇಮಪರೀಕ್ಷೆ ಎಂದು ಹೇಳಿದಳು. ನನಗಿಗಾಗಲೇ ಅಂಕಲ್ ಸ್ಯಾಮ್ನೊಂನದಿಗೆ ಇಬ್ಬರು ಮಕ್ಕಳಿದ್ದಾರೆ. ಅದಕ್ಕೆ ನಾನೂ ಆ ಯುವತಿಯ ಮಾತಿಗೆ ಸಮ್ಮತಿಸಿದೆ.” ಎಂದು ನಗುತ್ತಾ ಅಲ್ಲಿಂದ ತೆರಳಿದಳು.

ಕಥೆ ಕೇಳಿದ ನನ್ನುಡಿಗೆ ಹಣೆಗೊಂದು ಹೂ ಮುತ್ತನಿಟ್ಟಳು.



(ಪ್ರೇರಣೆ: ಎರಡನೇ ಪಿ.ಯು.ಸಿ. ಪಠ್ಯವಾಗಿರುವ, ಚಿಕನ್ ಸೂಪ್ ಫಾರ್ ದಿ ಸೋಲ್ ಪುಸ್ತಕದ, ಸುಲಮಿತ್ ಈಶ್-ಕಿಶೋರ್ ರವರ “Appointment with Love” ಎಂಬ ಕಥೆ)

- ಗುಬ್ಬಚ್ಚಿ ಸತೀಶ್, ಗುಬ್ಬಿ.

ಮಂಗಳವಾರ, ಫೆಬ್ರವರಿ 1, 2011

"ಮಳೆಯಾಗು ನೀ..." ಗುಬ್ಬಚ್ಚಿಯ ಮೊದಲ ಸಂಭ್ರಮ.

 














(ಉಪಸ್ಥಿತಿ: ಗುಬ್ಬಚ್ಚಿ ಸತೀಶ್, ಶ್ರೀ ಬಿ.ಮೃತ್ಯುಂಜಯ, ಶ್ರೀ ಟಿ.ಎಸ್.ಶಿವಪ್ರಕಾಶ್, ಶ್ರೀಮತಿ ಬಿ.ಸಿ. ಶೈಲಾ ನಾಗರಾಜ್, ಶ್ರೀ ಸಿ.ನಟರಾಜ್, ಶ್ರೀ ಉಗಮ ಶ್ರೀನಿವಾಸ್ - ಪೋಟೋ: ಸತೀಶ್, ಮಹೇಶ್ವರಿ ಸ್ಟುಡಿಯೋ, ತುಮಕೂರು)

ಹೆಚ್ಚಿನ ಪೋಟೋಗಳನ್ನು ಮತ್ತೆ ಹಾಕುತ್ತೇನೆ.
- ಗುಬ್ಬಚ್ಚಿ ಸತೀಶ್.

ಬುಧವಾರ, ಜನವರಿ 26, 2011

ಕನ್ನಡಮ್ಮನ ಕಥೆ.

“ಸಾರ್ ಈ ೩೦ನೇ ತಾರೀಖು ಫ್ರೀ ಇರ್ತೀರಾ” ನಾನು ವಿನಯದಿಂದ ಕೇಳಿದೆ. “ಈ ಮೂವತ್ತಾ...? ಇರ್ತೀನಿ” ಎಂದು ಯೋಚಿಸಿ ನುಡಿದ ನಮ್ಮೂರ ಇಂಗ್ಲಿಷ್ ಮೇಷ್ಟ್ರು, ಮುಂದುವರೆಯುತ್ತಾ, “ಆದರೆ ಫೆಬ್ರವರಿ ೪, ೫, ೬ ಇರಲ್ಲ” ಎಂದರು. “ಹೌದಾ ಸಾರ್. ಯಾಕ್ ಸಾರ್” ಎಂದೆ. “ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗ್ತಾ ಇದ್ದೇನೆ” ಎಂದು ಬಹಳ ಖುಷಿಯಿಂದ ಹೇಳಿದರು. ಅವರ ಕನ್ನಡ ಪ್ರೀತಿಯನ್ನು ಮನಸಾರೆ ಒಪ್ಪಿದ ನಾನು, “ನಾನು ಬರ್ತೀದೀನಿ ಸಾರ್. ಈ ವಾರ ನನ್ನ ಕವನ ಸಂಕಲನ ಬಿಡುಗಡೆಯಾಗುತ್ತೆ. ತಗೊಂಡು ನಾನೂ ಹೋಗ್ತೀನಿ. ನಿಮ್ಮನ್ನ ನನ್ನ ಕಾರ್ಯಕ್ರಮಕ್ಕೆ ಕರೆಯೋಣ ಅಂತಾನೆ ಬಂದೆ ಸಾರ್” ಎಂದೆ. “ಹೌದಾ...!? ಆದರೆ ಬರ್ತೀನಿ... ನಾನು ನನ್ನ ಪುಸ್ತಕ “ಕನ್ನಡದ ಮೂಲಕ ಇಂಗ್ಲೀಷ್ ಕಲಿಯಿರಿ. ೧೩ನೇ ಪ್ರಿಂಟ್ ತಗೊಂಡು ಹೋಗ್ತಿದೀನಿ” ಎಂದು ಮತ್ತಷ್ಟು ಖುಷಿಯಿಂದ ನುಡಿದರು. ಅಷ್ಟರಲ್ಲಿ ಇಂಟರ್ ಸಿಟಿ ರೈಲು ಕೂಗಿತು. ಜೈ ಹೋ ಕನ್ನಡ!

- ಗುಬ್ಬಚ್ಚಿ ಸತೀಶ್, ಗುಬ್ಬಿ.

(ಬ್ರೇಕಿಂಗ್ ನ್ಯೂಸ್: ಆತ್ಮೀಯರೇ ನನ್ನ ಮೊದಲ ಪುಸ್ತಕ “ಮಳೆಯಾಗು ನೀ...” ಕವನ ಸಂಕಲನ ಇದೇ ಭಾನುವಾರ ತುಮಕೂರಿನಲ್ಲಿ. ಹೆಚ್ಚಿನ ವಿವರಗಳನ್ನು ಹಲವು ಕಾರಣಗಳಿಂದ ಇದೀಗ ನೀಡಲಾಗುತ್ತಿಲ್ಲ ಅದಕ್ಕಾಗಿ ವಿಷಾದಿಸುತ್ತೇನೆ. ಹೆಚ್ಚಿನ ಮಾಹಿತಿಗೆ ನಿಮ್ಮ ಈ ಮೈಲ್, ನನ್ನ ಬ್ಲಾಗ್ ನೋಡುತ್ತಿರಿ)



ಶುಕ್ರವಾರ, ಜನವರಿ 21, 2011

ಅವಳ ಬೈಸಿಕಲ್ಲು



“ಬರುತ್ತೇನೆ” ಎಂದವಳಿಗೆ
ಹೋಗುವ ಮನಸ್ಸಿಲ್ಲ
ಆದರೂ ಹೋಗಲೇಬೇಕು
ಅಮ್ಮ ಬೇಗ ಬಾ ಎಂದಿದ್ದಾಳೆ
ಇಷ್ಟಕ್ಕೂ ಇವಳು ಹೇಳಿ
ಬಂದಿರುವುದು, ಗೆಳತಿಯ ಮನೆಗೆಂಬ
ಹಸಿಸುಳ್ಳು. ಆ ದಿನದ
“ದಿನಕ್ಕೊಂದು” ಹೊಸಸುಳ್ಳು!

ಸಿನಿಮಾ ಮುಗಿದರೂ
ಎಳಲೊಲ್ಲದ ಜನರಂತೆ
ಎದ್ದವಳು, ನಡಿಗೆಯಲ್ಲೇ ತೆವಳಿ
ಅವಳ ಬೈಸಿಕಲ್ಲಿನ ಬೀಗಕ್ಕೆ
ಕೀ ಹಚ್ಚಿ, ನನ್ನೆಡೆಗೆ ತಿರುಗಿ
ಕಣ್ಣಲೇ “ಮತ್ತೆ ಬರುತ್ತೇನೆ”
ಎಂದು ಸೈಕಲ್ ಹತ್ತಿದಳು.
ಮತ್ತೊಂದು ಷೋನ ಟಿಕೆಟಿಗಾಗಿ
ನಿಂತವನಂತೆ ನಾನು ನಿಂತೇ ಇದ್ದೆ!

ನನ್ನ ಕಣ್ಣಿಂದ ಬೇಗ
ಮರೆಯಾಗಲಿಚ್ಚಿಸದ
ಬೈಸಿಕಲ್ಲೂ-ಅವಳೂ
ನಿಧಾನವಾಗಿ ನನ್ನಿಂದ
ಸ್ವಲ್ಪ-ಸ್ವಲ್ಪ ದೂರವಾಗುತ್ತಿದ್ದಾರೆ
ಬೈಸಿಕಲ್ಲು ಅವಳದ್ದೆ, ಆದರದು
ನನ್ನ ಮನಸ್ಸು!

ಮತ್ತವಳು, ತನ್ನ
ಬೈಸಿಕಲ್ಲಿನ ಮೇಲೆ
ಹಿಂದಿರುಗಿ ಬರುವ ತನಕ
ನನ್ನ ಮನಸ್ಸು
ಅವಳ ಬೈಸಿಕಲ್ಲು!

- ಗುಬ್ಬಚ್ಚಿ ಸತೀಶ್.

ಶುಕ್ರವಾರ, ಜನವರಿ 14, 2011

ಚಳಿಗಾಲದ ಚುಟುಕುಗಳು


ಬೆಚ್ಚಗೆ
ಎಲ್ಲಾ ಕಾಲದಲ್ಲೂ
ಬೆಚ್ಚಗಿರಲು
ಹೆಂಗಸರಿಗೆ ನೈಟಿ!!
ಗಂಡಸರಿಗೆ ನೈಂಟಿ!

ಮುತ್ತಿನ ಅರ್ಥ
ನೀ ಕೊಟ್ಟ ಮುತ್ತು
ಹೇಳುತ್ತಿದೆ ಸಾವಿರಾರು ಅರ್ಥ
ಮೊದಲರ್ಥ ಮುತ್ತಿನ ಮತ್ತು!
ಉಳಿದೆಲ್ಲಾರ್ಥ ಮತ್ತಿನ ಗಮ್ಮತ್ತು!!

ತಬ್ಬಲಿ
ನಲ್ಲೆ,
ನೀ ನನ್ನ ಮೈ ತಡವಿದರೆ
ನಾ ಹೆಬ್ಬುಲಿ!
ನಲ್ಲೆ,
ನೀ ನನ್ನ ಮೈ ಕೊಡವಿದರೆ
ನಾ ಯಾರ ತಬ್ಬಲಿ!

ಮಿಲನ
ಆಗಸಕ್ಕೆ ತಿಳಿನೀಲಿ
ಕಾಮನಬಿಲ್ಲಿಗೆ ಚಿತ್ತಾರ
ಮಗುವಿಗೆ ನಗುವು
ಗುಲಾಬಿಗೆ ಕೆಂಬಣ್ಣ
ನದಿಗೆ ಹರಿವು
ಪ್ರಕೃತಿಗೆ ಹಸಿರು
ನಮ್ಮ ಮಿಲನ!

         - ಗುಬ್ಬಚ್ಚಿ ಸತೀಶ್.

ಇದು ಭಾರತದ “ಅಮೃತ ಕಾಲ”ವೇ!?

  ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ. ʼಭಾರತ ಬದಲಾಗಿದೆ! ಯಾರದ್ದ...