ಗುರುವಾರ, ನವೆಂಬರ್ 18, 2010

ಮೊದಲ ಪ್ರೇಮ ಪತ್ರ...


ಲಕ್ಷ್ಮಿ...

ನಾ ನಿನ್ನನ್ನು ಡಿಯರ್ ಲಕ್ಷ್ಮಿ... ಎಂದೇ ಸಂಬೋಧಿಸಬಹುದಿತ್ತು. ನನ್ನ ಪ್ರಕಾರ ನೀನು ನನಗೆ ಡಿಯರ್ ಆಗಿದ್ದೀಯಾ ಮತ್ತು ನಾ ನಿನ್ನನ್ನು ಡಿಯರ್ ಎಂದುಕೊಂಡು ಮನದಲ್ಲೇ ಸಂಬೋಧಿಸಿಕೊಂಡದ್ದಾಗಿದೆ. ಆದರೆ, ನಿನಗೆ ನಾ ಇನ್ನೂ ಡಿಯರ್ ಆಗಿಲ್ಲ ಮತ್ತು ನನ್ನ ಪ್ರೀತಿಯ ಬಗ್ಗೆ ನಿನಗಿನ್ನೂ ಅರಿವಿಲ್ಲ ಎಂದುಕೊಂಡಿದ್ದೇನೆ. ಅದಕ್ಕೋಸ್ಕರ ಡಿಯರ್ ಎಂದು ಸಂಬೋದಿಸಿಲ್ಲ. ತಪ್ಪಾಗಿದ್ದರೆ ಕ್ಷಮಿಸು. ನೀ ನನ್ನ ಒಪ್ಪುತ್ತೀಯಾ ಮತ್ತು ಪ್ರೀತಿಸುತ್ತೀಯಾ ಎನ್ನುವ ಭರವಸೆಯಲ್ಲೇ, ನನ್ನ ಪ್ರೀತಿಯನ್ನು ಈ ಪತ್ರದಲ್ಲಿ ನಿವೇದಿಸಿಕೊಂಡಿದ್ದೇನೆ. ದಯಮಾಡಿ ಕೋಪಗೊಳ್ಳದೆ ಪೂರ್ತಿ ಪತ್ರವನ್ನು ಓದಿ, ನಿನ್ನ ನಿರ್ಧಾರವನ್ನು ಆದಷ್ಟು ಬೇಗ ತಿಳಿಸು. ಆ ನಿನ್ನ ನಿರ್ಧಾರವು ನನ್ನ ಪ್ರೀತಿಯನ್ನು ಹುಸಿಗೊಳಿಸುವುದಿಲ್ಲವೆಂದುಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಒಲವಿನ ಓಲೆಯನ್ನು ಹರಿಯದಿರು ಅಥವಾ ಸುಡದಿರು.

ನನ್ನ ಓಲೆ ಓಲೆಯಲ್ಲ

ಮಿಡಿವ ಒಂದು ಹೃದಯ

ಒಡೆಯಬೇಡ ಒಲವಿಲ್ಲದೇ

ನೋಯುತ್ತಿರುವ ಎದೆಯ



ಲಕ್ಷ್ಮಿ, ನಾ ಹುಟ್ಟಿದಾಗ ಬಹುಶಃ ನೀ ಇನ್ನೂ ಜನ್ಮವೆತ್ತಿರಲಿಲ್ಲವೇನೋ? ಅದ್ಯಾಕೋ ನೀ ನನಗಿನ್ನು ಸ್ವಲ್ಪ ಚಿಕ್ಕವಳಿರಬೇಕು ಎಂದೆನಿಸುತ್ತದೆ. ಈಗ ಆ ವಿಷಯವೇಕೆಂದರೇ ನಮ್ಮಿಬ್ಬರ ಹುಟ್ಟಿಗೂ ಮುನ್ನ ಪ್ರೀತಿಯಿತ್ತು! ಹುಟ್ಟಿನಿಂದಲೇ ನಾವು ಪ್ರೀತಿಸಲು ತೊಡಗುತ್ತೇವೆ. ನಮ್ಮನ್ನೂ ಕೆಲವರು ಪ್ರೀತಿಸತೊಡಗುತ್ತಾರೆ. ಹೆತ್ತ ಅಮ್ಮನನ್ನು, ಬೆಳೆಸುವ ಅಪ್ಪನನ್ನು, ಒಡಹುಟ್ಟಿದವರಿದ್ದರೆ ಅವರನ್ನು, ಅಜ್ಜ-ಅಜ್ಜಿಯರನ್ನು, ಸಂಬಂಧಿಗಳನ್ನು, ಗೆಳೆಯ ಗೆಳತಿಯರನ್ನು, ನೆರೆ-ಹೊರೆಯವರನ್ನು ಪ್ರೀತಿಸತೊಡಗುತ್ತೇವೆ. ನಮ್ಮ ಸೃಷ್ಟಿಯು ಪ್ರೀತಿಯ ಹುಡುಕಾಟದಲ್ಲೇ ಇರುತ್ತದೆ. ಈ ರೀತಿ ಹಲವರನ್ನು ಪ್ರಿತಿಸುತ್ತಾ ಬೆಳೆಯತೊಡಗಿದ ನಾವು ತಾರುಣ್ಯಕ್ಕೆ ಕಾಲಿಟ್ಟಾಗ ಪ್ರಕೃತಿ ಸಹಜವಾಗಿ ಅನ್ಯಲಿಂಗದೆಡೆಗೆ ಆಕರ್ಷಿತರಾಗುತ್ತೇವೆ. ಆ ಪ್ರಕ್ರಿಯೆಯಲ್ಲಿ ನಾನು ಮೊದಲು ಆಕರ್ಷಿತನಾಗಿದ್ದು ನಿನ್ನಯ ಕಡೆಗೆ ಕಣೇ ಹುಡುಗಿ. ಇದು ನನ್ನ ಗಾಡ್ ಗಣಪತಿಯ ಮೇಲಾಣೆ. ಅಂದು ಕಾಲೇಜಿನ ಮೊದಲ ದಿನ ನಿನ್ನನ್ನು ನೋಡಿದ ನನ್ನ ಕಣ್ಣುಗಳು, ನಿನ್ನ ನಕ್ಷತ್ರದಂಥಾ ಕಣ್ಣುಗಳಲ್ಲಿ ನನ್ನನ್ನೇ ಹುಡುಕಿಕೊಳ್ಳಲು ಆರಂಭಿಸಿದವು. ಅದಲ್ಲವೇ ಮನಸ್ಸಿನ ತುಡಿತ! ನೀ ಏನಾದರು ನನ್ನನ್ನು ಸೆಳೆಯಲು ಗಾಳ ಹಾಕಿದ್ದೆಯಾ...?

ಕಣ್ಣಿನಾಟ ಕಣ್ಣಿಗುಂಟು

ಗಾಳದಾಟ ಗಾಳಕೆ

ಎಲ್ಲವನ್ನು ಸೋಲಬಹುದು

ನೀನು ಎಸೆದ ಗಾಳಕೆ



ಲಕ್ಷ್ಮಿ, ಆ ಮಧುರ ಕ್ಷಣದಲ್ಲಿ ನನ್ನ ಕಣ್ಣುಗಳಿಂದ ನೇರವಾಗಿ ನನ್ನ ಹೃದಯಕ್ಕೆ ಮೇಸೆಂಜೊಂದು ಪಾಸಾಯಿತು. “love her” ಎಂದು. ಅಬ್ಬಾ! ಅದೆಂಥಾ ಅದ್ಬುತ ಮೇಸೆಜದು! ಅದುವರೆವಿಗೂ “ಲಬ್ ಡಬ್, ಲಬ್ ಡಬ್” ಎನ್ನುತ್ತಿದ್ದ ನನ್ನ ಹೃದಯವು “love her, love her” ಎನ್ನಲು ಶುರುಮಾಡಿತಲ್ಲ! ಹೃದಯವೇ ಅಪ್ಪಣೆ ಕೊಟ್ಟಮೇಲೆ ಯಾವ ದೊರೆಯನ್ನು ಕೇಳಬೇಕು ಹೇಳು? ಅಂದು ನಿನ್ನಲ್ಲಿ, ಆ ಕ್ಷಣದಲ್ಲಿ ಶುರುವಾದ ಪ್ರೀತಿ ಇಂದು, ಈ ಕ್ಷಣದವರೆಗೂ ನಿರಂತರವಾಗಿ ಮುಂದುವರಿಯುತ್ತಿದೆ ಎಂದಮೇಲೆ, ಅದು ನಿನ್ನ ಮೇಲೆ ನನ್ನ ನಿಷ್ಠೆಯನ್ನು ತೋರಿಸುತ್ತದೆ ಅಲ್ಲವಾ?

ಆ ಮಧುರ ಕ್ಷಣಗಳಿಂದ ಇಡಿದು ಇದುವರೆವಿಗೂ ಬರೆಯುತ್ತಾ ಹೋದರೆ ಅದೇ ಒಂದು “ಡಿಯರ್ ಲಕ್ಷ್ಮಿ...” ಎನ್ನುವ ಕಾದಂಬರಿಯಾಗುತ್ತದೆ ಕಣೇ ಲಕ್ಷ್ಮಿ. ಅದೆಲ್ಲಾ ಈಗ ಬೇಡ ಬಿಡು. ಹೇಗಿದ್ದರೂ ನಮ್ಮ ಪ್ರೀತಿ ಶುರುವಾದ ಮೇಲೆ ಅದನ್ನೆಲ್ಲಾ ಹಂಚಿಕೊಳ್ಳಲು ಸಾಕಷ್ಟು ಸಮಯವಿದೆ. ನೋಡು, ಆ ಸಮಯವನ್ನು ಕಲ್ಪಿಸಿಕೊಂಡರೆ ರೋಮಾಂಚನವಾಗುತ್ತಿದೆ, ಮೈ ನವಿರೇಳುತ್ತಿದೆ. ನೋಡಿದ್ಯಾ ನಿನ್ನ ಪ್ರೀತಿಯಲ್ಲಿ ನನ್ನ ಕನವರಿಕೆಯಾ!

ಲಕ್ಷ್ಮಿ...ಅಷ್ಟಕ್ಕೂ ನಾ ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಮತ್ತು ನೀ ನನ್ನನ್ನು ಏಕೆ ಪ್ರೀತಿಸಬೇಕು ಎಂದರೆ ಇತ್ತೀಚಿನ ಓಂದು ಘಟನೆಯನ್ನು ಬರೆದಿದ್ದೇನೆ ಓದಿ ಬಿಡು: ನನ್ನ ಮನಸ್ಸಿನಲ್ಲಿ ಈ ದೀಪಾವಳಿಯ ರಜಾ ದಿನಗಳಲ್ಲಿ ನಿನಗೊಂದು ಪ್ರೇಮ ಪತ್ರವನ್ನು ಬರೆದು ಬಿಡಬೇಕೆಂದು ನಿರ್ಧರಿಸಿದ್ದೆ. ನಿನ್ನ ನೋಡಿದ ಮೇಲೆ ಎಂಥಾ ಅದೃಷ್ಟ ನೋಡು. ಈ ಬಾರಿ ದೀಪಾವಳಿಗೆ ಮೂರು ದಿನಗಳ ರಜೆ! ಸಾಮಾನ್ಯವಾಗಿ ಬ್ಯಾಂಕುಗಳಿಗೆ ಸತತವಾಗಿ ಮೂರು ದಿನಗಳ ರಜೆ ಇರುವುದಿಲ್ಲವಂತೆ. ನಿನ್ನ ಅದೃಷ್ಟದಿಂದ ಬ್ಯಾಂಕಿನವರೆಲ್ಲರಿಗೂ ಅದ್ದೂರಿಯ ದೀಪಾವಳಿ! ನನಗಂತೂ ಅದೃಷ್ಟವೋ ಅದೃಷ್ಟ. ನಿನಗೆ ಪತ್ರ ಬರೆಯಲು ಮೂರು ದಿನಗಳು ಸಿಕ್ಕವಲ್ಲ ಎಂದು. ಶುಕ್ರವಾರದ ಬೆಳಿಗ್ಗೆಯೇ ಬೇಗ ರೆಡಿಯಾಗಿ ರೂಮಿನ ಕದವಿಕ್ಕಿ ಕುಳಿತೆ. ಸಾಮಾನ್ಯವಾಗಿ ಹಬ್ಬಗಳಲ್ಲಿ ಕವನಗಳನ್ನು ಬರೆಯಲು ತೊಡಗುವ ಮನಸ್ಸು ಮೊದಲಬಾರಿಗೆ ಪ್ರೇಮ ಪತ್ರವನ್ನು ಬರೆಯಲು ಹಾತೊರೆಯುತ್ತಿತ್ತು. ಆದರೆ, ಕೈ ನಡುಗುತ್ತಿತ್ತು. ಹೇಗೆ ಆರಂಭಿಸುವುದು...? ಏನು ಬರೆಯುವುದು...? ಹೇಗೆ ಒಪ್ಪಿಸಿಕೊಳ್ಳಲಿ ನನ್ನ ಹೃದಯವನ್ನು...? ಏನಂಥಾ ನಿವೇದಿಸಿಕೊಳ್ಳಲಿ ನನ್ನ ಪ್ರೀತಿಯನ್ನು...? ಬರೀ ಪ್ರಶ್ನೆಗಳು... ಪಿಂಕ್ ಬಣ್ಣದ ಹಾಳೆಯ ಮೇಲೆ ಪೆನ್ನು ಮುತ್ತಿಕ್ಕುತಾನೆ ಇಲ್ಲ! ಕ್ಷಣಗಳು ಗಂಟೆಗಳಾಗಿ, ಗಂಟೆಗಳು ಯುಗಗಳಾಗಿ, ಅವಧಿ ಮೀರಿತೇನೋ ಎನ್ನುವಂತೆ ಸೆಖೆಯಾಗತೊಡಗಿತು. ಇನ್ನು ಹೆಚ್ಚು ಹೊತ್ತು ಕೂಡುವುದಾಗುವುದಿಲ್ಲ ಎಂದು ಕೊಳ್ಳುವಾಗಲೇ, ಯಾರೋ ನನ್ನನ್ನು ಕೇಳಿಕೊಂಡು ಬಂದಂತಾಯಿತು. ಅಬ್ಬಾ ಬದುಕಿದೇ ಬಡ ಜೀವವೇ!

ಸಾಕಪ್ಪ ಸಾಕು ಎಂದು ಕೊಂಡು ಎದ್ದು ಆಚೆ ಬಂದು ನೋಡಿದರೆ ಶಶಿ. ಶಶಿಕುಮಾರ್! “ಇದೇನಪ್ಪಾ ಆಶ್ಚರ್ಯ?” ಎಂದೆ. “ಏನಪ್ಪಾ ಆಯ್ತ ಹಬ್ಬ?” ಎಂದವನೇ ನನ್ನ ಉತ್ತರಕ್ಕೂ ಕಾಯದೆ “ಸಿದ್ದಗಂಗೆಗೆ ಬರ್ತೀಯಾ?” ಅಂದ. “ಸರಿ ಬರ್ತೀನಿ” ಅಂದವನೇ ಸ್ವಲ್ಪ ರಿಲ್ಯಾಕ್ಸ್ ಆದರೆ ಏನಾದರೂ ಐಡಿಯಾ ಬರಬಹುದೆಂದು ಅವನ ಜೊತೆ ಹೊರಟೆ.

ಬೈಕು ಸಿದ್ದಗಂಗೆಯ ಕಡೆ ಹೋಗುತ್ತಿದ್ದರೆ, ಹಿಂದೆ ಆರಾಮಾವಾಗಿ ನಿನ್ನ ಧ್ಯಾನದಲ್ಲಿ ಕುಳಿತಿದ್ದವನ ಮನಸ್ಸಿನಲ್ಲಿ ಭಯಮಿಶ್ರಿತ ಯೋಚನೆಗಳು. ದಾರಿಯಲ್ಲಿ ಎತ್ತ ನೋಡಿದರೂ ನೀನೇ ಕಾಣಿಸುತ್ತಿದೆ. ಕಣ್ಮುಚ್ಚಿದರೆ ಕಣ್ಣುಗಳೊಳಗೂ ನೀನೆ! ಸಿದ್ದಗಂಗೆಯಲ್ಲಿ ಶಶಿಗೆ ಈ ವಿಷಯವಾಗಿ ಹೇಳಿಬಿಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುವಾಗಲೇ, ಬೇಡ ನಿನ್ನ ಪ್ರೀತಿಯನ್ನು ನಿನ್ನ ಪ್ರೀತಿಯ ಲಕ್ಷ್ಮಿಗೇ ಮೊದಲು ತಿಳಿಸು ಎಂದು ನನ್ನ ಮನಸ್ಸು ಪಿಸುಗುಟ್ಟಿತು. ಅದೇ ಸರಿ ಎಂದುಕೊಂಡು ಪ್ರೇಮಪತ್ರದಲ್ಲಿ ಏನು ಬರೆಯುವುದೆಂದು ಚಿಂತಿಸುತ್ತಿರುವಾಗಲೇ ಸಿದ್ದಗಂಗೆ ಬಂದಿತು.

ಬಹಳ ಉತ್ಸಾಹದಲ್ಲಿ ಬೆಟ್ಟವನ್ನು ಹತ್ತಿ ಸಿದ್ದಗಂಗೆಯ ಶ್ರೀ ಸಿದ್ದಲಿಂಗೇಶ್ವರನ ದರ್ಶನ ಪಡೆದು, ಆಶೀರ್ವಾದ ಕೋರಿ, ಪವಿತ್ರ ಗಂಗಾಜಲವನ್ನು ಪ್ರೋಕ್ಷಿಸಿಕೊಂಡು ನಂತರ ಸಿದ್ದಗಂಗೆ ಶ್ರೀಗಳಿಗೆ ವಂದಿಸಿ, ಅಲ್ಲಿನ ಪ್ರಸಾದ ತೆಗೆದುಕೊಂಡು ಬರುವಷ್ಟರಲ್ಲಿ ಸಂಜೆಯಾಗತೊಡಗಿತ್ತು. ಹಾಗೇ ವಿವಹರಿಸುತ್ತಾ ಅಲ್ಲಿದ್ದ ಪಾರ್ಕಿನ ಬಳಿ ಬಂದೆವು. ಅಲ್ಲಿದ್ದ ಕೊಳದಲ್ಲಿ ಬಾತುಕೋಳಿಗಳು ಸ್ವಚ್ಚಂದವಾಗಿ ಈಜುತ್ತಿದ್ದವು.

ನನ್ನವಳು ಈ ನನ್ನಾಕೆ

ಹರಿಯುವ ನದಿಯಲ್ಲ

ಸರಿವ ಸರಿತೆಯಲ್ಲ

ಈವಳೊಂದು ಪುಟ್ಟಕೋಳ

ನನ್ನ ಬಾಳಿನ ಜೀವಜಲ

(ಬಿ.ಆರ್.ಲಕ್ಷಣರಾವ್)

ಅದೇ ಲಹರಿಯಲ್ಲಿ ಮನಸ್ಸಿಲ್ಲದ ಮನಸ್ಸಿನಲ್ಲಿ ಮುಂದುವರೆದಾಗ ದೂರದಲ್ಲಿ ಬಂಗಾರದಂಥಾ ಜಿಂಕೆಗಳು ಹುಲ್ಲು ಮೇಯುತ್ತಾ ವಿವಹರಿಸುತ್ತಿದ್ದವು. ಜೊತೆಗಿದ್ದ ಶಶಿಯನ್ನು ಹಿಂದೆ ಬಿಟ್ಟು ನಿಧಾನವಾಗಿ ಒಂದು ಜಿಂಕೆಯ ಬಳಿ ಹೋದೆ. ನಿಶ್ಯಬ್ಧವಾಗಿ ನಿಂತುಕೊಂಡು ಅದನ್ನೇ ನೋಡುತ್ತಾ ನಿಂತೆ. ಆಹಾ! ಜಿಂಕೆ ಅದೆಷ್ಟು ಸುಂದರವಾಗಿದೆ ಎಂದುಕೊಳ್ಳುವಾಗಲೇ mAಮಾನವನ ಆಗಮನವನ್ನು ಅರಿತ ಆ ಜಿಂಕೆಯು ಗಾಬರಿಯಾಗಿ ತಲೆಯೆತ್ತಿ ನನ್ನನ್ನು ನೋಡಲು ತೊಡಗಿತು. ಮಿಂಚಿನಂಥಾ ಕಣ್ಣುಗಳು! ಆ ಕ್ಷಣಗಳಲ್ಲಿ ತಕ್ಷಣ ಮಿಂಚಿದ್ದು ನೀನೇ ಕಣೇ ಹುಡುಗಿ. ಆ ಜಿಂಕೆಯ ಕಣ್ಣುಗಳಲ್ಲೂ ನಿನ್ನ ಪ್ರತಿಫಲನ! ಆ ಪ್ರತಿಫಲನದಲ್ಲಿ ನೀನೇ ನನ್ನನ್ನು ನೋಡಿದಂತಾಯಿತು! ಇದನ್ನು ಪ್ರೀತಿಯೆನ್ನದೆ ಇನ್ನೇನು ಎನ್ನಲಿ ಹೇಳು?”

ಈ ಸಂದರ್ಭವೊಂದೆ ಸಾಕಲ್ಲವೆನೇ ಲಕ್ಷ್ಮಿ ನಿನ್ನನ್ನು ನಾನು ಎಷ್ಟೊಂದು ಪ್ರೀತಿಸುತ್ತೇನೆ ಎಂದು ಹೇಳಲು? ಅಗುಳೊಂದೇ ಸಾಕಲ್ಲವೇ ಅನ್ನ ಬೆಂದಿರುವುದನ್ನು ಅರಿಯಲು!

ಮರಳಿ ಮನೆಗೆ ಬಂದು ಶಶಿಯನ್ನು ಬೀಳ್ಕೊಡುವ ಹೊತ್ತಿಗೆ ರಾತ್ರಿಯಾಗಿತ್ತು. ಎಲ್ಲೆಲ್ಲೂ ಪ್ರಣತಿಗಳು ಬೆಳಗುತ್ತಿದ್ದವು. ನಿನ್ನ ನೋಡಿದ ಮಧುರಕ್ಷಣವೇ ನನ್ನ ಎದೆಯ ಪ್ರಣತಿ ಬೆಳಗತೊಡಗಿತು ಎಂದೆನಿಸುತ್ತದೆ. ಸೋಂಬೇರಿಯಾಗಿದ್ದವನು ಅದೆಷ್ಟು ಚುರುಕಾಗಿದ್ದೇನೆ ನೋಡು.

ಇನಿತು ದಿನ ಜಡ ನಾನು

ಬಂದೆ ಚೇತನ ನೀನು

ನಿನ್ನ ಶಕ್ತಿಯ ಬಲದಿ

ವ್ಯಕ್ತಿಯಾದೆನು ನಾನು

ಈ ಲೋಕದಲ್ಲಿ

(ಜಿಎಸ್ಎೆಸ್)

ಲಕ್ಷ್ಮಿ, ದೀಪಾವಳಿಯ ಸಂಜೆಯ ಪೂಜೆ ಮುಗಿಸಿ ಮತ್ತೆ ಕದವಿಕ್ಕಿ ಇಷ್ಟೆಲ್ಲಾ ಬರೆದೆ ನೋಡು. ನನಗನ್ನಿಸಿದೆಲ್ಲವನ್ನೂ ಈ ಪುಟ್ಟ ಪತ್ರದಲ್ಲಿ ಬರೆಯಲು ಆಗುತ್ತಿಲ್ಲದ್ದಕ್ಕೆ ವಿಷಾದಿಸುತ್ತೇನೆ. ಈ ಪತ್ರವನ್ನು ಓದಿ ಮುಗಿಸಿದ ಕ್ಷಣದಲ್ಲೇ ನನ್ನಲ್ಲಿ ನಿನಗೆ ಪ್ರೀತಿ ಮೂಡುವುದೆಂಬ ಹಿಮಾಲಯದಷ್ಟು ಭರವಸೆಯೊಂದಿಗೆ ಮುಗಿಸುತ್ತಿದ್ದೇನೆ. ಆದಷ್ಟು ಬೇಗ ನಿನ್ನ ಉತ್ತರವನ್ನು ಸಕಾರಾತ್ಮಕವಾಗಿ ತಿಳಿಸು. ನಿರಾಶೆಮಾಡಬೇಡ. ಮುಂದಿನ ದೀಪಾವಳಿಯಲ್ಲಿ ನಿನ್ನ ಜೊತೆ ಜೊತೆಯಲ್ಲಿ ಸುರುಸುರು ಬತ್ತಿ ಹಚ್ಚುವಂತಾಗಲಿ. ನೀ ಬೆಳಗುವ ಪ್ರಣತಿಗಳು ಜಗಜಗಿಸಲಿ. ಹೂ ಕುಂಡ ಅರಳಲಿ. ಭೂಚಕ್ರ ನೀನಿಡುವ ರಂಗವಲ್ಲಿಯ ಮೇಲೆ ತಿರುಗಲಿ. ಪಟಾಕಿ...? ಹೆದರಬೇಡ ಪಟಾಕಿ ಹೊಡೆಯಲ್ಲ. ಪಟಾಕಿ ಬಗ್ಗೆ ನಿನಗಿಂತ ನನಗೇ ಭಯ ಜಾಸ್ತಿ ಇದೆ. So, ನಮ್ಮ ಮುಂದಿನ ದೀಪಾವಳಿ ರಂಗೇರಲಿ.

ಪುಟದ ತುಂಬ ನಿನ್ನ ಹೆಸರು

ಮತ್ತೆ ಮತ್ತೆ ಬರೆಯುತ

ಒಪ್ಪಿಸಿರುವೆ ನನ್ನ ಮನವ

ಅಶ್ರುಧಾರೆ ಎರೆಯುತಾ

...

ಒಪ್ಪಿಸಿಕೋ ಬೊಗಸೆಯೊಡ್ಡಿ

ಮಿಡಿವ ಹೃದಯ ನಿನ್ನದೇ

ಕದವ ಮುಚ್ಚಿ ಹಿಂದೆ ನಿಂತು

ಮುಂದೆ ಹೋಗು ಎನ್ನದೆ.

ನನ್ನ ಓಲೆ ಓಲೆಯಲ್ಲ...

ದೀಪಾವಳಿಯ ಶುಭಾಷಯಗಳೊಂದಿಗೆ...

ಗುಬ್ಬಚ್ಚಿ ಹುಡುಗ.

ಬುಧವಾರ, ನವೆಂಬರ್ 3, 2010

ನಿನ್ನದೇ ಧ್ಯಾನದಲ್ಲಿ... ಪರೀಕ್ಷೆ ಕನವರಿಸುತ್ತಾ...

(ನಿನ್ನ ಮನೆಯ, ನನ್ನ ಮನದ ಲಕ್ಷ್ಮಿಯು ನೀನು... (ಮುಂದುವರಿದದ್ದು)

ಅಂದು ರೈಲು ಮುಂದೆ ಮುಂದೆ ಹೋಗಿ ಬಹಳ ಹೊತ್ತಾದರೂ, ನಾನು ನಿಂತಲ್ಲೇ ನಿಂತಿದ್ದೇ ಕಣೇ ಹುಡುಗಿ. ನಿನ್ನ ದರ್ಶನವಾದ ಕ್ಷಣಗಳು ಮತ್ತೆ ಮರುಕಳಿಸಲಿ ಎನ್ನುವ ಹಾರೈಕೆ ಮನದಲ್ಲಿ. ನಿನ್ನನ್ನು ನೋಡಿದಕ್ಕೆ ಒಳಗೊಳಗೇ ತುಂಬಾ ಖುಷಿ. ಯಾರಾದರೂ ನೋಡಿದರೂ ಪರವಾಗಿಲ್ಲ, ತಿಕ್ಕಲ ಎಂದುಕೊಂಡರೂ ಸರಿಯೇ ಎಂದು, ಒಮ್ಮೆ ನನ್ನ ಬಲಗೈಯ ಮುಷ್ಟಿಯನ್ನಿಡಿದು ಮೇಲಕ್ಕೆತ್ತಿ, ಹಿಂದಕ್ಕೆ ಎಳೆಯುತ್ತಾ “yeh! yeh! I got it” ಎಂದು ಉದ್ಗರಿಸಿದೆ.

ಒಲಿವೆನೇಕೆ? ನಲಿವೆನೇಕೆ?

ನಿನ್ನನಂದು ಕಂಡೆನೇಕೆ?

ನನ್ನ ಕೈಯ ಹಿಡಿವೆಯೇಕೆ?

ಇಚ್ಚೆಲಭಿಸಿತೆಂದೆನೇಕೆ?

ಹುಚ್ಚನಂತೆ ಕುಣಿವೆನೇಕೆ?

(ತೀನಂಶ್ರೀ)

ನನ್ನ ಖುಷಿಯನ್ನು ನೋಡಿ ನನಗೇ ನಾಚಿಕೆಯಾಯಿತು. ಮತ್ತೊಮ್ಮೆ ರೈಲು ಹೋದ ಕಡೆ ನೋಡಿ, ನಿನ್ನನ್ನು ಹೇಗಾದರೂ ಮಾಡಿ ಒಲೈಸಬೇಕೆಂಬ ಧೃಡವಾದ ನಿಶ್ಚಯದೊಂದಿಗೆ ಮನೆಯ ಕಡೆಗೆ ಹೆಜ್ಜೆ ಹಾಕಿದೆ.

ಮನೆ ಹೊಕ್ಕವನೇ ಜರ್ಕಿನ್ ಕಿತ್ತೊಗೆದು, ಸೀದಾ ಬಚ್ಚಲು ಮನೆಗೆ ಹೋದೆ. ಹಂಡೆಯಲ್ಲಿ ನೀರು ಹಬೆಯಾಡುತಿತ್ತು. ದಿನಾಲು ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡುತಿದ್ದವನು, ಅವತ್ತು ಅದ್ಯಾವ ದೆವ್ವ ನನ್ನಲ್ಲಿ ಹೊಕ್ಕಿತ್ತೋ ಕಾಣೆ, ಬಟ್ಟೆ ಬಿಚ್ಚಿದವನೇ ಸುಡುವ ನೀರನ್ನೇ ಭರಭರನೆ ಸುರಿದುಕೊಂಡೆ. ಜನ್ಮಕ್ಕಂಟಿದ ಸೋಂಬೇರಿಯೆಂಬ ಶಾಪ ವಿಮುಕ್ತಿಯಾಗಲಿ ಎಂದಿರಬೇಕು. ತುಂಬಿದ್ದ ಹಂಡೆ ಖಾಲಿಯಾಯಿತು. ಮೈ ಒರೆಸಿಕೊಂಡು, ಟವೆಲ್ ಸುತ್ತಿಕೊಂಡು ದೇವರ ಮನೆಗೆ ಹೋದೆ. ಅದಾಗಲೇ ಮನೆಯಲ್ಲಿ ವರಮಹಾಲಕ್ಷ್ಮೀಯ ಪೂಜೆ ಸರಳವಾಗಿ ಮುಗಿದಿತ್ತು. ಕ್ಷಣಕಾಲ, ಕೊಟ್ಟ ವರಕ್ಕೆ ವರಮಹಾಲಕ್ಷ್ಮೀಗೆ ವಂದಿಸಿ, ನನ್ನ ಫೇವರೇಟ್ ಗಾಡ್ ಗಣಪತಿಯ ಆಶೀರ್ವಾದ ಪಡೆದು, ಆಚೆ ಬಂದು, ಅಮ್ಮ ಕೊಟ್ಟ ಶಾವಿಗೆ ಪಾಯಸ ಕುಡಿದು, ತಿಂಡಿ ತಿಂದು, ಹೆಚ್ಚು ಮಾತನಾಡದೇ ನನ್ನ ರೂಂ ಹೊಕ್ಕೆ.

ಅಂದಿನ ನ್ಯೂಸ್ ಪೇಪರ್ ರೂಮಿನಲ್ಲೇ ಇತ್ತು. ಮತ್ತೆ ಬಿಡಿಸಿ ಹುಡುಕಲು ಶುರುಮಾಡಿದೆ. ಈ ಬಾರಿ ನ್ಯೂಸ್‍ಗಾಗಿ ಅಲ್ಲ, ಕೆಲಸಕ್ಕಾಗಿ. ಕೆಲಸದ ಜಾಹೀರಾತಿಗಾಗಿ. ಮನಸ್ಸು ತುಂಬಾ ಒತ್ತಡದಲ್ಲಿತ್ತು. ಅಂತೂ ಇಂತೂ ಒಂದು ಜಾಹೀರಾತು ಕಣ್ಣಿಗೆ ಬಿತ್ತು. ತುಮಕೂರಿನ “ಬುದ್ದ ಕೋ ಆಪರೇಟಿವ್ ಬ್ಯಾಂಕ್‍” ನಲ್ಲಿ ಗುಮಾಸ್ತರ ಐದು ಹುದ್ದೆಗಳಿಗೆ ಅರ್ಜಿ ಕರೆದಿದ್ದರು. ವಿದ್ಯಾಭ್ಯಾಸ ಬಿ.ಕಾಂ. ಎಂದಿತ್ತು. ಅರ್ಜಿ ಸಲ್ಲಿಸಲು ಒಂದು ವಾರ ಸಮಯವಿತ್ತು. ಲಿಖಿತ ಪರೀಕ್ಷೆ ಅಕ್ಟೋಬರ್ 31 ರಂದು ನಡೆಯಲಿದೆ ಎಂಬ ಮಾಹಿತಿಯೂ ಇತ್ತು. ಇಷ್ಟು ಸಾಕಿತ್ತಲ್ಲವೇ ಒಂದು ಕೆಲಸಕ್ಕಾಗಿ ತುಡಿಯುತ್ತಿದ್ದ ನನ್ನ ಜೀವಕ್ಕೆ. ಎದ್ದವನೇ ನನ್ನ ಮಾರ್ಕ್ಸ ಕಾರ್ಡ್ ಗಳನ್ನೆಲ್ಲಾ ತೆಗೆದುಕೊಂಡು, ಬಯೋಡೇಟಾ ಮತ್ತು ಅರ್ಜಿಯನ್ನು ಟೈಪ್ ಮಾಡಿಸಲು ಡಿ.ಟಿ.ಪಿ. ಸೆಂಟರ್ ಹುಡುಕುತ್ತಾ ಹೊರಟೆ. ನೋಡು, ಅಂದಿನವರೆಗೂ ನನ್ನದೊಂದು ಬಯೋಡೇಟಾವು ಇರಲಿಲ್ಲ!

ಅಂದು ಹಬ್ಬವಾದರೂ ಬ್ಯಾಂಕುಗಳಿಗೆ ರಜವಿರಲಿಲ್ಲ. ಅರ್ಜಿಯನ್ನು ಕೊಡಲು ಹೋದರೆ, ಅಲ್ಲಿದ್ದವರಿಗೆಲ್ಲಾ ಆಶ್ಚರ್ಯ? ಅಂದಿನ ಜಾಹೀರಾತಿಗೆ, ಅಂದೇ ಅರ್ಜಿ ಕೊಟ್ಟವನು ನಾನು ಮತ್ತು ನನ್ನದೇ ಮೊದಲ ಅರ್ಜಿ. ಅವರಿಗೆ ಆಶ್ಚರ್ಯವಿರಬಹುದು? ಅವರಿಗೇನು ಗೊತ್ತು ನನ್ನಯ ತುಡಿತ. ಅರ್ಜಿ ಕೊಟ್ಟವನೇ, ಅಲ್ಲೇ ಹತ್ತಿರದಲ್ಲಿದ್ದ ಪುಸ್ತಕದ ಅಂಗಡಿಗೆ ಹೋಗಿ ಬ್ಯಾಂಕ್ ಕ್ಲರಿಕಲ್ ಎಕ್ಸಾಮುಗಳಿಗೆ ಸಂಬಂಧಪಟ್ಟ ಪುಸ್ತಕಗಳ ಬಗ್ಗೆ ವಿಚಾರಿಸಿ, ಎರಡು ಪುಸ್ತಕಗಳನ್ನು ಕೊಂಡು, ಮನೆಗೆ ಹಿಂದಿರುಗಿ ರೂಂ ಸೇರಿಕೊಂಡವನು ಪುಃಖಾನುಪುಃಖವಾಗಿ ಓದಲು ಶುರುಮಾಡಿದೆ. ಹಗಲು-ರಾತ್ರಿಗಳ ಪರಿವೆಯೇ ಇರಲಿಲ್ಲ!

ಈ ನಡುವೆ ಬ್ಯಾಂಕಿನ ಎಕ್ಸಾಮಿಗೆ ಕರೆಯೂ ಬಂತು. ಪ್ರಕಟಣೆಯಂತೆ ಅಕ್ಟೋಬರ್ 31ರಂದೇ ಎಕ್ಸಾಮ್. ಯಾವುದೇ ಕಾರಣಕ್ಕೂ ಸೋಲುವ ಭಯ ಈ ಬಾರಿ ಇರಲಿಲ್ಲ. ನಿನ್ನ ಮೇಲಿನ ಪ್ರೀತಿ ಆ ಆತ್ಮಸ್ಥೇರ್ಯವನ್ನು ನನಗೊದಗಿಸಿತ್ತು. ಇಷ್ಟು ಕಾನ್ಫಿಡೆನ್ಸಿಂದ ನಾನ್ಯಾವ ಪರೀಕ್ಷೆಯನ್ನೂ ಎದುರಿಸಿರಲಿಲ್ಲ. ಸುಮಾರು ನೂರೈವತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರು. ಕೇವಲ ಐವರಿಗೆ ಮಾತ್ರ ಕೆಲಸ! ಆದರೇನಂತೆ? ಖಂಡಿತಾ ನನಗೆ ಕೆಲಸ ಸಿಗುವುದೆಂಬ ಭರವಸೆಯಿತ್ತು. ಪರೀಕ್ಷೆ ಮುಗಿಯುವ ವೇಳೆಗೆ ನವೆಂಬರ್ ಎರಡನೇ ತಾರೀಖಿನಂದೇ ರಿಸಲ್ಟ್ ನೀಡಲಾಗುವುದು, ಹೆಚ್ಚು ಮಾರ್ಕ್ಸ್ ಪಡೆಯುವ ಇಪ್ಪತ್ತು ಅಭ್ಯರ್ಥಿಗಳಿಗೆ ಇಂಟರ್ವ್ಯೂ ಗೆ ಕರೆ ನೀಡಲಾಗುವುದು ಎಂದು ಹೇಳಿದರು. ನಾನಂತೂ ಉತ್ತರಪತ್ರಿಕೆಯನ್ನು ಕೊಟ್ಟವನೇ ಮನೆಗೆ ಹಿಂದಿರುಗಿ ಇಂಟರ್ವ್ಯೂಗೆ ಸಿದ್ದನಾಗಲಾರಂಭಿಸಿದೆ.

ನವೆಂಬರ್ 1 ಬಂತು. ಕನ್ನಡಮ್ಮನ ಹಬ್ಬ. ಪರೀಕ್ಷೆಗೆ ಓದುವ ಬಿಸಿಯಲ್ಲಿ ಈ ಬಾರಿಯ ಗಣಪತಿಯ ಹಬ್ಬವನ್ನು ಸರಿಯಾಗಿ ಮಾಡಿರಲಿಲ್ಲ. ನನಗಾಗಿ ನೀನು ಬಾಗಿನ ಕೊಡಲು ನನ್ನ ಮನೆಗೆ ಬರುವವರೆಗೆ ಗೌರಿಗಣಪನ ಹಬ್ಬಕ್ಕೆ ಕಳೆಯಿರುವುದಿಲ್ಲ ಬಿಡು! ಆದರೆ, ಕನ್ನಡಮ್ಮನ ಹಬ್ಬವನ್ನು ಮರೆಯಲಾದಿತೇ? ಕನ್ನಡ ಭಾಷೆ ಹಸಿರು ವರ್ಣದ ಹಕ್ಕಿ, ಅದಕ್ಯಾಕೆ ಬೇರೆ ಬಣ್ಣದ ಚಿಂತೆ ಎಂಬ ನಿಲುವು ನನ್ನದು. ಪರೀಕ್ಷೆಯನ್ನು ಚೆನ್ನಾಗಿ ಬರೆದಿದುದರಿಂದ ಧಾವಂತವಿರಲಿಲ್ಲ. ಮನಸ್ಸು ನಿರುಮ್ಮಳವಾಗಿತ್ತು. ನೀನು ಕನ್ನಡಮ್ಮನ ಅಪರಾವತಾರವೆಂದು ನನಗೆ ಗೊತ್ತು. ನಿನ್ನನ್ನೇ ಕನವರಿಸುತ್ತಾ,

“ಕನ್ನಡದ ಹುಡುಗಿಯನ್ನೇ ಪ್ರೀತಿಸಿ,

ನಿಮ್ಮ ಪ್ರೀತಿ ನಿಜವೇ ಆಗಿದ್ದರೇ?

ಅವಳನ್ನೇ ಮದುವೆಯಾಗಿ”

ಎಂಬ ಚುಟುಕ ಬರೆದೆ. ನಾನೇನೋ ನಿನ್ನನ್ನ ಮದುವೆಯಾಗಲು ರೆಡಿ. ನೀನು...? ಎಂಬ ಪ್ರಶ್ನೆ ಅದೇಕೋ ಆ ಕ್ಷಣ ಕಾಡಿತು. ನನ್ನ ಕನಸು ನನಸಾಗದೇ...? ಎಂದು ಚಿಂತಿಸುತ್ತಾ ನಿದ್ರೆಗೆ ಜಾರಿದೆ.

“ಕಳೆ ಎಷ್ಟೆ ಇದ್ದರೇನು? ಕನಸಿರದ ಬಾಳು, ಬಾಳೆ?

ಮಳೆಬಿಲ್ಲು ಸಿಂಗರಿಸದ ಕರಿ ಮುಗಿಲಿನೊಂದು ಮಾಲೆ!”

(ನಾದವಿರದ ಬದುಕು, ನಿತ್ಯೋತ್ಸವ, ನಿಸಾರ್ ಅಹಮದ್)

ನಿದ್ರೆಯಲ್ಲಿ ಅಂದು ಮತ್ತೆ ಓದಿದ “ನಿತ್ಯೋತ್ಸವ” ಕವನ ಸಂಕಲನದ ಕನವರಿಕೆ.

ಬೆಳಿಗ್ಗೆ 10.30 ಕ್ಕೆ ರಿಸಲ್ಟ್^ಗಾಗಿ ಬ್ಯಾಂಕಿನ ಕರೆಯ ನೀರಿಕ್ಷೆಯಲ್ಲಿ ಚಡಪಡಿಸುತ್ತಿದ್ದೆ. ಸುಮಾರು 11ರ ಹೊತ್ತಿಗೆ ನನ್ನ ಮೊಬೈಲ್ ರಿಂಗಣಿಸತೊಡಗಿತು. ರಿಸೀವ್ ಮಾಡಿದಾಗ, “ಹಲೋ ಸಾರ್! ನಾನು ಶಾಂತಲ ಅಂತ, ಬುದ್ದ ಕೋ ಆಪರೇಟಿವ್ ಬ್ಯಾಂಕಿನಿಂದ ಮಾತಾಡ್ತ ಇದೀನಿ” ಎಂಬ ಧ್ವನಿಯೊಂದು ನನ್ನಷ್ಟೇ ಅವಸರದಲ್ಲಿತ್ತು. “ಹಲೋ ನಮಸ್ಕಾರ ಹೇಳಿ ಮೇಡಂ” ಎಂದೆ. ’ಸಾರ್, ಇಂದು ಮಧ್ಯಾಹ್ನ 3 ಗಂಟೆಗೆ ಇಂಟರ್‍ವ್ಯೂ ಇದೆ. ನೀವು ನಿಮ್ಮ ಒರಿಜಿನಲ್ಸ್ ತಗೋಂಡು ಬರ್ಬೇಕು ಸಾರ್” ಎಂದರು. “ಓಕೆ ಮೇಡಂ. ಥ್ಯಾಂಕ್ಯೂ” ಎಂದೆ. “ಓಕೆ ಸಾರ್. ಯೂ ಆರ್ ಮೋಸ್ಟ್ ವೆಲ್ಕಮ್” ಎಂದು ಪೋನಿಟ್ಟರು. ಆ ಕ್ಷಣ ಆಗಸ ಕೈಗೆಟುಕಿದಂತಾಯಿತು.

“ಅಬ್ಬಾ!” ಅದೆಂಥಾ ಕಾನ್ಫೀಡೆನ್ಸೇ ಹುಡುಗಿ ನಿನ್ನ ಪ್ರೀತಿಯಲ್ಲಿ. ನಾ ನಿನ್ನ ಪ್ರೀತಿಸುತ್ತೇನೆಂಬ ವಿಷಯ ಇಷ್ಟೊಂದು ಕಾನ್ಫೀಡೆನ್ಸ್ ಕೊಟ್ಟಿರುವಾಗ, ನೀ ನನ್ನ ಪ್ರೀತಿಸಿದರೆ ಅದು ನೂರ್ಮಡಿಯಾಗಲಿದೆ ಕಣೇ ಹುಡುಗಿ. ನನ್ನ ಉತ್ತರಗಳಿಗೆ ಬ್ಯಾಂಕಿನ ಬೋಡಿನವರು ಅದೆಷ್ಟು ಇಂಪ್ರೆಸ್ ಆದರೇಂದರೆ, ಎಲ್ಲರ ಮುಖದಲ್ಲೂ, ಇಂಥಾ ಹುಡುಗರಿರುತ್ತಾರಾ? ಎಂಬ ಪ್ರಶ್ನೆಯ ಜೊತೆಗೆ ಆಶ್ಚರ್ಯ ಸೂಚಕ! “ನಾಳೆಯಿಂದಲೇ ಕೆಲಸಕ್ಕೆ ಬನ್ನಿ. ಸ್ವಲ್ಪ ಹೊತ್ತು ಹೊರಗೆ ಕಾದಿದ್ದರೆ, ಅಪಾಯಿಂಟ್‍ಮೆಂಟ್ ಲೆಟರ್ ಕೊಡುತ್ತಾರೆ” ಎಂದು ಬೀಳ್ಕೋಟ್ಟರು. ಎಲ್ಲರಿಗೂ ವಂದಿಸಿ ಹೊರಗೆ ಬಂದು ಕುಳಿತೆ.

ಸ್ವಲ್ಪ ಹೊತ್ತಿಗೆ ಇಂಟರ್ವ್ಯೂ ಮುಗಿದು, ಕಡೆಗೆ ಅಲ್ಲಿ ಇಬ್ಬರು ಹುಡುಗಿಯರು ಮತ್ತು ಮೂವರು ಹುಡುಗರು ಮಾತ್ರ ಉಳಿದೆವು. ಪರಸ್ಪರ ಪರಿಚಯಮಾಡಿಕೊಳ್ಳುತ್ತಾ, ನಾವೆಲ್ಲರೂ ನಾಳೆಯಿಂದ ಬ್ಯಾಂಕಿನಲ್ಲಿ ಸಹೋದ್ಯೋಗಿಗಳಾಗುವುದನ್ನು ಕಲ್ಪಿಸಿಕೊಂಡು ಸಂಭ್ರಮಿಸುತ್ತಿದ್ದೇವು. ಅವರಲ್ಲಿ ಒಬ್ಬಳ ಕಣ್ಣುಗಳು ಯಾರನ್ನೋ ಹುಡುಕುತ್ತಿದ್ದವು. ಅವಳ ಬಗ್ಗೆ ಹೇಳುವುದೇ ಬೇಡ ಬಿಡು. ಆದರೆ, ಅವರಲ್ಲಿ ಶಶಿಕುಮಾರ್ ಎಂಬುವವನು ನನ್ನನ್ನು ಇಂಪ್ರೆಸ್ ಮಾಡಿದ. ಅಷ್ಟರಲ್ಲಿ ಬ್ಯಾಂಕಿನ ಹಿರಿಯ ಅಟೆಂಡರ್ ನಗುಮೊಗದೊಂದಿಗೆ ನಮಗೆಲ್ಲಾ ಕಾಫಿ ತಂದು ಕೊಟ್ಟರು. ನಾವೆಲ್ಲಾ ಕಾಫಿ ತೆಗೆದುಕೊಂಡರೂ, ಶಶಿಕುಮಾರ್ ಮಾತ್ರ ಸಂಕೋಚದಿಂದ ಬೇಡವೆನ್ನುತ್ತಿದ್ದ. “ಇನ್ಮೇಲೆ ಇದೇಲ್ಲಾ ಇದ್ದದ್ದೆ, ತಗೋಳಮ್ಮ ಶಶಿ” ಎಂದೆ. ನನಗಾಗಲೇ ಅವನಲ್ಲಿ ಅಷ್ಟೊಂದು ಆತ್ಮೀಯತೆ. ನನ್ನ ಮಾತಿಗೆ ಮರುಳಾಗಿ ಅವನೂ ಕಾಫಿಯನ್ನು ತೆಗೆದುಕೊಂಡ. ಎಲ್ಲರೂ ಸಂತೋಷದಿಂದ ಕಾಫಿ ಹೀರಿದೆವು. ತದನಂತರ, ಆ ಅಟೆಂಡರ್ ಎಲ್ಲರು ಸಿ.ಇ.ಓ. ರವರ ಛೇಂಬರಿಗೆ ಹೋಗಬೇಕೆಂದು ತಿಳಿಸಿದರು. ಅಲ್ಲಿ ಆಸೀನರಾಗಿದ್ದ ಸಿ.ಇ.ಓ. ರವರು ಸೈನ್ ಮಾಡಿಸಿಕೊಂಡು, ಆಲ್ ದಿ ಬೆಸ್ಟ್ ಹೇಳಿ, ನಮಗೆಲ್ಲಾ ಅಪಾಯಿಂಟ್‍ಮೆಂಟ್ ಲೆಟರ್ ಕೊಟ್ಟರು. ನಮಗೆಲ್ಲಾ ಸ್ವರ್ಗಕ್ಕೆ ಮೂರೇ ಗೇಣು. ನಾನಂತೂ, ನಿಂತಲ್ಲೇ ಕುಪ್ಪಳಿಸಿದ್ದೆ. ಸಿ.ಇ.ಓ.ರವರಿಗೆ ಅಭಿನಂದಿಸಿ ಅಲ್ಲಿಂದ ತೆರಳಿದೆವು.

ಇನ್ನೇನೇ ಹುಡುಗಿ? ನಾಳೆಯಿಂದಲೇ ಕೆಲಸಕ್ಕೆ ಹೋಗಬೇಕು. ಕೆಲಸ ಸಿಕ್ಕಿತ್ತಲ್ಲ? ಇನ್ನೇನು ಬೇಕು? ನಾಳೆ ಬೆಳಿಗ್ಗೆಯೇ ಪುಶ್‍ಪುಲ್ ಸಮಯಕ್ಕೆ ಬಂದು ಬಿಡಲೇ...? ಪ್ರಪೋಸ್...? ನಿನಗೆ ಪ್ರಪೋಸ್ ಮಾಡಿ ಬಿಡಲೇ...? ಅಬ್ಬಾ! ಎಂಥಾ ಅರ್ಜೆಂಟು ನನ್ನ ಹುಚ್ಚುಖೋಡಿ ಮನಸ್ಸಿಗೆ. ಇಲ್ಲಾ ಕಣೇ ಹುಡುಗಿ. ಈ ಭರದಲ್ಲಿ ನಾ ನಿನ್ನ ಪ್ರಪೋಸ್ ಮಾಡಿದ್ರೆ, ನೀ ಸತ್ತೇ ಹೋಗ್ತೀಯಾ ಅಷ್ಟೇ! ಹೇಗಿದ್ರೂ ಸ್ವಲ್ಪ ದಿನಗಳಲ್ಲಿ ದೀಪಾವಳಿ ಹಬ್ಬ ಬರ್ತಿದೆ. ಆ ರಜಾದಿನಗಳಲ್ಲಿ, ಎಲ್ಲರೂ ಪಟಾಕಿ ಹಚ್ತಿರಲಿ. ನಾನು ಮಾತ್ರ ನನ್ನ ಎದೆಯಲ್ಲಿನ ಬಾಂಬ್ ಸಿಡಿಯುವ ಮೊದಲೇ ಅದರಲ್ಲಿನ ಮದ್ದನ್ನೇಲ್ಲಾ ತೆಗೆದು ಸುರುಸುರು ಬತ್ತಿ, ಹೂಕುಂಡ ಮಾಡಿಕೊಂಡು, ಆ ಬೆಳಕಿನಲ್ಲಿ ನಿನಗೊಂದು ಪ್ರೇಮ ಪತ್ರ ಬರೀತೀನಿ. ಅದರಲ್ಲೇ ಪ್ರಪೋಸ್ ಮಾಡ್ತೀನಿ. ಕಾಯ್ತಾ ಇರೇ ಲಕ್ಷ್ಮೀ, ದೀಪಾವಳಿಯ ನಂತರ ನಿನಗೊಂದು, ನನ್ನ ಚೊಚ್ಚಲ ಪ್ರೇಮ ಪತ್ರ!

ಬೆಳಗು ಬಾ ಹಣತೆಯನು

ನನ್ನೆದೆಯ ಗುಡಿಯಲ್ಲಿ

ದಿವ್ಯ ದೀಪಾವಳಿಯ ಶುಭಗಳಿಗೆಯಲ್ಲಿ

... (ಜಿಎಸ್‍‍ಸ್)

ಶನಿವಾರ, ಅಕ್ಟೋಬರ್ 30, 2010

ನಾನು “ಕಾಲ”

ಇದೀಗ ತಾನೆ

ಎಲ್ಲಾ ತಂಪಿತ್ತು

ಬಿಸಿ ವಕ್ಕರಿಸಿದಾದರೂ

ಯಾವಾಗ?


ಮೃಷ್ಟಾನ ಭೋಜನ

ಎಂಥಾ ರುಚಿಯಿತ್ತು

ಊಟ ಮುಗಿದಿದ್ದಾದರು

ಯಾವಾಗ?


ನಮಗೆಲ್ಲಾ ವಯಸ್ಸಾಯ್ತು

ಅದು ನಿಮಗಿದೆ

ವಯಸ್ಸಿಗೇ ವಯಸ್ಸಾದದ್ದು

ಯಾವಾಗ?


ಏ! ಯಾರೋ ನೀನು?

ಅಯ್ಯೋ! ನೀ ಸತ್ತೆಯಾ!!

ನೀ ನನ್ನ ಬದುಕಿಸಿದ್ದಾದರೂ

ಯಾವಾಗ?


ನಾನು, ನಾನು

ನಾನು, ನಾನು

ನಾನು ನೀ ಆಗಿದ್ದಾದರು

ಯಾವಾಗ?


ನಾನು “ಕಾಲ!”

ಬಳಿಯಿದ್ದಾಗ ಮರೆತು

ಕಾಲ ಬಳಿ ಬಿಟ್ಟಿರಿ

ನಿಮ್ಮನಗಲಿದಾಗ!


ಆವಾಗ?

ಒಂದಾನೊಂದು ಕಾಲದಲ್ಲಿ...

ಸೋಮವಾರ, ಅಕ್ಟೋಬರ್ 18, 2010

ಅಕ್ಟೋಬರ್ 15 : “ವೈಟ್ ಕೇನ್ ಸೇಫ್ಟಿ ಡೇ”

“ಬಿಳಿ ಬಿದಿರು ಕೋಲು”


ಬೆಂಗಳೂರಿನ ಮಾಗಡಿರಸ್ತೆಯ ಹತ್ತನೇ ಕ್ರಾಸಿನಲ್ಲಿ ಸಿಟಿ ಬಸ್ ಇಳಿದವನು, ಮೆಟ್ರೊ ಕಾಮಗಾರಿಯಿಂದ ಇಕ್ಕಟ್ಟಾದ ರಸ್ತೆಯಲ್ಲಿ ನಡೆಯುತ್ತಿರುವಾಗ ಅಂಧರೊಬ್ಬರ ಕೋಲಿಗೆ ನನ್ನ ಕಾಲು ತಡೆಯಾಯಿತು. “ಛೇ...” ಎಂಬ ಬೇಸರದ ಉದ್ಗಾರ ಅವರ ಬಾಯಿಂದ ಬಂತು. ಆ ಉದ್ಗಾರಕ್ಕೆ ಕಾರಣನಾದ ನನಗೆ ಬಹಳ ಬೇಸರವಾಯಿತು. ಜೊತೆಗೆ, ಅವರ ಕೈಯಲ್ಲಿದ್ದ ಬಿಳಿಕೋಲಿನ ಬಗ್ಗೆ ಆಶ್ಚರ್ಯವಾಯಿತು!

ಇಂಗ್ಲೆಂಡಿನ ಬ್ರಿಸ್ಟಾಲ್ನಗಲ್ಲಿನ ಕಲಾವಿದ ಜೇಮ್ಸ್ ಬಿಗ್ಸ್ 1921 ರಲ್ಲಿ ಬಿಳಿ ಬಿದಿರು ಕಡ್ಡಿಯನ್ನು ಉಪಯೋಗಕ್ಕೆ ತಂದುದಾಗಿ ಹೇಳಿಕೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಜೇಮ್ಸ್ ಬಿಗ್ ದೃಷ್ಟಿ ಹೋಯಿತು. ರಸ್ತೆ ದಾಟಲು ಅವರು ತುಂಬಾ ಕಷ್ಟಪಡಬೇಕಾಯಿತು. ಕೈಯಲ್ಲಿ ಕೋಲು ಹಿಡಿದರಾದರೂ ವಾಹನ ಚಾಲಕರ ಗಮನ ಅತ್ತ ಹರಿದೀತು ಎಂಬ ನಂಬಿಕೆಯೂ ಫಲ ಕೊಡಲಿಲ್ಲ. ಯಾಕೆಂದರೆ ಎಂತೆಂಥದೋ ಬಣ್ಣದ ಕಡ್ಡಿ ಚಾಲಕರ ಕಣ್ಣಿಗೆ ಬೀಳುತ್ತಿರಲಿಲ್ಲ. ಅವರಿಗೊಂದು ಉಪಾಯ ಹೊಳೆಯಿತು. ಬಿದಿರು ಕಡ್ಡಿಗೆ ಬಿಳಿ ಬಣ್ಣ ಬಳಿದರು. ಅದನ್ನು ಹಿಡಿದು ನಡೆದರು. ರಸ್ತೆಗಳಲ್ಲಿ ವಾಹನ ಚಾಲಕರ ಕಣ್ಣಿಗೆ ಅದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಜನ ಬಿಳಿ ಬಿದಿರುಕಡ್ಡಿಯನ್ನು ಹಿಡಿದ ಜೇಮ್ಸ್ ಅನ್ನು ಸುಲಭವಾಗಿ ಗುರುತಿಸಿ, ರಸ್ತೆಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತಿದ್ದರು. ಕೆಲವರು ಕೈ ಹಿಡಿದು ರಸ್ತೆ ದಾಟಿಸಿದ್ದೂ ಉಂಟು.

ಹತ್ತು ವರ್ಷಗಳ ನಂತರ ಗಿಲ್ಲಿ ಡಿ ಹರ್ಬೆಮಾಂಟ್ ಎಂಬ ಫ್ರ್ಂಚ್ ನಾಗರೀಕ ಬಿಳಿಬಿದಿರು ಕೋಲನ್ನು ಇನ್ನಷ್ಟು ಜನಪ್ರಿಯಗೊಳಿಸಲು ಯತ್ನಿಸಿದರು. ದೃಷ್ಟಿಹೀನರಿಗೆ ಬಿಳಿ ಕಡ್ಡಿ ಬಳಸುವ ಸಲಹೆ ನೀಡಿದರು. ಅದು ಬರಬರುತ್ತಾ ಜನಪ್ರಿಯವೂ ಆಯಿತು. ಅಲ್ಲಿಂದ ಬಿಳಿ ಬಿದಿರು ಕಡ್ಡಿ ಯುರೋಪ್ ರಾಷ್ಟ್ರಗಳನ್ನು ಪ್ರವೇಶಿಸಿತು.

1945ರಲ್ಲಿ ಡಾ. ವಿಲಿಯಂ ರಿಚರ್ಡ್ ಹೂವರ್ (ಬಾಲ್ಟಿಮೋರ್ ನ ಹೆಸರಾಂತ ಕಣ್ಣಿನ ವೈದ್ಯ) ಉದ್ದದ ಅಲ್ಯುಮಿನಿಯಂ ಕಡ್ಡಿಯನ್ನು ದೃಷ್ಟಿಹೀನರ ಬಳಕೆಗೆಂದು ಅಭಿವೃದ್ಧಿಪಡಿಸಿದರು. ಇದನ್ನು ಸಣ್ಣಗೆ ಮಡಿಸಿ ಚೀಲದಲ್ಲಿ ಇಟ್ಟುಕೊಳ್ಳುವಂತೆ ಅವರು ವಿನ್ಯಾಸಗೊಳಿಸಿದರು. ಕ್ರಮೇಣ ಇದೇ ಸ್ವರೂಪದ ಬಿದಿರು ನಡೆಗೋಲು ಬಿಳಿ ಬಣ್ಣವನ್ನು ಪಡೆದುಕೊಂಡಿತು. ಈಗ ಬಿಳಿ ಬಣ್ಣದ ನಡೆಗೋಲೇ ಹೆಚ್ಚು ಬಳಕೆಯಲ್ಲಿರುವುದು.

ಹಾದಿಯಲ್ಲಿ ಇರುವ ವಸ್ತುಗಳನ್ನು ಸ್ಪರ್ಶಿಸಿದಾಗ ಏನಿದೆ ಎಂಬುದನ್ನು ಸ್ಪಷ್ಟವಾಗಿ ಅಂಧರಿಗೆ ತಿಳಿಸುವಂಥ ಗುಣ ಬಿದಿರಿಗೆ ಇದೆ. ಅದಕ್ಕೇ ದೃಷ್ಟಿಹೀನರು ಅದನ್ನು ವ್ಯಾಪಕವಾಗಿ ಬಳಸುವುದು. ಬಿಳಿ ಬಿದಿರುಗೋಲಿನ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ ೧೫ ರಂದು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಆ ದಿನವನ್ನು “ವೈಟ್ ಕೇನ್ ಸೇಫ್ಟಿ ಡೇ” ಎಂದೇ ಆಚರಿಸುತ್ತಾರೆ.

(ಮಾಹಿತಿ – ಸಂಗ್ರಹ)

ಶುಕ್ರವಾರ, ಅಕ್ಟೋಬರ್ 8, 2010

ಸಿಡಿಲಿನ ಹಂಗು

ಅರ್ಧರಾತ್ರಿಯಲ್ಲಿ ಸಿಡಿಲಂತೆ?

ಹೆಂಡತಿ ಬೆಚ್ಚಿ ಬೆದರಿ

ಅವನ ತೆಕ್ಕೆಗೆ ಬಿದ್ದು

ಅರ್ಧಗಂಟೆ ಬಿಡಲಿಲ್ಲವಂತೆ!



ಗೆಳೆಯನೊಬ್ಬ ಹೇಳಿದಾಗ

ಹೊಟ್ಟೆ ಉರಿಯಿತು.

ಅಯ್ಯೋ...! ನನಗೂ ನನ್ನ

ನಲ್ಲೆಗೂ ಎಚ್ಚರವೇ ಆಗಲಿಲ್ಲ!



ಬಂದವನೇ ನನ್ನವಳಿಗೆ ಹೇಳಿದೆ

ಬಿದ್ದು ಬಿದ್ದು ನಕ್ಕಳು.

ಏನು ದೊಡ್ಡ ರೋಮಾನ್ಸ...?

ನಮಗೆ ಎಚ್ಚರವೇ ಆಗಲಿಲ್ಲವೆಂದಳು!



ತುಸು ಯೋಚಿಸಿ ನಸುನಕ್ಕಿ ನಾನಂದೆ

ಆಗಷ್ಟೆ ರಮಿಸಿ, ಪರಸ್ಪರ

ತೆಕ್ಕೆಯಲ್ಲಿ ವಿರಮಿಸುತ್ತಿದ್ದ

ನಮಗೇಕೆ ಸಿಡಿಲಿನ ಹಂಗು?

- ಗುಬ್ಬಚ್ಚಿ ಸತೀಶ್.

ಶುಕ್ರವಾರ, ಅಕ್ಟೋಬರ್ 1, 2010

ಕನ್ನಡ ಪುಸ್ತಕಗಳನ್ನು ಓದುವ ಮೊದಲು ಶ್ರೀಮಂತನಾಗೋಣ!

ರಾವಣನ ಹೆಂಡತಿ ಮಂಡೋದರಿ!

ಕನ್ನಡ ಪುಸ್ತಕಗಳನ್ನು ಕೊಂಡೋದಿರಿ!!

-ಎಚ್. ಡುಂಡೀರಾಜ್.

ಪುಸ್ತಕಗಳನ್ನು ಓದುವ ಹವ್ಯಾಸವುಳ್ಳ ನಾನು, ಆದಷ್ಟು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸವಿರಿಸಿಕೊಂಡಿದ್ದೇನೆ. ಸಿಗರೇಟು, ಟೀ ಕೇಳಿದರೆ ಕೊಡಿಸುವ ಗೆಳೆಯರು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತಾರೆ. ಆದರೆ, ಓದುವ ಹವ್ಯಾಸವಿರುವ ಗೆಳೆಯರು ಸಿಗುವುದು ಅದೃಷ್ಟದ ವಿಷಯ. ಲೈಬ್ರರಿಯಲ್ಲಿ ಓದಲಾಗದ ಪುಸ್ತಕಗಳೇ ಹೆಚ್ಚು ಸಿಗುತ್ತವೆ. ಅಂದಮೇಲೆ ನಮಗೆ ಬೇಕಾದ ಪುಸ್ತಕಗಳನ್ನು ಕೊಂಡೇ ಓದಬೇಕು.

ಒಂದು ಪುಸ್ತಕದ ಬಿಡುಗಡೆಯ ವಿಷಯ ಇದೀಗ ಮುಂಚೆಯೇ ದಿನಪತ್ರಿಕೆಗಳಿಂದಲೋ, ಇಂಟರ್ನೆಟ್ಟಿನಿಂದಲೋ ತಿಳಿದಿರುತ್ತದೆ. ಖ್ಯಾತನಾಮರ ಪುಸ್ತಕಗಳಾದರೋ ಬಿಡುಗಡೆಗೂ ಮುನ್ನ ಒಂದು ಸುತ್ತು ವಿಮರ್ಶೆಯಾಗಿರುತ್ತದೆ. ಪುಸ್ತಕ ಬಿಡುಗಡೆಯ ಸ್ಥಳದಲ್ಲಿ ಹಾಜರಿದ್ದರೆ ತಿಂಡಿಯ ಜೊತೆ ಪುಸ್ತಕಕ್ಕೆ ರಿಯಾಯಿತಿಯೂ ಸಿಗುತ್ತದೆ. ಒಟ್ಟಿನಲ್ಲಿ ಪುಸ್ತಕ ಬಿಡುಗಡೆಗೂ ಮುನ್ನ ಸ್ವಲ್ಪ ಶಬ್ಧ ಮತ್ತು ನಂತರವೂ ಸ್ವಲ್ಪ ಶಬ್ಧ ಮಾಡುತ್ತದೆ.

ಇದೆಲ್ಲಾ ಸರಿಯಷ್ಟೆ. ಆದರೆ, ಪುಸ್ತಕ ಕೊಂಡು ಕೊಳ್ಳಲು ಹಣ ಬೇಕು. ಹಣವೆಲ್ಲಿಂದ ತರುವುದು? ಓದುವುದು ನಮ್ಮ ವೈಯಕ್ತಿಕ ಹವ್ಯಾಸವಾದ್ದರಿಂದ ಅದಕ್ಕೆ ನಮ್ಮ ಬಜೆಟ್ ನಲ್ಲಿ ಹಣ ಎತ್ತಿಡಬೇಕು. ಸರಿ ಎತ್ತಿಟ್ಟಿದಾಯಿತು. ಈಗ ಹೇಳಿ ಯಾವ ಕನ್ನಡ ಪುಸ್ತಕಗಳನ್ನು ಕೊಳ್ಳೋಣ?

ಒಂದು ರೂಪಾಯಿಗೆ ವಿಮಾನದ ಟಿಕೆಟ್ ಕೊಟ್ಟ ಕ್ಯಾಪ್ಟನ್ ಗೋಪಿನಾಥ್ ರವರ ಆತ್ಮಕಥನ “ಬಾನಯಾನ” ದ ಬೆಲೆ ರೂ ೪೨೫. ಕುಂ.ವೀ.ಯವರ ಗಾಂಧಿಕ್ಲಾಸು ರೂ ೨೨೫. ಅತ್ಯಧಿಕ ಮಾರಾಟ ಕಂಡ ಎಸ್.ಎಲ್.ಭೈರಪ್ಪನವರ ಹಾರ್ಡ್ ಬೈಂಡ್ ಕೃತಿ “ಕವಲು” ರೂ ೨೫೦. ಪೇಪರ್ ಬ್ಯಾಕ್ ನಲ್ಲಿ ಕೊಟ್ಟಿದ್ದರೆ ನನಗೆ ಓದಲಿಕ್ಕಾಗುತ್ತಿರಲಿಲ್ಲವೇನೋ? ಪ್ರೋ. ಬಾಲು ಎಂದೇ ಪರಿಚಿತರಾದ ಎಸ್.ಎಲ್.ಬಾಲಗಂಗಾಧರರವರ ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ ರೂ ೪೧೫. ತೇಜಸ್ವಿಯವರ ಮಾಯಾಲೋಕ ರೂ ೧೯೮...ಇತ್ಯಾದಿ.

ಪುಸ್ತಕಗಳ ಬೆಲೆಗಳನ್ನು ನೋಡುತ್ತಿದ್ದರೆ ಏದುಸಿರು ಬರುತ್ತಿರುವಾಗ ಯಾವ ಪುಸ್ತಕವನ್ನು ಕೊಂಡು ಓದುವುದು ಎಂದು ಯೋಚಿಸುತ್ತಿರುವಾಗ ನನಗೆ ಹೊಳೆದದ್ದು ಒಂದೇ ಐಡಿಯಾ! ಮೊದಲು ಶ್ರೀಮಂತನಾಗೋಣ, ನಂತರ ಓದುವ ಹವ್ಯಾಸ ಮುಂದುವರೆಸೋಣ. ನಿವೇನಂತಿರೋ...!?

- ಗುಬ್ಬಚ್ಚಿ ಸತೀಶ್.

ಗುರುವಾರ, ಸೆಪ್ಟೆಂಬರ್ 16, 2010

ಒಂದನೇ ಕ್ಲಾಸ್ ಇಂಗ್ಲೀಷ್ ಡೈಜೆಸ್ಟ್

ಸಂಜೆಯಾಯಿತೆಂದರೆ ತುಮಕೂರಿನ ಎಂ.ಜಿ. ರೋಡಿನಲ್ಲಿ ವಾಹನಗಳಿಂದವಿರಲಿ, ಜನಗಳಿಂದಲೇ ಆಗುವ ತಿಕ್ಕಾಟವನ್ನು ತಪ್ಪಿಸಿಕೊಂಡು ನಡೆಯುವುದು ಕಷ್ಟ. ನನಗೆ ಡ್ರಾಯಿಂಗ್ ಶೀಟ್ಸ್‍ಗಳನ್ನು ತೆಗೆದುಕೊಳ್ಳಬೇಕು. ಅಷ್ಟಕ್ಕೂ ಅದು ನನಗಲ್ಲ. ನನ್ನ ಏಕೈಕ ಹೆಂಡತಿಗೆ. ನೆನ್ನೆ ರಾತ್ರಿಯೇ ಇದರ ಬಗ್ಗೆ ಅವಳು ಹೇಳಿದ್ದಳು. ಸಂಜೆ ಫೋನ್ ಮೂಲಕ ಮತ್ತೊಮ್ಮೆ ಜ್ಞಾಪಿಸಿದ್ದಾಳೆ ಎಂದ ಮೇಲೆ ತೆಗೆದುಕೊಂಡು ಹೋಗಲೇಬೇಕು.


ಗಾಡಿ ಪಾರ್ಕ್ ಮಾಡಿ, ಯಾರಿಗೂ ತಿಕ್ಕದೆ, ತಿಕ್ಕಿಸಿಕೊಳ್ಳದೆ ಪುಸ್ತಕದಂಗಡಿಯ ಬಾಗಿಲ ಬಳಿಗೆ ಬಂದೆ. ಅಂಗಡಿಯ ಮುಂದೆ ಹಲವಾರು ಜನ ವ್ಯಾಪಾರ ಮಾಡುತ್ತಿದ್ದರು. ನಾ ಮೊದಲು ಎಡಗಡೆಗೆ ನಿಂತೆ. ಕಾರಣ, ಬಲಗಡೆ ಹುಡುಗಿಯರು ಹೆಚ್ಚಿದ್ದರು. ಎಡಗಡೆ ಇಬ್ಬರು ಹುಡುಗರಿದ್ದರು. ನಾ ತುಂಬಾ ಹೊತ್ತು ಅಲ್ಲಿನ ಚಲನವಲನಗಳನ್ನು ಗಮನಿಸುತ್ತಾ ನಿಂತೇ ಇದ್ದೆ. ನನ್ನ ಕಡೆಯಿದ್ದ ಆ ಹುಡುಗರು ಬೇಗ ವ್ಯಾಪಾರ ಮುಗಿಸಲೇ ಇಲ್ಲ. ಅಷ್ಟರಲ್ಲಿ ಬಲಗಡೆಯಿದ್ದ ಹುಡುಗಿಯೊಬ್ಬಳು ವ್ಯಾಪಾರ ಮುಗಿಸಿ ಅಲ್ಲಿಂದ ತೆರಳಿದಳು. ನಾನು ಆ ಜಾಗಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಮಧ್ಯವಯಸ್ಕ ಗಂಡಸರೊಬ್ಬರು ಪುಸಕ್ಕನೆ ಬಂದು ನಿಂತರು. ನಿರಾಸೆಯಾಯಿತು.


ಅಂಗಡಿಯಲ್ಲಿ ಇಬ್ಬರು ಕೆಲಸದ ಹುಡುಗರೊಂದಿಗೆ ಅಂಗಡಿಯ ಯಜಮಾನರಿದ್ದರೂ ಗಿರಾಕಿಗಳನ್ನು ಸಂಭಾಳಿಸಲಾಗುತ್ತಿರಲಿಲ್ಲ. ಅಷ್ಟರಲ್ಲಿ ಎಡಗಡೆಯಿದ್ದ ಆ ಇಬ್ಬರು ಹುಡುಗರೂ, ಮತ್ತೊಬ್ಬಳು ಹುಡುಗಿ ನಿರ್ಗಮಿಸಿದರು. ಖಾಲಿಯಾದ ಜಾಗಕ್ಕೆ ಎತ್ತರದಿಂದ ಕೆಳಕ್ಕೆ ಜಿಗಿಯುವ ನೀರಿನಂತೆ ಜಿಗಿದು ನಾನು ಆ ಜಾಗವನ್ನು ಆಕ್ರಮಿಸಿದೆ. ಅದೇ ಸಮಯಕ್ಕೆ ನನ್ನ ಪಕ್ಕಕ್ಕೆ ಒಬ್ಬಳು ಚಿಕ್ಕ ಹುಡುಗಿ, ಮತ್ತೊಬ್ಬಳು ದೊಡ್ಡ ಹುಡುಗಿ ಬಂದರು. ಆ ಚಿಕ್ಕ ಹುಡುಗಿ ತುಸು ಜೋರಾಗಿಯೇ, ‘ಮಮ್ಮಿ, ನಂಗೆ ಅನಿಮಲ್ಸ್ ಚಾರ್ಟ್ ಬೇಕು’, ಎಂದದನ್ನು ಕೇಳಿಸಿಕೊಂಡು ಆ ದೊಡ್ಡ ಹುಡುಗಿಯ ಕಡೆ ನೋಡಿದೆ. ಆ ಹುಡುಗಿ ಚಿಕ್ಕ ಹುಡುಗಿಯ ಅಮ್ಮ!? ಎಂದು ಅರ್ಥಮಾಡಿಕೊಂಡಾಗ, ಸಂತೂರ್ ಸಾಬೂನಿನ ಜಾಹೀರಾತು ನೆನಪಾಗಿ ಮನಸ್ಸಲ್ಲೇ ಮುಗುಮ್ಮಾಗಿ ನಕ್ಕೆ.

‘ಏನ್ಬೇಕು ಸಾರ್’, ಅಂಗಡಿಯ ಹುಡುಗನೊಬ್ಬ ಕೇಳಿದ. ಸಂತೂರ್ ಜಾಹಿರಾತಿನಿಂದ ಹೊರಬಂದವನು ‘ಎಲ್ಲಾ ಕಲರ್‍ದೂ ಒಂದೊಂದು ಡ್ರಾಯಿಂಗ್ ಶೀಟ್ ಕೊಡಪ್ಪ’ ಅಂದೆ. ‘ಎಲ್ಲೊನ ಸಾರ್’ ಎಂದು ಹುಡುಗ ನನ್ನ ಮುಖವನ್ನೊಮ್ಮೆ ನೋಡಿದ. ‘ಅಲ್ಲಪ್ಪಾ, ಎಲ್ಲಾ ಕಲರ್‍ದೂ, means, all colours’ ಎಂದೆ. ‘ಸರಿ ಸಾರ್’, ಎಂದು ಡ್ರಾಯಿಂಗ್ ಶೀಟ್ಸ್ ತರಲು ಅಂಗಡಿಯ ಒಳಕ್ಕೆ ಹೋದ. ಇಂಗ್ಲೀಷ್ ಪೀಡಿತ, ಕನ್ನಡ ಬರ ನಾಡಲ್ಲಿ ‘ಎಲ್ಲಾ’ ಎಂದದ್ದು ಅವನಿಗೆ ‘ಎಲ್ಲೊ’ ಎಂದು ಕೇಳಿಸಿರಬೇಕು.

ಒಳಕ್ಕೆ ಹೋದ ಹುಡುಗನನ್ನು ಕಾಯುತ್ತಾ ನಿಂತ ನನ್ನ ಚಂಚಲ ಕಣ್ಣುಗಳು ಬಲಗಡೆ ನಿಂತಿದ್ದ ಮಧ್ಯವಯಸ್ಕನೆಡೆಗೆ ತಿರುಗಿದವು. ಅರೇ! ಈತ ಇನ್ನೂ ಇಲ್ಲಿಯೇ ನಿಂತಿದ್ದಾರೆ. ಆತ ಅದೇಕೋ ಬೆವರಿದಂತೆ ಕಾಣುತ್ತಿದ್ದರು. ಕರ್ಚೀಪಿನಿಂದ ಮುಖ ಒರೆಸಿಕೊಳ್ಳುತ್ತಾ, ಏನನ್ನೋ ಕೇಳುವುದೋ ಬೇಡವೋ ಎನ್ನುವಂತೆ ನಿಂತಿದ್ದವರು ಇದ್ದಕ್ಕಿದ್ದಂತೆ, ‘ಒಂದನೇ ಕ್ಲಾಸಿನ ಇಂಗ್ಲೀಷ್ ಡೈಜೆಸ್ಟ್ ಕೊಡಿ’, ಎಂದು ಅಂಗಡಿಯ ಯಜಮಾನನನ್ನು ಯಾವುದೋ ತಪ್ಪು ಮಾಡಿದವನು ದಯಮಾಡಿ ಬಿಟ್ಟು ಬಿಡಿ ಎಂದು ಕೇಳುವವನಂತೆ ಕೇಳಿದ. ಇದನ್ನು ಕೇಳಿದ ಯಜಮಾನನು ಈತನೆಡೆಗೆ ತಿರುಗಿಯೂ ನೋಡದೆ, ಒಳಗೊಳಗೇ ನಗುತ್ತಾ, ‘ಒಂದನೇ ಕ್ಲಾಸಿಗೆ ಇಂಗ್ಲೀಷ್ ಡೈಜೆಸ್ಟೇನ್ರಿ? ಅದೇ ಬರಿ ಎ, ಬಿ, ಸಿ, ಡಿ ಇರಬೇಕು ಅಷ್ಟೆ’, ಎಂದು ತಲೆಯೆತ್ತಿ ಆ ಮಧ್ಯವಯಸ್ಕರ ಕಡೆಗೆ ನೋಡಿ ‘ಹ್ಹ ಹ್ಹ ಹ್ಹಾ. . .! ಇಲ್ಲಾರಿ’’ ಎಂದು ಸ್ವಲ್ಪ ಜೋರಾಗಿಯೇ ನಕ್ಕ. ಪಾಪ, ಅವಮಾನವಾದಂತಾಗಿ ತಲೆತಗ್ಗಿಸಿ ಆ ಮಧ್ಯವಯಸ್ಕರು ಅಲ್ಲಿಂದ ತೆರಳಿದರು.

‘ತಗೊಳ್ಳಿ ಸಾರ್ ಡ್ರಾಯಿಂಗ್ ಶೀಟ್ಸ್, ಇಪ್ಪತ್ತು ರೂಪಾಯಿ ಕೊಡಿ’, ಎಂದು ಅಂಗಡಿಯ ಹುಡುಗನು ಅಂದಾಗ, ಇಪ್ಪತ್ತು ರೂಪಾಯಿಗಳನ್ನು ಕೊಟ್ಟು, ಅವನು ಸುತ್ತಿಕೊಟ್ಟ ಶೀಟ್ಸ್ ‍ಗಳನ್ನು ಪಡೆದು, ಯಜಮಾನನೊಮ್ಮೆ ನೋಡಿ ಅಲ್ಲಿಂದ ತೆರಳಿದೆನು.

ಪಾರ್ಕ್ ಮಾಡಿದ್ದ ಜಾಗದಿಂದ ಗಾಡಿಯನ್ನು ತೆಗೆಯಲು ಹೋದವನು, ಅಲ್ಲೇ ಎದುರುಗಡೆಯಿದ್ದ ಜಿಲೇಬಿಯಂಗಡಿಯ ಹತ್ತಿರ ಜಿಲೇಬಿ ತಿನ್ನುತ್ತಿದ್ದ ಪುಸ್ತಕದಂಗಡಿಯಲ್ಲಿದ್ದ ಆ ಮಧ್ಯವಯಸ್ಕರನ್ನು ನೋಡಿದ ಕೂಡಲೇ ಯಾಕೋ ಅಲ್ಲೇ ನಿಂತೆನು. ಜಿಲೇಬಿ ತಿನ್ನುತ್ತಿದ್ದರೂ ಆತ ಬೇಸರದಲ್ಲಿದ್ದನು. ಆತ ಜಿಲೇಬಿ ತಿಂದದ್ದು ಮುಗಿದ ಕೂಡಲೇ ಆತನ ಬಳಿ ಅವಸರವಾಗಿ ನಡೆದು, ‘ಸಾರ್, ನಮಸ್ಕಾರ’ ಎಂದೆ. ಜಿಲೇಬಿಯ ಕಡೆಯ ಚೂರನ್ನು ಬಾಯಲಿಟ್ಟುಕೊಂಡದ್ದರಿಂದಲೋ ಅಥವಾ ಬೇಸರದಿಂದಲೋ ಏನೋ ಆತ ನಮಸ್ಕಾರವೆಂದು ಕೈಯಲ್ಲೇ ಸಂಜ್ಞೆ ಮಾಡಿದರು. ಪರವಾಗಿಲ್ಲ ಇರಲಿ ಎಂದುಕೊಂಡ ನಾನು ಮುಂದುವರಿದು, ‘ಸಾರ್, ಆ ಅಂಗಡಿಯಲ್ಲಿ ತಾವು ಒಂದನೇ ಕ್ಲಾಸ್ ಇಂಗ್ಲೀಷ್ ಡೈಜೆಸ್ಟ್ ಕೇಳುದ್ರಲ್ಲಾ. . . , ಒಂದನೇ ಕ್ಲಾಸ್ ಇಂಗ್ಲೀಷ್ ನಿಮ್ಮ ಮಗುಗೆ ಅಷ್ಟು ಕಷ್ಟ ಆಗ್ತಿದ್ಯಾ ಸಾರ್?’ ಎಂದೆ. ಅದಕ್ಕೆ ಆತ, ಹಿಂದೆ-ಮುಂದೆ, ಮೇಲೆ-ಕೆಳಗೆ ನೋಡುತ್ತಾ, ‘ಅದೇನೋ ಗೊತ್ತಿಲ್ಲ ಸಾರ್. ನಾನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡದ ಗೌರವ ಉಪನ್ಯಾಸಕನಾಗಿ ಕೆಲಸ ಮಾಡ್ತಿದೀನಿ. ನನಗೆ ಇನ್ನೂ ಮಕ್ಕಳಿಲ್ಲ. ನನ್ನ ಹೆಂಡತಿ ಬಿ.ಎ ಮಾಡಿದ್ದಾಳೆ. ಇತ್ತೀಚೆಗೆ ಅವಳಿಗೆ ಪ್ರೈವೇಟ್ ಸ್ಕೂಲಲ್ಲಿ ಕೆಲಸ ಸಿಕ್ಕಿದೆ. ಅದು ಸಿ.ಬಿ.ಎಸ್.ಸಿ ಸಿಲಬಸ್ ಇರೋ ಸ್ಕೂಲಂತೆ! ಅವಳೋದಿದ್ದು ಕನ್ನಡ ಮೀಡಿಯಮ್ಮಿನಲ್ಲಿ. ಕೆಲಸಕ್ಕೆ ಹೋದ ಮೊದಲನೇ ದಿನಾನೇ ಫಸ್ಟ್ ಸ್ಟಾಂಡರ್ಡ್ ಇಂಗ್ಲೀಷು ತುಂಬಾ ಕಷ್ಟ ಕಣ್ರೀ. ನಂಗೊಂದು ಡೈಜೆಸ್ಟ್ ತಂದು ಕೊಡಿ ಅಂದಳು. ಅದಕ್ಕೆ ಅಂತಾ ಬಂದರೆ... ಆ ಅಂಗಡಿಯವನು ಹಂಗಾ ಸಾರ್ ಅನ್ನೋದು’, ಎಂದು ಅಲ್ಲಿಂದ ಸರಸರನೆ ಹೊರಟು ಹೋದರು.

ಅವಕ್ಕಾದ ನಾನು, ‘ಯಾರು ಸರಿ ಅನ್ನೋದು!?’ ಎಂದು ಯೋಚಿಸುತ್ತಾ, ತಲೆಕೆರೆದುಕೊಂಡು ಕ್ಷಣಕಾಲ ನಿಂತಲ್ಲೇ ನಿಂತಿದ್ದೆ.

                                                                               - ಗುಬ್ಬಚ್ಚಿ ಸತೀಶ್

ನೀರು (ಪುಟ್ಟ ಕತೆ)

  ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹ...