ಶನಿವಾರ, ಅಕ್ಟೋಬರ್ 30, 2010

ನಾನು “ಕಾಲ”

ಇದೀಗ ತಾನೆ

ಎಲ್ಲಾ ತಂಪಿತ್ತು

ಬಿಸಿ ವಕ್ಕರಿಸಿದಾದರೂ

ಯಾವಾಗ?


ಮೃಷ್ಟಾನ ಭೋಜನ

ಎಂಥಾ ರುಚಿಯಿತ್ತು

ಊಟ ಮುಗಿದಿದ್ದಾದರು

ಯಾವಾಗ?


ನಮಗೆಲ್ಲಾ ವಯಸ್ಸಾಯ್ತು

ಅದು ನಿಮಗಿದೆ

ವಯಸ್ಸಿಗೇ ವಯಸ್ಸಾದದ್ದು

ಯಾವಾಗ?


ಏ! ಯಾರೋ ನೀನು?

ಅಯ್ಯೋ! ನೀ ಸತ್ತೆಯಾ!!

ನೀ ನನ್ನ ಬದುಕಿಸಿದ್ದಾದರೂ

ಯಾವಾಗ?


ನಾನು, ನಾನು

ನಾನು, ನಾನು

ನಾನು ನೀ ಆಗಿದ್ದಾದರು

ಯಾವಾಗ?


ನಾನು “ಕಾಲ!”

ಬಳಿಯಿದ್ದಾಗ ಮರೆತು

ಕಾಲ ಬಳಿ ಬಿಟ್ಟಿರಿ

ನಿಮ್ಮನಗಲಿದಾಗ!


ಆವಾಗ?

ಒಂದಾನೊಂದು ಕಾಲದಲ್ಲಿ...

ಸೋಮವಾರ, ಅಕ್ಟೋಬರ್ 18, 2010

ಅಕ್ಟೋಬರ್ 15 : “ವೈಟ್ ಕೇನ್ ಸೇಫ್ಟಿ ಡೇ”

“ಬಿಳಿ ಬಿದಿರು ಕೋಲು”


ಬೆಂಗಳೂರಿನ ಮಾಗಡಿರಸ್ತೆಯ ಹತ್ತನೇ ಕ್ರಾಸಿನಲ್ಲಿ ಸಿಟಿ ಬಸ್ ಇಳಿದವನು, ಮೆಟ್ರೊ ಕಾಮಗಾರಿಯಿಂದ ಇಕ್ಕಟ್ಟಾದ ರಸ್ತೆಯಲ್ಲಿ ನಡೆಯುತ್ತಿರುವಾಗ ಅಂಧರೊಬ್ಬರ ಕೋಲಿಗೆ ನನ್ನ ಕಾಲು ತಡೆಯಾಯಿತು. “ಛೇ...” ಎಂಬ ಬೇಸರದ ಉದ್ಗಾರ ಅವರ ಬಾಯಿಂದ ಬಂತು. ಆ ಉದ್ಗಾರಕ್ಕೆ ಕಾರಣನಾದ ನನಗೆ ಬಹಳ ಬೇಸರವಾಯಿತು. ಜೊತೆಗೆ, ಅವರ ಕೈಯಲ್ಲಿದ್ದ ಬಿಳಿಕೋಲಿನ ಬಗ್ಗೆ ಆಶ್ಚರ್ಯವಾಯಿತು!

ಇಂಗ್ಲೆಂಡಿನ ಬ್ರಿಸ್ಟಾಲ್ನಗಲ್ಲಿನ ಕಲಾವಿದ ಜೇಮ್ಸ್ ಬಿಗ್ಸ್ 1921 ರಲ್ಲಿ ಬಿಳಿ ಬಿದಿರು ಕಡ್ಡಿಯನ್ನು ಉಪಯೋಗಕ್ಕೆ ತಂದುದಾಗಿ ಹೇಳಿಕೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಜೇಮ್ಸ್ ಬಿಗ್ ದೃಷ್ಟಿ ಹೋಯಿತು. ರಸ್ತೆ ದಾಟಲು ಅವರು ತುಂಬಾ ಕಷ್ಟಪಡಬೇಕಾಯಿತು. ಕೈಯಲ್ಲಿ ಕೋಲು ಹಿಡಿದರಾದರೂ ವಾಹನ ಚಾಲಕರ ಗಮನ ಅತ್ತ ಹರಿದೀತು ಎಂಬ ನಂಬಿಕೆಯೂ ಫಲ ಕೊಡಲಿಲ್ಲ. ಯಾಕೆಂದರೆ ಎಂತೆಂಥದೋ ಬಣ್ಣದ ಕಡ್ಡಿ ಚಾಲಕರ ಕಣ್ಣಿಗೆ ಬೀಳುತ್ತಿರಲಿಲ್ಲ. ಅವರಿಗೊಂದು ಉಪಾಯ ಹೊಳೆಯಿತು. ಬಿದಿರು ಕಡ್ಡಿಗೆ ಬಿಳಿ ಬಣ್ಣ ಬಳಿದರು. ಅದನ್ನು ಹಿಡಿದು ನಡೆದರು. ರಸ್ತೆಗಳಲ್ಲಿ ವಾಹನ ಚಾಲಕರ ಕಣ್ಣಿಗೆ ಅದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಜನ ಬಿಳಿ ಬಿದಿರುಕಡ್ಡಿಯನ್ನು ಹಿಡಿದ ಜೇಮ್ಸ್ ಅನ್ನು ಸುಲಭವಾಗಿ ಗುರುತಿಸಿ, ರಸ್ತೆಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತಿದ್ದರು. ಕೆಲವರು ಕೈ ಹಿಡಿದು ರಸ್ತೆ ದಾಟಿಸಿದ್ದೂ ಉಂಟು.

ಹತ್ತು ವರ್ಷಗಳ ನಂತರ ಗಿಲ್ಲಿ ಡಿ ಹರ್ಬೆಮಾಂಟ್ ಎಂಬ ಫ್ರ್ಂಚ್ ನಾಗರೀಕ ಬಿಳಿಬಿದಿರು ಕೋಲನ್ನು ಇನ್ನಷ್ಟು ಜನಪ್ರಿಯಗೊಳಿಸಲು ಯತ್ನಿಸಿದರು. ದೃಷ್ಟಿಹೀನರಿಗೆ ಬಿಳಿ ಕಡ್ಡಿ ಬಳಸುವ ಸಲಹೆ ನೀಡಿದರು. ಅದು ಬರಬರುತ್ತಾ ಜನಪ್ರಿಯವೂ ಆಯಿತು. ಅಲ್ಲಿಂದ ಬಿಳಿ ಬಿದಿರು ಕಡ್ಡಿ ಯುರೋಪ್ ರಾಷ್ಟ್ರಗಳನ್ನು ಪ್ರವೇಶಿಸಿತು.

1945ರಲ್ಲಿ ಡಾ. ವಿಲಿಯಂ ರಿಚರ್ಡ್ ಹೂವರ್ (ಬಾಲ್ಟಿಮೋರ್ ನ ಹೆಸರಾಂತ ಕಣ್ಣಿನ ವೈದ್ಯ) ಉದ್ದದ ಅಲ್ಯುಮಿನಿಯಂ ಕಡ್ಡಿಯನ್ನು ದೃಷ್ಟಿಹೀನರ ಬಳಕೆಗೆಂದು ಅಭಿವೃದ್ಧಿಪಡಿಸಿದರು. ಇದನ್ನು ಸಣ್ಣಗೆ ಮಡಿಸಿ ಚೀಲದಲ್ಲಿ ಇಟ್ಟುಕೊಳ್ಳುವಂತೆ ಅವರು ವಿನ್ಯಾಸಗೊಳಿಸಿದರು. ಕ್ರಮೇಣ ಇದೇ ಸ್ವರೂಪದ ಬಿದಿರು ನಡೆಗೋಲು ಬಿಳಿ ಬಣ್ಣವನ್ನು ಪಡೆದುಕೊಂಡಿತು. ಈಗ ಬಿಳಿ ಬಣ್ಣದ ನಡೆಗೋಲೇ ಹೆಚ್ಚು ಬಳಕೆಯಲ್ಲಿರುವುದು.

ಹಾದಿಯಲ್ಲಿ ಇರುವ ವಸ್ತುಗಳನ್ನು ಸ್ಪರ್ಶಿಸಿದಾಗ ಏನಿದೆ ಎಂಬುದನ್ನು ಸ್ಪಷ್ಟವಾಗಿ ಅಂಧರಿಗೆ ತಿಳಿಸುವಂಥ ಗುಣ ಬಿದಿರಿಗೆ ಇದೆ. ಅದಕ್ಕೇ ದೃಷ್ಟಿಹೀನರು ಅದನ್ನು ವ್ಯಾಪಕವಾಗಿ ಬಳಸುವುದು. ಬಿಳಿ ಬಿದಿರುಗೋಲಿನ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ ೧೫ ರಂದು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಆ ದಿನವನ್ನು “ವೈಟ್ ಕೇನ್ ಸೇಫ್ಟಿ ಡೇ” ಎಂದೇ ಆಚರಿಸುತ್ತಾರೆ.

(ಮಾಹಿತಿ – ಸಂಗ್ರಹ)

ಶುಕ್ರವಾರ, ಅಕ್ಟೋಬರ್ 8, 2010

ಸಿಡಿಲಿನ ಹಂಗು

ಅರ್ಧರಾತ್ರಿಯಲ್ಲಿ ಸಿಡಿಲಂತೆ?

ಹೆಂಡತಿ ಬೆಚ್ಚಿ ಬೆದರಿ

ಅವನ ತೆಕ್ಕೆಗೆ ಬಿದ್ದು

ಅರ್ಧಗಂಟೆ ಬಿಡಲಿಲ್ಲವಂತೆ!



ಗೆಳೆಯನೊಬ್ಬ ಹೇಳಿದಾಗ

ಹೊಟ್ಟೆ ಉರಿಯಿತು.

ಅಯ್ಯೋ...! ನನಗೂ ನನ್ನ

ನಲ್ಲೆಗೂ ಎಚ್ಚರವೇ ಆಗಲಿಲ್ಲ!



ಬಂದವನೇ ನನ್ನವಳಿಗೆ ಹೇಳಿದೆ

ಬಿದ್ದು ಬಿದ್ದು ನಕ್ಕಳು.

ಏನು ದೊಡ್ಡ ರೋಮಾನ್ಸ...?

ನಮಗೆ ಎಚ್ಚರವೇ ಆಗಲಿಲ್ಲವೆಂದಳು!



ತುಸು ಯೋಚಿಸಿ ನಸುನಕ್ಕಿ ನಾನಂದೆ

ಆಗಷ್ಟೆ ರಮಿಸಿ, ಪರಸ್ಪರ

ತೆಕ್ಕೆಯಲ್ಲಿ ವಿರಮಿಸುತ್ತಿದ್ದ

ನಮಗೇಕೆ ಸಿಡಿಲಿನ ಹಂಗು?

- ಗುಬ್ಬಚ್ಚಿ ಸತೀಶ್.

ಶುಕ್ರವಾರ, ಅಕ್ಟೋಬರ್ 1, 2010

ಕನ್ನಡ ಪುಸ್ತಕಗಳನ್ನು ಓದುವ ಮೊದಲು ಶ್ರೀಮಂತನಾಗೋಣ!

ರಾವಣನ ಹೆಂಡತಿ ಮಂಡೋದರಿ!

ಕನ್ನಡ ಪುಸ್ತಕಗಳನ್ನು ಕೊಂಡೋದಿರಿ!!

-ಎಚ್. ಡುಂಡೀರಾಜ್.

ಪುಸ್ತಕಗಳನ್ನು ಓದುವ ಹವ್ಯಾಸವುಳ್ಳ ನಾನು, ಆದಷ್ಟು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸವಿರಿಸಿಕೊಂಡಿದ್ದೇನೆ. ಸಿಗರೇಟು, ಟೀ ಕೇಳಿದರೆ ಕೊಡಿಸುವ ಗೆಳೆಯರು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತಾರೆ. ಆದರೆ, ಓದುವ ಹವ್ಯಾಸವಿರುವ ಗೆಳೆಯರು ಸಿಗುವುದು ಅದೃಷ್ಟದ ವಿಷಯ. ಲೈಬ್ರರಿಯಲ್ಲಿ ಓದಲಾಗದ ಪುಸ್ತಕಗಳೇ ಹೆಚ್ಚು ಸಿಗುತ್ತವೆ. ಅಂದಮೇಲೆ ನಮಗೆ ಬೇಕಾದ ಪುಸ್ತಕಗಳನ್ನು ಕೊಂಡೇ ಓದಬೇಕು.

ಒಂದು ಪುಸ್ತಕದ ಬಿಡುಗಡೆಯ ವಿಷಯ ಇದೀಗ ಮುಂಚೆಯೇ ದಿನಪತ್ರಿಕೆಗಳಿಂದಲೋ, ಇಂಟರ್ನೆಟ್ಟಿನಿಂದಲೋ ತಿಳಿದಿರುತ್ತದೆ. ಖ್ಯಾತನಾಮರ ಪುಸ್ತಕಗಳಾದರೋ ಬಿಡುಗಡೆಗೂ ಮುನ್ನ ಒಂದು ಸುತ್ತು ವಿಮರ್ಶೆಯಾಗಿರುತ್ತದೆ. ಪುಸ್ತಕ ಬಿಡುಗಡೆಯ ಸ್ಥಳದಲ್ಲಿ ಹಾಜರಿದ್ದರೆ ತಿಂಡಿಯ ಜೊತೆ ಪುಸ್ತಕಕ್ಕೆ ರಿಯಾಯಿತಿಯೂ ಸಿಗುತ್ತದೆ. ಒಟ್ಟಿನಲ್ಲಿ ಪುಸ್ತಕ ಬಿಡುಗಡೆಗೂ ಮುನ್ನ ಸ್ವಲ್ಪ ಶಬ್ಧ ಮತ್ತು ನಂತರವೂ ಸ್ವಲ್ಪ ಶಬ್ಧ ಮಾಡುತ್ತದೆ.

ಇದೆಲ್ಲಾ ಸರಿಯಷ್ಟೆ. ಆದರೆ, ಪುಸ್ತಕ ಕೊಂಡು ಕೊಳ್ಳಲು ಹಣ ಬೇಕು. ಹಣವೆಲ್ಲಿಂದ ತರುವುದು? ಓದುವುದು ನಮ್ಮ ವೈಯಕ್ತಿಕ ಹವ್ಯಾಸವಾದ್ದರಿಂದ ಅದಕ್ಕೆ ನಮ್ಮ ಬಜೆಟ್ ನಲ್ಲಿ ಹಣ ಎತ್ತಿಡಬೇಕು. ಸರಿ ಎತ್ತಿಟ್ಟಿದಾಯಿತು. ಈಗ ಹೇಳಿ ಯಾವ ಕನ್ನಡ ಪುಸ್ತಕಗಳನ್ನು ಕೊಳ್ಳೋಣ?

ಒಂದು ರೂಪಾಯಿಗೆ ವಿಮಾನದ ಟಿಕೆಟ್ ಕೊಟ್ಟ ಕ್ಯಾಪ್ಟನ್ ಗೋಪಿನಾಥ್ ರವರ ಆತ್ಮಕಥನ “ಬಾನಯಾನ” ದ ಬೆಲೆ ರೂ ೪೨೫. ಕುಂ.ವೀ.ಯವರ ಗಾಂಧಿಕ್ಲಾಸು ರೂ ೨೨೫. ಅತ್ಯಧಿಕ ಮಾರಾಟ ಕಂಡ ಎಸ್.ಎಲ್.ಭೈರಪ್ಪನವರ ಹಾರ್ಡ್ ಬೈಂಡ್ ಕೃತಿ “ಕವಲು” ರೂ ೨೫೦. ಪೇಪರ್ ಬ್ಯಾಕ್ ನಲ್ಲಿ ಕೊಟ್ಟಿದ್ದರೆ ನನಗೆ ಓದಲಿಕ್ಕಾಗುತ್ತಿರಲಿಲ್ಲವೇನೋ? ಪ್ರೋ. ಬಾಲು ಎಂದೇ ಪರಿಚಿತರಾದ ಎಸ್.ಎಲ್.ಬಾಲಗಂಗಾಧರರವರ ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ ರೂ ೪೧೫. ತೇಜಸ್ವಿಯವರ ಮಾಯಾಲೋಕ ರೂ ೧೯೮...ಇತ್ಯಾದಿ.

ಪುಸ್ತಕಗಳ ಬೆಲೆಗಳನ್ನು ನೋಡುತ್ತಿದ್ದರೆ ಏದುಸಿರು ಬರುತ್ತಿರುವಾಗ ಯಾವ ಪುಸ್ತಕವನ್ನು ಕೊಂಡು ಓದುವುದು ಎಂದು ಯೋಚಿಸುತ್ತಿರುವಾಗ ನನಗೆ ಹೊಳೆದದ್ದು ಒಂದೇ ಐಡಿಯಾ! ಮೊದಲು ಶ್ರೀಮಂತನಾಗೋಣ, ನಂತರ ಓದುವ ಹವ್ಯಾಸ ಮುಂದುವರೆಸೋಣ. ನಿವೇನಂತಿರೋ...!?

- ಗುಬ್ಬಚ್ಚಿ ಸತೀಶ್.

ಗುರುವಾರ, ಸೆಪ್ಟೆಂಬರ್ 16, 2010

ಒಂದನೇ ಕ್ಲಾಸ್ ಇಂಗ್ಲೀಷ್ ಡೈಜೆಸ್ಟ್

ಸಂಜೆಯಾಯಿತೆಂದರೆ ತುಮಕೂರಿನ ಎಂ.ಜಿ. ರೋಡಿನಲ್ಲಿ ವಾಹನಗಳಿಂದವಿರಲಿ, ಜನಗಳಿಂದಲೇ ಆಗುವ ತಿಕ್ಕಾಟವನ್ನು ತಪ್ಪಿಸಿಕೊಂಡು ನಡೆಯುವುದು ಕಷ್ಟ. ನನಗೆ ಡ್ರಾಯಿಂಗ್ ಶೀಟ್ಸ್‍ಗಳನ್ನು ತೆಗೆದುಕೊಳ್ಳಬೇಕು. ಅಷ್ಟಕ್ಕೂ ಅದು ನನಗಲ್ಲ. ನನ್ನ ಏಕೈಕ ಹೆಂಡತಿಗೆ. ನೆನ್ನೆ ರಾತ್ರಿಯೇ ಇದರ ಬಗ್ಗೆ ಅವಳು ಹೇಳಿದ್ದಳು. ಸಂಜೆ ಫೋನ್ ಮೂಲಕ ಮತ್ತೊಮ್ಮೆ ಜ್ಞಾಪಿಸಿದ್ದಾಳೆ ಎಂದ ಮೇಲೆ ತೆಗೆದುಕೊಂಡು ಹೋಗಲೇಬೇಕು.


ಗಾಡಿ ಪಾರ್ಕ್ ಮಾಡಿ, ಯಾರಿಗೂ ತಿಕ್ಕದೆ, ತಿಕ್ಕಿಸಿಕೊಳ್ಳದೆ ಪುಸ್ತಕದಂಗಡಿಯ ಬಾಗಿಲ ಬಳಿಗೆ ಬಂದೆ. ಅಂಗಡಿಯ ಮುಂದೆ ಹಲವಾರು ಜನ ವ್ಯಾಪಾರ ಮಾಡುತ್ತಿದ್ದರು. ನಾ ಮೊದಲು ಎಡಗಡೆಗೆ ನಿಂತೆ. ಕಾರಣ, ಬಲಗಡೆ ಹುಡುಗಿಯರು ಹೆಚ್ಚಿದ್ದರು. ಎಡಗಡೆ ಇಬ್ಬರು ಹುಡುಗರಿದ್ದರು. ನಾ ತುಂಬಾ ಹೊತ್ತು ಅಲ್ಲಿನ ಚಲನವಲನಗಳನ್ನು ಗಮನಿಸುತ್ತಾ ನಿಂತೇ ಇದ್ದೆ. ನನ್ನ ಕಡೆಯಿದ್ದ ಆ ಹುಡುಗರು ಬೇಗ ವ್ಯಾಪಾರ ಮುಗಿಸಲೇ ಇಲ್ಲ. ಅಷ್ಟರಲ್ಲಿ ಬಲಗಡೆಯಿದ್ದ ಹುಡುಗಿಯೊಬ್ಬಳು ವ್ಯಾಪಾರ ಮುಗಿಸಿ ಅಲ್ಲಿಂದ ತೆರಳಿದಳು. ನಾನು ಆ ಜಾಗಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಮಧ್ಯವಯಸ್ಕ ಗಂಡಸರೊಬ್ಬರು ಪುಸಕ್ಕನೆ ಬಂದು ನಿಂತರು. ನಿರಾಸೆಯಾಯಿತು.


ಅಂಗಡಿಯಲ್ಲಿ ಇಬ್ಬರು ಕೆಲಸದ ಹುಡುಗರೊಂದಿಗೆ ಅಂಗಡಿಯ ಯಜಮಾನರಿದ್ದರೂ ಗಿರಾಕಿಗಳನ್ನು ಸಂಭಾಳಿಸಲಾಗುತ್ತಿರಲಿಲ್ಲ. ಅಷ್ಟರಲ್ಲಿ ಎಡಗಡೆಯಿದ್ದ ಆ ಇಬ್ಬರು ಹುಡುಗರೂ, ಮತ್ತೊಬ್ಬಳು ಹುಡುಗಿ ನಿರ್ಗಮಿಸಿದರು. ಖಾಲಿಯಾದ ಜಾಗಕ್ಕೆ ಎತ್ತರದಿಂದ ಕೆಳಕ್ಕೆ ಜಿಗಿಯುವ ನೀರಿನಂತೆ ಜಿಗಿದು ನಾನು ಆ ಜಾಗವನ್ನು ಆಕ್ರಮಿಸಿದೆ. ಅದೇ ಸಮಯಕ್ಕೆ ನನ್ನ ಪಕ್ಕಕ್ಕೆ ಒಬ್ಬಳು ಚಿಕ್ಕ ಹುಡುಗಿ, ಮತ್ತೊಬ್ಬಳು ದೊಡ್ಡ ಹುಡುಗಿ ಬಂದರು. ಆ ಚಿಕ್ಕ ಹುಡುಗಿ ತುಸು ಜೋರಾಗಿಯೇ, ‘ಮಮ್ಮಿ, ನಂಗೆ ಅನಿಮಲ್ಸ್ ಚಾರ್ಟ್ ಬೇಕು’, ಎಂದದನ್ನು ಕೇಳಿಸಿಕೊಂಡು ಆ ದೊಡ್ಡ ಹುಡುಗಿಯ ಕಡೆ ನೋಡಿದೆ. ಆ ಹುಡುಗಿ ಚಿಕ್ಕ ಹುಡುಗಿಯ ಅಮ್ಮ!? ಎಂದು ಅರ್ಥಮಾಡಿಕೊಂಡಾಗ, ಸಂತೂರ್ ಸಾಬೂನಿನ ಜಾಹೀರಾತು ನೆನಪಾಗಿ ಮನಸ್ಸಲ್ಲೇ ಮುಗುಮ್ಮಾಗಿ ನಕ್ಕೆ.

‘ಏನ್ಬೇಕು ಸಾರ್’, ಅಂಗಡಿಯ ಹುಡುಗನೊಬ್ಬ ಕೇಳಿದ. ಸಂತೂರ್ ಜಾಹಿರಾತಿನಿಂದ ಹೊರಬಂದವನು ‘ಎಲ್ಲಾ ಕಲರ್‍ದೂ ಒಂದೊಂದು ಡ್ರಾಯಿಂಗ್ ಶೀಟ್ ಕೊಡಪ್ಪ’ ಅಂದೆ. ‘ಎಲ್ಲೊನ ಸಾರ್’ ಎಂದು ಹುಡುಗ ನನ್ನ ಮುಖವನ್ನೊಮ್ಮೆ ನೋಡಿದ. ‘ಅಲ್ಲಪ್ಪಾ, ಎಲ್ಲಾ ಕಲರ್‍ದೂ, means, all colours’ ಎಂದೆ. ‘ಸರಿ ಸಾರ್’, ಎಂದು ಡ್ರಾಯಿಂಗ್ ಶೀಟ್ಸ್ ತರಲು ಅಂಗಡಿಯ ಒಳಕ್ಕೆ ಹೋದ. ಇಂಗ್ಲೀಷ್ ಪೀಡಿತ, ಕನ್ನಡ ಬರ ನಾಡಲ್ಲಿ ‘ಎಲ್ಲಾ’ ಎಂದದ್ದು ಅವನಿಗೆ ‘ಎಲ್ಲೊ’ ಎಂದು ಕೇಳಿಸಿರಬೇಕು.

ಒಳಕ್ಕೆ ಹೋದ ಹುಡುಗನನ್ನು ಕಾಯುತ್ತಾ ನಿಂತ ನನ್ನ ಚಂಚಲ ಕಣ್ಣುಗಳು ಬಲಗಡೆ ನಿಂತಿದ್ದ ಮಧ್ಯವಯಸ್ಕನೆಡೆಗೆ ತಿರುಗಿದವು. ಅರೇ! ಈತ ಇನ್ನೂ ಇಲ್ಲಿಯೇ ನಿಂತಿದ್ದಾರೆ. ಆತ ಅದೇಕೋ ಬೆವರಿದಂತೆ ಕಾಣುತ್ತಿದ್ದರು. ಕರ್ಚೀಪಿನಿಂದ ಮುಖ ಒರೆಸಿಕೊಳ್ಳುತ್ತಾ, ಏನನ್ನೋ ಕೇಳುವುದೋ ಬೇಡವೋ ಎನ್ನುವಂತೆ ನಿಂತಿದ್ದವರು ಇದ್ದಕ್ಕಿದ್ದಂತೆ, ‘ಒಂದನೇ ಕ್ಲಾಸಿನ ಇಂಗ್ಲೀಷ್ ಡೈಜೆಸ್ಟ್ ಕೊಡಿ’, ಎಂದು ಅಂಗಡಿಯ ಯಜಮಾನನನ್ನು ಯಾವುದೋ ತಪ್ಪು ಮಾಡಿದವನು ದಯಮಾಡಿ ಬಿಟ್ಟು ಬಿಡಿ ಎಂದು ಕೇಳುವವನಂತೆ ಕೇಳಿದ. ಇದನ್ನು ಕೇಳಿದ ಯಜಮಾನನು ಈತನೆಡೆಗೆ ತಿರುಗಿಯೂ ನೋಡದೆ, ಒಳಗೊಳಗೇ ನಗುತ್ತಾ, ‘ಒಂದನೇ ಕ್ಲಾಸಿಗೆ ಇಂಗ್ಲೀಷ್ ಡೈಜೆಸ್ಟೇನ್ರಿ? ಅದೇ ಬರಿ ಎ, ಬಿ, ಸಿ, ಡಿ ಇರಬೇಕು ಅಷ್ಟೆ’, ಎಂದು ತಲೆಯೆತ್ತಿ ಆ ಮಧ್ಯವಯಸ್ಕರ ಕಡೆಗೆ ನೋಡಿ ‘ಹ್ಹ ಹ್ಹ ಹ್ಹಾ. . .! ಇಲ್ಲಾರಿ’’ ಎಂದು ಸ್ವಲ್ಪ ಜೋರಾಗಿಯೇ ನಕ್ಕ. ಪಾಪ, ಅವಮಾನವಾದಂತಾಗಿ ತಲೆತಗ್ಗಿಸಿ ಆ ಮಧ್ಯವಯಸ್ಕರು ಅಲ್ಲಿಂದ ತೆರಳಿದರು.

‘ತಗೊಳ್ಳಿ ಸಾರ್ ಡ್ರಾಯಿಂಗ್ ಶೀಟ್ಸ್, ಇಪ್ಪತ್ತು ರೂಪಾಯಿ ಕೊಡಿ’, ಎಂದು ಅಂಗಡಿಯ ಹುಡುಗನು ಅಂದಾಗ, ಇಪ್ಪತ್ತು ರೂಪಾಯಿಗಳನ್ನು ಕೊಟ್ಟು, ಅವನು ಸುತ್ತಿಕೊಟ್ಟ ಶೀಟ್ಸ್ ‍ಗಳನ್ನು ಪಡೆದು, ಯಜಮಾನನೊಮ್ಮೆ ನೋಡಿ ಅಲ್ಲಿಂದ ತೆರಳಿದೆನು.

ಪಾರ್ಕ್ ಮಾಡಿದ್ದ ಜಾಗದಿಂದ ಗಾಡಿಯನ್ನು ತೆಗೆಯಲು ಹೋದವನು, ಅಲ್ಲೇ ಎದುರುಗಡೆಯಿದ್ದ ಜಿಲೇಬಿಯಂಗಡಿಯ ಹತ್ತಿರ ಜಿಲೇಬಿ ತಿನ್ನುತ್ತಿದ್ದ ಪುಸ್ತಕದಂಗಡಿಯಲ್ಲಿದ್ದ ಆ ಮಧ್ಯವಯಸ್ಕರನ್ನು ನೋಡಿದ ಕೂಡಲೇ ಯಾಕೋ ಅಲ್ಲೇ ನಿಂತೆನು. ಜಿಲೇಬಿ ತಿನ್ನುತ್ತಿದ್ದರೂ ಆತ ಬೇಸರದಲ್ಲಿದ್ದನು. ಆತ ಜಿಲೇಬಿ ತಿಂದದ್ದು ಮುಗಿದ ಕೂಡಲೇ ಆತನ ಬಳಿ ಅವಸರವಾಗಿ ನಡೆದು, ‘ಸಾರ್, ನಮಸ್ಕಾರ’ ಎಂದೆ. ಜಿಲೇಬಿಯ ಕಡೆಯ ಚೂರನ್ನು ಬಾಯಲಿಟ್ಟುಕೊಂಡದ್ದರಿಂದಲೋ ಅಥವಾ ಬೇಸರದಿಂದಲೋ ಏನೋ ಆತ ನಮಸ್ಕಾರವೆಂದು ಕೈಯಲ್ಲೇ ಸಂಜ್ಞೆ ಮಾಡಿದರು. ಪರವಾಗಿಲ್ಲ ಇರಲಿ ಎಂದುಕೊಂಡ ನಾನು ಮುಂದುವರಿದು, ‘ಸಾರ್, ಆ ಅಂಗಡಿಯಲ್ಲಿ ತಾವು ಒಂದನೇ ಕ್ಲಾಸ್ ಇಂಗ್ಲೀಷ್ ಡೈಜೆಸ್ಟ್ ಕೇಳುದ್ರಲ್ಲಾ. . . , ಒಂದನೇ ಕ್ಲಾಸ್ ಇಂಗ್ಲೀಷ್ ನಿಮ್ಮ ಮಗುಗೆ ಅಷ್ಟು ಕಷ್ಟ ಆಗ್ತಿದ್ಯಾ ಸಾರ್?’ ಎಂದೆ. ಅದಕ್ಕೆ ಆತ, ಹಿಂದೆ-ಮುಂದೆ, ಮೇಲೆ-ಕೆಳಗೆ ನೋಡುತ್ತಾ, ‘ಅದೇನೋ ಗೊತ್ತಿಲ್ಲ ಸಾರ್. ನಾನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡದ ಗೌರವ ಉಪನ್ಯಾಸಕನಾಗಿ ಕೆಲಸ ಮಾಡ್ತಿದೀನಿ. ನನಗೆ ಇನ್ನೂ ಮಕ್ಕಳಿಲ್ಲ. ನನ್ನ ಹೆಂಡತಿ ಬಿ.ಎ ಮಾಡಿದ್ದಾಳೆ. ಇತ್ತೀಚೆಗೆ ಅವಳಿಗೆ ಪ್ರೈವೇಟ್ ಸ್ಕೂಲಲ್ಲಿ ಕೆಲಸ ಸಿಕ್ಕಿದೆ. ಅದು ಸಿ.ಬಿ.ಎಸ್.ಸಿ ಸಿಲಬಸ್ ಇರೋ ಸ್ಕೂಲಂತೆ! ಅವಳೋದಿದ್ದು ಕನ್ನಡ ಮೀಡಿಯಮ್ಮಿನಲ್ಲಿ. ಕೆಲಸಕ್ಕೆ ಹೋದ ಮೊದಲನೇ ದಿನಾನೇ ಫಸ್ಟ್ ಸ್ಟಾಂಡರ್ಡ್ ಇಂಗ್ಲೀಷು ತುಂಬಾ ಕಷ್ಟ ಕಣ್ರೀ. ನಂಗೊಂದು ಡೈಜೆಸ್ಟ್ ತಂದು ಕೊಡಿ ಅಂದಳು. ಅದಕ್ಕೆ ಅಂತಾ ಬಂದರೆ... ಆ ಅಂಗಡಿಯವನು ಹಂಗಾ ಸಾರ್ ಅನ್ನೋದು’, ಎಂದು ಅಲ್ಲಿಂದ ಸರಸರನೆ ಹೊರಟು ಹೋದರು.

ಅವಕ್ಕಾದ ನಾನು, ‘ಯಾರು ಸರಿ ಅನ್ನೋದು!?’ ಎಂದು ಯೋಚಿಸುತ್ತಾ, ತಲೆಕೆರೆದುಕೊಂಡು ಕ್ಷಣಕಾಲ ನಿಂತಲ್ಲೇ ನಿಂತಿದ್ದೆ.

                                                                               - ಗುಬ್ಬಚ್ಚಿ ಸತೀಶ್

ಬುಧವಾರ, ಸೆಪ್ಟೆಂಬರ್ 1, 2010

ನಿನ್ನ ಮನೆಯ, ನನ್ನ ಮನದ ಲಕ್ಷ್ಮಿಯು ನೀನು...

ಡಿಯರ್ ಲಕ್ಷ್ಮೀ !,

ಇಂದು ವರಮಹಾಲಕ್ಷ್ಮಿ ವ್ರತ. ಇಂದಾದರೂ ದೇವಿಯ ದರ್ಶನವಾಗಬಹುದೆಂದು ಬೆಳಿಗ್ಗೆ ನಾಲ್ಕಕ್ಕೇ ಎದ್ದೆ. ಆಚೆ ಬಂದು ನೋಡಿದರೆ ರಾತ್ರಿ ಕವಿದ ಮೋDaDDaಡ ಇನ್ನೂ ಕರಗಿಲ್ಲ. ತುಂತುರು ಹನಿಯುತ್ತಿತ್ತು. ನಿನ್ನ ನೆನಪಲ್ಲೇ ಮುಖವೊಡ್ಡಿ ನಿಲ್ಲುವ ಆಸೆ. ಜೊತೆಗೆ ಸರಸರನೆ ರೆಡಿಯಾಗಿ, ಯೋಗ, ಧ್ಯಾನ ಮುಗಿಸಿ, ನ್ಯೂಸ್ ಪೇಪರ್ ಓದಿ, ಸರಿಯಾಗಿ ಏಳು ಕಾಲಿಗೆ ರೈಲ್ವೇಸ್ಟೇಶನ್ನಿನ ಎರಡನೇ ಗೇಟಿಗೆ ಬಂದು ನಿಲ್ಲಬೇಕು.

ಒಳಗೆ ಬಂದವನೇ ಬೆಳಗಿನ ಎಲ್ಲಾ ಕೆಲಸಗಳನ್ನು ಮುಗಿಸಿ, ಯೋಗ ಮಾಡಿ, ನಿನ್ನ ಧ್ಯಾನದಲ್ಲೇ ಧ್ಯಾನಕ್ಕೆ ಕುಳಿತೆ. ಕಣ್ಣುಗಳ ಒಳಗೆ ಪ್ರತಿಫಲಿಸುತ್ತಿದ್ದ ನಿನ್ನ ಚಿತ್ರವನ್ನು ಕಣ್ತುಂಬಿಕೊಂಡು ಲಕ್ಷ್ಮೀ ದೇವರಿಗೆ ಎರೆಡೆರಡು ಸಲ ಕೈ ಮುಗಿದೆ. ಆ ದೇವರ ಭಾವಚಿತ್ರವೂ ನಕ್ಕಂತಾಯಿತು. ಅಲ್ಲಿಗೆ ಖಂಡಿತಾ ನಿನ್ನನ್ನು ನೋಡಿಯೇ ತೀರುತ್ತೇನೆಂಬ ಆಸೆಯ ಮೊಗ್ಗು ಬಿರಿದು ಹೂವಾಯಿತು.

ಅಮ್ಮ ಕೊಟ್ಟ ಕಾಫಿ ಕುಡಿದು, ಚಳಿಯಿದ್ದುದರಿಂದ ಜರ್ಕಿನ್ ತೊಟ್ಟು ಹೊರಗೆ ಬಂದರೆ ಕವಳ ಸುರಿಯುತ್ತಿದೆ. ದಾರಿಯೂ ಸರಿಯಾಗಿ ಕಾಣುತ್ತಿಲ್ಲ. ಎಲ್ಲಾ ಮಬ್ಬು; ನನ್ನ ಜೀವನದ ಗುರಿಯಂತೆ. ಪ್ರೀತಿಯ ವಿಷಯದಲ್ಲಿ ನೀನೇ ನನ್ನ ultimate. ಆದರೆ ಜೀವನಕ್ಕೆ ಎಂದು ಒಂದು ಕೆಲಸ ಬೇಕಲ್ಲ? ಅದು ಅಸ್ಪಷ್ಟ. ಅದಾಗಲೇ ಪಕ್ಕದ್ಮನೆ ರತಿ ನೈಟಿಯಲ್ಲೇ ರಂಗೋಲಿ ಹಾಕುತ್ತಿದ್ದವಳು, ನನ್ನನ್ನೇ ನೋಡಲು ಶುರು ಮಾಡಿದಳು. ಅವಳು ಏನು ಮಾಡಿದರೇನು, ನನ್ನ ಕಣ್ಣಲ್ಲೆಲ್ಲಾ ನೀನೇ...

ಇಂದು ವರಮಹಾಲಕ್ಷ್ಮೀ ವ್ರತ. ನಿನ್ನ ಮನೆಯ, ನನ್ನ ಮನದ ಲಕ್ಷ್ಮೀಯು ನೀನು. ನಿಮ್ಮಪ್ಪಾಮ್ಮ ಇವತ್ತು ರಜೆ ಹಾಕಿ ಮನೆಯಲ್ಲಿರು ಎಂದಿರುತ್ತಾರೆ. ಆದರೆ ದೇವರಿಗೆ ದಿಂಡರಿಗೆ ರಜೆ ಹಾಕಿ ಮನೆಯಲ್ಲೇ ಕುಳಿತವಳಲ್ಲ ನೀನು. ಬಿ.ಕಾಂ., ಓದುವಾಗಲೂ ಕಾಲೇಜಿಗೆ ರಜೆ ಕೊಡದ ಹೊರತು ನೀ ಎಂದೂ ಕಾಲೇಜು ತಪ್ಪಿಸಿದವಳಲ್ಲ. ರಜೆ ಸಿಕ್ಕಾಗಲೂ ರಜೆಯನ್ನು ಓದಿಗೆ ಉಪಯೋಗಿಸುತ್ತಿದ್ದ ಶಾರದೆಯು ನೀನು. ಸಾಕ್ಷಾತ್ ಸರಸ್ವತಿ! ಇದೀಗ ತಾನೇ ಬೆಂಗಳೂರಿನ ಆಡಿಟರ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿ ಸಿ.ಎ., ಮಾಡಬೇಕೆಂದಿರುವ ನೀನು ಖಂಡಿತ ರಜೆ ಹಾಕಿರುವುದಿಲ್ಲ ಎನ್ನುವುದು ನನಗೆ ಗೊತ್ತು. ಆದರೂ ಮನದ ಮೂಲೆಯಲ್ಲೆಲ್ಲೋ ಒಂದು ಪುಟ್ಟ ಭಯ ಇಣುಕುತ್ತಿದೆ.

ಸಮಯ ಏಳು ಗಂಟೆ ಐದು ನಿಮಿಷವಾಗಿದೆ. ಸರಸರನೆ ನಡೆದು ಏಳು ಹತ್ತಾಗುವಷ್ಟರಲ್ಲಿ ಸ್ಟೇಶನ್ನಿನ ಎರಡನೇ ಗೇಟ್ ಬಳಿ ಬಂದು ಪ್ಲಾಟ್ ಫಾರಂ ಕಡೆ ನೋಡಿದರೆ ಜನವೋ ಜನ. ಅಲ್ಲಿಗೆ ಇನ್ನೂ ಅರಸೀಕೆರೆಯಿಂದ ಬರುವ ಪುಶ್-ಪುಲ್ ರೈಲು ಗುಬ್ಬಿಯಲ್ಲಿ ನಿನ್ನನ್ನು ಹತ್ತಿಸಿಕೊಂಡು ತುಮಕೂರಿಗೆ ಬಂದಿಲ್ಲ ಎಂದು ಸಮಾಧಾನವಾಯಿತು. ಯಾರೋ ಹತ್ತು ನಿಮಿಷ ಲೇಟು ಅಂದರು. ಅಲ್ಲಿಗೆ ಹದಿನೈದು ನಿಮಿಷಗಳು ಕಾಯಬೇಕು. ಕ್ಷಣಕ್ಷಣವನ್ನೂ ನಿನಗಾಗಿ ಕಾಯುತ್ತಿರುವವನಿಗೆ ಅದೇನು ದೊಡ್ಡದಲ್ಲ. ಆದರೆ,

ಕಾದೆ ಕಾದೆ ಕಾದೆ
ನೀನು ಮಾತ್ರ ಬರದೆ ಹೋದೆ
ಓ ನನ್ನ ರಾಧೆ...

ಎಂದಾಗಬಾರದೆಂದು ಮತ್ತೊಮ್ಮೆ ಲಕ್ಷ್ಮೀ ದೇವರಿಗೆ ಮನದಲ್ಲೇ ಕೈ ಮುಗಿದೆ.

ರೈಲಿನ ಮೊದಲ ಬೋಗಿ ಸರಿಯಾಗಿ ಎರಡನೇ ಗೇಟಿನ ಬಳಿ ಬಂದು ನಿಲ್ಲಬೇಕು. ನೀ ಯಾವಾಗಲೂ ಮೊದಲ ಬೋಗಿಯಲ್ಲೇ ಇರುತ್ತೀಯೆಂದು ಗೊತ್ತು. ಕ್ಲಾಸಿನಲ್ಲೂ ಮೊದಲ ಬೆಂಚಿನಲ್ಲೇ ಕುಳಿತಿರುತ್ತಿದ್ದೆ. ನಾನು ಹಿಂದಿನ ಬೆಂಚಿನಿಂದ ಪಾಠ ಕೇಳುತ್ತಾ ಕೇಳುತ್ತಾ ನಿನ್ನ ಕಡೆಗೇ ದೃಷ್ಟಿ ನೆಟ್ಟು ಬಿಡುತ್ತಿದ್ದೆ. ಈಗಲೂ ಅದೇ ಜಾಯಮಾನದವಳು ನೀನು. ಮುಂದೆ ಬನ್ನಿ ಎಂದು ಯಾರೂ ಹೇಳುವುದೇ ಬೇಡ ನಿನಗೆ. ರೈಲು ಬರುವುದಕ್ಕೆ ಇನ್ನೂ ಸಮಯವಿದೆ. ಅಷ್ಟರಲ್ಲಿ ರೈಲಿನ ಕೊನೆಯ ಬೋಗಿ ನಿಲ್ಲುವ ಬಳಿ ಇರುವ ಪುಸ್ತಕದಂಗಡಿಯಲ್ಲಿ ಹೊಸ Competition success review ತಗೋಬೇಕು. ಅದೆಷ್ಟು ವರ್ಷಗಳಿಂದ ನೀನು ಈ ಮ್ಯಾಗಜಿನ್ ಓದುತ್ತಿದ್ದೀಯೋ? ನನಗಂತೂ ನಿನ್ನಲ್ಲಿ ಮೋಹ ಹುಟ್ಟಿದ ಮರುಗಳಿಗೆಯಿಂದಲೇ ನೀ ಯಾವಾಗಲೂ ನಿನ್ನೆದೆಗೆ ಅವುಚಿಕೊಂಡಿರುತ್ತಿದ್ದ ಕಾಲೇಜಿನ ಪುಸ್ತಕಗಳ ಜೊತೆಗಿರುತ್ತಿದ್ದ ಈ ಮ್ಯಾಗಜಿನ್ ಬಗೆಗೂ ವ್ಯಾಮೋಹ ಹುಟ್ಟಿ ಬಿಟ್ಟಿತು. ಸರಿಯಾಗಿ ಓದುವುದು ಬೇರೆ ಮಾತು, ಆದರೂ ಇನ್ನಾದರೂ ಚೆನ್ನಾಗಿ ಓದಿ ಯಾವುದಾದರೂ ಬ್ಯಾಂಕ್‍ನಲ್ಲಿ ಕೆಲಸ ಗಿಟ್ಟಿಸಬೇಕು ಅನ್ನಿಸುತ್ತಿದೆ. ಆವಾಗಲಾದರೂ ನೀನು ನನ್ನನ್ನು ಒಪ್ಪಬಹುದು ಎನ್ನುವ ಆಸೆ!

ಪ್ಲಾಟ್ ಫಾರಂ ತುಂಬಾ ಜನ. ಈ ತುದಿಯಿಂದ ಆ ತುದಿಗೆ ಹೋಗಿ ಬರುವುದು ಹರಸಾಹಸವೇ ಸರಿ. ಆದರೂ ಹೊರಟೆ. ಅಲ್ಲೊಬ್ಬಳು ಪಕಪಕನೆ ನಗುತ್ತಿದ್ದಳು. ಅಲ್ಲಿದ್ದ ಹುಡುಗರೆಲ್ಲರೂ ಅವಳನ್ನು ತಿನ್ನುವಂತೆ ನೋಡುತ್ತಿದ್ದರು. ಯಾವ ಹುಡುಗಿ ನಕ್ಕರೆ ನನಗೇನು? ನಿನ್ನ ಮಂದಸ್ಮಿತ ಮುಖದ ಹೊರತು ನನಗಿನ್ಯಾವ ನಗುವೂ ಬೇಕಿಲ್ಲ. ಜನಸಂದಣಿ ಬಹಳವಿದ್ದುದರಿಂದ ಪುಸ್ತಕದಂಗಡಿ ತಲುಪುವಷ್ಟರಲ್ಲಿ ಹನ್ನೆರಡು ನಿಮಿಷ ಮುಗಿದು ಹೋಗಿತ್ತು. ಐವತ್ತರ ನೋಟೊಂದನ್ನು ತೆಗೆದು ಅಂಗಡಿಯವನ ಕೈಗಿತ್ತು, Competition success review ಎಂದೆ. ಅವನ ಕೈಯಿಂದ ನನ್ನ ಕೈಗೆ ಮ್ಯಾಗಜಿನ್ ಬಂದ ತಕ್ಷಣ, ಅಲ್ಲಿದ್ದವರಲ್ಲಿ ಯಾರೋ ‘ಟ್ರೈನು ಬಂತು...’ ಎಂದರು. ಗುಬ್ಬಿಯ ದಾರಿಯ ಕಡೆ ನೋಡಿದರೆ ಅದಾಗಲೇ ನೀ ಬರುತ್ತಿದ್ದ ರಥ ಬರುತ್ತಿತ್ತು. ಈ ಜನಸಂದಣಿಯಲ್ಲಿ ಮತ್ತೆ ಹಿಂದಕ್ಕೆ ಹೋಗುವುದು ಬೇಡ ಎಂದು ಅಲ್ಲೇ ಸ್ಥಬ್ತನಾದೆ. ರೈಲಿನ ಇಂಜಿನ್ನು ನನ್ನನ್ನು ದಾಟಿ ಮುಂದಕ್ಕೆ ಹೋಯಿತು. ಅದರ ಹಿಂದೆಯೇ ಇದ್ದ ಬೋಗಿಯ ಮೊದಲ ಕಿಟಕಿಗೆ ಆತು, ಕೈಯನ್ನು ಗಲ್ಲಕ್ಕೆ ಕೊಟ್ಟು ಕೂತಿದ್ದವಳು ನೀನೇನಾ?

ಸರಿಯಾಗಿ ನೋಡುವಷ್ಟರಲ್ಲಿ ರೈಲು ಮುಂದೆ ಮುಂದೆ, ನಾನು ಹಿಂದೆ ಹಿಂದೆ... ಆ ಜನಗಳ ಸುಳಿಯಲ್ಲಿ ಸುಳಿದು ಎರಡನೇ ಗೇಟಿನ ಬಳಿ ಬರುವುದು ಸಾಧ್ಯವಿಲ್ಲವೆನ್ನಿಸಿತು. ಮಾಡುವುದೇನು? ನಿನ್ನ ಪ್ರೀತಿಯ ವಿಚಾರದಲ್ಲಿ ಮಾತ್ರ ಸೂಪರ್ ಟ್ರೈನಿಗಿಂತ ವೇಗವಾಗಿ ಓಡುತ್ತದೆ ನನ್ನ ತಲೆ. ರೈಲು ನಿಂತ ತಕ್ಷಣ ಅದರ ಹಿಂಬದಿಗೆ ಹೋಗಿ ಪ್ಲಾಟ್ ಫಾರ್ಂನ ಇನ್ನೊಂದು ಮಗ್ಗುಲಿಗೆ ಜಿಗಿದು ಮೊದಲ ಬೋಗಿಯ ಕಡೆ ಓಡಲು ಶುರು ಮಾಡಿದೆ. ಚಿರತೆಯ ಓಟ. ಒಂದೇ ನಿಮಿಷದಲ್ಲಿ ಮೊದಲ ಬೋಗಿಯ ಬಳಿ ಬಂದು ನೋಡಿದರೆ ಅಲ್ಲಿ ನೀನಿಲ್ಲ! ಬೋಗಿಯ ಒಳಗೆಲ್ಲಾ ಕಣ್ಣಾಡಿಸಿದರೂ ನೀನು ಕಾಣುತ್ತಿಲ್ಲ. ಹೇಗಾಗಬೇಕು ನನ್ನ ಜೀವಕ್ಕೆ? ಇನ್ನು ನಾಲ್ಕೇ ನಿಮಿಷದಲ್ಲಿ ರೈಲು ಹೊರಡುತ್ತದೆ. ಹುಡುಕುವುದೆಲ್ಲಿ? ಸುಮ್ಮನೆ ನಿಂತು ಬಿಟ್ಟೆ. ಲಕ್ಷ್ಮೀ ದೇವರ ಕೃಪೆಯಿದ್ದರೆ ಖಂಡಿತಾ ಇಂದು ನಿನ್ನನ್ನು ನೋಡಿಯೇ ತೀರುತ್ತೇನೆ. ನಿನಗೇ ಗೊತ್ತಲ್ಲ ಚಿನ್ನು, ನಾನೊಬ್ಬ stubborn optimist...

ರೈಲು ಹೊರಟೇ ಬಿಟ್ಟಿತು. ನಾ ನಿಂತಲ್ಲೇ ಅದು ಮುಂದೆ ಮುಂದೆ... ಎಲ್ಲಾ ಬೋಗಿಗಳ ಕಿಟಕಿಗಳು, ಬಾಗಿಲುಗಳು ಮೆಲ್ಲಮೆಲ್ಲನೆ ಮುಂದೆ ಸಾಗುತ್ತಿವೆ. ರೈಲಿನ ವೇಗವೂ ಹೆಚ್ಚುತ್ತಿದೆ. ನನ್ನ ಹೃದಯದ ಬಡಿತದಂತೆ. ಅಯ್ಯೋ! ಕಡೆ ಬೋಗಿಯೂ ಬಂತಲ್ಲಪ್ಪಾ ದೇವ್ರೇ!! ಎಂದುಕೊಳ್ಳುವಷ್ಟರಲ್ಲಿ ತಿಳಿ ಹಳದಿ ಚೂಡೀದಾರ್‍ನಲ್ಲಿ ಎಂದೂ ಮಾಸದ ಮಂದಸ್ಮಿತವನ್ನು ಸೂಸುತ್ತಾ, ಕೈಯಲ್ಲಿ ಹೊಚ್ಚಹೊಸ com Competition success review ಹಿಡಿದು ನಿಂತಿದ್ದೆಯಲ್ಲೇ ನನ್ನ ಲಕ್ಷ್ಮೀ...! ಆ ಲಕ್ಷ್ಮೀಯೇ, ಸಾಕ್ಷಾತ್ ವರಮಹಾಲಕ್ಷ್ಮಿಯೇ ಧರೆಗಿಳಿದಂತಾಯಿತು ಕಣೇ ಹುಡುಗಿ. ನನ್ನ ಬದುಕು ಹಬ್ಬದ ದಿನವೇ ಪಾವನವಾಯಿತು. ವ್ರತ ಫಲಿಸಿತು... ಬದುಕು ಅರಳಲು ಇನ್ನೆಷ್ಟು ಹೊತ್ತು ಹೇಳು?


ಎಂದೆಂದೂ ನಿನ್ನ ಆರಾಧಕ,

- ಗುಬ್ಬಚ್ಚಿ ಹುಡುಗ

ಸೋಮವಾರ, ಆಗಸ್ಟ್ 23, 2010

ಅಣ್ಣನ ಜನುಮದಿನ

ಅಣ್ಣಾ, ಇಂದು ನಿಮ್ಮ ಜನುಮದಿನ

ಈ ಪುಟ್ಟ ತಂಗಿಯ ಸಂಭ್ರಮದ ದಿನ

ಅಪ್ಪ ಅಮ್ಮನ ಪ್ರೀತಿಗೆ ಗರಿಯಿಟ್ಟ ದಿನ

ನಮ್ಮೆಲ್ಲರಿಗೂ ಇದುವೇ ಶುಭದಿನ !


ಕಣ್ಣ ಮುಂದೆಯೇ ಇದೇ

ಮೈಸೂರು ಕಾಣದ ದಸರಾ

ನಿಮ್ಮ ಬೆನ್ನ ಮೇಲೆ ನನ್ನ ಅಂಬಾರಿ


ಇಂದೂ ಕೂಡ ಹೊಳೆಯುತ್ತಿದೆ !

ಅಪ್ಪ ಬೈದಾಗ, ಅಮ್ಮ ಹೊಡೆದಾಗ

ನೀವು ಸಂತೈಸಿ ಹಣೆಗಿಟ್ಟ ಮುತ್ತು !


ಇವತ್ತಿಗೂ ಹಸಿಯಾಗಿಯೇ ಇದೇ

ನಾ ಜಾರಿಬಿದ್ದಾಗ, ಕಾಲೆಡವಿದಾಗ

ಕಣ್ಣೀರ ಸುರಿಸುತ್ತಾ, ನೀವು ಹಚ್ಚಿದ ಎಂಜಲು !


ದಿನದಿನವೂ ಸಿಹಿ ಹೆಚ್ಚುತ್ತಲೇ ಇದೇ

ಕದ್ದು ನಾವಿಬ್ಬರೇ ಮೇಯ್ದ ಕೊಬ್ಬರಿ ಬೆಲ್ಲ

ನೀವು ಗೋಳಾಡಿಸಿ ಕೊಟ್ಟ ಚಾಕ್ ಲೇಟ್!


ಪ್ರತಿ ಹೆಜ್ಜೆಯಲ್ಲೂ ಬೆಳಕಾಗಿಯೇ ಇದೆ

ಕತ್ತಲಲ್ಲಿ ನಾ ತಪ್ಪೆಜ್ಜೆಯಿಟ್ಟಾಗ

ನೀವು ಹಚ್ಚಿಟ್ಟ ದೀಪ!


ಅಣ್ಣಾ, ಇಂದು ನಿಮ್ಮ ಜನುಮದಿನ

ಅದೇಕೋ ಕಾಣೇ ಆನಂದ ಬಾಷ್ಪ

ನೀವು ಪ್ರೀತಿಯಿಂದ ಒರೆಸಲೆಂದಿರಬೇಕು!

ಆರೋಗ್ಯ, ಐಶ್ವರ್ಯದಿಂದ ನೀವು

ನೂರಾರು ವರುಷ ಹರುಷದಿಂದ ಬಾಳಬೇಕು.

                             ನಿಮ್ಮ ಮುದ್ದಿನ

                             ಪೆದ್ದು ಪೆದ್ದಾದ

                                  ತಂಗಿ
                                         

ಇದು ಭಾರತದ “ಅಮೃತ ಕಾಲ”ವೇ!?

  ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ. ʼಭಾರತ ಬದಲಾಗಿದೆ! ಯಾರದ್ದ...