ಭಾನುವಾರ, ಮೇ 10, 2015

ರಜನಿ ನರಹಳ್ಳಿಯವರ ‘ಆತ್ಮವೃತ್ತಾಂತ’ : ಆತ್ಮಸಂಗಾತಿಗೆ ಅಕ್ಷರಗಳ ಶ್ರದ್ಧಾಂಜಲಿ

       

        ನಾನು ಮತ್ತು ನನ್ನ ಶ್ರೀಮತಿ ತುಮಕೂರಿನ ಶ್ರೀಮತಿ ಎಂ.ಸಿ. ಲಲಿತಾರವರ ಮನೆಗೆ ನನ್ನ ನಾಲ್ಕನೇ ಪುಸ್ತಕ, ಮೊದಲ ಕಥಾಸಂಕಲನ  ಉಘೇ ಉಘೇ ಪುಸ್ತಕ ಬಿಡುಗಡೆ ಕಾಯಕ್ರಮಕ್ಕೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಬೇಕೆಂದು ಕೋರಲು ಹೋಗಿದ್ದೆವು. ಅವರು ಅದಾಗಲೇ ನನ್ನ ಮುಗುಳ್ನಗೆ ಕಾದಂಬರಿ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂದು ನನಗೆ ಶುಭ ಹಾರೈಸಿದ್ದರು. ಆದರೂ, ಮತ್ತೆ ಅವರನ್ನೇ ಕರೆಯಲು ಬಲವಾದ ಒಂದು ಕಾರಣವಿತ್ತು. ಅದೇನೆಂದರೆ, ಅವರು ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗ ಏರ್ಪಡಿಸಿದ್ದ ಕಥಾಸ್ಪರ್ಧೆಯಲ್ಲಿ ನನ್ನ ಟ್ಯೂಷನ್ ಫೀಸು ಕಥೆಗೆ ಎರಡನೇ ಬಹುಮಾನ ಬಂದಿತ್ತು. ಮತ್ತು ಆ ನಂತರವೂ ಅವರ ಅನನ್ಯ ಸಾಂಸ್ಕೃತಿಕ ವೇದಿಕೆಯ ಕಥಾಸ್ಪರ್ಧೆಯಲ್ಲಿ ಅಂಕುರ ಕಥೆಗೆ ಸಮಾಧಾನಕರ ಬಹುಮಾನವೂ ಬಂದಿತ್ತು. ಅವರು ನನ್ನೊಳಗಿದ್ದ ಕಥೆಗಾರನಿಗೆ ವೇದಿಕೆ ಕಲ್ಪಿಸಿಕೊಟ್ಟರೆಂಬ ಅಭಿಮಾನದ ಮೇರೆಗೆ ಅವರೇ ಮುಖ್ಯ ಅತಿಥಿಗಳಾಗಿ ಬರಲಿ ಎಂದು ಆಶಿಸಿದ್ದೆ. ಸಾಮಾನ್ಯವಾಗಿ ನಮ್ಮ ಗೋಮಿನಿ ಪ್ರಕಾಶನದ ಯಾವುದೇ ಕಾರ್ಯಕ್ರಮಕ್ಕೂ ಒಮ್ಮೆ ಅತಿಥಿಗಳಾಗಿ ಬಂದವರನ್ನು ಅತಿಥಿಗಳಾಗೇ ಮತ್ತೆ ಕರೆಯಬಾರದೆಂಬ ಅಲಿಖಿತ ನಿಯಮವಿದ್ದರೂ ಅವರ ಮೇಲಿನ ಅಭಿಮಾನದಿಂದ ನಾವು ಅಂದು ಅವರ ಮನೆಯಲ್ಲಿದ್ದವು.

        ಅಂದು ಅವರ ಮನೆಯಲ್ಲಿ ನನ್ನ ಶ್ರೀಮತಿಯ ಕಣ್ಣಿಗೆ ರಜನಿ ನರಹಳ್ಳಿಯವರ ಆತ್ಮವೃತ್ತಾಂತ (ಕಾದಂಬರಿ) ಪುಸ್ತಕವು ಕಂಡಿತು. ಅವಳು ಆ ಪುಸ್ತಕವನ್ನು ಕೈಗೆತ್ತಿಕೊಂಡು ಮುಖಪುಟದ ಮೇಲೊಮ್ಮೆ ಅತೀವ ಕಕ್ಕುಲತೆಯಿಂದ ಕಣ್ಣಾಡಿಸಿ, ಮೇಡಮ್, ಈ ಪುಸ್ತಕವನ್ನು ಓದಿ ಕೊಡುತ್ತೇನೆ ಎಂದು ತೆಗೆದುಕೊಂಡಳು. ಮೇಡಮ್ ಮನೆಯಲ್ಲಿ ಹಲವು ಪುಸ್ತಕಗಳಿದ್ದರೂ, ನನ್ನ ಬಳಿಯಿದ್ದ ಹಲವು ಪುಸ್ತಕಗಳನ್ನು ಮೊದಲು ಓದೋಣವೆಂದು ನಾನೆಂದೂ ಅವರನ್ನು ಪುಸ್ತಕ ಕೇಳಿರಲಿಲ್ಲ. ಮೇಡಮ್ಮು ಸಹ ಆ ಪುಸ್ತಕವನ್ನು ಹೊಗಳಿ ಒಂದೆರೆಡು ನಿಮಿಷ ಮಾತನಾಡಿ, ಮನೆಯಲ್ಲಿ ಸಾಕಿದ ನಾಯಿಯ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ,  ಓದಿ ಎಂದರು.

        ನಮ್ಮ ಮನೆಗೆ ಸಾಮಾನ್ಯವಾಗಿ ಯಾವುದೇ ಪುಸ್ತಕ ಬಂದರೂ ಮೊದಲು ಓದುವುದು ನಾನೇ ಆದ್ದರಿಂದ ರಘು ಅಪಾರರವರ ಮುಖಪುಟವೇ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಮಾಡಿಬಿಟ್ಟಿತು. ಧಾರವಾಡದ ಮನೋಹರ ಗ್ರಂಥಮಾಲೆಯ ಪ್ರಕಟಣೆಯೆಂದರೆ (ಶ್ರೀಮತಿ ಎಂ.ಸಿ. ಲಲಿತಾರವರು ಮನೋಹರ ಗ್ರಂಥಮಾಲೆಯ ಚಂದಾದಾರರು. ಆ ಕಾರಣ ಈ ಪುಸ್ತಕ ಅವರ ಮನೆಯಲ್ಲಿತ್ತು) ಪುಸ್ತಕದ ಅಚ್ಚುಕಟ್ಟುತನ ಪುಟಪುಟದಲ್ಲೂ ಅಚ್ಚಾಗಿರುತ್ತದೆ. ಮತ್ತು ಪುಸ್ತಕದ ಬಗ್ಗೆ ಮೊದಲೇ ನನಗೆ ಗೊತ್ತಿದ್ದರಿಂದ ಓದಲು ಶುರು ಮಾಡಿದೆ.

        ಪುಸ್ತಕದ ಪ್ರಕಾಶಕರೇ ಇದು ವಿನೂತನ ಪ್ರಯೋಗ, ಲೇಖಕರು ಪರಕಾಯ ಪ್ರವೇಶ ಮಾಡಿ ಅತ್ಯಂತ ನಿಕಟ ಆತ್ಮಸಂಗಾತಿ (ನಾಯಿ) ಯ ಮೂಲಕ ಕತೆ ಹೇಳಲು ತೊಡಗುತ್ತಾರೆ ಎಂದು ಹೇಳುತ್ತಾ ಪುಸ್ತಕದ ವಿವಿಧ ಮಜಲುಗಳ ಬಗ್ಗೆ ಸಂಕ್ಷಿಪ್ತವಾಗಿ ಬರೆದಿದ್ದಾರೆ. ಇನ್ನು ಲೇಖಕಿ ರಜನಿ ನರಹಳ್ಳಿಯವರು (ಕನ್ನಡದ ಖ್ಯಾತ ವಿಮರ್ಶಕರಲ್ಲೊಬ್ಬರಾದ ಡಾ|| ನರಹಳ್ಳಿ ಬಾಲಸುಬ್ರಮಣ್ಯರ ಶ್ರೀಮತಿ) ಆತ್ಮವೃತ್ತಾಂತ ದ ವೃತ್ತಾಂತವೆಂದು ತಮ್ಮ ಅನಿಸಿಕೆಯನ್ನು ತಾಜ್ ಮಹಲ್ ಆಥವಾ ಸಮಾಧಿ ಕಟ್ಟದೆ, ಬಿಳಿಯ ಕಾಗದದ ಮೇಲೆ ಕಪ್ಪು ಅಕ್ಷರಗಳ ಮೂಲಕ ಶ್ರದ್ಧಾಂಜಲಿ ಯಾಗಿ ತಮ್ಮ ಮತ್ತು ಕುಟಂಬದ ಪ್ರೀತಿ ಪಾತ್ರವಾಗಿ ಎರಡು ತಿಂಗಳ ಮರಿಯಿಂದ ಹದಿನಾಲ್ಕುವರೆ ವರ್ಷದ ವೃದ್ಧಾಪ್ಯದವರೆಗೂ ಬದುಕಿ ಬಾಳಿದ ಮುದ್ದು ಲಿಯೋ ಸವಿನೆನಪನ್ನು ದಾಖಲಿಸಿದ್ದೇನೆ ಎಂದಿದ್ದಾರೆ.

        ಈ ಕಾದಂಬರಿಯ ವಸ್ತು ನಾಯಿ ಮತ್ತದರ ಬಾಳು. ಜೊತೆಗೆ ಅದರ ಹಿಂದಿನ ತಲೆಮಾರಿನ ನಾಯಿಗಳ ಆತ್ಮಕತೆಗಳು ಸೇರಿಕೊಂಡಿವೆ. ಇದೆಲ್ಲವನ್ನು ನಾಯಿಯನ್ನು ಸಾಕಿ ಸಲಹುವ ಅಮ್ಮ (ಲೇಖಕಿ) ನಾಯಿಯ ಪರಕಾಯ ಪ್ರವೇಶ ಮಾಡಿ ನಿರೂಪಿಸುತ್ತಾ ಹೋಗುತ್ತಾರೆ. ಅದಮ್ಯ ಜೀವನ ಪ್ರೀತಿಯಿಂದ, ಅತೀವ ಸೂಕ್ಷ್ಮ ಸಂಗತಿಗಳಿಂದ, ವೈಚಾರಿಕತೆಯ ದೃಷ್ಟಿಕೋನದಿಂದ ಈ ಪುಸ್ತಕ ಸುಲಭವಾಗಿ ಓದಿಸಿಕೊಳ್ಳುತ್ತದೆ. ಬರೀ ಓದುವ ಹವ್ಯಾಸವುಳ್ಳವರಿಗೆ ಈ ಪುಸ್ತಕ ರಸದೌತಣ ಬಡಿಸಿದರೆ, ಬರೆಯುವವರಿಗೆ ಬರವಣಿಗೆಯ ಶ್ರದ್ದೆಯ ಪ್ರತೀಕದಂತೆ ತೋರಲೂಬಹುದು. ಇನ್ನೂ ಪ್ರಾಣಿಪ್ರಿಯರಿಗೆ (ಅದರಲ್ಲೂ ನಾಯಿ ಸಾಕಿದ್ದವರಿಗೆ, ಸಾಕುತ್ತಿರುವವರಿಗೆ) ಕಣ್ಣಂಚಿನಲ್ಲಿ ನೀರು ತರಬಹುದು. ಓದಿದ ಮೇಲು ಕಾಡುವ ಹಲವು ಪುಸ್ತಕಗಳಲ್ಲಿ ಈ ಪುಸ್ತಕವು ನಿಮ್ಮ ಮನಸ್ಸಿನಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ.

        ಇನ್ನು ಮುನ್ನುಡಿ ಬರೆದಿರುವ ಖ್ಯಾತ ವಿಮರ್ಶಕರಾದ ರಹಮತ್ ತರೀಕೆರೆಯವರ ಮಾತುಗಳು ತುಂಬಾ ಮೌಲಿಕವಾಗಿವೆ. ಬೆನ್ನುಡಿ ಬರೆದಿರುವ ಖ್ಯಾತ ಲೇಖಕಿ ವೈದೇಹಿಯವರೂ ಕೂಡ ಯಾರೂ ಮುಖ್ಯರಲ್ಲ, ಯಃಕಶ್ಚಿತ್ ಹುಳುವೂ ಅಮುಖ್ಯವಲ್ಲ ಎಂಬ ಮಾತುಗಳನ್ನು ಎತ್ತಿ ಹಿಡಿದು ಇದೊಂದು ಕನ್ನಡ ಕಂಡ ಅಪರೂಪದ ಕೃತಿಯೇ ಸರಿ ಎಂದಿದ್ದಾರೆ. ಇಲ್ಲಿ ಯಾರ ಮಾತಲ್ಲೂ ಅತಿಶಯೋಕ್ತಿಯಿಲ್ಲ ಎಂಬುದನ್ನು ಗಮನಿಸಬೇಕಿದೆ. ಯಾಕೆಂದರೆ ಪುಸ್ತಕ ಅಷ್ಟು ಚೆನ್ನಾಗಿದೆ.

        ಈ ಪುಸ್ತಕವನ್ನು ಒಂದೇ ಉಸಿರಿಗೆ ಅರ್ಧಭಾಗ ಓದಿದೆನಾದರೂ, ಉಳಿದ ಭಾಗವನ್ನು ಬೇಗ ಓದಿ ಮುಗಿಸಲಾಗಲಿಲ್ಲ. ಒಂದು ಬೆಳಿಗ್ಗೆ ಹಾಲು ತರಲು ಹೋದಾಗ ಸಿಕ್ಕಿದ ಶ್ರೀಮತಿ ಎಂ.ಸಿ.ಲಲಿತಾರವರು ಪುಸ್ತಕವನ್ನು ಅವರ ಸ್ನೇಹಿತೆಯೊರಬ್ಬರು ಓದುಲು ಕೇಳುತ್ತಿದ್ದಾರೆಂದು ಹೇಳಿದಾಗ, ಎಚ್ಚೆತ್ತಕೊಂಡ ನಾನು ಮತ್ತೆ ಮೂರು ದಿನದ ಅವಧಿ ಕೇಳಿ ಅಷ್ಟರಲ್ಲಿ ಓದಿ ಮುಗಿಸಿದೆ. ಇಷ್ಟು ದಿನ ಒಂದು ಒಳ್ಳೆಯ ಪುಸ್ತಕವನ್ನು ಓದದೇ ಇದ್ದದ್ದಕೆ ಪಶ್ಚತ್ತಾಪವನ್ನೂ ಪಟ್ಟೆ. ಇನ್ನೂ ಓದುತ್ತೇನೆ ಎಂದು ಪುಸ್ತಕ ಕೇಳಿ ತಂದಿದ್ದ ನನ್ನ ಶ್ರೀಮತಿ ಪುಸ್ತಕದ ಆದಿ-ಅಂತ್ಯವನ್ನು ಯಾವಗಲೋ ಓದಿದ್ದರಿಂದ ಆಗಾಗ ನಮ್ಮ ಮನೆಯಲ್ಲಿ-ಮನಸ್ಸಲ್ಲಿ ಈ ಪುಸ್ತಕದ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ.

        ಮುನ್ನುಡಿಯಲ್ಲಿ ರಹಮತ್ ತರೀಕೆರೆ ಸರ್,  ನಾನು ನಾಯಿಯನ್ನು ಭೈರವನ ವಾಹನವೆಂದು ಆರಾಧಿಸುವ ನಾಥಪಂಥದ ಅಧ್ಯಯನ ಮಾಡಿದವನು. ಸ್ವತಃ ನಾಯಿ ಸಾಕಿ ಅದರ ಪಾಡನ್ನು ಪಟ್ಟವನು ಮತ್ತು ಅದರ ಬಗ್ಗೆ ಬರೆದವನು. ಸ್ವಾರಸ್ಯಕರವಾದ ಈ ಕಾದಂಬರಿ ಓದು ನನಗೆ ಖುಶಿ ಕೊಟ್ಟಿದೆ. ಈ ಖುಶಿಯು ಎಲ್ಲ ಓದುಗರಿಗೂ ಸಿಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ನನಗೂ ಅಷ್ಟೇ. ನಾಯಿ ಸಾಕಿದ ಅನುಭವವಿದೆ. ನಾಯಿಯನ್ನೇ ಕೇಂದ್ರವಾಗಿರಿಸಿಕೊಂಡು ಬರೆದ ದೋಬಿಘಾಟಿನ ಗೆಳೆಯರು ಎಂಬ ಲಲಿತ ಪ್ರಬಂಧಕ್ಕೆ ಸುಧಾ ಯುಗಾದಿ ವಿಶೇಷಾಂಕ -೨೦೧೫ ರ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಬಂದಿದೆ. ನಾನೂ ಹೇಳುತ್ತಿದ್ದೇನೆ ಈ ಪುಸ್ತಕವನ್ನು ನೀವೂ ಓದಿ, ನಿಮ್ಮ ಓದಿನ ಖುಶಿಯನ್ನು ಹೆಚ್ಚಿಸಿಕೊಳ್ಳಿ, ಮತ್ತಷ್ಟು ವಿಸ್ತರಿಸಿಕೊಳ್ಳಿ.

        ಅಂದಹಾಗೆ, ಈ ಪುಸ್ತಕಕ್ಕೆ ೨೦೧೩ನೇ ಸಾಲಿನ ತುಮಕೂರಿನ ವೀಚಿ ಸಾಹಿತ್ಯ ಪ್ರಶಸ್ತಿ ದೊರೆತಿದೆ.  ಧಾರವಾಡ ಶ್ರೀಮತಿ ರತ್ನಮ ಹೆಗ್ಗಡೆ ಪ್ರಶಸ್ತಿಗೆ ಆಯ್ಕೆಯಾದ ಮೂರು ಪುಸ್ತಕಗಳಲ್ಲಿ ಇದೂ ಒಂದು. ಮತ್ತೊಂದು ಪುಸ್ತಕ ನಮ್ಮ ಗೋಮಿನಿ ಪ್ರಕಾಶನದಿಂದ ಪ್ರಕಟವಾದ ಶ್ರುತಿ ಬಿ.ಎಸ್.ರವರ ಬದುಕ ದಿಕ್ಕು ಬದಲಿಸಿದ ಆಸ್ಟೀಯೋ ಸರ್ಕೋಮ ಎಂಬುದು ನಮ್ಮ ಬೋನಸ್ ಖುಶಿ.

        ಲೇಖಕಿ ಶ್ರೀಮತಿ ರಜನಿ ನರಹಳ್ಳಿಯವರಿಗೆ ಈ ಮೂಲಕ ಅಭಿನಂದನೆಗಳು. ಪುಸ್ತಕ ಕೊಟ್ಟ ಶ್ರೀಮತಿ ಎಂ.ಸಿ. ಲಲಿತಾರವರಿಗೆ ನಮ್ಮ ಧನ್ಯವಾದಗಳು. ಪುಸ್ತಕ ಹಿಂದಿರುಗಿಸಲು ಹೋದಾಗ ಅವರು ಸಾಕಿದ್ದ ನಾಯಿಯ ನೆನೆದು ಅವರ ಕಣ್ಣುಗಳು ಒದ್ದೆ ಒದ್ದೆ.

                                                        -       ಪ್ರೀತಿಯಿಂದ,
                                                               ಗುಬ್ಬಚ್ಚಿ ಸತೀಶ್.







2 ಕಾಮೆಂಟ್‌ಗಳು:

ನೀರು (ಪುಟ್ಟ ಕತೆ)

  ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹ...