ಗುರುವಾರ, ಫೆಬ್ರವರಿ 9, 2012

ನದಿಗೆ ಬೇಕಿರಲಿಲ್ಲ ಸಾವು.

ಆತುರದಿ ತವರುಮನೆ ತೊರೆದು
ಸಿಕ್ಕ ಸಿಕ್ಕ ಜಾಗಗಳಲ್ಲಿ ಹರಿದು
ಅನ್ನದಾತನಿಗೆ ಉಸಿರು ಬಸಿದು
ಪಾಪಿಗಳ ತನುವ ತೊಳೆದು
ದೇವರು ದೆವ್ವಗಳಿಗೂ ಮೋಕ್ಷಿಸಿ
ಅನಿಮೇಷೆಯಾಗಿ ಊರೂರು ಅಲೆಯುತ್ತಾ
ಸಿಟ್ಟು ಸೆಡವುಗಳಿದ್ದರೂ
ಹೆಣಗಳನ್ನು ಮುದ್ದಾಡಿ, ಹೆತ್ತಾಡಿ
ಹುಟ್ಟಿದ ಕ್ಷಣ-ಕಣಗಳಿಂದಲೂ
ತನ್ನವನಲ್ಲದ ಮಾನವಗೆ ನೀರುಣಿಸಿ
ಜಾಗತೀಕರಣದ ವಿಷವ ನುಂಗಿ
ವಿಷವುಣ್ಣಿಸಿದವನಿಗೇ ಮೊಲೆಯೆರೆದು
ತಪ್ಪು ತನ್ನದಲ್ಲವೆಂಬ ಅರಿವಿದ್ದರೂ
ಎತ್ತಿಗೆ ಜ್ವರ, ಎಮ್ಮೆಗೆ ಬರೆ ಹಾಕುವ
ಹುಲುಮಾನವನ ಮನಸ್ಥಿತಿಯನ್ನರಿಯದೆ
ಕಡಲಿಗೆ ಧುಮ್ಮಿಕ್ಕಿ, ಹಾರಿಕೊಂಡು
ಆತ್ಮಾಹುತಿ ಮಾಡಿಕೊಳ್ಳುವ ಸಾವು
ನದಿಗೆ ಬೇಕಿರಲಿಲ್ಲ!

(ನಮ್ಮೂರಿನ ಜಯಮಂಗಲಿ ನದಿಯ ನೆನಪಿಗೆ)

                            - ಗುಬ್ಬಚ್ಚಿ ಸತೀಶ್.

11 ಕಾಮೆಂಟ್‌ಗಳು:

  1. ನದಿಯ ನೋವ ಕೇಳುವವರ್ಯಾರು?
    ತುಂಬಾ ತುಂಬಾ ಚೆನ್ನಾಗಿದೆ
    ಸ್ವರ್ಣಾ

    ಪ್ರತ್ಯುತ್ತರಅಳಿಸಿ
  2. ಚಂದದ ಹೋಲಿಕೆ..ನೋವು ನಲಿವುಗಳ ಮಿಳಿತ ಈ ಒಂದೇ ಕವನದಲ್ಲಿ ಕಾಣಿ ಬಿಡಬಹುದು..
    ಬಹಳ ಚೆನ್ನಾಗಿದೆ...

    ಪ್ರತ್ಯುತ್ತರಅಳಿಸಿ
  3. ಸತೀಶು..

    ವಿಷಾದ ಭಾವ ಆವರಿಸಿತು...

    ಸೊಗಸಾದ ಕವನಕ್ಕೆ ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  4. ನದಿಗಳ ನೋವಿನ ಯಾನವನ್ನು ಕಣ್ಣು ಕಟ್ಟುವಂತೆ ಕವಿತೆ ಯಾಗಿಸಿದ್ದೀರ. ಎಂಥ ವಾಸ್ತವಿಕ ಕಲ್ಪನೆ ನಿಮ್ಮದು. ಹೌದು ಇಂದು ನಮ್ಮ ದೇಶದ ಎಲ್ಲಾ ನದಿಗಳ ನೋವಿನ ಕಥೆಯೂ ಇದೆ ಆಗಿದೆ. ಹರಿವ ದಡದಲ್ಲಿನ ಪ್ರತೀ ಊರಿನಹಾಗು ಪಟ್ಟಣಗಳ ಮನುಷ್ಯರ ಕೊಳಕು, ಹೆಣ, ರಾಸಾಯನಿಕ ಕಲ್ಮಶ , ಇನ್ನಿತರ ತ್ಯಾಜ್ಯಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು ಶೋಷಣೆಗೆ ಒಳಗಾಗಿ ಹರಿವ ನದಿಗಳ ಮೂಕ ರೋಧನ ಕೇಳುವವರಾರು ???ಸತೀಶ್ ನಿಮಗೆ ಹೇಗೆ ಹೊಗಳಬೇಕು ಎಂಬುದನ್ನು ಅರಿಯೆ ಆದರೆ ಭೇಷ್ ಎನ್ನುತ್ತೇನೆ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ಪ್ರತ್ಯುತ್ತರಅಳಿಸಿ
  5. ಸತೀಶ್ ಸರ್, ಹಾಲುಂಡು ವಿಷ ಕಕ್ಕುವ ಮಾನವನ ಬುದ್ಧಿ ಮತ್ತು ಗೊಮಾತೆಯಂತ ಗುಣವುಳ್ಳ ನದಿ.........
    ಚಂದದ ಕವನ!

    ಪ್ರತ್ಯುತ್ತರಅಳಿಸಿ
  6. ಗುಬ್ಬಚ್ಚಿ ಸರ್......

    ಮನುಕುಲಕೆ ನದಿಗಳ ದೇಣಿಗೆ ಅಗಾಧವಾದದ್ದು...ಆದರೆ ಮನುಜ ತನ್ನ ಲಾಭಕ್ಕಾಗಿ ಬಳಸಿಕೊಂಡು, ಅವುಗಳನ್ನು ಮಲೀನ ಮಾಡುತ್ತಿರುವುದು ವಿಷಾದದ ವಿಷಯ...ಸುಂದರ ಕವನ ಸರ್......

    ನನ್ನ ಬ್ಲಾಗ್ ಗೂ ಬನ್ನಿ....
    http://ashokkodlady.blogspot.com/

    ಪ್ರತ್ಯುತ್ತರಅಳಿಸಿ
  7. ಈಗಿನ ನದಿಗಳ ವಸ್ತುಸ್ಥಿತಿಯ ಭಾವಪೂರ್ಣ ವಿಚಾರವನ್ನು ಕವನದ ಮೂಲಕ ಹೇಳಿರುವುದು ತುಂಬಾ ಇಷ್ಟವಾಯಿತು.

    ಪ್ರತ್ಯುತ್ತರಅಳಿಸಿ

ನೀರು (ಪುಟ್ಟ ಕತೆ)

  ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹ...